ನಮ್ಮಿಬ್ಬರನ್ನು ಒಂದು ಮಾಡಿದ್ದೇ ಅಪ್ಪು ಸರ್, ಒಂದು ಲೆಕ್ಕದಲ್ಲಿ ಹೇಳೋದಾದರೆ ಈ ಪ್ರೀತಿಗೆ ಅವರೇ ಕಾರಣ ಎಂದು ನಿರೂಪಕಿ ಅನುಶ್ರೀ (Anchor Anushree) ತಮ್ಮ ಲವ್ ಸ್ಟೋರಿ ಬಗ್ಗೆ ಹೇಳಿಕೊಂಡಿದ್ದಾರೆ.

ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಇಂದು (ಆ.28) ಕೊಡಗು ಮೂಲದ ರೋಷನ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮ್ಮ ನಿರೂಪಣೆಯಿಂದ ಹೆಚ್ಚು ಜನಪ್ರಿಯತೆ ಗಳಿಸಿದ ಅನುಶ್ರೀ ತಮ್ಮ ಬಹುಕಾಲದ ಗೆಳೆಯ ರೋಷನ್ ಜೊತೆ ಹಸೆಮಣೆ ಏರಿದ್ದು, 10:56ರ ಶುಭ ಮೂಹೂರ್ತದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.ಇದನ್ನೂ ಓದಿ: ಅನುಶ್ರೀ ಕಲ್ಯಾಣದಲ್ಲಿ ರಾರಾಜಿಸಿದ ಅಪ್ಪು ಫೋಟೋ
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮದುವೆ ಸುಂದರ ಹಾಗೂ ಸರಳವಾಗಿ ನಡೆದಿದೆ, ಕಡಿಮೆ ಜನರನ್ನು ಸೇರಿಸಿ ಮದುವೆಯಾಗಬೇಕು ಅನ್ನೋದು ನಮ್ಮಿಬ್ಬರ ಆಸೆಯಾಗಿತ್ತು. ಜೊತೆಗೆ ತುಂಬಾ ಕಡೆಯಿಂದ ಬಹಳ ಜನರು ಬಂದಿದ್ದರು. ಆ ಎಲ್ಲಾ ಪ್ರೀತಿ-ಪಾತ್ರರಿಗೂ ಧನ್ಯವಾದಗಳು ಎಂದಿದ್ದಾರೆ.
ಇದೇ ವೇಳೆ ತಮ್ಮ ಲವ್ ಸ್ಟೋರಿ ಶುರುವಾದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇದೊಂದು ಸಿಂಪಲ್ ಲವ್ ಸ್ಟೋರಿ. ನಾವಿಬ್ಬರು ಮೊದಲು ಸ್ನೇಹಿತರಾದ್ವಿ. ಆಮೇಲೆ ಒಟ್ಟಿಗೆ ಕಾಫಿ ಕುಡಿದ್ವಿ. ಒಬ್ಬರಿಗೊಬ್ಬರು ಇಷ್ಟ ಆದ್ವಿ, ಲವ್ ಆಯ್ತು. ಇವಾಗ ಮದ್ವೆ ಆದ್ವಿ. ರೋಷನ್ ಕೂಡ ಅಪ್ಪು ಅವರ ಅಭಿಮಾನಿ. ಅಪ್ಪು ಸರ್ ಅವರ ʻಪುನೀತ್ ಪರ್ವʼ ಕಾರ್ಯಕ್ರಮದ ಮೂಲಕವೇ ನಮ್ಮಿಬ್ಬರ ಪರಿಚಯವಾಗಿದ್ದು. ಒಂದು ಲೆಕ್ಕದಲ್ಲಿ ಹೇಳೋದಾದರೆ ನಮ್ಮಿಬ್ಬರನ್ನು ಸೇರಿಸಿದ್ದೇ ಅಪ್ಪು ಸರ್ ಎಂದು ತಿಳಿಸಿದ್ದಾರೆ.
ಮದುವೆಗೆ ಶಿವಣ್ಣ, ಗೀತಕ್ಕ ಸೇರಿದಂತೆ ಹಲವರು ಬಂದು ಆಶೀರ್ವಾದ ಮಾಡಿದ್ದಾರೆ. ಶಿವಣ್ಣ ರೋಷನ್ ಅವರನ್ನ ಮುಂಚೆಯೇ ನೋಡಿದ್ರು. ರಚಿತಾ ಅವ್ರು ನಮ್ಮ ಮದುವೆಗೆ ಬಂದಿದ್ದು ಸಾಕಷ್ಟು ಖುಷಿ ಕೊಟ್ಟಿದೆ. ನನಗೆ ಮಂತ್ರ ಮಾಂಗಲ್ಯ ಆಗಬೇಕು ಅಂತ ಬಹಳ ಆಸೆ ಇತ್ತು. ಆದ್ರೆ ಅದರದ್ದು ಕೆಲವೊಂದು ರೂಲ್ಸ್ ಇದೆ ಹಾಗಾಗಿ ಕಷ್ಟ ಆಯ್ತು. ಇನ್ನೂ ಮದುವೆ ಅನ್ನೋದು ಒಂದು ಹೆಣ್ಣಿನ ಬಹು ದೊಡ್ಡ ಕನಸು. ನಾವು ಮದುವೆ ಹೇಗೆ ಆಗ್ತೀವಿ ಅನ್ನೋದು ಮುಖ್ಯ ಅಲ್ಲ, ಮದುವೆ ಬಳಿಕ ಹೇಗೆ ಬದುಕ್ತೀವಿ ಅನ್ನೋದು ಮುಖ್ಯ ಎಂದಿದ್ದಾರೆ.

ಇದೇ ವೇಳೆ ರೋಷನ್ ಮಾತನಾಡಿ, ಕಳೆದ 5 ವರ್ಷಗಳಿಂದ ನನಗೆ ಅನು ಪರಿಚಯವಿದೆ. 3 ವರ್ಷಗಳ ಹಿಂದೆ ನಾವಿಬ್ಬರು ಕ್ಲೋಸ್ ಆದ್ವಿ. ಯಾವತ್ತೂ ಆಕೆ ನನಗೆ ಸೆಲಿಬ್ರಿಟಿ ಅಂತ ಅನಿಸಿಲ್ಲ ಎಂದು ಹೇಳಿದ್ದಾರೆ.
ಇನ್ನೂ ಅಪ್ಪು ಅವರ ಅಪ್ಪಟ ಅಭಿಮಾನಿಯಾಗಿರುವ ಅನುಶ್ರೀ ಮದುವೆ ಮಂಟಪದಲ್ಲಿ ಅಪ್ಪು ಫೋಟೋವೊಂದನ್ನು ಇರಿಸಿ, ಸುತ್ತಲೂ ಹೂವುಗಳಿಂದ ಅಲಂಕಾರ ಮಾಡಿದ್ದಾರೆ. ಈ ಮೂಲಕ ಅಪ್ಪು ಮೇಲಿನ ಪ್ರೀತಿಯನ್ನು ತೋರ್ಪಡಿಸಿದ್ದಾರೆ.ಇದನ್ನೂ ಓದಿ: ಏಕಾಂಗಿ ನಿರೂಪಣೆ ಬಳಿಕ ಹೊಸ ಮನ್ವಂತರಕ್ಕೆ ಕಾಲಿಟ್ಟ ಆ್ಯಂಕರ್ ಅನುಶ್ರೀ






















