Tag: ನಾಶ

  • 70 ಲಕ್ಷ ರೂ. ಮೌಲ್ಯದ 18 ಕೆ.ಜಿ ಗಾಂಜಾ ಸುಟ್ಟ ಪೊಲೀಸರು

    70 ಲಕ್ಷ ರೂ. ಮೌಲ್ಯದ 18 ಕೆ.ಜಿ ಗಾಂಜಾ ಸುಟ್ಟ ಪೊಲೀಸರು

    ಉಡುಪಿ: 15 ಗಾಂಜಾ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯಾದ್ಯಂತ ಪೊಲೀಸರು ವಶಪಡಿಸಿಕೊಂಡಿದ್ದ ಸುಮಾರು 18 ಕೆ.ಜಿ. ಗಾಂಜಾವನ್ನು ಎಸ್‍ಪಿ ಕಚೇರಿಯ ಆವರಣದಲ್ಲಿ ಸುಟ್ಟುಹಾಕಲಾಯಿತು.

    ಉಡುಪಿ ನಗರ ಸೇರಿದಂತೆ ಮಣಿಪಾಲ, ಹಿರಿಯಡ್ಕ, ಕಾರ್ಕಳ ಹಾಗೂ ಕುಂದಾಪುರ ಉಪ-ವಿಭಾಗ ಪೊಲೀಸರು ಸುಮಾರು 15 ಪ್ರಕರಣಗಳಲ್ಲಿ 18 ಕೆ.ಜಿ.ಯಷ್ಟು ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಇದರಲ್ಲಿ ಅತಿಹೆಚ್ಚು ಉಡುಪಿ ನಗರದಲ್ಲೇ ವಶಕ್ಕೆ ಪಡೆಯಲಾಗಿತ್ತು.

    ಜಿಲ್ಲಾ ನ್ಯಾಯಾಲಯದ ಆದೇಶದ ಮೇರೆಗೆ ಪೊಲೀಸರು ಇಂದು ಜಿಲ್ಲಾವರಿಷ್ಠಾಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳ ಸಮಕ್ಷಮದಲ್ಲಿ ಎಸ್ಪಿ ಕಚೇರಿಯ ಆವರಣದಲ್ಲೇ ಗಾಂಜಾವನ್ನು ಬೆಂಕಿ ಹಚ್ಚಿ ನಾಶಪಡಿಸಿದ್ದಾರೆ. ಸುಮಾರು 70 ಲಕ್ಷ ಮೌಲ್ಯದ 18 ಕೆ.ಜಿ. ತೂಕದ ಗಾಂಜಾ ಸೊಪ್ಪನ್ನು ನಾಶಪಡಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

    ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಎಸ್ಪಿ ಲಕ್ಷ್ಮಣ ನಿಂಬರ್ಗಿ, ವಿದ್ಯಾರ್ಥಿಗಳು ಗಾಂಜಾ ಸಂಕೋಲೆಗೆ ಸುಲಭವಾಗಿ ತುತ್ತಾಗುತ್ತಿದ್ದಾರೆ. ಜೊತೆಗಿರುವ ಗೆಳೆಯರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರೆ, ಅಪರಾಧ ತಪ್ಪಿಸುವುದರ ಜೊತೆಗೆ ಸಮಾಜದ ಸ್ವಾಸ್ಥ್ಯ ಕಾಪಾಡಬಹುದು. ಗಾಂಜಾ ಎಂಬ ವಿದೇಶಿ ಕಪಿಮುಷ್ಟಿಗೆ ಭಾರತದ ಯುವ ಪೀಳಿಗೆ ತುತ್ತಾದರೆ, ದೇಶಕ್ಕೆ ನಷ್ಟವೆಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅರಣ್ಯಾಧಿಕಾರಿಗಳಿಂದಲೇ ಬರದ ನಾಡನ್ನು ಹಸಿರಾಗಿಸಬೇಕಿದ್ದ ಸಸಿಗಳ ಮಾರಣಹೋಮ!

    ಅರಣ್ಯಾಧಿಕಾರಿಗಳಿಂದಲೇ ಬರದ ನಾಡನ್ನು ಹಸಿರಾಗಿಸಬೇಕಿದ್ದ ಸಸಿಗಳ ಮಾರಣಹೋಮ!

    – ಅಧಿಕಾರಿಗಳ ವಿರುದ್ಧ ಪರಿಸರವಾದಿಗಳಿಂದ ಭ್ರಷ್ಟಾಚಾರದ ಆರೋಪ
    – ಎಡವಟ್ಟು ಮುಚ್ಚಲು ಸಸಿಗಳ ಮಾರಣಹೋಮ

    ಚಿತ್ರದುರ್ಗ: ಬರದ ನಾಡನ್ನು ಹಚ್ಚ ಹಸಿರಾಗಿ ಕಂಗೊಳಿಸುವಂತೆ ಮಾಡಬೇಕಿದ್ದ ಅರಣ್ಯಧಿಕಾರಿಗಳೇ ಸಸಿಗಳ ಮಾರಣ ಹೋಮ ಮಾಡಿರುವ ಘಟನೆ ಚಿತ್ರದುರ್ಗ ತಾಲ್ಲೂಕಿನ ಐನಳ್ಳಿ ನರ್ಸರಿಯಲ್ಲಿ ಬೆಳಕಿಗೆ ಬಂದಿದೆ.

    ಕಳೆದ ವರ್ಷ ಸಾಮಾಜಿಕ ವಲಯದ ವ್ಯಾಪ್ತಿಗೆ ಬರುವ ರಸ್ತೆಗಳು, ಸಾರ್ವಜನಿಕ ಉದ್ಯಾನವನಗಳಲ್ಲಿ ನೆಡಲೆಂದು ನರ್ಸರಿಯಲ್ಲಿ 5 ಸಾವಿರ ಗಿಡಗಳಿಗೆ ನೀರು, ಗೊಬ್ಬರ ಹಾಕಿ ಪೋಷಿಸಿದ್ದರು. ಆದರೆ ಚಿತ್ರದುರ್ಗ ವಲಯ ಅಧಿಕಾರಿ ಅಕ್ಷತಾ, ಈ ಕಾರ್ಯದಲ್ಲಿ ನಿರ್ಲಕ್ಷ್ಯ ತೋರಿದ್ದು, ತಮ್ಮ ವ್ಯಾಪ್ತಿಯೊಳಗೆ ಬಂದಿದ್ದ ವಿವಿಧ ಬಗೆಯ ಸುಮಾರು 5 ಸಾವಿರ ಸಸಿಗಳನ್ನು ನಾಶ ಪಡಿಸಿದ್ದಾರೆ. ಅಲ್ಲದೇ ಉತ್ತಮವಾಗಿ ಪೋಷಿಸಿದ್ದ ಸಸಿಗಳನ್ನು ಅಗತ್ಯವಿರುವ ಕಡೆ ನೆಡುವುದು ಇರಲಿ ಸಾರ್ವಜನಿಕರಿಗೂ ಸಹ ನೀಡದೇ ಆ ಸಸಿಗಳನ್ನು ನಾಶಗೊಳಿಸಿದ್ದಾರೆ. ಸದ್ಯ ಅರಣ್ಯ ಇಲಾಖೆಯ ಅಧಿಕಾರಿಗಳ ನಡೆಗೆ ಪರಿಸರವಾದಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಸಸಿ ಮಾರಣಹೋಮ ಮಾಡಿದ್ದೇಕೆ?
    ಸದ್ಯ ನರ್ಸರಿಯಲ್ಲಿ ಸಸಿಗಳ ಸಂಗ್ರವಾಗಿದ್ದರೂ ಕೂಡ ಮತ್ತೆ ಈ ವರ್ಷದ ಮಳೆಗಾಲಕ್ಕೆ ಹೊಸ ಸಸಿಗಳ ಅಗತ್ಯವಿದೆಯೆಂದು ಇಲಾಖೆಗೆ ಮನವಿ ಸಲ್ಲಿಸಿದೆ. ಹೊಸ ಸಸಿಗಳನ್ನು ಪೂರೈಕೆ ಮಾಡಲು ಮೇಲಾಧಿಕಾರಿಗಳು ಸ್ಥಳ ಪರಿಶೀಲನೆ ಬರುವ ಸಾಧ್ಯತೆ ಇರುವುದರಿಂದ ಅಧಿಕಾರಿಗಳ ಕಣ್ಣಿಗೆ ತಮ್ಮ ಎಡವಟ್ಟು ಕಾಣಿಸದಂತೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿ ವಲಯ ಅರಣ್ಯಾಧಿಕಾರಿಗಳು ಹೀಗೆ ಸಸಿಗಳ ಮಾರಣಹೋಮ ಮಾಡಿದ್ದರೆಂಬ ಆರೋಪ ಕೇಳಿಬಂದಿದೆ.

    ಭ್ರಷ್ಟಚಾರದ ವಾಸನೆ?
    ಸಸಿಗಳನ್ನು ಮಾರಣ ಹೋಮ ನಡೆಸಿರುವುದರ ಹಿಂದೆ ದೊಡ್ಡ ಭ್ರಷ್ಟಾಚಾರದ ವಾಸನೆ ಕೇಳಿಬಂದಿದ್ದು, ಅರಣ್ಯ ಇಲಾಖೆಗೆ ಸುಮಾರು 2ಲಕ್ಷ ರೂ. ನಷ್ಟವುಂಟಾಗಿದೆ. ಪ್ರತಿವರ್ಷವೂ ಹೀಗೆಯೇ ಸಸಿಗಳ ಮಾರಣಹೋಮ ನಡೆಸಲಾಗುತ್ತಿದೆ ಎನ್ನುವ ಆರೋಪ ಕೇಳಿಬಂದಿದೆ.

    ತನಿಖೆ ಅಗತ್ಯ: ಸಾವಿರಾರು ಸಸಿಗಳನ್ನು ಹೀಗೆ ನಾಶ ಮಾಡಿರುವ ಅರಣ್ಯ ಇಲಾಖೆ ಇದೂವರೆಗೂ ಸಾಮಾಜಿಕ ವಲಯದಲ್ಲಿ ನೆಟ್ಟಿರುವ ಸಸಿಗಳ ಪೋಷಣೆ ಕುರಿತು ಸೂಕ್ತ ತನಿಖೆಯಾಗಬೇಕು. ಈ ಮೂಲಕ ಸರ್ಕಾರದ ಬೊಕ್ಕಸಕ್ಕೆ ಆಗುತ್ತಿರುವ ನಷ್ಟಕ್ಕೆ ಬ್ರೇಕ್ ಹಾಕಬೇಕು. ಜೊತೆಗೆ ಸಸಿಗಳು ಚಿಗುರುವ ಮುನ್ನವೇ ನಾಶ ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪರಿಸರವಾದಿಗಳು ಬೇಡಿಕೆ ಇಟ್ಟಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಭಾರೀ ಗಾಳಿ-ಮಳೆಗೆ ನೆಲಕಚ್ಚಿದ ಬಾಳೆ ಗಿಡಗಳು-ಸಂಕಷ್ಟದಲ್ಲಿ ರೈತ

    ಭಾರೀ ಗಾಳಿ-ಮಳೆಗೆ ನೆಲಕಚ್ಚಿದ ಬಾಳೆ ಗಿಡಗಳು-ಸಂಕಷ್ಟದಲ್ಲಿ ರೈತ

    ವಿಜಯಪುರ: ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದಲ್ಲಿ ಮುಂಗಾರು ಮಳೆಯ ಆರ್ಭಟಕ್ಕೆ ಅಪಾರ ಪ್ರಮಾಣದ ಬಾಳೆ ಬೆಳೆ ನಾಶವಾಗಿದೆ.

    ರಮೇಶ್ ಗಂಗನಗೌಡ, ಅಮರಪ್ಪ ಗಂಗನಗೌಡ, ತಿಪ್ಪಣ ಕೆಂಬಾವಿ, ರೇವಣಪ್ಪ ಕೆಂಬಾವಿ ಎಂಬವರ ಹೊಲಗಳಲ್ಲಿ ಮಳೆಯ ಹೊಡೆತಕ್ಕೆ ಒಟ್ಟು ನಾಲ್ಕು ಎಕರೆ ಬಾಳೆ ಬೆಳೆ ಸಂಪೂರ್ಣ ನಾಶವಾಗಿದೆ. ಭಾರೀ ಮಳೆ ಬಂದಿದ್ದರಿಂದ ಅಪಾರ ಪ್ರಮಾಣದ ಬಾಳೆ ಬೆಳೆ ನಾಶವಾಗಿ ರೈತರು ಕಂಗಾಲಾಗಿದ್ದಾರೆ.

    ರೈತರು ಸಾಲ ಮಾಡಿ ಬಾಳೆ ಬೆಳೆದಿದ್ದರು. ಭಾನುವಾರ ಬಿಟ್ಟು ಬಿಡದೆ ಸುರಿದ ಮಳೆಯಿಂದಾಗಿ ಬಾಳೆ ಗಿಡಗಳು ಮುರಿದು ಬಿದ್ದಿವೆ. ಗಿಡಗಳು ಬೀಳದಂತೆ ಮರದ ಕೋಲುಗಳನ್ನು ಕೊಟ್ಟಿದ್ದರು ಗಾಳಿ ಬೀಸಿದ್ದರಿಂದ ಬಿದ್ದಿವೆ. ಬಿದ್ದಿರುವ ಗಿಡಗಳಲ್ಲಿ ಇರುವ ಗೊನೆಗಳ ಕಾಯಿಗಳು ಇನ್ನೂ ಬಲಿತಿಲ್ಲ. ಸುಮಾರು 100 ಗಿಡಗಳು ಮುರಿದು ಬಿದ್ದಿವೆ ಎಂದು ರೈತ ಬಸಪ್ಪ ಹೇಳ್ತಾರೆ.

    ರೈತರು ಲಕ್ಷಾಂತರ ರೂಪಾಯಿ ಬೆಲೆಯ ಬಾಳೆ ನೆಲಕ್ಕಚ್ಚಿದ್ದರಿಂದ ಕಂಗಾಲಾಗಿದ್ದಾರೆ. ಪರಿಹಾರಕ್ಕಾಗಿ ಸರ್ಕಾರಕ್ಕೆ ಮೊರೆ ಇಡುತ್ತಿದ್ದಾರೆ.

  • ಅರಣ್ಯ ಪ್ರದೇಶ ಗಡಿ ಭಾಗದಲ್ಲಿ ಆನೆಗಳು ಪ್ರತ್ಯಕ್ಷ- ಅಪಾರ ಬೆಳೆ ನಾಶ

    ಅರಣ್ಯ ಪ್ರದೇಶ ಗಡಿ ಭಾಗದಲ್ಲಿ ಆನೆಗಳು ಪ್ರತ್ಯಕ್ಷ- ಅಪಾರ ಬೆಳೆ ನಾಶ

    ಕೋಲಾರ: ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಗಡಿ ಪ್ರದೇಶದಲ್ಲಿ ಮತ್ತೆ ಕಾಡಾನೆಗಳ ಹಿಂಡು ಪ್ರತ್ಯಕ್ಷವಾಗಿದ್ದು, ಟೊಮಾಟೋ, ಪಪ್ಪಾಯ, ಬೀನ್ಸ್, ಭತ್ತ ಸೇರಿದಂತೆ ರೈತರ ಪಂಪು ಮೋಟಾರ್, ಗುಡಿಸಲುಗಳನ್ನು ಧ್ವಂಸ ಮಾಡಿವೆ.

    ಶುಕ್ರವಾರ ರಾತ್ರಿ ರೈತರ ತೋಟಗಳ ಮೇಲೆ ದಾಳಿ ಮಾಡಿರುವ 6 ಆನೆಗಳ ಹಿಂಡು ನೂರಾರು ಎಕರೆ ಪ್ರದೇಶದ ವಿವಿಧ ಬೆಳೆಗಳನ್ನು ನಾಶ ಮಾಡಿವೆ. ಪ್ರತಿ ವರ್ಷ ಕಾಡಾನೆ ಹಾವಳಿ ಹೆಚ್ಚಾಗುತ್ತಲಿದ್ದು, ಆಹಾರ-ನೀರು ಹರಸಿ ನಾಡಿನತ್ತ ಆನೆಗಳ ಹಿಂಡು ಹೆಜ್ಜೆ ಹಾಕುತ್ತಲಿವೆ. ಇದರಿಂದ ಅರಣ್ಯ ಪ್ರದೇಶದ ಗಡಿಭಾಗದ ಗ್ರಾಮಸ್ಥರಲ್ಲಿ ಆತಂಕ ಮೂಡಿದೆ. ಜೊತೆಗೆ ಲಕ್ಷಾಂತರ ರೂಪಾಯಿ ಬೆಳೆಗಳನ್ನು ಕಳೆದುಕೊಳ್ಳುವಂತಾಗಿದೆ. ಇದರಿಂದ ರೈತರಿಗೆ ಪರಿಹಾರವೂ ಸಿಗದೆ, ರಕ್ಷಣೆಯೂ ಇಲ್ಲದಾಗಿದೆ.

    ಪ್ರಮುಖವಾಗಿ ಜಿಲ್ಲೆಯ ಗಡಿ ಪ್ರದೇಶವಾದ ಬಂಗಾರಪೇಟೆ ತಾಲೂಕಿನ ಆಂಧ್ರ ಗಡಿಯ ಚಿಕ್ಕಕಳವಂಚಿ, ತೊಪ್ಪನಹಳ್ಳಿ, ಕದರಿನತ್ತ ಗ್ರಾಮಗಳ ಬಳಿ ಸುಮಾರು ಆರು ಆನೆಗಳ ಹಿಂಡು ಕಳೆದ 15 ದಿನಗಳಿಂದ ಬೀಡು ಬಿಟ್ಟಿವೆ. ರಾಮಕುಪ್ಪಂ ಹಾಗೂ ಕೃಷ್ಣಗಿರಿ ಅರಣ್ಯ ಪ್ರದೇಶದಿಂದ ಬಂದಿರುವ ಈ ಆನೆಗಳ ಹಿಂಡು ಕರ್ನಾಟಕದ ಗಡಿ ಭಾಗದ ಜನರ ನಿದ್ದೆಗೆಡಿಸಿವೆ.

    ಜಿಲ್ಲೆಯ ಗಡಿಭಾಗವಾದ ಕಾಮಸಮುದ್ರಂ ಪ್ರದೇಶ ಸುತ್ತಮುತ್ತ ಸಾವಿರಾರು ಹೆಕ್ಟೇರು ಅರಣ್ಯ ಪ್ರದೇಶವಿದೆ. ಈ ಅರಣ್ಯ ಪ್ರದೇಶ ಆಂಧ್ರಪ್ರದೇಶ ಹಾಗೂ ತಮಿಳುನಾಡು ರಾಜ್ಯಗಳ ಅರಣ್ಯಕ್ಕೆ ಸಂಪರ್ಕ ಹೊಂದಿದೆ. ಹೀಗಾಗಿ ಈ ಭಾಗದಲ್ಲಿ ಇದೀಗ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ಪ್ರತಿ ವರ್ಷ ನೂರಾರು ಆನೆಗಳು ಇಲ್ಲಿಗೆ ಆಹಾರ ನೀರಿಗಾಗಿ ವಲಸೆ ಬರುತ್ತಿದ್ದು, ಆನೆಗಳಿಂದಾಗಿ ರೈತರು ಬೆಳೆದ ಬೆಳೆಗಳ ಜೊತೆಗೆ ರೈತರು ಸಾವನ್ನಪ್ಪಿರುವ ಘಟನೆಗಳು ಸಂಭವಿಸಿದೆ.

    ಆನೆ ಹಿಂಡನ್ನು ಕಾಡಿಗಟ್ಟಲು ಹರಸಾಹಸ ಪಡುತ್ತಿರುವ ಅರಣ್ಯ ಇಲಾಖೆ ಸಿಬ್ಬಂದಿ, ಪಟಾಕಿ, ಸಿಡಿ ಮದ್ದುಗಳನ್ನು ಬಳಸಿಕೊಂಡು ಹಗಲು ರಾತ್ರಿ ಕಾರ್ಯಚರಣೆ ನಡೆಸುತ್ತಿದ್ದಾರೆ. ಕಾಡಾನೆಗಳ ದಾಳಿಯಿಂದ ರೈತರು ಕಳೆದುಕೊಂಡ ನೂರಾರು ಎಕರೆ ಬೆಳೆಗೆ ಪರಿಹಾರ ನೀಡಿ, ಸರ್ಕಾರ ಸಹಾಯಹಸ್ತವನ್ನು ಚಾಚಬೇಕು. ಅಲ್ಲದೇ ಆನೆ ಕಾರಿಡಾರ್ ನಿರ್ಮಾಣ ಮಾಡಿ, ಈ ಭಾಗದ ಜನರಿಗೆ ನೆಮ್ಮದಿ ಕಲ್ಪಿಸಬೇಕಾಗಿದೆ ಎಂದು ಸ್ಥಳೀಯರು ಒತ್ತಾಯ ಮಾಡಿದ್ದಾರೆ.

  • ಸೇತುವೆ ಕುಸಿದು ನೀರಿಗೆ ಬಿದ್ದ ಲಾರಿ- 100 ಮೂಟೆ ಅಕ್ಕಿ, 30 ಮೂಟೆ ಬೇಳೆ ನೀರು ಪಾಲು

    ಸೇತುವೆ ಕುಸಿದು ನೀರಿಗೆ ಬಿದ್ದ ಲಾರಿ- 100 ಮೂಟೆ ಅಕ್ಕಿ, 30 ಮೂಟೆ ಬೇಳೆ ನೀರು ಪಾಲು

    ಮಂಡ್ಯ: ಸತತವಾಗಿ ಮಳೆಯಿಂದ ಶಿಥಿಲಗೊಂಡಿದ್ದ ಸೇತುವೆ ಕುಸಿದ ಪರಿಣಾಮ ಪಡಿತರ ಅಕ್ಕಿ ಮತ್ತು ಬೇಳೆ ಸಾಗಿಸುತ್ತಿದ್ದ ಲಾರಿ ನೀರಿಗೆ ಬಿದ್ದಿರುವ ಘಟನೆ ಜಿಲ್ಲೆಯ ಕೆಆರ್‍ಪೇಟೆ ತಾಲೂಕಿನ ನಾಯಕನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಕೆಆರ್ ಪೇಟೆ ಸೊಸೈಟಿಯಿಂದ ನಾಯಕನಹಳ್ಳಿ ಗ್ರಾಮದ ನ್ಯಾಯಬೆಲೆ ಅಂಗಡಿಗೆ ಲಾರಿಯಲ್ಲಿ ಪಡಿತರ ಅಕ್ಕಿ ಮತ್ತು ಬೇಳೆಯನ್ನು ತುಂಬಿಕೊಂಡು ಹೋಗಲಾಗುತ್ತಿತ್ತು. ಈ ಸಂದರ್ಭದಲ್ಲಿ ಲಾರಿ ನಾಯಕನಹಳ್ಳಿ ಕೆರೆಗೆ ಅಡ್ಡಲಾಗಿ ವಾಹನ ಸಂಚರಿಸಲು ಕಟ್ಟಲಾಗಿದ್ದ ಸೇತುವೆ ಮೇಲೆ ಬಂದಿದೆ. ಆದರೆ ಸತತ ಮಳೆಯಿಂದ ಶಿಥಿಲಗೊಂಡಿದ್ದ ಸೇತುವೆ ತಕ್ಷಣ ಕುಸಿದಿದೆ. ಪರಿಣಾಮ ಪಡಿತರರಿಗಾಗಿ ಸಾಗಿಸುತ್ತಿದ್ದ ಲಾರಿ ನೀರಿಗೆ ಬಿದ್ದಿದೆ.

    ಲಾರಿ ನೀರಿನಲ್ಲಿ ಬಿದ್ದುದ್ದರಿಂದ ಸುಮಾರು 100 ಮೂಟೆ ಅಕ್ಕಿ, 30 ಮೂಟೆ ಬೇಳೆ ನೀರು ಪಾಲಾಗಿದೆ. ತಕ್ಷಣ ಸ್ಥಳಕ್ಕೆ ಬಂದ ಗ್ರಾಮಸ್ಥರು ನೀರಿಗೆ ಧುಮುಕಿ ಆಹಾರ ವಸ್ತುಗಳನ್ನು ಮೇಲೆತ್ತಲು ಲಾರಿಯವರಿಗೆ ಸಹಾಯ ಮಾಡಿದ್ದಾರೆ. ಈ ಸೇತುವೆ ಸುಮಾರು 22 ವರ್ಷ ಹಳೆಯದಾಗಿದ್ದು, ಮಳೆಯಿಂದ ನನೆದು ಸೇತುವೆ ಕುಸಿದಿದೆ. ಇದರಿಂದಾಗಿ ಸಂತೆಬಾಚಹಳ್ಳಿ ಮತ್ತು ನಾಯಕನಹಳ್ಳಿ ಮಾರ್ಗ ಸಂಪೂರ್ಣ ಕಡಿತವಾಗಿದೆ.

    ಇನ್ನೂ ಲಾರಿ ನೀರಿಗೆ ಬಿದ್ದಿದ್ದು, ಸದ್ಯಕ್ಕೆ ಅದೃಷ್ಟವಶಾತ್ ಈ ಘಟನೆಯಲ್ಲಿ ಯಾರಿಗೂ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ ತಕ್ಷಣ ಕ್ರೇನ್ ತರಿಸಿ ಮೇಲೆತ್ತದಿದ್ದರೆ, ಮತ್ತಷ್ಟು ಅಪಾಯವಾಗುವ ಆತಂಕ ಗ್ರಾಮಸ್ಥರಲ್ಲಿ ಮೂಡಿದೆ.