ದೇಶಾದ್ಯಂತ ನಾಗಪಂಚಮಿ (Nagara Panchami) ಹಬ್ಬದ ಸಂಭ್ರಮ ಮನೆ ಮಾಡಿದೆ. ಶ್ರಾವಣ ಮಾಸದ ಶುಕ್ಲ ಪಕ್ಷದ ಐದನೇ ದಿನದಂದು ನಾಗಪಂಚಮಿ ಆಚರಿಸಲಾಗುತ್ತದೆ. ಹಿಂದೂ ಸಂಪ್ರದಾಯದಲ್ಲಿ ಸರ್ಪಗಳನ್ನು ಶಿವನ ಆಭರಣ ಎಂದು ಪರಿಗಣಿಸಲಾಗಿದೆ. ನಾಗದೇವರಿಗೆ ಭಕ್ತರು ಹಾಲೆರೆದು, ಪೂಜೆ-ಪುನಸ್ಕಾರಗಳ ಮೂಲಕ ಹಬ್ಬ ಆಚರಿಸುತ್ತಾರೆ. ಶಿವಲಿಂಗ ಪೂಜೆ ಕೂಡ ನೆರವೇಸುತ್ತಾರೆ. ದೇವಾಲಯಗಳಿಗೆ ಭೇಟಿ ನೀಡಿ ಭಕ್ತಿ-ಭಾವ ಮೆರೆಯುತ್ತಾರೆ. ಭಾರತದಲ್ಲಿ ಅನೇಕ ಸರ್ಪ ದೇವಾಲಯಗಳಿವೆ. ಅವುಗಳಲ್ಲಿ ಒಂದು ಉಜ್ಜಯಿನಿಯ (Ujjain) ನಾಗಚಂದ್ರೇಶ್ವರ ದೇವಾಲಯ (Nagchandreshwar Temple). ಇದು ಪ್ರಸಿದ್ಧ ಮಹಾಕಾಳ ದೇವಾಲಯದ ಮೂರನೇ ಮಹಡಿಯಲ್ಲಿದೆ. ಈ ದೇವಾಲಯವು ವರ್ಷಕ್ಕೊಮ್ಮೆ ನಾಗಪಂಚಮಿಯಂದು ಮಾತ್ರ 24 ಗಂಟೆಗಳ ಕಾಲ ತೆರೆದಿರುತ್ತದೆ.
ಈ ದೇವಾಲಯದಲ್ಲಿ ನಾಗರಾಜ ತಕ್ಷಕ ಸ್ವತಃ (ನಾಗರ ರಾಜ) ವಾಸಿಸುತ್ತಾನೆ ಎಂದು ನಂಬಲಾಗಿದೆ. ನಾಗಚಂದ್ರೇಶ್ವರ ದೇವಾಲಯದಲ್ಲಿ 11 ನೇ ಶತಮಾನದ ಅದ್ಭುತ ಪ್ರತಿಮೆಯಿದೆ. ಇದರಲ್ಲಿ ಶಿವ ಮತ್ತು ಪಾರ್ವತಿಯರು ಹೆಡೆ ಬಿಚ್ಚಿದ ಹಾವಿನ ಆಸನದ ಮೇಲೆ ಕುಳಿತಿರುವ ಭಂಗಿ ಇದೆ. ಈ ಪ್ರತಿಮೆಯನ್ನು ನೇಪಾಳದಿಂದ ಇಲ್ಲಿಗೆ ತರಲಾಗಿದೆ ಎಂದು ಹೇಳಲಾಗುತ್ತದೆ. ಉಜ್ಜಯಿನಿ ಹೊರತುಪಡಿಸಿ, ಜಗತ್ತಿನಲ್ಲಿ ಎಲ್ಲಿಯೂ ಅಂತಹ ಪ್ರತಿಮೆ ಇಲ್ಲ. ಅದರ ದರ್ಶನಕ್ಕಾಗಿ, ಸೋಮವಾರ ರಾತ್ರಿ 12 ಗಂಟೆಗೆ ದೇವಾಲಯದ ದ್ವಾರಗಳನ್ನು ತೆರೆಯಲಾಗುತ್ತದೆ. ಮಂಗಳವಾರ ಮಧ್ಯರಾತ್ರಿ 12 ಗಂಟೆಗೆ, ದೇವಾಲಯದ ಬಾಗಿಲುಗಳನ್ನು ಮತ್ತೆ ಒಂದು ವರ್ಷದವರೆಗೆ ಮುಚ್ಚಲಾಗುತ್ತದೆ. ಇದನ್ನೂ ಓದಿ: ನಾಗಮಂಡಲ ಎಂದರೇನು? ಇದರ ಆಚರಣೆ, ಮಹತ್ವವೇನು?
ಸರ್ಪ ರಾಜ ತಕ್ಷಕನು ತೀವ್ರ ತಪಸ್ಸು ಮಾಡಿದನು. ಭೋಲೆನಾಥನು ಅವನ ತಪಸ್ಸಿನಿಂದ ಸಂತಸಗೊಂಡು ಹಾವುಗಳ ರಾಜ ತಕ್ಷಕ ನಾಗನಿಗೆ ಅಮರತ್ವದ ವರವನ್ನು ನೀಡಿದನು. ಅಂದಿನಿಂದ ತಕ್ಷಕ ರಾಜನು ಭಗವಂತನ ಸಹವಾಸದಲ್ಲಿ ವಾಸಿಸಲು ಪ್ರಾರಂಭಿಸಿದನು ಎಂದು ನಂಬಲಾಗಿದೆ. ಆದರೆ ಮಹಾಕಾಳ ಕಾಡಿನಲ್ಲಿ ವಾಸಿಸುವ ಮೊದಲು, ಅವನ ಏಕಾಂತತೆಯಲ್ಲಿ ಯಾವುದೇ ತೊಂದರೆ ಉಂಟಾಗಬಾರದು ಎಂಬುದು ಅವನ ಉದ್ದೇಶವಾಗಿತ್ತು. ಆದ್ದರಿಂದ ಅವನು ನಾಗಪಂಚಮಿಯ ದಿನದಂದು ಮಾತ್ರ ದರ್ಶನಕ್ಕೆ ಲಭ್ಯವಿರುತ್ತಾನೆ ಎಂಬುದು ನಂಬಿಕೆಯಾಗಿದೆ.
4 ಲಕ್ಷ ಭಕ್ತರು ಭೇಟಿ
ಮಂಗಳವಾರ ನಾಗಪಂಚಮಿಯ ಸಂದರ್ಭದಲ್ಲಿ 4 ಲಕ್ಷಕ್ಕೂ ಹೆಚ್ಚು ಭಕ್ತರು ನಾಗಚಂದ್ರೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದರು. ಮಧ್ಯರಾತ್ರಿ 12 ಗಂಟೆಗೆ ದೇವಾಲಯದ ದ್ವಾರಗಳು ತೆರೆದವು. ಭಕ್ತರು ಪೂಜೆ ಸಲ್ಲಿಸಿದ್ದರು. ಇಂದು ರಾತ್ರಿ 12 ಗಂಟೆಯವರೆಗೆ ದೇವಾಲಯವು ದರ್ಶನಕ್ಕಾಗಿ ತೆರೆದಿರುತ್ತದೆ. ಮಂಗಳವಾರ ಬೆಳಗ್ಗೆ 11 ಗಂಟೆಯ ಹೊತ್ತಿಗೆ ಸುಮಾರು 4 ಲಕ್ಷ ಭಕ್ತರು ಇಲ್ಲಿ ದರ್ಶನ ಪಡೆದಿದ್ದಾರೆ. ಇಂದು ಮಧ್ಯರಾತ್ರಿ 12 ಗಂಟೆಗೆ ಬಾಗಿಲು ಮುಚ್ಚುವ ಹೊತ್ತಿಗೆ ಕನಿಷ್ಠ 10 ಲಕ್ಷ ಭಕ್ತರು ಭೇಟಿ ನೀಡುವ ನಿರೀಕ್ಷೆಯಿದೆ. ಇದನ್ನೂ ಓದಿ: ಮಲೆನಾಡು – ಪ್ರಕೃತಿಯ ಆರಾಧನೆಯ ಭಾಗವಾಗಿ ನಾಗರ ಪಂಚಮಿ
ಶಿವ, ಪಾರ್ವತಿ ಮತ್ತು ಸರ್ಪ ದೇವರು ಒಟ್ಟಿಗೆ ಕುಳಿತಿರುವ ದೇವಾಲಯದ ವಿಶಿಷ್ಟ ವಿಗ್ರಹವು ಭಕ್ತರಿಗೆ ಪ್ರಬಲ ಆಕರ್ಷಣೆಯ ಕೇಂದ್ರವಾಗಿದೆ. ದೇವಾಲಯದಲ್ಲಿ ಪೂಜೆ ಮಾಡುವುದರಿಂದ ಜಾತಕದಲ್ಲಿನ ಕಾಳಸರ್ಪ ದೋಷ ಮತ್ತು ಇತರ ಸರ್ಪ ದೋಷಗಳಿಂದ ಪರಿಹಾರ ಸಿಗುತ್ತದೆ ಎಂದು ನಂಬಲಾಗಿದೆ.
ಭಾರತದ ದಕ್ಷಿಣ ಭಾಗದಲ್ಲಿ ಆಚರಿಸಲಾಗುವ ಪ್ರಮುಖ ನಾಗಪೂಜಾ ವಿಧಾನಗಳಲ್ಲಿ ನಾಗಮಂಡಲ (Nagamandala) ಪೂಜೆಯು ಅತ್ಯಂತ ಪವಿತ್ರವಾದ ಹಾಗೂ ಶ್ರದ್ಧಾ ಭಕ್ತಿಯಿಂದ ಕೂಡಿರುವ ಒಂದು ಶಕ್ತಿಶಾಲಿ ಆಚರಣೆ ಆಗಿದೆ. ಕರಾವಳಿ ಕರ್ನಾಟಕದ ತುಳುನಾಡಿನಲ್ಲಿ ಇದು ವಿಶೇಷವಾಗಿ ಪ್ರಸಿದ್ಧವಾಗಿದ್ದು, ಈ ನಾಗಮಂಡಲಕ್ಕೆ ನಾನಾ ಅಧ್ಯಾತ್ಮಿಕ, ಸಾಂಸ್ಕೃತಿಕ ಹಾಗೂ ಜ್ಯೋತಿಷ್ಯಶಾಸ್ತ್ರದ ಹಿನ್ನೆಲೆಯನ್ನು ಹೊಂದಿದೆ.
ನಾಗಮಂಡಲ ಎಂದರೇನು?
ನಾಗಮಂಡಲ ಎಂದರೆ ನಾಗ ದೇವತೆಯು ನೃತ್ಯ ರೂಪದಲ್ಲಿ ಪೂಜಿಸಲ್ಪಡುವ ಒಂದು ವಿಶಿಷ್ಟ ಆಚರಣೆ. ಇದು ನಾಗದೋಷ ನಿವಾರಣೆಗೆ ಮತ್ತು ಕುಟುಂಬದ ಕ್ಷೇಮ ಸಮೃದ್ಧಿಗೆ ಮಾಡಲಾಗುವ ಒಂದು ದೇವಪೂಜೆ. ಇದರಲ್ಲಿ ಎರಡು ಪ್ರಮುಖ ಪಾತ್ರಗಳು ಇರುತ್ತವೆ. ಅವುಗಳೆಂದರೆ ವೈದ್ಯರು(ಹೆಣ್ಣು ನಾಗ) ಮತ್ತು ಪಾತ್ರಿ(ನಾಗದ ಪುರುಷನ ಪ್ರತಿನಿಧಿ).
ಆಚರಣೆ ಹೇಗೆ ನಡೆಯುತ್ತದೆ?
ಮಂಡಲ: ಪೂಜೆಗೆ ಮುನ್ನ ನೆಲದಲ್ಲಿ ನಾಗ ದೇವರಿಗೆ ಸಂಬಂಧಿಸಿದ ರಂಗೋಲಿಯನ್ನು ಬಿಡಿಸಲಾಗಿರುತ್ತದೆ. ಇದನ್ನು ನಾಗಮಂಡಲ ಎಂದು ಕರೆಯುತ್ತಾರೆ. 2-3 ಅಡಿ ಎತ್ತರದ ಚೌಕಾಕಾರದ ವೇದಿಕೆಯನ್ನು ನಿರ್ಮಿಸುತ್ತಾರೆ. ಚಪ್ಪರದ ಸುತ್ತ ರೇಷ್ಮೆ ವಸ್ತ್ರದಿಂದ ಅಲಂಕರಿಸಿರುತ್ತಾರೆ. ಚಪ್ಪರವನ್ನು ಅಡಿಕೆಯ ಹಿಂಗಾರದಿಂದ, ಅಡಿಕೆಯ ಮಾಲೆಯಿಂದ, ಬಾಳೆಗೊನೆ ಹಾಗೂ ಎಳನೀರಿನಿಂದ ಶೃಂಗರಿಸುತ್ತಾರೆ.
ಕೊಳನಾಗ: ಏಳು ಹೆಡೆಯ ದೊಡ್ಡ ಸರ್ಪದ ಚಿತ್ರಣಕ್ಕೆ ಕೊಳನಾಗ, ಗುಳಿಕ, ಅಥವಾ ಕಾಡ್ಯ ಎನ್ನುತ್ತಾರೆ.
ನಾಗಯಕ್ಷ: ಕೊಳನಾಗನ ಸಮೀಪದಲ್ಲಿಯೇ ಕೇವಲ ಹೆಡೆಯಂತೆ ಕಾಣುವ ಒಂದು ರೂಪಕ್ಕೆ ಎರಡು ಕಣ್ಣುಗಳನ್ನು ಚಿತ್ರಿಸುತ್ತಾರೆ. ಇದರ ಆಕಾರ ಶಂಖವನ್ನು ಹೋಲುತ್ತದೆ. ಇದನ್ನು ಕೆಲವರು ಮರಿನಾಗ ಎಂದರೆ ಕೆಲವರು ನಾಗಯಕ್ಷಿ ಎನ್ನುತ್ತಾರೆ.
ಬ್ರಹ್ಮ: ಕೊಳನಾಗನ ಎಡಭಾಗದಲ್ಲಿ ಕೆಳಗೆ ಒಂದು ವಿಶಿಷ್ಟ ಮಾನವಾಕೃತಿಯನ್ನು ಚಿತ್ರಿಸುತ್ತಾರೆ. ಇದಕ್ಕೆ ಕೈ ಕಾಲುಗಳಿಲ್ಲ. ಗಂಡುರೂಪ, ಮೀಸೆ ಇದೆ. ಹೊರಚಾಚಿದಂತಿರುವ ಹಲ್ಲುಗಳು, ಹಾಗೂ ಎರಡು ಕೋರೆ ಹಲ್ಲುಗಳಿವೆ. ತಲೆಗೆ ಚೂಪಾದ ಟೊಪ್ಪಿಗೆಯನ್ನು ಧರಿಸಿದಂತೆ ಕಾಣುತ್ತದೆ. ಇದನ್ನು ವೈದ್ಯರು ಬ್ರಹ್ಮಯಕ್ಷ ಎನ್ನುತ್ತಾರೆ. ತುಳುವರು ಬೆರ್ಮೆರ್ ಎನ್ನುತ್ತಾರೆ.
ತ್ರಿಶೂಲ: ನಾಗನ ಹೆಡೆಯ ಮೇಲುಭಾಗಕ್ಕೆ ಒಂದು ತ್ರಿಶೂಲವನ್ನು ಬರೆಯುತ್ತಾರೆ. ಇದರ ಕೆಳಭಾಗವು ಬಲಭಾಗಕ್ಕೆ ಸ್ವಲ್ಪ ಬಾಗಿರುತ್ತದೆ.
ಗಣಪತಿ: ಬಲತುದಿಗೆ ಸೇರಿಕೊಂಡಂತೆ ತ್ರಿಕೋನಗಳಿಂದ ರಚಿತವಾದ ವೃತ್ತಾಕಾರವಿದೆ. ಇದು ಶ್ರೀಚಕ್ರವನ್ನು ಹೋಲುತ್ತದೆ. ಇದಕ್ಕೆ ಮಂಡಲವನ್ನು ರಚಿಸುವ ವೈದ್ಯರು ಗಣಪತಿ ಎನ್ನುತ್ತಾರೆ.
ಪ್ರೇತಯಕ್ಷ: ಇದೊಂದು ಎರಡು ಕಣ್ಣುಗಳುಳ್ಳ ವಿಶಿಷ್ಟ ಆಕೃತಿಯಾಗಿದೆ.
ನಾಗಮಂಡಲ ನೃತ್ಯ: ನಾಗಮಂಡಲದ ಸುತ್ತ ನೃತ್ಯದಲ್ಲಿ ಇಬ್ಬರು ಪ್ರಧಾನ ಪಾತ್ರ ವಹಿಸುತ್ತಾರೆ. ಒಬ್ಬರು ನಾಗಪಾತ್ರಿಯಾಗಿರುತ್ತಾರೆ. ಅವರು ಮುಂಗೈಗೆ ಕಡಗ, ಮೈಗೆ ಕೆಂಪುಬಟ್ಟೆ, ಕೆದರಿದ ಕೂದಲು, ಕೊರಳಿನಲ್ಲಿ ನಾಗನ ಚಿಹ್ನೆಯ ಪದಕವಿರುವ ಹಾರವನ್ನು ಧರಿಸಿರುತ್ತಾರೆ.
ಇನ್ನೊಂದು ಪ್ರಧಾನ ಪಾತ್ರ ವೈದ್ಯರು ಎನ್ನುತ್ತಾರೆ. ವೈದ್ಯರು ಅರ್ಧನಾರಿ ವೇಷವನ್ನು ಧರಿಸಿರುತ್ತಾರೆ. ಯಕ್ಷಗಾನ ಬಡಗುತಿಟ್ಟಿನ ಸ್ತ್ರೀವೇಷವನ್ನು ಹೋಲುವ ಇವರು ಕೆಂಪುಬಣ್ಣದ ಚೌಕುಳಿಸೀರೆ, ಕಾಲಿಗೆ ಗೆಜ್ಜೆ, ಕೊರಳಿಗೆ ಗುಂಡುಸರ, ಸೊಂಟಕ್ಕೆ ಬೆಳ್ಳಿಪಟ್ಟಿ, ಕೈಗೆ ಚಿನ್ನದ ಕಡಗ, ತಲೆಗೆ ಮುಂಡಾಸು, ಜರಿರುಮಾಲು ಧರಿಸುತ್ತಾರೆ. ಹಾಡುವ ಹಿಮ್ಮೇಳದ ಮೂರು ಜನ ವೈದ್ಯರು ಬಿಳಿಧೋತರವನ್ನು ಕಚ್ಚೆ ಹಾಕಿ ಉಟ್ಟು, ಬಿಳಿ ಅಂಗಿ ತೊಟ್ಟಿರುತ್ತಾರೆ. ನಾಗಮಂಡಲದ ವೇದಿಕೆಯ ಮಧ್ಯಭಾಗದಲ್ಲಿ ರಚಿಸಿದ ಚಿತ್ತಾರದ ಸುತ್ತ ಪಾತ್ರಿ ಮತ್ತು ವೈದ್ಯರು ನರ್ತಿಸುತ್ತಾರೆ.
ನಾಗಮಂಡಲ ಪೂಜೆಯ ಹಿಂದಿನ ತಾತ್ವಿಕ ಅರ್ಥ : ನಾಗ ದೇವತೆಗಳನ್ನು ಭೂಮಿ, ಜಲ, ಅಡಿಸ್ಥಾನ ಶಕ್ತಿಗಳ ಪ್ರತಿನಿಧಿಗಳಾಗಿ ಪರಿಗಣಿಸಲಾಗುತ್ತದೆ. ಈ ಪೂಜೆಯು ದುಷ್ಟಶಕ್ತಿಗಳನ್ನು ನಿವಾರಿಸಿ ಆತ್ಮಶುದ್ಧಿಗೆ ಕಾರಣವಾಗುತ್ತದೆ. ಮನೆಯಲ್ಲಿ ಸಂತಾನ ಸಮಸ್ಯೆ, ಕುಲದ ಅಭಿವೃದ್ದಿ ಅಡಚಣೆ, ವಿವಾಹ ವಿಳಂಬ, ವ್ಯಾಧಿ ಸಮಸ್ಯೆಗಳಾಗಿದ್ದರೆ ನಾಗಮಂಡಲ ಮಾಡಿದರೆ ಶಾಂತಿ ಸಿಗುತ್ತದೆ ಎಂಬ ನಂಬಿಕೆ ಇದೆ.
ನಾಗಮಂಡಲ ಪೂಜೆಯು ಕೇವಲ ಧಾರ್ಮಿಕ ಆಚರಣೆ ಮಾತ್ರವಲ್ಲ. ಇದು ಪ್ರಕೃತಿ, ಪವಿತ್ರತೆಯ ಮಿಶ್ರಣವಾಗಿದೆ. ಪೂರ್ವಜರಿಂದ ಬಂದಿರುವ ಈ ಪಾರಂಪರಿಕ ಆಚರಣೆಯು ಕರಾವಳಿ ಭಾಗಗಳಲ್ಲಿ ಇಂದಿಗೂ ಚಾಲ್ತಿಯಲ್ಲಿದೆ.
ಹಿಂದೂ ಸಂಪ್ರದಾಯದಲ್ಲಿ ಆಚರಿಸುವ ನಾಗರ ಪಂಚಮಿ. ಇದನ್ನು ಶ್ರಾವಣ ಮಾಸದ ಶುಕ್ಲಪಕ್ಷದ ಪಂಚಮಿಯಂದು ಆಚರಿಸಲಾಗುತ್ತದೆ. ಶ್ರಾವಣ ಮಾಸದ ಮೊದಲ ಹಬ್ಬ. ಈ ವಿಶೇಷ ದಿನದಂದು, ನಾಗ ದೇವತೆಯನ್ನು ಪೂಜಿಸಲಾಗುತ್ತದೆ. ನಾಗಪಂಚಮಿಯ (Nagapanchami) ಬಗ್ಗೆ ಪುರಾಣಗಳಲ್ಲಿ ಹಲವು ರೀತಿಯ ಕಥೆಗಳಿವೆ. ಇದನ್ನೂ ಓದಿ:ವಿನಯ್ ರಾಜ್ಕುಮಾರ್ ನಟನೆಯ ‘ಪೆಪೆ’ ಸಿನಿಮಾದ ಜೇನು ಕುರುಬ ಸಾಂಗ್ ರಿಲೀಸ್
ಹೀಗಿರುವಾಗ ನಾಗದೇವತೆ (Nagadevathe) ಹಾಗೂ ನಾಗರಹಾವಿನ ಮಹತ್ವಗಳನ್ನು ಸಾರುವ ಅನೇಕ ಚಲನಚಿತ್ರಗಳು ಬಂದಿದೆ. ಕನ್ನಡದಲ್ಲೂ ನಾಗರ ಮಹಿಮೆ ಸಾರುವ ನಾಗ ದೇವರ ಹೆಸರಿನಲ್ಲಿ ಹಲವು ಚಿತ್ರಗಳು (Movies) ಬಂದಿದೆ. ಇದರ ಕುರಿತು ವಿಶೇಷ ಮಾಹಿತಿ ಇಲ್ಲಿದೆ.
1975ರಲ್ಲಿ ಬಂದ ಸಿನಿಮಾ ‘ನಾಗಕನ್ಯೆ’. ಎಸ್ವಿ ರಾಜೇಂದ್ರ ಸಿಂಗ್ ಬಾಬು ಚೊಚ್ಚಲ ಬಾರಿಗೆ ನಿರ್ದೇಶಿಸಿದ ಚಿತ್ರವಾಗಿದೆ. ಡಾ ವಿಷ್ಣುವರ್ಧನ್, ರಾಜಶ್ರೀ, ಭವಾನಿ ಸೇರಿದಂತೆ ಹಲವು ಕಲಾವಿದರು ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.
1982ರಲ್ಲಿ ಬಂದ ಸಿನಿಮಾ ‘ಗರುಡರೇಖೆ’. ಶ್ರೀನಾಥ್, ಮಾಧವಿ, ಅಂಬಿಕಾ, ವಜ್ರಮುನಿ, ಟೈಗರ್ ಪ್ರಭಾಕರ್ ಸೇರಿದಂತೆ ಅನೇಕರು ನಟಿಸಿದ್ದರು. ನಾಗಮುತ್ತು ಕಥಾಹಂದರವನ್ನಾಗಿಸಿ ತಯಾರಿಸಿದ್ದ ಚಿತ್ರ.
1986ರಲ್ಲಿ ಮೂಡಿ ಬಂದಿದ್ದ ಸಿನಿಮಾ ‘ಬೆಳ್ಳಿನಾಗ’ ಸಿನಿಮಾ. ಟೈಗರ್ ಪ್ರಭಾಕರ್, ನಿಳಿನಿ, ದಿನೇಶ್, ಸುದರ್ಶನ್, ರಾಜಾನಂದ್ ಈ ಚಿತ್ರದ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದರು.
1991ರಲ್ಲಿ ಬಂದಿದ್ದ ‘ನಾಗಿಣಿ’ ಚಿತ್ರ ನೆನಪಿರಬಹುದು. ಶಂಕರ್ ನಾಗ್, ಅನಂತ್ ನಾಗ್, ದೇವರಾಜ್, ತಾರಾ, ಗೀತಾ, ರಂಜನಿ ಸೇರಿದಂತೆ ಹಲವು ನಟಿಸಿದ್ದ ಚಿತ್ರ. ಶ್ರೀಪ್ರಿಯ ನಿರ್ದೇಶನದ ಈ ಚಿತ್ರ ಸೇಡಿನ ಕಥೆಯಾಗಿತ್ತು. ನಾಗರಾಜನನ್ನು ಕೊಂದವರ ವಿರುದ್ಧ ನಾಗಿಣಿ ಸೇಡು ತೀರಿಸಿಕೊಳ್ಳುವ ರೋಚಕ ಕಥೆ. ಗೀತಾ ಈ ಸಿನಿಮಾದಲ್ಲಿ ನಾಗಿಣಿಯಾಗಿ ನಟಿಸಿದ್ದರು.
1992ರಲ್ಲಿ ಬಿಡುಗಡೆಯಾದ ಚಿತ್ರ ‘ಶಿವನಾಗ’. ಅರ್ಜುನ್ ಸರ್ಜಾ ಮತ್ತು ಮಾಲಾಶ್ರೀ ಅಭಿನಯಿಸಿದ್ದ ಸಿನಿಮಾ ಮನೆದೇವರು ನಾಗದೇವತೆ ಒಂದು ಕುಟುಂಬವನ್ನು ಹೇಗೆ ಕಾಯುತ್ತದೆ ಎಂದು ಸಿನಿಮಾದಲ್ಲಿ ತೋರಿಸಲಾಗಿತ್ತು. ಕೆ.ಎಸ್ ಆರ್ ದಾಸ್ ಈ ಚಿತ್ರ ನಿರ್ದೇಶನ ಮಾಡಿದ್ದರು.
ವಿಷ್ಣುವರ್ಧನ್, ಆರತಿ, ಮಾಧವಿ, ಜಯಮಾಲಿನಿ ನಟಿಸಿರುವ ‘ಖೈದಿ’ ಸಿನಿಮಾದ ಹಾಡೊಂದು ಬಹಳ ಜನಪ್ರಿಯವಾಗಿದೆ. ನಾಗರಾಜ ಮತ್ತು ನಾಗಿಣಿಯ ರೂಪ ತಾಳಿ ನೃತ್ಯ ಮಾಡುವ `ತಾಳೆ ಹೂವು ಎದೆಯಿಂದ’ ಹಾಡು ಇದಾಗಿದ್ದು, ಇಂತಹ ವಿಶೇಷ ಸಂದರ್ಭದಲ್ಲಿ ಮೊದಲು ನೆನಪಾಗುತ್ತದೆ.
ಗಿರೀಶ್ ಕಾರ್ನಾಡ್ ನಾಟಕ ಆಧರಿಸಿ ತಯಾರಾದ ಚಿತ್ರ ‘ನಾಗಮಂಡಲ’. ಟಿಎಸ್ ನಾಗಾಭರಣ ನಿರ್ದೇಶಿಸಿದ ಈ ಚಿತ್ರಕ್ಕೆ ಐದು ರಾಜ್ಯ ಪ್ರಶಸ್ತಿ ಲಭಿಸಿತ್ತು. ಹಾವು ಮತ್ತು ಮಹಿಳೆ ನಡುವಿನ ಪ್ರೀತಿ ಮತ್ತು ಸರಸದ ಕಥೆ ಹೊಂದಿದ್ದ ಈ ಚಿತ್ರದಲ್ಲಿ ಪ್ರಕಾಶ್ ರಾಜ್ ಹಾವಿನ ಪಾತ್ರ ಮಾಡಿದ್ದರು. 1997ರಲ್ಲಿ ಈ ಚಿತ್ರ ತೆರೆಗೆ ಬಂದಿತ್ತು.
ನಾಗರಹಾವಿನ ಮಹಿಮೆ, ಮಹತ್ವ ಸಾರುವ ಸಿನಿಮಾಗಳ ನಡುವೆ ಹಾವಿನ ಹೆಸರಿನಲ್ಲಿ ಬಂದ ಚಿತ್ರಗಳು ಹೆಚ್ಚಿವೆ. ರುದ್ರನಾಗ, ನಾಗರಹೊಳೆ, ನಾಗಕಾಳಭೈರವ, ಹಾವಿನ ಹೆಡೆ, ಹಾವಿನ ದ್ವೇಷ, ಬಳ್ಳಾರಿ ನಾಗ, ಕಾಳಿಂಗ ಹೀಗೆ ಹಲವು ಚಿತ್ರಗಳು ಗಮನ ಸೆಳೆದಿದೆ.
ಶ್ರಾವಣ ಮಾಸದ ಶುಕ್ಲಪಕ್ಷದ 5ನೇ ಇಡೀ ಭಾರತದಾದ್ಯಂತ ನಾನಾ ಕಡೆ ನಾನಾ ರೀತಿಯಲ್ಲಿ ನಾಗರ ಪಂಚಮಿಯ (Naga Panchami) ಮನೆ ಮಾಡಿರುತ್ತದೆ. ಈ ದಿನ ಮನೆಮಂದಿ ಮುಂಜಾನೆ ನಾಗನ ಗುಡಿಗೆ ಹೋಗಿ ನಾಗದೇವತೆಗೆ ಪೂಜೆ ಸಲ್ಲಿಸುತ್ತಾರೆ, ನಾಗದೇವರ ಕಲ್ಲಿಗೆ ಹಾಲೆರೆಯುತ್ತಾರೆ. ನಾಗಪೂಜೆಯ ದಿನ ಅನಂತ, ವಾಸುಕಿ, ಶೇಷ, ಪದ್ಮನಾಭ, ಕಂಬಲ, ಶಂಖಪಾಲ, ಧೃತರಾಷ್ಟ್ರ, ತಕ್ಷಕ ಮತ್ತು ಕಾಲಿಯಾ ಎಂಬ ಒಂಬತ್ತು ನಾಗದೇವತೆಗಳನ್ನು ಆರಾಧಿಸಲಾಗುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಈ ಆಚರಣೆ ಸಂಭ್ರಮದಿಂದಲೇ ಕೂಡಿರುತ್ತದೆ. ಬೆಳ್ಳಂ ಬೆಳಗ್ಗೆ ಜನ ಹುತ್ತಕ್ಕೆ ತನಿ ಎರೆಯುವ ಮೂಲಕ ಆಚರಣೆ ಮಾಡುತ್ತಾರೆ.
ಹೌದು. ಭಾರತೀಯ ಪುರಾಣಗಳಲ್ಲಿ ನಾಗಗಳಿಗೆ ದೈವಿಕ ಸ್ಥಾನ ಇದೆ. ಬ್ರಹ್ಮನ ಮಗ ಕಶ್ಯಪ ದಕ್ಷ ಪ್ರಜಾಪತಿಯ ಹದಿನಾರು ಹೆಣ್ಣು ಮಕ್ಕಳನ್ನು ಮದುವೆಯಾಗಿದ್ದ. ಇವರಲ್ಲಿ ಅದಿತಿಯ ಮಕ್ಕಳು ದೇವತೆಗಳು, ದಿತಿಯ ಮಕ್ಕಳು ದೈತ್ಯರು ಮತ್ತು ಕದ್ರುವಿಗೆ ಜನಿಸಿದ್ದ ಸಾವಿರ ಮಕ್ಕಳು ನಾಗಗಳು. ಹೀಗಾಗಿ ನಾಗಗಳು ದೇವತೆಗಳ ಸಂಬಂಧಿಗಳಾಗಿದ್ದಾರೆ ಎಂದು ಜನರ ನಂಬಿಕೆ. ಪುರಾಣಗಳ ಪ್ರಕಾರ, ನಾಗಕುಲದವರು ಪಾತಾಳ ಲೋಕವನ್ನು ಆಳುತ್ತಿದ್ದರು. ಶೇಷ, ತಕ್ಷಕ, ವಾಸುಕಿ, ಅನಂತ, ಪದ್ಮ, ಕಂಬಲ, ಕಾರ್ಕೋಟ, ಅಶ್ವತ್ಥ, ಧೃತರಾಷ್ಟ್ರ, ಶಂಖಪಾಲ, ಕಾಲಿಯಾ, ಪಿಂಗಳ ಎಂಬ 12 ನಾಗಗಳ ಉಲ್ಲೇಖ ಪುರಾಣಗಳಲ್ಲಿ ಬರುತ್ತದೆ. ಮಹಾಭಾರತದ ಪ್ರಕಾರ ರಾಜ ಪರೀಕ್ಷಿತನನ್ನು ನಾಗರಾಜ ತಕ್ಷಕ ಕಚ್ಚಿ ಕೊಂದಿದ್ದ. ಇದಕ್ಕೆ ಪ್ರತಿಕಾರವಾಗಿ ಪರೀಕ್ಷಿತನ ಮಗ ಜನಮೇಜಯ ಸರ್ಪಗಳ ಸಂತಾನವನ್ನೇ ನಿರ್ಮೂಲ ಮಾಡಲು ಮಹಾ ಸರ್ಪಯಜ್ಞವನ್ನೇ ನಡೆಸಿದ್ದ. ನಾಗಕುಲವೇ ನಾಶವಾಗುತ್ತದೆ ಎನ್ನುವಾಗ ಆಸ್ತಿಕ ಎಂಬ ಋಷಿ ಯಾಗಶಾಲೆಗೆ ಬಂದು ಈ ಯಜ್ಞವನ್ನು ತಡೆದಿದ್ದ. ಆಸ್ತಿಕ ನಾಗಯಜ್ಞ ನಿಲ್ಲಿಸಿದ ದಿನವನ್ನೇ ನಾಗರ ಪಂಚಮಿಯಾಗಿ ಆಚರಿಸಲಾಗುತ್ತದೆ ಎಂದು ಪ್ರತೀತಿ.
ಅದಕ್ಕಾಗಿಯೇ ಈ ದಿನ ಭಾರತದಂತಹ ದೇಶದಲ್ಲಿ ಹಳ್ಳಿ ಹಳ್ಳಿಗಳಲ್ಲೂ ನಾಗರ ಕಲ್ಲುಗಳು, ನಾಗದೇವರ ಗುಡಿಗಳು, ಶಿವ ಮತ್ತು ವಿಷ್ಣುವಿನ ದೇವಾಲಗಳಲ್ಲೂ ನಾಗದೇವರಿಗಾಗಿ ಗುಡಿಗಳು ಕಾಣುತ್ತೇವೆ. ಅಲ್ಲದೇ ಕೆಲ ದೇವಾಲಯಗಳಲ್ಲಿ ಕಾಲಸರ್ಪ ಬಾಧೆ, ಸರ್ಪದೋಷ ಪರಿಹಾರಕ್ಕಾಗಿ ಪೂಜಾ ವಿಧಿವಿಧಾನಗಳನ್ನೂ ನೆರವೇರಿಸಲಾಗುತ್ತದೆ. ಕರ್ನಾಟಕದಲ್ಲಿ ನಾಗದೈವಾರಾಧನೆ ಹೆಚ್ಚಾಗಿಯೇ ಇದೆ. ಕರ್ನಾಟಕದಲ್ಲಿ ಅನೇಕ ನಾಗ ದೇವಾಲಯಗಳಿವೆ, ಆದರೆ ಕುಕ್ಕೆ ಸುಬ್ರಹ್ಮಣ್ಯ ಮತ್ತು ಮುಕ್ತಿನಾಗ ಕ್ಷೇತ್ರಗಳು ಪ್ರಮುಖವಾಗಿವೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನವು ಸರ್ಪ ದೋಷ ನಿವಾರಣೆಗೆ ಹೆಸರುವಾಸಿಯಾಗಿದೆ ಮತ್ತು ಮುಕ್ತಿನಾಗ ಕ್ಷೇತ್ರವು ನಾಗದೋಷ ಪರಿಹಾರಕ್ಕಾಗಿ ಪ್ರಸಿದ್ಧವಾಗಿದೆ. ಕರ್ನಾಟಕ ಹೊರತುಪಡಿಸಿಯೂ ದೇಶದ ವಿವಿಧ ಭಾಗಗಳಲ್ಲಿ ಜನರಿಂದ ಅಗಾಧ ನಂಬಿಕೆ ಗಳಿಸಿರುವ ದೇವಾಲಯಗಳು ಇವೆ. ಮೊದಲಿಗೆ ಕರ್ನಾಟಕದ ಪವರ್ಫುಲ್ ನಾಗ ದೇವಾಲಯಗಳ ಬಗ್ಗೆ ತಿಳಿಯೋಣ. ಅವುಗಳ ವಿಶೇಷತೆ ಏನೆಂದು ತಿಳಿಯುವ ಕುತೂಹಲ ನಿಮಗಿದ್ದರೆ ಮುಂದೆ ಓದಿ…
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ:
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿರುವ ಈ ದೇವಾಲಯವು ಕುಮಾರ ಪರ್ವತದ ತಪ್ಪಲಿನಲ್ಲಿ, ಕುಮಾರಧಾರಾ ನದಿಯ ದಡದಲ್ಲಿದೆ. ಇಲ್ಲಿ ವಾಸುಕಿ ಮತ್ತು ಶೇಷನಾಗನನ್ನು ಪೂಜಿಸಲಾಗುತ್ತದೆ. ಸರ್ಪ ದೋಷ ನಿವಾರಣೆಗೆ ಈ ದೇವಸ್ಥಾನಕ್ಕೆ ಭೇಟಿ ನೀಡುವುದು ಬಹಳ ಮುಖ್ಯ ಎಂದು ನಂಬಲಾಗಿದೆ.
ಮುಕ್ತಿನಾಗ ಕ್ಷೇತ್ರ:
ಬೆಂಗಳೂರಿನ ಕೆಂಗೇರಿ ಬಳಿಯ ರಾಮೋಹಳ್ಳಿಯಲ್ಲಿದೆ. ಈ ಕ್ಷೇತ್ರವನ್ನು ನವಸುಬ್ರಹ್ಮಣ್ಯ ದೇವಸ್ಥಾನವೆಂದೂ ಕರೆಯುತ್ತಾರೆ. ಇಲ್ಲಿ 16 ಅಡಿ ಎತ್ತರದ ಏಳು ಹೆಡೆಯ ನಾಗಮೂರ್ತಿಯನ್ನು ಕಾಣಬಹುದು. ನಾಗದೋಷ ಪರಿಹಾರಕ್ಕಾಗಿ ಈ ಕ್ಷೇತ್ರಕ್ಕೆ ಭಕ್ತರು ಭೇಟಿ ನೀಡುತ್ತಾರೆ. ಮುಕ್ತಿ ಎಂಬ ಹೆಸರೇ ಸೂಚಿಸುವಂತೆ, ಇಲ್ಲಿ ನಾಗದೋಷಗಳಿಗೆ ಮುಕ್ತಿ ಸಿಗುತ್ತದೆ ಎಂಬ ನಂಬಿಕೆಯಿದೆ.
ಇತರ ನಾಗ ದೇವಾಲಯಗಳು:
ಘಾಟಿ ಸುಬ್ರಹ್ಮಣ್ಯ ಮತ್ತು ನಾಗಲಮಡಿಕೆ ಕೂಡ ಕರ್ನಾಟಕದ ಪ್ರಮುಖ ನಾಗ ದೇವಾಲಯಗಳಾಗಿವೆ. ಈ ಮೂರು ದೇವಾಲಯಗಳು ರಾಜ್ಯದಲ್ಲಿ ತ್ರಿಕೋನವನ್ನು ಸೃಷ್ಟಿಸುತ್ತವೆ. ವಿವಿಧ ಪ್ರದೇಶಗಳ ಭಕ್ತರು ಈ ದೇವಾಲಯಗಳಿಗೆ ಭೇಟಿ ನೀಡುತ್ತಾರೆ. ವಿದುರಾಶ್ವಥದಲ್ಲಿ ನಾಗಾರಾಧನೆಯು ಪ್ರಚಲಿತದಲ್ಲಿದೆ, ಇದು ಕೂಡ ನಾಗದೇವತೆಗೆ ಸಂಬಂಧಿಸಿದ ಸ್ಥಳವಾಗಿದೆ.
ಕಾಶ್ಮೀರದ ಶೇಷನಾಗ ದೇವಾಲಯ
ಕಾಶ್ಮೀರದಲ್ಲಿ ಹಿಂದಿನ ಕಾಲದಲ್ಲಿ 700ಕ್ಕೂ ಹೆಚ್ಚು ನಾಗಾರಾಧನೆಯ ಕೇಂದ್ರಗಳಿದ್ದವು. ಇಂದಿಗೂ ಸಹ ಇಲ್ಲಿನ ಮನ್ಸಾರ್ ಸರೋವರದ ಪರಿಸರದಲ್ಲಿ ಶೇಷನಾಗಿಗಳು ಎಂಬ ಅಲೆಮಾರಿ ಜನರಿದ್ದಾರೆ. ಇವರು ನಾಗಪೂಜಕರು, ಮನ್ಸಾರ್ ಸರೋವರದ ಪೂರ್ವ ತೀರದ ಸಮೀಪದಲ್ಲಿ ಒಂದು ಸುಪ್ರಸಿದ್ಧ ಶೇಷನಾಗ ದೇವಾಲಯ (Sheshnag Temple) ಇದೆ. ಈ ದೇವಾಲಯ 5 ಶತಮಾನಗಳಷ್ಟು ಪುರಾತನ ಎಂದು ಇಲ್ಲಿನ ಜನ ಹೇಳುತ್ತಾರೆ.
ಈ ದೇವಾಲಯ ನೆಲದಿಂದ ಸುಮಾರು 200 ಅಡಿ ಎತ್ತರದಲ್ಲಿದೆ. ಈ ದೇವಾಲಯದಲ್ಲಿ 6 ತಲೆಗಳ ಶೇಷನಾಗನ ವಿಗ್ರಹ ಇದೆ. ಇವನ ಸುತ್ತ ಹಲವಾರು ಚಿಕ್ಕ ನಾಗಗಳಿವೆ. ವಧು-ವರರು ಇಲ್ಲಿ ಪೂಜೆ ಸಲ್ಲಿಸಿದರೇ ಅವರಿಗೆ ನಾಗರಾಜನ ಆಶೀರ್ವಾದ ಸಿಗುತ್ತದೆ, ಸಂತಾನ ಭಾಗ್ಯ ಪ್ರಾಪ್ತಿಯಾಗುತ್ತದೆ ಎಂದು ಇಲ್ಲಿನವರ ನಂಬಿಕೆ. ಹೀಗಾಗಿ ಕಾಶ್ಮೀರದ ದೂರ ದೂರದ ಭಾಗಗಳಿಂದ ನವವಿವಾಹಿತರು ಶೇಷನಾಗನ ದರ್ಶನಕ್ಕಾಗಿ ಇಲ್ಲಿಗೆ ಬರುತ್ತಾರೆ.
ಈ ಸ್ಥಳದ ಇತಿಹಾಸದ ಪ್ರಕಾರ ಮನ್ಸಾರ್ ಸರೋವರವನ್ನು ನಾಗದೇವ ಶೇಷನಾಗ ಸ್ವತಃ ನಿರ್ಮಿಸಿದ್ದ. ವಿಶಾಲ ಮನ್ಸಾರ್ ಕೆರೆಯ ನಡುವೆ ಹಲವಾರು ದ್ವೀಪಗಳಿವೆ. ಇವುಗಳಲ್ಲಿ ಶೇಷನಾಗ ದ್ವೀಪವೂ ಒಂದಾಗಿದೆ. ಪ್ರವಾಸಿಗಳು ಇಲ್ಲಿಗೆ ದೋಣಿಗಳಲ್ಲಿ ಹೋಗಬಹುದು. ಈ ದ್ವೀಪದಲ್ಲಿ 14ನೇ ಶತಮಾನದ ಶೇಷನಾಗದೇವಿಯ ದೇವಾಲಯ ಇದೆ. ಜಮ್ಮು ವಿಮಾನ ನಿಲ್ದಾಣದಿಂದ ಮನ್ಸಾರ್ ಕೆರೆಗೆ 69 ಕಿಮೀ ದೂರವಿದ್ದು, ಉಧಮ್ಪುರದಿಂದ 25 ಕಿಮೀ ದೂರ. ಸಾಂಬಾ ಪಟ್ಟಣದಿಂದ ಇಲ್ಲಿಗೆ ನಡೆದುಕೊಂಡು ಹೋಗಬಹುದು.
ಉಜ್ಜಯಿನಿ ನಾಗಚಂದ್ರೇಶ್ವರ ದೇವಾಲಯ
ಉಜ್ಜಯಿನಿ ಬಾಬಾ ಮಹಾಕಾಲೇಶ್ವರನ ಪವಿತ್ರ ಸ್ಥಾನ. ಶಿವನ 12 ಜ್ಯೋತಿರ್ಲಿಂಗಗಳಲ್ಲಿ ಪ್ರಧಾನಕ್ಷೇತ್ರ ಇದು. ಇಲ್ಲಿರುವ ಮಹಾಕಾಲ ಶಿವಲಿಂಗವನ್ನು ಸ್ವಯಂಭು ಎಂದು ಕರೆಯಲಾಗುತ್ತದೆ. ಉಜ್ಜಯಿನಿಯ ಭವ್ಯ ಮಹಾಕಾಲೇಶ್ವರ ದೇವಾಲಯವನ್ನು ಪರ್ಮಾರ್ ಮನೆತನದ ರಾಜಾ ಭೋಜ 1050ರ ಸುಮಾರಿಗೆ ನಿರ್ಮಿಸಿದ್ದ. ಈ ದೇವಾಲಯದಲ್ಲಿ ಐದು ಅಂತಸ್ತುಗಳಿವೆ. ಎಲ್ಲಕ್ಕಿಂತ ಕೆಳಗೆ ನೆಲಮಾಳಿಗೆ. ಅದರ ಮೇಲಿನ ಅಂತಸ್ತಿನಲ್ಲಿ ಮಹಾಕಾಲೇಶ್ವರ ಲಿಂಗ. ಮಧ್ಯದ ಅಂತಸ್ತಿನಲ್ಲಿರುವುದು ಓಂಕಾರೇಶ್ವರ. 3ನೇ ಮಾಳಿಗೆಯಲ್ಲಿ ನಾಗಚಂದ್ರೇಶ್ವರ (Nagchandreshwar Mandir) ಲಿಂಗವಿದೆ. ಇಲ್ಲಿ 10 ತಲೆಯ ನಾಗನ ಮೇಲೆ ಕುಳಿತಿರುವ ಶಿವನ ವಿಗ್ರಹ ಇದೆ.
ನಾಗನ ಮೇಲೆ ವಿಷ್ಣುವಿನ ಬದಲು ಶಿವನನ್ನು ತೋರಿಸುವ ಏಕಮಾತ್ರ ದೇವಾಲಯ ಇದು. ಈ ಏಕಶಿಲಾ ಮೂರ್ತಿಯಲ್ಲಿ ಶಿವ, ಪಾರ್ವತಿ ಗಣೇಶ, ಭೈರವ ಮತ್ತು ನಂದಿಯನ್ನೂ ಕಾಣಬಹುದು. ಈ ವಿಗ್ರಹವನ್ನು ಶತಮಾನಗಳ ಹಿಂದೆ ನೇಪಾಳದಿಂದ ತರಲಾಗಿತ್ತು ಎನ್ನುತ್ತದೆ ಪುರಾಣ. ದೇವಾಲಯದ ಬಾಗಿಲನ್ನು ವರ್ಷಕ್ಕೆ ಒಮ್ಮೆ ನಾಗರ ಪಂಚಮಿಯ ದಿನ ಮಾತ್ರ ತೆರೆಯಲಾಗುತ್ತದೆ. ಆ ದಿನ ಲಕ್ಷಾಂತರ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ನಾಗಚಂದ್ರೇಶ್ವರ ದೇವಾಲಯದಲ್ಲಿ ಸರ್ಪಶಯನ ಶಿವನನ್ನು ಆರಾಧಿಸುವುದರಿಂದ ಎಲ್ಲ ಸರ್ಪದೋಷಗಳು ನಿವಾರಣೆಯಾಗುತ್ತವೆ ಎಂದು ಭಕ್ತರು ನಂಬಿದ್ದಾರೆ. ಈ ದಿನ ಸ್ವಯಂ ನಾಗರಾಜ ತಕ್ಷಕನೇ ಇಲ್ಲಿಗೆ ಬಂದು ಭಕ್ತರ ಪೂಜೆ ಸ್ವೀಕರಿಸುತ್ತಾನೆ, ನಮ್ಮನ್ನು ಆಶೀರ್ವಧಿಸುತ್ತಾನೆ ಎಂಬುದು ಸಹ ಭಕ್ತರ ನಂಬಿಕೆ.
ಗುಜರಾತ್ನ ಭುಜಂಗ ನಾಗ ದೇವಾಲಯ:
ಗುಜರಾತ್ನ ಕಛ್ ಜಿಲ್ಲೆಯಲ್ಲಿರುವ ಭುಜ್ ಪಟ್ಟಣದ ಹೊರಗೆ ಭುಜಿಯಾ ಡುಂಗರ್ ಎಂಬ ಬೆಟ್ಟ ಇದೆ. ಈ ಬೆಟ್ಟದ ಮೇಲೆ ಒಂದು ಪ್ರಾಚೀನ ಕೋಟೆ ಇದೆ. ಸುಪ್ರಸಿದ್ದ ಭುಜಂಗ ನಾಗ ದೇವಾಲಯ (Bhujang Naga Temple) ಇರುವುದು ಇಲ್ಲಿಯೇ. ಪುರಾಣದ ಪ್ರಕಾರ ಹಿಂದೆ ಕಛ್ ಪ್ರಾಂತ್ಯವನ್ನು ದೈತ್ಯವಂಶದ ರಾಕ್ಷಸರು ಆಳುತ್ತಿದ್ದರು. ಕಾಠೇವಾಡದಿಂದ ಬಂದಿದ್ದ ಭುಜಂಗ ನಾಗ ಎಂಬ ರಾಜ ಜನರನ್ನು ರಾಕ್ಷಸರ ಆಳ್ವಿಕೆಯಿಂದ ಬಿಡುಗಡೆ ಮಾಡಿ ತನ್ನ ರಾಜ್ಯ ಸ್ಥಾಪಿಸಿದ್ದ.
ಭುಜಂಗನನ್ನು ಜನರು ನಾಗರಾಜ ಎಂದು ಪೂಜಿಸಲು ಆರಂಭಿಸಿದರು. ಈತನನ್ನು ಶೇಷನಾಗನ ಸಹೋದರ ಎಂದು ನಂಬಲಾಯಿತು. ಅವನ ಪೂಜೆಗಾಗಿ ಭುಜಂಗ ದೇವಾಲಯವನ್ನು ನಿರ್ಮಿಸಲಾಗಿತ್ತು. 1715ರಲ್ಲಿ ಜಡೇಜಾ ಮನೆತನದ ರಾಜರು ಇಲ್ಲಿ ಭುಜಿಯಾ ಕೋಟೆಯನ್ನು ನಿರ್ಮಿಸಿದ್ದರು. ಈ ಕೋಟೆಯ ನಡುವೆ ಭುಜಂಗ ನಾಗ ದೇವಾಲಯ ಇದೆ. ನಾಗಾ ಸಾಧುಗಳು ಈ ದೇವಾಲಯದಲ್ಲಿ ನಾಗದೇವತೆಯನ್ನು ಆರಾಧಿಸುತ್ತಿದ್ದರು. ದೇಶಾಲ್ಜೀ ಎಂಬ ರಾಜ 1723ರಲ್ಲಿ ಈ ದೇವಾಲಯದ ಮೇಲೆ ಮಂಟಪ ನಿರ್ಮಿಸಿದ್ದ. ಅಂದಿನಿಂದ ಇಲ್ಲಿ ಶ್ರಾವಣ ಮಾಸದಲ್ಲಿ ನಾಗರಪಂಚಮಿಯ ಉತ್ಸವ ಸಂಭ್ರಮದಿಂದ ಆಚರಿಸಲಾಗುತ್ತದೆ.
ಶ್ರಾವಣ ಬಂತು ಎಂದರೆ ಸಾಕು ಒಂದಾದ ಮೇಲೆ ಒಂದರಂತೆ ಹಬ್ಬಗಳು ಬರುತ್ತಲೇ ಇರುತ್ತವೆ. ಶ್ರಾವಣ ಆರಂಭವಾಗುತ್ತಲೇ ಪ್ರಾರಂಭವಾಗುವ ಹಬ್ಬ ನಾಗರ ಪಂಚಮಿ. ಉತ್ತರ ಕರ್ನಾಟಕದಲ್ಲಿ ವಿಜೃಂಭಣೆಯಿಂದ ಆಚರಿಸುವ ಹಬ್ಬಗಳಲ್ಲಿ ನಾಗರಪಂಚಮಿಯೂ ಒಂದು. ಎರಡು ದಿನಗಳ ಕಾಲ ನಾಗನಿಗೆ ಹಾಲು ಎರೆಯುವ ಮೂಲಕ ಈ ಹಬ್ಬವನ್ನು ಆಚರಿಸಲಾಗುತ್ತದೆ.
ಹಬ್ಬದ ಸಂಭ್ರಮ ಶುರುವಾಗುವುದೇ ಸಿಹಿ ತಿಂಡಿಗಳು, ಇನ್ನಿತರ ಖಾದ್ಯಗಳನ್ನು ತಯಾರಿಸುವ ಮೂಲಕ. ನಾಗರ ಪಂಚಮಿ ಇನ್ನೇನು ಸಮೀಪಿಸುತ್ತಿದೆ ಎನ್ನುವಾಗಲೇ ಚಕ್ಕಲಿ, ಉಂಡೆ, ಕಡುಬು, ಎಳ್ಳುಂಡೆ, ಬೇಸನ್ ಲಾಡು, ರವೆ ಉಂಡೆ, ಶೇಂಗಾ ಉಂಡೆ, ಹೋಳಿಗೆ, ಚುರುಮುರಿ ಸೇರಿ ಇನ್ನಿತರ ವಿವಿಧ ರೀತಿಯ ತಿನಿಸುಗಳ ಸುಗಂಧ ಮನೆ ತುಂಬೆಲ್ಲ ಹರಡಿಕೊಳ್ಳುತ್ತದೆ. ಈ ಸುಗಂಧದಿಂದಲೇ ಹೇಳಿಬಿಡಬಹುದು ನಾಗರ ಪಂಚಮಿ ಶುರುವಾಗಿದೆ ಅಂತ. ಇವುಗಳು ಕೇವಲ ಹಬ್ಬಕ್ಕೆ ಮಾತ್ರವಲ್ಲದೆ ಆರೋಗ್ಯಕ್ಕೂ ಒಳ್ಳೆಯದನ್ನು ಉಂಟು ಮಾಡುತ್ತವೆ.
ಇನ್ನು ಉತ್ತರ ಕರ್ನಾಟಕದಲ್ಲಿ ನಾಗರ ಪಂಚಮಿಯನ್ನು ಎರಡು ದಿನಗಳ ಕಾಲ ಆಚರಿಸಲಾಗುತ್ತದೆ. ಒಂದು ದಿನ ಮನೆಯೊಳಗೆ ನಾಗಪ್ಪನ ಮೂರ್ತಿಗೆ ಹಾಲೆರೆದರೆ, ಎರಡನೇ ದಿನ ಹೊರಗಡೆ ನಾಗಪ್ಪನ ದೇಗುಲಕ್ಕೆ ತೆರಳಿ ಹಾಲಿರೆಯಲಾಗುತ್ತದೆ. ಮನೆಯೊಳಗೆ ಹಾಗೂ ದೇವಾಲಯಕ್ಕೆ ತೆರಳಿ ಹಾಲೆರೆದಾಗ ಎರಡು ಬಾರಿ ಅಭಿಷೇಕ ಮಾಡಲಾಗುತ್ತದೆ. ಮೊದಲಿಗೆ ಒಣ ಕೊಬ್ಬರಿಯಲ್ಲಿ ಹಾಲು ಹಾಕಿ, ಅದಕ್ಕೆ ತುಪ್ಪ ಸೇರಿಸಿ ಹಾಲೆರೆಯಲಾಗುತ್ತದೆ. ಎರಡನೇ ಬಾರಿಗೆ ನೀರಿಗೆ ತುಪ್ಪ ಬೆರೆಸಿ ಎರೆಯುತ್ತಾರೆ. ಇದೇ ರೀತಿ ದೇವಾಲಯಕ್ಕೆ ಹೋದಾಗಲೂ ಮಾಡುತ್ತಾರೆ.
ನಾಗಪ್ಪನಿಗೆ ಎಳ್ಳು , ಎಳ್ಳುಂಡೆ, ತಂಬಿಟ್ಟು, ಇನ್ನಿತರ ಖಾದ್ಯಗಳನ್ನು ಇರಿಸಿ ನೈವೇದ್ಯ ಮಾಡಲಾಗುತ್ತದೆ. ಅರಿಶಿಣ ದಾರವನ್ನು ನಾಗಪ್ಪನಿಗೆ ಹಾಕಿ, ಬಳಿಕ ಹಾಲೆರೆಯುತ್ತಾರೆ. ಇದೇ ರೀತಿ ದೇವಾಲಯಕ್ಕೆ ಹೋದಾಗಲೂ ಮಾಡುತ್ತಾರೆ. ಹಾಲೆರೆದ ಬಳಿಕ ನಾಗಪ್ಪನಿಗೆ ಹಾಕಿದ ದಾರವನ್ನ ತೆಗೆದು ಮನೆಯಲ್ಲಿರುವವರು ತಮ್ಮ ಕೊರಳಿಗೆ ಅಥವಾ ಕೈಗೆ ಕಟ್ಟಿಕೊಳ್ಳುವ ರೂಢಿ ಇದೆ.
ಜೋಕಾಲಿಯ ಸಂಭ್ರಮ:
ನಾಗರ ಪಂಚಮಿ ಬಂತೆಂದರೆ ಸಾಕು ಎಲ್ಲರ ಮನೆಯದುರುಗಡೆ, ಒಳಗಡೆ ಜೋಕಾಲಿ ಕಾಣುವುದು ಸಾಮಾನ್ಯ. ಇದು ಜೋಕಾಲಿಯ ಪಂಚಮಿ ಎಂದರೆ ಹೇಳಬಹುದು. ಜೀವನವು ಜೋಕಾಲಿ ಎಂಬಂತೆ ಏರಿಳಿತಗಳನ್ನು ಹೊಂದಿರುತ್ತದೆ ಎಂಬುದು ಇದರ ಸಂಕೇತವಾಗಿದೆ. ಇನ್ನು ಅಣ್ಣ ತಂಗಿಯ ಮನೆಗೆ ಹೋಗುವುದು. ಹುತ್ತಿಗೆ ಹಾಲೆರೆದಾಗ ಹುತ್ತದ ಮಣ್ಣನ್ನು ತಂದು ಹೊಕ್ಕಳು ಅಥವಾ ಬೆನ್ನಿಗೆ ಹಚ್ಚಿದಾಗ ಒಳ್ಳೆಯದಾಗುತ್ತದೆ ಎಂಬ ನಂಬಿಕೆಯು ಇದೆ.
ಉತ್ತರ ಕರ್ನಾಟಕದಲ್ಲಿ ಕೊಬ್ಬರಿ ಕುಬುಸ:
ಉತ್ತರ ಕರ್ನಾಟಕದಲ್ಲಿ ಆಷಾಢ ಮುಗಿದು ಶ್ರಾವಣ ಬಂತೆಂದರೆ ಸಾಕು ಹಲವು ಸಂಪ್ರದಾಯಗಳನ್ನು ಪಾಲಿಸಿಕೊಂಡು ಬರುತ್ತಿದ್ದಾರೆ. ಆ ಪೈಕಿ ಕೊಬ್ಬರಿ ಕುಬುಸ ಕೊಡುವುದು ಒಂದು ಸಂಪ್ರದಾಯ. ಅಣ್ಣ ತಂಗಿಯ ಮನೆಗೆ ಹೋಗಿ ತವರು ಮನೆಯಿಂದ ತಂದ ಕೊಬ್ಬರಿ ಕುಬುಸವನ್ನು ನೀಡುತ್ತಾರೆ. ಇದರಲ್ಲಿ ಸಿಹಿ ತಿಂಡಿಗಳು ಸೇರಿದಂತೆ ಹಬ್ಬಕ್ಕೆ ಮಾಡಿದ ಎಲ್ಲಾ ಖಾದ್ಯಗಳನ್ನು ಕೊಟ್ಟಿರುತ್ತಾರೆ. ಅದರ ಜೊತೆಗೆ ಒಂದು ಕುಪ್ಪಸವನ್ನು ಕೊಡುತ್ತಾರೆ. ಅದರಲ್ಲಿ ಒಣ ಕೊಬ್ಬರಿಯನ್ನು ಇಟ್ಟಿರುತ್ತಾರೆ. ಹೀಗಾಗಿ ಇದನ್ನು ಕೊಬ್ಬರಿ ಕುಬುಸ ಎಂದು ಕರೆಯಲಾಗುತ್ತದೆ.
ಶ್ರಾವಣ ಮಾಸದಲ್ಲಿ ನಾವು ಸ್ವಾಗತಿಸುವ ಮೊದಲ ಹಬ್ಬ ನಾಗರ ಪಂಚಮಿ (Naga Panchami). ನಾಗ ಪಂಚಮಿ, ಹೆಸರೇ ಸೂಚಿಸುವಂತೆ ಶ್ರಾವಣ ಶುಕ್ಲ ಪಂಚಮಿಯಂದು ಆಚರಿಸಲಾಗುತ್ತದೆ. ಇದು ಮುಂಬರುವ ಎಲ್ಲಾ ಹಬ್ಬಗಳಿಗೂ ಆದಿಯಾಗಿದೆ. ಮಹಿಳೆಯರು ಉಪವಾಸ ಆಚರಿಸುತ್ತಾರೆ, ಹೊಸ ಬಟ್ಟೆಗಳನ್ನು ಧರಿಸುತ್ತಾರೆ, ಆಭರಣಗಳನ್ನು ಧರಿಸುತ್ತಾರೆ. ತಮ್ಮ ಸಹೋದರನ ಆರೋಗ್ಯ ಮತ್ತು ಯಶಸ್ಸಿಗಾಗಿ ನಾಗದೇವತೆಗೆ ಪೂಜೆ ಸಲ್ಲಿಸುತ್ತಾರೆ. ನಾಗದೋಷ ನಿವಾರಣೆ, ನಾಗನಿಂದ ರಕ್ಷಣೆಗೆ ಪ್ರಾರ್ಥಿಸಿ ಆಚರಿಸುವ ಹಬ್ಬ ಇದು ಎಂದು ನಂಬಲಾಗಿದೆ.
ಭಿನ್ನ ಸಂಸ್ಕೃತಿ, ಆಚರಣೆಗಳಿಗೆ ನೆಲೆಯಾಗಿರುವ ದೇಶ ಭಾರತ. ದೇಶಾದ್ಯಂತ ಭಿನ್ನ ರೀತಿಯಲ್ಲೇ ನಾಗರ ಪಂಚಮಿ ಹಬ್ಬ ಆಚರಣೆ ಮಾಡಲಾಗುತ್ತದೆ. ಮಧ್ಯ ಭಾರತ, ಉತ್ತರ ಮತ್ತು ವಾಯುವ್ಯ ಭಾರತ, ಪಶ್ಚಿಮ ಭಾರತ, ಪೂರ್ವ ಮತ್ತು ಈಶಾನ್ಯ ಭಾರತ, ದಕ್ಷಿಣ ಭಾರತದಲ್ಲಿ (Naga Panchami In India) ವಿಶಿಷ್ಟ ಸಾಂಸ್ಕೃತಿಕ ಚೌಕಟ್ಟಿನಲ್ಲಿ ಹಬ್ಬ ಆಚರಿಸಲಾಗುತ್ತದೆ. ಹಿಂದೆ ಅಖಂಡ ಭಾರತದ ಭಾಗವೇ ಆಗಿದ್ದ ನೇಪಾಳ, ಪಾಕಿಸ್ತಾನದಲ್ಲಿ ಈಗಲೂ ನಾಗರ ಪಂಚಮಿ (Naga Panchami In Pakistan) ಆಚರಿಸುವುದುಂಟು. ಈ ಭಾಗಗಳಲ್ಲಿ ವಿಶಿಷ್ಟ ರೀತಿಯಲ್ಲಿ ನಾಗಾರಾಧನೆ ಮಾಡುವ ಸಂಪ್ರದಾಯವಿದೆ.
ಮಧ್ಯಭಾರತ:
ಮಹಾರಾಷ್ಟ್ರದ ನಾಗ್ಪುರದಲ್ಲಿ ಈ ಆಚರಣೆಗೆ ಹೆಚ್ಚು ಮಹತ್ವವಿದೆ. ಹೆಸರೇ ಸೂಚಿಸುವಂತೆ ನಾಗಪುರವು ‘ನಾಗ’ ಜನರ ತಾಯ್ನಾಡು. ಕಾಲಾನಂತರದಲ್ಲಿ ಅವರು ಬೌದ್ಧ ಧರ್ಮವನ್ನು ಸ್ವೀಕರಿಸಿದರು. ಮಹಲ್ನಲ್ಲಿರುವ ನಾಗೋಬಾ ದೇವಸ್ತರವಾಡುಲ್ಲಿ ನಾಗ ಪಂಚಮಿ ದಿನದಂದು ಪೂಜೆ ಸಲ್ಲಿಸಲಾಗುತ್ತದೆ. ‘ನಾಗದ್ವಾರ ಯಾತ್ರೆ’ ಕೂಡ ಮಾಡಲಾಗುತ್ತದೆ. ಯಾತ್ರಗಾಗಿ ದೊಡ್ಡ ದೊಡ್ಡ ಕಡಾಯಿಯಲ್ಲಿ ಬೇಯಿಸುತ್ತಾರೆ.
ವರ್ಷದಲ್ಲಿ ಒಂದು ದಿನ ಮಾತ್ರೆ ದೇಗುಲ ಓಪನ್
ಮಹಾಕಾಳೇಶ್ವರ ಜೋತಿರ್ಲಿಂಗ ದೇವಾಲಯದ ಮೂರನೇ ಮಹಡಿಯಲ್ಲಿ ನಾಗ ಚಂದ್ರೇಶ್ವರ ಉಜ್ಜಯಿನಿ ಎಂಬ ಉಪದೇವಾಲಯವಿದೆ. ಇದು ವರ್ಷದಲ್ಲಿ ಒಂದೇ ದಿನ, ನಾಗಪಂಚಮಿಯಂದು ಮಾತ್ರ ತೆರೆದಿರುತ್ತದೆ. ವರ್ಷದ ಉಳಿದ ದಿನಗಳಲ್ಲಿ ಮುಚ್ಚಿರುತ್ತದೆ. 10 ಹೆಡೆಯ ಹಾವಿನ ಮೇಲೆ ಶಿವ ಮತ್ತು ಪಾರ್ವತಿ ಕುಳಿತಿರುವ ನಾಗಚಂದ್ರೇಶ್ವರ ಮೂರ್ತಿ (Nagchandreshwar Statue) ಇಲ್ಲಿದೆ. ಸುತ್ತ ನಂದಿ ಗಣೇಶ, ಇತರೆ ಮೂರ್ತಿಗಳು ಇದರ ಸುತ್ತ ಇವೆ. ನಾಗ ಪಂಚಮಿಯಂದು ವಿಶೇಷ ಪೂಜೆ ಸಲ್ಲಿಸುವುದರಿಂದ ನಾಗದೋಷ, ಸರ್ಪದೋಷ ಸೇರಿ ಯಾವುದೇ ತೊಂದರೆಗಳಿಂದ ಭಕ್ತ ಮುಕ್ತಿ ಹೊಂದಬಹುದು ಎಂಬ ನಂಬಿಕೆಯಿದೆ.
ಉತ್ತರ ಮತ್ತು ವಾಯುವ್ಯ ಭಾರತ
ಉತ್ತರ ಭಾರತದಾದ್ಯಂತ ನಾಗರ ಪಂಚಮಿಯನ್ನು ಆಚರಿಸಲಾಗುತ್ತದೆ. ಕಾಶ್ಮೀರದಲ್ಲಿ ಐತಿಹಾಸಿಕ ಕಾಲದಿಂದಲೂ ಹಿಂದೂಗಳು ಹಾವುಗಳನ್ನು ಪೂಜಿಸುತ್ತಿದ್ದಾರೆ. ವಾಯುವ್ಯ ಭಾರತದಲ್ಲಿ ಬನಾರಸ್ನಂತಹ ನಗರಗಳಲ್ಲಿ ನಾಗ ಪಂಚಮಿ ಆಚರಣೆಯ ಭಾಗವಾಗಿ ಅಖಾರಾಗಳನ್ನು (ಕುಸ್ತಿ ಅಖಾಡ) ಅಲಂಕರಿಸುತ್ತಾರೆ. ಅಖಾರಾಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲಾಗುತ್ತದೆ. ಹಾವುಗಳ ಚಿತ್ರಗಳಿಂದ ಗೋಡೆಗಳನ್ನು ಚಿತ್ರಿಸಲಾಗುತ್ತದೆ. ಹಾವುಗಳು ಹಾಲು ಕುಡಿಯುವುದನ್ನು ತೋರಿಸುವ ಹಾವಿನ ಚಿತ್ರಗಳಿಂದ ಅಖಾಡಗಳನ್ನು ಅಲಂಕರಿಸಲಾಗುತ್ತದೆ.
ವಾರಣಾಸಿಯ ನರಸಿಂಗ್ಗಢ್ ಅಖಾರಾದಲ್ಲಿ ನಾಗ ರಾಜನಿಗೆ (ನಾಗರ ರಾಜ) ಮೀಸಲಾಗಿರುವ ವಿಶೇಷ ದೇವಾಲಯವಿದೆ. ಅಲ್ಲಿ ಹಾವಿನ ಚಿತ್ರದ ಮೇಲೆ ಒಂದು ಬಟ್ಟಲನ್ನು ತೂಗುಹಾಕಲಾಗುತ್ತದೆ. ಅದರಲ್ಲಿ ಹಾಲನ್ನು ಸುರಿಯಲಾಗುತ್ತದೆ. ಹಾಲು ಹಾವಿನ ದೇವರ ಮೇಲೆ ನೈವೇದ್ಯದ ರೂಪದಲ್ಲಿ ಹರಿಯುತ್ತದೆ. ನಾಗರ ಪಂಚಮಿಯಂದು ಹಾವಾಡಿಗರು ಪಟ್ಟಣಗಳು ಮತ್ತು ಹಳ್ಳಿಗಳಲ್ಲಿ ಎಲ್ಲೆಡೆ ಹಾವುಗಳನ್ನು ತಮ್ಮ ಬುಟ್ಟಿಗಳಲ್ಲಿ ತಂದು ಪ್ರದರ್ಶಿಸುತ್ತಾರೆ. ಇದನ್ನು ವೀಕ್ಷಿಸಲು ಜನರು ಸೇರುತ್ತಾರೆ. ಈ ಸಂದರ್ಭದಲ್ಲಿ ಬುಟ್ಟಿಯಲ್ಲಿರುವ ಹಾವುಗಳನ್ನೂ ಪೂಜಿಸಲಾಗುತ್ತದೆ.
ಪಂಜಾಬ್ನಲ್ಲಿ ಈ ಹಬ್ಬವನ್ನು ಸೆಪ್ಟೆಂಬರ್, ಅಕ್ಟೋಬರ್ ತಿಂಗಳುಗಳಲ್ಲಿ ಮತ್ತು ವಿಭಿನ್ನ ಸ್ವರೂಪದಲ್ಲಿ ಆಚರಿಸಲಾಗುತ್ತದೆ. ಇದನ್ನು ಗುಗಾ ನೌವಮಿ ಎಂದು ಕರೆಯಲಾಗುತ್ತದೆ. ಈ ಸಂದರ್ಭದಲ್ಲಿ ಹಿಟ್ಟಿನಿಂದ ಹಾವಿನ ಮೂರ್ತಿ ತಯಾರಿಸಲಾಗುತ್ತದೆ. ಅದನ್ನು ಒಂದು ಬುಟ್ಟಿಯಲ್ಲಿಟ್ಟು ಊರಲ್ಲೆಲ್ಲ ಮೆರವಣಿಗೆ ಮಾಡಲಾಗುತ್ತದೆ. ಜನರು ಹಿಟ್ಟು ಮತ್ತು ಬೆಣ್ಣೆಯನ್ನು ಅದಕ್ಕೆ ಅರ್ಪಿಸುತ್ತಾರೆ. ಮೆರವಣಿಗೆ ಬಳಿಕ ಅದನ್ನು ಹೂಳಲಾಗುತ್ತದೆ. ಮಹಿಳೆಯರು ಒಂಬತ್ತು ದಿನಗಳ ಕಾಲ ಅಲ್ಲಿ ಪೂಜೆ ಸಲ್ಲಿಸುತ್ತಾರೆ. ಜೊತೆಗೆ ಮೊಸರು ನೈವೇದ್ಯ ನೀಡುತ್ತಾರೆ.
ಪಶ್ಚಿಮ ಭಾರತ
ಪಶ್ಚಿಮ ಭಾರತದಲ್ಲಿ ನಾಗ ಪಂಚಮಿಯನ್ನು ಕೇತರ್ಪಾಲ್ ಅಥವಾ ಕ್ಷೇತ್ರಪಾಲ್ ಎಂದು ಕರೆಯಲಾಗುತ್ತದೆ. ಕಚ್ ಪ್ರದೇಶದಲ್ಲಿ (ಗುಜರಾತ್) ಭುಜಿಯಾ ಎಂಬ ಕೋಟೆಯಲ್ಲಿ ನಾಗದೇವರ ದೇವಾಲಯವಿದೆ. ಇಲ್ಲಿ ನಾಗದೇವರಿಗೆ ಪೂಜೆ ಸಲ್ಲಿಸಲಾಗುತ್ತದೆ. ಪ್ರತಿ ವರ್ಷ ನಾಗ ಪಂಚಮಿಯಂದು ದೇವಸ್ಥಾನದ ಆವರಣದಲ್ಲಿ ಜಾತ್ರೆ ನಡೆಯುತ್ತದೆ. ಸಿಂಧಿ ಸಮುದಾಯದಲ್ಲಿ ನಾಗ ಪಂಚಮಿಯನ್ನು ಗೊಗ್ರೋ ಗೌರವಾರ್ಥವಾಗಿ ಆಚರಿಸಲಾಗುತ್ತದೆ.
ಪೂರ್ವ ಮತ್ತು ಈಶಾನ್ಯ ಭಾರತ
ಭಾರತದ ಪೂರ್ವ ಮತ್ತು ಈಶಾನ್ಯ ರಾಜ್ಯಗಳಾದ ಪಶ್ಚಿಮ ಬಂಗಾಳ, ಜಾರ್ಖಂಡ್, ಒರಿಸ್ಸಾ ಮತ್ತು ಅಸ್ಸಾಂನಲ್ಲಿ ದೇವಿಯನ್ನು ಮಾನಸ ಎಂದು ಪೂಜಿಸಲಾಗುತ್ತದೆ. ಹಿಂದೂ ಪುರಾಣಗಳ ಪ್ರಕಾರ, ಮಾನಸ ನಾಗದೇವತೆಯಾಗಿದ್ದು, ಇದನ್ನು ಜರತ್ಕಾರು ಎಂದೂ ಕರೆಯುತ್ತಾರೆ. ಬ್ರಾಹ್ಮಣ ಋಷಿಯ ಪತ್ನಿ ಜರತ್ಕಾರು ಎಂದೂ ಕರೆಯುತ್ತಾರೆ. ಈ ಸಂದರ್ಭದಲ್ಲಿ ಮಾನಸ ದೇವಿಯ ಪ್ರತೀಕವಾದ ಮಾನಸ ಸೊ ಸೇಲ್ ಗಿಡದ (ಯೂಫೋರ್ಬಿಯಾ ಲಿಂಗುಲಾರಮ್) ರೆಂಬೆಯನ್ನು ನೆಲದ ಮೇಲೆ ಪ್ರತಿಷ್ಠಾಪಿಸಿ ಪೂಜಿಸಲಾಗುತ್ತದೆ. ದೇಶದ ಇತರ ಭಾಗಗಳಲ್ಲಿ ಶ್ರಾವಣ ಮಾಸದಲ್ಲಿ ಮಾತ್ರವಲ್ಲದೆ, ಭಾದ್ರ ಮಾಸದಲ್ಲಿಯೂ ಸಹ ಹಬ್ಬವನ್ನು ಮನೆಗಳಲ್ಲಿ ಆಚರಿಸಲಾಗುತ್ತದೆ.
ದಕ್ಷಿಣ ಭಾರತ
ನಾಗರ ಪಂಚಮಿ ಹಬ್ಬಕ್ಕೆ ದಕ್ಷಿಣ ಭಾರತದಲ್ಲಿ ವಿಶೇಷವಾದ ಸ್ಥಾನವಿದೆ. ಅದರಲ್ಲೂ ದಕ್ಷಿಣ ಕನ್ನಡದಲ್ಲಿ ಈ ಹಬ್ಬಕ್ಕೆ ಹೆಚ್ಚು ಪ್ರಾಮುಖ್ಯತೆ ಇದೆ. ಸುಪ್ರಿಸಿದ್ಧ ಸುಬ್ರಹ್ಮಣ್ಯ ದೇವಸ್ಥಾನ ಹಾಗೂ ಕರಾವಳಿ-ಮಲೆನಾಡಿನ ಭಾಗಗಳಲ್ಲಿ ನಾಗನಿಗೆ ಇರುವ ಪ್ರಮುಖ ಸ್ಥಾನ. ತುಳುನಾಡಿನಲ್ಲಿ ನಾಗರ ಪಂಚಮಿಯಂದು ಎಲ್ಲ ಸೇರಿ ಕುಟುಂಬದ ನಾಗಬನಕ್ಕೆ ಹೋಗುವುದು ಸಂಪ್ರದಾಯ. ಬೆಲ್ಲ-ಕಾಯಿ ತುರಿಯಿಂದ ತಯಾರಿಸುವ ಅರಿಶಿನ ಎಲೆಯ ಗಟ್ಟಿಯನ್ನು (ಕಡುಬು) ಮಾಡಿ ದೇವರಿಗೆ ನೈವೇದ್ಯ ಮಾಡಿ ಮನೆಮಂದಿ ತಿನ್ನುವುದು ಪದ್ಧತಿ. ಉತ್ತರ ಕರ್ನಾಟಕ ಕಡೆ ಇದೊಂದು ಸಾಂಸ್ಕೃತಿಕ ಹಬ್ಬ. ಸಹೋದರ ಸಹೋದರಿಯರು ಒಂದೆಡೆ ಸೇರಿ ಪ್ರೀತಿ, ವಾತ್ಸಲ್ಯದಿಂದ ಸಹೋದರರನ್ನು ಹಾರೈಸುವುದು, ಆಶೀರ್ವಾದ ಪಡೆಯುವುದು ನಡೆಯುತ್ತದೆ. ಮನೆಯ ಹೆಣ್ಮಕ್ಕಳಿಗೆ ಚಕ್ಕುಲಿ, ಚೂಡ, ಅರಳು, ಉಂಡೆ ಎಲ್ಲವನ್ನೂ ಕೊಬ್ಬರಿ ಜೊತೆಗಿಟ್ಟು ಕುಪ್ಪುಸದ ಕಣದೊಂದಿಗೆ ಬಾಗೀನ ನೀಡಲಾಗುತ್ತದೆ.
ಹಳೇ ಮೈಸೂರು ಭಾಗದಲ್ಲಿ ಇದು ಅಣ್ಣ-ತಮ್ಮಂದಿರ ಹಬ್ಬ ಎಂದೇ ಪ್ರಸಿದ್ಧಿ ಪಡೆದಿದೆ. ಸಹೋದರರ ಒಳಿತನ್ನು ಕೋರಿ ಸಹೋದರಿಯರು ಅವರಿಗೆ ಬೆನ್ನುಪೂಜೆ ಮಾಡುವುದು ಈ ಹಬ್ಬದ ವಿಶೇಷ. ಪೂಜೆಯ ಭಾಗವಾಗಿ ನಾಗರ ಕಲ್ಲುಗಳಿಗೆ ಹಾಗೂ ಹುತ್ತಕ್ಕೆ ಎಳನೀರು, ಹಾಲಿನಿಂದ ಅಭಿಷೇಕ (ತನಿ ಎರೆಯುವುದು) ಮಾಡಲಾಗುತ್ತದೆ. ಉತ್ತರ ಕನ್ನಡದಲ್ಲಿ ನಾಗನಿಗೆ ಉಪ್ಪು ಹಾಕದ ಸಪ್ಪೆ ಅಕ್ಕಿರೊಟ್ಟಿಯ ನೈವೇದ್ಯ ಹಾಗೂ ಕ್ಷೀರಾಭಿಷೇಕ ಮಾಡಲಾಗುತ್ತದೆ.
ಕೇರಳದಲ್ಲಿ ಈಳವರು ಮತ್ತು ನಾಯರ್ಗಳು ಸರ್ಪ ಆರಾಧಕರು. ಮನೆಯ ನೈರುತ್ಯ ಮೂಲೆಯಲ್ಲಿ ನಾಗದೇವತೆಗಾಗಿ ಒಂದು ದೇವರ ಕೋಣೆ ಮಾಡಿರುತ್ತಾರೆ. ನಾಗ ಪಂಚಮಿ ಹಿಂದಿನ ದಿನ ಮಹಿಳೆಯರು ಉಪವಾಸ ಮಾಡುತ್ತಾರೆ. ನಾಗ ಪಂಚಮಿ ದಿನ ಮುಂಜಾನೆ ಸ್ನಾನ ಮಾಡಿ ತರವಾಡು ಸರ್ಪ ಕಾವುನಲ್ಲಿ ಪ್ರಾರ್ಥಿಸುತ್ತಾರೆ. ತೀರ್ಥಂ ಹಾಲನ್ನು ಮನೆಗೆ ತೆಗೆದುಕೊಂಡು ಹೋಗುತ್ತಾರೆ. ಚೆಂಬರತಿ (ದಾಸವಾಳ) ಹೂವನ್ನು ಹಾಲಿನಲ್ಲಿ ಅದ್ದಿ ಸಹೋದರನ ಬೆನ್ನಿನ ಮೇಲೆ ಚಿಮುಕಿಸಿ ನಂತರ ಆರತಿ ಮಾಡುತ್ತಾರೆ. ಅರಿಶಿನದಲ್ಲಿ ಅದ್ದಿದ ದಾರವನ್ನು ಸಹೋದರನ ಬಲ ಮಣಿಕಟ್ಟಿನ ಮೇಲೆ ಕಟ್ಟಲಾಗುತ್ತದೆ. ಕೊನೆಗೆ ಹಬ್ಬದೂಟ ನೀಡುತ್ತಾರೆ.
ಉತ್ತರ ಕರ್ನಾಟಕದಲ್ಲಿ ವಿಜೃಂಭಣೆಯಿಂದ ಆಚರಿಸುವ ಹಬ್ಬಗಳಲ್ಲಿ ನಾಗರ ಪಂಚಮಿಯೂ ಒಂದು. ಶ್ರಾವಣದ ಜೊತೆಗೆ ನಾಗರಪಂಚಮಿ ಬರುವುದರಿಂದ ಅದರ ಕಳೆ ಇನ್ನಷ್ಟು ಹೆಚ್ಚುತ್ತದೆ.
ಉತ್ತರ ಕರ್ನಾಟಕದ ಜಿಲ್ಲೆಗಳಾದ ಬಾಗಲಕೋಟೆ, ವಿಜಯಪುರ, ಬೆಳಗಾವಿ, ಬೀದರ್, ಕಲಬುರಗಿ ಸೇರಿದಂತೆ ಇನ್ನಿತರ ಜಿಲ್ಲೆಗಳಲ್ಲಿ ನಾಗರ ಪಂಚಮಿಯಂದು ಬೇಯಿಸಿದ ಹೂರಣದ ಕಡುಬು ಮಾಡುವುದು ವಿಶೇಷ. ಇದನ್ನು ದೇವರಿಗೆ ನೈವೇದ್ಯವಾಗಿಯೂ ಅರ್ಪಿಸುತ್ತಾರೆ.
ಬೇಕಾಗುವ ಪದಾರ್ಥಗಳು:
ಗೋಧಿ ಹಿಟ್ಟು
ಕಡಲೆ ಬೆಳೆ
ಬೆಲ್ಲ
ಮೆಕ್ಕೆ ಜೋಳದ ಎಲೆ
ಉಪ್ಪು (ರುಚಿಗೆ ತಕ್ಕಷ್ಟು)
ಮಾಡುವ ವಿಧಾನ:
ಮೊದಲಿಗೆ ಕಡಲೆಬೇಳೆಯನ್ನು ಚೆನ್ನಾಗಿ ತೊಳೆದು ಮೆತ್ತಗೆ ಆಗುವವರೆಗೂ ಬೇಯಿಸಿಕೊಳ್ಳಬೇಕು. ಬಳಿಕ ಅದರ ರುಚಿಗನುಸಾರವಾಗಿ ಬೆಲ್ಲವನ್ನು ಹಾಕಿಕೊಳ್ಳಬೇಕು. ನಂತರ ಇನ್ನೊಂದು ಪಾತ್ರೆಯಲ್ಲಿ ನೀರು ಕುದಿಯಲು ಇಡಬೇಕು. ಅದರ ಮೇಲೆ ಸ್ಟೀಲ್ ರಂಧ್ರದ ಜರಡಿಯನ್ನು ಇಟ್ಟುಕೊಂಡು ಅದಕ್ಕೆ ಮೆಕ್ಕೆಜೋಳದ ಎಲೆಯನ್ನು ಹಾಕಿಕೊಳ್ಳಬೇಕು.
ಬಳಿಕ ಕಡುಬು ಮಾಡುವ ಆಕಾರದಲ್ಲಿ ಚಪಾತಿಯನ್ನು ಮಾಡಿಕೊಂಡು ಅದಕ್ಕೆ ಹೂರಣ ತುಂಬಿಕೊಳ್ಳಬೇಕು. ಬಳಿಕ ಖರ್ಜಿಕಾಯಿ ರೀತಿಯಲ್ಲಿ ಮಾಡಿಕೊಳ್ಳಬೇಕು. ಕೊನೆಗೆ ಪಾತ್ರೆಯಲ್ಲಿಟ್ಟ ನೀರು ಕುದಿಯಲು ಆರಂಭಿಸಿದಾಗ ಮೆಕ್ಕೆಜೋಳದ ಎಲೆ ಮೇಲೆ ಮಾಡಿದ ಕಡುಬು ಹಾಕಿಕೊಂಡು ಅದರ ಮೇಲೆ ಮುಚ್ಚಳ ಮುಚ್ಚಿಕೊಳ್ಳಬೇಕು. 5 ರಿಂದ 9 ನಿಮಿಷದ ಒಳಗೆ ಕಡುಬು ತಯಾರಾಗಿರುತ್ತದೆ.
ಹಿಂದೂ ಧರ್ಮದಲ್ಲಿ ನಾಗಪಂಚಮಿ (Naga Panchami) ಹಬ್ಬವು ವಿಶೇಷ ಮಹತ್ವವನ್ನು ಹೊಂದಿದೆ. ಪಂಚಾಂಗದ ಪ್ರಕಾರ, ಪ್ರತಿ ವರ್ಷ ಈ ಹಬ್ಬವನ್ನು ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿ ತಿಥಿಯಂದು ಆಚರಿಸಲಾಗುತ್ತದೆ. ನಾಗಪಂಚಮಿಯಂದು ಶಿವನನ್ನು ಸರ್ಪ ದೇವತೆಯೊಂದಿಗೆ ಪೂಜಿಸಲಾಗುತ್ತದೆ. ಜೀವನದ ಅಡೆತಡೆಗಳು ನಿವಾರಣೆಯಾಗಲೆಂದು ಶಿವನಲ್ಲಿ ಪಾರ್ಥಿಸಲಾಗುತ್ತದೆ. ಹಿಂದೂಗಳು ಹಾವಿನ ದೇವನಾದ ನಾಗ ದೇವರನ್ನು ಪೂಜಿಸುತ್ತಾರೆ. ನಾಗದೇವರಿಗೆ ಹಾಲು ಮತ್ತು ಬೆಳ್ಳಿಯನ್ನು ಅರ್ಪಿಸಿ ಪೂಜಿಸುತ್ತಾರೆ. ಹುತ್ತಗಳಿಗೆ ತನಿ ಎರೆದು (ಹಾಲು ಎರೆದು) ಪ್ರಾರ್ಥಿಸುತ್ತಾರೆ.
ಈ ವಿಶೇಷ ದಿನದಂದು ಶಿವಲಿಂಗದ ಮೇಲೆ ಕೆಲವು ವಿಶೇಷ ವಸ್ತುಗಳನ್ನು ಅರ್ಪಿಸಿ ಪೂಜಿಸುವುದರಿಂದ ಕಾಳ ಸರ್ಪದೋಷದಂತಹ ಸಮಸ್ಯೆಗಳು ನಿವಾರಣೆಯಾಗುತ್ತದೆ. ಕಾಲಸರ್ಪ ದೋಷ ಇರುವವರು ಏನು ಮಾಡಬೇಕು? ನಾಗಪಂಚಮಿಯ ದಿನದಂದು ಶಿವಲಿಂಗದ ಮೇಲೆ ಏನು ಅರ್ಪಿಸಬೇಕೆಂದು ಎಂಬುದನ್ನು ಇಲ್ಲಿ ವಿವರಿಸಲಾಗಿದೆ. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಮಳೆಯಾರ್ಭಟ – ಕೃಷ್ಣಾ ನದಿಗೆ ಹೆಚ್ಚಿದ ಒಳಹರಿವು, 8 ಸೇತುವೆಗಳು ಜಲಾವೃತ
ಏನಿದು ಕಾಳ ಸರ್ಪದೋಷ?
ಗ್ರಹಗಳಿಂದ ಉಂಟಾಗುವ ದೋಷಗಳಲ್ಲಿ ಕಾಳ ಸರ್ಪದೋಷವೂ ಒಂದು. ಜ್ಯೋತಿಷ್ಯ ಶಾಸ್ತçದಲ್ಲಿ, ರಾಹುವಿನ ಅಧಿದೇವತೆ ‘ಕಾಳ’ ಮತ್ತು ಕೇತುವಿನ ಅಧಿದೇವತೆ ‘ಸರ್ಪ’. ಜಾತಕದ ಗ್ರಹಗಳು ಈ ಎರಡು ಗ್ರಹಗಳ ನಡುವೆ ಬಂದಾಗ, ‘ಕಾಳ ಸರ್ಪ’ ದೋಷವು ಉಂಟಾಗುತ್ತದೆ. ಜಾತಕದಲ್ಲಿ ರಾಹು ಮತ್ತು ಕೇತುವಿನ ಅಶುಭ ಸ್ಥಾನವು ಕಾಳ ಸರ್ಪದೋಷವನ್ನು ಸೃಷ್ಟಿಸುತ್ತದೆ. ಎಲ್ಲ ಗ್ರಹಗಳು ರಾಹು ಮತ್ತು ಕೇತುವಿನ ನಡುವೆ ಕಂಡುಬಂದರೆ ದೋಷ ಉಂಟಾಗುತ್ತದೆ. ರಾಹು ಸೂರ್ಯ, ಚಂದ್ರ ಮತ್ತು ಗುರುಗಳೊಂದಿಗೆ ಬಂದಾಗ ದೋಷವಿದೆ. ರಾಹು-ಕೇತುಗಳು ಯಾವಾಗಲೂ ಹಿಮ್ಮುಖವಾಗಿ ಚಲಿಸುತ್ತವೆ. ಹೀಗಾಗಿ, ಅವು ಕ್ರೂರ ಗ್ರಹಗಳೆಂದು ಬಿಂಬಿತವಾಗಿವೆ.
ಕಾಳ ಸರ್ಪದೋಷದಿಂದ ಏನಾಗುತ್ತೆ?
ಜೀವನದಲ್ಲಿ ಅಡೆತಡೆಗಳು, ಶಾಂತಿ ಭಂಗ, ಆತ್ಮವಿಶ್ವಾಸದ ಕೊರತೆ, ಆರೋಗ್ಯ ಸಮಸ್ಯೆಗಳು, ಬಡತನ, ನಿರುದ್ಯೋಗ, ವ್ಯಾಪಾರದ ನಷ್ಟ, ಆತಂಕ, ಸ್ನೇಹಿತರಿಂದ ದ್ರೋಹ, ಸಂಬಂಧಿಕರಿಂದ ಬೆಂಬಲ ಸಿಗದಿರುವುದು ಮೊದಲಾದ ಸಮಸ್ಯೆಗಳು ಎದುರಾಗುತ್ತವೆ.
ಜೇನುತುಪ್ಪ
ನಾಗಪಂಚಮಿಯ ದಿನದಂದು ಶಿವಲಿಂಗದ ಮೇಲೆ ಜೇನುತುಪ್ಪವನ್ನು ಅರ್ಪಿಸುವುದರಿಂದ ಕೌಟುಂಬಿಕ ಕಲಹ ದೂರವಾಗುತ್ತದೆ. ವೃತ್ತಿಜೀವನದಲ್ಲಿ ಯಶಸ್ಸು ಸಿಗುತ್ತದೆ. ಅಲ್ಲದೆ, ಇದು ವ್ಯಕ್ತಿಗೆ ಅದೃಷ್ಟವನ್ನು ತರುತ್ತದೆ. ಆರ್ಥಿಕ ಸ್ಥಿತಿಯನ್ನು ಸುಧಾರಿಸುತ್ತದೆ. ಶ್ರದ್ಧಾಭಕ್ತಿಯಿಂದ ಅಂದು ಶಿವಲಿಂಗದ ಮೇಲೆ ಜೇನುತುಪ್ಪವನ್ನು ಅರ್ಪಿಸಿ. ಇದನ್ನೂ ಓದಿ: Mann ki Baat: ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾಗೆ ಮೋದಿ ಪ್ರಶಂಸೆ
ಹಸಿ ಹಾಲು
ನಿಮ್ಮ ಜಾತಕದಲ್ಲಿ ಕಾಳ ಸರ್ಪದೋಷವಿದ್ದರೆ, ನಾಗಪಂಚಮಿಯ ಹಬ್ಬದಂದು ಶಿವಲಿಂಗದ ಮೇಲೆ ಹಸಿ ಹಾಲನ್ನು ಅರ್ಪಿಸುವುದು ಅತ್ಯಂತ ಶುಭವೆಂದು ಪರಿಗಣಿಸಲಾಗುತ್ತದೆ. ಈ ದಿನ, ನೀವು ಬ್ರಾಹ್ಮಿ ಮುಹೂರ್ತದಲ್ಲಿ ಶಿವಲಿಂಗದ ಮೇಲೆ ಹಾಲು ಅರ್ಪಿಸಬೇಕು. ಇದರಿಂದ ನಿಮಗೆ ಶಿವನ ವಿಶೇಷ ಆಶೀರ್ವಾದ ಸಿಗುತ್ತದೆ. ಜೀವನದಲ್ಲಿನ ಅಡೆತಡೆಗಳನ್ನು ನಿವಾರಣೆಯಾಗುತ್ತವೆ.
ಧಾತುರ
ಧಾತುರವನ್ನು ಅರ್ಪಿಸುವುದರಿಂದ ಶಿವನು ಸಂತುಷ್ಟನಾಗುತ್ತಾನೆ. ನಿಮ್ಮ ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ. ನಾಗಪಂಚಮಿಯ ದಿನದಂದು ಶಿವಲಿಂಗದ ಮೇಲೆ ಧಾತುರವನ್ನು ಅರ್ಪಿಸುವುದರಿಂದ ನಿಮ್ಮೆಲ್ಲ ಆಸೆಗಳು ಈಡೇರುತ್ತವೆ.
ಬಿಲ್ವಪತ್ರೆ
ಬಿಲ್ವಪತ್ರೆಯು ಶಿವನಿಗೆ ತುಂಬಾ ಪ್ರಿಯವಾದದ್ದು. ವಿಶೇಷ ದಿನ, ಶಿವಲಿಂಗದ ಮೇಲೆ ಭಕ್ತಿಯಿಂದ ಬಿಲ್ಪತ್ರೆಯನ್ನು ಅರ್ಪಿಸಿ. ಶಿವನು ಇದರಿಂದ ಪ್ರಸನ್ನನಾಗುತ್ತಾನೆ. ಭಕ್ತನ ಎಲ್ಲಾ ಆಸೆಗಳು ಈಡೇರುತ್ತವೆ. ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಬರುತ್ತದೆ.
ಕಪ್ಪು ಎಳ್ಳು
ನಾಗಪಂಚಮಿಯಂದು, ಕಪ್ಪು ಎಳ್ಳು ಬೆರೆಸಿದ ನೀರಿನಿಂದ ಶಿವಲಿಂಗಕ್ಕೆ ಅಭಿಷೇಕ ಮಾಡುವುದು ಅತ್ಯಂತ ಶುಭವೆಂದು ಪರಿಗಣಿಸಲಾಗಿದೆ. ಹೀಗೆ ಮಾಡುವುದರಿಂದ ಕಾಲಸರ್ಪ ದೋಷದಿಂದ ಪರಿಹಾರ ದೊರೆಯುವುದಲ್ಲದೆ, ಕುಟುಂಬದಲ್ಲಿ ಸಕಾರಾತ್ಮಕ ಶಕ್ತಿ ನೆಲೆಸುತ್ತದೆ. ಸಂತೋಷ ಮತ್ತು ಶಾಂತಿ ಸಿಗುತ್ತದೆ.
ಹಿಂದೂ ಸಂಪ್ರದಾಯದಲ್ಲಿ ಆಚರಿಸುವ ನಾಗರ ಪಂಚಮಿ. ಇದನ್ನು ಶ್ರಾವಣ ಮಾಸದ ಶುಕ್ಲಪಕ್ಷದ ಪಂಚಮಿಯಂದು ಆಚರಿಸಲಾಗುತ್ತದೆ. ಶ್ರಾವಣ ಮಾಸದ ಮೊದಲ ಹಬ್ಬ. ಈ ವಿಶೇಷ ದಿನದಂದು, ನಾಗ ದೇವತೆಯನ್ನು ಪೂಜಿಸಲಾಗುತ್ತದೆ. ನಾಗಪಂಚಮಿಯ (Nagapanchami) ಬಗ್ಗೆ ಪುರಾಣಗಳಲ್ಲಿ ಹಲವು ರೀತಿಯ ಕಥೆಗಳಿವೆ. ಇದನ್ನೂ ಓದಿ:ವಿನಯ್ ರಾಜ್ಕುಮಾರ್ ನಟನೆಯ ‘ಪೆಪೆ’ ಸಿನಿಮಾದ ಜೇನು ಕುರುಬ ಸಾಂಗ್ ರಿಲೀಸ್
ಹೀಗಿರುವಾಗ ನಾಗದೇವತೆ (Nagadevathe) ಹಾಗೂ ನಾಗರಹಾವಿನ ಮಹತ್ವಗಳನ್ನು ಸಾರುವ ಅನೇಕ ಚಲನಚಿತ್ರಗಳು ಬಂದಿದೆ. ಕನ್ನಡದಲ್ಲೂ ನಾಗರ ಮಹಿಮೆ ಸಾರುವ ನಾಗ ದೇವರ ಹೆಸರಿನಲ್ಲಿ ಹಲವು ಚಿತ್ರಗಳು (Movies) ಬಂದಿದೆ. ಇದರ ಕುರಿತು ವಿಶೇಷ ಮಾಹಿತಿ ಇಲ್ಲಿದೆ.
1975ರಲ್ಲಿ ಬಂದ ಸಿನಿಮಾ ‘ನಾಗಕನ್ಯೆ’. ಎಸ್ವಿ ರಾಜೇಂದ್ರ ಸಿಂಗ್ ಬಾಬು ಚೊಚ್ಚಲ ಬಾರಿಗೆ ನಿರ್ದೇಶಿಸಿದ ಚಿತ್ರವಾಗಿದೆ. ಡಾ ವಿಷ್ಣುವರ್ಧನ್, ರಾಜಶ್ರೀ, ಭವಾನಿ ಸೇರಿದಂತೆ ಹಲವು ಕಲಾವಿದರು ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.
1982ರಲ್ಲಿ ಬಂದ ಸಿನಿಮಾ ‘ಗರುಡರೇಖೆ’. ಶ್ರೀನಾಥ್, ಮಾಧವಿ, ಅಂಬಿಕಾ, ವಜ್ರಮುನಿ, ಟೈಗರ್ ಪ್ರಭಾಕರ್ ಸೇರಿದಂತೆ ಅನೇಕರು ನಟಿಸಿದ್ದರು. ನಾಗಮುತ್ತು ಕಥಾಹಂದರವನ್ನಾಗಿಸಿ ತಯಾರಿಸಿದ್ದ ಚಿತ್ರ.
1986ರಲ್ಲಿ ಮೂಡಿ ಬಂದಿದ್ದ ಸಿನಿಮಾ ‘ಬೆಳ್ಳಿನಾಗ’ ಸಿನಿಮಾ. ಟೈಗರ್ ಪ್ರಭಾಕರ್, ನಿಳಿನಿ, ದಿನೇಶ್, ಸುದರ್ಶನ್, ರಾಜಾನಂದ್ ಈ ಚಿತ್ರದ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದರು.
1991ರಲ್ಲಿ ಬಂದಿದ್ದ ‘ನಾಗಿಣಿ’ ಚಿತ್ರ ನೆನಪಿರಬಹುದು. ಶಂಕರ್ ನಾಗ್, ಅನಂತ್ ನಾಗ್, ದೇವರಾಜ್, ತಾರಾ, ಗೀತಾ, ರಂಜನಿ ಸೇರಿದಂತೆ ಹಲವು ನಟಿಸಿದ್ದ ಚಿತ್ರ. ಶ್ರೀಪ್ರಿಯ ನಿರ್ದೇಶನದ ಈ ಚಿತ್ರ ಸೇಡಿನ ಕಥೆಯಾಗಿತ್ತು. ನಾಗರಾಜನನ್ನು ಕೊಂದವರ ವಿರುದ್ಧ ನಾಗಿಣಿ ಸೇಡು ತೀರಿಸಿಕೊಳ್ಳುವ ರೋಚಕ ಕಥೆ. ಗೀತಾ ಈ ಸಿನಿಮಾದಲ್ಲಿ ನಾಗಿಣಿಯಾಗಿ ನಟಿಸಿದ್ದರು.
1992ರಲ್ಲಿ ಬಿಡುಗಡೆಯಾದ ಚಿತ್ರ ‘ಶಿವನಾಗ’. ಅರ್ಜುನ್ ಸರ್ಜಾ ಮತ್ತು ಮಾಲಾಶ್ರೀ ಅಭಿನಯಿಸಿದ್ದ ಸಿನಿಮಾ ಮನೆದೇವರು ನಾಗದೇವತೆ ಒಂದು ಕುಟುಂಬವನ್ನು ಹೇಗೆ ಕಾಯುತ್ತದೆ ಎಂದು ಸಿನಿಮಾದಲ್ಲಿ ತೋರಿಸಲಾಗಿತ್ತು. ಕೆ.ಎಸ್ ಆರ್ ದಾಸ್ ಈ ಚಿತ್ರ ನಿರ್ದೇಶನ ಮಾಡಿದ್ದರು.
ವಿಷ್ಣುವರ್ಧನ್, ಆರತಿ, ಮಾಧವಿ, ಜಯಮಾಲಿನಿ ನಟಿಸಿರುವ ‘ಖೈದಿ’ ಸಿನಿಮಾದ ಹಾಡೊಂದು ಬಹಳ ಜನಪ್ರಿಯವಾಗಿದೆ. ನಾಗರಾಜ ಮತ್ತು ನಾಗಿಣಿಯ ರೂಪ ತಾಳಿ ನೃತ್ಯ ಮಾಡುವ `ತಾಳೆ ಹೂವು ಎದೆಯಿಂದ’ ಹಾಡು ಇದಾಗಿದ್ದು, ಇಂತಹ ವಿಶೇಷ ಸಂದರ್ಭದಲ್ಲಿ ಮೊದಲು ನೆನಪಾಗುತ್ತದೆ.
ಗಿರೀಶ್ ಕಾರ್ನಾಡ್ ನಾಟಕ ಆಧರಿಸಿ ತಯಾರಾದ ಚಿತ್ರ ‘ನಾಗಮಂಡಲ’. ಟಿಎಸ್ ನಾಗಾಭರಣ ನಿರ್ದೇಶಿಸಿದ ಈ ಚಿತ್ರಕ್ಕೆ ಐದು ರಾಜ್ಯ ಪ್ರಶಸ್ತಿ ಲಭಿಸಿತ್ತು. ಹಾವು ಮತ್ತು ಮಹಿಳೆ ನಡುವಿನ ಪ್ರೀತಿ ಮತ್ತು ಸರಸದ ಕಥೆ ಹೊಂದಿದ್ದ ಈ ಚಿತ್ರದಲ್ಲಿ ಪ್ರಕಾಶ್ ರಾಜ್ ಹಾವಿನ ಪಾತ್ರ ಮಾಡಿದ್ದರು. 1997ರಲ್ಲಿ ಈ ಚಿತ್ರ ತೆರೆಗೆ ಬಂದಿತ್ತು.
ನಾಗರಹಾವಿನ ಮಹಿಮೆ, ಮಹತ್ವ ಸಾರುವ ಸಿನಿಮಾಗಳ ನಡುವೆ ಹಾವಿನ ಹೆಸರಿನಲ್ಲಿ ಬಂದ ಚಿತ್ರಗಳು ಹೆಚ್ಚಿವೆ. ರುದ್ರನಾಗ, ನಾಗರಹೊಳೆ, ನಾಗಕಾಳಭೈರವ, ಹಾವಿನ ಹೆಡೆ, ಹಾವಿನ ದ್ವೇಷ, ಬಳ್ಳಾರಿ ನಾಗ, ಕಾಳಿಂಗ ಹೀಗೆ ಹಲವು ಚಿತ್ರಗಳು ಗಮನ ಸೆಳೆದಿದೆ.
ನಾಗರಪಂಚಮಿ (Nagara Panchamni) ಹಬ್ಬ ಭಾರತದಲ್ಲಿ ಆಚರಿಸಲಾಗುವ ಕೆಲವು ಪ್ರಾದೇಶಿಕ ಹಬ್ಬಗಳಲ್ಲಿ ಒಂದು. ಕರ್ನಾಟಕದಲ್ಲಿ ದಕ್ಷಿಣ ಕನ್ನಡ (Dakshina Kannada) ಮತ್ತು ಉಡುಪಿ (Udupi) ಜಿಲ್ಲೆಯಲ್ಲಿ ಹೆಚ್ಚಾಗಿ ಈ ಹಬ್ಬದ ಆಚರಣೆ ಕಂಡುಬರುತ್ತದೆ. ನಾಗರಪಂಚಮಿಯ ದಿನದಂದು ಜನರು ದೇವಸ್ಥಾನದ ಹತ್ತಿರದಲ್ಲಿರುವ ನಾಗನ ಹುತ್ತಗಳು, ಬನಗಳಿಗೆ ಭೇಟಿ ನೀಡಿ ಹಾಲು ಇಟ್ಟು ಪೂಜೆ ಮಾಡಿ ಆಚರಿಸುತ್ತಾರೆ. ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲೂ ನಾಗರಪಂಚಮಿಯನ್ನು ಆಚರಿಸಲಾಗುತ್ತದೆ.
ಹಾವು ಕಡಿತದಿಂದ ರಕ್ಷಣೆಯನ್ನು ಪಡೆದುಕೊಳ್ಳಲು ಹಾಗೂ ಹಾವನ್ನೂ ದೇವರ ಸಮಾನವಾಗಿ ಕಂಡು, ಜನರು ಹಾವನ್ನು ಪೂಜಿಸುತ್ತಾರೆ. ಪಂಚಮಿಯ ದಿನ, ಹಾವಿಗೆ ಹಾಲಿನಿಂದ ಅಭಿಷೇಕವನ್ನು ಮಾಡಿದರೆ ಶಾಶ್ವತ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಈ ದಿನ ಮನೆಯ ಪ್ರವೇಶ ದ್ವಾರದಲ್ಲಿ ನಾಗಮೂರ್ತಿಯನ್ನು ಮಾಡುವ ಸಂಪ್ರದಾಯವೂ ಚಾಲ್ತಿಯಲ್ಲಿದೆ. ಇದು ಹಾವಿನ ಕಾಟದಿಂದ ಮನೆಯನ್ನು, ಜನರನ್ನು ರಕ್ಷಿಸುತ್ತದೆ ಎನ್ನುವ ನಂಬಿಕೆಯಿದೆ.
ನಾಗರ ಪಂಚಮಿ ಆಚರಣೆಯಲ್ಲಿ ಆಹಾರವು (Food) ಪ್ರಮುಖ ಪಾತ್ರವಹಿಸುತ್ತದೆ. ತಯಾರಾದ ಭಕ್ಷ್ಯಗಳು ಸಾಮಾನ್ಯವಾಗಿ ಸಸ್ಯಾಹಾರಿಯಾಗಿದ್ದು, ಅವು ಆ ದಿನದ ಆಧ್ಯಾತ್ಮಿಕ ಮತ್ತು ಧಾರ್ಮಿಕ ಆಚರಣೆಗಳೊಂದಿಗೆ ಹೊಂದಿಕೊಳ್ಳುತ್ತವೆ. ಪದಾರ್ಥಗಳು ಮತ್ತು ಪಾಕವಿಧಾನಗಳ ಆಯ್ಕೆಯು ಪ್ರದೇಶದಿಂದ ಪ್ರದೇಶಕ್ಕೆ ವ್ಯತ್ಯಾಸವಾಗುತ್ತದೆ. ಇದನ್ನೂ ಓದಿ: ನಾಗರ ಪಂಚಮಿ ವಿಶೇಷ: ಜನಮೇಜಯ ಸರ್ಪಯಾಗಕ್ಕೆ ಮುಂದಾಗಿದ್ದು ಯಾಕೆ?
ಪಾಥೋಲಿ: ಅಕ್ಕಿಹಿಟ್ಟು, ತೆಂಗಿನಕಾಯಿ ಮತ್ತು ಬೆಲ್ಲವನ್ನು ಹಾಕಿ, ಅರಿಶಿನ ಎಲೆಗಳಲ್ಲಿ ಬೇಯಿಸಲಾಗುವ ಸಾಂಪ್ರದಾಯಿಕ ಸಿಹಿ ಭಕ್ಷ್ಯ ಪಾಥೋಲಿ. ಇದನ್ನು ಮಹಾರಾಷ್ಟ್ರ ಮತ್ತು ಕರ್ನಾಟಕದ ಕರಾವಳಿ ಪ್ರದೇಶಗಳಲ್ಲಿ ವಿಶೇಷವಾಗಿ ಜನಪ್ರಿಯವಾಗಿದೆ.
ಕರಿತ್ಯ ಕಡುಬು (ಕರ್ನಾಟಕ): ಕರಿದ ಕಡುಬು ಎಂದೂ ಕರೆಯಲ್ಪಡುವ ಕರಿತ್ಯ ಕಡುಬು ಅಕ್ಕಿ ಹಿಟ್ಟಿನಿಂದ ತಯಾರಿಸಿದ ಮತ್ತು ಮಸಾಲೆಯುಕ್ತ ತೆಂಗಿನಕಾಯಿ ತುಂಬಿದ ಖಾರದ ಖಾದ್ಯವಾಗಿದೆ. ಇದು ನಾಗ ಪಂಚಮಿಯ ಸಮಯದಲ್ಲಿ ಕರ್ನಾಟಕದಲ್ಲಿ ಮಾಡಲಾಗುವ ಒಂದು ಸಾಂಪ್ರದಾಯಿಕ ಭಕ್ಷ್ಯವಾಗಿದೆ.
ತಿಲ್ಕುಟ್ (ಬಿಹಾರ): ತಿಲ್ಕುಟ್, ಎಳ್ಳು ಮತ್ತು ಬೆಲ್ಲದಿಂದ ತಯಾರಿಸಿದ ಸಿಹಿತಿಂಡಿ, ಬಿಹಾರದಲ್ಲಿ ನಾಗ ಪಂಚಮಿಯ ಸಮಯದಲ್ಲಿ ಈ ಖಾದ್ಯ ಪ್ರಧಾನವಾಗಿದೆ. ಇದು ಪೌಷ್ಟಿಕ ಮತ್ತು ರುಚಿಕರವಾದ ಖಾದ್ಯವಾಗಿದೆ. ಇದನ್ನೂ ಓದಿ: ನಾಗರ ಪಂಚಮಿ | ಭಾರತದಲ್ಲಿ ಎಲ್ಲೆಲ್ಲಿ, ಆಚರಣೆ ಹೇಗೆ?
ರಸ್ಕದಮ್ (ಪಶ್ಚಿಮ ಬಂಗಾಳ): ಪನೀರ್ ಮತ್ತು ಖೋಯಾ (ಹಾಲಿನ ಘನವಸ್ತುಗಳು) ನಿಂದ ತಯಾರಿಸಿದ ಜನಪ್ರಿಯ ಬಂಗಾಳಿ ಸಿಹಿತಿಂಡಿಯಾಗಿದೆ. ನಾಗ ಪಂಚಮಿಯಂತಹ ಹಬ್ಬದ ಸಂದರ್ಭಗಳಲ್ಲಿ ಇದನ್ನು ವಿಶೇಷವಾಗಿ ತಯಾರಿಸಲಾಗುತ್ತದೆ.
ಪಾಲ್ ಕೊಝುಕಟ್ಟೈ (ತಮಿಳುನಾಡು): ಪಾಲ್ ಕೊಝುಕಟ್ಟೈ ಅಕ್ಕಿ ಹಿಟ್ಟಿನಿಂದ ತಯಾರಿಸಿದ ಮತ್ತು ಸಿಹಿಯಾದ ಹಾಲಿನಲ್ಲಿ ಬೇಯಿಸಿದ ಸಾಂಪ್ರದಾಯಿಕ ತಮಿಳು ಸಿಹಿ ಖಾದ್ಯವಾಗಿದೆ. ತಮಿಳುನಾಡಿನಲ್ಲಿ ನಾಗ ಪಂಚಮಿಯ ಸಮಯದಲ್ಲಿ ಇದು ನೆಚ್ಚಿನದು.
ನಾಗರ ಪಂಚಮಿ ಕೇವಲ ಧಾರ್ಮಿಕ ಹಬ್ಬವಲ್ಲ; ಇದು ಪ್ರಕೃತಿ, ಸಂಪ್ರದಾಯ ಮತ್ತು ಪಾಕಶಾಲೆಯ ವೈವಿಧ್ಯತೆಯ ಆಚರಣೆಯಾಗಿದೆ. ಈ ದಿನದಂದು ತಯಾರಿಸಲಾದ ವಿಶೇಷ ಆಹಾರಗಳು ರುಚಿಕರವಾಗಿರುವುದಲ್ಲದೇ, ಆಳವಾದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಮಹತ್ವವನ್ನು ಹೊಂದಿವೆ.