Tag: ಧರ್ಮ

  • ಬಿಎಸ್‍ವೈ, ಶೆಟ್ಟರ್ ಚುನಾವಣೆಯಲ್ಲಿ ಲಿಂಗಾಯತರಲ್ಲ ಎಂದು ಹೇಳಿಕೊಳ್ಳಲಿ: ನಿಜಗುಣಾನಂದ ಸ್ವಾಮೀಜಿ

    ಬಿಎಸ್‍ವೈ, ಶೆಟ್ಟರ್ ಚುನಾವಣೆಯಲ್ಲಿ ಲಿಂಗಾಯತರಲ್ಲ ಎಂದು ಹೇಳಿಕೊಳ್ಳಲಿ: ನಿಜಗುಣಾನಂದ ಸ್ವಾಮೀಜಿ

    – ಪೇಜಾವರ ಶ್ರೀ ಲಿಂಗಾಯತ ಧರ್ಮಕ್ಕೆ ಮಾರ್ಗದರ್ಶನ ಮಾಡೋದು ಬೇಡ ಎಂದ ಸ್ವಾಮೀಜಿ

    ಧಾರವಾಡ: ಅಧಿಕಾರಕ್ಕೊಸ್ಕರ ನಾನು ಲಿಂಗಾಯತ ಎಂದು ಹೇಳಿಕೊಳ್ಳುತ್ತಿರುವ ಯಡಿಯೂರಪ್ಪ ಹಾಗೂ ಜಗದೀಶ್ ಶೆಟ್ಟರ್ ಮುಂದಿನ ಚುನಾವಣೆಯಲ್ಲಿ ನಾವು ಲಿಂಗಾಯತರಲ್ಲ ಎಂದು ಚುನಾವಣೆಗೆ ಹೋಗಲಿ ನೋಡೋಣ ಎಂದು ಧಾರವಾಡದ ಮುಂಡರಗಿ ಬೈಲೂರು ಮಠದ ನಿಜಗುಣಾನಂದ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ.

    ಲಿಂಗಾಯತರಾಗಿ ಅಧಿಕಾರವನ್ನು ಪಡೆದುಕೊಂಡಿರುವ ಯಡಿಯೂರಪ್ಪ ಅವರಾಗಲೀ, ಜಗದೀಶ್ ಶೆಟ್ಟರ್ ಅವರಾಗಲೀ ಲಿಂಗಾಯತ ಎಂಬ ಹೆಸರಿನ ಮೇಲೆ ನೀವು ಅಧಿಕಾರವನ್ನು ಅನುಭವಿಸಿರುವಂತವರು. ನೀವು ಲಿಂಗಾಯತ ಧರ್ಮಕ್ಕೆ ನ್ಯಾಯ ಕೊಡಿ. ಇಲ್ಲವಾದರೆ ನೀವು ಮುಂದಿನ ಸಲ ಚುನಾವಣೆಗೆ ನಿಲ್ಲುವಾಗ ಲಿಂಗಾಯತರಲ್ಲ ಎಂದು ಚುನಾವಣೆಗೆ ಹೋಗಿ ಎಂದು ಸ್ವಾಮೀಜಿ ಹೇಳಿದ್ದಾರೆ.

    ಇದೇ ವೇಳೆ ಪೇಜಾವರ ಶ್ರೀ ಹೇಳಿಕೆಗೆ ಪ್ರತಿಕ್ರಿಯಿಸಿದ ಸ್ವಾಮೀಜಿ, ಈ ದೇಶದಲ್ಲಿ ಹಿಂದೂ ಧರ್ಮವೇ ಇಲ್ಲ ಎಂದು ಪೂಜ್ಯರು ತಿಳಿದುಕೊಳ್ಳಲಿ. ಪೇಜಾವರ ಶ್ರೀಗಳು ಒಂದು ಮತಕ್ಕೆ ಸೇರಿದವರು. ಅವರ ಸಮಾಜವನ್ನು ಬೆಳೆಸುವುದು ಅವರ ಕರ್ತವ್ಯ. ಆದರೆ ಎಲ್ಲದಕ್ಕೂ ನಾವೇ ಎಂದು ಹೇಳಿಕೊಳ್ಳೋದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದ್ರು.

    ಮಾರ್ಗದರ್ಶನ ಬೇಡ: ಪೇಜಾವರ ಶ್ರೀಗಳು ನಮ್ಮ ಲಿಂಗಾಯತ ಧರ್ಮಕ್ಕೆ ಮಾರ್ಗದರ್ಶನ ಮಾಡೊದು ಬೇಡ. ಶ್ರೀಗಳು ತಮ್ಮ ಧರ್ಮವನ್ನ ಬೆಳೆಸೋದು ಅವರ ಕರ್ತವ್ಯ. ಆದರೆ ಎಲ್ಲ ಸಮಾಜಗಳ ನೇತಾರ ಎಂದು ಪ್ರತಿಬಿಂಬಿಸುವುದು ಮಹಾಪರಾಧ. ನಮಗೆ ಇಲ್ಲಿ ಚಾತುವರ್ಣದ ಮನಸ್ಸು ಎದ್ದು ಕಾಣುತ್ತಿದೆ. ಅವರ ಮಾರ್ಗದರ್ಶನ ನಮಗೆ ಬೇಡ. ನಮ್ಮ ಸಮಾಜದಲ್ಲಿ 3000 ವಿರಕ್ತ ಸ್ವಾಮೀಜಿಗಳಿದ್ದಾರೆ. ನಮಗೆ ಸಹಾಯ ಮಾಡಬೇಕಾದರೆ ಸರ್ಕಾರಕ್ಕೆ ಸ್ವತಂತ್ರ ಧರ್ಮದ ಬಗ್ಗೆ ಒತ್ತಾಯ ಮಾಡಲಿ ಎಂದು ತಿರುಗೇಟು ನೀಡಿದರು.

    ಹೋರಾಟಕ್ಕೆ ಬೆಂಬಲ ನೀಡಲಿ: ಲಿಂಗಾಯತ ಧರ್ಮಕ್ಕೆ ತನ್ನದೇ ಆದ ಸಿದ್ಧಾಂತ ಇದೆ. ಪೇಜಾವರ ಶ್ರೀಗಳು ಲಿಂಗಾಯತ ಹೋರಾಟಕ್ಕೆ ಅವಶ್ಯಕತೆ ಇಲ್ಲ. ಪೇಜಾವರ ಶ್ರೀಗಳು ಗೊಂದಲದಲ್ಲಿ ಇದ್ದಾರೆ. ಅವರು ನಡುವೆ ಮೂಗು ತೂರಿಸೋದು ಬಿಟ್ಟು ಹೋರಾಟಕ್ಕೆ ಬೆಂಬಲ ನೀಡಲಿ. ಸಾಮಾಜಿಕ ವ್ಯವಸ್ಥೆಯಲ್ಲಿ ಮಾರ್ಗದರ್ಶನ ನೀಡಲಿ. ಇಲ್ಲ ಅಂದ್ರೆ ಅವರು ಈ ರೀತಿಯ ಹೇಳಿಕೆಯನ್ನು ನೀಡೋದು ಬಿಡಲಿ. ನಮಗೆ ಅವರ ಮಾರ್ಗದರ್ಶನದ ಅವಶ್ಯಕತೆ ಇಲ್ಲ. ಗೊತ್ತಿದ್ರೂ ಗೊತ್ತಿಲ್ಲದಂತೆ ಇರೋದು ಬೇಡ ಅಂತ ನಿಜಗುಣಾನಂದ ಸ್ವಾಮೀಜಿ ಹೇಳಿದ್ರು.

    ಮಂಗಳವಾರದಂದು ಪೇಜಾವರ ಶ್ರೀ ಲಿಂಗಾಯತ ಮತ್ತು ವೀರಶೈವ ವಿವಾದಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದರು. ವಿವಾದ ತಾರಕಕ್ಕೇರಿದೆ, ಆದರೆ ಲಿಂಗಾಯತರೇಕೆ ಹಿಂದೂಗಳಲ್ಲ? ನಾವು ಒಂದಾಗಿ ಇರುವುದು ಉತ್ತಮ. ಹಿಂದೂ ಧರ್ಮದೊಳಗೆ ನೀವು ಜೊತೆಗಿದ್ದರೆ ಲಿಂಗಾಯತ ಸಮಾಜಕ್ಕೆ ಹೆಚ್ಚಿನ ಬಲ ಬರುತ್ತದೆ. ಶಿವನೇ ಸರ್ವೋತ್ತಮ ಎನ್ನುವ ನೀವು ಪಂಚಾಕ್ಷರಿ ಜಪ, ಲಿಂಗಪೂಜೆ ಮಾಡುವುದರಿಂದ, ಇದನ್ನು ಒಪ್ಪಿರುವುದರಿಂದ ನೀವು ಬೇರೆಯಾಗುವುದು ಹೇಗೆ ಎಂದು ಪ್ರಶ್ನಿಸಿದ್ದರು.

    ಹಿಂದೂಗಳಲ್ಲ ಅನ್ನೋದು ಹೇಗೆ? ಏಕ ದೇವತಾವಾದ ಎಲ್ಲರೂ ಒಪ್ಪಿದ್ದಾರೆ. ಎಲ್ಲಾ ಹಿಂದೂಗಳು ಶಿವನನ್ನು ಆರಾಧಿಸುತ್ತಾರೆ. ಹಾಗಾದ್ರೆ ಹಿಂದೂಗಳು ಯಾರು? ನನಗೆ ಉತ್ತರ ಕೊಡಿ. ನಮ್ಮನ್ನು ಬಿಟ್ಟು ನೀವು ದೂರ ಹೋಗದಿರಿ. ನೀವು ನನ್ನ ಸಹೋದರರಿದ್ದಂತೆ. ನಾನು ಸಲಹೆ ಕೊಡುತ್ತೇನೆ ಎಂದು ಪೇಜಾವರ ಶ್ರೀ ಹೇಳಿದ್ದರು. ಬಸವಣ್ಣನವರ ದುರಂತಕ್ಕೆ ಬ್ರಾಹ್ಮಣರು ಕಾರಣರಲ್ಲ. ಈ ವಾದವೂ ಸರಿಯಲ್ಲ. ಹಳೇ ಕಾಲದ ತಪ್ಪಿಗೆ ಈಗಿನವರ ಮೇಲೆ ಆರೋಪ ಎಷ್ಟು ಸರಿ? ಮಾಧ್ವರಿಂದ ಬಸವಣ್ಣರಿಗೆ ಏನೂ ಅನ್ಯಾಯವಾಗಿಲ್ಲ. ನನ್ನದಿದು ಪ್ರೇಮದ ಸಲಹೆ. ಹಿಂದೂ ಧರ್ಮ ಬಿಟ್ಟು ಹೋಗಬೇಡಿ ಎಂದು ಹೇಳಿದ್ದರು.

  • ಗೌರಿ ಹಂತಕರ ಶಂಕಿತ ರೇಖಾಚಿತ್ರದಲ್ಲೂ ಹಿಂದೂಗಳೇ ಟಾರ್ಗೆಟ್: ವಿಶ್ವ ಹಿಂದೂ ಪರಿಷದ್

    ಗೌರಿ ಹಂತಕರ ಶಂಕಿತ ರೇಖಾಚಿತ್ರದಲ್ಲೂ ಹಿಂದೂಗಳೇ ಟಾರ್ಗೆಟ್: ವಿಶ್ವ ಹಿಂದೂ ಪರಿಷದ್

    ಉಡುಪಿ: ಪತ್ರಕರ್ತೆ, ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ ಹಂತಕರ ಕುಂಕುಮಧಾರಿ ಶಂಕಿತ ರೇಖಾಚಿತ್ರ ಬಿಡುಗಡೆ ಮಾಡಿರುವ ಪೊಲೀಸರು ಮತ್ತು ರಾಜ್ಯ ಸರ್ಕಾರದ ವಿರುದ್ಧ ವಿಶ್ವ ಹಿಂದೂ ಪರಿಷದ್ ಸಂಘಟನಾ ಕಾರ್ಯದರ್ಶಿ ಗೋಪಾಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಆರೋಪಿಗಳ ಕುಂಕುಮಧಾರಿ ಶಂಕಿತನ ರೇಖಾಚಿತ್ರ ಬಿಡುಗಡೆ ಹಿನ್ನೆಲೆಯಲ್ಲಿ ಹಿಂದೂಗಳನ್ನು ಟಾರ್ಗೆಟ್ ಮಾಡುತ್ತಿದ್ದಾರೆಂದು ಆರೋಪಿಸಿದರು.

    ಗೌರಿ ಹತ್ಯೆ ವಿಚಾರ ನನಗೂ ದುಃಖ ತಂದಿದೆ. ಆದರೆ ಕುಂಕುಮ ಪ್ರದರ್ಶನ ಹಿಂದೆ ರಾಜಕೀಯ ಇದೆ. ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಸಂಘ ಪರಿವಾರವನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಕಲ್ಬುರ್ಗಿ ಹತ್ಯೆ ನಡೆದಾಗಲೂ ಸಂಘ ಪರಿವಾರವನ್ನು ಟಾರ್ಗೆಟ್ ಮಾಡಿದ್ದರು. ಆದರೆ ಇದುವರೆಗೂ ಸಾಬೀತುಪಡಿಸಲು ಸಾಧ್ಯವಾಗಿಲ್ಲ. ಸಂಘ ಪರಿವಾರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ನಡೆಯುತ್ತಲೇ ಇದೆ. ಸಿದ್ದರಾಮಯ್ಯ ಬಜರಂಗದಳ ನಾಶದ ಬಗ್ಗೆ ಮಾತನಾಡುತ್ತಲೇ ಬಂದಿದ್ದಾರೆ. ತನಿಖೆ ನಡೆಸಲಿ ಸತ್ಯ ಹೊರಬರುತ್ತದೆ ಅಂತ ಹೇಳಿದರು.

    ಮೌಢ್ಯ ಪ್ರತಿಬಂಧಕ ವಿಧೇಯ ಜಾರಿ ವಿಚಾರದಲ್ಲಿಯೂ ಹಿಂದೂಗಳನ್ನೇ ಟಾರ್ಗೆಟ್ ಮಾಡಿದ್ದಾರೆ. ಹಿಂದೂ ಧರ್ಮದಲ್ಲಿ ಮೌಢ್ಯವಿಲ್ಲ, ಅದು ಇರೋದು ಕ್ರೈಸ್ತರಲ್ಲಿ, ಭೂಮಿ ಇಂದಿಗೂ ಗೋಲಾಕಾರವಿದೆ ಎಂದು ಕ್ರೈಸ್ತರು ನಂಬುವುದಿಲ್ಲ. ಆದರೆ ಹಿಂದೂ ಧರ್ಮದ ನಂಬಿಕೆಯನ್ನು ಮೌಢ್ಯ ಎನ್ನಲಾಗುತ್ತಿದೆ. ನಂಬಿಕೆಯನ್ನು ಮೌಢ್ಯ ಎಂದರೆ ಒಪ್ಪಲಾಗದು ಎಂದು ಸರ್ಕಾರದ ವಿರುದ್ಧ ವಾಗ್ವಾದ ನಡೆಸಿದರು.

    ಧರ್ಮ ಸಂಸತ್ತು: ನವೆಂಬರ್ 24, 25, 26ಕ್ಕೆ ಧರ್ಮ ಸಂಸತ್ತು ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ರವಿಶಂಕರ್ ಗುರೂಜಿ, ಬಾಬಾ ರಾಮ್ ದೇವ್, ಯೋಗಿ ಆದಿತ್ಯನಾಥ್, ಮಾತಾ ಅಮೃತಾನಂದಮಯಿ ಬರುತ್ತಾರೆ. ದೇಶ ರಾಜ್ಯದ ಧಾರ್ಮಿಕ ಪ್ರಮುಖರು ಪಾಲ್ಗೊಳ್ಳುತ್ತಾರೆ. ಅಯೋಧ್ಯಾ ರಾಮಮಂದಿರ ನಿರ್ಮಾಣದ ಚರ್ಚೆಯಾಗಲಿದೆ. ಅಸ್ಪೃಷ್ಯತೆ, ಗೋರಕ್ಷಣೆ, ಮತಾಂತರ ವಿಚಾರಗಳ ಬಗ್ಗೆ ವಿಚಾರ ಮಂಡನೆಯಾಗಲಿದೆ. ಧರ್ಮಸಂಸತ್ತಿನಲ್ಲಿ ಸಂತರೇ ಹಲವು ನಿರ್ಣಯ ಮಾಡಲಿದ್ದಾರೆ. ನ.26 ರಾಜ್ಯದ ಎಲ್ಲಾ ಜಾತಿ ಪ್ರಮುಖರು ಬರುತ್ತಾರೆ. ಈ ಕಾರ್ಯಕ್ರಮಕ್ಕೆ 3500 ಜಾತಿ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಹಿಂದೂ ಧರ್ಮದ ಮೇಲಿನ ಆಕ್ರಮಣ ಹೆಚ್ಚಾಗಿದ್ದು, ಹಿಂದೂ ಧರ್ಮದ ಜನರಲ್ಲಿ ಜಾಗೃತಿ ನಡೆಯಲಿದೆ ಗೋಪಾಲ್ ತಿಳಿಸಿದರು.

    https://www.youtube.com/watch?v=9WT11xFPWIc

    https://www.youtube.com/watch?v=gMCRfdWRT8w

  • ಮೋಹನ್ ಭಾಗವತ್ ಈ ಕಾರಣಕ್ಕೆ ಲಿಂಗಾಯತ ಧರ್ಮವನ್ನು ಬೆಂಬಲಿಸಲಿ: ಡಾ. ಮಾತೆ ಮಹಾದೇವಿ

    ಮೋಹನ್ ಭಾಗವತ್ ಈ ಕಾರಣಕ್ಕೆ ಲಿಂಗಾಯತ ಧರ್ಮವನ್ನು ಬೆಂಬಲಿಸಲಿ: ಡಾ. ಮಾತೆ ಮಹಾದೇವಿ

    ಬಾಗಲಕೋಟೆ: ಲಿಂಗಾಯತ ಧರ್ಮ ಹಿಂದೂ ಸಂಸ್ಕೃತಿ ವಿರೋಧಿಯಲ್ಲ. ಅದಕ್ಕೆ ಕಳವಳ ಬೇಡ. ಇದೊಂದು ಸ್ವತಂತ್ರ ಧರ್ಮವೇ ಹೊರತು ಜಾತಿಯಲ್ಲ. ಹೀಗಾಗಿ ಮೋಹನ್ ಭಾಗವತ್ ಅವರು ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರವನ್ನು ಬೆಂಬಲಿಸಲಿ ಎಂದು ಬಸವಧರ್ಮ ಪೀಠಾಧ್ಯಕ್ಷೆ ಡಾ. ಮಾತೆ ಮಹಾದೇವಿ ಹೇಳಿದ್ದಾರೆ.

    ಇಂದು ಬಾಗಲಕೋಟೆಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪ್ರತ್ಯೇಕ ಧರ್ಮಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪ ಅವರು ಈ ಹಿಂದೆ ಒಪ್ಪಿಕೊಂಡಿದ್ದರು. ಈಗ ಬಿಜೆಪಿ ಹೈಕಮಾಂಡ್ ತಾಕೀತು ಮಾಡಿದ ಹಿನ್ನೆಲೆಯಲ್ಲಿ ಸುಮ್ಮನಾಗಿದ್ದಾರೆ. ಅವರಿಗೆ ಅಧ್ಯಯನದ ಕೊರತೆ ಮತ್ತು ಆತ್ಮವಿಶ್ವಾಸದ ಕೊರತೆಯಿಂದ ಮಾತನಾಡದೇ ಇರಬಹುದು. ಹೀಗಾಗಿ ಬಿಜೆಪಿ ಆದರ್ಶತನ ಬೇರೆಯಾಗಿದ್ದರಿಂದಲೇ ಅವರು ಮಾತನಾಡುತ್ತಿಲ್ಲ ಎಂದರು.

    ಕುರುಬ ಮತ್ತು ಒಕ್ಕಲಿಗ ಪ್ರತ್ಯೇಕ ಧರ್ಮ ಬೇಡಿಕೆ ವಿಚಾರದಲ್ಲಿ ಅವರಿಗೆ ಧರ್ಮ ಸಂಸ್ಥಾಪಕರಿಲ್ಲ. ದೀಕ್ಷಾ ಸಂಸ್ಕಾರ ಇಲ್ಲ. ಹೀಗಾಗಿ ಕುರುಬ ಮತ್ತು ಒಕ್ಕಲಿಗ ಸಮುದಾಯ ಪ್ರತ್ಯೇಕ ಧರ್ಮದ ಅರ್ಹತೆ ಪಡೆಯೋದಿಲ್ಲ ಎಂದು ಹೇಳಿದರು.

    ಸಿದ್ಧಗಂಗಾ ಶ್ರೀಗಳು ಪ್ರತ್ಯೇಕ ಧರ್ಮಕ್ಕೆ ಪ್ರತಿಕ್ರಿಯೆ ನೀಡದೇ ಇರೋ ವಿಚಾರದಲ್ಲಿ ಸಿದ್ಧಗಂಗಾ ಶ್ರೀಗಳಿಗೂ ಅಧ್ಯಯನ ಕೊರತೆಯೋ ಅಥವಾ ಆತ್ಮವಿಶ್ವಾಸದ ಕೊರತೆಯೋ ಗೊತ್ತಿಲ್ಲ. ಆದರೆ ಯಾರೇ ಮನವಿ ನೀಡಿದರೂ ಸಿಎಂ ಸಿದ್ದರಾಮಯ್ಯ ಅವರು ವಿಚಾರವಾದಿಗಳು, ಬಸವಣ್ಣನ ತತ್ವದಲ್ಲಿ ನಂಬಿಕೆ ಇಟ್ಟವರು. ಹೀಗಾಗಿ ಪ್ರತ್ಯೇಕ ಧರ್ಮಕ್ಕೆ ಶಿಫಾರಸ್ಸು ಮಾಡಲಿ ಎಂದರು.

    ಆ.22ರಂದು ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ಬೆಳಗಾವಿಯಲ್ಲಿ ಬೃಹತ್ ರ್ಯಾಲಿ ಮತ್ತು ಮಹಾರಾಷ್ಟ್ರದಲ್ಲೂ ರ್ಯಾಲಿ ನಡೆಸಿ ಬೆಂಗಳೂರಿನಲ್ಲಿ ಸಮಾರೋಪ ಸಮಾವೇಶವನ್ನ ಅಕ್ಟೋಬರ್ 30ರಂದು ನಡೆಸಲಾಗುವುದು ಎಂದು ಅವರು ಹೇಳಿದರು.