Tag: ದಾಖಲೆ

  • 1 ಸೂಟ್‍ಕೇಸ್, 3 ಹ್ಯಾಂಡ್ ಬ್ಯಾಗ್, 1 ಬಾಕ್ಸ್ – ಮಂದಣ್ಣ ಮನೆಯಿಂದ ದಾಖಲೆ ಹೊತ್ತೊಯ್ದ ಐಟಿ

    1 ಸೂಟ್‍ಕೇಸ್, 3 ಹ್ಯಾಂಡ್ ಬ್ಯಾಗ್, 1 ಬಾಕ್ಸ್ – ಮಂದಣ್ಣ ಮನೆಯಿಂದ ದಾಖಲೆ ಹೊತ್ತೊಯ್ದ ಐಟಿ

    – 9 ಗಂಟೆಗಳ ಕಾಲ ಕಿರಿಕ್ ಬ್ಯೂಟಿಗೆ ಐಟಿ ಡ್ರಿಲ್

    ಮಡಿಕೇರಿ: ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣಗೆ ಐಟಿ ಗುನ್ನಾ ನೀಡಿದ್ದು, ಸತತ 29 ಗಂಟೆಗಳ ಬಳಿಕ ಐಟಿ ಅಧಿಕಾರಿಗಳ ತಲಾಶ್ ಮುಕ್ತಾಯವಾಗಿದೆ. 1 ಸೂಟ್‍ಕೇಸ್, 3 ಹ್ಯಾಂಡ್ ಬ್ಯಾಗ್, 1 ಬಾಕ್ಸ್ ನಲ್ಲಿ ಮಂದಣ್ಣ ಮನೆಯಲ್ಲಿ ಸಿಕ್ಕ ದಾಖಲೆಯನ್ನು ಐಟಿ ಅಧಿಕಾರಿಗಳು ತೆಗೆದುಕೊಂಡು ಹೋಗಿದ್ದಾರೆ.

    ಗುರುವಾರ ಮುಂಜಾನೆ 7:30ಕ್ಕೆ ರಶ್ಮಿಕಾ ಅಭಿಮಾನಿಗಳು ಎಂದು ಎಂಟ್ರಿ ಕೊಟ್ಟಿದ್ದ ಆಂಧ್ರಪ್ರದೇಶದ ಐಟಿ ಅಧಿಕಾರಿಗಳು ಮನೆಯನ್ನು ಜಾಲಾಡಿ ದಾಖಲೆಗಳನ್ನು ಕಲೆಹಾಕಿದ್ದಾರೆ. ರಶ್ಮಿಕಾ ಮಂದಣ್ಣ ತಂದೆ ಒಡೆತನದ ಬೃಹತ್ ಬಂಗಲೆ, ಸೆರೆನಿಟಿ ಕಲ್ಯಾಣ ಮಂಟಪ, ಕಾಫಿ ತೋಟ, ಹೊಸದಾಗಿ ಖರೀದಿ ಮಾಡಿ ಬಿಟ್ಟಂಗಾಲದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿದ್ದ ಇಂಟರ್ ನ್ಯಾಷನಲ್ ರೆಸಿಡೆನ್ಸಿಯಲ್ ಸ್ಕೂಲ್, ಪೆಟ್ರೋಲ್ ಬಂಕ್ ಜಾಗದ ದಾಖಲೆಗಳನ್ನು ಪರಿಶೀಲನೆ ಮಾಡಿದ್ದಾರೆ.

    ಇದರ ಮಧ್ಯೆ ನಿನ್ನೆ ಮಧ್ಯಾಹ್ನ ಐಟಿ ಅಧಿಕಾರಿಗಳ ತಂಡ ರಶ್ಮಿಕಾ ಮಂದಣ್ಣಗೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದರು. ಹೈದರಾಬಾದ್ ನಲ್ಲಿ ಶೂಟಿಂಗ್‍ನಲ್ಲಿ ನಿರತರಾಗಿದ್ದ ನಟಿ ರಶ್ಮಿಕಾ ಮಂದಣ್ಣ ವಿಮಾನದಲ್ಲಿ ಮೈಸೂರಿಗೆ ಬಂದು ಬಳಿಕ ಕಾರಿನಲ್ಲಿ ಗುರುವಾರ ರಾತ್ರಿಯೇ ಮನೆಗೆ ಧಾವಿಸಿದ್ದರು. ಮನೆಗೆ ಬಂದ ರಶ್ಮಿಕಾ, ಮನೆಯಲ್ಲಿ ಐಟಿ ದಾಳಿಯಿಂದ ಶಾಕ್ ಆಗಿದ್ದ ತಂದೆ ಮದನ್ ಮಂದಣ್ಣ, ತಾಯಿ ಸುಮನ್ ನೋಡಿ ಆರಂಭದಲ್ಲಿ ವಿಚಲಿತರಾದರು. ಬಳಿಕ ಅಪ್ಪ ಅಮ್ಮನನ್ನು ಸಂತೈಸಿ ಐಟಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾದರು.

    ಐಟಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾದ ನಟಿ ರಶ್ಮಿಕಾಗೆ ಐಟಿ ಅಧಿಕಾರಿಗಳು ಪ್ರಶ್ನೆ ಮೇಲೆ ಪ್ರಶ್ನೆ ಕೇಳಿದ್ದಾರೆ. ಎಲ್ಲದಕ್ಕೂ ಸಮಾಧಾನದಿಂದಲೇ ಉತ್ತರ ಕೊಟ್ಟಿದ್ದ ರಶ್ಮಿಕಾ ತನ್ನ ಬ್ಯಾಂಕ್ ಬ್ಯಾಲೆನ್ಸ್, ಅಕೌಂಟ್ ಇರುವ ಬ್ಯಾಂಕ್‍ಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಮಧ್ಯರಾತ್ರಿವರೆಗೂ ನಡೆದ ವಿಚಾರಣೆಯಲ್ಲಿ ಕುಟುಂಬದ ಆಸ್ತಿ ಮೂಲ, ತಾನು ಸಿನಿಮಾ ಇಂಡಸ್ಟ್ರಿಯಲ್ಲಿ ಗಳಿಸಿದ ಹಣದ ಬಗ್ಗೆ ಐಟಿ ಅಧಿಕಾರಿಗಳ ಮುಂದೆ ಉತ್ತರ ನೀಡಿದ್ದಾರೆ. ನಂತರ ಮಹಿಳಾ ಅಧಿಕಾರಿಯನ್ನು ಮನೆಯಲ್ಲೇ ಬಿಟ್ಟು ರಶ್ಮಿಕಾ ಮಂದಣ್ಣ ಕುಟುಂಬದ ಒಡೆತನದ ಸೆರಿನಿಟಿ ರೆಸಾರ್ಟ್ ನಲ್ಲಿಯೇ ಐಟಿ ಅಧಿಕಾರಿಗಳು ವಾಸ್ತವ್ಯ ಹೂಡಿದ್ದರು.

    ತಡರಾತ್ರಿವರೆಗೂ ರಶ್ಮಿಕಾ ಮಂದಣ್ಣನನ್ನು ವಿಚಾರಣೆ ಒಳಪಡಿಸಿದ್ದ ಐಟಿ ತಂಡ, ಮುಂಜಾನೆ ಬಿಟ್ಟು ಕಳುಹಿಸಿತ್ತು. ಮುಂಜಾನೆ ಮನೆಯಿಂದ ಹೊರಬಂದ ರಶ್ಮಿಕಾ ಮಂದಣ್ಣ ತಂದೆಗೆ ನಮಸ್ಕಾರ ಮಾಡಿ, ಮಾಧ್ಯಮಗಳ ಕ್ಯಾಮೆರಾಗೆ ಹಾಯ್ ಮಾಡಿ ತೆರಳಿದ್ದರು. ರಶ್ಮಿಕಾ ಮನೆಯಿಂದ ತೆರಳುತ್ತಿದ್ದಂತೆ ಇತ್ತ ಐಟಿ ಅಧಿಕಾರಿಗಳ ಎರಡು ತಂಡ ಮತ್ತೆ ಮನೆ ಪ್ರವೇಶ ಮಾಡಿತ್ತು.

    ಎರಡನೇ ದಿನ ಐಟಿ ದಾಳಿ ಮುಂದುವರಿಸಿದ್ದ ಐಟಿ ತಂಡ ಸುಮಾರು 12.30 ರ ವೇಳೆಗೆ ದಾಖಲೆಗಳ ಪರಿಶೀಲನೆ ಮುಕ್ತಾಯ ಮಾಡಿತು. ಮನೆಯಿಂದ ಮಹತ್ವದ ದಾಖಲೆಗಳ ಪಡೆದ ಪತ್ರಕ್ಕೆ ರಶ್ಮಿಕಾ ಕುಟುಂಬದಿಂದ ಸಹಿ ಪಡೆದು ತೆರಳಿದರು. ಐಟಿ ತಂಡ ಹೋದ ಬಳಿಕ ಮನೆಯಿಂದ ತಾಯಿ ಜೊತೆ ಹೊರ ಬಂದ ರಶ್ಮಿಕಾ ಮಂದಣ್ಣ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಐಟಿ ಅವರು ಅವರ ಕೆಲಸ ಮಾಡಿದ್ದಾರೆ. ಯಾವ ಕಾರಣಕ್ಕೆ ದಾಳಿ ಮಾಡಿದ್ದಾರೆ ನಮಗೆ ಗೊತ್ತಿಲ್ಲ. ನಾವು ಎಲ್ಲಾ ಮಾಹಿತಿಗಳನ್ನು ನೀಡಿದ್ದೇವೆ ಎಂದು ತಿಳಿಸಿದರು.

  • ಅಪಘಾತದಲ್ಲಿ ಒಂದೂ ಸಾವಿಲ್ಲ – 166 ವರ್ಷಗಳ ಇತಿಹಾಸ ಹೊಂದಿರೋ ರೈಲ್ವೇಯಿಂದ ದಾಖಲೆ

    ಅಪಘಾತದಲ್ಲಿ ಒಂದೂ ಸಾವಿಲ್ಲ – 166 ವರ್ಷಗಳ ಇತಿಹಾಸ ಹೊಂದಿರೋ ರೈಲ್ವೇಯಿಂದ ದಾಖಲೆ

    ನವದೆಹಲಿ: ಭಾರತೀಯ ರೈಲ್ವೇಯ 166 ವರ್ಷಗಳ ಸುದೀರ್ಘ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಈ ವರ್ಷ ಯಾವುದೇ ಪ್ರಯಾಣಿಕರು ಸಾವನ್ನಪ್ಪಿಲ್ಲ. ಈ ಹಣಕಾಸು ವರ್ಷದಲ್ಲಿ ಒಬ್ಬ ಪ್ರಯಾಣಿಕರೂ ಸಾವನ್ನಪ್ಪಿಲ್ಲ ಎಂದು ಭಾರತೀಯ ರೈಲ್ವೇ ಹೇಳಿಕೊಂಡಿದೆ.

    ಭಾರತೀಯ ರೈಲ್ವೇಯ 166 ವರ್ಷಗಳ ಇತಿಹಾಸದಲ್ಲಿ, 2019-20 ‘ಶೂನ್ಯ ಪ್ರಯಾಣಿಕರ ಸಾವಿಗೆ’ ಸಾಕ್ಷಿಯಾಗಿದೆ ಎಂದು ರೈಲ್ವೇ ಸಚಿವ ಪಿಯೂಷ್ ಗೋಯಲ್ ಟ್ವಿಟ್ಟರ್ ಖಾತೆಯಲ್ಲಿ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.

    ರೈಲ್ವೇ ಸೇವೆಗಳ ಏಕೀಕರಣ, ರೈಲ್ವೇ ಸೌಲಭ್ಯಗಳು, ಇಲಾಖೆ ಕಾರ್ಯ ಶೈಲಿ ಮತ್ತು ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಗಮನಾರ್ಹ ಸುಧಾರಣೆ ಇದಕ್ಕೆ ಕಾರಣವಾಗಿದೆ. ಈ ಬೆಳವಣಿಗೆ ವಿಶ್ವ ದರ್ಜೆಯ ರೈಲ್ವೇ ಸೇವೆಗಳನ್ನು ಒದಗಿಸುವ ನಮ್ಮ ಸಂಕಲ್ಪದ ದಿಕ್ಕಿನಲ್ಲಿ ತೆಗೆದುಕೊಂಡ ಹೆಜ್ಜೆಯಾಗಿದೆ. ದೇಶದ ಅಭಿವೃದ್ಧಿಗೆ ಇದು ಹೆಚ್ಚಿನ ಕೊಡುಗೆ ನೀಡಲಿದ್ದು ನಾವು ಹೆಚ್ಚು ಸುರಕ್ಷತೆ ಆದ್ಯತೆ ನೀಡುತ್ತಿದ್ದೇವೆ ಎಂದು ತಮ್ಮ ಎರಡನೇ ಟ್ವೀಟ್ ನಲ್ಲಿ ಗೋಯಲ್ ಹೇಳಿಕೊಂಡಿದ್ದಾರೆ.

    ಕಳೆದ ಡಿಸೆಂಬರ್ 6 ರಂದು, ದೆಹಲಿ ಹೈಕೋರ್ಟ್ ದೇಶಾದ್ಯಂತ ಎಲ್ಲಾ ರೈಲ್ವೇ ನಿಲ್ದಾಣಗಳಲ್ಲಿ ಸುರಕ್ಷತೆ ಮತ್ತು ಸುರಕ್ಷತಾ ಕ್ರಮಗಳ ಅತ್ಯುನ್ನತ ಗುಣಮಟ್ಟವನ್ನು ಕಾಯ್ದುಕೊಳ್ಳಲು ಕೋರಿ ಸಲ್ಲಿಸಿದ ಅರ್ಜಿಯ ಮೇಲೆ ಕೇಂದ್ರದಿಂದ ಪ್ರತಿಕ್ರಿಯೆ ನೀಡಲು ಸೂಚಿಸಿತ್ತು.

    2018ರ ಹಣಕಾಸು ವರ್ಷದಲ್ಲಿ 73 ರೈಲ್ವೇ ಅಪಘಾತಗಳು ಸಂಭವಿಸಿದ್ದವು. 2019ರಲ್ಲಿ ಈ ಸಂಖ್ಯೆ 59ಕ್ಕೆ ಇಳಿದಿದೆ. 2013ರಿಂದ 2018ರವರೆಗೆ ಪ್ರತಿ ವರ್ಷ ಸರಾಸರಿ 110 ಅಪಘಾತಗಳು ಸಂಭವಿಸಿದ್ದು 990 ಮಂದಿ ಬಲಿಯಾಗಿದ್ದರು.

    ಇದಕ್ಕೆ ಪ್ರತಿಕ್ರಿಯಿಸಿರುವ ರೈಲ್ವೆ ಇಲಾಖೆ ನವೆಂಬರಿನಲ್ಲಿ ರೈಲ್ವೇ ಹಳಿಗಳನ್ನು ಸುರಕ್ಷತೆ ಸುಧಾರಿಸಲು ಆಧುನೀಕರಿಸಲಾಗುತ್ತಿದೆ ಎಂದು ಹೇಳಿಕೊಂಡಿದೆ. ಹಳಿಗಳಲ್ಲಿ ಆಗುವ ಅನಾಹುತಗಳನ್ನು ತಪ್ಪಿಸಲು ಅಲ್ಟ್ರಾಸೋನಿಕ್ ಫ್ಲಾ ಡಿಟೆಕ್ಷನ್(ಯುಎಸ್‍ಎಫ್‍ಡಿ) ತಂತ್ರಜ್ಞಾನ ಬಳಸಿಕೊಂಡಿದ್ದು ಸೆನ್ಸರ್  ಮೂಲಕ ಅಪಘಾತಗಳನ್ನು ತಪ್ಪಿಸಲಾಗಿದೆ. ಇವೆಲ್ಲದರ ಹೊರತಾಗಿ, ಸಿಬ್ಬಂದಿಗಳಿಗೆ ಹೆಚ್ಚಿನ ತರಬೇತಿ ನೀಡಲಾಗುತ್ತಿದೆ ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಿದೆ.

  • ಕೆಆರ್‌ಎಸ್ ಭರ್ತಿ ರೆಕಾರ್ಡ್

    ಕೆಆರ್‌ಎಸ್ ಭರ್ತಿ ರೆಕಾರ್ಡ್

    ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಡ್ಯಾಂ ಸಂಪೂರ್ಣ ಭರ್ತಿಯಾಗಿದೆ. ಈ ಮೂಲಕ ಅಧಿಕ ದಿನಗಳಲ್ಲಿ ಭರ್ತಿಯಾಗುವ ಮೂಲಕ ದಾಖಲೆ ನಿರ್ಮಿಸಿದೆ.

    ಈಗ ಡ್ಯಾಂನಲ್ಲಿ ಎಲ್ಲಿ ನೋಡಿದರೂ ನೀರು ತುಂಬಿ ತುಳುಕಲಾರಂಭಿಸಿದೆ. ಕಳೆದ ಆಗಸ್ಟ್ 9 ರಂದು ಡ್ಯಾಂನ ನೀರಿನ ಮಟ್ಟ ಕೇವಲ 100 ಅಡಿಯಷ್ಟಿತ್ತು. ಹಿಂದೆ ಡ್ಯಾಂ ಭರ್ತಿಯಾಗುವುದೇ ಅನುಮಾನ ಎಂಬಂತಹ ಸ್ಥಿತಿ ನಿರ್ಮಾಣವಾಗಿತ್ತು. ಆದರೆ ಆಗಸ್ಟ್ 15ರ ವೇಳೆಗೆ ಡ್ಯಾಂ ಸಂಪೂರ್ಣ ಭರ್ತಿಯಾಗಿತ್ತು. ಹೀಗೆ ನಾಲ್ಕು ತಿಂಗಳ ಹಿಂದೆ ಭರ್ತಿಯಾದ ಕೆಆರ್‌ಎಸ್ ಡ್ಯಾಂ ನಾಲ್ಕು ತಿಂಗಳ ಕಾಲ ತನ್ನ ಗರಿಷ್ಠ ಮಟ್ಟದ ಅಂತರವನ್ನ ಕಾಯ್ದುಕೊಂಡು ಹೊಸ ದಾಖಲೆ ನಿರ್ಮಿಸಿದೆ.

    ಗರಿಷ್ಠ 124.80 ಅಡಿ ಗರಿಷ್ಠ ಸಾಮರ್ಥ್ಯವನ್ನು ಹೊಂದಿರುವ ಡ್ಯಾಂ ಈಗಲೂ 121.77 ಅಡಿ ನೀರಿನ ಮಟ್ಟ ಸಂಗ್ರಹವಾಗಿದೆ. ಡ್ಯಾಂಗೆ ಇಂದು 3388 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, 4118 ಕ್ಯೂಸೆಕ್ ಹೊರ ಹರಿವಿದೆ. 124.80 ಅಡಿ ಗರಿಷ್ಠ ಸಾಮರ್ಥ್ಯದ ಡ್ಯಾಂನಲ್ಲಿ ಇಂದು 121.77 ಅಡಿ ನೀರು ಸಂಗ್ರಹವಾಗಿದೆ. ನಾಲ್ಕು ತಿಂಗಳುಗಳ ಕಾಲ ನಿರಂತರವಾಗಿ ಇಷ್ಟೊಂದು ಪ್ರಮಾಣದ ನೀರು ಸಂಗ್ರಹವಾಗಿರುವುದು ಡ್ಯಾಂನ ಇತಿಹಾಸದಲ್ಲೇ ಮೊದಲಾಗಿದೆ.

  • ಬಾಂಗ್ಲಾ ವಿರುದ್ಧ ಗೆದ್ದು ಆಸ್ಟ್ರೇಲಿಯಾವನ್ನು ಹಿಂದಿಕ್ಕಿ ದಾಖಲೆ ಬರೆದ ಭಾರತ

    ಬಾಂಗ್ಲಾ ವಿರುದ್ಧ ಗೆದ್ದು ಆಸ್ಟ್ರೇಲಿಯಾವನ್ನು ಹಿಂದಿಕ್ಕಿ ದಾಖಲೆ ಬರೆದ ಭಾರತ

    ನವದೆಹಲಿ: ಗುರುವಾರ ಬಾಂಗ್ಲಾದೇಶದ ವಿರುದ್ಧ ನಡೆದ ಎರಡನೇ ಟಿ-20 ಗೆಲ್ಲುವ ಮೂಲಕ ಭಾರತ ಚುಟುಕು ಪಂದ್ಯಗಳ ಚೇಸಿಂಗ್‍ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಹಿಂದಿಕ್ಕಿದೆ.

    ಬಾಂಗ್ಲಾ ವಿರುದ್ಧ ಭಾನುವಾರ ನಡೆದ ಮೊದಲ ಟಿ-20 ಪಂದ್ಯದಲ್ಲಿ ಸೋತಿದ್ದ ಭಾರತ, ಗುರುವಾರ ರಾಜ್‍ಕೋಟ್‍ನಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿ ಸೇಡು ತೀರಿಸಿಕೊಂಡಿತ್ತು. ಬಾಂಗ್ಲಾ ನೀಡಿದ 154 ರನ್‍ಗಳ ಸಾಧಾರಣ ಮೊತ್ತ ಬೆನ್ನತ್ತಿದ ಭಾರತ ನಾಯಕ ರೋಹಿತ್ ಶರ್ಮಾ ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ 15.4 ಓವರ್ ಗಳಲ್ಲೇ 154 ರನ್ ಹೊಡೆದು ಜಯಗಳಿಸಿತು.

    ಬಾಂಗ್ಲಾ ವಿರುದ್ಧ ಪಂದ್ಯದಲ್ಲಿ ಎಂಟು ವಿಕೆಟ್‍ಗಳ ಜಯ ಸಾಧಿಸಿದ ಭಾರತ, ಟಿ-20 ಚೇಸಿಂಗ್‍ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಹಿಂದಿಕ್ಕಿ ಹೊಸ ದಾಖಲೆಯನ್ನು ಬರೆದಿದೆ. ಟಿ-20 ಯಲ್ಲಿ ಒಟ್ಟು 69 ಬಾರಿ ಚೇಸಿಂಗ್ ಮಾಡಿರುವ ಆಸಿಸ್ ಅದರಲ್ಲಿ 40 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಆದರೆ 61 ಪಂದ್ಯಗಳಲ್ಲಿ ಚೇಸಿಂಗ್ ಮಾಡಿರುವ ಭಾರತ ಅದರಲ್ಲಿ 41 ಪಂದ್ಯಗಳನ್ನು ಗೆದ್ದು ಹೊಸ ದಾಖಲೆಯನ್ನು ನಿರ್ಮಾಣ ಮಾಡಿದೆ. ಈ ಎರಡು ತಂಡಗಳನ್ನು ಬಿಟ್ಟರೆ ಒಟ್ಟು 67 ಚೇಸಿಂಗ್ ನಲ್ಲಿ ಪಾಕಿಸ್ತಾನ 36 ರಲ್ಲಿ ಗೆಲವು ಸಾಧಿಸಿ ಮೂರನೇ ಸ್ಥಾನ ಪಡೆದಿದೆ.

    ಎರಡನೇ ಪಂದ್ಯದಲ್ಲಿ ಬಾಂಗ್ಲಾ ನೀಡಿದ 154 ರನ್ ಗಳ ಗುರಿಯನ್ನು ಬೆನ್ನಟ್ಟಿದ ಭಾರತ 15.4 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 154 ರನ್ ಹೊಡೆದು ಜಯಗಳಿಸಿತು. ತನ್ನ 100 ನೇ ಪಂದ್ಯವನ್ನು ಸ್ಮರಣೀಯವಾಗಿಸಿದ ರೋಹಿತ್ ಶರ್ಮಾ ತಾನು ಹಿಟ್ ಮ್ಯಾನ್ ಎನ್ನುವುದನ್ನು ಮತ್ತೊಮ್ಮೆ ತೋರಿಸಿದರು. 23 ಎಸೆತಗಳಲ್ಲಿ ಅರ್ಧ ಶತಕ ಹೊಡೆತ ರೋಹಿತ್ 85 ರನ್ (43 ಎಸೆತ, 6 ಬೌಂಡರಿ, 6 ಸಿಕ್ಸರ್) ಹೊಡೆದು ಶತಕದಿಂದ ವಂಚಿತರಾದರು. ತನ್ನ ಅತ್ಯುತ್ತಮ ಆಟಕ್ಕಾಗಿ ರೋಹಿತ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

    ರೋಹಿತ್ ಬ್ಯಾಟಿಂಗ್ ಆರ್ಭಟ ಹೇಗಿತ್ತು ಅಂದರೆ 5.2 ಓವರ್ ಗಳಲ್ಲಿ 50 ರನ್ ಬಂದರೆ, 9.2 ಓವರ್ ಗಳಲ್ಲಿ ಭಾರತ 100 ರನ್ ಗಳಿಸಿತು. ನಾಯಕನಿಗೆ ಉತ್ತಮ ಸಾಥ್ ನೀಡಿದ ಶಿಖರ್ ಧವನ್ 31 ರನ್ (27 ಎಸೆತ, 4 ಬೌಂಡರಿ) ಹೊಡೆದರು. ಇವರಿಬ್ಬರು ಮೊದಲ ವಿಕೆಟಿಗೆ 11.5 ಓವರ್ ಗಳಲ್ಲಿ 118 ರನ್ ಜೊತೆಯಾಟವಾಡಿ ಭಾರತದ ಗೆಲುವಿಗೆ ಭದ್ರ ಬುನಾದಿ ಹಾಕಿದರು. ಕೊನೆಯಲ್ಲಿ ಕೆ.ಎಲ್. ರಾಹುಲ್ ಔಟಾಗದೇ 8 ರನ್, ಶ್ರೇಯಸ್ ಅಯ್ಯರ್ ಔಟಾಗದೇ 24 ರನ್ (13 ಎಸೆತ, 3 ಬೌಂಡರಿ,1 ಸಿಕ್ಸರ್) ಹೊಡೆದರು. ಕೊನೆಯ ಟಿ 20 ಪಂದ್ಯ ಭಾನುವಾರ ನಾಗ್ಪುರದಲ್ಲಿ ನಡೆಯಲಿದೆ.

  • ಏಕದಿನದಲ್ಲಿ ಕೊಹ್ಲಿ ದಾಖಲೆ ಮುರಿದ ಸ್ಮೃತಿ ಮಂಧಾನ

    ಏಕದಿನದಲ್ಲಿ ಕೊಹ್ಲಿ ದಾಖಲೆ ಮುರಿದ ಸ್ಮೃತಿ ಮಂಧಾನ

    ಆ್ಯಂಟಿಗುವಾ: ಭಾರತ ಮಹಿಳಾ ಕ್ರಿಕೆಟ್ ತಂಡದ ಸ್ಫೋಟಕ ಆರಂಭಿಕ ಬ್ಯಾಟ್ಸ್ ಮನ್ ಸ್ಮೃತಿ ಮಂಧಾನ ಅವರು ಏಕದಿನ ಕ್ರಿಕೆಟಿನಲ್ಲಿ 2 ಸಾವಿರ ರನ್ ಗಳಿಸುವ ಮೂಲಕ ವಿರಾಟ್ ಕೊಹ್ಲಿ ಮತ್ತು ಮಾಜಿ ನಾಯಕ ಸೌರವ್ ಗಂಗೂಲಿಯವರ ದಾಖಲೆಯನ್ನು ಮುರಿದಿದ್ದಾರೆ.

    ಪ್ರಸ್ತುತ ಭಾರತದ ಮಹಿಳಾ ತಂಡ ವೆಸ್ಟ್ ಇಂಡೀಸ್ ಪ್ರವಾಸದಲ್ಲಿದ್ದು, 2-1 ಅಂತರದಲ್ಲಿ ಏಕದಿನ ಸರಣಿಯನ್ನು ಗೆದ್ದುಗೊಂಡಿದೆ. ಕಾಲಿನ ಗಾಯದ ಸಮಸ್ಯೆಯಿಂದ ಮೊದಲ ಪಂದ್ಯದಿಂದ ಹೊರಗೆ ಉಳಿದಿದ್ದ ಮಂಧಾನ ಎರಡನೇ ಪಂದ್ಯದಲ್ಲಿ ಕಮ್‍ಬ್ಯಾಕ್ ಮಾಡಿದ್ದರು.

    ಬುಧವಾರ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಅಂತಿಮ ಪಂದ್ಯದಲ್ಲಿ ಉತ್ತಮವಾಗಿ ಬ್ಯಾಟ್ ಬೀಸಿದ ಮಂಧಾನ, 63 ಎಸೆತದಲ್ಲಿ 74 ರನ್ (9 ಬೌಂಡರಿ, 3 ಸಿಕ್ಸ್) ಸಿಡಿಸಿದರು. ಈ ಮೂಲಕ ವೆಸ್ಟ್ ಇಂಡೀಸ್ ನೀಡಿದ 194 ರನ್‍ಗಳ ಗುರಿಯನ್ನು ಭಾರತ ಸುಲಭವಾಗಿ ಬೆನ್ನಟ್ಟಿ ಗೆಲವು ಸಾಧಿಸಿತು. ಈ ಪಂದ್ಯದಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಮಂಧಾನ ಕೊಹ್ಲಿ ಮಾಡಿದ ವೇಗದ 2000 ರನ್ ದಾಖಲೆಯನ್ನು ಮುರಿದು ಹಾಕಿದ್ದಾರೆ.

    ಕೊಹ್ಲಿ ತಾನು ಆಡಿದ 53 ಇನ್ನಿಂಗ್ಸ್ ನಲ್ಲಿ 2 ಸಾವಿರ ರನ್‍ಗಳ ಗಡಿ ದಾಟಿದ್ದರೆ ಮಂಧಾನ ಅವರು ಕೇವಲ 51 ಇನ್ನಿಂಗ್ಸ್ 43.08 ರ ಸರಾಸರಿಯಲ್ಲಿ 2025 ರನ್ ಹೊಡೆದು ಕೊಹ್ಲಿ ಅವರ ಈ ದಾಖಲೆಯನ್ನು ಮುರಿದು ಹಾಕಿದ್ದಾರೆ. ಭಾರತದ ಪರ ಪುರುಷರ ಪೈಕಿ 48 ಇನ್ನಿಂಗ್ಸ್ ನಲ್ಲಿ 2 ಸಾವಿರ ರನ್ ಗಡಿ ದಾಟುವ ಮೂಲಕ ಶಿಖರ್ ಧವನ್ ಮೊದಲ ಸ್ಥಾನದಲ್ಲಿದ್ದಾರೆ. ಸೌರವ್ ಗಂಗೂಲಿ 52 ಇನ್ನಿಂಗ್ಸ್ ನಲ್ಲಿ 2000 ರನ್ ಹೊಡೆದಿದ್ದರು.

    ಮಂಧಾನ ಈವರೆಗೆ 51 ಏಕದಿನ ಪಂದ್ಯಗಳಲ್ಲಿ 43.08 ಸರಾಸರಿಯಲ್ಲಿ 2,025 ರನ್ ಗಳಿಸಿದ್ದಾರೆ. ತನ್ನ ಏಕದಿನ ವೃತ್ತಿಜೀವನದಲ್ಲಿ ಇಲ್ಲಿವರೆಗೆ ನಾಲ್ಕು ಶತಕಗಳು ಮತ್ತು 17 ಅರ್ಧಶತಕಗಳನ್ನು ಗಳಿಸಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾದ ಬೆಲಿಂಡಾ ಕ್ಲಾರ್ಕ್ ಮತ್ತು ಮೆಗ್ ಲ್ಯಾನಿಂಗ್ ನಂತರ ವೇಗವಾಗಿ 2000 ಏಕದಿನ ರನ್ ಗಳಿಸಿದ ಮೂರನೇ ಮಹಿಳಾ ಕ್ರಿಕೆಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

    ಇದರ ಜೊತೆಗೆ ಇನ್ನೊಂದು ದಾಖಲೆ ಮಾಡಿರುವ ಸ್ಮೃತಿ ಮಂಧಾನ, ಚೇಸಿಂಗ್ ವೇಳೆ ಏಕದಿನ ಪಂದ್ಯದಲ್ಲಿ 9 ಅರ್ಧ ಶತಕ ಸಿಡಿಸಿದ್ದ ನ್ಯೂಜಿಲೆಂಡ್ ಆಟಗಾರ್ತಿ ಸುಜಿ ಬೇಟ್ಸ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಕಳೆದ 9 ಇನ್ನಿಂಗ್ಸ್ ನಲ್ಲಿ ಮಂಧಾನ 663 ರನ್ ಸಿಡಿಸಿದ್ದಾರೆ.

  • ಹಾವು ಹಿಡಿಯುವುದರಲ್ಲಿ ದಾಖಲೆ ಬರೆದ ಸ್ನೇಕ್ ಶ್ಯಾಂ

    ಹಾವು ಹಿಡಿಯುವುದರಲ್ಲಿ ದಾಖಲೆ ಬರೆದ ಸ್ನೇಕ್ ಶ್ಯಾಂ

    ಮೈಸೂರು: ಹಾವು ಹಿಡಿಯುವುದರ ಮೂಲಕ ಸ್ನೇಕ್ ಶ್ಯಾಂ ದಾಖಲೆ ಬರೆದಿದ್ದಾರೆ. ಮೈಸೂರಿನ ಈ ಉರಗ ಪ್ರೇಮಿಗೆ ಹಾವು ಸಂರಕ್ಷಣೆ ಮಾಡುವುದೇ ಕಾಯಕ. ಈ ಕಾಯಕವನ್ನು ಶ್ಯಾಂ ಬಹಳ ಶ್ರದ್ಧೆ ಮತ್ತು ಪ್ರೀತಿಯಿಂದ ಮಾಡುತ್ತಿದ್ದಾರೆ. ಹೀಗಾಗಿ ಶ್ಯಾಂ ಹಾವು ಹಿಡಿಯುವುದರಲ್ಲಿ ಈಗ ಹೊಸ ದಾಖಲೆ ಬರೆದಿದ್ದಾರೆ.

    35 ಸಾವಿರ ಹಾವನ್ನು ಸಂರಕ್ಷಣೆ ಮಾಡಿದ ದಾಖಲೆ ಶ್ಯಾಂ ಮುಡಿಗೇರಿದೆ. ಮೈಸೂರಿನ ಹೆಬ್ಬಾಳ ಬಡಾವಣೆಯ ಇನ್ಫೋಸಿಸ್ ಆವರಣದಲ್ಲಿ ಮಂಡಲದ ಹಾವು ಕಾಣಿಸಿಕೊಂಡಿತ್ತು. ಸ್ಥಳಕ್ಕೆ ಬಂದ ಶ್ಯಾಂ ಆ ಹಾವನ್ನು ಕ್ಷಣ ಮಾತ್ರದಲ್ಲಿ ಹಿಡಿದರು. ಈ ಹಾವು ಶ್ಯಾಂ ಹಿಡಿದ 35ನೇ ಸಾವಿರದ ಹಾವಾಗಿ ಅವರ ರಿಜಿಸ್ಟರ್ ನಲ್ಲಿ ದಾಖಲಾಯಿತು.

    1981ರಿಂದ ಹಾವು ಹಿಡಿಯುವುದನ್ನು ಕಾಯಕ ಮಾಡಿಕೊಂಡಿರುವ ಶ್ಯಾಂ 1997ರಿಂದ ಹೀಗೆ ತಾವು ಹಿಡಿದ ಹಾವುಗಳನ್ನು ರಿಜಿಸ್ಟರ್ ನಲ್ಲಿ ದಾಖಲು ಮಾಡಿಕೊಳ್ಳಲು ಆರಂಭಿಸಿದ್ದಾರೆ. ಈಗ 35 ಸಾವಿರ ಹಾವು ಹಿಡಿದು ಸಂರಕ್ಷಿಸಿದ ಬಹು ಅಪರೂಪದ ದಾಖಲೆ ಮಾಡಿದ್ದಾರೆ.

    ಹಾವು ಕಂಡರೆ ಬೆಚ್ಚಿ ಬೀಳುವ ಮಂದಿಗೆ ಧೈರ್ಯ ಹೇಳಿ ಹಾವುಗಳನ್ನು ಹಿಡಿದು ಕಾಡಿಗೆ ಬಿಟ್ಟು ಬರುವ ಶ್ಯಾಂ ಬಗ್ಗೆ ಮೈಸೂರಿಗರಿಗೆ ಅಪಾರ ಪ್ರೀತಿ ಇದೆ. ಯಾವುದೇ ಪ್ರತಿಫಲ ಬಯಸದೇ ಹಾವು ಹಿಡಿಯುವ ಕಾಯಕ ಮಾಡುತ್ತಿರುವ ಸ್ನೇಕ್ ಶ್ಯಾಂಗೆ ಸರ್ಕಾರದಿಂದ ಹೆಚ್ಚಿನ ನೆರವು ಸಿಕ್ಕಿಲ್ಲ.

    ಮಕ್ಕಳನ್ನು ಶಾಲೆಗೆ ಬಿಡುವ ಕೆಲಸವೇ ಇವರ ಜೀವನಕ್ಕೆ ಆಧಾರ. ಜೊತೆಗೆ ಹಾವು ಹಿಡಿಯಲು ಹೋದಾಗ ಮನೆಯವರು ಕೊಡುವ ಅಲ್ಪಸ್ವಲ್ಪ ಹಣ ಇವರ ಜೀವನಕ್ಕೆ ಆಧಾರವಾಗಿದೆ. 35 ಸಾವಿರ ಹಾವು ಹಿಡಿದಿರುವ ಶ್ಯಾಂ ಈಗ ತಮ್ಮ ಸಾಧನೆಯನ್ನು ಜಗತ್ತಿಗೆ ಪರಿಚಯಿಸುವ ತವಕದಲ್ಲಿದ್ದಾರೆ.

  • ದ್ವಿಶತಕ ಸಿಡಿಸಿ ಸೆಹ್ವಾಗ್, ಸಚಿನ್ ದಾಖಲೆ ಮುರಿದ ಕಿಂಗ್ ಕೊಹ್ಲಿ

    ದ್ವಿಶತಕ ಸಿಡಿಸಿ ಸೆಹ್ವಾಗ್, ಸಚಿನ್ ದಾಖಲೆ ಮುರಿದ ಕಿಂಗ್ ಕೊಹ್ಲಿ

    – ಕೊಹ್ಲಿ, ಜಡೇಜಾ 205 ರನ್‍ಗಳ ಜೊತೆಯಾಟ
    – 601 ರನ್ ಗಳಿಸಿದ್ದಾಗ ಡಿಕ್ಲೇರ್ ಘೋಷಿಸಿದ ಭಾರತ

    ಪುಣೆ: ಇಂದು ದಕ್ಷಿಣ ಅಫ್ರಿಕಾದ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಸಿಡಿಸಿರುವ ಕೊಹ್ಲಿ ಮಾಜಿ ಆಟಗಾರರಾದ ವೀರೇಂದ್ರ ಸೆಹ್ವಾಗ್ ಮತ್ತು ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದಿದ್ದಾರೆ.

    ಇಂದು ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ 295 ಎಸೆತಗಳಲ್ಲಿ 28 ಬೌಂಡರಿ ಸಿಡಿಸುವ ಮೂಲಕ 7ನೇ ದ್ವಿಶತಕ ಹೊಡೆದರು. 79 ಟೆಸ್ಟ್ ಪಂದ್ಯಗಳಲ್ಲಿ 7 ದ್ವಿಶತಕ ಸಿಡಿಸುವ ಮೂಲಕ ಈ ಹಿಂದೆ ಭಾರತದ ಪರ ತಲಾ ಆರು ದ್ವಿಶತಕ ಸಿಡಿಸಿದ್ದ ವೀರೇಂದ್ರ ಸೆಹ್ವಾಗ್ ಮತ್ತು ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದರು.

    ಭಾರತ 156.3 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 601 ರನ್ ಗಳಿಸಿ ಮೊದಲ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದೆ. 91 ರನ್ (104 ಎಸೆತ, 8 ಬೌಂಡರಿ, 2 ಸಿಕ್ಸರ್) ಗಳಿಸಿದ್ದಾಗ ಬಲವಾದ ಹೊಡೆತ ಹೊಡೆಯಲು ಜಡೇಜಾ ಹೋಗಿ ವಿಕೆಟ್ ಒಪ್ಪಿಸಿದರು. ಜಡೇಜಾ ಔಟಾಗುತ್ತಿದ್ದಂತೆ ಕೊಹ್ಲಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಳ್ಳುವುದಾಗಿ ಘೋಷಿಸಿದರು.

    ಎರಡನೇ ಟೆಸ್ಟ್ ಪಂದ್ಯದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕೊಹ್ಲಿ ತಾನು ಎದುರಿಸಿದ 91 ಎಸೆತದಲ್ಲಿ ಅರ್ಧಶತಕ ಸಿಡಿಸಿ ಮಿಂಚಿದರು. ನಂತರ 173 ಎಸೆತಗಳಲ್ಲಿ ಭರ್ಜರಿ ಶತಕ ಸಿಡಿಸಿದ ಕೊಹ್ಲಿ 295 ಎಸೆತಗಳಲ್ಲಿ 200 ರನ್‍ಗಳ ಗಡಿ ದಾಟಿದರು. ಈ ಮೂಲಕ ವಿಶ್ವದಲ್ಲೇ ಅತೀ ಹೆಚ್ಚು ಟೆಸ್ಟ್ ದ್ವಿಶತಕ ಸಿಡಿಸಿದವರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕೇರಿದರು. ಅಂತಿಮವಾಗಿ ಕೊಹ್ಲಿ ಔಟಾಗದೇ 254 ರನ್(336 ಎಸೆತ, 33 ಬೌಂಡರಿ, 2 ಸಿಕ್ಸರ್) ಹೊಡೆದರು. ಕೊಹ್ಲಿ ಮತ್ತು ಜಡೇಜಾ 5ನೇ ವಿಕೆಟಿಗೆ 225 ರನ್ ಗಳ ಜೊತೆಯಾಟವಾಡಿದ್ದರಿಂದ ಭಾರತ 600 ರನ್ ಗಳ ಗಡಿಯನ್ನು ದಾಟಿತು.

    ಕೊಹ್ಲಿ ಅವರನ್ನು ಬಿಟ್ಟರೆ ಅತಿ ಹೆಚ್ಚು ಟೆಸ್ಟ್ ದ್ವಿಶತಕ ಸಿಡಿಸಿದವರ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಲೆಜೆಂಡ್ ಆಟಗಾರ ಡಾನ್ ಬ್ರಾಡ್ಮನ್ ಅವರು 12 ದ್ವಿಶತಕ ಸಿಡಿಸಿ ಮೊದಲ ಸ್ಥಾನದಲ್ಲಿ ಇದ್ದಾರೆ. ನಂತರ ಎರಡನೇ ಸ್ಥಾನದಲ್ಲಿ 11 ದ್ವಿಶತಕ ಸಿಡಿಸಿರುವ ಶ್ರೀಲಂಕಾದ ಮಾಜಿ ನಾಯಕ ಕುಮಾರ ಸಂಗಕ್ಕಾರ ಇದ್ದಾರೆ. 9 ದ್ವಿಶತಕ ಸಿಡಿಸಿರುವ ವೆಸ್ಟ್ ಇಂಡೀಸ್ ದೈತ್ಯ ಆಟಗಾರ ಬ್ರಿಯಾನ್ ಲಾರಾ ಮೂರನೇ ಸ್ಥಾನದಲ್ಲಿ ಇದ್ದಾರೆ.

    ಈ ಪಂದ್ಯದಲ್ಲಿ ಏಳನೇ ದ್ವಿಶತಕ ಸಿಡಿಸಿರುವ ಕೊಹ್ಲಿ ಭಾರತದ ಪರ ಟೆಸ್ಟ್ ಕ್ರಿಕೆಟ್‍ನಲ್ಲಿ 7 ಸಾವಿರ ರನ್ ಗಳಿಸಿದ ಭಾರತದ ಏಳನೇ ಬ್ಯಾಟ್ಸ್ ಮನ್ ಎನಿಸಿಕೊಂಡಿದ್ದಾರೆ. ಇದರ ಜೊತೆಗೆ ಉಪನಾಯಕ ಅಜಿಂಕ್ಯ ರಹಾನೆ ಜೊತೆಗೆ 178 ರನ್‍ಗಳ ಜೊತೆಯಾಟವಾಡಿದ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಾಲ್ಕನೇ ವಿಕೆಟ್‍ಗೆ ಅತಿ ಹೆಚ್ಚು ರನ್ ಹೊಡೆದ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

    ತವರಿನಲ್ಲಿ ಸೌತ್ ಆಫ್ರಿಕಾ ತಂಡದ ವಿರುದ್ಧ ಟೆಸ್ಟ್ ಸರಣಿ ಆಡುತ್ತಿರುವ ಭಾರತ, ಮೊದಲ ಟೆಸ್ಟ್ ನಲ್ಲಿ ರೋಹಿತ್ ಶರ್ಮಾ ಅವರ ಭರ್ಜರಿ ಬ್ಯಾಟಿಂಗ್ ಮತ್ತು ಮೊಹಮ್ಮದ್ ಶಮಿ ಅವರ ಮಾರಕ ಬೌಲಿಂಗ್ ದಾಳಿಯಿಂದ 203 ರನ್‍ಗಳ ಅಂತರದಲ್ಲಿ ಗೆದ್ದು ಬೀಗಿತ್ತು. ಈಗ ಎರಡನೇ ಟೆಸ್ಟ್ ಆರಂಭವಾಗಿದ್ದು, ಮೊದಲು ಬ್ಯಾಟ್ ಮಾಡುತ್ತಿರುವ ಭಾರತ ಮಯಾಂಕ್ ಅಗರವಾಲ್ ಶತಕ ಮತ್ತು ಕೊಹ್ಲಿ ದ್ವಿಶತಕದಿಂದ ಪಂದ್ಯದ ಮೇಲೆ ಉತ್ತಮ ಹಿಡಿತ ಸಾಧಿಸಿದೆ.

  • ನನ್ನ ದಾಖಲೆಯನ್ನು ಅಶ್ವಿನ್ ಮುರಿಯುತ್ತಾರೆ: ಹರ್ಭಜನ್ ಸಿಂಗ್

    ನನ್ನ ದಾಖಲೆಯನ್ನು ಅಶ್ವಿನ್ ಮುರಿಯುತ್ತಾರೆ: ಹರ್ಭಜನ್ ಸಿಂಗ್

    ನವದೆಹಲಿ: ನನ್ನ ದಾಖಲೆಯನ್ನು ಆರ್ ಅಶ್ವಿನ್ ಮುರಿಯುತ್ತಾರೆ ಎಂದು ಭಾರತದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಭವಿಷ್ಯ ನುಡಿದಿದ್ದಾರೆ.

    ಟೆಸ್ಟ್ ಕ್ರಿಕೆಟ್‍ನಲ್ಲಿ ಒಟ್ಟು 417 ವಿಕೆಟ್ ಪಡೆದಿರುವ ಹರ್ಭಜನ್ ಸಿಂಗ್ ಭಾರತದ ಪರ ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದವರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ಇದ್ದಾರೆ. ಇವರನ್ನು ಬಿಟ್ಟರೆ ಮೊದಲ ಸ್ಥಾನದಲ್ಲಿ 619 ಟೆಸ್ಟ್ ವಿಕೆಟ್ ಪಡೆದ ಅನಿಲ್ ಕುಂಬ್ಳೆ, ಎರಡನೇ ಸ್ಥಾನದಲ್ಲಿ ಮಾಜಿ ನಾಯಕ ಕಪಿಲ್ ದೇವ್ ಇದ್ದಾರೆ.

    ಈಗ ಈ ವಿಚಾರದ ಬಗ್ಗೆ ಮಾತನಾಡಿರುವ ಹರ್ಭಜನ್ ಸಿಂಗ್, ಟೆಸ್ಟ್ ಕ್ರಿಕೆಟಿನಲ್ಲಿ 417 ವಿಕೆಟ್ ಪಡೆದಿರುವ ನನ್ನ ದಾಖಲೆಯನ್ನು ಆರ್ ಆಶ್ವಿನ್ ಅವರು ಬಹುಬೇಗ ಮುರಿಯಲಿದ್ದಾರೆ. ಅವರಿಗೆ ಆ ಶಕ್ತಿ ಇದೆ. ಅವರು ಟೆಸ್ಟ್ ಕ್ರಿಕೆಟ್‍ನಲ್ಲಿ 400 ವಿಕೆಟ್‍ಗಳ ಗಡಿಯನ್ನು ದಾಟಲಿದ್ದಾರೆ ಮತ್ತು ನನ್ನ ದಾಖಲೆಯನ್ನು ಮುರಿಯುತ್ತಾರೆ ಎಂದು ಅವರು ಹೇಳಿದರು.

    ಅಶ್ವಿನ್ ಟೆಸ್ಟ್ ಕ್ರಿಕೆಟ್‍ನಲ್ಲಿ 600 ವಿಕೆಟ್‍ಗಳ ಗಡಿ ದಾಟಲಿದ್ದಾರೆ ಎಂಬುದು ನನಗೆ ಖಾತ್ರಿಯಿಲ್ಲ. ಆದರೆ ಅವರು ಖಂಡಿತವಾಗಿಯೂ 400 ಮತ್ತು 500ರ ಗಡಿ ದಾಟುತ್ತಾರೆ. ಅವರು 600 ವಿಕೆಟ್‍ಗಳನ್ನು ಪಡೆಯಬಹುದು. ಆದರೆ ಅವರು ತಮ್ಮ ದೇಹವನ್ನು ಸದೃಢವಾಗಿ ಇಟ್ಟುಕೊಳ್ಳಬೇಕು. ಹಾಗೆ ಮಾಡಿದರೆ ಅವರು ಖಂಡಿತವಾಗಿಯೂ 600 ರ ಗಡಿ ದಾಟುತ್ತಾರೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಒಟ್ಟು 700 ವಿಕೆಟ್ ಪಡೆದಿರುವ ಹರ್ಭಜನ್ ಹೇಳಿದ್ದಾರೆ.

    ಅಫ್ರಿಕಾ ವಿರುದ್ಧ ಟೆಸ್ಟ್ ಸರಣಿ ಆಡುತ್ತಿರುವ ಅಶ್ವಿನ್ ವಿಶಾಖಪಟ್ಟಣದಲ್ಲಿ ನಡೆದ ತಮ್ಮ 66 ನೇ ಟೆಸ್ಟ್ ಪಂದ್ಯದಲ್ಲಿ 350 ವಿಕೆಟ್ ಪಡೆದರು. ಈ ಮೂಲಕ ಅತ್ಯಂತ ವೇಗದಲ್ಲಿ 350 ವಿಕೆಟ್ ಪಡೆದ ಭಾರತದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದಕ್ಕೂ ಮುನ್ನ 77 ಟೆಸ್ಟ್ ಪಂದ್ಯಗಳಲ್ಲಿ 350 ವಿಕೆಟ್ ಪಡೆದ ಕನ್ನಡಿಗ ಅನಿಲ್ ಕುಂಬ್ಳೆ ಮೊದಲ ಸ್ಥಾನ ಪಡೆದಿದ್ದರು.

    ಅಶ್ವಿನ್ ಅವರ 350 ಟೆಸ್ಟ್ ವಿಕೆಟ್‍ಗಳಲ್ಲಿ 242 ವಿಕೆಟ್‍ಗಳು ತವರಿನಲ್ಲಿ ಆಡಿದ 39 ಪಂದ್ಯಗಳಲ್ಲಿ ಬಂದಿದ್ದರೆ ಉಳಿದ 108 ವಿಕೆಟ್‍ಗಳು ವಿದೇಶದಲ್ಲಿ ಆಡಿದ 27 ಟೆಸ್ಟ್ ಪಂದ್ಯಗಳಿಂದ ಬಂದಿವೆ. ಆದರೆ ಏಷ್ಯಾದಲ್ಲಿ ಅವರು ಆಡಿದ 46 ಟೆಸ್ಟ್ ಪಂದ್ಯಗಳನ್ನು ಗಣನೆಗೆ ತೆಗೆದುಕೊಂಡರೆ ಆ ಸಂಖ್ಯೆ 285 ವಿಕೆಟ್‍ಗಳಿಗೆ ಏರುತ್ತದೆ. ಇದನ್ನು ಬಿಟ್ಟರೆ ಉಪಖಂಡದ ಹೊರಗಿನ 20 ಪಂದ್ಯಗಳಿಂದ ಕೇವಲ 65 ಟೆಸ್ಟ್ ವಿಕೆಟ್‍ಗಳನ್ನು ಪಡೆದಿದ್ದಾರೆ.

  • ಅವಳಿ ಮಕ್ಕಳಿಗೆ ಜನ್ಮ ನೀಡಿ ದಾಖಲೆ ಬರೆದ 74ರ ವೃದ್ಧೆ

    ಅವಳಿ ಮಕ್ಕಳಿಗೆ ಜನ್ಮ ನೀಡಿ ದಾಖಲೆ ಬರೆದ 74ರ ವೃದ್ಧೆ

    ಹೈದರಾಬಾದ್: ಆಂಧ್ರಪ್ರದೇಶದ ಗುಂಟೂರು ನಗರದಲ್ಲಿ 74 ವರ್ಷದ ವೃದ್ಧೆಯೊಬ್ಬರು ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿ ದಾಖಲೆ ನಿರ್ಮಿಸಿದ್ದಾರೆ. ಇಳಿ ವಯಸ್ಸಿನಲ್ಲಿ 2 ಮಕ್ಕಳಿಗೆ ಜನ್ಮನೀಡಿ ತಾವು ತಾಯಿಯಾಗುವ ಬಯಕೆಯನ್ನು ತೀರಿಸಿಕೊಂಡಿದ್ದಾರೆ.

    ಹೌದು, ಈ ವಯಸ್ಸಿನಲ್ಲೂ ಮಗುವಿಗೆ ಜನ್ಮ ನೀಡೋದಾ ಎಂದು ಅಚ್ಚರಿಯಾಗಬಹುದು. ಆದರೂ ಇದು ಸತ್ಯ. ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ನೆಲ್ಲಪಾರ್ತಿಪಾಡು ಗ್ರಾಮದ ನಿವಾಸಿ ಎರ್ರಮಟ್ಟಿ ಮಂಗಯಮ್ಮ(74) ಅವರು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಎರ್ರಾಮಟಿ ರಾಜ ರಾವ್(80) ಹಾಗೂ ಮಂಗಯಮ್ಮ ಅವರು ಮಾರ್ಚ್ 22, 1962 ರಂದು ಮದುವೆಯಾಗಿದ್ದರು. ಆದರೆ ರಾಜ ರಾವ್ ಮತ್ತು ಮಂಗಯಮ್ಮ ದಂಪತಿಗೆ ಮಕ್ಕಳಿರಲಿಲ್ಲ. ಬಹುವರ್ಷದಿಂದ ಮಕ್ಕಳನ್ನು ಪಡೆಯುವ ಆಸೆ ಹೊತ್ತಿದ್ದ ದಂಪತಿಯ ಕನಸು ಈಗ ನನಸಾಗಿದೆ. ಈ ಮೂಲಕ ಮಂಗಯಮ್ಮ ಹೊಸ ದಾಖಲೆ ಬರೆದಿದ್ದಾರೆ.

    ಸುಮಾರು 30 ದಶಕಗಳಿಂದ ಮಕ್ಕಳು ಪಡೆಯಲು ದಂಪತಿ ಸಾಕಷ್ಟು ವೈದ್ಯರ ಮೊರೆಹೋಗುತ್ತಲೇ ಇದ್ದರು. ಆದರೆ 2018ರ ನವೆಂಬರ್ ತಿಂಗಳಲ್ಲಿ ಅವರು ಗುಂಟೂರಿನ ಅಹಲ್ಯಾ ನರ್ಸಿಂಗ್ ಹೋಂಗೆ ತಮ್ಮ ಸಮಸ್ಯೆಗೆ ಪರಿಹಾರ ಪಡೆಯಲು ಹೋಗಿದ್ದರು. ಅಲ್ಲಿ ಡಾ. ಶಾನಕ್ಯಾಲ ಉಮಾಶಂಕರ್ ಅವರು ದಂಪತಿಯ ಸಮಸ್ಯೆಗೆ ಪರಿಹಾರ ನೀಡುವುದಾಗಿ ಭರವಸೆ ನೀಡಿದರು. ಈ ಸವಾಲಿನ ಪ್ರಕರಣವನ್ನು ತಮ್ಮ ಕೈಗೆ ತೆಗೆದುಕೊಂಡು ಯಶಸ್ವಿಯಾಗಿದ್ದಾರೆ.

    ಈ ಬಗ್ಗೆ ಮಾತನಾಡಿದ ಡಾ. ಶಾನಕ್ಯಾಲ ಉಮಾಶಂಕರ್ ಅವರು, ಮಂಗಯಮ್ಮ ಅವರಿಗೆ ಬಿಪಿ, ಸಕ್ಕರೆ ಕಾಯಿಲೆ ಅಥವಾ ಯಾವುದೇ ಆರೋಗ್ಯದ ತೊಂದರೆ ಇಲ್ಲ. ಅವರ ಆನುವಂಶಿಕ ರೇಖೆಯು ತುಂಬಾ ಉತ್ತಮವಾಗಿದೆ. ಈ ಹಿನ್ನೆಲೆಯಲ್ಲಿ ಹೃದ್ರೋಗ ತಜ್ಞರು, ಶ್ವಾಸಕೋಶಶಾಸ್ತ್ರಜ್ಞರು ಸೇರಿದಂತೆ ಇತರೆ ವಿಶೇಷ ವೈದ್ಯರೊಂದಿಗೆ ಚರ್ಚಿಸಿದ ಬಳಿಕ ಮಂಗಮ್ಮ ಅವರಿಗೆ ಎಲ್ಲಾ ರೀತಿಯ ಪರೀಕ್ಷೆ ನಡೆಸಿ, ನಂತರ ನಾವು ಅವರ ಸಮಸ್ಯೆಯನ್ನು ಬಗೆಹರಿಸಲು ನಿರ್ಧರಿಸಿದೆವು. ಬಹಳ ವರ್ಷಗಳ ಹಿಂದೆಯೇ ಅವರು ಋತುಬಂಧದ ಹಂತವನ್ನು ತಲುಪಿದ್ದರು. ಆದರೆ ಐವಿಎಫ್(ವಿಟ್ರೊ ಫಲೀಕರಣ ಅಥವಾ ವಿಟ್ರೋ ಫರ್ಟಿಲೈಸೇಷನ್) ಮೂಲಕ ನಾವು ಕೇವಲ ಒಂದು ತಿಂಗಳಲ್ಲಿ ಅವರು ಮತ್ತೆ ಋತುಮತಿಯಾಗುವಂತೆ ಚಿಕಿತ್ಸೆ ಕೊಟ್ಟೆವು ಎಂದು ತಿಳಿಸಿದರು.

    ನಂತರ ಐವಿಎಫ್ ವಿಧಾನದಿಂದ ಮಂಗಯಮ್ಮ ಅವರು ಗರ್ಭ ಧರಿಸುವಂತೆ ಚಿಕಿತ್ಸೆ ನೀಡಲಾಯಿತು. ಬಳಿಕ ಅವರನ್ನು ಜಾಗೃತೆಯಿಂದ ನೋಡಿಕೊಳ್ಳುವುದು ಅವಶ್ಯವಾಗಿದ್ದ ಕಾರಣಕ್ಕೆ ದಂಪತಿಯನ್ನು ಆಸ್ಪತ್ರೆಯಲ್ಲಿಯೇ ಉಳಿಯಲು ಸೂಚಿಸಿದೆವು. ಮಂಗಯಮ್ಮ ಅವರಿಗೆ ಅಗತ್ಯ ಪೋಷ್ಠಿಕಾಂಶ, ಆರೈಕೆ, ಚಿಕಿತ್ಸೆ ನೀಡಿ ಆಸ್ಪತ್ರೆಯಲ್ಲಿಯೇ ನೋಡಿಕೊಳ್ಳಲಾಗುತ್ತಿತ್ತು. ಅವರ ವಯಸ್ಸಿಗೆ ನಾರ್ಮಲ್ ಡೆಲಿವರಿ ಆಗುವುದು ಕಷ್ಟದ ವಿಚಾರವಾಗಿದ್ದ ಕಾರಣಕ್ಕೆ ಸಿಸೇರಿಯನ್ ಮಾಡಬೇಕಾಯಿತು. ಸದ್ಯ ತಾಯಿ, ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

    ತಾಯಿಯಾದ ಖುಷಿಯನ್ನು ಮಂಗಯಮ್ಮ ಅವರು ಹಂಚಿಕೊಂಡು, ನಾವು ಮಕ್ಕಳಿಲ್ಲದೆ ಕೊನೆಯುಸಿರು ಎಳೆಯುತ್ತೇವೆ ಎಂದು ಅಂದುಕೊಂಡಿದ್ದೆ. ಆದರೆ ನಮ್ಮ ಮನೆಯ ಪಕ್ಕದಲ್ಲಿದ್ದ ಮಹಿಳೆಯೊಬ್ಬರು 55ರ ವಯಸ್ಸಿನಲ್ಲಿ ತಾಯಿಯಾಗಿದ್ದರು. ಅವರು ಐವಿಎಫ್ ತಂತ್ರಜ್ಞಾನದ ಮೂಲಕ ಮಕ್ಕಳು ಪಡೆಯುವ ವಯಸ್ಸು ಮೀರಿದ್ದರೂ ಮಕ್ಕಳು ಪಡೆಯಬಹುದು ಎಂದು ಹೇಳಿದ್ದರು. ಆಗ ನಾನು ಪತಿಗೆ ಈ ಬಗ್ಗೆ ತಿಳಿಸಿದೆ, ಅವರೂ ಕೂಡ ಇದಕ್ಕೆ ಒಪ್ಪಿಕೊಂಡರು. ನಾನು ಈಗ ಬಹಳ ಖುಷಿಯಾಗಿದ್ದೇನೆ ಎಂದು ಸಂತೋಷ ವ್ಯಕ್ತಪಡಿಸಿದರು.

    ಇತ್ತೀಚೆಗೆ ರಾಜಸ್ತಾನ ಮೂಲದ ದಲ್ಜಿಂಧರ್ ಕೌರ್ ಅವರು ತಮ್ಮ 70ರ ವಯಸ್ಸಿನಲ್ಲಿ ತಾಯಿಯಾಗಿ ದಾಖಲೆ ಬರೆದಿದ್ದರು. ಈ ದಾಖಲೆಯನ್ನು ಮಂಗಯಮ್ಮ ಅವರು ಮುರಿದು, ಹೊಸ ದಾಖಲೆ ಸೃಷ್ಟಿಸಿದ್ದಾರೆ.

  • ಕಪಿಲ್ ದೇವ್ ದಾಖಲೆ ಮುರಿದ ಇಶಾಂತ್

    ಕಪಿಲ್ ದೇವ್ ದಾಖಲೆ ಮುರಿದ ಇಶಾಂತ್

    ನವದೆಹಲಿ: ಟೆಸ್ಟ್ ಕ್ರಿಕೆಟ್‍ನಲ್ಲಿ ಭಾರತದ ಮಾಜಿ ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್ ಅವರ ದಾಖಲೆಯನ್ನು ವೇಗಿ ಇಶಾಂತ್ ಶರ್ಮಾ ಹಿಂದಿಕ್ಕಿದ್ದಾರೆ.

    ಪ್ರಸ್ತುತ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತದ ಆಟಗಾರರು ಹಲವಾರು ದಾಖಲೆಯನ್ನು ನಿರ್ಮಿಸುತ್ತಿದ್ದಾರೆ. ವಿಂಡೀಸ್ ನಡುವಿನ 2ನೇ ಟೆಸ್ಟ್ ಪಂದ್ಯದಲ್ಲಿ ವೇಗಿ ಜಸ್ಪ್ರೀತ್ ಬುಮ್ರಾ ಅವರು ಹ್ಯಾಟ್ರಿಕ್ ವಿಕೆಟ್ ಪಡೆದು ಮಿಂಚಿದ್ದರು. ಈ ಮೂಲಕ ಭಾರತ ಪರ ಟೆಸ್ಟ್ ಪಂದ್ಯದಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ ಮೂರನೇ ಆಟಗಾರ ಎಂದು ಖ್ಯಾತಿ ಪಡೆದಿದ್ದರು.

    ಇದೇ ಪಂದ್ಯದಲ್ಲಿ ಟೆಸ್ಟ್ ಕ್ರಿಕೆಟ್‍ನ ಮೊದಲ ಅರ್ಧಶತಕ ಬಾರಿಸಿದ್ದ ಇಶಾಂತ್ ಶರ್ಮಾ ಈಗ ಮೊತ್ತೊಂದು ದಾಖಲೆ ಮಾಡಿದ್ದಾರೆ. ಏಷ್ಯಾದಿಂದ ಆಚೆಗೆ 45 ಟೆಸ್ಟ್ ಪಂದ್ಯಗಳನ್ನು ಆಡಿದ್ದ ಕಪಿಲ್ ದೇವ್ ಅವರು ಒಟ್ಟು 155 ವಿಕೆಟ್ ಕಿತ್ತಿದ್ದರು. ಪಸ್ತುತ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದಲ್ಲಿ ವಿಂಡೀಸ್ ಆಟಗಾರ ಜಹಮರ್ ಹ್ಯಾಮಿಲ್ಟನ್ ಅವರನ್ನು ಔಟ್ ಮಾಡುವ ಮೂಲಕ ಇಶಾಂತ್ ಅವರು 156 ವಿಕೆಟ್ ಕಿತ್ತು ಕಪಿಲ್ ದೇವ್ ದಾಖಲೆಯನ್ನು ಮುರಿದು ಹಾಕಿದ್ದಾರೆ.

    ಏಷ್ಯಾದಿಂದ ಆಚೆಗೆ ಟೆಸ್ಟ್ ಪಂದ್ಯಗಳಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ 50 ಪಂದ್ಯಗಳನ್ನು ಆಡಿ 200 ವಿಕೆಟ್ ಪಡೆದಿರುವ ಕನ್ನಡಿಗ ಅನಿಲ್ ಕುಂಬ್ಳೆ ಅವರು ಮೊದಲ ಸ್ಥಾನದಲ್ಲಿ ಇದ್ದಾರೆ. ಇವರನ್ನು ಬಿಟ್ಟರೆ ಇಶಾಂತ್ ಶರ್ಮಾ ನಂತರ ಕಪಿಲ್ ದೇವ್ ಇದ್ದಾರೆ. 38 ಪಂದ್ಯಗಳನ್ನು ಆಡಿ 147 ವಿಕೆಟ್ ಪಡೆದ ಮಾಜಿ ವೇಗಿ ಜಹೀರ್ ಖಾನ್ ಅವರು ನಾಲ್ಕನೇ ಸ್ಥಾನದಲ್ಲಿದ್ದಾರೆ. ಏಷ್ಯಾದಿಂದ ಹೊರಗೆ 28 ಪಂದ್ಯಗಳನ್ನು ಆಡಿ 101 ವಿಕೆಟ್ ಪಡೆದಿರುವ ಮೊಹಮ್ಮದ್ ಶಮಿ ಐದನೇ ಸ್ಥಾನದಲ್ಲಿ ಇದ್ದಾರೆ.

    ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ನೀಡಿರುವ 468 ರನ್‍ಗಳ ದೊಡ್ಡ ಮೊತ್ತವನ್ನು ಬೆನ್ನಟ್ಟಿರುವ ವೆಸ್ಟ್ ಇಂಡೀಸ್ ತಂಡ ಮೂರನೇ ದಿನದ ಅಂತ್ಯಕ್ಕೆ 45 ರನ್ ಗಳಿಸಿ ಎರಡು ವಿಕೆಟ್ ಕಳೆದುಕೊಂಡಿದೆ. ವೆಸ್ಟ್ ಇಂಡೀಸ್‍ಗೆ ಪಂದ್ಯ ಗೆಲ್ಲಲು ಇನ್ನೂ 423 ರನ್‍ಗಳ ಅವಶ್ಯಕತೆ ಇದ್ದು, 2 ದಿನದ ಆಟ ಬಾಕಿಯಿದೆ.