Tag: ದಸರಾ ಉದ್ಘಾಟನೆ

  • ದಸರಾ ಉದ್ಘಾಟನೆಗೆ ಸರ್ಕಾರದಿಂದ ಬಾನು ಮುಷ್ತಾಕ್‌ಗೆ ಅಧಿಕೃತ ಆಹ್ವಾನ

    ದಸರಾ ಉದ್ಘಾಟನೆಗೆ ಸರ್ಕಾರದಿಂದ ಬಾನು ಮುಷ್ತಾಕ್‌ಗೆ ಅಧಿಕೃತ ಆಹ್ವಾನ

    ಮೈಸೂರು: ವಿಶ್ವವಿಖ್ಯಾತ ದಸರಾಗೆ ದಿನಗಣನೆ ಶುರುವಾಗಿದ್ದು, ಈ ಬಾರಿಯ ದಸರಾ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್‌ರಿಗೆ (Banu Mushtaq) ಸರ್ಕಾರದಿಂದ ಅಧಿಕೃತ ಆಹ್ವಾನ ನೀಡಲಾಗಿದೆ.

    ಹಾಸನ (Hasaan) ನಗರದ ಅಮಿರ್ ಮೊಹಲ್ಲಾದಲ್ಲಿರುವ ಬಾನು ಮುಷ್ತಾಕ್ ಅವರ ನಿವಾಸಕ್ಕೆ ದಸರಾ ವಿಶೇಷಧಿಕಾರಿ ಆಗಿರುವ ಮೈಸೂರು ಡಿಸಿ ಲಕ್ಷ್ಮಿಕಾಂತರೆಡ್ಡಿ ಹಾಗೂ ಎಡಿಸಿ ಶಿವರಾಜ್ ಅವರು ತೆರಳಿದ್ದರು. ಶಾಲು ಹೊದಿಸಿ, ಹಾರ ಹಾಕಿ, ಮೈಸೂರು ಪೇಟ ತೊಡಿಸಿ, ಆನೆ ವಿಗ್ರಹದ ಜೊತೆ ಆಹ್ವಾನ ಪತ್ರಿಕೆ ನೀಡಿ ಅಧಿಕೃತವಾಗಿ ಆಹ್ವಾನಿಸಿದ್ದಾರೆ.

    ಆಹ್ವಾನ ಸ್ವೀಕರಿಸಿ ಮಾತನಾಡಿದ ಬಾನು ಮುಷ್ತಾಕ್ ಅವರು ಸರ್ಕಾರಕ್ಕೆ ಧನ್ಯವಾದ ಸಲ್ಲಿಸಿದರು. 2025ರ ದಸರಾ ಉದ್ಘಾಟನೆ ಸಂದರ್ಭದಲ್ಲಿ ಸಮಸ್ತ ಕನ್ನಡಿಗರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಸಿದ್ದರಾಮಯ್ಯ ಅವರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ. ನನ್ನನ್ನು ಸ್ವಾಗತ ಮಾಡಿದ ಮೈಸೂರು ಜಿಲ್ಲಾಡಳಿತಕ್ಕೂ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಇನ್ನೂ ಸಮಯ ಬಂದಾಗ ಎಲ್ಲದಕ್ಕೂ ಉತ್ತರ ಕೊಡುತ್ತೇನೆ ಎಂದಿದ್ದಾರೆ.

    =

  • ಬಿಜೆಪಿಯಲ್ಲಿ ನಡೆಯಲಾರದ ನಾಣ್ಯಗಳು ಚಾಲ್ತಿಗೆ ಬರೋಕೆ ದಸರಾ ಬಗ್ಗೆ ಮಾತು – ಪ್ರಿಯಾಂಕ್ ಖರ್ಗೆ

    ಬಿಜೆಪಿಯಲ್ಲಿ ನಡೆಯಲಾರದ ನಾಣ್ಯಗಳು ಚಾಲ್ತಿಗೆ ಬರೋಕೆ ದಸರಾ ಬಗ್ಗೆ ಮಾತು – ಪ್ರಿಯಾಂಕ್ ಖರ್ಗೆ

    -ಬಿಜೆಪಿಯವರು ಯಾರಾದ್ರು ಒಬ್ಬರು ಹೋಗಿ ಬೂಕರ್ ಪ್ರಶಸ್ತಿ ತರಲಿ ನೋಡೋಣ ಎಂದು ಸವಾಲ್

    ಬೆಂಗಳೂರು: ಬಿಜೆಪಿಯಲ್ಲಿ (BJP) ನಡೆಯಲಾರದ ನಾಣ್ಯಗಳು ಚಾಲ್ತಿಗೆ ಬರೋಕೆ ದಸರಾ ಉದ್ಘಾಟನೆ (Dasara Inauguration) ವಿಚಾರವಾಗಿ ವಿವಾದ ಮಾಡುತ್ತಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.

    ಬಾನು ಮುಷ್ತಾಕ್ (Banu Mushtaq) ಅವರಿಂದ ದಸರಾ ಉದ್ಘಾಟನೆಗೆ ಬಿಜೆಪಿ ನಾಯಕರ ವಿರೋಧ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಈ ಬಗ್ಗೆ ಮಾಜಿ ಸಂಸದರು, ಮಾಜಿ ಬಿಜೆಪಿ ಶಾಸಕರು ನಡೆಯಲಾರದ ನಾಣ್ಯಗಳು ಚಾಲ್ತಿಯಲ್ಲಿ ಬರೋಕೆ ಹೀಗೆ ಮಾತಾಡ್ತಿದ್ದಾರೆ. ನಿಸಾರ್ ಅಹಮದ್ ದಸರಾ ಉದ್ಘಾಟನೆ ಮಾಡಿಲ್ಲವಾ? ಬಿಜೆಪಿ ಸರ್ಕಾರ ಇದ್ದಾಗ ಅಬ್ದುಲ್ ಕಲಾಂ ಅವರನ್ನ ದಸರಾಗೆ ಕರೆದಿದ್ದರು. ಅವರು ಬಂದಿರಲಿಲ್ಲ. ಕಲಾಂ, ನಿಸಾರ್ ಅಹಮದ್ ಮುಸ್ಲಿಮರು ಅಂತ ಅವರನ್ನ ಕರೆಸಿದ್ದಾ? ಅವರ ಕೊಡುಗೆ, ಸಾಮರ್ಥ್ಯ ನೋಡಿ ಕರೆಸಿದ್ದಾ? ನಮ್ಮ ನಾಡಿಗೆ ಅವರು ಕೊಡುಗೆ ಕೊಟ್ಟಿರಲಿಲ್ಲವಾ? ಕನ್ನಡ ಪರವಾಗಿ ಬಾನು ಮುಷ್ತಾಕ್ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಬಾನು ಮುಷ್ತಾಕ್ ಅವರ ಸಾಧನೆ ನೋಡಿ ಮೆಚ್ಚಿ ನಾವು ಉದ್ಘಾಟನೆಗೆ ಕರೆಸಿದ್ದೇವೆ. ಅದರಲ್ಲಿ ತಪ್ಪೇನಿದೆ. ಮಾಜಿ ಸಂಸದರಿಗೆ ಏನು ಇದರಲ್ಲಿ ಅಷ್ಟು ಕಳಕಳಿ ಎಂದು ಪ್ರಶ್ನೆ ಮಾಡಿದರು.ಇದನ್ನೂ ಓದಿ: ಚೀನಾದಲ್ಲಿ ಪುಟಿನ್‌ ಜೊತೆ ಒಂದೇ ಕಾರಿನಲ್ಲಿ ಮೋದಿ ಪ್ರಯಾಣ

    ಟಿಪ್ಪು, ಹೈದರ್ ಅಲಿ ಇದ್ದಾಗಲು ದಸರಾ ನಡೆದಿತ್ತು. ನಿಂತಿರಲಿಲ್ಲ. ತಾಯಿ ಚಾಮುಂಡಿಯೇ ಏನು ಮಾತಾಡಲ್ಲ. ಇವರೇ ಚಾಮುಂಡೇಶ್ವರಿ ವಕ್ತಾರರ ತರಹ ಮಾತಾಡ್ತಾರೆ. ಯಾರು ಇವರೆಲ್ಲ ಮಾತಾಡೋಕೆ? ಬಿಜೆಪಿ ಅವರ ಕೊಡುಗೆ ಶೂನ್ಯ. ಕರ್ನಾಟಕ, ಭಾಷೆ, ನಾಡಿಗೆ ಕೊಡುಗೆ ಕೊಟ್ಟಿರೋರು ಉದ್ಘಾಟನೆ ಮಾಡಬಾರದು ಅಂದರೆ ಹೇಗೆ? ಇದು ಬಿಜೆಪಿ ಅವರ ರಾಜಕೀಯ ಅಷ್ಟೇ. ಇವರಿಗೆ ಕೆಲಸ ಇಲ್ಲ. ರಾಜಕೀಯ ಅಸ್ಥಿತ್ವ ಉಳಿಸಿಕೊಳ್ಳಲು ಹೀಗೆ ಮಾತಾಡ್ತಿದ್ದಾರೆ ಅಷ್ಟೆ. ಬಿಜೆಪಿ ಅವರು ಯಾರಾದ್ರು ಒಬ್ಬರು ಹೋಗಿ ಬೂಕರ್ ಪ್ರಶಸ್ತಿ ತರಲಿ ನೋಡೋಣ ಎಂದು ಸವಾಲು ಹಾಕಿದರು.

    ಚಾಮುಂಡೇಶ್ವರಿ ಹಿಂದೂಗಳ ಆಸ್ತಿಯಲ್ಲ ಎಂಬ ಡಿಕೆಶಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅನೇಕ ಕಡೆ ಕೋಮು ಸೌಹಾರ್ದತೆಗೋಸ್ಕರ ಒಟ್ಟಾಗಿ ಕೆಲಸ ಮಾಡ್ತಾರೆ. ಹಿಂದೂಗಳು ದರ್ಗಾಕ್ಕೆ ಹೋಗ್ತಾರೆ. ಮುಸ್ಲಿಮರು ದೇವಸ್ಥಾನಕ್ಕೆ ಹೋಗ್ತಾರೆ. ತಪ್ಪೇನು? ನಮ್ಮೂರಲ್ಲೂ ಇಂತಹ ಪದ್ಧತಿಗಳು ಈಗಲೂ ಇವೆ. ಎಲ್ಲಾ ದೇವರಿಗೆ ಈ ಬಿಜೆಪಿಯವರು ವಕ್ತಾರರಾಗಿದ್ದಾರೆ. ಇವರು ಮಾತಾಡೋಕೆ ಯಾರು? ಟಿಪ್ಪು, ಹೈದರ್, ಒಡೆಯರ ಕಾಲದಿಂದಲೂ ದಸರಾ ನಡೆದಿತ್ತು ಅಲ್ಲವಾ ಎಂದು ಆಕ್ರೋಶ ಹೊರಹಾಕಿದರು.ಇದನ್ನೂ ಓದಿ: ಧರ್ಮಸ್ಥಳದ ವಿರುದ್ಧ ಪಿತೂರಿಗೆ ವಿದೇಶದಿಂದ ಫಂಡಿಂಗ್‌ – ಎನ್‌ಐಎ ತನಿಖೆಗೆ ಬಿವೈವಿ ಒತ್ತಾಯ

  • ಬೂಕರ್‌ ಪ್ರಶಸ್ತಿ ಪುರಸ್ಕೃತೆ ಬಾನು ಮುಷ್ತಾಕ್‌ರಿಂದ ಈ ಬಾರಿ ದಸರಾ ಉದ್ಘಾಟನೆ?

    ಬೂಕರ್‌ ಪ್ರಶಸ್ತಿ ಪುರಸ್ಕೃತೆ ಬಾನು ಮುಷ್ತಾಕ್‌ರಿಂದ ಈ ಬಾರಿ ದಸರಾ ಉದ್ಘಾಟನೆ?

    – ಸೆ.22ರಿಂದ 11 ದಿನಗಳ ಕಾಲ ವಿಜೃಂಭಣೆಯ ದಸರಾ

    ಬೆಂಗಳೂರು/ಮೈಸೂರು: ಈ ಬಾರಿ ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 2ರ ವರೆಗೆ ಒಟ್ಟು 11 ದಿನಗಳ ಕಾಲ ದಸರಾ ಆಚರಣೆ ನಡೆಯಲಿದ್ದು, ಬೂಕರ್‌ ಪ್ರಶಸ್ತಿ ಪುರಸ್ಕೃತೆ ಬಾನು ಮುಷ್ತಾಕ್‌ (Banu Mushtaq) ಅಥವಾ ದೀಪಾ ಭಾಸ್ತಿ (Deepa Bhasthi) (ಬರಹಗಾರ್ತಿ ಮತ್ತು ಅನುವಾದಕಿ) ಅವರನ್ನ ಉದ್ಘಾಟಕರಾಗಿ ಪರಿಗಣಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ.

    ಈ ಬಾರಿ ಮಹಿಳೆಯರ ಹೆಸರೇ ಅಂತಿಮಗೊಳಿಸಲು ಸಿಎಂ ನಿರ್ಧರಿಸಿದ್ರೆ ಅವರಿಬ್ಬರಲ್ಲಿ ಒಬ್ಬರು ದಸರಾ (Mysuru Dasara) ಉದ್ಘಾಟಕರಾಗಿ ಆಯ್ಕೆ ಆಗುವುದು ಬಹುತೇಕ ಖಚಿತವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ಉದ್ಘಾಟಕರ ಆಯ್ಕೆ ಅಧಿಕಾರ ನನಗೆ ನೀಡಿದ್ದಾರೆ. ಒಂದು ವಾರ ಅಥವಾ 15 ದಿನದಲ್ಲಿ ವಿಚಾರ ಮಾಡಿ ತಿಳಿಸುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: Mysuru Dasara | ಸೆ.22ರಿಂದ 11 ದಿನಗಳ ಕಾಲ ವಿಜೃಂಭಣೆಯ ದಸರಾ

    ದಸರಾ ಆಚರಣೆ ಕುರಿತ ಪೂರ್ವಭಾವಿ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ, ನಾಡಹಬ್ಬ ದಸರಾವನ್ನು ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದೆ. ವಿಜೃಂಭಣೆ ರಭಸದಲ್ಲಿ ದಸರಾದ ಚಾರಿತ್ರಿಕ ಮಹತ್ವ ಮರೆಯಾಗಬಾರದು. ಅನಗತ್ಯವಾಗಿ ಹಣ ಖರ್ಚು ಮಾಡುವುದು ವೈಭವ ಅಲ್ಲ. ಜನರ ಸುರಕ್ಷತೆ ಮತ್ತು ಅನುಕೂಲಕ್ಕೆ ಪ್ರಥಮ ಆದ್ಯತೆ ಇರಲಿ ಎಂದು ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ (Siddaramaiah) ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಕೋಡಿಮಠ ಸ್ವಾಮೀಜಿ ಚಿನ್ನಾಭರಣ ಕಳ್ಳತನ; 7 ವರ್ಷಗಳ ಬಳಿಕ ಆರೋಪಿ ಬಂಧನ

    ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 2 ರ ವರೆಗೆ ಒಟ್ಟು 11 ದಿನಗಳ ಕಾಲ ದಸರಾ ಆಚರಣೆ ನಡೆಯಲಿದೆ. ಕಳೆದ 100 ವರ್ಷದಲ್ಲಿ 8 ನೇ ಬಾರಿ 11 ದಿನದ ದಸರಾ ಆಚರಣೆ ಮಾಡಲಾಗುತ್ತಿದೆ. ಈ ಬಾರಿಯೂ 21 ದಿನಗಳ ಕಾಲ ದೀಪ ಅಲಂಕಾರ ಇರಲಿದೆ. ಈ ಬಾರಿ ಅಂದಾಜು 10 ಲಕ್ಷ ಜನ ದಸರಾದಲ್ಲಿ ಭಾಗವಹಿಸಬಹುದು ಎಂದು ನಿರೀಕ್ಷಿಸಲಾಗಿದೆ ಎಂದು ಹೇಳಿದ್ದಾರೆ.

    ಪೊಲೀಸರು ಜನಸ್ನೇಹಿ ಆಗಿರಬೇಕು. ಪ್ರವಾಸಿಗರೊಂದಿಗೆ ಪ್ರೀತಿಯಿಂದ ವರ್ತಿಸಬೇಕು. ದಸರಾ ಕೊನೆಯ ದಿನ ಅಕ್ಟೋಬರ್ 2 ಗಾಂಧಿ ಜಯಂತಿ, ಹೀಗಾಗಿ ಟ್ಯಾಬ್ಲೋದಲ್ಲಿ ಗಾಂಧಿ ಜಯಂತಿಗೆ ಆದ್ಯತೆ ನೀಡಲು ನಿರ್ಧರಿಸಲಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಆಪರೇಷನ್ ಸಿಂಧೂರ ವೇಳೆ S-400 ಯಶಸ್ವಿ ಕಾರ್ಯಾಚರಣೆ; S-500 ರಕ್ಷಣಾ ವ್ಯವಸ್ಥೆ ಖರೀದಿಗೂ ಆಸಕ್ತಿ ತೋರಿದ ಭಾರತ

  • ಚಾಮರಾಜನಗರ ದಸರಾ ಉದ್ಘಾಟನೆಯಲ್ಲಿ ಕಪ್ಪು ಬಾವುಟ ಪ್ರದರ್ಶನ: ವಿ. ಸೋಮಣ್ಣ ಕೆಂಡಾಮಂಡಲ

    ಚಾಮರಾಜನಗರ ದಸರಾ ಉದ್ಘಾಟನೆಯಲ್ಲಿ ಕಪ್ಪು ಬಾವುಟ ಪ್ರದರ್ಶನ: ವಿ. ಸೋಮಣ್ಣ ಕೆಂಡಾಮಂಡಲ

    ಚಾಮರಾಜನಗರ: ಜಿಲ್ಲೆಯ ದಸರಾ (Dasara) ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆ ವೇಳೆ ಕಾಂಗ್ರೆಸ್ ನಗರಸಭಾ ಸದಸ್ಯ ಆರ್.ಪಿ.ನಂಜುಂಡಸ್ವಾಮಿ (R.P. Nanjundaswamy)ವೇದಿಕೆಯಲ್ಲೇ ಕಪ್ಪು ಬಾವುಟ ಪ್ರದರ್ಶನ ಮಾಡಿದ್ದರಿಂದ ಸಚಿವ ವಿ. ಸೋಮಣ್ಣನವರು (V. Somanna) ಕೆಂಡಾಮಂಡಲವಾಗಿದ್ದಾರೆ.

    ಚಾಮರಾಜೇಶ್ವರ ದೇವಾಲಯದ (Chamarajeshwara Temple) ಮುಂಭಾಗ ನಿರ್ಮಿಸಿರುವ ಮುಖ್ಯ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಲು ವಿ. ಸೋಮಣ್ಣನವರು ವೇದಿಕೆ ಏರಿ ಕುಳಿತಂತೆ ಅಲ್ಲೇ ಇದ್ದ ನಗರಸಭಾ ಸದಸ್ಯ ಆರ್.ಪಿ.ನಂಜುಂಡಸ್ವಾಮಿ ದೀಪಾಲಂಕಾರದ ಅವ್ಯವಸ್ಥೆ ಖಂಡಿಸಿ ಕಪ್ಪು ಬಾವುಟ ಪ್ರದರ್ಶಿಸಿದರು. ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಚಿಕಿತ್ಸೆ ನೀಡಿದ ವೈದ್ಯ – ಆಸ್ಪತ್ರೆಯಲ್ಲಿ ಮಗು ಸಾವು

    ಬಳಿಕ ಅಲ್ಲಿಯೇ ಇದ್ದ ಪೊಲೀಸರು ನಂಜುಂಡಸ್ವಾಮಿ ಅವರನ್ನು ಹೊರಕ್ಕೆ ಎಳೆದೊಯ್ದರು. ಈ ಅನಿರೀಕ್ಷಿತ ಘಟನೆಯಿಂದ ಕೆಂಡಾಮಂಡಲರಾದ ಸೋಮಣ್ಣ ಅವರು, ಪೊಲೀಸರು ಏನು ಮಾಡುತ್ತಿದ್ದೀರಾ, ಯಾವ ರೀತಿ ವ್ಯವಸ್ಥೆ ಮಾಡಿದ್ದೀರಾ ಎಂದು ಕಿಡಿಕಾರಿದ್ದಾರೆ.  ಇದನ್ನೂ ಓದಿ: ನಮ್ಮ ಸಮುದಾಯಕ್ಕೆ ಮೀಸಲಾತಿ ಸಿಕ್ಕಿಲ್ಲ ಅನ್ನೋ ನೋವಿದೆ, ಆದ್ರೆ ನಾನು ಹಿಂದೆ ಸರಿಯಲ್ಲ: ಶ್ರೀರಾಮುಲು

    Live Tv
    [brid partner=56869869 player=32851 video=960834 autoplay=true]

  • ನಮ್ಮಲ್ಲಿ ವ್ಯವಸಾಯ ಹಾಳಾಗುವುದಕ್ಕೂ ರಾಜಕಾರಣಿಗಳು ಕಾರಣ: ಎಸ್.ಎಲ್ ಭೈರಪ್ಪ

    ನಮ್ಮಲ್ಲಿ ವ್ಯವಸಾಯ ಹಾಳಾಗುವುದಕ್ಕೂ ರಾಜಕಾರಣಿಗಳು ಕಾರಣ: ಎಸ್.ಎಲ್ ಭೈರಪ್ಪ

    – ಚಾಮುಂಡಿ ಬೆಟ್ಟ ಟೂರಿಸ್ಟ್ ಸ್ಪಾಟಾ ಅಥವಾ ಧಾರ್ಮಿಕ ಕೇಂದ್ರವೇ?
    – ಸಮಾಜದಲ್ಲಿ ಹೆಣ್ಣಿಗೆ ವಿಶೇಷ ಸ್ಥಾನ ಕೊಟ್ಟಿದ್ದೇವೆ ಎಂದರು.

    ಮೈಸೂರು: ನಮ್ಮಲ್ಲಿ ವ್ಯವಸಾಯ ಹಾಳಾಗುವುದಕ್ಕೂ ರಾಜಕಾರಣಿಗಳು ಎಂದು ಎಸ್.ಎಲ್ ಭೈರಪ್ಪ ಹೇಳಿದ್ದಾರೆ.

    ದಸರಾ ಮಹೋತ್ಸವಕ್ಕೆ ಚಾಲನೆ ನೀಡಿ ಉದ್ಘಾಟನಾ ಭಾಷಣ ಮಾಡಿದ ಅವರು, ಹಳ್ಳಿ ಕಡೆಯಲ್ಲಿ ಸ್ಪಲ್ಪ ತಂಪು ಇರುವಾಗ ಹೊಲದ ಕೆಲಸ ಮಗಿಸುತ್ತಾರೆ. ಆದರೆ ಚುನಾವಣೆ ಬಂದ ಮೇಲೆ ಆ ವ್ಯವಸ್ಥೆ ಬಹುತೇಕ ಕಡೆ ಮರೆಯಾಗಿದೆ. ಕಾಯಕ ನಿಷ್ಠೆ ಕಡಿಮೆಯಾಗುತ್ತಿದೆ. ಆದ್ದರಿಂದ ನಮ್ಮಲ್ಲಿ ವ್ಯವಸಾಯ ಹಾಳಾಗುತ್ತಿರುವುದಕ್ಕೆ ರಾಜಕಾರಣಿಗಳು ಕಾರಣ ಎಂದು ಹೇಳಿದರು. ಇದನ್ನೂ ಓದಿ: ಸಾಹಿತಿ ಎಸ್.ಎಲ್ ಭೈರಪ್ಪ ಅವರಿಗೆ ಅಗೌರವ

    ಬಸವಣ್ಣನವರು ಕಾಯಕ ನಿಷ್ಠೆ, ಜಾತಿ ವಿನಾಶ ಬಗ್ಗೆ ಮಾತಾಡಿದರು. ಅನ್ಯ ಜಾತಿ ನಡುವೆ ಮದುವೆ ಮಾಡಿದರು. ಜಾತಿ ವಿನಾಶದ ಕಲ್ಪನೆ ಬಹಳ ಒಳ್ಳೆಯದು. ಆದರೆ ಅವತ್ತಿನ ಕಾಲಕ್ಕೆ ಜನ ಅದನ್ನು ಒಪ್ಪಿಕೊಳ್ಳುವ ಸ್ಥಿತಿ ಇರಲಿಲ್ಲ. ಅವತ್ತು ಸಮಾಜ ಅದಕ್ಕೆ ಪಕ್ವ ಇರಲಿಲ್ಲ. ಆಗ ಗಂಡು ಹೆಣ್ಣಿನ ನಡುವೆ ಆರ್ಥಿಕ ಸಮಾನತೆ ಬಂದಿದೆ. ಈಗ ಜಾತಿ ಮೀರಿ ಪ್ರೀತಿಸಿ ಮದುವೆಗಳು ನಡೆಯುತ್ತಿವೆ. ಬಸವಣ್ಣನವರ ಜಾತಿ ವಿನಾಶದ ತತ್ವ ಪರಿಪಾಲನೆಗೆ ಈಗ ಕಾಲ ಪಕ್ವ ಆಗಿದೆ. ಹಾಗಂತ ಬಲವಂತವಾಗಿ ಅಂತರ್ಜಾತಿ ವಿವಾಹ ಮಾಡಿಸುತ್ತೇನೆ ಎಂದು ಯಾರು ಹೋಗಬಾರದು. ಸಾಹಿತಿಗಳು ಬಸವಣ್ಣನವರು ಆಲೋಚನೆ ಜಾರಿಗೆ ತರುವುದಕ್ಕೆ ಪ್ರಯತ್ನ ಮಾಡಬೇಕು. ಅದನ್ನು ಬಿಟ್ಟು ಲಿಂಗಾಯತ, ವೀರಶೈವ ಎಂದು ಚರ್ಚೆಗೆ ಇಳಿಯಬಾರದು ಎಂದು ಕಿವಿ ಮಾತು ಹೇಳಿದರು.

    ಚಾಮುಂಡಿ ಬೆಟ್ಟಕ್ಕೆ ಬರೋದು ದೇವರ ದರ್ಶನಕ್ಕೋ ಶಾಂಪಿಂಗ್‍ಗೋ? ಚಾಮುಂಡಿ ಬೆಟ್ಟ ಟೂರಿಸ್ಟ್ ಸ್ಪಾಟಾ ಅಥವಾ ಧಾರ್ಮಿಕ ಕೇಂದ್ರವಾ? ಶಾಂಪಿಂಗ್ ಮಾಡಲು ಮೈಸೂರು ನಗರದ ಒಳಗೆ ವ್ಯವಸ್ಥೆ ಇಲ್ವಾ ಎಂದು ಪ್ರಶ್ನಿಸಿದರು. ಶಾಂತಿಯಿಂದ ದೇವರನ್ನು ಪ್ರಾರ್ಥಿಸಲು ಅನುಕೂಲವಾಗಲಿ, ಮನಸ್ಸಿಗೆ ಶಾಂತಿ ಸಿಗಲಿ ಎಂದು ದೇವಸ್ಥಾನ, ಗುಡಿಗಳನ್ನು ಮಾಡಿದ್ದಾರೆ. ಆದರೆ ಈಗ ಹಲವಾರು ಕಡೆ ಧಾರ್ಮಿಕ ಕ್ಷೇತ್ರಗಳನ್ನು ಪ್ರವಾಸಿ ತಾಣವಾಗಿ ಮಾಡಿಬಿಟ್ಟಿದ್ದಾರೆ. ವಾಣಿಜ್ಯ ಮಳಿಗೆಗಳು, ಅದು, ಇದು ಎಂದು ಸಾಕಷ್ಟು ಅಂಗಡಿಗಳು, ಪ್ರವಾಸಿಗರು ಬರುತ್ತಾರೆ. ಈ ಗಲಾಟೆಯ ಮಧ್ಯೆ ಶಾಂತಿ ಎಲ್ಲಿ ಸಿಗುತ್ತೆ ಎಂದು ಚಾಮುಂಡಿ ಬೆಟ್ಟದಲ್ಲಿ ಹೊಸ ವಾಣಿಜ್ಯ ಮಳಿಗೆ ನಿರ್ಮಾಣಕ್ಕೆ ಭೈರಪ್ಪ ಅಸಮಾಧಾನ ವ್ಯಕ್ತಪಡಿಸಿದರು.

    ಕೆಲವರು ನೀವು ವಿಚಾರವಾದಿಗಳು ದೇವರ ಮೇಲೆ ನಂಬಿಕೆ ಇಲ್ಲ ಎಂದಿದ್ದರು. ಆದರೆ ದೇವರ ಮೇಲೆ ನಂಬಿಕೆ ಇಲ್ಲ ಎಂದು ನಾನು ಎಂದೂ ಹೇಳಿಲ್ಲ. ದೇವರು ಇದ್ದನಾ? ಇಲ್ಲವಾ? ಎಂದು ತಿಳಿಸಲು ಒಂದು ಬಾಲಕ ಹಾಗೂ ಸೂಜಿಯ ಕಥೆ ಹೇಳಿದರು. ಬಳಿಕ ದೇವರಿಗೆ ಎಂದು ಲಿಂಗ ಭೇದ ಮಾಡಬಾರದು. ದೇವರು ಇದ್ದಾನೆಯೇ? ಇದ್ದಾಳೇಯೇ? ಎನ್ನುವುದಕ್ಕಿಂತ ದೇವರು ಇದೇಯೇ ಎಂದು ಕೇಳಬೇಕಿದೆ. ವಿಚಾರವಾದಿಗಳಿಗೆ ಕೇಳಿದರೆ ಇಲ್ಲ ಎಂದು ಹೇಳುತ್ತಾರೆ. ವಿಚಾರವಾದಿಗಳು ದೇವರು ಇಲ್ಲ ಅನ್ನೋದು ಉದ್ಧಟತನದ ಮಾತು ಎಂದು ದಸರಾ ಉದ್ಘಾಟಿಸಿ, ಭೈರಪ್ಪ ಅವರು ದೇವರ ಬಗ್ಗೆ ಉಲ್ಲೇಖಿಸಿದರು.

     

    ನಮ್ಮ ಸಂಸ್ಕೃತಿಯಲ್ಲಿ ಹೆಣ್ಣು ದೇವತೆ ಪ್ರಧಾನವಾದದ್ದು, ಪ್ರತಿ ಊರಲ್ಲೂ ಗ್ರಾಮದೇವತೆ ಇರುತ್ತೆ. ಹೆಣ್ಣನ್ನು ದೇವರ ರೂಪದಲ್ಲಿ ನೋಡುತ್ತೇವೆ ಎನ್ನುವುದು ಇದರ ಅರ್ಥ. ಮೊದಲು ತಾಯಿಗೆ ನಮಸ್ಕರಿಸಿ ನಂತರ ತಂದೆಗೆ ನಮಸ್ಕರಿಸುವ ಪದ್ಧತಿ ಇದೆ. ಆದರೂ, ನಮ್ಮ ದೇಶದಲ್ಲಿ ಹೆಣ್ಣಿಗೆ ಗೌರವ ಇಲ್ಲ ಎಂದು ಕೆಲವರು ಹೇಳುತ್ತಾರೆ. ಹೆಣ್ಣನ್ನು ತುಳಿಯುವ ಸಮಾಜವಿದು ಎಂದು ವಿನಾಃಕಾರಣ ಹೇಳುತ್ತಾರೆ. ಆದರೆ ನಮ್ಮಲ್ಲಿ ಪುರುಷ ದಬ್ಬಾಳಿಕೆ ಇಲ್ಲ. ನಮ್ಮ ಸಮಾಜದಲ್ಲಿ ಹೆಣ್ಣಿಗೆ ವಿಶೇಷ ಸ್ಥಾನ ಕೊಟ್ಟಿದ್ದೇವೆ ಎಂದರು.

    ಇದೇ ವೇಳೆ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶವಿಲ್ಲ ಎಂಬ ವಿಚಾರವಾಗಿ ಮಾತನಾಡಿ, ಅದು ಆ ದೇವಸ್ಥಾನದ ಆಚಾರ-ವಿಚಾರ. ಇದನ್ನು ಪ್ರಶ್ನಿಸಿ ಕೆಲವು ವಿಚಾರವಾದಿಗಳು ನ್ಯಾಯಾಲಯಕ್ಕೆ ಹೋದರು. ಕೆಲವರು ಬಲವಂತವಾಗಿ ಕೆಲ ಮಹಿಳೆಯರನ್ನು ದೇವಸ್ಥಾನದ ಒಳಗೆ ನುಗ್ಗಿಸಿದರು. ಆ ನುಗ್ಗಿಸಿದ ಮಹಿಳೆಯರಲ್ಲಿ ಒಬ್ಬ ಮುಸ್ಲಿಂ ಇದ್ದರು. ನಂತರ, ಆಕೆಗೆ ಆ ಧರ್ಮದಿಂದ ಹೊರಗೆ ಹಾಕ್ತಿವಿ ಎಂದು ಎಚ್ಚರಿಸಿದ್ದರು. ಸರ್ಕಾರ ಧಾರ್ಮಿಕ ವಿಚಾರಕ್ಕೆ ಏಕೆ ಹೋಗಬೇಕು? ಸಮಾನತೆ ಕಲ್ಪನೆ ಯಾವತ್ತೂ ಒಂದೇ ಥರದಲ್ಲಿ ಇರುವುದಿಲ್ಲ ಎಂದು ಹೇಳಿದರು.

  • ಸಾಹಿತಿ ಎಸ್.ಎಲ್ ಭೈರಪ್ಪ ಅವರಿಗೆ ಅಗೌರವ

    ಸಾಹಿತಿ ಎಸ್.ಎಲ್ ಭೈರಪ್ಪ ಅವರಿಗೆ ಅಗೌರವ

    ಮೈಸೂರು: ದಸರಾ ಉದ್ಘಾಟನೆ ವೇಳೆ ಸಾಹಿತಿ ಎಸ್.ಎಲ್ ಭೈರಪ್ಪ ಅವರಿಗೆ ಅಗೌರವ ತೋರಲಾಗಿದೆ.

    ಕಾರ್ಯಕ್ರಮ ಉದ್ಘಾಟನೆಗೂ ಮೊದಲು ಎಸ್.ಎಲ್ ಭೈರಪ್ಪ ಅವರನ್ನು ಮೆರವಣಿಗೆಯಲ್ಲಿ ಕರೆದುಕೊಂಡು ಬರಬೇಕಿತ್ತು. ಏಕೆಂದರೆ ದಸರಾ ಉದ್ಘಾಟನೆಗೆ ಮೆರವಣಿಗೆ ಮೂಲಕ ಸ್ವಾಗತಿಸುವುದು ಶಿಷ್ಟಾಚಾರ. ಆದರೆ ಉದ್ಘಾಟನಕಾರ ಎಸ್.ಎಲ್ ಭೈರಪ್ಪ ಅವರನ್ನೇ ಸರ್ಕಾರ ಹಾಗೂ ಮಂತ್ರಿಗಳು ಮರೆತು ಬಿಟ್ಟಿದ್ದರು.

    ಸಿಎಂ ಯಡಿಯೂರಪ್ಪ ಅವರು ಭೈರಪ್ಪ ಅವರನ್ನು ಸ್ವಾಗತಿಸಿ ಮೆರವಣಿಗೆ ಮೂಲಕ ಮಹಿಷಾ ಪ್ರತಿಮೆಯಿಂದ ವೇದಿಕೆಗೆ ಕರೆದೊಯ್ಯಬೇಕಿತ್ತು. ಹೀಗಾಗಿ ಭೈರಪ್ಪ ಅವರು ಸಿಎಂಗಾಗಿ 30 ನಿಮಿಷಗಳ ಕಾಲ ಮಹಿಷಾ ಪ್ರತಿಮೆ ಬಳಿ ನಿಲ್ಲಿಸಿಕೊಂಡ ಕಾರಿನಲ್ಲೇ ಕುಳಿತಿದ್ದರು. ಅರ್ಧ ಗಂಟೆಯಾದರೂ ಸಿಎಂ ಯಡಿಯೂರಪ್ಪ ಹಾಗೂ ಸಚಿವರು ಬರಲೇ ಇಲ್ಲ. ಹೀಗಾಗಿ ಯಡಿಯೂರಪ್ಪ ಹಾಗೂ ಸಚಿವರೆಲ್ಲಾ ಸಾಗಿದ ಮೇಲೆ ಭೈರಪ್ಪ ಅವರು ಬೇಸರದಿಂದ ಒಬ್ಬರೇ ಉದ್ಘಾಟನೆ ಕಾರ್ಯಕ್ರಮಕ್ಕೆ ಆಗಮಿಸಿದರು.

    ಸಾಹಿತಿ ಎಸ್.ಎಲ್. ಭೈರಪ್ಪ ಅವರು ಚಾಮುಂಡಿ ಬೆಟ್ಟದಲ್ಲಿ ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ನಾಡಹಬ್ಬ ದಸರಾಗೆ ಅಧಿಕೃತ ಚಾಲನೆ ಕೊಟ್ಟಿದ್ದಾರೆ. ಈ ಉದ್ಘಾಟನಾ ಸಮಾರಂಭದಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ, ಡಿಸಿಎಂ ಗೋವಿಂದ ಕಾರಜೋಳ, ಕೇಂದ್ರ ಸಚಿವ ಸದಾನಂದ ಗೌಡ, ಜೆಡಿಎಸ್ ನಾಯಕ ಜಿ.ಟಿ ದೇವೇಗೌಡ, ಸಚಿವ ವಿ. ಸೋಮಣ್ಣ ಸೇರಿದಂತೆ ರಾಜ್ಯ ಸರ್ಕಾರದ ಸಚಿವರು ಭಾಗಿಯಾಗಿದ್ದು, ಸಾಂಸ್ಕೃತಿಕ ನಾಡಿನಲ್ಲಿ ದಸರಾ ಸಂಭ್ರಮ ಕಳೆಗಟ್ಟಿದೆ.

  • ಹಜ್‍ನಲ್ಲಿ ಮುಸ್ಲಿಮರು, ಕುಂಭ ಮೇಳದಲ್ಲಿ ಹಿಂದುಗಳು, ನಾಡಹಬ್ಬಕ್ಕೆ ಎಲ್ಲರೂ ಬರ್ತಾರೆ: ನಿಸಾರ್ ಅಹಮದ್

    ಹಜ್‍ನಲ್ಲಿ ಮುಸ್ಲಿಮರು, ಕುಂಭ ಮೇಳದಲ್ಲಿ ಹಿಂದುಗಳು, ನಾಡಹಬ್ಬಕ್ಕೆ ಎಲ್ಲರೂ ಬರ್ತಾರೆ: ನಿಸಾರ್ ಅಹಮದ್

    ಮೈಸೂರು: ವಿಶ್ವ ವಿಖ್ಯಾತ ನಾಡಹಬ್ಬ ಮೈಸೂರು ದಸರಾ ಕಾರ್ಯಕ್ರಮಗಳಿಗೆ ಚಾಮುಂಡಿ ಬೆಟ್ಟದಲ್ಲಿ ನಿತ್ಯೋತ್ಸವ ಕವಿ ಪ್ರೊ. ಕೆ.ಎಸ್. ನಿಸಾರ್ ಅಹಮದ್ ಅವರು ಇಂದು ಅಧಿಕೃತವಾಗಿ ಚಾಲನೆ ನೀಡಿದರು.

    ಸುಮಾರು 400 ವರ್ಷಗಳ ಇತಿಹಾಸ ಹೊಂದಿರುವ ಹಬ್ಬ ಗತಕಾಲದ ವೈಭವ. ಜಾತಿ ಧರ್ಮದ ಮಿತಿಗಳಿಲ್ಲದೆ ದಸರಾ ಹಬ್ಬವನ್ನ ಆಚರಣೆ ಮಾಡಲಾಗುತ್ತದೆ. ಹಜ್ ನಲ್ಲಿ ಮುಸ್ಲಿಮರು, ಕುಂಭ ಮೇಳದಲ್ಲಿ ಹಿಂದುಗಳು. ಆದರೆ ಮೈಸೂರು ದಸರಾದಲ್ಲಿ ಮಾತ್ರ ಧರ್ಮಗಳ ಮೀತಿಯೇ ಇಲ್ಲದೆ ಎಲ್ಲರೂ ತಾಯಿ ಚಾಮುಂಡಿ ದೇವಿ ಆಶೀರ್ವಾದ ಪಡೆದು ಒಳಿತಿಗಾಗಿ ಪ್ರಾರ್ಥನೆ ಸಲ್ಲಿಸುತ್ತಾರೆ. ಇದೇ ಮೈಸೂರು ದಸರಾ ವೈಶಿಷ್ಟ ಎಂದು ನಿಸಾರ್ ಅಹಮದ್ ಹೇಳಿದರು.

    ನಾಡಹಬ್ಬದ ಉದ್ಘಾಟನೆಗೆ ನನ್ನನ್ನು ಆಹ್ವಾನ ಮಾಡಿದಾಗ ನನಗೆ ದಸರಾಗೆ ಚಾಲನೆ ನೀಡುವ ಅರ್ಹತೆ ಇದೆಯಾ ಅಂತ ಭಯ ಶುರುವಾಗಿತ್ತು. ಕಾರಣ ಈಡೀ ವಿಶ್ವವೇ ಒಂಭತ್ತು ದಿನಗಳ ಕಾಲ ದಸರಾ ವೀಕ್ಷಣೆ ಮಾಡುತ್ತದೆ. ಇಂತಹ ಹಬ್ಬವನ್ನು ಉದ್ಘಾಟನೆ ಮಾಡುವುದು ಸುಲಭದ ಮಾತಲ್ಲ. ನನಗೆ ಪದ್ಮಶ್ರೀ, ನಾಡೋಜ ಪ್ರಶಸ್ತಿ ಗೌರವ ಸಿಕ್ಕಿರಬಹುದು. ಆದರೆ ದಸರಾ ಚಾಲನೆ ಮಾಡುವ ಭಾಗ್ಯ ಸಿಕ್ಕಿರುವುದು ದೊಡ್ಡದು ಎಂದು ಸಂತೋಷ ವ್ಯಕ್ತಪಡಿಸಿದರು.

    ಅರಮನೆಯ ಸಿಂಹಾಸನ ಜೋಡಣೆ ಕಾರ್ಯ ಮುಕ್ತಾಯವಾಗಿದ್ದು, ಅರಮನೆಯಲ್ಲಿ ಖಾಸಗಿ ದರ್ಬಾರ್ ಕಾರ್ಯ ಶುರುವಾಗಿದೆ. ರಾಜಮನೆತನದ ಸಂಪ್ರದಾಯದಂತೆ ಇಂದು ಬೆಳಗ್ಗೆಯಿಂದಲೇ ಪೂಜಾ ಕೈಂಕರ್ಯಗಳು ಪ್ರಾರಂಭವಾಗಿವೆ.

    ರಾಜ ಯದುವೀರ್ ಒಡೆಯರ್‍ಗೆ ಈಗಾಗಲೇ ಕಂಕಣಧಾರಣೆ ನಡೆದಿದ್ದು ಬೆಳಗ್ಗೆ 11 ಗಂಟೆಗೆ ರಾಜರ ಪಟ್ಟದ ಕಾರ್ಯಕ್ಕೆ ಆನೆ, ಕುದುರೆ, ಹಸು ಆರಮನೆ ಪ್ರವೇಶಿಸುತ್ತವೆ. ಬಳಿಕ ರಾಜ ಯದುವೀರ್ ಒಡೆಯರ್‍ಗೆ ಸಿಂಹಾಸನಾರೋಹಣ ಕಾರ್ಯಕ್ರಮ ನಡೆಯಲಿದೆ.

  • ದಸರಾ ಉದ್ಘಾಟನೆಗೆ ನಿತ್ಯೋತ್ಸವ ಕವಿ ನಿಸಾರ್ ಅಹ್ಮದ್‍ಗೆ ಅಧಿಕೃತ ಆಹ್ವಾನ

    ದಸರಾ ಉದ್ಘಾಟನೆಗೆ ನಿತ್ಯೋತ್ಸವ ಕವಿ ನಿಸಾರ್ ಅಹ್ಮದ್‍ಗೆ ಅಧಿಕೃತ ಆಹ್ವಾನ

    ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ 2017ರ ದಸರಾ ಉದ್ಘಾಟಕರಿಗೆ ಮೈಸೂರು ಜಿಲ್ಲಾಡಳಿತ ಅಧಿಕೃತ ಆಹ್ವಾನ ನೀಡಿದೆ.

    ನಿತ್ಯೋತ್ಸವ ಕವಿ ನಿಸಾರ್ ಅಹ್ಮದ್ ಅವರಿಗೆ ದಸರಾಗೆ ಆಗಮಿಸಿ ಉದ್ಘಾಟನೆ ನೆರವೇರಿಸುವಂತೆ ಮೈಸೂರು ಜಿಲ್ಲಾಧಿಕಾರಿ ಡಿ.ರಂದೀಪ್ ಮನವಿ ಮಾಡಿದ್ದಾರೆ.

    ಮೈಸೂರು ಮಹಾನಗರದ ಪಾಲಿಕೆ ಮೇಯರ್ ರವಿಕುಮಾರ್‍ರಿಂದ ನಿಸಾರ್ ಅಹ್ಮದ್ ಅವರನ್ನು ಸ್ವಾಗತಿಸಿದ್ದಾರೆ. ದಸರಾ ಉಪಸಮಿತಿಯ ಅಧಿಕಾರಿಗಳು ಬೆಂಗಳೂರಿನ ನಾಗರಬಾವಿಯಲ್ಲಿರುವ ನಿಸಾರ್ ಅಹ್ಮದ್ ನಿವಾಸಕ್ಕೆ ತೆರಳಿ ಈ ಆಹ್ವಾನವನ್ನು ನೀಡಿದ್ದಾರೆ. ಮೈಸೂರು ಪೇಟ ತೊಡಿಸಿ ಜಿಲ್ಲಾಡಳಿತ ಆಮಂತ್ರಣ ನೀಡಿದೆ.

    ಇದನ್ನೂ ಓದಿ: ಮೈಸೂರು ದಸರಾಗೆ ಕೇಂದ್ರ ವಿಮಾನಯಾನ ಇಲಾಖೆಯಿಂದ ಗಿಫ್ಟ್!

    ನಾಡಹಬ್ಬ ದಸರಾ ಉತ್ಸವವನ್ನು ಈ ಬಾರಿಯೂ ಸಾಂಪ್ರದಾಯಿಕ ಮತ್ತು ಹೆಚ್ಚು ಜನಾಕರ್ಷಕವಾಗಿ ಆಚರಿಸಲಾಗುವುದು. ದಸರಾ ಉತ್ಸವ ಸೆಪ್ಟೆಂಬರ್ 21ರಿಂದ 30ರ ವರೆಗೆ ನಡೆಯಲಿದೆ. 21ರಂದು ಬೆಳಗ್ಗೆ 9.15ಕ್ಕೆ ಚಾಮುಂಡಿ ಬೆಟ್ಟದಲ್ಲಿ ಉದ್ಘಾಟನೆ ನೆರವೇರಲಿದೆ. ಜಂಬೂ ಸವಾರಿಯ ದಿನವಾದ 29ರಂದು ಮಧ್ಯಾಹ್ನ 1.15ರಿಂದ 1.43ರೊಳಗೆ ನಂದಿ ಧ್ವಜಕ್ಕೆ ಪೂಜೆ ಮತ್ತು 3.13ರಿಂದ 3.40ರೊಳಗೆ ಅಂಬಾರಿಯಲ್ಲಿನ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆಯಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು.

    ಇದನ್ನೂ ಓದಿ: ಮೈಸೂರು: ದಸರಾ ಗಜಪಡೆಯ ತಾಲೀಮು ಪ್ರಾರಂಭ

    ಇದನ್ನೂ ಓದಿ: ದಸರಾಗಾಗಿ ಬಂದ ಗಜಪಡೆಯ ದೇಹ ತೂಕದಲ್ಲಿ ಭಾರೀ ಇಳಿಕೆ