Tag: ನಿಪಾ

  • ರಾಜ್ಯದ ಮಾವು ಬೆಳೆಗಾರರಿಗೆ ತಟ್ಟಿದ ನಿಪಾ ವೈರಸ್ ಬಿಸಿ

    ರಾಜ್ಯದ ಮಾವು ಬೆಳೆಗಾರರಿಗೆ ತಟ್ಟಿದ ನಿಪಾ ವೈರಸ್ ಬಿಸಿ

    ಬೆಂಗಳೂರು: ಪಕ್ಕದ ರಾಜ್ಯ ಕೇರಳದಲ್ಲಿ ನಿಪಾ ಕಾಣಿಸಿಕೊಂಡಿದ್ರಿಂದ ರಾಜ್ಯದ ಮಾವಿಗೆ ಬೆಳೆಗಾರರಿಗೆ ಬಿಸಿ ತಟ್ಟಿದೆ.

    ಆಸ್ಟ್ರೇಲಿಯಾ, ಅಮೆರಿಕ, ಸ್ವಿಜರ್‍ಲ್ಯಾಂಡ್‍ಗೆ ರಾಜ್ಯದಿಂದಲೇ ಟನ್ ಗಟ್ಟಲೇ ಮಾವು ರಫ್ತಾಗುತ್ತಿತ್ತು. ಕೇರಳದಲ್ಲಿ ನಿಪಾ ವೈರಸ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರಾಜ್ಯದಿಂದ ರಫ್ತಾಗುವ ಮಾವಿಗೆ ಬೆಳೆಗಾರರು ಪ್ರಮಾಣ ಪತ್ರ ಸೇರಿದಂತೆ ನಾನಾ ಸರ್ಟಿಫಿಕೇಟ್ ಗಳನ್ನು ಪಡೆಯುವ ಸ್ಥತಿ ನಿರ್ಮಾಣವಾಗಿದೆ. ಒಂದೆಡೆ ಹೆಚ್ಚಾಗಿರುವ ಮಳೆ ಹಾಗೂ ನಿಪಾ ವೈರಸ್ ಮಾವು ಬೆಳೆಗಾರರಿಗೆ ಬಿಸಿ ಮುಟ್ಟಿಸಿದೆ.

    ಮುಂಗಾರಿನಲ್ಲಿ ಸಾಂಕ್ರಾಮಿಕ ರೋಗ ಕೂಡ ಹೆಚ್ಚುತ್ತಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದ ಬೆನ್ನಲ್ಲೇ ನಿಫಾ ಬಗ್ಗೆ ಮತ್ತೆ ಸಂಶೋಧನೆ ಮಾಡುವಂತೆ ಆರೋಗ್ಯ ಸಚಿವ ಶಿವಾನಂದ ಪಾಟೀಲ್ ಸೂಚಿಸಿದ್ದಾರೆ.

  • ನಿಪಾ ವೈರಸ್ ಸುಳ್ಳು ಸುದ್ದಿ ಹರಡಿದ 7 ಮಂದಿ ಅರೆಸ್ಟ್

    ನಿಪಾ ವೈರಸ್ ಸುಳ್ಳು ಸುದ್ದಿ ಹರಡಿದ 7 ಮಂದಿ ಅರೆಸ್ಟ್

    ತಿರುವನಂತಪುರಂ: ಕೆಲವು ಸ್ಥಳಗಳಲ್ಲಿ ನಿಪಾ ವೈರಸ್ ಪತ್ತೆಯಾಗಿದೆ, ಅದು ಕೋಳಿ ಮಾಂಸದಿಂದ ಹರಡುತ್ತಿದೆ ಎಂಬ ಸುಳ್ಳು ಸುದ್ದಿ ಹರಡುತ್ತಿದ್ದ ಏಳು ಜನರನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.

    ನಿಪಾ ವೈರಸ್ ಕುರಿತು ವಾಟ್ಸಪ್ ಮೂಲಕ ಸುಳ್ಳು ಸುದ್ದಿಯನ್ನು ಧ್ವನಿ ಸಂದೇಶಗಳನ್ನು ರಚಿಸಿ ರವಾನಿಸುತ್ತಿದ್ದರು.

    ಈ ಕುರಿತಂತೆ ಕೊಝಿಕ್ಕೋಡು ಜಿಲ್ಲಾ ವ್ಯಾಪ್ತಿಯ ಮೂರು ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಸುಳ್ಳು ಸುದ್ದಿಯನ್ನು ಹರಡುತ್ತಿದ್ದ ವೈಷ್ಣವ್, ನಿಮೇಶ್, ಬಿವಿಜ್, ದಿಲ್ಜಿತ್, ವಿಷ್ಣುದಾಸ್ ಎಂಬುವರನ್ನು ಬಂಧಿಸಲಾಗಿದೆ. ಅಲ್ಲದೇ ಈ ಧ್ವನಿ ಸಂದೇಶ ರಚಿಸಿದ ಕಿಡಿಗೇಡಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

    ನಿಪಾ ವೈರಸ್ ಕೋಳಿ ಮಾಂಸದಲ್ಲಿ ಪತ್ತೆಯಾದ ಕುರಿತು ಆರೋಗ್ಯ ಇಲಾಖೆಯ ವಿರುದ್ಧ ಸುಳ್ಳು ಸುದ್ದಿಯನ್ನೂ ಹಬ್ಬಿಸಲಾಗಿತ್ತು. ಹಾಗಾಗಿ ಯಾರೂ ಕೋಳಿ ಮಾಂಸವನ್ನು ಬಳಸಬಾರದೆಂದು ಕಿಡಿಗೇಡಿಗಳು ಹರಿಬಿಟ್ಟಿದ್ದರು. ಈ ಕುರಿತಂತೆಯೂ ಪೊಲೀಸರು ಈಗ ತನಿಖೆ ನಡೆಸುತ್ತಿದ್ದಾರೆ.ಇದನ್ನೂ ಓದಿ:ಕೋಳಿಯಿಂದ ನಿಪಾ ವೈರಸ್ ಹರಡಲ್ಲ: ಉಡುಪಿ ವೈದ್ಯ

    ಇದಕ್ಕೆ ಪ್ರತಿಕ್ರಿಯಿಸಿದ ಫರೂಕ್ ಪೊಲೀಸ್ ಠಾಣಾಧಿಕಾರಿ ಸುಳ್ಳು ಸುದ್ದಿಯನ್ನು ಹರಡುತ್ತಿದ್ದ ಐವರನ್ನು ಈಗಾಗಲೇ ಬಧಿಸಿದ್ದೇವೆ. ಅಲ್ಲದೇ ನಲ್ಲಾಲಂನಲ್ಲೂ ಇಬ್ಬರ ಬಂಧನವಾಗಿದೆ. ಫಿರೋಕ್ ಆಸ್ಪತ್ರೆಯ ಕಿರಿಯ ವೈದ್ಯಾಧಿಕಾರಿಗಳು ಈ ಕುರಿತಂತೆ ದೂರನ್ನೂ ಕೂಡಾ ದಾಖಲಿಸಿದ್ದಾರೆ ಎಂದು ತಿಳಿಸಿದ್ದಾರೆ.

  • ನಿಪಾ ವೈರಸ್ ಭೀತಿಗೆ ಬಿಬಿಎಂಪಿಯಿಂದ `ವರಹಾ’ ಆಪರೇಷನ್!

    ನಿಪಾ ವೈರಸ್ ಭೀತಿಗೆ ಬಿಬಿಎಂಪಿಯಿಂದ `ವರಹಾ’ ಆಪರೇಷನ್!

    ಬೆಂಗಳೂರು: ಕೇರಳದಲ್ಲಿ ಹತ್ತಾರು ಮಂದಿಯನ್ನ ಬಲಿ ಪಡೆದಿರುವ ನಿಪಾ ವೈರಸ್ ಭೀತಿ ಇದೀಗ ಬೆಂಗಳೂರಿನಲ್ಲೂ ಶುರುವಾಗಿದೆ. ಹಂದಿಗಳಿಂದಲೂ ವೈರಸ್ ಹರಡುತ್ತೆ ಎನ್ನುವ ಕಾರಣಕ್ಕೆ ಆಪರೇಷನ್ ವರಹಾ ಕಾರ್ಯಾಚರಣೆಗೆ ಬಿಬಿಎಂಪಿ ಚಾಲನೆ ನೀಡಿದ್ದು, ಸಿಬ್ಬಂದಿ ಹಂದಿ ಹಿಡಿಯೋದ್ರಲ್ಲಿ ಬ್ಯುಸಿಯಾಗಿದ್ದಾರೆ.

    ಬೆಂಗಳೂರು ನಗರದಿಂದ 5 ಕಿಲೋ ಮೀಟರ್ ಹೊರಗೆ ಮಾತ್ರ ಹಂದಿ ಸಾಕಾಣಿಕೆಗೆ ಅವಕಾಶವಿದೆ. ಆದರೆ, ನಗರದಲ್ಲೇ ಎಗ್ಗಿಲ್ಲದೆ ಅಕ್ರಮವಾಗಿ ಹಂದಿ ಸಾಕಾಣಿಕೆ ಮಾಡಲಾಗುತ್ತಿದೆ. ಹಂದಿ ಕಾಟಕ್ಕೆ ಬೇಸತ್ತ ನಾಗರಿಕರು ಬಿಬಿಎಂಪಿಗೆ ದೂರು ನೀಡುತ್ತಿದ್ದಾರೆ. ಹಾಗೇ ಹಂದಿಯಿಂದ ನಿಪಾ ವೈರಸ್ ಹರಡುವ ಭೀತಿಯಿಂದ ಬಿಬಿಎಂಪಿ ಹಂದಿ ಹಿಡಿಯುವ ಕಾರ್ಯಾಚರಣೆ ಕೈಗೊಂಡಿದೆ.

    ನಗರದ ಪ್ರಮುಖ ಸ್ಥಳಗಳು ಸೇರಿದಂತೆ ಈ ತನಕ 50ಕ್ಕೂ ಹೆಚ್ಚು ಹಂದಿಗಳನ್ನು ಟೆಂಡರ್ ಪಡೆದವರು ಹಿಡಿದು ಸಾಗಿಸಿದ್ದಾರೆ. ಇನ್ನು ಟೆಂಡರ್‍ದಾರರಿಗೆ ಹಣ ನೀಡುವ ಬದಲು ಹಂದಿ ಮಾರಾಟ ಮಾಡಲು ಪಾಲಿಕೆ ಅವಕಾಶ ನೀಡಿದೆ. ಇಂದು ಸಹ ಬಿಬಿಎಂಪಿ ಯಲಹಂಕ, ಬ್ಯಾಟರಾಯನಪುರ, ಮಹಾದೇವ ಪುರ ಭಾಗಗಳಲ್ಲಿ ವರಹ ಕಾರ್ಯಚಾರಣೆ ನಡೆಸಿತ್ತು.

    ಆಪರೇಷನ್ ವರಾಹ ಇನ್ನೂ 10 ರಿಂದ 15 ದಿನಗಳ ಕಾಲ ನಡೆಯಲಿದ್ದು, ಇದರಿಂದ ಜನಸಾಮಾನ್ಯರಿಗೆ ಅನುಕೂಲವಾಗುತ್ತೆ ಅಂತ ಬಿಬಿಎಂಪಿ ಹೇಳುತ್ತಿದೆ.

  • ಬಾವಲಿ, ಮೊಲದಿಂದ ಹರಡಲ್ಲ ಜ್ವರ – ನಿಪಾ ಹಿಂದಿನ ಕಾರಣ ಇನ್ನಷ್ಟು ನಿಗೂಢ

    ಬಾವಲಿ, ಮೊಲದಿಂದ ಹರಡಲ್ಲ ಜ್ವರ – ನಿಪಾ ಹಿಂದಿನ ಕಾರಣ ಇನ್ನಷ್ಟು ನಿಗೂಢ

    ಬೆಂಗಳೂರು: ಬಾವಲಿ, ಕೋಳಿಯಿಂದ ಮಾತ್ರವಲ್ಲ ಇದೀಗ ಮೊಲದಿಂದಲೂ ನಿಪಾ ಜ್ವರ ಹರಡಲ್ಲ ಎನ್ನುವುದು ಸಾಬೀತಾಗಿದೆ.

    ದೇಶಾದ್ಯಂತ ನಿಪಾ ಸೋಂಕು ಬಗ್ಗೆ ಸುದ್ದಿಯಾಗುತ್ತಿದ್ದಂತೆಯೇ ಬಾವಲಿ ಕಚ್ಚಿದ್ದ ಹಣ್ಣುಗಳ ಪರೀಕ್ಷೆ ವೇಳೆ ನೆಗೆಟಿವ್ ಬಂದಿದೆ. ಪ್ರಾಣಿಗಳಿಂದ ಹರಡುವ ರೋಗ ಸಂಬಂಧಿತ ರಾಷ್ಟ್ರೀಯ ಸಂಸ್ಥೆಯ ಪ್ರಯೋಗಾಲಯಕ್ಕೆ ಮಾದರಿಗಳನ್ನು ಕಳುಹಿಸಿಕೊಡಲಾಗಿತ್ತು.

    ಮೊಲಗಳು ತಿಂದಿದ್ದ ಹಣ್ಣಿನ ಮಾದರಿಯನ್ನು ಕಳುಹಿಸಿಕೊಡಲಾಗಿತ್ತು. ಅದೂ ನೆಗೆಟಿವ್ ತೋರಿಸಿದೆ. ಇದು ಪ್ರಯೋಗಾಲಯಕ್ಕೆ ಕುಳುಹಿಸಿಕೊಡಲಾದ ಎರಡನೇ ಮಾದರಿ. ಈ ಹಿಂದೆ ಹಂದಿ, ಮೇಕೆ, ಜಾನುವಾರಗಳ ಮಾದರಿಗಳನ್ನು ಕಳುಹಿಸಿಕೊಡಲಾಗಿತ್ತು. ಆದ್ರೆ ಅದ್ಯಾವುದರಿಂದಲೂ ನಿಪಾ ವೈಎಸ್ ಹರಡಲ್ಲ ಅಂತ ವರದಿಯಾಗಿತ್ತು.

    ಈ ಹಿಂದೆ ಮಧ್ಯ ಪ್ರದೇಶ ರಾಜ್ಯದ ಭೋಪಾಲ ನಗರದ `ಹೈ ಸೆಕ್ಯೂರಿಟಿ ಅನಿಮಲ್ ಡಿಸೀಸ್ ಲ್ಯಾಬೊರೆಟರಿ’ ನಿಪಾ ವೈರಸ್ ಬಾವಲಿಗಳಿಂದ ಬರಲ್ಲ ಎಂದು ಸ್ಪಷ್ಟಪಡಿಸಿತ್ತು. ಕೇರಳದಿಂದ ಒಟ್ಟು ಸ್ಯಾಂಪಲ್ ರೂಪದಲ್ಲಿ 21 ಬಾವಲಿ ಮತ್ತು ಹಂದಿಗಳನ್ನು ಭೋಪಾಲ್ ನ ಲ್ಯಾಬೊರೇಟರಿಗೆ ಕಳುಹಿಸಿಕೊಡಲಾಗಿತ್ತು. ಈ ಸ್ಯಾಂಪಲ್‍ಗಳ ವರದಿ ಬಂದಿದ್ದು, ಎಲ್ಲ ಪ್ರಾಣಿಗಳಲ್ಲಿ ನಿಪಾ ವೈರಸ್ ಲಕ್ಷಣಗಳು ಕಂಡುಬಂದಿಲ್ಲ.

    ಕೇಂದ್ರ ಪ್ರಾಣಿ-ಪಶು ಇಲಾಖೆಯ ಕಮಿಷನರ್ ಎಸ್‍ಪಿ ಸುರೇಶ್, ನಿಪಾ ವೈರಸ್ ನಿಂದ ಸಾವನ್ನಪ್ಪಿದವರ ಕುಟುಂಬಗಳ ಸುತ್ತಲಿನ ಪ್ರಾಣಿಗಳನ್ನು ಪರೀಕ್ಷೆಗೆ ಒಳಪಡಿಸಿದ್ರು. ಆದ್ರೆ ಅಲ್ಲಿಯ ಪ್ರಾಣಿಗಳಲ್ಲಿ ನಿಪಾ ವೈರಸ್ ಲಕ್ಷಣಗಳು ಕಂಡು ಬಂದಿರಲಿಲ್ಲ ಅಂತಾ ತಿಳಿಸಿದ್ರು.

    ನಿಪಾ ವೈರಸ್ ದಾಳಿಗೆ ತುತ್ತಾಗಿರುವ ಕೇರಳದ ಪೆರಂಬರಾ ಗ್ರಾಮದಿಂದ ಕೆಲ ಪ್ರಾಣಿಗಳನ್ನು ಸ್ಯಾಂಪಲ್ ರೂಪದಲ್ಲಿ ತೆಗೆದುಕೊಂಡು ಭೋಪಾಲ್‍ನ ಲ್ಯಾಬೋರೆಟರಿಗೆ ಕಳುಹಿಸಲಾಗಿತ್ತು. ಭೋಪಾಲ್ ಲ್ಯಾಬೊರೇಟರಿ ವರದಿಯ ಪ್ರಕಾರ, ನಿಪಾ ವೈರಸ್ ಬಾವಲಿಗಳಿಂದ ಬಂದಿಲ್ಲ ಅಂತಾ ಹೇಳಲಾಗಿತ್ತು. ಸದ್ಯ ಈ ಗೊಂದಲ ಇನ್ನು ಮುಂದುವರೆದಿದ್ದು, ಮತ್ತಷ್ಟು ನಿಪಾ ವೈರಸ್ ಪೀಡಿತ ಗ್ರಾಮಗಳಿಂದ ಪ್ರಾಣಿಗಳ ರಕ್ತವನ್ನು ಪಡೆದು ಪರೀಕ್ಷೆ ನಡೆಸಲಾಗುವುದು ಎಂದು ಲ್ಯಾಬೊರೇಟರಿ ಮೂಲಗಳು ತಿಳಿಸಿವೆ.

  • ಬಾವಲಿಯನ್ನು ಕೊಲ್ಲಿ ಎಂದು ಬೆಂಗ್ಳೂರಿನ ವಿವಿಧ ಕಡೆಯಿಂದ ಬಿಬಿಎಂಪಿಗೆ ಕರೆ!

    ಬಾವಲಿಯನ್ನು ಕೊಲ್ಲಿ ಎಂದು ಬೆಂಗ್ಳೂರಿನ ವಿವಿಧ ಕಡೆಯಿಂದ ಬಿಬಿಎಂಪಿಗೆ ಕರೆ!

    ಬೆಂಗಳೂರು: ನಿಪಾ ವೈರಸ್ ಸುದ್ದಿ ಎಷ್ಟರ ಮಟ್ಟಿಗೆ ಜನರ ಕಂಗೆಡಿಸಿದೆಯೋ ಗೊತ್ತಿಲ್ಲ. ಆದರೆ ಬಿಬಿಎಂಪಿ ವನ್ಯಜೀವಿ ಘಟಕದ ಸ್ವಯಂ ಸೇವಕರ ನಿದ್ದೆಗೆಡಿಸಿರೋದಂತೂ ಸತ್ಯ.

    ನಿಪಾ ವೈರಸ್ ಹರಡೋದು ಬಾವಲಿಗಳಿಂದ ಅಂತೆ ಎನ್ನುವ ಸುದ್ದಿ ವ್ಯಾಪಕವಾಗಿ ಹರಡಿದ್ದೇ ತಡ ಬೆಂಗಳೂರಿನ ಜನ ತಮ್ಮ ಸುತ್ತಮುತ್ತಲಿನ ಬಾವಲಿಗಳನ್ನ ಶತ್ರುಗಳಂತೆ ನೋಡೋಕೆ ಶುರು ಮಾಡಿದ್ದಾರೆ. ಅಷ್ಟೇ ಅಲ್ಲ ಬಾವಲಿಗಳನ್ನ ಕೊಲ್ಲಿ ಇಲ್ಲದಿದ್ದರೆ ನಾವು ಬಾವಲಿಗಳಿಂದ ಸತ್ತು ಹೋಗ್ತೇವೆ ಎಂದು ಬಿಬಿಎಂಪಿ ವನ್ಯಜೀವಿ ವಿಭಾಗದ ಸ್ವಯಂ ಸೇವಕರಿಗೆ ದೂರವಾಣಿ ಕರೆಗಳು ಬರುತ್ತಿವೆ.

    ಸ್ವಯಂ ಸೇವಕರು ಬಾವಲಿಯಿಂದ ನಿಪಾ ಸೋಂಕು ಹರಡಲ್ಲ ಎಂದರೂ ಜನ ಮಾತ್ರ ಒಪ್ಪೋಕೆ ತಯಾರಿಲ್ಲ. ಬಾವಲಿಯಿಂದ ರಕ್ಷಿಸಿ ಎಂದು ಬಸವನಗುಡಿ, ಜಯನಗರ, ಸ್ಯಾಂಕಿಟ್ಯಾಂಕ್, ಬನ್ನೇರುಘಟ್ಟ ಈ ಭಾಗದಿಂದ ಹೆಚ್ಚೆಚ್ಚು ಕರೆಗಳು ಬರ್ತಿವೆ.

    ಸ್ವಯಂ ಸೇವಕರು ಬಾವಲಿಗಳಿಂದ ಯಾವುದೇ ತೊಂದರೆ ಇಲ್ಲ ಎಂದು ಜಾಗೃತಿ ಮೂಡಿಸುತ್ತಿದ್ದರು. ಜನ ಒಂದು ಹೆಜ್ಜೆ ಮುಂದೆ ಹೋಗಿ ಸ್ಥಳೀಯ ಕಾರ್ಪೊರೇಟರ್ ಗಳ ಬಳಿ ಸ್ವಯಂ ಸೇವಕರ ವಿರುದ್ಧ ದೂರುತ್ತಿದ್ದಾರೆ. ಕರೆ ಮಾಡಿದರೆ ಯಾರೂ ಸರಿಯಾಗಿ ರೆಸ್ಪಾನ್ಸ್ ಮಾಡುತ್ತಿಲ್ಲ ಎಂದು ಕಂಪ್ಲೇಂಟ್ ಮಾಡುತ್ತಿದ್ದಾರೆ. ಕಾರ್ಪೊರೇಟರ್ ಗಳ ಮೂಲಕ ಒತ್ತಡ ಹಾಕಿಸುವ ಪ್ರಯತ್ನವನ್ನೂ ಮುಂದುವರೆಸಿದ್ದಾರೆ. ಅಷ್ಟರಮಟ್ಟಿಗೆ ಬಾವಲಿಗಳು ಬೆಂಗಳೂರಿಗರನ್ನು ಬೆಚ್ಚಿಬೀಳಿಸಿವೆ. ಇದನ್ನೂ ಓದಿ: ನಿಪಾ ವೈರಸ್ ಬಾವಲಿಗಳಿಂದ ಬರಲ್ಲ -ವರದಿಯಲ್ಲಿ ಸಾಬೀತು

    ಜನರ ಭಯವನ್ನೇ ಬಂಡವಾಳ ಮಾಡಿಕೊಂಡಿರುವ ಕೆಲ ನಕಲಿ ಸ್ವಯಂ ಸೇವಕರು ದುಡ್ಡು ಪಡೆದು ಬಾವಲಿಗಳನ್ನ ಕೊಂದಿರುವ ಘಟನೆಗಳು ನಡೆದಿವೆ. ಕೇಂದ್ರ ಆರೋಗ್ಯ ಸಚಿವಾಲಯ ಕೂಡ ಬಾವಲಿಗಳಿಂದ ಸೋಂಕು ಹರಡುವುದಿಲ್ಲ ಎಂದು ವರದಿ ನೀಡಿದೆ. ಹೀಗಿದ್ದೂ ಬೆಂಗಳೂರು ಜನ ಮಾತ್ರ ಬಾವಲಿಗಳಿಂದ ಬದುಕಿಸಿ ಅಂತಿರೋದು ವಿಪರ್ಯಾಸ. ಇದನ್ನೂ ಓದಿ: ನಿಪಾ ಜ್ವರಕ್ಕೆ ಹೆದರಿ ಬಾವಲಿಗಳನ್ನು ಸಾಯಿಸಿ ಮಣ್ಣಲ್ಲಿ ಹೂಳಲು ನಿರ್ಧರಿಸಿದ ಗ್ರಾಮಸ್ಥರು

  • ರಾಹುಲ್ ಗಾಂಧಿಯವರನ್ನು ಡೆಡ್ಲಿ ನಿಪಾ ವೈರಸ್‍ಗೆ ಹೋಲಿಸಿದ ಹರ್ಯಾಣ ಸಚಿವ

    ರಾಹುಲ್ ಗಾಂಧಿಯವರನ್ನು ಡೆಡ್ಲಿ ನಿಪಾ ವೈರಸ್‍ಗೆ ಹೋಲಿಸಿದ ಹರ್ಯಾಣ ಸಚಿವ

    ಚಂಡೀಗಢ: ತಮ್ಮ ವಿವಾದಾತ್ಮಕ ಹೇಳಿಕೆಯಿಂದಲೇ ಹೆಸರುವಾಸಿಯಾದ ಹರ್ಯಾಣ ಸಚಿವ ಅನಿಲ್ ವಿಜ್‍ರವರು ರಾಹುಲ್ ಗಾಂಧಿಯವರನ್ನು ದೇಶದಲ್ಲಿ ಬಲಿ ತೆಗೆದುಳ್ಳುತ್ತಿರುವ ನಿಪಾ ವೈರಸ್ ಸೋಂಕಿಗೆ ಹೋಲಿಕೆ ಮಾಡಿದ್ದಾರೆ.

    ಅನಿಲ್ ವಿಜ್ ಅವರು “ರಾಹುಲ್ ಗಾಂಧಿಯವರು ನಿಪಾ ವೈರಸ್ ಇದ್ದಂತೆ. ಯಾವ ಪಕ್ಷದ ಜೊತೆ ಅವರು ಮಾತುಕತೆ ನಡೆಸುತ್ತಾರೋ ಆ ಪಕ್ಷ ಬಲಿಯಾಗುತ್ತದೆ. ಮೈತ್ರಿಗಾಗಿ ಪಕ್ಷಗಳು ಸಂಪರ್ಕಸಿದರೂ ಆ ಪಕ್ಷಗಳು ಬಲಿಯಾಗುತ್ತದೆ ಎಂದು ಟ್ವೀಟ್ ಮಾಡಿದ್ದಾರೆ. ಟ್ವೀಟ್ ಮಾಡುವುದರ ಜೊತೆಗೆ ಆ ಟ್ವೀಟ್ ಅನ್ನು ಪಿನ್ ಮಾಡಿದ್ದಾರೆ.

    ಈ ರೀತಿಯ ವಿವಾದಾತ್ಮಕ ಹೇಳಕೆಗಳು ಅನಿಲ್ ವಿಜ್ ಇವರಿಗೆ ಹೊಸದೇನು ಅಲ್ಲ, ಕಾಂಗ್ರೆಸ್ ಪಕ್ಷವು ರಾಹುಲ್ ಗಾಂಧಿಯವರನ್ನು ಕಾಂಗ್ರೆಸ್ ಪಕ್ಷದ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದಾಗ, ನರೇಂದ್ರ ಮೋದಿಯವರ ಕಾಂಗ್ರೆಸ್ ಮುಕ್ತ ಭಾರತಕ್ಕೆ ಕಾಂಗ್ರೆಸ್‍ನವರೆ ಅಡಿಪಾಯ ಹಾಕಿಕೊಟ್ಟಿದ್ದಾರೆಂದು ಹೇಳಿಕೆ ನೀಡಿದ್ದರು.

    ಒಮ್ಮೆ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿದಾಗ ಅವರು ತಮ್ಮ ನಾಯಿಗೆ ಬಳಸಿದ ತಟ್ಟೆಯನ್ನೇ ಕಾಂಗ್ರೆಸ್ ಕಾರ್ಯಕರ್ತರಿಗೆ ನೀಡುತ್ತಾರೆ. ತಮ್ಮ ಮನೆಯ ನಾಯಿಗೂ ಹಾಗೂ ಕಾಂಗ್ರೆಸ್ ಕಾರ್ಯಕರ್ತರಿಗೂ ಯಾವುದೇ ವ್ಯತ್ಯಾಸವಿಲ್ಲವೆಂಬ ಹೇಳಿಕೆಯನ್ನು ನೀಡಿದ್ದರು.

    ಒಂದು ತಿಂಗಳ ಹಿಂದೆ ಅವರು ಭಗತ್‍ಸಿಂಗ್ ಮತ್ತು ಲಾಲಾ ಲಜಪತರಾಯ್‍ರವರು ದೇಶಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ ಆದರೆ ನೆಹರು ಮತ್ತು ಗಾಂಧಿಯವರು ದೇಶಕ್ಕಾಗಿ ಒಂದು ಕಟ್ಟಿಗೆಯನ್ನು ನೀಡಿಲ್ಲವೆಂದು ಹೇಳಿಕೆ ನೀಡಿದ್ದರು.

    ಕಳೆದ ವರ್ಷ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ವಿರುದ್ಧ ಅವರು “ಭಾರತೀಯಳಾಗಿರುವುದು ನಿಮಗೆ ನಾಚಿಕೆಯಾಗಿದ್ದರೆ ಹೋಗಿ ಸಮುದ್ರಕ್ಕೆ ಹಾರಿ’ ಎಂದು ಹೇಳಿಕೆ ನೀಡಿದ್ದರು.

  • ನಿಪಾ ಜ್ವರಕ್ಕೆ ಹೆದರಿ ಬಾವಲಿಗಳನ್ನು ಸಾಯಿಸಿ ಮಣ್ಣಲ್ಲಿ ಹೂಳಲು ನಿರ್ಧರಿಸಿದ ಗ್ರಾಮಸ್ಥರು

    ನಿಪಾ ಜ್ವರಕ್ಕೆ ಹೆದರಿ ಬಾವಲಿಗಳನ್ನು ಸಾಯಿಸಿ ಮಣ್ಣಲ್ಲಿ ಹೂಳಲು ನಿರ್ಧರಿಸಿದ ಗ್ರಾಮಸ್ಥರು

    ತುಮಕೂರು: ನಿಪಾ ಜ್ವರದ ಭೀತಿಗೆ ತುಮಕೂರಿನ ಜನರು ಹೆದರಿ ಬಾವಲಿಗಳನ್ನು ಬಲೆ ಹಾಕಿ ಹಿಡಿದು ಸಾಯಿಸಿ ಮಣ್ಣಲ್ಲಿ ಹೂಳಲು ನಿರ್ಧಾರ ಮಾಡಿದ್ದಾರೆ.

    ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕು ಹುಳಿಯಾರು ಗ್ರಾ.ಪಂ ಸದಸ್ಯರು ಸಾಮೂಹಿಕವಾಗಿ ಬಾವಲಿ ಮಾರಣ ಹೋಮಕ್ಕೆ ನಿರ್ಧರಿಸಿದ್ದಾರೆ. ಬಾವಲಿಗಳು ಹುಳಿಯಾರು ಗ್ರಾಮದ ಮರಗಳಲ್ಲಿ ವಾಸವಾಗಿದ್ದು, ಗ್ರಾ.ಪಂ ಸದಸ್ಯರು ಬಲೆ ಹಾಕಿ ಬಾವಲಿಗಳನ್ನು ಹಿಡಿದು ಸಾಯಿಸಲು ನಿರ್ಣಯ ತೆಗೆದುಕೊಂಡಿದ್ದಾರೆ.

    ಹುಳಿಯಾರು ಗ್ರಾಮ ಪಂಚಾಯ್ತಿ ಸಭೆಯಲ್ಲಿ ಸರ್ವಾನುಮತದಿಂದ ನಿರ್ಧಾರ ತೆಗೆದುಕೊಂಡಿದ್ದು, ಶನಿವಾರ ನಡೆದ ಸಭೆಯಲ್ಲಿ ಸದಸ್ಯರು ತಮ್ಮ ನಿರ್ಣಯ ಕೈಗೊಂಡಿದ್ದಾರೆ. ಇದನ್ನೂ ಓದಿ: ನಿಪಾ ವೈರಸ್ ಬಾವಲಿಗಳಿಂದ ಬರಲ್ಲ -ವರದಿಯಲ್ಲಿ ಸಾಬೀತು

  • ಮಲೆನಾಡಿಗೂ ಕಾಲಿಟ್ಟಿತೇ ನಿಪಾ ಸೋಂಕು?

    ಮಲೆನಾಡಿಗೂ ಕಾಲಿಟ್ಟಿತೇ ನಿಪಾ ಸೋಂಕು?

    ಶಿವಮೊಗ್ಗ: ಕೇರಳದಲ್ಲಿ ಹಲವರನ್ನು ಬಲಿ ಪಡೆದಿದ್ದ ನಿಪಾ ಸೋಂಕು ಸದ್ಯ ಕರಾವಳಿಯಿಂದ ಮಲೆನಾಡಿಗೂ ಹರಡಿರುವ ಶಂಕೆ ವ್ಯಕ್ತವಾಗಿದ್ದು, ನಿಪಾ ಸೋಕು ಶಂಕಿತ ವ್ಯಕ್ತಿಗೆ ಜಿಲ್ಲೆಯ ಸಾಗರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಯುವಕ ಮಿಥುನ್ ಗೆ ಸೋಂಕು ಹರಡಿರುವ ಕುರಿತು ಶಂಕೆ ವ್ಯಕ್ತವಾಗಿದೆ. ಮೂಲತಃ ಸಾಗರದ ಮಿಥುನ್ ಕೇರಳದ ಕಾಸರಗೋಡಿನಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಕೇರಳದಲ್ಲಿ ನಿಪಾ ಸೋಂಕು ಹರಡಿದ ಹಿನ್ನೆಲೆಯಲ್ಲಿ ಸಾಗರಕ್ಕೆ ಮರಳಿದ್ದರು. ಈ ವೇಳೆ ಅವರಿಗೆ ಜ್ವರ ಕಾಣಿಸಿಕೊಂಡ ಕಾರಣ ಆಸ್ಪತ್ರೆಗೆ ದಾಖಲಾಗಿದ್ದಾರೆ. ದನ್ನು ಓದಿ:   ಅಸೌಖ್ಯದಲ್ಲಿದ್ರೂ ನೋವನ್ನು ಲೆಕ್ಕಿಸದೇ ಕೆಲಸ ಮಾಡ್ತಿದ್ಳು: ನಿಪಾ ವೈರಸ್‍ಗೆ ಬಲಿಯಾದ ನರ್ಸ್ ಪತಿ ಕಣ್ಣೀರು

    ಮೊದಲು ಮಿಥುನ್ ಸಾಗರ ತಾಲೂಕಿನ ಶಿರವಂತೆ ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿದ್ದರು. ಈಗ ಸಾಗರ ಸರ್ಕಾರಿ ಆಸ್ಪತ್ರೆಯ ವಿಶೇಷ ಕೊಠಡಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕು ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಿಥುನ್ ರಕ್ತ ಮಾದರಿ ಸಂಗ್ರಹಿಸಿ ಪುಣೆ ಆಸ್ಪತ್ರೆಗೆ ಕಳಿಸಲಾಗಿದೆ. ಇದನ್ನು ಓದಿ: ಮಂಗಳೂರಲ್ಲಿ ನಿಪಾ ಸೋಂಕು ಶಂಕೆ – ಹೈ ಅಲರ್ಟ್ ಜಾರಿ

    ಈ ಕುರಿತು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿರುವ ಶಿವಮೊಗ್ಗ ಡಿಎಚ್‍ಓ ಡಾ ವೆಂಕಟೇಶ್, ಮಿಥುನ್ ಅವರ ಆರೋಗ್ಯ ಸದ್ಯ ಸ್ಥಿರವಾಗಿದ್ದು, ಚೇತರಿಕೆ ಕಾಣಿಸುತ್ತಿದೆ. ರಕ್ತದ ಪರೀಕ್ಷೆ ವರದಿ ಬಂದ ಬಳಿಕ ಈ ಕುರಿತು ಖಚಿತ ಮಾಡಲಾಗುತ್ತದೆ. ನಿಪಾ ಕುರಿತ ಜಾಗೃತಿ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನು ಓದಿ: ಬಾವಲಿ ಜ್ವರಕ್ಕೆ ಕರ್ನಾಟಕದಲ್ಲೂ ಹೈಅಲರ್ಟ್ – ಈ ಮಾಹಿತಿ ನಿಮಗೆ ಗೊತ್ತಿರಲಿ..!

  • ನಾನು ಸಾಯ್ತೀನಿ, ಮಕ್ಕಳನ್ನು ಚೆನ್ನಾಗಿ ನೋಡ್ಕೊಳ್ಳಿ- ಪತಿಗೆ ನಿಪಾ ವೈರಸ್‍ಗೆ ಬಲಿಯಾದ ಕೇರಳ ನರ್ಸ್ ಪತ್ರ

    ನಾನು ಸಾಯ್ತೀನಿ, ಮಕ್ಕಳನ್ನು ಚೆನ್ನಾಗಿ ನೋಡ್ಕೊಳ್ಳಿ- ಪತಿಗೆ ನಿಪಾ ವೈರಸ್‍ಗೆ ಬಲಿಯಾದ ಕೇರಳ ನರ್ಸ್ ಪತ್ರ

    ತಿರುವನಂತಪುರಂ: ಬಾವಲಿಗಳ ಮೂಲಕ ಹರಡುವ ನಿಪಾ ವೈರಸ್ ಗೆ ಬಲಿಯಾವುದಕ್ಕೂ ಮುನ್ನ ಪತಿಗೆ ಕೇರಳದ ನರ್ಸ್ ಒಬ್ಬರು ಭಾವನಾತ್ಮಕ ಪತ್ರ ಬರೆದು, ತಾನು ಸಾಯುವುದು ಖಚಿತವಾಗಿದ್ದು, ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ತಿಳಿಸಿದ್ದಾರೆ.

    31 ವರ್ಷದ ಲಿನಿ ಅವರು ಕೇರಳದ್ಯಾಂತ ಹೆಚ್ಚಿನ ಮಂದಿಯನ್ನು ಬಲಿ ಪಡೆಯುತ್ತಿರುವ ನಿಪಾ ವೈರಸ್ ಸೋಂಕು ತಗಲಿದ್ದ ರೋಗಿಗೆ ಚಿಕಿತ್ಸೆ ನೀಡುವ ವೇಳೆ ವೈರಸ್ ಹರಡಿ ಸಾವನ್ನಪ್ಪಿದ್ದರು.

    ವೈರಸ್ ಸೋಂಕು ತಗಲಿದ ವೇಳೆ ತನ್ನ ಕುಟುಂಬವನ್ನು ನೋಡಲು ಸಾಧ್ಯವಾಗದ ಲಿನಿ ತಮ್ಮ ಪತಿಗೆ ಪತ್ರ ಬರೆದಿದ್ದರು. ಸೋಕಿನಿಂದ ಮೃತ ಪಟ್ಟ ಲಿನಿ ಅವರ ಮೃತ ದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸದೇ ಆಸ್ಪತ್ರೆಯ ಆಡಳಿತ ಮಂಡಳಿ ಶವ ಸಂಸ್ಕಾರವನ್ನು ಮಾಡಿತ್ತು.

    ಲಿನಿ ಅವರಿಗೆ 7 ಹಾಗೂ 2 ವರ್ಷದ ಇಬ್ಬರು ಗಂಡು ಮಕ್ಕಳಿದ್ದಾರೆ. ಕೇರಳದ ಪೇರಾಂಬ್ರ ಆಸ್ಪತ್ರೆಯಲ್ಲಿ ದಾಖಲಾದ ಮೊದಲ ನಿಪಾ ವೈರಸ್ ಸೋಂಕು ತಗುಲಿದ್ದ ರೋಗಿಗೆ ಚಿಕಿತ್ಸೆ ನೀಡಿದ್ದರು. ಈ ವೇಳೆ ಅವರಿಗೂ ಸೋಂಕು ಹರಡಿತ್ತು. ತಮಗೆ ಸೋಂಕು ಹರಡಿರುವುದು ಖಚಿತವಾಗುತ್ತಿದ್ದಂತೆ ಪತಿಗೆ ಪತ್ರ ಬರೆದಿರುವ ಅವರು ನಾನು ಬಹುತೇಕ ಸಾಯುವುದು ಖಚಿತವಾಗಿದ್ದು, ನಿಮ್ಮನ್ನು ಮತ್ತೆ ನೋಡುತ್ತೇನೆ ಎಂದು ಅನ್ನಿಸುತ್ತಿಲ್ಲ. ನಮ್ಮ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಿ. ಅವರನ್ನು ನಿಮ್ಮೊಂದಿಗೆ ಗಲ್ಫ್ ಗೆ ಕರೆದುಕೊಂಡು ಹೋಗಿ. ನನ್ನ ತಂದೆಯಂತೆ ಅವರನ್ನು ಇಲ್ಲಿ ಏಕಾಂಗಿಯಾಗಿ ಬಿಡಬೇಡಿ. ನಿಮ್ಮನ್ನು ತುಂಬಾ ಪ್ರೀತಿಸುತ್ತೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

    https://twitter.com/deepusebin/status/998573629435727873?

    ಲಿನಿ ಅವರ ಮೃತ ದೇಹವನ್ನು ಕೊನೆಯ ಬಾರಿಗೆ ನೋಡಲು ಸಹ ಯಾರಿಗೂ ಅವಕಾಶ ನೀಡದೇ ಅಂತಿಮ ಸಂಸ್ಕಾರ ನಡೆಸಲಾಗಿದೆ. ಸೋಂಕು ಇತರೇ ವ್ಯಕ್ತಿಗಳಿಗೂ ಹರಡುವ ಕಾರಣದಿಂದ ಆರೋಗ್ಯ ಅಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೇರಳ ಸಿಎಂ ಪಿಣರಾಯಿ ವಿಜಯನ್, ಲಿನಿ ಅವರ ನಿಸ್ವಾರ್ಥ ಸೇವೆಯನ್ನು ಕೇರಳ ಸ್ಮರಿಸುತ್ತದೆ ಎಂದು ತಿಳಿಸಿದ್ದಾರೆ. ಇದನ್ನು ಓದಿ: ಬಾವಲಿ ಜ್ವರಕ್ಕೆ ಕರ್ನಾಟಕದಲ್ಲೂ ಹೈಅಲರ್ಟ್ – ಈ ಮಾಹಿತಿ ನಿಮಗೆ ಗೊತ್ತಿರಲಿ..!

    ಮೊದಲ ಬಾರಿಗೆ ನಿಪಾ ವೈರಸ್ ಗೆ ಬಲಿಯಾದ ಮೂವರು ಸಹ ಒಂದೇ ಕುಟುಂಬಕ್ಕೆ ಸೇರಿದ್ದು, ಅದರಲ್ಲಿ ಇಬ್ಬರು ಸಹೋದರರು ಹಾಗೂ ಆನಾರೋಗ್ಯದ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಅವರನ್ನು ನೋಡಿಕೊಳ್ಳುತ್ತಿದ್ದ ಮಹಿಳೆಯೂ ಸಾವನ್ನಪ್ಪಿದ್ದಾರೆ. ಉಳಿದಂತೆ ಕುಟುಂಬದ ಸಹೋದರರ ತಂದೆಗೂ ಸದ್ಯ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೇರಾಂಬ್ರ ಆಸ್ಪತ್ರೆಯ ಮೂಲಗಳು ತಿಳಿಸಿದೆ. ಇದುವರೆಗೂ ಕೇರಳದಲ್ಲಿ 16ಕ್ಕೂ ಹೆಚ್ಚಿನ ಜನ ನಿಪಾ ವೈರಸ್ ಗೆ ಬಲಿಯಾಗಿದ್ದಾರೆ.