Tag: ನಗದು

  • ಹೊತ್ತಿ ಉರಿದ ಕಾರು – 85 ಸಾವಿರ ನಗದು ಸುಟ್ಟು ಭಸ್ಮ

    ಹೊತ್ತಿ ಉರಿದ ಕಾರು – 85 ಸಾವಿರ ನಗದು ಸುಟ್ಟು ಭಸ್ಮ

    ವಿಜಯಪುರ: ಆಕಸ್ಮಿಕವಾಗಿ ಕಾರಿಗೆ ಬೆಂಕಿ ಹತ್ತಿ ಹೊತ್ತಿ ಉರಿದ ಘಟನೆ ವಿಜಯಪುರದ ತಿಡಗುಂದಿ ಗ್ರಾಮದ ಬಳಿ ನಡೆದಿದೆ. ತಡರಾತ್ರಿ ಈ ಅವಘಡ ನಡೆದಿದ್ದು, ಅದೃಷ್ಟವಶಾತ್ ಕಾರಿನಲ್ಲಿದ್ದವರು ಅನಾಹುತದಿಂದ ಪಾರಾಗಿದ್ದಾರೆ.

    ವಿಜಯಪುರದಿಂದ ಸೊಲ್ಲಾಪುರ ಹೋಗುವ ವೇಳೆ ತಿಡಗುಂದಿ ಬಳಿ ಬೆಂಕಿ ಅವಘಡ ಸಂಭವಿಸಿದ್ದು, ಈ ಕಾರು ಆಲಮೇಲ ಪಟ್ಟಣ ಪಂಚಾಯತಿ ಸದಸ್ಯ ಸಾಧೀಕ್ ಎಂಬವರಿಗೆ ಸೇರಿದ್ದಾಗಿದೆ.

    ಕಾರಿನಲ್ಲಿದ್ದ 85 ಸಾವಿರ ನಗದು ಹಾಗೂ ಬೆಲೆಬಾಳುವ ವಸ್ತುಗಳು ಸುಟ್ಟು ಭಸ್ಮವಾಗಿದೆ. ಮಹೀಂದ್ರಾ ಕಂಪನಿಯ ಎಕ್ಸ್‌ಯುವಿ500 ಕಾರು ಸಂಪೂರ್ಣ ಸುಟ್ಟು ಭಸ್ಮವಾಗಿದ್ದು, ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮುತ್ತೂಟ್ ಫೈನಾನ್ಸ್ ಕಚೇರಿಗೆ ನುಗ್ಗಿ 7 ಕೋಟಿ ಎಗರಿಸಿದ ಖದೀಮರು

    ಮುತ್ತೂಟ್ ಫೈನಾನ್ಸ್ ಕಚೇರಿಗೆ ನುಗ್ಗಿ 7 ಕೋಟಿ ಎಗರಿಸಿದ ಖದೀಮರು

    – ಕಳ್ಳತನ ಮಾಡಿ ಮ್ಯಾನೇಜರ್ ಮೊಬೈಲ್ ಒಯ್ದರು
    – ಲಾಕರ್ ಕೋಣೆಗೆ ನುಗ್ಗಿ ಚಿನ್ನ, ನಗದು ದೋಚಿದ್ರು

    ಬೆಂಗಳೂರು: ಮುತ್ತೂಟ್ ಫೈನಾನ್ಸ್ ಕಚೇರಿಗೆ ನುಗ್ಗಿದ ಮೂವರು ದರೋಡೆಕೋರರು ಕ್ಷಣಾರ್ಧದಲ್ಲಿ 7 ಕೋಟಿ ಬೆಲೆ ಬಾಳುವ ಬಂಗಾರ, ನಗದು ದೋಚಿ ಪರಾರಿಯಾಗಿರುವ ಘಟನೆ ಹೂಸೂರು ಕಚೇರಿಯಲ್ಲಿ ನಡೆದಿದೆ.

    ನಿನ್ನೆ ಬೆಳಗ್ಗೆ 9 ಗಂಟೆ ಸುಮಾರಿಗೆ ಕಚೇರಿಗೆ ಮೂವರು ದುಷ್ಕರ್ಮಿಗಳು ನುಗ್ಗಿದ್ದಾರೆ. ಈ ವೇಳೆ ಕಚೇರಿಯಲ್ಲಿ ನಾಲ್ವರು ಸಿಬ್ಬಂದಿ ಕೆಲಸ ಮಾಡುತ್ತಿದ್ದರು. ನಾಲ್ವರ ಕೈಕಟ್ಟಿ, ಬಾಯಿಗೆ ಗಮ್‍ಟೇಪ್ ಸುತ್ತಿದ್ದಾರೆ. ಬಂದೂಕು ತೋರಿಸಿ ನಾಲ್ವರನ್ನು ಬೆದರಿಸಿ ಕೀ ಕಸಿದುಕೊಂಡಿದ್ದಾರೆ. ನಂತರ ಲಾಕರ್ ಕೋಣೆಗೆ ನುಗ್ಗಿ ಬಂಗಾರ, ನಗದನ್ನು ಬ್ಯಾಗ್‍ಗೆ ತುಂಬಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ.

    ಕಳ್ಳರು ದರೋಡೆ ವೇಳೆ ಮ್ಯಾನೇಜರ್ ಮೊಬೈಲ್‍ನ್ನು ಕಸಿದುಕೊಂಡು ಹೋಗಿದ್ದರು. ಆ ಮೊಬೈಲ್‍ನ ಜಿಪಿಎಸ್ ಸುಳಿವು ಬೆನ್ನತ್ತಿ ದರೋಡೆಕೋರರನ್ನು ಇದೀಗ ಬಂಧಿಸಲಾಗಿದೆ. ಈ ಪ್ರಕರಣ ನಡೆದ 24 ಗಂಟೆಯಲ್ಲಿ ಸೈಬರ್ ಬಾದ್ ನಲ್ಲಿ ದರೋಡೆಕೋರರನ್ನು ಅರೆಸ್ಟ್ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

  • ಗ್ಯಾಂಬ್ಲಿಂಗ್ ಅಡ್ಡೆಗೆ ನುಗ್ಗಿದ ಪೊಲೀಸರು- 65 ಜನರ ಬಂಧನ, 60 ಲಕ್ಷ ವಶ

    ಗ್ಯಾಂಬ್ಲಿಂಗ್ ಅಡ್ಡೆಗೆ ನುಗ್ಗಿದ ಪೊಲೀಸರು- 65 ಜನರ ಬಂಧನ, 60 ಲಕ್ಷ ವಶ

    ಬೆಂಗಳೂರು: ಜೂಜು ಆಡುವ ನೆಪದಲ್ಲಿ ಹೋಟೆಲ್ ಒಳಗೆ ತೆರಳಿ ಗ್ಯಾಂಬ್ಲಿಂಗ್ ಅಡ್ಡೆ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಬರೋಬ್ಬರಿ 65 ಜನರನ್ನು ಬಂಧಿಸಿದ್ದು, 60 ಲಕ್ಷ ರೂ.ಗಳ ನಗದು ವಶಪಡಿಸಿಕೊಂಡಿದ್ದಾರೆ.

    ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಮಹದೇವಪುರ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಗ್ಯಾಂಬ್ಲಿಂಗ್ ಅಡ್ಡೆ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಜೂಜೂ ಆಡುವವರ ವೇಶದಲ್ಲಿ ಹೋಟೆಲ್ ಒಳಗೆ ನುಗ್ಗಿದ್ದು, ಈ ವೇಳೆ ಗ್ಯಾಂಬ್ಲಿಂಗ್ ನಲ್ಲಿ ತೊಡಗಿದ್ದ ಬರೋಬ್ಬರಿ 65 ಜನರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ 80 ಲಕ್ಷ ರೂ. ನಗದು ವಶಪಡಿಸಿಕೊಂಡಿದ್ದಾರೆ.

    ಲಕ್ಷಾಂತರ ರೂಪಾಯಿಗಳನ್ನು ಪಣಕ್ಕಿಟ್ಟು ಆರೋಪಿಗಳು ಗ್ಯಾಂಬ್ಲಿಂಗ್ ಆಡುತ್ತಿರುವುದು ಈ ವೇಳೆ ಬೆಳಕಿಗೆ ಬಂದಿದೆ. ಪ್ರಕರಣದ ಕುರಿತು ಸಿಸಿಬಿ ಅಧಿಕಾರಿಗಳು ಹೆಚ್ಚಿನ ತನಿಖೆ ನಡೆಸುತ್ತಿದ್ದು, ಬಂಧಿತರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಅಲ್ಲದೆ ಗ್ಯಾಂಬ್ಲಿಂಗ್ ಸೆಂಟರ್‍ಗಳ ಮೇಲಿನ ದಾಳಿಯನ್ನು ಮುಂದುವರಿಸಿದ್ದಾರೆ. ಡಿಸಿಪಿ ರವಿಕುಮಾರ್ ಹಾಗೂ ತಂಡದಿಂದ ದಾಳಿ ನಡೆದಿದ್ದು, ಅಪಾರ ಪ್ರಮಾಣದ ನಗದು ವಶಪಡಿಸಿಕೊಂಡಿದ್ದಾರೆ.

  • ನಿದ್ದೆ ಮಾತ್ರೆ ಹಾಕಿ, ಚಿನ್ನ, ಹಣ ದೋಚಿ ಪರಾರಿಯಾದ ವಧು

    ನಿದ್ದೆ ಮಾತ್ರೆ ಹಾಕಿ, ಚಿನ್ನ, ಹಣ ದೋಚಿ ಪರಾರಿಯಾದ ವಧು

    – ಬೆಳಗ್ಗೆ ಎದ್ದು ನೋಡಿದಾಗ ಮನೆಮಂದಿಯೆಲ್ಲ ಶಾಕ್

    ಲಕ್ನೋ: ನವವಿವಾಹಿತೆ ಮನೆ ಮಂದಿಗೆಲ್ಲ ನಿದ್ದೆ ಔಷಧಿ ನೀಡಿ ಮಾವನ ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ನಗದನ್ನು ಹೊತ್ತು ಪರಾರಿಯಾಗಿದ್ದಾಳೆ.

    ಉತ್ತರ ಪ್ರದೇಶದ ಬಾದಾನ್ ಜಿಲ್ಲೆಯ ಚೋಟಾ ಪಾರಾ ಪ್ರದೇಶದಲ್ಲಿ ಘಟನೆ ನಡೆದಿದ್ದು, ಬೆಳಗ್ಗೆ ಮನೆ ಮಂದಿಗೆಲ್ಲ ಎಚ್ಚರವಾದ ನಂತರ ಮನೆಯಲ್ಲಿ ಚಿನ್ನಾಭರಣ, ಹಣ ಹಾಗೂ ಇತರೆ ಬೆಲೆ ಬಾಳವ ವಸ್ತುಗಳು ಕಾಣದಿರುವುದನ್ನು ಕಂಡು ದಂಗಾಗಿದ್ದಾರೆ.

    ಈ ಕುರಿತು ಎಸ್‍ಪಿ ಜಿತೇಂದ್ರ ಕುಮಾರ್ ಶ್ರೀವಾಸ್ತವ್ ಮಾಹಿತಿ ನೀಡಿ, ಪ್ರವೀಣ್ ಮತ್ತು ರೈ ಡಿಸೆಂಬರ್ 9ರಂದು ಮದುವೆಯಾಗಿದ್ದಾರೆ. ಮಹಿಳೆಯು ಅಜಂಗಢಗೆ ಸೇರಿದವಳಾಗಿದ್ದಾಳೆ. ಸುಮಾರು 70 ಸಾವಿರ ರೂ. ನಗದು, ಮೂರು ಲಕ್ಷ ರೂ. ಬೆಲೆಯ ಆಭರಣಗಳನ್ನು ಮಹಿಳೆ ಹೊತ್ತೊಯ್ದಿದ್ದಾಳೆ. ಈ ಕುರಿತು ತನಿಖೆ ನಡೆಸಲಾಗುತ್ತಿದ್ದು, ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

    ಪೊಲೀಸರು ಇದೀಗ ಮದುವೆ ಮಾಡಿಸಿದ ಮಧ್ಯವರ್ತಿ ಟಿಂಕುಗಾಗಿ ಹುಡುಕಾಟ ನಡೆಸಿದ್ದಾರೆ. ಮದುವೆ ನಂತರ ಟಿಂಕು ವಧುವಿನೊಂದಿಗೆ ಹೊಸ ಮನೆಗೆ ಹೋಗಿದ್ದ. ಆಗ ವಧುವಿನೊಂದಿಗೆ ಇವನೂ ಸಹ ಕಾಣೆಯಾಗಿದ್ದಾನೆ.

    ವರನ ತಂದೆ ರಾಮ್ ಲೆಡೆಟೆ ಈ ಕುರಿತು ಮಾಹಿತಿ ನೀಡಿ, ಪ್ರವೀಣ್ ಮದುವೆ ಸಂದರ್ಭದಲ್ಲಿ ನಾವು ಒಟ್ಟು ನಾಲ್ಕು ಲಕ್ಷ ರೂ.ಗಳನ್ನು ಖರ್ಚು ಮಾಡಿದ್ದೇವೆ. ಮದುವೆಯನ್ನು ಅಜಂಗಢನಲ್ಲಿ ನಡೆಸಿದ್ದೆವು. ಆಗ ಟಿಂಕು ಸ್ವಲ್ಪ ಹಣವನ್ನು ತೆಗೆದುಕೊಂಡಿದ್ದ ಎಂದು ವಿವರಿಸಿದ್ದಾರೆ.

    ವರ ಪ್ರವೀಣ್ ಈ ಕುರಿತು ಪ್ರತಿಕ್ರಿಯಿಸಿ, ಪತ್ನಿ ಈ ರೀತಿಯಾಗಿ ನನಗೆ ಮೋಸ ಮಾಡುತ್ತಾಳೆ ಎಂದು ನನಗೆ ತಿಳಿದಿರಲಿಲ್ಲ. ಹಳ್ಳಿಯಲ್ಲಿ ನನ್ನ ಕುಟುಂಬವು ತುಂಬಾ ಮುಜುಗರಕ್ಕೊಳಗಾಗಿದೆ. ಅಲ್ಲದೆ ಆರ್ಥಿಕವಾಗಿ ಸಹ ನಾವು ಹಿಂದುಳಿದಿದ್ದೇವೆ. ಅವಳನ್ನು ಬಂಧಿಸಬೇಕೆಂದು ನಾನು ಆಗ್ರಹಿಸುತ್ತೇನೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

  • ಕಂದಾಯ ಅಧಿಕಾರಿ ಮನೆಯಲ್ಲಿ 93.5 ಲಕ್ಷ ರೂ ನಗದು, 400 ಗ್ರಾಂ ಚಿನ್ನ ಜಪ್ತಿ

    ಕಂದಾಯ ಅಧಿಕಾರಿ ಮನೆಯಲ್ಲಿ 93.5 ಲಕ್ಷ ರೂ ನಗದು, 400 ಗ್ರಾಂ ಚಿನ್ನ ಜಪ್ತಿ

    ತೆಲಂಗಾಣ: ತಹಶೀಲ್ದಾರ್ ಅಥವಾ ಮಂಡಲ್ ಕಂದಾಯ ಅಧಿಕಾರಿ(ಎಂಆರ್‍ಓ) ಮನೆ ಮೇಲೆ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ದಾಳಿ ನಡೆಸಿ ಬರೋಬ್ಬರಿ 93.5 ಲಕ್ಷ ರೂ ನಗದು, 400 ಗ್ರಾಂ ಚಿನ್ನಾಭರಣವನ್ನು ಜಪ್ತಿ ಮಾಡಿದೆ.

    ರಂಗ ರೆಡ್ಡಿ ಜಿಲ್ಲೆಯ ತಹಶೀಲ್ದಾರ್ ಲಾವಣ್ಯ ಅವರ ನಿವಾಸದ ಮೇಲೆ ಬುಧವಾರ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು. ಗ್ರಾಮ ಕಂದಾಯ ಅಧಿಕಾರಿ(ವಿಆರ್‍ಓ) ಅಂತಯ್ಯ ಅವರು ರೈತರಾಗಿರುವ ಭಾಸ್ಕರ್ ಅವರ ಬಳಿ ಜಮೀನಿನ ದಾಖಲೆಗಳನ್ನು ಸರಿಪಡಿಸಲು 4 ಲಕ್ಷ ರೂ ಲಂಚ ತೆಗೆದುಕೊಳ್ಳುತ್ತಿದ್ದರು. ಈ ವೇಳೆ ಎಸಿಬಿ ಬಲೆಗೆ ಅಧಿಕಾರಿ ಸಿಕ್ಕಿಬಿದ್ದಿದ್ದರು. ಈ ವಿಚಾರ ತಿಳಿಯುತ್ತಿದ್ದಂತೆಯೇ ತಹಶೀಲ್ದಾರ್ ಲಾವಣ್ಯ ಅವರ ಮನೆ ಮೇಲೆ ಎಸಿಬಿ ದಾಳಿ ನಡೆಸಿದೆ.

    ಜಮೀನಿನ ದಾಖಲೆಗಳನ್ನು ಸರಿಪಡಿಬೇಕಾದರೆ 8 ಲಕ್ಷ ಹಣ ನೀಡಬೇಕು ಎಂದು ರೈತನ ಬಳಿ ಅಧಿಕಾರಿಗಳು ಕೇಳಿದ್ದರು. ಅದರಲ್ಲಿ 5 ಲಕ್ಷ ಎಂಆರ್‍ಓ ಗೆ ಹಾಗೂ ಉಳಿದ 3 ಲಕ್ಷ ವಿಆರ್‍ಓಗೆ ನೀಡಬೇಕು ಎಂದು ಬೇಡಿಕೆ ಇಡಲಾಗಿತ್ತು.

    ಬಳಿಕ ರೈತ ಹಣವನ್ನು ತಂದಿರುವ ಬಗ್ಗೆ ವಿಆರ್‍ಓ ಅವರು ಎಂಆರ್‍ಓ ಅವರಿಗೆ ಮಾಹಿತಿ ತಿಳಿಸಿದ್ದಾರೆ. ಈ ಬಗ್ಗೆ ಮಾಹಿತಿ ತಿಳಿದ ಎಸಿಬಿ ಅಧಿಕಾರಿಗಳು ಲಾವಣ್ಯ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲದೆ ತಮ್ಮ ಮನೆಯ ಮೇಲೆ ಎಸಿಬಿ ದಾಳಿ ಮಾಡಿರುವ ಆರೋಪವನ್ನು ಲಾವಣ್ಯ ಅವರು ನಿರಾಕರಿಸಿದ್ದಾರೆ.

    ಇತ್ತೀಚೆಗೆ ರೈತ, ಲಾವಣ್ಯ ಅವರ ಕಾಲಿಗೆ ಬಿದ್ದು, ತನ್ನ ಜಮೀನಿನ ದಾಖಲೆಗಳನ್ನು ಸರಿಪಡಿಸಿಕೊಡಿ ಎನ್ನುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳನ್ನು ಭಾರೀ ವೈರಲ್ ಆಗಿತ್ತು. ಅಲ್ಲದೆ ರೈತನ ಪಾಸ್ ಬುಕ್ ನೀಡಲು ಅವರ ಬಳಿ ವಿಆರ್‍ಓ 30 ಸಾವಿರ ಹಣ ಪಡೆದಿದ್ದಾರೆ ಎನ್ನುವ ಆರೋಪ ಕೂಡ ಅಧಿಕಾರಿಗಳ ಮೇಲೆ ಕೇಳಿಬಂದಿದೆ.

    ಜಮೀನಿನ ದಾಖಲೆಗಳನ್ನು ಸರಿಪಡಿಸಿಕೊಡಲು ಈ ಇಬ್ಬರು ಅಧಿಕಾರಿಗಳು ತಮ್ಮ ಬಳಿ ಹಣದ ಬೇಡಿಕೆ ಇಟ್ಟಿದ್ದಾರೆ ಎಂದು ರೈತ ಎಸಿಬಿ ಅಧಿಕಾರಿಗಳಿಗೆ ತಿಳಿಸಿದ್ದಾರೆ.

    ಕಳೆದ ಎರಡು ವರ್ಷಗಳ ಹಿಂದೆ ಲಾವಣ್ಯ ಅವರಿಗೆ ಅತ್ಯುತ್ತಮ ತಹಶೀಲ್ದಾರ್ ಪ್ರಶಸ್ತಿಯನ್ನು ನೀಡಿ ತೆಲಂಗಾಣ ಸರ್ಕಾರ ಗೌರವಿಸಿತ್ತು. ಆದರೆ ಈ ಭ್ರಷ್ಟಾಚಾರದ ಆರೋಪ ಲಾವಣ್ಯ ಅವರ ವೃತ್ತಿ ಬದುಕಿಗೆ ಕಪ್ಪು ಚುಕ್ಕೆ ಇಟ್ಟಂತಾಗಿದೆ.

  • 15 ಲಕ್ಷ ನಗದು, 250 ಗ್ರಾಂ ಚಿನ್ನ ಕದ್ದು ಇನಿಯನಿಗೆ ಕೊಟ್ಟ ನವವಿವಾಹಿತೆ!

    15 ಲಕ್ಷ ನಗದು, 250 ಗ್ರಾಂ ಚಿನ್ನ ಕದ್ದು ಇನಿಯನಿಗೆ ಕೊಟ್ಟ ನವವಿವಾಹಿತೆ!

    ಚಂಡೀಗಢ: ಮನೆಯಲ್ಲಿಯ 15 ಲಕ್ಷ ನಗದು ಮತ್ತು 250 ಗ್ರಾಂ ಚಿನ್ನ ಕದ್ದು ಇನಿಯನಿಗೆ ಕೊಟ್ಟ ಮಹಿಳೆ ಸಿಕ್ಕಿಬಿದ್ದಿದ್ದಾಳೆ. ಈ ಘಟನೆ ಪಂಜಾಬ್ ರಾಜ್ಯದ ಹಿಮಾಚಲ ಫಿಲ್ಲೌರ್ ನಗರದಲ್ಲಿ ನಡೆದಿದ್ದು, ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

    ರಿಂಪಲ್ ಎಂಬಾಕೆ ತನ್ನ ಪ್ರಿಯಕರನಿಗೆ ಹಣ ಮತ್ತು ಚಿನ್ನ ನೀಡಿದ ನವ ವಿವಾಹಿತೆ. ನಾಲ್ಕು ತಿಂಗಳ ಹಿಂದೆ ರಿಂಪಲ್ ಮದುವೆ ಫಿಲ್ಲೌರ್ ನಗರದ ದೊಡ್ಡ ವ್ಯಾಪಾರಸ್ಥ ಇಂದ್ರಜಿತ್ ಶರ್ಮಾ ಎಂಬವರ ಪುತ್ರನೊಂದಿಗೆ ಅದ್ಧೂರಿಯಾಗಿ ನಡೆದಿತ್ತು. ರಿಂಪಲ್ ಮದುವೆಗೂ ಮುನ್ನ ಲೂಧಿಯಾನದ ಲಖ್ಬೀರ್ ಸಿಂಗ್ ಎಂಬಾತನೊಂದಿಗೆ ಪ್ರೇಮ ಪಾಶದಲ್ಲಿ ಸಿಲುಕಿದ್ದಳು. ಮದುವೆ ಬಳಿಕವೂ ಇಬ್ಬರ ಪ್ರೀತಿ ಮುಂದುವರಿದಿತ್ತು. ಆರ್ಥಿಕವಾಗಿ ಸಬಲರಾಗಿದ್ದ ಪತಿ ಮನೆಯಲ್ಲಿ ಹಣದೊಂದಿಗೆ ಪರಾರಿಯಾಗಿ ಲಖ್ಬೀರ್ ಜೊತೆ ಐಷಾರಾಮಿ ಜೀವನ ನಡೆಸಲು ರಿಂಪಲ್ ಪ್ಲಾನ್ ಮಾಡಿಕೊಂಡಿದ್ದಳು.

    ಏನಿದು ಘಟನೆ?
    ರಿಂಪಲ್ ಮಾವ ಇಂದ್ರಜಿತ್ ಶರ್ಮಾ ತಮ್ಮ ಮನೆಯಲ್ಲಿ ನಗದು ಮತ್ತು ಚಿನ್ನ ಕಳ್ಳತನವಾಗಿದೆ ಎಂದು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುತ್ತಾರೆ. ಮನೆಗೆ ಬಂದು ಪರಿಶೀಲನೆ ನಡೆಸಿದ ಅಧಿಕಾರಿಗಳಿಗೆ ಹೊರಗಿನವರಿಂದ ಈ ಕಳ್ಳತನ ನಡೆದಿಲ್ಲ ಎನ್ನುವುದು ಖಚಿತವಾಗಿತ್ತು. ನೆರೆಮನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದಾಗ ರಿಂಪಲ್ ಬ್ಯಾಗ್ ತೆಗೆದುಕೊಂಡು ಹೋಗಿ ಯುವಕನೊಬ್ಬನಿಗೆ ನೀಡುವುದು ಖಾತರಿಯಾಗಿದೆ.

    ರಿಂಪಲ್ ನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದಾಗ ತಾನೇ ಕಳ್ಳತನ ಮಾಡಿದ್ದು ಎಂಬುದನ್ನು ಒಪ್ಪಿಕೊಂಡಿದ್ದಾಳೆ. ಈ ಸಂಬಂಧ ಪೊಲೀಸರು ಮತ್ತಷ್ಟು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

    ಫೇಸ್‍ಬುಕ್ ಲವ್: ರಿಂಪಲ್ ಮತ್ತು ಲಖ್ಬೀರ್ ಸಿಂಗ್ ಇಬ್ಬರು ಫೇಸ್‍ಬುಕ್ ನಲ್ಲಿ ಪರಿಚಯವಾಗಿದ್ದರು. ಕೆಲವೇ ದಿನಗಳಲ್ಲಿ ಫೇಸ್‍ಬುಕ್ ಸ್ನೇಹ ಪ್ರೇಮವಾಗಿ ಬದಲಾಗಿತ್ತು. ಮದುವೆಯ ಬಳಿಕವೂ ಇಬ್ಬರು ರಹಸ್ಯವಾಗಿ ಭೇಟಿಯಾಗುತ್ತಿದ್ದರು. ಮದುವೆಗೂ ಮುನ್ನವೇ ಇಬ್ಬರು ಕಳ್ಳತನ ಮಾಡಿ ಎಸ್ಕೇಪ್ ಆಗಬೇಕೆಂದು ಪ್ಲಾನ್ ಮಾಡಿದ್ದರು. ಲೂಧಿಯಾನದ ಫೋಟೋ ಸ್ಟುಡಿಯೋದಲ್ಲಿ ಕೆಲಸ ಮಾಡಿಕೊಂಡಿದ್ದ ಲಖ್ಬೀರ್ ಗೆಳತಿ ತರುವ ಹಣದಲ್ಲಿ ವಿಲಾಸಿಮಯ ಜೀವನ ನಡೆಸುವ ಪ್ಲಾನ್ ಮಾಡಿಕೊಂಡಿದ್ದನು.

    ಮನೆಯಿಂದ ಎರಡು ಬಾರಿ ಬ್ಯಾಗ್ ರವಾನೆ:
    ರಿಂಪಲ್ ಮನೆಯಿಂದ ಒಟ್ಟು ಎರಡು ಬಾರಿ ಬ್ಯಾಗ್ ತೆಗೆದುಕೊಂಡು ಹೋಗಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ರಿಂಪಲ್ ಬರುವುದನ್ನು ಕಾಯುತ್ತ ನಿಂತಿದ್ದ ಯುವಕನಿಗೆ ಬ್ಯಾಗ್ ನೀಡಿ ಮನೆಗೆ ಹಿಂದಿರುಗಿದ್ದಾಳೆ. ಮನೆಗೆ ಬಂದ ರಿಂಪಲ್ ತನ್ನ ಮೇಲೆ ಅನುಮಾನ ಬಾರದಿರಲಿ ಎಂದು ಅಡುಗೆ ಕೆಲಸದಲ್ಲಿ ತೊಡಗಿಕೊಂಡಿದ್ದಳು. ಹಣ ಪಡೆದ ಲಖ್ಬೀರ್ ಬಗ್ಗೆ ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲ. ಆತನನ್ನು ಬಂಧಿಸಲಾಗಿದೆ ಎಂದು ಮಾತ್ರ ಪೊಲೀಸರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರೋಗಿಗಳಂತೆ ಬಂದು 40 ಸಾವಿರ, ಚಿನ್ನಾಭರಣ ದೋಚಿದ್ರು..!

    ರೋಗಿಗಳಂತೆ ಬಂದು 40 ಸಾವಿರ, ಚಿನ್ನಾಭರಣ ದೋಚಿದ್ರು..!

    ಭುವನೇಶ್ವರ್: ರೋಗಿಗಂತೆ ನಟಿಸಿ ಆಸ್ಪತ್ರೆಗೆ ಬಂದು ವೈದ್ಯರ ಬಳಿಯಿಂದ ಹಣ, ಮೊಬೈಲ್ ಹಾಗೂ ಚಿನ್ನಾಭರಣಗಳನ್ನು ದೋಚಿದ ಪ್ರಕರಣವೊಂದು ಒಡಿಶಾದಲ್ಲಿ ನಡೆದಿದೆ.

    ಈ ಘಟೆನೆ ಜಿಲ್ಲೆಯ ಇಂದ್ರಾವತಿ ನಗರದಲ್ಲಿ ಶುಕ್ರವಾರ ರಾತ್ರಿ 11.30ರ ಸುಮಾರಿಗೆ ನಡೆದಿದೆ.

    ದುಷ್ಕರ್ಮಿಗಳಿಬ್ಬರು ತಮಗೆ ಹುಷಾರಿಲ್ಲವೆಂದು ಹೇಳಿ ರಾತ್ರೋ ರಾತ್ರಿ ಇಂದ್ರಾವತಿಯಲ್ಲಿರುವ ಸರ್ಕಾರಿ ಆಸ್ಪತ್ರೆ ಪಕ್ಕದಲ್ಲಿರುವ ಡಾ. ಪ್ರದಿಪ್ತಾ ಕುಮಾರ್ ಪ್ರಹರಾಜ್ ಅವರ ಮನೆಗೆ ಬಂದಿದ್ದಾರೆ. ಈ ಇಬ್ಬರು ಕುಳಿತ ಕೆಲ ಹೊತ್ತಿನಲ್ಲೇ ಮತ್ತಿಬ್ಬರು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬಂದು ಏಕಾಏಕಿ ಮನೆಗೆ ನುಗಿದ್ದಾರೆ. ಅಲ್ಲದೇ ವೈದ್ಯರಿಗೆ ಪಿಸ್ತೂಲ್ ತೋರಿಸುವ ಮೂಲಕ ಬೆದರಿಸಿ ಮನೆಯೆಲ್ಲಾ ಹುಡುಕಾಡಿ 40 ಸಾವಿರ ನಗದು, 55 ಗ್ರಾಂ ತೂಕದ ಚಿನ್ನಾಭರಣ ಹಾಗೂ 4 ಮೊಬೈಲ್ ಗಳನ್ನು ದೋಚಿದ್ದಾರೆ.

    ಪ್ರಕರಣ ಸಂಬಂಧ ಇಂದು ಬೆಳಗ್ಗೆ ಇಂದ್ರಾವತಿ ಪೊಲೀಸ್ ಠಾಣೆಗೆ ತೆರಳಿ ವೈದ್ಯರು ದೂರು ದಾಖಲಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಐತಿಹಾಸಿಕ ಗೆಲುವು ಪಡೆದ ಟೀಂ ಇಂಡಿಯಾಗೆ ಬಿಸಿಸಿಐ ಬಂಪರ್ ಗಿಫ್ಟ್

    ಐತಿಹಾಸಿಕ ಗೆಲುವು ಪಡೆದ ಟೀಂ ಇಂಡಿಯಾಗೆ ಬಿಸಿಸಿಐ ಬಂಪರ್ ಗಿಫ್ಟ್

    ಮುಂಬೈ: ಆಸ್ಪ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯನ್ನು 2-1ರ ಅಂತರದಲ್ಲಿ ಗೆದ್ದು ಇತಿಹಾಸ ಬರೆದಿದ್ದ ಟೀಂ ಇಂಡಿಯಾ ತಂಡಕ್ಕೆ ಬಿಸಿಸಿಐ ನಗದು ಬಹುಮಾನ ಘೋಷಣೆ ಮಾಡಿದೆ.

    ಟೆಸ್ಟ್ ಸರಣಿಯ ಗೆದ್ದ ಸಂತಸದಲ್ಲಿದ್ದ ತಂಡದ ಆಟಗಾರರು ಹಾಗೂ ಟೀಂ ಮ್ಯಾನೇಜ್‍ಮೆಂಟ್ ಸಿಬ್ಬಂದಿ ಕೂಡ ನಗದು ಬಹುಮಾನ ಪಡೆಯಲಿದ್ದಾರೆ. ಪ್ರಮುಖವಾಗಿ ಆಡುವ 11ರ ಬಳಗದಲ್ಲಿ ಇದ್ದ ಪ್ರತಿ ಆಟಗಾರರು ಪ್ರತಿ ಪಂದ್ಯಕ್ಕೆ 15 ಲಕ್ಷ ರೂ. ಹಾಗೂ ಮೀಸಲು ಆಟಗಾರರು ಪ್ರತಿ ಪಂದ್ಯಕ್ಕೆ 7.5 ಲಕ್ಷ ರೂ. ಮತ್ತು ಕೋಚ್ ಗಳಿಗೆ 25 ಲಕ್ಷ ರೂ. ಪಡೆಯಲಿದ್ದಾರೆ. ಉಳಿದಂತೆ ತಂಡದ ಸಹಾಯಕ ಸಿಬ್ಬಂದಿ ಅವರ ವೇತನಕ್ಕೆ ಸಮಾನವಾಗಿ ಬಹುಮಾನ ಪಡೆಯಲಿದ್ದಾರೆ.

    ಇದರಂತೆ ಸರಣಿಯಲ್ಲಿ ಎಲ್ಲಾ 4 ಪಂದ್ಯಗಳನ್ನಾಡಿದ ಆಟಗಾರರು ತಲಾ 60 ಲಕ್ಷ ರೂ. ಬಹುಮಾನವಾಗಿ ಪಡೆಯಲಿದ್ದಾರೆ. ಅಲ್ಲದೇ ಟೆಸ್ಟ್ ಸರಣಿಯ ಗೆಲುವಿನಲ್ಲಿ ಟೀಂ ಇಂಡಿಯಾ ಪರ ಪ್ರಮುಖ ಪಾತ್ರವಹಿಸಿದ್ದ ಚೇತೇಶ್ವರ ಪೂಜಾರ ಅವರಿಗೂ ಭರ್ಜರಿ ಗಿಫ್ಟ್ ನೀಡುವ ಸಾಧ್ಯತೆ ಇದ್ದು, ಬಿಸಿಸಿಐ ವಾರ್ಷಿಕ ಒಪ್ಪಂದದಲ್ಲಿ ‘ಎ’ ಗ್ರೇಡ್ ಪಟ್ಟಿಯಲ್ಲಿರುವ ಪೂಜಾರನ್ನು ‘ಎ ಪ್ಲಸ್’ ಪಟ್ಟಿಗೆ ಉನ್ನತಿ ನೀಡಲು ಪ್ರಸ್ತಾಪ ಇದೆ ಎನ್ನಲಾಗಿದೆ. ಪ್ರತಿ ವರ್ಷ ಎ ಗ್ರೇಡ್ ಆಟಗಾರರು 5 ಕೋಟಿ ರೂ. ಪಡೆದರೆ, ಎ ಪ್ಲಸ್ ಆಟಗಾರರು ವಾರ್ಷಿಕ 7 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ. 2018ರಲ್ಲಿ ಮೊದಲ ಬಾರಿಗೆ ಬಿಸಿಸಿಐ ತನ್ನ ಒಪ್ಪಂದ ಪಟ್ಟಿಯಲ್ಲಿ ಎ ಪ್ಲಸ್ ಶ್ರೇಣಿಯನ್ನು ನೀಡಿತ್ತು.

    1947-78ರಲ್ಲಿ ಮೊದಲ ಬಾರಿಗೆ ಆಸೀಸ್ ವಿರುದ್ಧ ಟೆಸ್ಟ್ ಸರಣಿ ಆಡಿದ್ದಟೀಂ ಇಂಡಿಯಾ ಇದೂವರೆಗೂ 12 ಸರಣಿಗಳನ್ನು ಆಡಿತ್ತು. ಆದರೆ ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾ ನೆಲದಲ್ಲಿ ಟೆಸ್ಟ್ ಸರಣಿ ಜಯಿಸಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶಟರ್ ಮುರಿದು 7 ಲಕ್ಷ ರೂ. ಮೌಲ್ಯದ ಟಿವಿ, ಮೊಬೈಲ್ ಕಳವು

    ಶಟರ್ ಮುರಿದು 7 ಲಕ್ಷ ರೂ. ಮೌಲ್ಯದ ಟಿವಿ, ಮೊಬೈಲ್ ಕಳವು

    – ಕಳ್ಳರ ಕೈಚಳಕ ಸಿಸಿಟಿವಿಯಲ್ಲಿ ಸೆರೆ

    ರಾಯಚೂರು: ಮನೆಯೊಂದರಲ್ಲಿ ಅಪಾರ ಮೌಲ್ಯದ ಚಿನ್ನಾಭರಣ ಕಳ್ಳತನವಾದ ಬೆನ್ನಲ್ಲೇ ಈಗ ಟಿವಿ ಹಾಗೂ ಮೊಬೈಲ್ ಶೋ ರೂಂನಲ್ಲಿ ಲಕ್ಷಾಂತರ ರೂ. ಬೆಲೆಬಾಳುವ ವಸ್ತುಗಳನ್ನು ಕದ್ದಿರುವ ಘಟನೆ ನಗರದ ಅರಬ್ ಮೊಹಲ್ಲಾ ವೃತ್ತದ ಬಳಿ ನಡೆದಿದೆ.

    ಕಳೆದ ಒಂದು ತಿಂಗಳಿಂದ ನೆಮ್ಮದಿಯಿಂದ ಇದ್ದ ರಾಯಚೂರು ನಗರ ಈಗ ಪುನಃ ಕಳ್ಳರ ಕಾಟಕ್ಕೆ ಭಯಭೀತವಾಗಿದೆ. ಕಳೆದ ರಾತ್ರಿ ಟಿವಿ, ಮೊಬೈಲ್ ಶೋ ರೂಂಗೆ ಖದೀಮರು ಕನ್ನ ಹಾಕಿದ್ದಾರೆ. ಶುಕ್ರವಾರ ರಾತ್ರಿ ಝೆಡ್ ಆನ್ ಪವರ್ ಶೋ ರೂಂನಲ್ಲಿ ಕಳ್ಳತನವಾಗಿದ್ದು, 7 ಲಕ್ಷ ರೂ. ಮೌಲ್ಯದ ಟಿವಿ ಹಾಗೂ ಮೊಬೈಲ್‍ಗಳನ್ನು ದೋಚಲಾಗಿದೆ. ಈ ವೇಳೆ 20 ಸಾವಿರ ರೂ ನಗದು ಹಾಗೂ ಮೊಬೈಲ್ ದೋಚಿರುವ ಕಳ್ಳರ ಕೈಚಳಕ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ರಾತ್ರಿ ಶೋ ರೂಂ ಮುಚ್ಚಿದ ಮೇಲೆ ಶಟರ್ ಮುರಿದು ಒಳನುಗ್ಗಿದ ಕಳ್ಳರು, ಇಡೀ ಶೋ ರೂಂ ತುಂಬಾ ಓಡಾಡಿದ್ದು ಕೈಗೆ ಸಿಕ್ಕ ವಸ್ತುಗಳನ್ನ ಕದ್ದು ಪರಾರಿಯಾಗಿದ್ದಾರೆ. ಘಟನೆ ಕುರಿತು ಸದರ್ ಬಜಾರ್ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಿಶೀಲನೆ ಮುಂದುವರಿದಿದೆ.

    https://www.youtube.com/watch?v=Mvcs_BxO4Lk

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮನೆ ಬೀಗ ಮುರಿದು 22 ಲಕ್ಷ ಮೌಲ್ಯದ ಚಿನ್ನಾಭರಣ, 1.50 ಲಕ್ಷ ರೂ. ನಗದು ಕಳ್ಳತನ

    ಮನೆ ಬೀಗ ಮುರಿದು 22 ಲಕ್ಷ ಮೌಲ್ಯದ ಚಿನ್ನಾಭರಣ, 1.50 ಲಕ್ಷ ರೂ. ನಗದು ಕಳ್ಳತನ

    ರಾಯಚೂರು: ಜಿಲ್ಲೆಯ ನಿಜಲಿಂಗಪ್ಪ ಕಾಲೋನಿಯಲ್ಲಿ ಮನೆ ಬೀಗ ಮುರಿದು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ಖದೀಮರು ಕಳ್ಳತನ ಮಾಡಿದ್ದಾರೆ.

    ರಮೇಶ್ ನಾಡಗೌಡ ಎಂಬವರ ಮನೆಯಲ್ಲಿ ಕಳ್ಳತನವಾಗಿದೆ. ನವೆಂಬರ್ 16 ಕ್ಕೆ ಮನೆಗೆ ಬೀಗ ಹಾಕಿ ರಮೇಶ್ ಹಾಗೂ ಅವರ ಕುಟುಂಬದವರು ಊರಿಗೆ ಹೋಗಿದ್ದರು. ಮನೆಯಲ್ಲಿ ಯಾರೂ ಇಲ್ಲದನ್ನು ತಿಳಿದ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ಮೊದಲು ಮನೆಯ ಬೀಗ ಮುರಿದು ನಂತರ ಮನೆಯಲ್ಲಿದ್ದ ಸುಮಾರು 22 ಲಕ್ಷ ಮೌಲ್ಯದ 750 ಗ್ರಾಂ ಚಿನ್ನಾಭರಣ ಹಾಗೂ 1 ಲಕ್ಷ 50 ಸಾವಿರ ರೂಪಾಯಿ ನಗದು ಕಳ್ಳತನ ಮಾಡಲಾಗಿದೆ.

    ಊರಿಗೆ ಹೋಗಿದ್ದ ರಮೇಶ್ ಹಾಗೂ ಅವರ ಕುಟುಂಬಸ್ಥರು ಇಂದು ಮನೆಗೆ ಮರಳಿದಾಗ ಕಳ್ಳತನ ಆಗಿರುವುದು ಬೆಳಕಿಗೆ ಬಂದಿದೆ.

    ಘಟನೆ ಕುರಿತು ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv