Tag: ದೆಹಲಿ ಹಿಂಸಾಚಾರ

  • ಟೂಲ್‍ಕಿಟ್ ತನಿಖೆ- ಪ್ರತಿಭಟನೆಗೆ ಕೆನಡಾ ಲಿಂಕ್, ರೈತ ನಾಯಕರ ಮೇಲೆ ಕಣ್ಣು

    ಟೂಲ್‍ಕಿಟ್ ತನಿಖೆ- ಪ್ರತಿಭಟನೆಗೆ ಕೆನಡಾ ಲಿಂಕ್, ರೈತ ನಾಯಕರ ಮೇಲೆ ಕಣ್ಣು

    – ಝೂಮ್ ಸಭೆಯಲ್ಲಿ ಪಾಲ್ಗೊಂಡಿದ್ದವರ ವಿವರ ಕೇಳಿದ ಪೊಲೀಸರು
    – ವಾಟ್ಸಪ್ ಗ್ರೂಪ್‍ಗೆ ಅಂತರಾಷ್ಟ್ರೀಯ ರೈತ ಪ್ರತಿಭಟನೆಯ ಹೆಸರು

    ನವದೆಹಲಿ: ದೆಹಲಿಯ ರೈತರ ದಂಗೆ ಹಾಗೂ ಕೆಂಪು ಕೋಟೆಗೆ ಮುತ್ತಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಮಾಹಿತಿ ಬಹಿರಂಗವಾಗಿದ್ದು, ರೈತರ ಪ್ರತಿಭಟನೆಗೆ ಕೆನಡಾ ಪ್ರಜೆಯ ಕುಮ್ಮಕ್ಕು ಇರುವುದು ತನಿಖೆ ವೇಳೆ ಪತ್ತೆಯಾಗಿದೆ.

    ದೆಹಲಿ ಪೊಲೀಸರು ಟೂಲ್‍ಕಿಟ್ ಕುರಿತು ತನಿಖೆಯನ್ನು ಚುರುಕುಗೊಳಿಸಿದ್ದು, ಇದೀಗ ಆಘಾತಕಾರಿ ಮಾಹಿತಿ ಲಭ್ಯವಾಗುತ್ತಿದೆ. ಖಲಿಸ್ಥಾನಿ ಪರ ಸಂಘಟನೆ ಪೊಯೆಟಿಕ್ ಜಸ್ಟಿಸ್ ಫೌಂಡೇಶನ್(ಪಿಜೆಎಫ್) ಸಹ ಸಂಸ್ಥಾಪಕ ಮೋ ಧಲಿವಾಲ್  ಶಂತನು ಮುಲಿಕ್‌ ನನ್ನು ಸಂಪರ್ಕಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಅಲ್ಲದೆ ದೆಹಲಿ ಹೊರವಲಯದಲ್ಲಿ ರೈತರ ಪ್ರತಿಭಟನೆ ಹಾಗೂ ಆಂದೋಲನ ಪ್ರಾರಂಭವಾಗುತ್ತಿದ್ದಂತೆ ರೈತ ನಾಯಕರನ್ನು ಸಂಪರ್ಕಿಸಬೇಕು ಎಂದು ಕೇಳಿಕೊಂಡಿದ್ದ ಎಂದು ಮೂಲಗಳನ್ನು ಆಧಾರಿಸಿ ಮಾಧ್ಯಮ ವರದಿದೆ ಮಾಡಿದೆ.

     ಮುಂಬೈ ಮೂಲದ ವಕೀಲೆ ಹಾಗೂ ಹೋರಾಟಗಾರ್ತಿ ನಿಕಿತಾ ಜಾಕೋಬ್ ಜೊತೆ ಶಂತನು ನಿರಂತರ ಸಂಪರ್ಕ ಹೊಂದಿದ್ದ. ಟೆಲಿಗ್ರಾಮ್, ಇನ್‍ಸ್ಟಾಗ್ರಾಮ್, ಪ್ರೊಟೋಮೇಲ್ ಬಳಸಿ ಇಬ್ಬರೂ ಮಾತುಕತೆ ನಡೆಸುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ರೈತರ ಪ್ರತಿಭಟನೆ ಕುರಿತು ಸ್ವೀಡಿಷ್ ಪರಿಸರ ಹೋರಾಟಗಾರ್ತಿ ಗ್ರೆಟಾ ಥನ್‍ಬರ್ಗ್ ಹಂಚಿಕೊಂಡಿರುವ ಟೂಲ್‍ಕಿಟ್‍ಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿದ್ದು, ಜಾಕೋಬ್ ಸೋಮವಾರ ಬಾಂಬೆ ಹೈ ಕೋರ್ಟ್ ನಲ್ಲಿ ನಿರೀಕ್ಷಣಾ ಜಾಮೀನು ಕೋರಿದ್ದಾಳೆ.

    ಮುಂಬೈ ಮೂಲದ ನಿಕಿತಾ ಜಾಕೋಬ್ ಶನಿವಾರ ಬಂಧಿಸಲ್ಪಟ್ಟಿದ್ದ 21 ವರ್ಷದ ಪರಿಸರ ಹೋರಾಟಗಾರ್ತಿ ದಿಶಾ ರವಿ ಹಾಗೂ ಈ ಪ್ರಕರಣದ ಶಂಕಿತ ಶಾಂತನುನನ್ನು ಸಂಪರ್ಕಿಸಿರುವುದು ಇದೇ ವೇಳೆ ಬಹಿರಂಗವಾಗಿದೆ.

    ಮೂಲಗಳ ಪ್ರಕಾರ, ಧಲಿವಾಲ್ ಕೇವಲ ಸಾಮಾಜಿಕ ಜಾಲತಾಣಗಳ ಪ್ರಭಾವಿಗಳನ್ನು ಮಾತ್ರ ಸಂಪರ್ಕಿಸಿಲ್ಲ. ಬದಲಿಗೆ ನವೆಂಬರ್‍ನಲ್ಲಿ ದೆಹಲಿಯ ವಿವಿಧ ಗಡಿಗಳಲ್ಲಿ ನಡೆಯುತ್ತಿದ್ದ ರೈತರ ಪ್ರತಿಭಟನೆಯನ್ನು ಬೆಂಬಲಿಸಿ ಟ್ವೀಟ್ ಮಾಡುತ್ತಿದ್ದ ಕೆನಡಾದ ಸಂಸದರ ಜೊತೆ ಸಹ ಸಂಪರ್ಕ ಹೊಂದಿದ್ದ ಎಂಬ ಮಾಹಿತಿ ಲಭ್ಯವಾಗಿದೆ.

    ಟೂಲ್‍ಕಿಟ್ ದಾಖಲೆ ತಯಾರಿಕೆಯಲ್ಲಿ ಕೆಲ ರೈತ ಮುಖಂಡರ ಪಾತ್ರ ಇರುವ ಬಗ್ಗೆ ಸಹ ದೆಹಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಫೇಕ್ ಐಡಿ ಬಳಸಿ ಗಣರಾಜ್ಯೋತ್ಸ ದಿನದಂದು ಹಿಂಸಾಚಾರ ಬಡೆಸುವ ಬಗ್ಗೆ ಜನವರಿ 11ರಂದು ಜಾಕೋಬ್, ದಿಶಾ ಹಾಗೂ ಶಾಂತನು ಝೂಮ್ ಆ್ಯಪ್ ಮೂಲಕ ಮೀಟಿಂಗ್ ನಡೆಸಿದ್ದರು. ಹೀಗಾಗಿ ಈ ಮೀಟಿಂಗ್‍ನಲ್ಲಿ ಭಾಗವಹಿಸಿದವರ ಯುಆರ್‍ಎಲ್ ಹಾಗೂ ಐಪಿ ಅಡ್ರೆಸ್ ನೀಡುವಂತೆ ದೆಹಲಿ ಪೊಲೀಸರು ಝೂಮ್ ಸಂಸ್ಥೆಗೆ ಪತ್ರ ಬರೆದಿದ್ದಾರೆ.

    ಟೂಲ್‍ಕಿಟ್‍ನ್ನು ಕಳುಹಿಸಲು ಡಿಸೆಂಬರ್‍ನಲ್ಲಿ ದಿಶಾ ರಚಿಸಿದ ವಾಟ್ಸಪ್ ಗ್ರೂಪ್‍ಗೆ ಅಂತರಾಷ್ಟ್ರೀಯ ರೈತರ ಮುಷ್ಕರ ಎಂದು ಹೆಸರಿಡಲಾಗಿತ್ತು. ಈಗ ಡಿಲೀಟ್ ಮಾಡಲಾದ ಈ ಗುಂಪಿನಲ್ಲಿ 10ಕ್ಕೂ ಹೆಚ್ಚು ಸದಸ್ಯರನ್ನು ಸೇರಿಸಲಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಈ ಗ್ರೂಪ್‍ನ ವಿವರಗಳು ಹಾಗೂ ಸದಸ್ಯರ ಚಾಟ್‍ಗಳನ್ನು ನೀಡುವಂತೆ ಪೊಲೀಸರು ವಾಟ್ಸಪ್‍ಗೆ ಸಹ ಪತ್ರ ಬರೆದಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

  • ದೆಹಲಿ ಹಿಂಸಾಚಾರಕ್ಕೆ ವಾಟ್ಸಪ್‍ನಲ್ಲೇ ನಡೆದಿತ್ತು ಸಂಚು – ಆಪ್ ಕೌನ್ಸಲರ್ ಮನೆಯಲ್ಲಿ ಸಿಕ್ತು ಪೆಟ್ರೋಲ್ ಬಾಂಬ್

    ದೆಹಲಿ ಹಿಂಸಾಚಾರಕ್ಕೆ ವಾಟ್ಸಪ್‍ನಲ್ಲೇ ನಡೆದಿತ್ತು ಸಂಚು – ಆಪ್ ಕೌನ್ಸಲರ್ ಮನೆಯಲ್ಲಿ ಸಿಕ್ತು ಪೆಟ್ರೋಲ್ ಬಾಂಬ್

    ನವದೆಹಲಿ : ಈಶಾನ್ಯ ದೆಹಲಿಯಲ್ಲಿ ನಡೆದಿದ್ದ ಹಿಂಸಾಚಾರ ಪೂರ್ವ ನಿರ್ಧರಿತ ಸಂಚು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಪ್ರಕರಣ ಸಂಬಂಧ 18 ಎಫ್‍ಐಆರ್ ದಾಖಲಿಸಿಕೊಂಡಿರುವ ದೆಹಲಿ ಪೊಲೀಸರು 108 ಮಂದಿಯನ್ನು ಬಂಧಿಸಿದ್ದಾರೆ.

    ಬಂಧಿತರಿಂದ ಮಾಹಿತಿ ಕಲೆ ಹಾಕಿರುವ ಪೊಲೀಸರು ಮೊಬೈಲ್ ಗಳನ್ನು ಪರಿಶೀಲನೆ ನಡೆಸಿದ್ದಾರೆ. ಬಂಧಿತರ ಮೊಬೈಲ್ ಪರಿಶೀಲನೆ ವೇಳೆ ವಾಟ್ಸಪ್‍ ನಲ್ಲಿ ಗಲಭೆ ನಡೆಸಲು ಚರ್ಚೆ ಮಾಡಿರುವುದು ಬೆಳಕಿಗೆ ಬಂದಿದೆ. ಈಶಾನ್ಯ ದೆಹಲಿ ಸ್ಥಳೀಯರೊಂದಿಗೆ ಹೊರಗಿನವರ ಕೈವಾಡವಿದ್ದು, ಘಟನೆಯಲ್ಲಿ ಬಳಕೆಯಾದ ಕಲ್ಲುಗಳು ಮತ್ತು ದೇಸಿ ಗನ್ ಗಳನ್ನು ಉತ್ತರ ಪ್ರದೇಶ ಬಿಹಾರದಿಂದ ತರಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ. ಹಿಂಸಾಚಾರ ಸೃಷ್ಟಿಸುವ ದೃಷ್ಟಿಯಿಂದಲೇ ದೆಹಲಿ ಹೊರಗಿನ ನಾಗರಿಕರ ಜೊತೆ ಚರ್ಚಿಸಿ ಕಲ್ಲುಗಳನ್ನು ನಿಗದಿತ ಸ್ಥಳಗಳಲ್ಲಿ ಸಾಗಿಸಿ ಗಲಭೆ ಸೃಷ್ಟಿಸಲಾಗಿದೆ.

    ಈ ಬೆಳವಣಿಗೆ ನಡುವೆ ಆಪ್ ಕೌನ್ಸಿಲರ್ ತಾಹೀರ್ ಅವರ ಮನೆಯ ಟೆರೇಸ್‍ನಲ್ಲಿ ಪೆಟ್ರೋಲ್ ಬಾಂಬ್ ಹಾಗೂ ಕಲ್ಲುಗಳು ಪತ್ತೆಯಾಗಿವೆ. ಮಾಧ್ಯಮವೊಂದಕ್ಕೆ ಸ್ಥಳೀಯರು ಕೊಟ್ಟ ಮಾಹಿತಿ ಅನ್ವಯ ಕಾರ್ಯಾಚರಣೆ ನಡೆಸಿದಾಗ ಟೆರೇಸ್ ಮೇಲೆ ಪೆಟ್ರೋಲ್ ಬಾಂಬ್‍ಗಳು ಸಿಕ್ಕಿವೆ. ತಾಹೀರ್ ಹುಸ್ಸೇನ್ ಮನೆಯಲ್ಲಿ ಹಲವು ಶಸ್ತ್ರಾಸ್ತ್ರಗಳಿವೆ. ಅವರ ಮನೆಯಲ್ಲಿ ನೂರಾರು ಧಂಗೆಕೋರರು ಒಟ್ಟಾಗಿ ಸಭೆ ಸೇರಿದ್ದರು ಎನ್ನಲಾಗಿದೆ. ಅಲ್ಲಿಂದ ಬೇರೆಯವರ ಮನೆಯ ಮೇಲೆ ಕಲ್ಲು ಮತ್ತು ಪೆಟ್ರೋಲ್ ಬಾಂಬ್‍ಗಳನ್ನು ಎಸೆದಿದ್ದಾರೆ ಎಂದು ಸ್ಥಳೀಯರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

    ಈ ನಡುವೆ ದೆಹಲಿ ಹಿಂಸಾಚಾರಕ್ಕೆ ಬಲಿಯಾದ ಗುಪ್ತಚರ ದಳದ ಅಧಿಕಾರಿ ಅಂಕಿತ್ ಶರ್ಮಾ ಮೇಲೆ ಹಲ್ಲೆ ನಡೆಸಿದ್ದು ಆಮ್ ಆದ್ಮಿ ಪಕ್ಷದ ನಾಯಕರು ಎಂದು ಅವರ ತಂದೆ ರೋಹಿತ್ ಶರ್ಮಾ ಆರೋಪಿಸಿದ್ದಾರೆ. ಆದರೆ ಅಂಕಿತ್ ಶರ್ಮಾ ಸಾವಿನಲ್ಲಿ ತಮ್ಮ ಹೆಸರು ಕೇಳಿಬರುತ್ತಲೇ ಹುಸ್ಸೇನ್ ಬೇರೆಯದೇ ರೀತಿ ಮಾತನಾಡಿದ್ದು, ಗಲಭೆಯಲ್ಲಿ ತಮಗೂ ತೊಂದರೆಯಾಗಿದೆ ಎಂದು ಹೇಳಿಕೊಂಡಿದ್ದು, ನಮ್ಮ ಮನೆಗೂ ನುಗ್ಗಿದ ದುಷ್ಕರ್ಮಿಗಳು ಬಲವಂತವಾಗಿ ನನ್ನನ್ನು ಮನೆಯಿಂದ ನೂಕಿದ್ದರು ಎಂದಿದ್ದಾರೆ.

  • ಕೇಂದ್ರದ ವಿರುದ್ಧ ಚಾಟಿ ಬೀಸಿದ್ದ ಜಡ್ಜ್ ವರ್ಗಾವಣೆ – ವಿಪಕ್ಷಗಳ ಆರೋಪ ಏನು? ಸರ್ಕಾರದ ಸ್ಪಷ್ಟನೆ ಏನು?

    ಕೇಂದ್ರದ ವಿರುದ್ಧ ಚಾಟಿ ಬೀಸಿದ್ದ ಜಡ್ಜ್ ವರ್ಗಾವಣೆ – ವಿಪಕ್ಷಗಳ ಆರೋಪ ಏನು? ಸರ್ಕಾರದ ಸ್ಪಷ್ಟನೆ ಏನು?

    ನವದೆಹಲಿ: ರಾಜಧಾನಿಯಲ್ಲಿನ ಗಲಭೆ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ಚಾಟಿ ಬೀಸಿ ಕಠಿಣ ಕ್ರಮಗಳಿಗೆ ಸೂಚಿಸಿದ್ದ ಹೈಕೋರ್ಟ್ ನ್ಯಾಯಾಧೀಶರೊಬ್ಬರ ವರ್ಗಾವಣೆ ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ.

    ದೆಹಲಿ ಗಲಭೆ ಪ್ರಕರಣದ ತುರ್ತು ಅರ್ಜಿ ವಿಚಾರಣೆಯನ್ನು ಮಂಗಳವಾರ ರಾತ್ರಿ ವಿಚಾರಣೆ ನಡೆಸಿದ್ದ ಮುರಳೀಧರ್ ರಾವ್ ಬುಧವಾರವೂ ವಿಚಾರಣೆ ನಡೆಸಿದ್ದರು. ವಿಚಾರಣೆ ಸಂದರ್ಭದಲ್ಲಿ 1984 ಪರಿಸ್ಥಿತಿ ಮರುಕಳಿಸದಿರಲಿ ಎಂದು ಕಳವಳ ವ್ಯಕ್ತಪಡಿಸಿ ಕೇಂದ್ರ ಹಾಗೂ ದೆಹಲಿಯ ಆಪ್ ಸರ್ಕರಕ್ಕೆ ಬಿಸಿ ಮುಟ್ಟಿಸಿದ್ದರು.

    ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ ದಿನವೇ ಮುರಳೀಧರ್ ಅವರನ್ನು ಬುಧವಾರ ರಾತ್ರಿ ಪಂಜಾಬ್ – ಹರ್ಯಾಣ ಹೈಕೋರ್ಟಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ದಿಢೀರ್ ಆಗಿ ವರ್ಗಾವಣೆಯಾದ ಹಿನ್ನೆಲೆಯಲ್ಲಿ ಈ ವಿಚಾರ ಈಗ ರಾಜಕೀಯ ಆರೋಪ, ಪ್ರತ್ಯೋರಪಕ್ಕೆ ಕಾರಣವಾಗಿದೆ.

    ಮುಖ್ಯ ನ್ಯಾಯಮೂರ್ತಿ ಶರದ್ ಅರವಿಂದ್ ಬೊಬ್ಡೆ ಅವರೊಂದಿಗೆ ಸಮಾಲೋಚಿಸಿದ ನಂತರ ರಾಷ್ಟ್ರಪತಿ ರಾಮನಾಥ್ ಕೋವಿಂದ್, ದೆಹಲಿ ಹೈಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಎಸ್. ಮುರಳೀಧರ್ ಅವರನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನ್ಯಾಯಾಧೀಶರನ್ನಾಗಿ ವರ್ಗಾಯಿಸಿದ್ದಾರೆಂದು ಆದೇಶದಲ್ಲಿ ತಿಳಿಸಲಾಗಿದೆ.

    ಕೇಂದ್ರ ಹೇಳೋದು ಏನು?
    ವರ್ಗಾವಣೆ ವಿವಾದಕ್ಕೆ ಕಾರಣವಾಗುತ್ತಿದ್ದಂತೆ ಸ್ಪಷ್ಟೀಕರಣ ನೀಡಿರುವ ಕಾನೂನು ಸಚಿವ ರವಿಶಂಕರ್ ಪ್ರಸಾದ್, ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಕೊಲಿಜಿಯಂ ಶಿಫಾರಸ್ಸು ಆಧರಿಸಿ ವರ್ಗಾವಣೆ ನಡೆದಿದೆ. ಫೆಬ್ರವರಿ 12ರಂದೇ ನಿರ್ಣಯ ತೆಗೆದುಕೊಳ್ಳಲಾಗಿದ್ದು, ಈ ವರ್ಗಾವಣೆಗೆ ಮುರಳೀಧರ್ ರಾವ್ ಸಹ ಒಪ್ಪಿಗೆ ಸೂಚಿಸಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

    ಚಾಟಿ ಬೀಸಿದ್ದು ಹೇಗೆ?
    ದೆಹಲಿ ಗಲಭೆ ಸಂಬಂಧ ಎಸ್‍ಐಟಿ ತನಿಖೆ ಕೋರಿ ಸಾಮಾಜಿಕ ಕಾರ್ಯಕರ್ತ ಹರ್ಷ್ ಮಂದರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನ್ಯಾ. ಎಸ್ ಮುರಳೀಧರ್ ಮತ್ತು ತಲ್ವಂತ್ ಸಿಂಗ್ ಅವರಿದ್ದ ದ್ವಿಸದಸ್ಯ ಪೀಠದಲ್ಲಿ ಬುಧವಾರ ನಡೆದಿತ್ತು. ಈ ವೇಳೆ ಈ ದೇಶದಲ್ಲಿ ಮತ್ತೂಂದು 1984ರ ಮಾದರಿ ಘಟನೆ ನಡೆಯಲು ನಾವು ಬಿಡುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.

    ಬಿಜೆಪಿ ನಾಯಕ ಕಪಿಲ್ ಮಿಶ್ರಾ ಅವರೇ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ, ಕಪಿಲ್ ಮಿಶ್ರಾ ಅವರ ಹೇಳಿಕೆಯ ವೀಡಿಯೋ ನೋಡಿದ್ದೀರಾ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹಾಗೂ ದಿಲ್ಲಿ ಡಿಸಿಪಿ ರಾಜೇಶ್ ದೇವ್ ಅವರನ್ನು ಕೋರ್ಟ್ ಪ್ರಶ್ನಿಸಿತ್ತು. ಅದಕ್ಕೆ ಅವರು, ನಾವು ಅಂಥ ವೀಡಿಯೋ ವೀಕ್ಷಿಸಿಲ್ಲ ಎಂದು ಉತ್ತರಿಸಿದ್ದರು.

    ಹಿಂಸಾಚಾರಕ್ಕೆ ಪ್ರೇರಣೆ ಎನ್ನಲಾಗುತ್ತಿರುವ ಬಿಜೆಪಿ ನಾಯಕರಾದ ಕೇಂದ್ರ ಸಚಿವ ಅನುರಾಗ್ ಠಾಕೂರ್, ಸಂಸದರಾದ ಪ್ರವೇಶ್ ವರ್ಮಾ, ಅಭಯ್ ವರ್ಮಾ ಹಾಗೂ ಮಾಜಿ ಶಾಸಕ ಕಪಿಲ್ ಮಿಶ್ರಾ ಹೇಳಿಕೆಗಳ ವೀಡಿಯೋ ತುಣುಕುಗಳನ್ನು ಸಹ ಕೋರ್ಟ್‍ನಲ್ಲಿ ಮುರಳೀಧರ್ ರಾವ್ ಪ್ಲೇ ಮಾಡಿಸಿದ್ದರು.

    ಇದು ನಿಜವಾಗಿಯೂ ಕಳವಳಕಾರಿ ಸಂಗತಿಯಾಗಿದ್ದು, ನಿಮ್ಮ ಕಚೇರಿಯಲ್ಲಿ ಹಲವು ಟಿವಿಗಳಿವೆ. ಹೀಗಿದ್ದರೂ ಪೊಲೀಸ್ ಅಧಿಕಾರಿ ನಾನು ವಿಡಿಯೋಗಳನ್ನು ವೀಕ್ಷಿಸಿಲ್ಲ ಎಂದು ಹೇಗೆ ಹೇಳಲು ಸಾಧ್ಯ. ದೆಹಲಿ ಪೊಲೀಸರ ಸ್ಥಿತಿಗತಿಗಳಿಂದ ನಾನು ನಿಜವಾಗಿಯೂ ದಿಗಿಲುಗೊಂಡಿದ್ದೇನೆ ಎಂದು ನ್ಯಾ. ಮುರಳೀಧರ್ ರಾವ್ ಅಭಿಪ್ರಾಯ ವ್ಯಕ್ತಪಡಿಸಿದ್ದರು.

    ಸೂಕ್ಷ್ಮವಾಗಿ ಆಲಿಸಿದ ಜಡ್ಜ್ ಮುರಳೀಧರ್, ಇಂಥ ಹೇಳಿಕೆಗೆಳು ರಿಪೀಟ್ ಆಗಿವೆ. ಸಾರ್ವಜನಿಕ ಆಸ್ತಿ ನಷ್ಟ ಮಾಡುವವರ ಮೇಲೆ ಎಫ್‍ಐಆರ್ ಹಾಕುವ ನೀವು ಇಂಥ ಹೇಳಿಕೆ ನೀಡುವ ಇವರ ಮೇಲೆ ಕೇಸ್ ಹಾಕುವುದಿಲ್ಲ ಯಾಕೆ? ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುವುದಿಲ್ಲವೇ ಎಂದು ಖಡಕ್ ಆಗಿ ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡಿದ್ದರು.

    ಸಾಮಾಜಿಕ ಜಾಲತಾಣದಲ್ಲಿ ಟೀಕೆ:
    ನ್ಯಾ. ಮುರಳೀಧರ್ ವರ್ಗಾವಣೆಯಾಗುತ್ತಿದ್ದಂತೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ರಾಹುಲ್ ಗಾಂಧಿ ಸೇರಿ ಹಲವು ವಿಪಕ್ಷ ನಾಯಕರಿಂದ ವರ್ಗಾವಣೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ನ್ಯಾ ಲೋಯಾ ವರ್ಗಾವಣೆ ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬೇಕು ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

    ನ್ಯಾಯಾಧೀಶರು ವರ್ಗಾವಣೆಯಾದಾಗ ಹತ್ತು ದಿನಗಳ ಕಾಲಾವಕಾಶ ನೀಡಬೇಕು. ನ್ಯಾ. ಮುರಳೀಧರ್ ಅವರ ಪ್ರಕರಣದಲ್ಲಿ ತತಕ್ಷಣಕ್ಕೆ ಬರುವಂತೆ ಆದೇಶ ಹೊರಡಿಸಲಾಗಿದೆ. ಕೊಲಿಜಿಯಂ ನ್ಯಾ. ಮುರುಳೀಧರ್ ಜೊತೆ ಇನ್ನು ಇಬ್ಬರನ್ನು ವರ್ಗಾವಣೆ ಮಾಡಲು ಶಿಫಾರಸು ಮಾಡಿದೆ. ಆ ಇಬ್ಬರು ನ್ಯಾಯಾಧೀಶರನ್ನು ಯಾಕೆ ವರ್ಗಾವಣೆ ಮಾಡಿಲ್ಲ ಎಂದು ಪ್ರಶ್ನಿಸಿದ್ದಾರೆ.

    ಕಾಂಗ್ರೆಸ್ ಆರೋಪಕ್ಕೆ ತಿರುಗೇಟು ನೀಡಿದ ಸಚಿವ ರವಿಶಂಕರ್ ಪ್ರಸಾದ್, ಭಾರತ ಜನ ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಿದ್ದಾರೆ. ಸಂವಿಧಾನಿಕ ಸಂಸ್ಥೆಗಳ ಮೇಲೆ ನಿರಂತರ ದಾಳಿ ಮಾಡಿ ಹಾಳು ಮಾಡಿರುವುದು ಕಾಂಗ್ರೆಸ್ ಹೊರತು ನಾವಲ್ಲ. ನ್ಯಾ. ಲೋಯಾ ಪ್ರಕರಣ ಈಗಾಗಲೇ ಸುಪ್ರೀಂ ಕೋರ್ಟಿನಲ್ಲಿ ಇತ್ಯರ್ಥವಾಗಿದೆ. ಕಾಂಗ್ರೆಸ್ ನಿರಂತರವಾಗಿ ಕೋರ್ಟ್, ಸೇನೆ, ಸಿಎಜಿ(ಮಹಾಲೇಖಪಾಲರು), ಪ್ರಧಾನಿ ಮತ್ತು ಭಾರತದ ಜನರ ಮೇಲೆ ದಾಳಿ ನಡೆಸುತ್ತಿದೆ ಎಂದಿದ್ದಾರೆ.

    ನ್ಯಾಯಾಂಗ ಸ್ವಾತಂತ್ರ್ಯದ ಬಗ್ಗೆ ನಮಗೆ ಗೌರವವಿದೆ. ತುರ್ತು ಪರಿಸ್ಥಿತಿ ಸಮಯದಲ್ಲಿ ಕಾಂಗ್ರೆಸ್ ನ್ಯಾಯಾಂಗವನ್ನು ಸೂಪರ್ ಸೀಡ್ ಮಾಡಿರುವುದು ಎಲ್ಲರಿಗೂ ತಿಳಿದಿದೆ. ಅವರ ಪರವಾಗಿ ತೀರ್ಪುಗಳು ಬಂದರೆ ಮಾತ್ರ ಅವರಿಗೆ ಇಷ್ಟವಾಗುತ್ತದೆ. ವಿರುದ್ಧವಾಗಿ ಬಂದರೆ ಸಂವಿಧಾನಿಕ ಸಂಸ್ಥೆಗಳ ಮೇಲೆ ಕಾಂಗ್ರೆಸ್ ಪ್ರಶ್ನೆ ಕೇಳುತ್ತದೆ ಎಂದು ಟೀಕಿಸಿ ತಿರುಗೇಟು ನೀಡಿದ್ದಾರೆ.