Tag: ನಟ

  • ಕಡಿಮೆ ಅವಧಿಯಲ್ಲೇ ಪ್ರಜಾಕೀಯ ಗಮನ ಸೆಳೆದಿದೆ- ಉಪೇಂದ್ರ

    ಕಡಿಮೆ ಅವಧಿಯಲ್ಲೇ ಪ್ರಜಾಕೀಯ ಗಮನ ಸೆಳೆದಿದೆ- ಉಪೇಂದ್ರ

    ಬೆಂಗಳೂರು: ಕಡಿಮೆ ಅವಧಿಯಲ್ಲಿಯೇ ಪ್ರಜಾಕೀಯ ಪಕ್ಷ ಜನರ ಗಮನ ಸೆಳೆದಿದೆ. ಪಕ್ಷದ ಫಲಿತಾಂಶ ಖುಷಿ ತಂದಿದೆ ಎಂದು ನಟ ಉಪೇಂದ್ರ ಹೇಳಿದ್ದಾರೆ.

    ನಗರದಲ್ಲಿ ಇಂದು ಬುದ್ಧಿವಂತ – 2 ಸಿನಿಮಾದ ಮುಹೂರ್ತ ಸಮಾರಂಭದ ವೇಳೆ ಲೋಕಸಭಾ ಚುನಾವಣಾ ಫಲಿತಾಂಶದ ಕುರಿತು ಪ್ರತಿಕ್ರಿಯಿಸಿದ ಅವರು, ದೇಶದ ರಾಜಕಾರಣ ತೀವ್ರ ಕುತೂಹಲ ಕೆರಳಿಸಿತ್ತು. ನರೇಂದ್ರ ಮೋದಿ ಮತ್ತೆ ಗೆಲುವು ಸಾಧಿಸಿರೋದು ಖುಷಿ ತಂದಿದೆ. ಈ ಐದು ವರ್ಷದಲ್ಲಿ ಮೋದಿ ಮತ್ತಷ್ಟು ಸಾಧನೆ ಮಾಡುತ್ತಾರೆ ಎಂದು ನಾನೂ ಕಾಯುತ್ತಿದ್ದೇನೆ ಅಂದರು.

    ಸ್ಮಾರ್ಟ್ ಸಿಟಿಯಂತಹ ಯೋಜನೆಗಳು ದೀರ್ಘ ಕಾಲದ್ದು, ಈ ಐದು ವರ್ಷದಲ್ಲಿ ಮೋದಿ ಮತ್ತಷ್ಟು ಸಾಧಿಸುತ್ತಾರೆ ಎಂಬ ಭರವಸೆಯಿದೆ. ಪ್ರಜಾಕೀಯದ ಫಲಿತಾಂಶವೂ ಖುಷಿ ತಂದಿದೆ. ಕಡಿಮೆ ಅವಧಿಯಲ್ಲೆ ನಮ್ಮ ಪಕ್ಷ ಜನರ ಗಮನ ಸೆಳೆದಿದೆ. ರಾಜ್ಯದಲ್ಲಿ ಮೈತ್ರಿ ಸರ್ಕಾರ ಮುಂದುವರಿದು ಉತ್ತಮ ಕೆಲಸಗಳನ್ನು ಮಾಡಲಿ. ಸರ್ಕಾರ ಉರುಳುವುದು ಮತ್ತೆ ಎಲೆಕ್ಷನ್ ಆಗೋದು ಚೆನ್ನಾಗಿರೋದಿಲ್ಲ, ಜನ ಕೂಡ ಪ್ರಿಪೇರ್ ಆಗಿರುವುದಿಲ್ಲ ಎಂದು ತಿಳಿಸಿದರು.

    ಸುಮಲತಾಗೆ ಹಾರೈಕೆ:
    ಇದೇ ಸಂದರ್ಭದಲ್ಲಿ ಸುಮಲತಾ ಅಂಬರೀಶ್ ಗೆಲುವಿನ ಬಗ್ಗೆ ಮಾತನಾಡಿದ ಅವರು, ಸುಮಲತಾ ಅವರಿಗೆ ಧನ್ಯವಾದಗಳು. ಅವರು ಗೆದ್ದಿದ್ದೂ ಖುಷಿ ತಂದಿದೆ. ಅವರಲ್ಲಿ ಪ್ರಬುದ್ಧ ರಾಜಕಾರಣಿ ಆಗುವ ಎಲ್ಲಾ ಲಕ್ಷಣಗಳಿವೆ. ಅವರಿಗೆ ಮುಂದೆಯೂ ಒಳಿತಾಗಲಿ ಎಂದು ಉಪೇಂದ್ರ ಹಾರೈಸಿದರು.

  • ಬೆಂಗ್ಳೂರಲ್ಲಿ ಅಮ್ಮನ ಎದುರೇ ನಟನಿಂದ ರೇಪ್!

    ಬೆಂಗ್ಳೂರಲ್ಲಿ ಅಮ್ಮನ ಎದುರೇ ನಟನಿಂದ ರೇಪ್!

    ಬೆಂಗಳೂರು: ಕಿರುಚಿತ್ರ ನಿರ್ದೇಶಕ, ನಟ ಮದುವೆಯಾಗುತ್ತೇನೆ ಎಂದು ನಂಬಿಸಿ ತನ್ನ ತಾಯಿಯ ಎದುರೇ 21 ವರ್ಷದ ಯುವತಿಯನ್ನು ಅತ್ಯಾಚಾರ ಮಾಡಿರುವ ಘಟನೆಯೊಂದು ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

    ಪಿ. ಪ್ರಮೋದ್ ಕುಮಾರ್ ಎಂಬಾತನೇ ಯುವತಿಯ ಮೇಲೆ ಅತ್ಯಾಚಾರವೆಸಗಿದ ನಟ, ನಿರ್ದೇಶಕ. ಈತ ಬೆಂಗಳೂರು ವಿವೇಕನಗರದ ಅಶ್ವಿನಿ ಲೇಔಟ್ ನಿವಾಸಿಯಾಗಿದ್ದಾನೆ. ಸಂತ್ರಸ್ತ ಯುವತಿ ಖಾಸಗಿ ಸಂಸ್ಥೆಯೊಂದರ ಉದ್ಯೋಗಿಯಾಗಿದ್ದಾಳೆ.

    ಪ್ರಮೋದ್ ಯುವತಿಯನ್ನು ಹುಟ್ಟುಹಬ್ಬದ ಪಾರ್ಟಿಗಾಗಿ ಮನೆಗೆ ಕರೆದು ಆಕೆಯ ಮೇಲೆ ಕೃತ್ಯ ಎಸಗಿದ್ದಾನೆ. ಮಗ ಯುವತಿಯನ್ನು ರೇಪ್ ಮಾಡುವುದನ್ನು ಸ್ವತಃ ಆತನ ಅಮ್ಮ ನೋಡಿದರೂ ಸುಮ್ಮನಾಗಿದ್ದು, ಇದೀಗ ಆಕೆಯೂ ಎರಡನೇ ಪ್ರಮುಖ ಆರೋಪಿಯಾಗಿದ್ದಾರೆ. ಸದ್ಯ ನಟನನ್ನು ವಿವೇಕ ನಗರ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

    ಯುವತಿ ನಟನ ತಾಯಿಯ ವಿರುದ್ಧವೂ ದೂರು ದಾಖಲಿಸಿದ್ದಾರೆ. ನಟ ತನ್ನನ್ನು ದುರುಪಯೋಗ ಪಡಿಸಿಕೊಂಡ ಬಳಿಕ ಆತನ ತಾಯಿ, ನಿಂದಿಸಿ ನನ್ನ ಮಗನನ್ನು ಭೇಟಿ ಮಾಡಬೇಡ ಎಂದು ಬೆದರಿಕೆ ಹಾಕಿದ್ದಾರೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ.

    ಸಂತ್ರಸ್ತೆ ಹಾಗೂ ಆರೋಪಿ ಅಕ್ಕಪಕ್ಕದ ಮನೆಯವರಾಗಿದ್ದು ಕಳೆದ ಎರಡು ವರ್ಷಗಳಿಂದ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಹೀಗೆ ಇತ್ತೀಚೆಗೆ ನನ್ನ ಹುಟ್ಟುಹಬ್ಬದ ಪಾರ್ಟಿಯಿದೆ ಎಂದು ಮನೆಗೆ ಕರೆದಿದ್ದಾನೆ. ಹೀಗಾಗಿ ಯುವತಿ ಆತನ ಮನೆಗೆ ತೆರಳಿದ್ದು, ಈ ವೇಳೆ ಆತ ಯುವತಿಯ ಮೇಲೆ ರೇಪ್ ಮಾಡಿದ್ದಾನೆ. ಅಲ್ಲದೆ ತಾನು ನಿನ್ನನ್ನು ಮದುವೆಯಾಗುತ್ತೇನೆ ಎಂದು ನಂಬಿಸಿ ಪ್ರತಿ ನಿತ್ಯ ಆಕೆಯನ್ನು ತನ್ನ ಮನೆಗೆ ಕರೆದುಕೊಂಡು ಹೋಗುವ ಮೂಲಕ ಭೌತಿಕವಾಗಿ ಆಕೆಯೊಂದಿಗೆ ನಿಕಟ ಸಂಬಂಧ ಹೊಂದಲು ಯತ್ನಿಸುತ್ತಿದ್ದನು ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

    ಕೋರಮಂಗಲ 7ನೇ ಬ್ಲಾಕ್ ನಲ್ಲಿರುವ ತನ್ನ ಕಚೇರಿ ಆವರಣದಲ್ಲಿಯೇ ಕುಮಾರ್ ನನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ. ಅಲ್ಲದೆ ನಮ್ಮಿಬ್ಬರ ಸಂಬಂಧ ಆತನ ತಾಯಿಗೂ ತಿಳಿದಿದೆ ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ. ಇಬ್ಬರು ಪ್ರತಿನಿತ್ಯ ಭೇಟಿಯಾಗುವುದನ್ನು ಗಮನಿಸಿದ ನಟನ ತಾಯಿ, ನನ್ನ ಮಗನ ಭೇಟಿ ಮಾಡಬೇಡ ಎಂದು ಎಚ್ಚರಿಕೆ ನೀಡಿದ್ದಾರೆ.

    ಮದುವೆ ಪ್ಲಾನ್:
    ಕುಮಾರ್ ಮದುವೆ ಮಾಡಿಕೊಳ್ಳಲು ಹುಡುಗಿ ಹುಡುಕುತ್ತಿದ್ದಾನೆ ಎಂದು ಸಂತ್ರಸ್ತೆ ನಂಬಿದ್ದು, ನನ್ನನ್ನೇ ಮದುವೆಯಾಗುತ್ತಾನೆ ಎಂದು ಆಕೆ ಆತ ಕರೆದಲ್ಲಿಗೆ ಹೋಗುತ್ತಿದ್ದಳು. ಆದರೆ ಆತನ ತಾಯಿ ಮಾತ್ರ ಯುವತಿಯನ್ನು ತನ್ನ ಸೊಸೆಯಾಗಿ ಒಪ್ಪಿಕೊಳ್ಳಲು ತಯಾರಿರಲಿಲ್ಲ. ಇದರಿಂದಾಗಿ ಕುಮಾರ್ ಕೂಡ ಸಂತ್ರಸ್ತೆಯೊಂದಿಗಿನ ಮದುವೆ ವಿಚಾರ ಕೈಬಿಟ್ಟಿದ್ದನು. ಅಲ್ಲದೆ ಇನ್ನೊಂದು ಬಾರಿ ನನ್ನ ಮಗನ ಜೊತೆ ನಿನ್ನ ಕಂಡರೆ ಕೊಲೆ ಮಾಡುವುದಾಗಿಯೂ ಕುಮಾರ್ ತಾಯಿ ಸಂತ್ರಸ್ತೆಗೆ ಬೆದರಿಕೆ ಹಾಕಿದ್ದರು. ಈ ಹಿನ್ನೆಲೆಯಲ್ಲಿ ಕುಮಾರ್ ಸಂತ್ರಸ್ತೆಯನ್ನು ದೂರ ಮಾಡಲು ಯತ್ನಿಸುತ್ತಿದ್ದನು. ಆಕೆಯ ಫೋನ್ ಕಾಲ್ ಗಳನ್ನು ರಿಸೀವ್ ಮಾಡಲು ಕೂಡ ನಿರಾಕರಿಸುತ್ತಿದ್ದನು. ಮೇ 10ರಂದು ಆಕೆಯನ್ನು ತನ್ನ ಕಚೇರಿಗೆ ಕರೆಸಿಕೊಂಡು ಅಲ್ಲಿ ಸಂತ್ರಸ್ತೆಯ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂದು ಪೊಲೀಸ್ ಅಧಿಕಾರಿ ವಿವರಿಸಿದ್ದಾರೆ.

    ಒಟ್ಟಿನಲ್ಲಿ ಕುಮಾರ್ ತನ್ನನ್ನು ದೂರ ಮಾಡುತ್ತಿರುವುದನ್ನು ಗಮನಿಸಿದ ಸಂತ್ರಸ್ತೆ ಈತ ತನ್ನನ್ನು ಮದುವೆ ಮಾಡಿಕೊಳ್ಳಲ್ಲವೆಂದು ನೊಂದು ಇದೀಗ ಪೊಲೀಸ್ ಠಾಣೆ ಮಟ್ಟಿಲೇರಿದ್ದಾಳೆ. ಸದ್ಯ ವಿವೇಕನಗರ ಪೊಲೀಸರು ಆರೋಪಿ ನಟ ಪ್ರಮೋದ್ ಕುಮಾರ್ ವಿರುದ್ಧ ಐಪಿಸಿ ಸೆಕ್ಷನ್ 376(ರೇಪ್), 417(ಮೋಸ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಪ್ಲಾಸ್ಟಿಕ್ ಆಟಿಕೆ ನುಂಗಿ ನಟನ ಮಗು ಸಾವು

    ಪ್ಲಾಸ್ಟಿಕ್ ಆಟಿಕೆ ನುಂಗಿ ನಟನ ಮಗು ಸಾವು

    ಮುಂಬೈ: ಕಿರುತೆರೆಯ ನಟನೊಬ್ಬನ ಎರಡು ವರ್ಷದ ಮಗು ಪ್ಲಾಸ್ಟಿಕ್ ಆಟಿಕೆಯನ್ನು ನುಂಗಿ ಮೃತಪಟ್ಟಿರುವ ಘಟನೆ ನಗರದಲ್ಲಿ ನಡೆದಿದೆ.

    ಕಿರುತೆರೆ ನಟ ಪ್ರತಿಶ್ ವೊರಾ ಅವರ 2 ವರ್ಷದ ಮಗು ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಪ್ಲಾಸ್ಟಿಕ್ ಆಟಿಕೆಯನ್ನು ನುಂಗಿದ ಪರಿಣಾಮ ಮೃತಪಟ್ಟಿದೆ. ಮಗು ಕಳೆದುಕೊಂಡು ಕುಟುಂಬದವರು ತುಂಬ ದುಃಖಿತರಾಗಿದ್ದಾರೆ.

    ಈ ಬಗ್ಗೆ ಮಾತನಾಡಿದ ನಟ ಪ್ರತಿಶ್ “ಕಳೆದ ರಾತ್ರಿ ನನ್ನ ಮಗಳು ಪ್ಲಾಸ್ಟಿಕ್ ಗೊಂಬೆಯೊಂದಿಗೆ ಆಟವಾಡುತ್ತಿದ್ದಳು. ಆಗ ಗೊಂಬೆಯ ಚೂರನ್ನು ನುಂಗಿದ್ದಾಳೆ. ಬಾಯಿಯಿಂದ ಗೊಂಬೆಯ ಚೂರನ್ನು ತೆಗೆಯಲಾರದೇ ಮೃತಪಟ್ಟಿದ್ದಾಳೆ. ದಯವಿಟ್ಟು ನನ್ನ ಮಗಳಿಗಾಗಿ ದೇವರನ್ನು ಪ್ರಾರ್ಥಿಸಿ” ಎಂದು ದುಃಖದಲ್ಲಿ ಹೇಳಿದ್ದಾರೆ.

    ಮಗುವಿನ ಗಂಟಲಿಗೆ ಪ್ಲಾಸ್ಟಿಕ್ ಸಿಲುಕಿಕೊಂಡ ಪರಿಣಾಮ ಉಸಿರಾಟದ ಸಮಸ್ಯೆಯಿಂದ ಮಗು ಮೃತಪಟ್ಟಿದೆ. ನಟ ಪ್ರತಿಶ್ ವೊರಾ ಅವರು ‘ಪ್ಯಾರ್ ಕೆ ಪಾಪಡ್’ ಎಂಬ ಜನಪ್ರಿಯ ಟಿವಿ ಶೋನಲ್ಲಿ ಅಭಿನಯಿಸುತ್ತಿದ್ದಾರೆ.

    https://www.instagram.com/p/BvjalUPHbeJ/

  • ಕಾಂಗ್ರೆಸ್‍ಗೆ ನಟ ಜಗ್ಗೇಶ್ ಸವಾಲು

    ಕಾಂಗ್ರೆಸ್‍ಗೆ ನಟ ಜಗ್ಗೇಶ್ ಸವಾಲು

    ಶಿವಮೊಗ್ಗ: ಕಾಂಗ್ರೆಸ್ ನಾಯಕರಿಗೆ ನಟ, ಬಿಜೆಪಿ ನಾಯಕ ಜಗ್ಗೇಶ್ ಸವಾಲೆಸೆದಿದ್ದಾರೆ.

    ಶಿವಮೊಗ್ಗ ಗ್ರಾಮಾಂತರ ಹಾಗೂ ತೀರ್ಥಹಳ್ಳಿ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ ಜಗ್ಗೇಶ್ ಬುಧವಾರ ಸಂಜೆ ಭದ್ರಾವತಿಯಲ್ಲಿ ಬಹಿರಂಗ ಸಭೆ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರನ್ನು ಜೆಡಿಎಸ್‍ನಿಂದ ಕರೆದುಕೊಂಡು ಬಂದು ಕಾಂಗ್ರೆಸ್ ನವರು ಯಾಕೆ ನಮ್ಮ ನಾಯಕರು ಅಂದ್ರು ಎಂದು ಉತ್ತರ ಕೊಟ್ಟರೆ, ನಾನು ಯಾಕೆ ಕಾಂಗ್ರೆಸ್ ಬಿಟ್ಟೆ ಎಂದು ಉತ್ತರ ಕೊಡ್ತೀನಿ ಎಂದು ಜಗ್ಗೇಶ್ ಚಾಲೆಂಜ್ ಹಾಕಿದ್ದಾರೆ.

    ಇದೇ ವೇಳೆ ಸಿನಿಮೀಯ ಶೈಲಿಯಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ರಾಜ್ಯದಲ್ಲಿನ ಮೈತ್ರಿ ಬಗ್ಗೆ ಟೀಕೆ ಮಾಡಿದ್ರು. ಯಾವ ಘಟಬಂಧನೂ ಇಲ್ಲ. ಮೋದಿನ ಮನೆಗೂ ಕಳಿಸೋಕೆ ಆಗೋಲ್ಲ. ಇವತ್ತು ರಾಜ್ಯದಲ್ಲಿ ಎರಡೆರಡು ಪಕ್ಷ ಸೇರಿಕೊಂಡು ಏನೋ ಮಾಡ್ತಿವಿ ಅಂತಿದ್ದಾರೆ. ಏನೂ ಮಾಡಕ್ಕೆ ಆಗಲ್ಲ ಎಂದು ವಾಗ್ದಾಳಿ ನಡೆಸಿದ್ರು.

    ರಾಹುಲ್ ಗಾಂಧಿಗೆ ಎಬಿಸಿಡಿ ಗೊತ್ತಿಲ್ಲ. ವೇದಿಕೆ ಮೇಲೆ ಹೆಂಗೆ ಮಾತಾಡಬೇಕು ಎಂದು ಮೊದಲು ಟ್ರೈನಿಂಗ್ ಕೊಟ್ಟು ಕರ್ಕಂಡ್ ಬರ್ರಪ್ಪ ಎಂದು ಸಲಹೆ ನೀಡಿದರು. ಯಾಕೆ ಎಸ್ ಎಂ ಕೃಷ್ಣ ಬಿಜೆಪಿಗೆ ಬಂದ್ರೂ ಎಂದು ಕಾಂಗ್ರೆಸ್ ನವರು ಉತ್ತರ ಕೊಡಿ ಎಂದು ಹೇಳಿದರು.


    ಶಿವಮೊಗ್ಗ ಲೋಕಸಭಾ ಕಣದಲ್ಲಿ ಸಿನಿಮಾ ಮಂದಿಯ ಪ್ರಚಾರ ಆರಂಭವಾಗಿದೆ. ಕಳೆದ ನಾಲ್ಕು ದಿನಗಳಿಂದ ನಟ ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್ ಮೈತ್ರಿ ಅಭ್ಯರ್ಥಿ ಪರ ಪ್ರಚಾರ ನಡೆಸಿದ ಬೆನ್ನಲ್ಲೇ ಬುಧವಾರ ಜಗ್ಗೇಶ್ ಬಿಜೆಪಿ ಪರ ಬ್ಯಾಟಿಂಗ್ ಮಾಡಿದ್ದಾರೆ.

    ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ನಿಂದ ಎಸ್ ಮಧು ಬಂಗಾರಪ್ಪ ಹಾಗೂ ಬಿಜೆಪಿಯಿಂದ ಬಿ.ವೈ ರಾಘವೇಂದ್ರ ಚುನಾವಣಾ ಕಣದಲ್ಲಿದ್ದಾರೆ.

  • ನಟ, ನಿರ್ದೇಶಕ ಎಸ್ ನಾರಾಯಣ್ ಅರೆಸ್ಟ್, ಬಿಡುಗಡೆ

    ನಟ, ನಿರ್ದೇಶಕ ಎಸ್ ನಾರಾಯಣ್ ಅರೆಸ್ಟ್, ಬಿಡುಗಡೆ

    ಬೆಂಗಳೂರು: ನಟ, ನಿರ್ದೇಶಕ ಎಸ್ ನಾರಾಯಣ್ ಅವರು ಬಂಧನಕ್ಕೆ ಒಳಗಾಗಿ ಬಿಡುಗಡೆಯಾಗಿದ್ದಾರೆ.

    ಐಡಿಬಿಐ ಬ್ಯಾಂಕ್ ನಲ್ಲಿ ಎಸ್ ನಾರಾಯಣ್ ಮೂರು ಕೋಟಿ ರೂ. ಹಣವನ್ನು ಸಾಲ ಪಡೆದಿದ್ದರು. ಸಾಲ ತೀರಿಸುವ ಗಡುವು ಮುಗಿದಿದ್ದರೂ ಎಸ್ ನಾರಾಯಣ್ ಸಾಲವನ್ನು ಮರು ಪಾವತಿಸಿರಲಿಲ್ಲ.

    ಸಾಲ ಮರುಪಾವತಿ ಮಾಡದ ಹಿನ್ನೆಲೆಯನ್ನು ಬ್ಯಾಂಕ್ ದೂರು ನೀಡಿದ ಹಿನ್ನೆಲೆಯಲ್ಲಿ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಎಸ್.ನಾರಾಯಣ್ ಅವರನ್ನು ಪೊಲೀಸರು ಬಂಧಿಸಿದ್ದರು. ಬಂಧನದ ಬಳಿಕ ಜಾಮೀನು ಪಡೆದು ಬಿಡುಗಡೆಯಾಗಿದ್ದಾರೆ.

  • ಪಕ್ಷದ ಅಭ್ಯರ್ಥಿಗಳನ್ನು ಪರಿಚಯಿಸಿದ ಉಪೇಂದ್ರ

    ಪಕ್ಷದ ಅಭ್ಯರ್ಥಿಗಳನ್ನು ಪರಿಚಯಿಸಿದ ಉಪೇಂದ್ರ

    ಬೆಂಗಳೂರು: ನಟ, ರಾಜಕಾರಣಿ ಉಪೇಂದ್ರ ಅವರ ಉತ್ತಮ ಪ್ರಜಾಕೀಯ ಪಕ್ಷದಿಂದ (ಯುಪಿಪಿ) ಅಭ್ಯರ್ಥಿಗಳನ್ನು ಲೋಕಸಭಾ ಚುನಾವಣೆಯ ಕಣಕ್ಕೆ ಇಳಿಸಿದ್ದಾರೆ.

    ಬೆಂಗಳೂರಿನ ಪ್ರೆಸ್‍ಕ್ಲಬ್‍ನಲ್ಲಿ ಉಪೇಂದ್ರ ಅವರು ಸುದ್ದಿಗೋಷ್ಠಿ ನಡೆಸಿದ್ದರು. ಇದಕ್ಕೂ ಯುಪಿಪಿ ಅಭ್ಯರ್ಥಿಗಳನ್ನು ವಿಭಿನ್ನವಾಗಿ ಪರಿಚಯ ಮಾಡಿದರು. ಪ್ರಜಾಪ್ರಭುತ್ವದಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಜವಾಬ್ದಾರಿ ತಿಳಿಸುವ ಸಣ್ಣ ಗೀತನಾಟಕದ ಮೂಲಕ ಉಪೇಂದ್ರ ತಮ್ಮ ಪಾರ್ಟಿಯ ಅಭ್ಯರ್ಥಿಗಳನ್ನು ಪರಿಚಯಿಸಿದರು.

    ಲೋಕಸಭಾ ಚುನಾವಣೆಯ ಮೊದಲ ಹಂತದಲ್ಲಿ ಯುಪಿಪಿಯಿಂದ 14 ಜನ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಉಪೇಂದ್ರ ಅವರು ಬಿಡುಗಡೆ ಮಾಡಿದ ಪಟ್ಟಿಯ ಪ್ರಕಾರ, ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಸುರೇಶ್ ಕುಂದರ್, ಹಾಸನದಿಂದ ಚಂದ್ರೇಗೌಡ ಎಚ್.ಎಂ, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ವಿಜಯ್ ಶ್ರೀನಿವಾಸ್, ಚಿತ್ರದುರ್ಗದಿಂದ ದೇವೇಂದ್ರಪ್ಪ ಕಣಕ್ಕೆ ಇಳಿದಿದ್ದಾರೆ.

    ತುಮಕೂರು ಕ್ಷೇತ್ರದಿಂದ ಛಾಯಾ ರಾಜಾಶಂಕರ್ ಸ್ಪರ್ಧಿಸಿದರೆ, ಮಂಡ್ಯದಿಂದ ದಿವಾಕರ್ ಸಿ.ಪಿ.ಗೌಡ, ಮೈಸೂರು ಕ್ಷೇತ್ರದಿಂದ ಆಶಾರಾಣಿ ವಿ, ಚಾಮರಾಜನಗರದಿಂದ ನಾಗರಾಜು.ಎಂ ಚುನಾವಣಾ ಕಣಕ್ಕೆ ಇಳಿದಿದ್ದಾರೆ. ಇತ್ತ ಬೆಂಗಳೂರು ಗ್ರಾಮಾಂತರದಿಂದ ಮಂಜುನಾಥ.ಎಂ, ಬೆಂಗಳೂರು ಉತ್ತರದಿಂದ ಸಂತೋಷ್.ಎಂ, ಬೆಂಗಳೂರು ಕೇಂದ್ರದಿಂದ ಶ್ರೀದೇವಿ ಮೆಳ್ಳೇಗಟ್ಟಿ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಅಹೊರಾತ್ರ, ಚಿಕ್ಕಬಳ್ಳಾಪುರನಿಂದ ಮುನಿರಾಜು.ಜಿ, ಕೋಲಾರದಿಂದ ರಾಮಾಂಜಿನಪ್ಪ.ಆರ್ ಸ್ಪರ್ಧಿಸುತ್ತಿದ್ದಾರೆ.

    ಲೋಕಸಭಾ ಚುನಾವಣೆಯ ಕಣಕ್ಕೆ ಇಳಿಯುವ ವಿಚಾರವಾಗಿ ಮಾತನಾಡಿದ ಉಪೇಂದ್ರ ಅವರು, ಈ ಚುನಾವಣೆಗೆ ಅಭ್ಯರ್ಥಿಗಳನ್ನು ತಯಾರು ಮಾಡುವ ಕೆಲಸಗಳಿದ್ದವು. ಹೀಗಾಗಿ ನಾನು ಸ್ಪರ್ಧೆ ಮಾಡುತ್ತಿಲ್ಲ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಬಗ್ಗೆ ಯೋಚಿಸುತ್ತಿರುವೆ ಎಂದು ತಿಳಿಸಿದರು.

    ಚುನಾವಣಾ ಪ್ರಣಾಳಿಕೆಯನ್ನು ನಾನು ನಂಬುತ್ತೇನೆ. ಪ್ರಣಾಳಿಕೆಯು ಚುನಾವಣಾ ಆಯೋಗದಿಂದ ರಿಜಿಸ್ಟರ್ ಆಗಬೇಕು. ಅದಕ್ಕೆ ಸುಪ್ರೀಂಕೋರ್ಟ್ ಒಪ್ಪಿಕೊಳ್ಳಬೇಕು. ಪ್ರಣಾಳಿಕೆಯನ್ನು ಎಲ್ಲರೂ ಕೊಡುತ್ತಾರೆ. ಆದರೆ ಎಷ್ಟು ಭರವಸೆ ಈಡೇರಿಸಿದ್ದಾರೆ ಅಂತ ಯಾರಾದ್ರೂ ಪರಿಶೀಲನೆ ಮಾಡುತ್ತಾರಾ? ನನ್ನ ಥಿಯರಿಗಳು ಖಂಡಿತಾ ಜನರಿಗೆ ಅರ್ಥ ಆಗುತ್ತವೆ ಎಂದು ಹೇಳಿದರು.

  • ಎಲ್ಲರ ಸಮ್ಮುಖದಲ್ಲಿ ನಟನಿಗೆ ಐ ಲವ್ ಯೂ ಎಂದ ಅಲಿಯಾ: ವಿಡಿಯೋ ನೋಡಿ

    ಎಲ್ಲರ ಸಮ್ಮುಖದಲ್ಲಿ ನಟನಿಗೆ ಐ ಲವ್ ಯೂ ಎಂದ ಅಲಿಯಾ: ವಿಡಿಯೋ ನೋಡಿ

    ಮುಂಬೈ: ಬಾಲಿವುಡ್ ನಟಿ ಅಲಿಯಾ ಭಟ್ ಮುಂಬೈನಲ್ಲಿ ನಡೆದ ಪ್ರಶಸ್ತಿ ಸಮಾರಂಭದ ಕಾರ್ಯಕ್ರಮದ ವೇದಿಕೆಯಲ್ಲಿ ನಟ ರಣ್‍ಬೀರ್ ಕಪೂರ್ ಗೆ ಐ ಲವ್ ಯೂ ಎಂದು ಹೇಳಿದ್ದಾರೆ. ಅಲಿಯಾ ಐ ಲವ್ ಯೂ ಎಂದು ಹೇಳುತ್ತಿದ್ದಂತೆ ರಣ್‍ಬೀರ್ ನಾಚಿ ನೀರಾಗಿದ್ದಾರೆ.

    ಇತ್ತೀಚೆಗೆ ರಣ್‍ಬೀರ್ ಕಪೂರ್ ಹಾಗೂ ಅಲಿಯಾ ಭಟ್ 64ನೇ ಫಿಲ್ಮ ಫೇರ್ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಅಲಿಯಾಗೆ ‘ರಾಝಿ’ ಚಿತ್ರಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿ ಲಭಿಸಿತ್ತು. ಅವಾರ್ಡ್ ಪಡೆದ ನಂತರ ಅಲಿಯಾ ವೇದಿಕೆಯಲ್ಲೇ ರಣ್‍ಬೀರ್ ಅವರನ್ನು ಸ್ಪೆಶಲ್ ಎಂದು ಹೇಳಿದ್ದಾರೆ.

    ವಿಡಿಯೋದಲ್ಲಿ ಅಲಿಯಾ, ರಣ್‍ಬೀರ್ ಗೆ ಐ ಲವ್ ಯೂ ಎಂದು ಹೇಳಿದ್ದಾರೆ. ಅಲಿಯಾ ಐ ಲವ್ ಯೂ ಎಂದು ಹೇಳುತ್ತಿದ್ದಂತೆ ರಣ್‍ಬೀರ್ ಕಪೂರ್ ನಾಚಿ ನೀರಾಗಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ‘ಸಂಜು’ ಚಿತ್ರಕ್ಕಾಗಿ ನಟ ರಣ್‍ಬೀರ್ ಕಪೂರ್ ಗೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿತ್ತು. ವೇದಿಕೆಯಲ್ಲಿ ಅವರ ಹೆಸರನ್ನು ಘೋಷಣೆ ಮಾಡುತ್ತಿದ್ದಂತೆ ಪಕ್ಕದಲ್ಲೇ ಕೂತಿದ್ದ ಅಲಿಯಾ ರಣ್‍ಬೀರ್ ಅವರನ್ನು ಸೈಡಿನಿಂದ ತಪ್ಪಿಕೊಂಡು ಕೆನ್ನೆಗೆ ಮುತ್ತು ನೀಡಿದ್ದಾರೆ.

    ಸದ್ಯ ಅಲಿಯಾ ಭಟ್ ಹಾಗೂ ರಣ್‍ಬೀರ್ ಕಪೂರ್ ಈಗ ‘ಬ್ರಹ್ಮಾಸ್ತ್ರ’ ಚಿತ್ರದಲ್ಲಿ ಒಟ್ಟಿಗೆ ನಟಿಸುತ್ತಿದ್ದಾರೆ.

  • ಅಂಬಿ ಸಾಧನೆ, ಜನರ ಪ್ರೀತಿ ಸುಮಲತಾ ಕೈ ಹಿಡಿಯುತ್ತೆ- ಜಗ್ಗೇಶ್

    ಅಂಬಿ ಸಾಧನೆ, ಜನರ ಪ್ರೀತಿ ಸುಮಲತಾ ಕೈ ಹಿಡಿಯುತ್ತೆ- ಜಗ್ಗೇಶ್

    ರಾಯಚೂರು: ನಟಿ ಸುಮಲತಾ ಅವರು ಸರಿಯಾದ ಸಮಯಕ್ಕೆ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಾರೆ ಅನ್ನೋ ನಂಬಿಕೆಯಿದೆ. ಅಂಬರೀಶ್ ಸಾಧನೆ, ಜನರ ಪ್ರೀತಿ ಸುಮಲತಾ ಅವರ ಕೈ ಹಿಡಿಯುತ್ತೆ ಎಂದು ನವರಸನಾಯಕ ಜಗ್ಗೇಶ್ ಹೇಳಿದ್ದಾರೆ.

    56 ನೇ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ನಟ ನವರಸನಾಯಕ ಜಗ್ಗೇಶ್ ಪ್ರತೀ ವರ್ಷದಂತೆ ಈ ಬಾರಿಯೂ ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆದರು. ಈ ವೇಳೆ ಮಂತ್ರಾಲಯದಲ್ಲಿ ಮಾತನಾಡಿದ ಅವರು, ಎಷ್ಟೇ ದೇವಸ್ಥಾನಗಳಿಗೆ ಹೋದರು ರಾಯರ ದರ್ಶನ ಪಡೆದರೆ ಮಾತ್ರ ಸಮಾಧಾನ ಆಗುತ್ತೆ ಎಂದರು.

    ರಾಜಕೀಯ ವಿಚಾರವಾಗಿ ಸಮಲತಾ ಸ್ಪರ್ಧೆ ಕುರಿತು ಮಾತನಾಡಿ, ರಾಜಕೀಯ ಹೊರತುಪಡಿಸಿ ಅಂಬರೀಶ್ ಅವರ ಜೊತೆ 30 ವರ್ಷಗಳ ಸಂಬಂಧವಿದೆ. ಯಾವತ್ತೂ ಕೂಡ ಅವರ ಕುಟುಂಬಕ್ಕೆ ಒಳಿತನ್ನೇ ಬಯಸುತ್ತೇನೆ. ಸುಮಲತಾ ಅವರು ಸರಿಯಾದ ಸಮಯಕ್ಕೆ ದಿಟ್ಟ ನಿರ್ಧಾರ ತೆಗೆದುಕೊಳ್ಳುತ್ತಾರೆ ಅನ್ನೋ ನಂಬಿಕೆಯಿದೆ. ಅಂಬರೀಶ್ ಸಾಧನೆ, ಜನರ ಪ್ರೀತಿ ಸುಮಲತಾ ಅವರ ಕೈ ಹಿಡಿಯುತ್ತೆ ಎಂದರು.

    ನಟರು ಊಟಕ್ಕಾಗಿ ಬಣ್ಣಹಚ್ಚಿದ್ರೆ ರಾಜಕಾರಣಿಗಳು ವೋಟಿಗಾಗಿ ಬಣ್ಣ ಹಚ್ಚುತ್ತಾರೆ. ಬಣ್ಣ ಹಾಕಿಕೊಳ್ಳುವ ರಾಜಕಾರಣಿಗಳ ಬಣ್ಣ ಜನ ತೆಗೀತಾರೆ. ರಾಜಕಾರಣಿಗಳು ಮಾನ, ಮರ್ಯಾದೆ ಕೆಡಿಸಿಕೊಂಡಿದ್ದೇವೆ. ಅದರಲ್ಲಿ ಯಾರೂ ಉತ್ತಮರು ಅನ್ನೋದನ್ನ ಜನ ನಿರ್ಣಯ ಮಾಡುತ್ತಾರೆ ಎಂದರು.

    ಸ್ವಹಿತಾಸ್ತಕಿಗೆ ಮಹಾಘಟಬಂಧನ್ ಮಾಡಿಕೊಳ್ಳಲಾಗಿದೆ. ಅಭಿವೃದ್ಧಿ ಭಾರತವನ್ನ ನೋಡಬೇಕು ಅಂದ್ರೆ ಮೋದಿಗೆ ಅಧಿಕಾರ ಕೊಡಬೇಕು ಎಂದು ಜಗ್ಗೇಶ್ ಹೇಳಿದರು.

  • ಅಪ್ಪ-ಅಮ್ಮ ಇಲ್ಲದ ನನಗೆ ರಾಯರೇ ತಂದೆ-ತಾಯಿ: ಬರ್ತ್ ಡೇ ಸಂಭ್ರಮದಲ್ಲಿ ಜಗ್ಗೇಶ್

    ಅಪ್ಪ-ಅಮ್ಮ ಇಲ್ಲದ ನನಗೆ ರಾಯರೇ ತಂದೆ-ತಾಯಿ: ಬರ್ತ್ ಡೇ ಸಂಭ್ರಮದಲ್ಲಿ ಜಗ್ಗೇಶ್

    ಬೆಂಗಳೂರು: ಇಂದು ಸ್ಯಾಂಡಲ್‍ವುಡ್ ನ ಇಬ್ಬರು ನಟರು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು 44ನೇ ಬರ್ತ್ ಡೇ ಆಚರಣೆಯಲ್ಲಿದ್ದರೆ, ಇತ್ತ ನವರಸ ನಾಯಕ, ಮಾತಿನ ಮಲ್ಲ ಜಗ್ಗೇಶ್ ಅವರು 56 ನೇ ವರ್ಷದ ಹುಟ್ಟುಹಬ್ಬದ ಆಚರಣೆಯಲ್ಲಿದ್ದಾರೆ.

    ಜಗ್ಗೇಶ್ ಅವರ ಹುಟ್ಟುಹಬ್ಬ ಇಂದು ಇದ್ದ ಕಾರಣ ನಿನ್ನೆಯೇ ಅವರು ಪತ್ನಿ ಜೊತೆ ಮಂತ್ರಾಲಯಕ್ಕೆ ತೆರಳಿದ್ದಾರೆ. ಈ ಕುರಿತು ಜಗ್ಗೇಶ್ ಅವರು ಟ್ವೀಟ್ ಮಾಡಿದ್ದಾರೆ.

    ಟ್ವೀಟ್ ನಲ್ಲೇನಿದೆ..?
    ತಂದೆತಾಯಿ ರಾಯರ ಆಶೀರ್ವಾದ #ಮಾರ್ಚ್ 17 ರಂದು 56 ವರ್ಷಕ್ಕೆ ನನ್ನ ದೇಹ ಕಾಲಿಟ್ಟಿದೆ. ಅಪ್ಪ- ಅಮ್ಮ ಇಲ್ಲದ ನನಗೆ ರಾಯರೆ ತಂದೆ- ತಾಯಿ ಆಗಿದ್ದಾರೆ. ಹಾಗಾಗಿ ಪತ್ನಿ ಸಮೇತ ರಾಯರ ಆಶೀರ್ವಾದಕ್ಕೆ ಮಂತ್ರಾಲಯಕ್ಕೆ ಬಂದಿದ್ದೇನೆ. ರಾಯರು ಧರಿಸುತ್ತಿದ್ದ ಪಾದುಕೆ ಹಾಗು ರಾಯರೆ ಕೈಯಾರೆ ತಯಾರು ಮಾಡಿ ಪೂಜಿಸುತ್ತಿದ್ದ ಶ್ರೀನಿವಾಸದೇವರ ದರ್ಶನ ಪಡೆದೆವು ಎಂದು ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.

    ಇಂದು ಮತ್ತೊಂದು ಟ್ವೀಟ್ ಮಾಡಿರುವ ಜಗ್ಗೇಶ್, ಹುಟ್ಟುಹಬ್ಬದ ಪ್ರಯುಕ್ತ ಶುಭಕೋರಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ. ಅಲ್ಲದೆ ಇದೇ ವೇಳೆ ನಟ ಪುನೀತ್ ರಾಜ್ ಕುಮಾರ್ ಹುಟ್ಟಹಬ್ಬಕ್ಕೂ ಶುಭಾಶಯ ಕೋರಿದ್ದಾರೆ.

    ಇಂದಿನ ಟ್ವೀಟ್ ನಲ್ಲೇನಿದೆ..?
    ತಂದೆ-ತಾಯಿ ರಾಯರ ಆಶೀರ್ವಾದ ಸದಾಬೇಡುವ ಈ ನನ್ನ ದೇಹಕ್ಕೆ 56 ವರ್ಷವಾಗಿದೆ. ನಿಮ್ಮೆಲ್ಲರ ಹಾಗು ನನ್ನ ಕುಟುಂಬದ ಹಾರೈಕೆಯಿಂದ ಓಡುವ ನನ್ನ ವಯಸ್ಸು ಆಯುಷ್ಯ ನಿಲ್ಲಿಸಿ ಸಾಧ್ಯವಾದಷ್ಟು ನಿಮಗೆಲ್ಲ ನಗಿಸಿ ಸಂತೋಷ ನೀಡುವ ಕಾಯಕ ಮಾಡುತ್ತಿರುವೆ. ಹರಸಿ ಹಾರೈಸುತ್ತಿರುವ ನಿಮಗೆ #ಮಾಧ್ಯಮಮಿತ್ರರಿಗೆ ಧನ್ಯವಾದಗಳು. ನನ್ನ ಗುರುಗಳ ಸಂಜಾತ ಪುನೀತ್ ರಾಜ್‍ಗೆ ಹ್ಯಾಪಿ ಬರ್ತ್ ಡೇ ಎಂದು ಬರೆದುಕೊಂಡಿದ್ದಾರೆ.

  • ಯಾರದ್ದೋ ಸಕ್ಸಸ್ ನೋಡಿ ಸಿನಿಮಾ ಫೀಲ್ಡ್‌ಗೆ ಧುಮುಕಬೇಡಿ: ಕಿಚ್ಚ ಸುದೀಪ್

    ಯಾರದ್ದೋ ಸಕ್ಸಸ್ ನೋಡಿ ಸಿನಿಮಾ ಫೀಲ್ಡ್‌ಗೆ ಧುಮುಕಬೇಡಿ: ಕಿಚ್ಚ ಸುದೀಪ್

    ಬೆಂಗಳೂರು: ಯಾರದ್ದೋ ಸಕ್ಸಸ್‍ನ ನೋಡಿ ಸಿನಿಮಾ ಫೀಲ್ಡ್‌ಗೆ ಧುಮುಕಬೇಡಿ. ನಿಮ್ಮೊಳಗೆ ಫ್ಯಾಷನ್ ಎನ್ನುವುದು ಇದ್ದರೆ ಜೀವನದಲ್ಲಿ ಏನು ಬೇಕಾದರೂ ಸಾಧಿಸಬಹುದು ಎಂದು ನಟ ಕಿಚ್ಚ ಸುದೀಪ್ ಹೇಳಿದ್ದಾರೆ.

    ನಗರದಲ್ಲಿ ಯತೀರಾಜ್ ಸಾರಥ್ಯದ ಕಲಾವಿದ ಫಿಲಂ ಅಕಾಡೆಮಿಯನ್ನು ಉದ್ಘಾಟಿಸಿ ಬಳಿಕ ಮಾತನಾಡಿದ ಅವರು, ನೀವು ನಿಮ್ಮನ್ನು ಪ್ರೀತಿಸುವುದನ್ನು ಮೊದಲು ಕಲಿಯಿರಿ. ಮೊದಲು ನೀವು ನಿಮ್ಮ ಬಗ್ಗೆ ಯೋಚನೆ ಮಾಡಿ ಬಳಿಕ ಬೇರೆಯವರ ಬಗ್ಗೆ ಯೊಚನೆ ಮಾಡಿ ಎಂದು ಹೇಳುತ್ತಾ ‘ಕಲಾವಿದ ಫಿಲಂ ಆಕಾಡೆಮಿ’ ಯಿಂದ ಒಳ್ಳೊಳ್ಳೆ ಪ್ರತಿಭೆಗಳು ಹೊರಬರಲಿ ಎಂದು ಇದೇ ವೇಳೆ ಹಾರೈಸಿದ್ದಾರೆ.

    ಸಂಸ್ಥೆಯಿಂದ ಒಬ್ಬ ನಟನಾಗಲು ಸಾಧ್ಯವಿಲ್ಲ. ಆದರೆ ಸಂಸ್ಥೆ ಮೂಲಕ ಅವನು ತನ್ನನ್ನು ತಾನು ಕಂಡುಕೊಳ್ಳಬಹುದು. ಯಾರಾದರೂ ನಟನೆ ಮಾಡಬೇಕೆಂದರೆ ಕೆಲವರು ಅದೃಷ್ಟವಂತರಿದ್ದಾರೆ. ಸಿನಿಮಾವೊಂದು ಬ್ಯೂಟಿಫುಲ್ ಪ್ರೊಫೆಷನ್. ಫಿಲಂ ಅಕಾಡೆಮಿಗಳಿಂದ ನಿಮ್ಮ ಕನಸುಗಳು ಈಡೇರುತ್ತೋ ಇಲ್ಲವೋ, ಆದರೆ ನಿಮ್ಮೊಳಗೆ ಹುದುಗಿರುವ ಕಲೆ ಜೊತೆಗೆ ನಿಮ್ಮನ್ನು ನೀವು ಕಂಡುಕೊಳ್ಳುವುದಕ್ಕೆ ಒಂದೊಳ್ಳೆ ಫ್ಲಾಟ್‍ಫಾರ್ಮ್ ಎಂದು ಸುದೀಪ್ ಹೇಳಿದ್ರು.

    ಮಾಯಬಜಾರ್ ಎಂಥವರನ್ನು ಕೂಡ ಕೈಬೀಸಿ ಕರೆಯುತ್ತದೆ. ಆದರೆ ಬಣ್ಣದ ಜಗತ್ತಿಗೆ ಲಗ್ಗೆ ಇಡುವ ಮೊದಲು ಒಂದಿಷ್ಟು ತಯಾರಿ ಬೇಕಾಗುತ್ತದೆ. ನಟ-ನಟಿ, ನಿರ್ದೇಶಕ-ನಿರ್ದೇಶಕಿ ಹೀಗೆ ಕಲೆಯಲ್ಲಿ ಯಾವುದೇ ವೃತ್ತಿಯನ್ನು ಆಯ್ಕೆ ಮಾಡಿಕೊಂಡರೂ ಪೂರ್ವ ತಯಾರಿ ಅತ್ಯಗತ್ಯ. ಇಂತಹವರಿಗೆ ತರಬೇತಿ ನೀಡಲೆಂದು ಸಾಕಷ್ಟು ಕಲಾ ಕೇಂದ್ರಗಳಿವೆ. ಸದ್ಯ ಈ ಸಾಲಿಗೆ ಯತೀರಾಜ್ ಸಾರಥ್ಯದ ಕಲಾವಿದ ಫಿಲಂ ಅಕಾಡೆಮಿ ಸೇರಿದೆ.

    ಕಾರ್ಯಕ್ರಮದಲ್ಲಿ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಚಿನ್ನೇಗೌಡ್ರು, ನಿರ್ಮಾಪಕ ಹಾಗೂ ವಿತರಕ ಜಾಕ್‍ಮಂಜು ಉಪಸ್ಥಿತರಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv