Tag: ಧರ್ಮೆಂದ್ರ ಪ್ರಧಾನ್

  • ರಾಜ್ಯ ವಿಧಾನಸಭೆ ಚುನಾವಣೆ ತಯಾರಿ – ಉಸ್ತುವಾರಿಗಳನ್ನು ನೇಮಿಸಿದ ಬಿಜೆಪಿ

    ರಾಜ್ಯ ವಿಧಾನಸಭೆ ಚುನಾವಣೆ ತಯಾರಿ – ಉಸ್ತುವಾರಿಗಳನ್ನು ನೇಮಿಸಿದ ಬಿಜೆಪಿ

    ನವದೆಹಲಿ: ರಾಜ್ಯ ಬಿಜೆಪಿ (BJP) ಚುನಾವಣಾ (Election) ಉಸ್ತುವಾರಿಯಾಗಿ ಕೇಂದ್ರ ಸಚಿವ ಧಮೇಂದ್ರ ಪ್ರಧಾನ್ (Dharmendra Pradhan) ಹಾಗೂ ಸಹ ಉಸ್ತುವಾರಿಯಾಗಿ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ (Annamalai) ಅವರನ್ನು ಹೈಕಮಾಂಡ್ ನೇಮಕ ಮಾಡಿದೆ.

    ಇಂದು ಅಧಿಕೃತ ಆದೇಶ ಪ್ರಕಟವಾಗಿದ್ದು ರಾಜ್ಯ ವಿಧಾನಸಭೆ ಚುನಾವಣೆಗೆ (Karnataka Assembly Election) ಬಿಜೆಪಿ ಅಧಿಕೃತ ತಾಲೀಮು ಆರಂಭಿಸಿದಂತಾಗಿದೆ. ಕಳೆದ ಬಾರಿಯೂ ಉಸ್ತುವಾರಿಯಾಗಿದ್ದ ಧಮೇಂದ್ರ ಪ್ರಧಾನ್ ಅವರನ್ನು ಹೈಕಮಾಂಡ್ ಈ ಬಾರಿಯೂ ಮುಂದುವರಿಸಿದ್ದು, ರಾಜಕೀಯ ನಿರ್ಧಾರಗಳಿಗೆ ಸುಲಭವಾಗಲಿದೆ ಎನ್ನಲಾಗಿದೆ. ರಾಜ್ಯದಲ್ಲಿ ಖಡಕ್ ಪೊಲೀಸ್ ಅಧಿಕಾರಿಯಾಗಿದ್ದ ಅಣ್ಣಾಮಲೈಗೆ ಸ್ಥಳೀಯ ಮಟ್ಟದ ರಾಜಕಾರಣ ಗೊತ್ತಿರುವ ಹಿನ್ನೆಲೆ ಅವರನ್ನು ಸಹ ಉಸ್ತುವಾರಿಯಾಗಿ ನೇಮಕ ಮಾಡಲಾಗಿದೆ ಎಂದು ಮೂಲಗಳು ಹೇಳಿವೆ. ಇದನ್ನೂ ಓದಿ: ನನ್ನ ರಕ್ತದ ಕಣ ಕಣದಲ್ಲೂ ಕಾಂಗ್ರೆಸ್ ಇದೆ, ಬಿಜೆಪಿ ಬಿಡೋಕೆ ಸಿದ್ಧ – ಹೆಚ್. ವಿಶ್ವನಾಥ್

    ಉಭಯ ನಾಯಕರು ರಾಜ್ಯಕ್ಕೆ ಆಗಮಿಸಲಿದ್ದು ಉಸ್ತುವಾರಿ ಅರುಣ್ ಸಿಂಗ್ (Arun Singh) ಜೊತೆಗೂಡಿ ರಾಜಕೀಯ ಪರಿಸ್ಥಿತಿಗಳನ್ನು ಪರಿಶೀಲಿಸಲಿದ್ದು, ಬಳಿಕ ಗೆಲುವಿಗೆ ಅಗತ್ಯವಿರುವ ತಯಾರಿಗಳನ್ನು ಆರಂಭಿಸಲಿದ್ದಾರೆ. ಈ ಬಾರಿ ಪೂರ್ಣ ಪ್ರಮಾಣದ ಬಹುಮತ ಪಡೆಯುವ ನಿಟ್ಟಿನಲ್ಲಿ ಬಿಜೆಪಿ ಪ್ರಯತ್ನಗಳನ್ನು ಆರಂಭಿಸಿದೆ. ಇದನ್ನೂ ಓದಿ: ಟ್ರಾಫಿಕ್‌ ದಂಡಕ್ಕೆ ಶೇ.50 ಡಿಸ್ಕೌಂಟ್‌ – ಯಾವುದಕ್ಕೆ ಎಷ್ಟು?

    ಧಮೇಂದ್ರ ಪ್ರಧಾನ್, ಅಣ್ಣಾಮಲೈ ಆಯ್ಕೆ ಹಿಂದಿನ ಲೆಕ್ಕಾಚಾರ ಏನು?
    ಧಮೇಂದ್ರ ಪ್ರಧಾನ್, ಹಿಂದುಳಿದ ವರ್ಗಗಳ ನಾಯಕರಾಗಿದ್ದು, ರಾಜ್ಯದ ಹಿಂದುಳಿದ ವರ್ಗಗಳ ಮೇಲೆ ಕೇಸರಿ ಕಣ್ಣು ಬಿದ್ದಿದೆ. ಮೇಲ್ವರ್ಗದ ಮತಗಳು ಬಿಜೆಪಿಗೆ ಬಹುತೇಕ ಫಿಕ್ಸ್. ಮೀಸಲಾತಿ ಹೆಚ್ಚಳ ಹಿನ್ನೆಲೆಯಲ್ಲಿ ಎಸ್‍ಸಿ, ಎಸ್‍ಟಿ ವರ್ಗಗಳ ಹೆಚ್ಚಿನ ಮತಗಳೂ ಬಿಜೆಪಿ ಬುಟ್ಟಿಗೆ ಹೀಗಾಗಿ ಈಗ ಹಿಂದುಳಿದ ವರ್ಗಗಳ ಮತಗಳನ್ನು ಸೆಳೆಯುವ ಲೆಕ್ಕಾಚಾರದಲ್ಲಿ ಧಮೇರ್ಂದ್ರ ಪ್ರಧಾನ್ ನೇಮಕವಾಗಿದೆ. ಈ ಹಿಂದೆಯೂ ರಾಜ್ಯ ಚುನಾವಣಾ ಉಸ್ತುವಾರಿಯಾಗಿದ್ದ ಧಮೇಂದ್ರ ಪ್ರಧಾನ್, ರಾಜ್ಯ ರಾಜಕಾರಣದ ಮೇಲೆ ಹಿಡಿತ ಹೊಂದಿದ್ದಾರೆ. ರಾಜ್ಯದ ನಾಯಕರು, ಸಂಘಟನೆ, ರಾಜ್ಯದ ರಾಜಕೀಯ ಚಿತ್ರಣದ ಜ್ಞಾನ ಇದೆ.

    ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಕರ್ನಾಟಕದಲ್ಲೂ ಫೇಮಸ್. ರಾಜ್ಯದ ತಮಿಳು ಭಾಷಿಕರ ಮತಗಳನ್ನು ಸೆಳೆಯಲು ಅಣ್ಣಾಮಲೈಗೆ ಸಹ ಉಸ್ತುವಾರಿ ಜವಾಬ್ದಾರಿ ನೀಡಲಾಗಿದೆ. ರಾಜ್ಯದಲ್ಲಿ ಖಡಕ್ ಪೊಲೀಸ್ ಅಧಿಕಾರಿಯಾಗಿ ಗಮನ ಸೆಳೆದಿದ್ದ ಅಣ್ಣಾಮಲೈ, ಕರ್ನಾಟಕದಲ್ಲೂ ತಮ್ಮದೇ ಆದ ಫ್ಯಾನ್ ಫಾಲೋಯಿಂಗ್ ಹೊಂದಿದ್ದಾರೆ ಹಾಗಾಗಿ ಇವರಿಬ್ಬರಿಗೆ ಮಣೆ ಹಾಕಲಾಗಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮಾತೃಭಾಷೆಯಲ್ಲಿ ವೃತ್ತಿಪರ ಶಿಕ್ಷಣ ಸಿಗಬೇಕು ಹಾಗಾಗಿ ಹಿಂದಿ ಭಾಷೆಯಲ್ಲಿ ಪ್ರಯತ್ನ: ಧರ್ಮೇಂದ್ರ ಪ್ರಧಾನ್

    ಮಾತೃಭಾಷೆಯಲ್ಲಿ ವೃತ್ತಿಪರ ಶಿಕ್ಷಣ ಸಿಗಬೇಕು ಹಾಗಾಗಿ ಹಿಂದಿ ಭಾಷೆಯಲ್ಲಿ ಪ್ರಯತ್ನ: ಧರ್ಮೇಂದ್ರ ಪ್ರಧಾನ್

    ಮಂಗಳೂರು: ಭಾರತೀಯ ಐಐಟಿಗಳು (IIT) ವಿಶ್ವಮಟ್ಟದಲ್ಲಿ ಬ್ರ್ಯಾಂಡ್ ಆಗಿದ್ದು, ಮುಂದಿನ ಎರಡು ವರ್ಷಗಳಲ್ಲಿ ವಿದೇಶಗಳಲ್ಲಿಯೂ ಸ್ಥಾಪನೆಯಾಗಲಿವೆ. ಹಿಂದಿ (Hindi) ಭಾಷೆಯಲ್ಲಿ ವೈದ್ಯಕೀಯ ಶಿಕ್ಷಣ ನೀಡುವ ನಿಟ್ಟಿನಲ್ಲಿ ಮಧ್ಯಪ್ರದೇಶದಲ್ಲಿ ಆರಂಭಿಕ ಪ್ರಯತ್ನಗಳನ್ನು ಮಾಡಲಾಗಿದೆ. ಮಾತೃಭಾಷೆಯಲ್ಲಿ ವೃತ್ತಿಪರ ಶಿಕ್ಷಣ ಲಭಿಸಬೇಕು ಎಂಬುದು ಶಿಕ್ಷಣ ನೀತಿಯ ಸಾರವಾಗಿದೆ ಎಂದು ಕೇಂದ್ರದ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲ ಸಚಿವರಾದ ಧರ್ಮೇಂದ್ರ ಪ್ರಧಾನ್ (Dharmendra Pradhan) ಅವರು ತಿಳಿಸಿದರು.

    ಸುರತ್ಕಲ್‍ನ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯಲ್ಲಿ (NITK) ಕೇಂದ್ರೀಯ ಸಂಶೋಧನಾ ಸೌಲಭ್ಯ (CRF) ಕೇಂದ್ರವನ್ನು ಲೋಕಾರ್ಪಣೆಗೊಳಿಸಿದ ನಂತರ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಶಿಕ್ಷಣ ನೀತಿ ಮೂಲಕ ಶಿಕ್ಷಣ ಸಂಸ್ಥೆಗಳಲ್ಲಿ ಹಿಂದಿ ಹೇರಿಕೆಯ ಯಾವ ಉದ್ದೇಶವೂ ಇಲ್ಲ. ಎಲ್ಲ ಭಾಷೆಗಳು ಮುಖ್ಯ. ಎಲ್ಲ ಭಾಷೆಗಳಂತೆ ಹಿಂದಿಯೂ ಒಂದಾಗಿದೆ. ಎಲ್ಲ ರಾಜ್ಯಗಳೂ ಆಯಾ ರಾಜ್ಯದ ಸ್ಥಳೀಯ ಹಾಗೂ ಮಾತೃ ಭಾಷೆಗೆ ಆದ್ಯತೆ ನೀಡಲಿವೆ ಎಂದರು. ಇದನ್ನೂ ಓದಿ: ದೇಶದಲ್ಲಿ ಹಿಂದಿ ಶಿಕ್ಷಣ ಜಾರಿ – ನಾಳೆ 13 ಕಾಲೇಜುಗಳಲ್ಲಿ MBBS ಪಠ್ಯ ರಿಲೀಸ್

    ಭಾರತದ ಅಂತಃಸತ್ವವನ್ನು ಹೊಂದಿರುವ ಐಐಟಿ ಮತ್ತು ಐಐಟಿಗಳು ಕೇವಲ ಶಿಕ್ಷಣ ಸಂಸ್ಥೆಗಳಲ್ಲ. ಅವು ಜ್ಞಾನದ ದೇಗುಲಗಳು. ಬರುವ ದಿನಗಳಲ್ಲಿ 10ಕ್ಕೂ ಹೆಚ್ಚಿನ ದೇಶಗಳಲ್ಲಿ ಐಐಟಿಗಳ ಸ್ಥಾಪನೆಯಾಗಲಿವೆ. ಕೇಂದ್ರ ಶಿಕ್ಷಣ ಸಚಿವಾಲಯದ ನೆರವಿನಿಂದ ಹೊರದೇಶಗಳಲ್ಲಿ ಐಐಟಿಗಳನ್ನು ಸ್ಥಾಪನೆ ಮಾಡಲಾಗುತ್ತಿದೆ. ಆ ಪರಿಣಾಮ ಭವಿಷ್ಯದಲ್ಲಿ ಸಾಗರೋತ್ತರ ಐಐಟಿ ಕ್ಯಾಂಪಸ್‍ಗಳು ತಲೆ ಎತ್ತಲಿವೆ ಎಂದು ತಿಳಿಸಿದರು.


    ಭವಿಷ್ಯದಲ್ಲಿ ಹೈಡ್ರೋಜನ್ ಸುಸ್ಥಿರ ಇಂಧನ ಮೂಲವಾಗಲಿದೆ. ಉತ್ತಮ ಮಾರುಕಟ್ಟೆಯೂ ಇದೆ. ಉತ್ಪಾದನೆಯಿಂದ ವಿತರಣೆಯವರೆಗೆ ಬಹಳಷ್ಟು ಅವಕಾಶಗಳಿವೆ. ಎನ್ಐಟಿಕೆಯಂತಹ ಸಂಸ್ಥೆಗಳು ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿರುವುದು ಸಂತಸದ ವಿಚಾರ ಎಂದ ಅವರು ಇಪ್ಪತ್ತೊಂದನೇ ಶತಮಾನದಲ್ಲಿ ಸಾಮರ್ಥ್ಯವರ್ಧನೆಯ ಜೊತೆ ಜಾಗತಿಕ ಸವಾಲುಗಳನ್ನು ಎದುರಿಸಿ ಬೆಳೆಯಲು ಎನ್ಐಟಿಕೆ ಸಮರ್ಥವಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಎತ್ತು ಏರಿಗೆಳೀತು ಕೋಣ ನೀರಿಗಿಳೀತು: ಬಿಜೆಪಿ ವ್ಯಂಗ್ಯ

    ಸಂಸದರಾದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಡಾ.ಭರತ್ ಶೆಟ್ಟಿ, ವೈ. ಎ. ನಾರಾಯಣ ಸ್ವಾಮಿ, ಎನ್‍ಐಟಿಕೆ ನಿರ್ದೇಶಕ ಪ್ರೊ. ಪ್ರಸಾದ್ ಕೃಷ್ಣ, ಕುಲಸಚಿವ ಪ್ರೊ.ಕೆ.ರವೀಂದ್ರನಾಥ್, ಕೇಂದ್ರೀಯ ಸಂಶೋಧನಾ ಸೌಲಭ್ಯದ ಅಧ್ಯಕ್ಷ ಪ್ರೊ. ಎಂ.ಎನ್. ಸತ್ಯನಾರಾಯಣ ಜೊತೆಗಿದ್ದರು.

    Live Tv
    [brid partner=56869869 player=32851 video=960834 autoplay=true]

  • 70 ರೂ. ಪೆಟ್ರೋಲ್ ನಲ್ಲಿ ಯಾರಿಗೆ ಎಷ್ಟು ಪಾಲು? ಬೇರೆ ರಾಷ್ಟ್ರಗಳಲ್ಲಿ ಎಷ್ಟು ದರವಿದೆ?

    70 ರೂ. ಪೆಟ್ರೋಲ್ ನಲ್ಲಿ ಯಾರಿಗೆ ಎಷ್ಟು ಪಾಲು? ಬೇರೆ ರಾಷ್ಟ್ರಗಳಲ್ಲಿ ಎಷ್ಟು ದರವಿದೆ?

    ನವದೆಹಲಿ: ದೀಪಾವಳಿ ಹಬ್ಬದ ವೇಳೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆಯಾಗಲಿದೆ ಎಂದು ಕೇಂದ್ರ ಪೆಟ್ರೋಲಿಯಂ ಖಾತೆಯ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.

    ಅಮೆರಿಕದಲ್ಲಿ ಚಂಡಮಾರುತದಿಂದಾಗಿ ತೈಲ ಉತ್ಪಾದನೆ ಕಡಿಮೆಯಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆಯಾಗಿತ್ತು. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಸುಧಾರಣೆ ಕಾಣಲಿದ್ದು ದೀಪಾವಳಿ ವೇಳೆಗೆ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯಾಗಲಿದೆ ಎಂದು ಅವರು ತಿಳಿಸಿದರು.

    ಜಿಎಸ್‍ಟಿ ವ್ಯಾಪ್ತಿಗೆ ತಂದರೆ ತೈಲ ಕಂಪೆನಿಗಳಿಗೆ ಲಾಭವಾಗಲಿದೆ ಎನ್ನುವ ಆರೋಪವನ್ನು ತಳ್ಳಿ ಹಾಕಿದ ಅವರು ಜಿಎಸ್‍ಟಿ ಅಡಿ ತೈಲಗಳು ಬಂದರೆ ಗ್ರಾಹಕರಿಗೆ ಲಾಭ ಆಗಲಿದೆ ಎಂದರು.

    ಪೆಟ್ರೋಲ್ ಬೆಲೆಯಲ್ಲಿ ಯಾರಿಗೆ ಎಷ್ಟು ಪಾಲು?
    ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಗೆ ಸೆಪ್ಟೆಂಬರ್ 13 ರಂದು 70.38 ರೂ. ಇತ್ತು. ಇದರಲ್ಲಿ 30.70 ರೂ. ಡೀಲರ್ ಶುಲ್ಕ, 21.48 ರೂ. ಅಬಕಾರಿ ಸುಂಕ 3.24 ರೂ. ಡೀಲರ್ ಕಮಿಷನ್, 14.96 ರೂ. ವ್ಯಾಟ್ ತೆರಿಗೆ ಇದೆ.

    ಡೀಸೆಲ್ ಬೆಲೆಯಲ್ಲಿ ಯಾರಿಗೆ ಎಷ್ಟು ಪಾಲು?
    ದೆಹಲಿಯಲ್ಲಿ ಪ್ರತಿ ಲೀಟರ್ ಡೀಸೆಲ್ ಗೆ ಸೆಪ್ಟೆಂಬರ್ 13 ರಂದು 58.72 ರೂ.ಇತ್ತು. ಇದರಲ್ಲಿ 30.54 ರೂ. ಡೀಲರ್ ಶುಲ್ಕ, 17.33 ರೂ. ಅಬಕಾರಿ ಸುಂಕ 2.18 ರೂ. ಡೀಲರ್ ಕಮಿಷನ್, 8.67 ರೂ. ವ್ಯಾಟ್ ತೆರಿಗೆ ಇದೆ.

    ಬೇರೆ ದೇಶಗಳಲ್ಲಿ ಪೆಟ್ರೋಲ್, ಡೀಸೆಲ್, ಎಲ್‍ಪಿಜಿ ದರ ಎಷ್ಟಿದೆ?
    ಪೆಟ್ರೋಲ್: ಭಾರತ(ದೆಹಲಿ) 70.38 ರೂ., ಪಾಕಿಸ್ತಾನ 40.82 ರೂ., ಬಾಂಗ್ಲಾದೇಶ 69.16 ರೂ., ಶ್ರೀಲಂಕಾ 49.80 ರೂ., ನೇಪಾಳ 61.88 ರೂ. ಇದೆ.

    ಡೀಸೆಲ್: ಭಾರತ(ದೆಹಲಿ)58.72 ರೂ., ಪಾಕಿಸ್ತಾನ 47.15 ರೂ., ಬಾಂಗ್ಲಾದೇಶ 52.27 ರೂ., ಶ್ರೀಲಂಕಾ 40.43 ರೂ., ನೇಪಾಳ 46.72 ರೂ. ಇದೆ.

    14.2 ಕೆಜಿ ತೂಕದ ಎಲ್‍ಪಿಜಿ ಸಿಲಿಂಡರ್: ಭಾರತ 487 ರೂ., ಪಾಕಿಸ್ತಾನ 1081.32 ರೂ., ಬಾಂಗ್ಲಾದೇಶ 639.50 ರೂ., ಶ್ರೀಲಂಕಾ 638.68 ರೂ., ನೇಪಾಳ 836.62 ರೂ. ಇದೆ.

    ಪೆಟ್ರೋಲ್ ಜಿಎಸ್‍ಟಿ ಅಡಿ ಬರುತ್ತಾ?
    ಅಡುಗೆ ಅನಿಲ (ಎಲ್‍ಪಿಜಿ), ಸೀಮೆಎಣ್ಣೆ, ನಾಫ್ತಾ ಗಳಿಗೆ ಜಿಎಸ್‍ಟಿ ಅನ್ವಯವಾಗುತ್ತಿದೆ. ಆದರೆ ಡೀಸೆಲ್, ಪೆಟ್ರೋಲ್, ನೈಸರ್ಗಿಕ ಅನಿಲ, ಕಚ್ಚಾ ತೈಲ ಮತ್ತು ವಿಮಾನ ಇಂಧನವನ್ನು ಸದ್ಯಕ್ಕೆ ಜಿಎಸ್‍ಟಿಯಿಂದ ಹೊರಗೆ ಇಡಲಾಗಿದೆ. ರಾಜ್ಯ ಸರ್ಕಾರಗಳು ಮದ್ಯ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ತೆರಿಗೆ ವಿಧಿಸುವ ಅಧಿಕಾರವನ್ನು ಬಿಟ್ಟುಕೊಡಲು ಮುಂದಾಗದ ಹಿನ್ನೆಲೆಯಲ್ಲಿ ಇವುಗಳು ಜಿಎಸ್‍ಟಿ ವ್ಯಾಪ್ತಿಗೆ ಸೇರ್ಪಡೆಯಾಗಿಲ್ಲ.

    ಒಂದು ವೇಳೆ ಪೆಟ್ರೋಲ್ ಜಿಎಸ್‍ಟಿ ಅಡಿ ಬಂದರೆ ಪೆಟ್ರೋಲ್, ಡೀಸೆಲ್ ಬೆಲೆ ಭಾರೀ ಇಳಿಕೆಯಾಗುತ್ತದೆ. ಆದರೆ ಆದಾಯಕ್ಕೆ ಭಾರೀ ಹೊಡೆತ ಬೀಳುವ ಕಾರಣ ಜಿಎಸ್‍ಟಿ ವ್ಯಾಪ್ತಿಗೆ ಸೇರಿಸಲು ರಾಜ್ಯ ಸರ್ಕಾರಗಳು ಒಪ್ಪಿಗೆ ನೀಡಿಲ್ಲ.

    ಬೆಲೆ ಕಡಿಮೆಯಾಗಬಾರದು:
    ಪೆಟ್ರೋಲ್ ಬೆಲೆ ಕಡಿಮೆಯಾಗಬಾರದು ಎನ್ನುವ ವಾದವನ್ನು ಕೆಲವರು ಮಂಡಿಸುತ್ತಿದ್ದಾರೆ. ಒಂದು ವೇಳೆ ಭಾರೀ ಇಳಿಕೆಯಾದರೆ ಭಾರೀ ಸಂಖ್ಯೆಯಲ್ಲಿ ವಾಹನಗಳು ರಸ್ತೆಗೆ ಇಳಿಯಬಹುದು. ಇದರಿಂದ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗುವುದಲ್ಲದೇ ವಾಯು ಮಾಲಿನ್ಯ ಹೆಚ್ಚಾಗುತ್ತದೆ. ಹೀಗಾಗಿ ಬೆಲೆ ಇಳಿಕೆಯಾಗಬಾರದು ಎನ್ನುವ ವಾದವನ್ನು ಕೆಲ ಆರ್ಥಿಕ ತಜ್ಞರು ಮಂಡಿಸುತ್ತಿದ್ದಾರೆ. ಪೆಟ್ರೋಲ್, ಡೀಸೆಲ್ ಬೆಲೆ ಇಳಿಸುವ ಬದಲು ಸಾರ್ವಜನಿಕ ಸಾರಿಗೆಯ ಟಿಕೆಟ್ ಬೆಲೆಯನ್ನು ಇಳಿಸುವುದು ಉತ್ತಮ. ಇದರಿಂದಾಗಿ ಜನರು ಹೆಚ್ಚು ಸಾರ್ವಜನಿಕ ಸಾರಿಗೆ ಬಳಸುವಂತಾಗುತ್ತದೆ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ.

    ತೈಲ ಬೆಲೆ ಏರಿಕೆ ವಿಚಾರದಲ್ಲಿ ವಿರೋಧ ಪಕ್ಷಗಳು ಈಗ ಕೇಂದ್ರ ಸರ್ಕಾರದ ವಿರುದ್ಧ ಟೀಕೆ ಮಾಡುತ್ತಿದ್ದರೆ, ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಜಿಎಸ್‍ಟಿ ವ್ಯಾಪ್ತಿಗೆ ತಂದರೆ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯಾಗಲಿದೆ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಜಿಎಸ್‍ಟಿ ಅಡಿ ಪೆಟ್ರೋಲ್ ಬಂದ್ರೆ ಬೆಂಗ್ಳೂರಿನಲ್ಲಿ ಪ್ರತಿ ಲೀಟರ್‍ಗೆ 40 ರೂ.ಅಷ್ಟೇ!