Tag: ದಯಾಳ್ ಪದ್ಮನಾಭನ್

  • ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚಲಿದ್ದಾರೆ ಕಾಮೇಗೌಡರು- ಸಿನಿಮಾ ಆಗಲಿದೆ ಸಾಧನೆ

    ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚಲಿದ್ದಾರೆ ಕಾಮೇಗೌಡರು- ಸಿನಿಮಾ ಆಗಲಿದೆ ಸಾಧನೆ

    ಬೆಂಗಳೂರು: ಪರಿಸರ ಪ್ರೇಮಿ, ರಾಜ್ಯೋತ್ಸವ ಪುರಷ್ಕೃತ ಕಾಮೇಗೌಡರ ಸಾಧನೆ ಮೈ ಜುಮ್ ಎನ್ನಿಸುವಂಥದ್ದು, ಕೆರೆ ತೋಡುವ ಅವರ ಆಸಕ್ತಿ ಅಗಾಧವಾದದ್ದು ಎಂಬುದು ಈಗಾಗಲೇ ತಿಳಿದಿದೆ. ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಮನ್ ಕೀ ಬಾತ್‍ನಲ್ಲಿ 80ರ ಇಳಿ ವಯಸ್ಸಿನ ಕಾಮೇಗೌಡರ ಸಾಧನೆಯನ್ನು ಕೊಂಡಾಡಿದ್ದಾರೆ. ಇದೇ ಸಂದರ್ಭದಲ್ಲಿ ಇನ್ನೊಂದು ಸಂತಸದ ವಿಚಾರ ಹೊರ ಬಿದ್ದಿದೆ.

    ಹೌದು ಸ್ವಾರ್ಥಕ್ಕಾಗಿ ಮರ, ಗಿಡಗಳನ್ನು ಕಡಿದು ಭೂಮಿಯನ್ನು ಬರುಡಾಗಿಸುತ್ತಿರುವವರ ಮಧ್ಯೆ ಕಾಮೇಗೌಡರು ಇಂದಿನ ಯುವ ಪೀಳಿಗೆಗೆ ಮಾದರಿ. ಇವರ ಜೀವನವನ್ನು ಪ್ರತಿಯೊಬ್ಬ ಯುವಕರು ಅರಿಯಬೇಕು, ಸಾಧನೆ ಎಂದರೆ ಕೇವಲ ಒಳ್ಳೆಯ ಕೆಲಸ ಗಿಟ್ಟಿಸಿಕೊಳ್ಳುವುದಲ್ಲ. ಪ್ರಕೃತಿಯನ್ನು ಆರಾಧಿಸುವುದು, ಪ್ರಕೃತಿಯೊಂದಿಗೆ ಬೆರೆಯುವುದು ಎಂಬುದನ್ನು ಕಾಮೇಗೌಡರು ನಿರೂಪಿಸಿದ್ದಾರೆ. ಹೀಗಾಗಿ ಅವರ ಸಾಧನೆಯನ್ನು ತೆರೆ ಮೇಲೆ ತರಲು ಬರಹಗಾರ, ನಿರ್ದೇಶಕ, ನಿರ್ಮಾಪಕ ದಯಾಳ್ ಪದ್ಮನಾಭನ್ ನಿರ್ಧರಿಸಿದ್ದಾರೆ.

    ಈಗಾಗಲೇ ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಕಾಮೇಗೌಡರ ಜೀವನಾಧಾರಿತ ಡಾಕ್ಯೂಮೆಂಟ್ರಿ ಸಿದ್ಧಪಡಿಸಲು ತಯಾರಿ ನಡೆಸಿದ್ದು, ಸಿನಿಮಾದ ಪೋಸ್ಟರ್‍ನ್ನು ಸಹ ಬಿಡುಗಡೆ ಮಾಡಿದ್ದಾರೆ. ಈ ಕುರಿತು ಅವರ ಫೇಸ್‍ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಪೋಸ್ಟರ್ ನ ಫೋಟೋ ಹಾಕಿ ಸಾಲುಗಳನ್ನು ಬರೆದಿರುವ ದಯಾಳ್ ಪದ್ಮನಾಭನ್, ಶ್ರೀ ಕಾಮೇಗೌಡ ಅವರ ಸಾಧನೆಯ ಡಾಕ್ಯೂಮೆಂಟ್ರಿ ನಿರ್ಮಾಣ ಮಾಡುತ್ತಿರುವುದಕ್ಕೆ ಡಿ ಪಿಕ್ಚರ್ಸ್ ಹಾಗೂ ಓಂ ಪ್ರೊಡಕ್ಷನ್ಸ್ ಹೌಸ್ ಹೆಮ್ಮೆ ಹಾಗೂ ಸಂತಸ ಪಡುತ್ತದೆ. ಇದನ್ನು ನಾನೇ ನಿರ್ದೇಶಿಸುತ್ತಿದ್ದೇನೆ. ಕಾಮೇಗೌಡರ ಸಾಧನೆಯನ್ನು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸುವ ಪ್ರಯತ್ನ ಇದಾಗಿದೆ. ಚಿಯರ್ಸ್ ಎಂದು ಬರೆದುಕೊಂಡಿದ್ದಾರೆ.

    D PICTURES & OM PRODUCTION HOUSE are proud & glad to produce a Documentary film on Sri.Kamegowda to be Directed by me..!…

    Posted by Dayal Padmanabhan on Monday, June 29, 2020

    ಅಂದಹಾಗೆ ಸಿನಿಮಾಗೆ ದಿ ಗುಡ್ ಶಫರ್ಡ್(ಉತ್ತಮ ಕುರುಬ) ಎಂಬ ಟೈಟಲ್ ಇಟ್ಟಿದ್ದಾರೆ. ದಯಾಳ್ ಪದ್ಮನಾಭ್ ಅವರ ಪೋಸ್ಟ್‍ಗೆ ಹಲವರು ಕಮೆಂಟ್ ಮಾಡಿದ್ದು, ಉತ್ತಮ ಪ್ರಾಜೆಕ್ಟ್ ಆಯ್ಕೆ ಮಾಡಿಕೊಂಡಿದ್ದೀರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಸಿನಿಮಾ ನೋಡಲು ಕಾತುರರಾಗಿದ್ದೇವೆ ಎಂದು ಹೇಳಿದ್ದಾರೆ

    ದಯಾಳ್ ಪದ್ಮನಾಬ್ ಅವರು ತಮ್ಮ ವಿಭಿನ್ನ ಸಿನಿಮಾಗಳ ಮೂಲಕ ಸ್ಯಾಂಡಲ್‍ವುಡ್‍ನಲ್ಲಿ ಗುರುತಿಸಿಕೊಂಡಿದ್ದು, ಸರ್ಕಸ್, ಘರ್ಷಣೆ, ಹಗ್ಗದ ಕೊನೆಯಂತಹ ಸಿನಿಮಾಗಳ ಕಥೆಯನ್ನು ಬರೆದು ನಿದೇರ್ಶಿಸಿದ್ದಾರೆ. ಅಲ್ಲದೆ ಆ ಕರಾಳ ರಾತ್ರಿ, ಪುಟ 109, ರಂಗನಾಯಕಿ-1 ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಪ್ರಸ್ತುತ 9ನೇ ದಿಕ್ಕು ಚಿತ್ರವನ್ನು ತಾವೇ ನಿರ್ಮಿಸಿ, ನಿರ್ದೇಶಿಸುತ್ತಿದ್ದಾರೆ. ಇದರ ನಡುವೆ ಇದೀಗ ಕಾಮೇಗೌಡರ ಜೀವನಾಧಾರಿತ ಚಿತ್ರವನ್ನು ಮಾಡುವ ಕುರಿತು ಘೋಷಿಸಿದ್ದಾರೆ.

    ಸ್ವಂತ ಕೆಲಸದೊಂದಿಗೆ ಗುಡ್ಡಗಾಡು ಪ್ರದೇಶದಲ್ಲಿ 16 ಕೆರೆಗಳನ್ನು ನಿರ್ಮಿಸಿದ ಮಂಡ್ಯ ಜಿಲ್ಲೆಯ ಕಾಮೇಗೌಡರ ಸಾಮಾಜಿಕ ಕಳಕಳಿ ಯುವ ಸಮೂಹಕ್ಕೆ ಮಾದರಿಯಾಗಿದೆ. ಹೀಗಾಗಿಯೇ ಪ್ರಧಾನಿ ಮೋದಿ `ಮನ್ ಕೀ ಬಾತ್’ ಕಾರ್ಯಕ್ರಮದಲ್ಲಿ ಪರಿಸರ ಪ್ರೇಮಿ, ರಾಜ್ಯೋತ್ಸವ ಪುರಷ್ಕೃತ ಕಾಮೇಗೌಡ ಅವರನ್ನು ಶ್ಲಾಘಿಸಿದ್ದಾರೆ. ಮೂಲತಃ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದಾಸಮದೊಡ್ಡಿ ಗ್ರಾಮದ ಕುರಿಗಾಹಿ 83 ವರ್ಷದ ಕಾಮೇಗೌಡರು 16 ಕೆರೆಗಳನ್ನು ನಿರ್ಮಿಸಿದ್ದಾರೆ. ಅಷ್ಟೇ ಅಲ್ಲದೆ ಎರಡು ಸಾವಿರಕ್ಕೂ ಹೆಚ್ಚು ಗಿಡ ನೆಟ್ಟು ಪರಿಸರ ಪ್ರೇಮ ಮೆರೆದಿದ್ದಾರೆ.

    ನೀಲಿ ವೆಂಕಟಗೌಡ, ರಾಜಮ್ಮ ದಂಪತಿಯ ಮಗ ಕಾಮೇಗೌಡರು ಶಾಲೆಯ ಮೆಟ್ಟಿಲು ಏರಿದವರಲ್ಲ. ಆದರೆ ತಮಗಿರುವ ಪರಿಸರ ಕಾಳಜಿಯಿಂದ ಅನೇಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅವರ ಕೆಲಸವನ್ನು ಗುರುತಿಸಿದ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.

    ಕೆರೆ ನಿರ್ಮಾಣಕ್ಕೆ ಕೈ ಹಾಕಿದ್ಯಾಕೆ ಕಾಮೇಗೌಡರು?
    ಕುರಿಗಾಹಿಯಾಗಿರುವ ಕಾಮೇಗೌಡರು ಸುಮಾರು 13 ವರ್ಷಗಳ ಹಿಂದೆ ಕುಂದೂರು ಬೆಟ್ಟಕ್ಕೆ ಕುರಿ ಮೇಯಿಸಲು ಹೋಗಿದ್ದರು. ಆಗ ವಿಪರೀತ ದಾಹವಾಗಿ ನೀರಿಗಾಗಿ ಪರದಾಡಿದ್ದರು. ಬಳಿಕ ಸ್ವಲ್ಪ ದೂರದ ಮನೆಗೆ ಹೋಗಿ ನೀರು ಕೇಳಿ ಪಡೆದಿದ್ದರು. ಆಗ ನಾನು ದಾಹ ತೀರಿಸಿಕೊಂಡೆ ಆದರೆ ಪ್ರಾಣಿಗಳ ಪರಿಸ್ಥಿತಿ ಏನು ಎನ್ನುವ ಚಿಂತೆ ಅವರಿಗೆ ಕಾಡಿತ್ತು. ಹೀಗಾಗಿ ಗುಡ್ಡದಲ್ಲಿ ಕೆರೆ ನಿರ್ಮಾಣಕ್ಕೆ ಮುಂದಾದರು.

    ಕಾಮೇಗೌಡರು ಗುಡ್ಡದಲ್ಲಿ ಕೆರೆ ತೋಡುತ್ತಿದ್ದನ್ನು ಕಂಡು ಆರಂಭದಲ್ಲಿ ಅನೇಕರು ಗೇಲಿ ಮಾಡಿದ್ದರು. ಇವನಿಗೆ ಹುಚ್ಚು ಹಿಡಿದಿದೆ, ಅದಕ್ಕೆ ಇಲ್ಲಿ ಕೆರೆ ತೋಡುತ್ತಿದ್ದಾನೆ ಎಂದು ಮಾತನಾಡಿದ್ದರು. ಆದರೆ ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳದ ಕಾಮೇಗೌಡರು, ತಮ್ಮ ಕೆಲಸವನ್ನು ಮುಂದುವರಿಸಿದ್ದರು. ಸದ್ಯ 16 ಕೆರೆಗಳನ್ನು ನಿರ್ಮಿಸಿ ಪ್ರಧಾನಿ ಮೋದಿ, ದೇಶದ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ಕಾಮೇಗೌಡರು ತೋಡಿದ ಕೆರೆಗಳಲ್ಲಿ ಕಡು ಬೇಸಿಗೆಯಲ್ಲಿ ಕೂಡ ನೀರು ತುಂಬಿರುತ್ತದೆ. ದಕ್ಷಿಣ ಕರ್ನಾಟಕದ ಇತರ ಭಾಗಗಳಲ್ಲಿ ನೀರು ಕಡಿಮೆಯಾದರೂ ಇವರು ತೋಡಿದ ಕೆರೆಗಳಲ್ಲಿ ನೀರು ತುಂಬಿರುತ್ತದೆ. ತಮ್ಮ ಕುರಿಗಳನ್ನು ಮತ್ತು ಜಾನುವಾರುಗಳನ್ನು ಮೇಯಿಸುವಾಗ ಪರ್ವತ ಪ್ರದೇಶದ ಕಣಿವೆಗಳಲ್ಲಿ ನೀರು ಸಿಗದೆ ಪರಿತಪಿಸುತ್ತಿರುವ ಪ್ರಾಣಿ-ಪಕ್ಷಿಗಳನ್ನು ಕಂಡು ಕೆರೆಗಳನ್ನು ಅಗೆಯುವ ಆಲೋಚನೆ ಹೊಳೆಯಿತು ಎಂದು ಕಾಮೇಗೌಡರು ಈ ಹಿಂದೆ ಹೇಳಿದ್ದರು.

  • ಹೆಣ್ಣಿನ ಸೂಕ್ಷ್ಮ ತಲ್ಲಣಕ್ಕೆ ಕಣ್ಣಾಗುವ ‘ರಂಗನಾಯಕಿ’!

    ಹೆಣ್ಣಿನ ಸೂಕ್ಷ್ಮ ತಲ್ಲಣಕ್ಕೆ ಕಣ್ಣಾಗುವ ‘ರಂಗನಾಯಕಿ’!

    ಬೆಂಗಳೂರು: ಗೋವಾ ಇಂಟರ್ ನ್ಯಾಷನಲ್ ಫಿಲಂ ಫೆಸ್ಟಿವಲ್‍ಗೆ ಆಯ್ಕೆಯಾಗೋ ಮೂಲಕ ಎಲ್ಲರನ್ನೂ ಚಕಿತಗೊಳಿಸಿದ್ದ ಚಿತ್ರ ರಂಗನಾಯಕಿ. ನಮ್ಮ ನಡುವಿದ್ದೂ ನಾವ್ಯಾರೂ ಹೆಚ್ಚಾಗಿ ಗಮನ ಹರಿಸದ ಸೂಕ್ಷ್ಮ ಕಥೆಗಳತ್ತಲೇ ಹೆಚ್ಚು ಒತ್ತು ನೀಡುವವರು ನಿರ್ದೇಶಕ ದಯಾಳ್ ಪದ್ಮನಾಭನ್. ಅವರು ನಿರ್ಭಯಾ ಅತ್ಯಾಚಾರ ಪ್ರಕರಣದಂಥಾ ಘಟನೆಯನ್ನು ಬೇಸ್ ಆಗಿಟ್ಟುಕೊಂಡು ಸಿನಿಮಾ ನಿರ್ದೇಶನ ಮಾಡುತ್ತಾರೆಂಬ ಸುದ್ದಿ ಜಾಹೀರಾದ ಕ್ಷಣದಿಂದಲೇ ಗಾಢವಾದ ಕುತೂಹಲ ಮೂಡಿಕೊಂಡಿತ್ತು. ಅದಕ್ಕೆ ತಕ್ಕುದಾದ ವಿಚಾರಗಳೇ ಜಾಹೀರಾಗುತ್ತಾ ಸಾಗಿದ್ದರಿಂದಾಗಿ ರಂಗನಾಯಕಿಯತ್ತ ಎಲ್ಲ ವರ್ಗಗಳ ಪ್ರೇಕ್ಷಕರೂ ಕೂಡಾ ಚಿತ್ರ ನೆಟ್ಟಿದ್ದರು. ಅಂಥಾ ಅಗಾಧ ನಿರೀಕ್ಷೆ, ಕುತೂಹಲದ ಒಡ್ಡೋಲಗದಲ್ಲಿಯೇ ಈ ಚಿತ್ರವೀಗ ತೆರೆ ಕಂಡಿದೆ. ಹೆಣ್ಣೊಬ್ಬಳ ಸೂಕ್ಷ್ಮ ತಲ್ಲಣಗಳಿಗೆ ಕಣ್ಣಾಗುವಂತೆ, ಅದರ ಆಚೀಚೆಗೂ ಗಹನವಾದ ಕಥೆಯನ್ನೊಳಗೊಂಡು ಈ ಚಿತ್ರ ಪ್ರತೀ ಪ್ರೇಕ್ಷಕರನ್ನೂ ಕಾಡುವಂತೆ ಮೂಡಿ ಬಂದಿದೆ.

    ಹೆಣ್ಣಿನ ಮೇಲೆ ನಿರಂತರವಾಗಿ ಒಂದಿಲ್ಲೊಂದು ದೌರ್ಜನ್ಯಗಳು ನಡೆಯುತ್ತಲೇ ಇರುತ್ತವೆ. ಅದರಲ್ಲಿಯೂ ಇತ್ತೀಚಿನ ದಿನಗಳಲ್ಲಿ ಅತ್ಯಾಚಾರದಂಥಾ ಘೋರ ಆಘಾತವೂ ಹೆಣ್ಣಿನ ಬದುಕನ್ನು ಕಂಗಾಲು ಮಾಡಿ ಹಾಕುತ್ತಿವೆ. ಇಂಥಾ ಭೀಕರ ಆಘಾತಕ್ಕೀಡಾದ ಹೆಣ್ಣೊಬ್ಬಳು ಈ ಸಮಾಜವನ್ನು, ಇಲ್ಲಿನ ಪಲ್ಲಟಗಳನ್ನು ಹೇಗೆಲ್ಲ ಎದುರುಗೊಳ್ಳ ಬಹುದೆಂಬ ಕಾಲ್ಪನಿಕ ಕಥೆಯನ್ನು ನಿರ್ದೇಶಕ ದಯಾಳ್ ವಾಸ್ತವಿಕ ನೆಲೆಗಟ್ಟಿನಲ್ಲಿ ನಿರೂಪಿಸಿದ್ದಾರೆ. ಅದು ಅತ್ಯಾಚಾರಕ್ಕೀಡಾದ ಹೆಣ್ಣೊಬ್ಬಳ ಆತ್ಮ ಮರ್ಮರ. ನಮ್ಮದೇ ಸಮಾಜದಲ್ಲಿ ನಮ್ಮ ನಡುವಿದ್ದರೂ ಒಳಗಿವಿಗೆ ಮಾತ್ರವೇ ಕೇಳುವಂಥಾ ಆ ರೀತಿಯ ಮಿಡಿತಗಳನ್ನು ದಯಾಳ್ ದೊಡ್ಡ ಸ್ವರದಲ್ಲಿ, ತಣ್ಣಗಿನ ಶೈಲಿಯಲ್ಲಿ ನಿರೂಪಿಸಿದ ರೀತಿಯೇ ಅದ್ಭುತ.

    ಈವರೆಗೂ ಗ್ಲಾಮರಸ್ ಪಾತ್ರಗಳಲ್ಲಿ ಮಿಂಚುತ್ತಾ ಬಂದಿದ್ದ ಅದಿತಿ ಪ್ರಭುದೇವ ಇಲ್ಲಿ ಅನಾಥ ಹುಡುಗಿಯಾಗಿ, ಅತ್ಯಾಚಾರದಂಥಾ ಆಘಾತಕ್ಕೀಡಾದ ನಂತರದ ಚಹರೆಯಲ್ಲಿಯೂ ನಟಿಸಿರೋ ರೀತಿಯನ್ನು ಯಾರೇ ಆದರೂ ಮೆಚ್ಚಿಕೊಳ್ಳದಿರಲು ಸಾಧ್ಯವೇ ಇಲ್ಲ. ಆಕೆ ತಬ್ಬಲಿತನವನ್ನೇ ಬೆನ್ನಿಗಿಟ್ಟುಕೊಂಡಂತಿರೋ ಅನಾಥೆ. ಈ ಕಾರಣದಿಂದಲೇ ಆಸುಪಾಸಿನಲ್ಲಿ ಸುಳಿದಾಡುವವರನ್ನೆಲ್ಲ ತನ್ನವರೆಂಬಂಥಾ ಪ್ರೀತಿಯಿಂದ ಜೀವಿಸುತ್ತಾಳೆ. ಅನಾಥ ಪ್ರಜ್ಞೆಯನ್ನು ಮೀರಿಕೊಳ್ಳಲು ಹಚ್ಚಿಕೊಂಡಿದ್ದ ಸಂಗೀತದ ಗುಂಗೇ ಬದುಕು ರೂಪಿಸುತ್ತೆ. ಬೆಳದ ಮೇಲೆ ಅಪಾರ್ಟ್ ಮೆಂಟ್ ಒಂದರಲ್ಲಿ ವಾಸಿಸುತ್ತಾ, ಮಕ್ಕಳಿಗೆ ಸಂಗೀತ ಪಾಠ ಹೇಳಿಕೊಡುತ್ತಾ ಒಂದಷ್ಟು ಮಂದಿಯ ಪುಟ್ಟ ಪ್ರಪಂಚದಲ್ಲಿ ಹಾಯಾಗಿಯೇ ಇರುತ್ತಾಳೆ.

    ಇಂಥಾ ನಾಯಕಿಗೆ ನಾಯಿಗಳೊಂದಷ್ಟು ಮುಗಿಬಿದ್ದು ಕಾಡಿಸುವಂತೆ ಆಗಾಗ ಕನಸು ಬೀಳುತ್ತಿರುತ್ತೆ. ಒಂದಷ್ಟು ಕಾಲದ ನಂತರ ಅದು ನಿಜವೂ ಆಗುತ್ತೆ. ಸಾಮಾನ್ಯವಾಗಿ ಅತ್ಯಾಚಾರದಂಥಾ ಆಘಾತದ ನಂತರ ಬದುಕಿಗೆ ಅರ್ಥವಿಲ್ಲ ಎಂಬಂಥಾ ವಾತಾವರಣವಿದೆ. ಆದರೆ ಇಲ್ಲಿನ ಕಥೆ ಅಲ್ಲಿಂದಲೇ ಆರಂಭವಾಗುತ್ತೆ. ರಂಗನಾಯಕಿಯ ಮುಂದೆ ನಿಜವಾದ ಪ್ರೀತಿ, ಭ್ರಮೆಗಳ ವಾಸ್ತವ ಜಗತ್ತು ಬಿಚ್ಚಿಕೊಳ್ಳಲಾರಂಭಿಸುತ್ತೆ. ಅದಿತಿ ಪ್ರಭುದೇವ ಅವರಂತೂ ಈ ಪಾತ್ರದಲ್ಲಿ ಅದ್ಭುತವಾಗಿ ನಟಿಸಿದ್ದಾರೆ. ಅವರ ಗೆಳತಿಯಾಗಿ ಲಾಸ್ಯಾ ನಾಗರಾಜ್ ಅವರದ್ದೂ ಗಮನಾರ್ಹ ಅಭಿನಯ.

    ಇನ್ನುಳಿದಂತೆ ತ್ರಿವಿಕ್ರಮ್, ಎಂ ಜಿ ಶ್ರೀನಿವಾಸ್, ಪೊಲೀಸ್ ಅಧಿಕಾರಿಯಾಗಿ ನಟಿಸಿರೋ ಚಂದ್ರಚೂಡ್ ಮತ್ತು ನ್ಯಾಯಾಧೀಶರ ಪಾತ್ರಕ್ಕೆ ಜೀವ ತುಂಬಿರೋ ಸುಚೇಂದ್ರಪ್ರಸಾದ್ ಸೇರಿದಂತೆ ಎಲ್ಲರೂ ಅವರವರ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ. ದಯಾಳ್ ಪದ್ಮನಾಭನ್ ಅಷ್ಟೊಂದು ಅಚ್ಚುಕಟ್ಟಾಗಿ, ಎಲ್ಲರೆದೆಗೂ ತಾಕುವಂತೆ, ಒಂದರೆ ಕ್ಷಣವೂ ಬೋರು ಹೊಡೆಸದಂತೆ ಈ ಚಿತ್ರವನ್ನು ಕಟ್ಟಿ ಕೊಟ್ಟಿದ್ದಾರೆ. ಈ ಮೂಲಕ ನಿರ್ಮಾಪಕ ಎಸ್ ವಿ ನಾರಾಯಣ್ ಅವರ ಶ್ರಮವೂ ಸಾರ್ಥಕಗೊಂಡಿದೆ. ಒಟ್ಟಾರೆಯಾಗಿ ಇದೊಂದು ಅಪರೂಪದ ಚಿತ್ರ. ಕುಟುಂಬ ಸಮೇತರಾಗಿ ನೋಡಲೇ ಬೇಕಾದ ಚಿತ್ರವೂ ಹೌದು.

    ರೇಟಿಂಗ್: 4/5

  • ಪುಟ್ಟಣ್ಣ ಕಣಗಾಲ್‍ಗೆ ರಂಗನಾಯಕಿಯ ಗೌರವ!

    ಪುಟ್ಟಣ್ಣ ಕಣಗಾಲ್‍ಗೆ ರಂಗನಾಯಕಿಯ ಗೌರವ!

    ಬೆಂಗಳೂರು: ರಂಗನಾಯಕಿ ಎಂಬ ಹೆಸರು ಕೇಳಿದಾಕ್ಷಣವೇ ಕನ್ನಡದ ಪ್ರೇಕ್ಷಕರಿಗೆ ನಿರ್ದೇಶಕ ಪುಟ್ಟಣ್ಣ ಕಣಗಾಲ್ ನೆನಪಾಗುತ್ತಾರೆ. ಆರತಿಯವರ ಮನೋಜ್ಞ ಅಭಿನಯ ನೆನಪಾಗುತ್ತದೆ. ಆ ಕಾಲಕ್ಕೆ ದೊಡ್ಡ ಮಟ್ಟದಲ್ಲಿ ಸಂಚಲನ ಸೃಷ್ಟಿಸಿ ಸೂಪರ್ ಹಿಟ್ ಆಗಿದ್ದ ಈ ಚಿತ್ರ ಈವರೆಗೂ ತನ್ನೆಡೆಗಿನ ಕ್ರೇಜ್ ಆನ್ನು ಹಾಗೆಯೇ ಕಾಯ್ದಿಟ್ಟುಕೊಂಡು ಬಂದಿದೆ. ಇದೀಗ ದಯಾಳ್ ಪದ್ಮನಾಭನ್ ಅದೇ ಶೀರ್ಷಿಕೆಯನ್ನಿಟ್ಟುಕೊಂಡು ನಿರ್ದೇಶನ ಮಾಡಿರೋ ಚಿತ್ರ ಇದೇ ನವೆಂಬರ್ ಎಂಟರಂದು ತೆರೆಗಾಣುತ್ತಿದೆ.

    ಒಂದು ಯಶಸ್ವೀ ಚಿತ್ರದ ಶೀರ್ಷಿಕೆಯಲ್ಲಿಯೆ ಹೊಸಾ ಚಿತ್ರಗಳು ತೆರೆ ಕಾಣೋದೇನು ಹೊಸತಲ್ಲ. ಆದರೆ ಕಥೆ ಪೂರಕವಾಗಿ, ಮೂಲ ಚಿತ್ರದ ಘನತೆಯನ್ನು ಮತ್ತಷ್ಟು ಮಿರುಗಿಸುವಂಥಾ ಕಥೆಗಳು ದೃಷ್ಯ ರೂಪ ಪಡೆಯೋದು ಮಾತ್ರ ಅಪರೂಪದ ಬೆಳವಣಿಗೆ. ಆರಂಭದಲ್ಲಿ ಕಣಗಾಲ್ ನಿರ್ದೇಶನದ ರಂಗನಾಯಕಿ ಎಂಬ ಶೀರ್ಷಿಕೆಯನ್ನು ತಮ್ಮ ಚಿತ್ರಕ್ಕಿಡೋ ಸಂದರ್ಭ ಬಂದಾಗ ಖುದ್ದು ದಯಾಳ್ ಅವರೇ ತಲ್ಲಣಿಸಿದ್ದರಂತೆ. ರಂಗನಾಯಕಿಯ ಹೆಸರಿಗೆ ಕುಂದುಂಟಾಗದಂತೆ ಈ ಸಿನಿಮಾ ನಿರ್ದೇಶನ ಮಾಡಲು ತನ್ನಿಂದ ಸಾಧ್ಯವಾಗುತ್ತದಾ ಎಂದು ಕೇಳಿಕೊಂಡಿದ್ದರಂತೆ.

    ಇದೀಗ ರಂಗನಾಯಕಿ ರೆಡಿಯಾಗಿ ನಿಂತಿದೆ. ದಯಾಳ್ ಕೂಡಾ ನಿರಾಳ ಭಾವದಿಂದಿದ್ದಾರೆ. ಇದು ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರಿಗೆ ಗೌರವ ಸೂಚಿಸುವ ರೀತಿಯಲ್ಲಿ ಮೂಡಿ ಬಂದಿದೆ ಎಂಬ ಸಾರ್ಥಕ ಭಾವ ಅವರಲ್ಲಿದೆ. ಈ ಚಿತ್ರ ಗೋವಾ ಇಂಟರ್ ನ್ಯಾಷನಲ್ ಫಿಲಂ ಫೆಸ್ಟಿವಲ್‍ಗೆ ಆಯ್ಕೆಯಾಗಿರೋದೇ ಒಂದು ಗೌರವದ ವಿಚಾರ. ಅದು ಪುಟ್ಟಣ್ಣ ಕಣಗಾಲ್ ಅವರಂಥಾ ಮೇರು ನಿರ್ದೇಶಕನಿಗೆ ಸಲ್ಲಿಸೋ ಮಹಾ ಗೌರವ ಎಂಬುದರಲ್ಲಿ ಎರಡು ಮಾತಿಲ್ಲ. ಬಿಡುಗಡೆ ಪೂರ್ವದಲ್ಲಿಯೇ ಇಷ್ಟೊಂದು ಮಿಂಚುತ್ತಿರೋ ರಂಗನಾಯಕಿ ಬಿಡುಗಡೆಯ ನಂತರ ದೇಶ ಮಟ್ಟದಲ್ಲಿ ಸದ್ದು ಮಾಡಲಿದೆ ಎಂಬ ನಂಬಿಕೆ ಚಿತ್ರತಂಡದಲ್ಲಿದೆ.

  • ರಂಗನಾಯಕಿ: ಕನ್ನಡಿಗರೆಲ್ಲರ ಹೆಮ್ಮೆಯ ಚಿತ್ರ!

    ರಂಗನಾಯಕಿ: ಕನ್ನಡಿಗರೆಲ್ಲರ ಹೆಮ್ಮೆಯ ಚಿತ್ರ!

    ಬೆಂಗಳೂರು: ಕನ್ನಡ ಚಿತ್ರಗಳು ಕರ್ನಾಟಕಕ್ಕೆ ಮಾತ್ರವೇ ಸೀಮಿತ ಎಂಬಂಥಾ ವಾತಾವರಣ ಹಲವಾರು ವರ್ಷಗಳ ಕಾಲ ಚಾಲ್ತಿಯಲ್ಲಿತ್ತು. ಆದರೆ ಕನ್ನಡ ಸಿನಿಮಾಗಳು ಪರಭಾಷಾ ಚಿತ್ರಗಳಿಗೆ ಸೆಡ್ಡು ಹೊಡೆದು ನಿಲ್ಲುತ್ತವೆ, ಪರಭಾಷಾ ಚಿತ್ರಗಳೆದುರೂ ಸ್ಪರ್ಧೆಯೊಡ್ಡಿ ಗೆದ್ದು ಬೀಗುತ್ತವೆಂಬುದು ಇತ್ತೀಚಿನ ದಿನಗಳಲ್ಲಿ ಸ್ಪಷ್ಟವಾಗಿಯೇ ಮನನವಾಗಿದೆ. ಕೆಜಿಎಫ್‍ನಂಥಾ ಚಿತ್ರಗಳು ಅದನ್ನು ಮತ್ತಷ್ಟು ಸ್ಪಷ್ವಾಗಿಯೇ ಸಾಬೀತುಗೊಳಿಸಿವೆ. ಇತ್ತೀಚೆಗೆ ಶುರುವಾಗಿರೋ ಕನ್ನಡ ಚಿತ್ರಗಳ ಖದರ್ ಅನ್ನು ದಯಾಳ್ ಪದ್ಮನಾಭನ್ ನಿರ್ದೇಶನದಲ್ಲಿ ಮೂಡಿ ಬಂದಿರೋ ರಂಗನಾಯಕಿ ಚಿತ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಮಿರುಗುವಂತೆ ಮಾಡಿದೆ.

    ಪ್ರತೀ ಬಾರಿ ಗೋವಾ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಕನ್ನಡ ಚಿತ್ರಗಳು ಸ್ಥಾನ ಗಿಟ್ಟಿಸಿಕೊಳ್ಳಲು ಶತಾಯ ಗತಾಯ ಪ್ರಯತ್ನಿಸುತ್ತಿದ್ದವು. ಆದರೆ ತೀವ್ರ ಸ್ಪರ್ಧೆಯೊಡ್ಡಿದರೂ ಅದು ಸಾಧ್ಯವಾಗಿರಲಿಲ್ಲ. ಆದರೆ ರಂಗನಾಯಕಿ ವಿಚಾರದಲ್ಲಿ ಬಹು ಕಾಲದ ಕನಸು ಕೈಗೂಡಿದೆ. ಈ ಚಿತ್ರ ಗೋವಾ ಫಿಲಂ ಫೆಸ್ಟಿವಲ್‍ನ ಇಂಡಿಯನ್ ಪನೋರಮಾ ವಿಭಾಗದಲ್ಲಿ ಆಯ್ಕೆಯಾಗಿದೆ. ಈ ಮೂಲಕ ಈ ಸಿನಿಮೋತ್ಸವಕ್ಕೆ ಆಯ್ಕೆಯಾಗಿರೋ ಮೊದಲ ಚಿತ್ರವೆಂಬ ಹೆಗ್ಗಳಿಕೆಯೂ ಈ ಚಿತ್ರದ ಪಾಲಾಗಿದೆ.

    ಇದು ಪ್ರತಿಯೊಬ್ಬರೂ ಹೆಮ್ಮೆ ಪಡುವಂಥಾ ಸಂಗತಿ. ಈ ಮೂಲಕವೇ ದಯಾಳ್ ಕನ್ನಡ ಚಿತ್ರರಂಗದ ತಾಕತ್ತೇನೆಂಬುದನ್ನು ಇಡೀ ದೇಶಕ್ಕೇ ತೋರಿಸಿಕೊಟ್ಟಿದ್ದಾರೆ. ಅದೇನು ಸಾಮಾನ್ಯದ ಸಾಧನೆಯಲ್ಲ. ವಿಶ್ವಾದ್ಯಂತ ಬೇರೆ ಬೇರೆ ಭಾಷೆಗಳ ನೂರಾರು ಚಿತ್ರಗಳೊಂದಿಗೆ ಸರ್ಧೆಯೊಡ್ಡಿ ಜಯಿಸಿಕೊಂಡರೆ ಮಾತ್ರವೇ ಈ ಸಿನಿಮೋತ್ಸವಕ್ಕೆ ಪ್ರವೇಶ ಸಿಗುತ್ತದೆ. ಅದನ್ನು ರಂಗನಾಯಕಿ ಚಿತ್ರ ಸಮರ್ಥವಾಗಿಯೇ ಮಾಡಿ ತೋರಿಸಿದೆ. ಇದು ಸದರಿ ಚಿತ್ರದ ಭಿನ್ನವಾದ ಹೂರಣದ ಪ್ರತಿಫಲ. ಇನ್ನೇನು ವಾರದೊಪ್ಪತ್ತಿನಲ್ಲಿಯೇ ಬಿಡುಗಡೆಗೊಳ್ಳಲಿರೋ ರಂಗನಾಯಕಿ ಕನ್ನಡಿಗರೆಲ್ಲರ ಹೆಮ್ಮೆಯ ಚಿತ್ರವೆಂಬುದರಲ್ಲಿ ಎರಡು ಮಾತಿಲ್ಲ.

  • ಈ ಬಾರಿಯ ನವೆಂಬರ್ ಸಂಭ್ರಮಕ್ಕೆ ರಂಗು ತುಂಬಿಸುತ್ತಾಳೆ ರಂಗನಾಯಕಿ!

    ಈ ಬಾರಿಯ ನವೆಂಬರ್ ಸಂಭ್ರಮಕ್ಕೆ ರಂಗು ತುಂಬಿಸುತ್ತಾಳೆ ರಂಗನಾಯಕಿ!

    ಬೆಂಗಳೂರು: ದಯಾಳ್ ಪದ್ಮನಾಭನ್ ನಿರ್ದೇಶನದ ರಂಗನಾಯಕಿ ಅಭೂತಪೂರ್ವ ನಿರೀಕ್ಷೆಗಳೊಂದಿಗೆ ನವೆಂಬರ್ ಒಂದರಂದು ತೆರೆಗಾಣಲು ತಯಾರಾಗಿದೆ. ದಯಾಳ್ ಚಿತ್ರಗಳೆಂದ ಮೇಲೆ ಪ್ರೇಕ್ಷಕರಲ್ಲೊಂದು ಕುತೂಹಲ ಇದ್ದೇ ಇರುತ್ತದೆ. ಅದಕ್ಕೆ ಕಾರಣವಾಗಿರೋದು ಇದುವರೆಗೂ ಅವರು ಸೋಕುತ್ತಾ ಬಂದಿರುವ ಭಿನ್ನ ಕಥಾ ಹಂದರ. ಯಾರಿಗೇ ಆದರೂ ಇದು ಆರ್ಟ್ ಮೂವಿಗೆ ಮಾತ್ರವೇ ಹೊಂದಿಕೊಳ್ಳುವ ಕಥೆ ಎಂಬುದಕ್ಕೂ ಅವರು ಕಮರ್ಶಿಯಲ್ ಟಚ್ ಕೊಟ್ಟು ಬಿಡುತ್ತಾರೆ. ಈ ಮಾತಿಗೆ ಆ ಕರಾಳ ರಾತ್ರಿ, ತ್ರಯಂಬಕಂನಂಥಾ ಒಂದಷ್ಟು ಉದಾಹರಣೆಗಳಿವೆ. ದಯಾಳ್ ಅವರ ಈವರೆಗಿನ ಸಿನಿಮಾ ಯಾನದಲ್ಲಿಯೇ ಇದೀಗ ಬಿಡುಗಡೆಗೆ ರೆಡಿಯಾಗಿರುವ ರಂಗನಾಯಕಿ ಒಂದು ವಿಶಿಷ್ಟ ಚಿತ್ರ. ಈ ಮಾತಿಗೆ ಇತ್ತೀಚೆಗೆ ಲಾಂಚ್ ಆಗಿದ್ದ ಟ್ರೇಲರ್ ಗಿಂತಲೂ ಬೇರೆ ಉದಾಹರಣೆ ಬೇಕಿಲ್ಲ. ಹೀಗೆ ಸಕಾರಾತ್ಮಕ ವಾತಾವರಣದ ನಡುವೆ ಇದೇ ನವೆಂಬರ್ ಒಂದರಂದು ರಂಗನಾಯಕಿ ರಂಗ ಪ್ರವೇಶ ಮಾಡಲಿದ್ದಾಳೆ.

    ಈ ಹಿಂದೆ ಅಟೆಂಪ್ಟ್ ಟು ಮರ್ಡರ್ ಎಂಬ ಚಿತ್ರ ನಿರ್ಮಾಣ ಮಾಡಿದ್ದ ನಾರಾಯಣ್ ರಂಗನಾಯಕಿಯನ್ನು ಬಲು ಶ್ರದ್ಧೆಯಿಂದಲೇ ಬಂಡವಾಳ ಹೂಡಿ ಪೊರೆದಿದ್ದಾರೆ. ತಾವು ನಿರ್ಮಾಣ ಮಾಡುವ ಚಿತ್ರಗಳ ಸಂಖ್ಯೆಗಿಂತಲೂ ಅವೆಲ್ಲವೂ ಅಪರೂಪದವುಗಳಾಗಿರ ಬೇಕೆಂಬುದೇ ನಾರಾಯಣ್ ಅವರ ಇಂಗಿತ. ಅದಕ್ಕೆ ತಕ್ಕುದಾದ ಕಥೆಯಾದ್ದರಿಂದಲೇ ಅವರು ರಂಗನಾಯಕಿಯನ್ನು ಬಲು ಆಸ್ಥೆಯಿಂದಲೇ ನಿರ್ಮಾಣ ಮಾಡಿ ಪೊರೆದಿದ್ದಾರೆ. ಅಷ್ಟಕ್ಕೂ ಈ ಕಥೆ ತುಂಬಾನೇ ವಿಶೇಷವಾದದ್ದು ಮತ್ತು ಸೂಕ್ಷ್ಮವಾದದ್ದೆಂಬ ವಿಚಾರ ಈಗಾಗಲೇ ಪ್ರೇಕ್ಷಕರಿಗೆಲ್ಲ ತಿಳಿದು ಹೋಗಿದೆ.

    ಅತ್ಯಾಚಾರದಂಥಾ ಪೈಶಾಚಿಕ ಘಟನಾವಳಿಗಳು ಆಗಾಗ ಸುದ್ದಿಯಾಗುತ್ತಿರುತ್ತವೆ. ಆದರೆ ಅಂಥಾ ವಿಕೃತಿಗೆ ಬಲಿಯಾದ ಹೆಣ್ಣು ಜೀವಗಳು ಈ ಸಮಾಜವನ್ನು ಎದುರಿಸೋದು ಸಾಮಾನ್ಯವಾದ ಸಂಗತಿಯಲ್ಲ. ಹಾಗೆ ಅತ್ಯಾಚಾರಕ್ಕೀಡಾದ ಹೆಣ್ಣಿನ ಕಥೆಯನ್ನು ಈ ಚಿತ್ರ ಒಳಗೊಂಡಿದೆ. ಹಾಗಂಥಾ ಇದರ ಕಥೆ ಇಂಥಾ ನೊಂದ ಜೀವಗಳತ್ತ ಸಿಂಪಥಿ ಹರಿಸೋವಷ್ಟಕ್ಕೆ ಮಾತ್ರವೇ ಸೀಮಿತವಾಗಿಲ್ಲ. ಆ ಸಂಕಟವೇನೆಂಬುದನ್ನು ಜನರತ್ತ ದಾಟಿಸುತ್ತಲೇ ಆ ಬಗ್ಗೆ ಸಮಾಜದಲ್ಲೊಂದು ಜಾಗೃತಿ ಮೂಡಿಸೋ ಸನ್ನಿವೇಶಗಳೂ ಇಲ್ಲಿವೆ. ಇಂಥಾ ವಿಶೇಷತೆಗಳು ಇಲ್ಲದೇ ಹೋಗಿದ್ದರೆ ಈ ಚಿತ್ರ ಗೋವಾ ಫಿಲಂ ಫೆಸ್ಟಿವಲ್‍ಗೆ ಆಯ್ಕೆಯಾಗಲು ಸಾಧ್ಯವಾಗುತ್ತಿರಲಿಲ್ಲ.

    ಈ ಚಿತ್ರದಲ್ಲಿ ನಾಗಕನ್ನಿಕೆ ಖ್ಯಾತಿಯ ಅದಿತಿ ಪ್ರಭುದೇವ ನಾಯಕಿಯಾಗಿ ನಟಿಸಿದ್ದಾರೆ. ಅದಿತಿ ಬಹಳಷ್ಟು ಇಷ್ಟಪಟ್ಟು ಒಪ್ಪಿಕೊಂಡಿರೋ ಚಿತ್ರವಿದು. ಅವರಿಗಿಲ್ಲಿ ಸಿಕ್ಕಿರೋದು ಸವಾಲಿನ ಪಾತ್ರ. ಅತ್ಯಾಚಾರದಂಥಾ ಬೀಭತ್ಸ ಕೃತ್ಯಕ್ಕೆ ಬಲಿಯಾದ ಹೆಣ್ಣೊಬ್ಬಳ ಮರ್ಮರವನ್ನು ಆವಾಹಿಸಿಕೊಂಡು ಅದಿತಿ ನಟಿಸಿದ್ದಾರಂತೆ. ಅದರ ಝಲಕ್ಕುಗಳು ಈಗಾಗಲೇ ಟ್ರೇಲರ್ ಮೂಲಕವೇ ಜಾಹೀರಾಗಿವೆ. ಒಟ್ಟಾರೆಯಾಗಿ ಈ ಸಿನಿಮಾ ಬಗ್ಗೆ ಆರಂಭದಿಂದಲೂ ಜನ ಆಕರ್ಷಿತರಾಗಿದ್ದರು. ಈಗಂತೂ ರಂಗನಾಯಕಿಯನ್ನು ಕಣ್ತುಂಬಿಕೊಳ್ಳುವ ಕಾತರ ಹೆಚ್ಚಾಗಿದೆ. ನವೆಂಬರ್ ಒಂದರಂದು ರಂಗನಾಯಕಿ ಎಲ್ಲರ ಕಣ್ಮುಂದೆ ಪ್ರತ್ಯಕ್ಷವಾಗಲಿದ್ದಾಳೆ.

  • ಅಂತಾರಾಷ್ಟ್ರೀಯ ಫಿಲಂ ಫೆಸ್ಟಿವಲ್‍ಗೆ ರಂಗನಾಯಕಿ ಎಂಟ್ರಿ!

    ಅಂತಾರಾಷ್ಟ್ರೀಯ ಫಿಲಂ ಫೆಸ್ಟಿವಲ್‍ಗೆ ರಂಗನಾಯಕಿ ಎಂಟ್ರಿ!

    ಬೆಂಗಳೂರು: ನಮ್ಮ ನಡುವೆಯೇ ನಡೆಯೋ ವಿದ್ಯಮಾನಗಳನ್ನು ಎಲ್ಲ ಮಾಮೂಲಿಯೆಂಬ ಯಾಂತ್ರಿಕ ತಿರುಗಣಿಗೆಸೆದು ಮರೆತು ಬಿಡುವ, ಕಡೆಗಣಿಸುವವರೇ ಹೆಚ್ಚು. ಅಂಥಾ ಸೂಕ್ಷ್ಮ ವಿಚಾರಗಳನ್ನೇ ಸಿನಿಮಾವಾಗಿಸಿ ಮತ್ತೆ ನಮ್ಮದೇ ಮನಸಿಗೆ ನಾಟುವಂತೆ ಮಾಡೋದಿದೆಯಲ್ಲಾ? ಅದು ನಿಜವಾದ ಕಸುಬುದಾರಿಕೆ. ಅದರಲ್ಲಿ ನಿರ್ದೇಶಕ ದಯಾಳ್ ಪದ್ಮನಾಭನ್ ಪಳಗಿಕೊಂಡಿದ್ದಾರೆ. ಅದೇ ಹಾದಿಯಲ್ಲಿ ಅಮೋಘವಾದ ಗೆಲುವನ್ನೂ ಕಂಡಿದ್ದಾರೆ. ಹೀಗೆ ಸಲೀಸಾಗಿ ಯಾರೂ ಸೋಕಲಾರದ ಕಥೆಗಳ ಒಳಗೆ ಪಾತಾಳಗರಡಿ ಹಾಕಿ ದೃಶ್ಯ ಕಟ್ಟುವ ಕಲೆಗಾರಿಕೆಯಿಂದಲೇ ಅವರು ರಂಗನಾಯಕಿ ಎಂಬ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಇದೀಗ ಈ ಸಿನಿಮಾ ಬಿಡುಗಡೆ ದಿನಾಂಕ ನಿಗದಿಯಾಗೋದರ ಜೊತೆಗೇ ಕನ್ನಡ ಚಿತ್ರರಂಗಕ್ಕೇ ಹೆಮ್ಮೆಯಂಥಾ ಮತ್ತೊಂದು ವಿಚಾರವೂ ಹೊರಬಿದ್ದಿದೆ!

    ಎಸ್.ವಿ ನಾರಾಯಣ್ ನಿರ್ಮಾಣ ಮಾಡಿರೋ ರಂಗನಾಯಕಿ ನವೆಂಬರ್ ಒಂದರಂದು ತೆರೆಗಾಣಲಿದೆ. ಅದಾಗಲೇ ಈ ಚಿತ್ರ ಈ ವರ್ಷದ ಗೋವಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಇಂಡಿಯನ್ ಪನೋರಮಾ ವಿಭಾಗದಿಂದ ಆಯ್ಕೆಯಾಗಿದೆ. ಇದಕ್ಕೆ ಆಯ್ಕೆಯಾದ ಈ ವರ್ಷದ ಏಕೈಕ ಕನ್ನಡ ಚಿತ್ರವೆಂಬ ಗರಿಮೆಯೂ ರಂಗನಾಯಕಿಯ ಮುಡಿಗೇರಿಕೊಂಡಿದೆ. ಈ ಬಗ್ಗೆ ಇಡೀ ಚಿತ್ರತಂಡವೇ ಸಂಭ್ರಮದಲ್ಲಿದೆ. ಅಂದಹಾಗೆ ಇದರ ಕಥಾ ಹಂದರದ ಸ್ವರೂಪವೇ ಇಂಥಾದ್ದೊಂದು ದಾಖಲೆಗೆ ದಾರಿ ಮಾಡಿ ಕೊಟ್ಟಿದೆ. ಇದುವೇ ರಂಗನಾಯಕಿಯ ಗೆಲುವಿನ ಮುನ್ಸೂಚನೆಯಂತೆಯೂ ಕಾಣಿಸುತ್ತಿದೆ.

    ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟಿ ಅದಿತಿ ಪ್ರಭುದೇವ ರಂಗನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಇದು ಅತ್ಯಾಚಾರಕ್ಕೀಡಾದ ಹೆಣ್ಣುಮಗಳೊಬ್ಬಳ ಮನದ ಮರ್ಮರದ ಆಂತರ್ಯ ಹೊಂದಿರೋ ಕಥೆ. ನಮ್ಮೆಲ್ಲರ ಅರಿವಿಗೆ ಬಂದು ಸಾವಿರ ಸುದ್ದಿಗಳ ನಡುವೆ ಸದ್ದಿಲ್ಲದ ಸರಕಾಗಿ ಕಳೆದು ಹೋಗುವ ಅತ್ಯಾಚಾರದಂಥಾ ಕೃತ್ಯ ಅದನ್ನನುಭವಿಸಿದ ಜೀವದ ಪಾಲಿಗೆ ನಿತ್ಯ ನರಕ. ಅಂಥಾದ್ದನ್ನು ಅನುಭವಿಸುತ್ತಲೇ ಈ ಸಮಾಜವನ್ನು ಹೆಣ್ಣೊಬ್ಬಳು ಎದುರಿಸೋ ಬಗೆ ಈ ಸಿನಿಮಾದ ಒಂದೆಳೆ. ಆದರೆ ಇಡೀ ಚಿತ್ರ ಈ ಒಂದೆಳೆಯಷ್ಟು ಸರಳವಾದುದಲ್ಲ. ದಯಾಳ್ ಪದ್ಮನಾಭನ್ ಯಾವುದೇ ಕಥೆಯೇ ಆದರೂ ಇಂಚಿಂಚು ಸೂಕ್ಷ್ಮ ಅಂಶಗಳನ್ನೂ ಹೆಕ್ಕಿಕೊಂಡು ದೃಶ್ಯ ಕಟ್ಟುವ ಛಾತಿ ಹೊಂದಿರುವವರು. ಅವರು ರಂಗನಾಯಕಿಯನ್ನೂ ಕೂಡಾ ಅಷ್ಟೇ ಆಸ್ಥೆಯಿಂದ ಪೊರೆದಿದ್ದಾರೆ.

    ಇಂಥಾ ಸೂಕ್ಷ್ಮವಾದ, ಸಮಾಜಕ್ಕೆ ಸಂದೇಶ ರವಾನಿಸೋ ಕಥೆಗೆ ಕಮರ್ಶಿಯಲ್ ಚೌಕಟ್ಟು ಹಾಕೋದು ನಿರ್ದೇಶನದ ದೃಷ್ಟಿಯಿಂದ ಸವಾಲಿನ ಕೆಲಸ. ಅದನ್ನು ದಯಾಳ್ ಪದ್ಮನಾಭನ್ ಸ್ವೀಕರಿಸಿದ್ದಾರೆ. ಆದರೆ ಅದು ಸಾಧ್ಯವಾದದ್ದು, ಪರಿಣಾಮಕಾರಿಯಾಗಿರೋದು ಎಸ್.ವಿ ನಾರಾಯಣ್ ಅವರಂಥಾ ಕಲಾಭಿರುಚಿಯ ನಿರ್ಮಾಪಕರ ಕಾರಣದಿಂದ. ಈ ಹಿಂದೆ ಎಟಿಎಂ ಎಂಬ ಸಿನಿಮಾ ನಿರ್ಮಾಣ ಮಾಡೋ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ನಾರಾಯಣ್ ಸಿನಿಮಾವನ್ನು ಗಂಭೀರವಾಗಿ ಪರಿಗಣಿಸಿರುವವರು. ತಾವು ನಿರ್ಮಾಣ ಮಾಡೋ ಚಿತ್ರಗಳ ಸಂಖ್ಯೆಗಿಂತ ಗುಣಮಟ್ಟವೇ ಮುಖ್ಯ ಎಂಬ ಮನೋಭಾವ ಹೊಂದಿರೋ ನಾರಾಯಣ್ ಆ ಪ್ರೀತಿಯಿಂದಲೇ ರಂಗನಾಯಕಿಗೆ ಸಾಥ್ ಕೊಟ್ಟಿದ್ದಾರೆ. ಆ ಬಲದಿಂದಲೇ ಈ ಚಿತ್ರವಿಂದು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗೋ ಮೂಲಕ ಕನ್ನಡ ಚಿತ್ರರಂಗದ ಘನತೆಯನ್ನು ಎತ್ತಿ ಹಿಡಿದಿದೆ.

  • ಕೃಷ್ಣನನ್ನು ಕರೆದಳು ರಂಗನಾಯಕಿ!

    ಕೃಷ್ಣನನ್ನು ಕರೆದಳು ರಂಗನಾಯಕಿ!

    ಬೆಂಗಳೂರು: 1981ರಲ್ಲಿ ಹಿಂದೆ ಕಾಲದಲ್ಲಿ ನಿರ್ದೇಶಕ ಪುಟ್ಟಣ್ಣ ಕಣಗಾಲ್ ನಿರ್ದೇಶನದಲ್ಲಿ ‘ರಂಗನಾಯಕಿ’ ಸಿನಿಮಾ ಬಂದಿದ್ದು, ದಾಖಲೆ ನಿರ್ಮಿಸಿದ್ದೀಗ ಇತಿಹಾಸ. ಅದೇ ‘ರಂಗನಾಯಕಿ’ ಶೀರ್ಷಿಕೆಯಲ್ಲೇ ಮತ್ತೊಂದು ಸಿನಿಮಾ ಬಿಡುಗಡೆಗೆ ತಯಾರಾಗಿದೆ. ವರ್ಷಕ್ಕೆ ಮುಂಚೆ ‘ಅಟೆಂಪ್ಟ್ ಟು ಮರ್ಡರ್’ ಸಿನಿಮಾವನ್ನು ನಿರ್ಮಿಸಿದ್ದ ಎಸ್.ವಿ ನಾರಾಯಣ್ ನಿರ್ಮಾಣದಲ್ಲಿ, ದಯಾಳ್ ಪದ್ಮನಾಭನ್ ನಿರ್ದೇಶನದಲ್ಲಿ ಮೂಡಿಬಂದಿರುವ ಚಿತ್ರ ರಂಗನಾಯಕಿ. ಈ ಚಿತ್ರದಲ್ಲಿ ಅದಿತಿ ಪ್ರಭುದೇವ, ಎಂ.ಜಿ. ಶ್ರೀನಿವಾಸ್, ತ್ರಿವಿಕ್ರಮ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕೆಲ ದಿನಗಳ ಹಿಂದಷ್ಟೇ ರಂಗನಾಯಕಿಯ ಟ್ರೇಲರ್ ಬಿಡುಗಡೆಗೊಂಡು ಸಂಚಲನ ಸೃಷ್ಟಿಸಿತ್ತು. ಈಗ ಈ ಚಿತ್ರದ ಮೊದಲ ಹಾಡು ಬಿಡುಗಡೆಗೊಂಡಿದೆ. ಕದ್ರಿ ಮಣಿಕಾಂತ್ ಸಂಗೀತ ನೀಡಿರುವ ‘ಕೃಷ್ಣ ನೀ ಬೇಗನೆ ಬಾರೋ’ ಹಾಡಿನ ಲಿರಿಕಲ್ ವಿಡಿಯೋ ಅನಾವರಣಗೊಂಡಿದೆ. ವ್ಯಾಸತೀರ್ಥರು ಬರೆದಿದ್ದ ಈ ಹಾಡನ್ನು ಅನನ್ಯ ಭಗತ್ ಮೋಹಕವಾಗಿ ಹಾಡಿದ್ದಾರೆ.

    ಕಣಗಾಲ್ ಪುಟ್ಟಣ್ಣನವರ ‘ರಂಗನಾಯಕಿ’ಯಂತೆಯೇ ದಯಾಳ್ ಅವರ ‘ರಂಗನಾಯಕಿ’ ಕೂಡ ಮಹಿಳೆಯೊಬ್ಬಳ ಕುರಿತಾದ ಕಥಾಹಂದರ ಹೊಂದಿದೆ. ಅತ್ಯಾಚಾರಕ್ಕೆ ಒಳಗಾದ ಹೆಣ್ಣುಮಗಳೊಬ್ಬಳು ಈ ಸಮಾಜದಲ್ಲಿ ಹೇಗೆ ತಲೆಯೆತ್ತಿನಿಲ್ಲುತ್ತಾಳೆ, ತನಗಾದ ದೌರ್ಜನ್ಯದ ವಿರುದ್ಧ ಹೇಗೆ ದನಿಯೆತ್ತುತ್ತಾಳೆ ಎಂಬುದು ಚಿತ್ರದ ತಿರುಳು. ಈಗ ಬಿಡುಗಡೆಯಾಗಿರುವ ಕೃಷ್ಣ ನೀ ಬೇಗನೆ ಬಾರೋ ಹಾಡು ಪ್ರೇಮಗೀತೆಯಂತೆ ಮೂಡಿಬಂದಿದೆ. ಬಿಡುಗಡೆಯಾದ ಕೆಲವೇ ಸಮಯದಲ್ಲಿ ಎಲ್ಲೆಡೆ ತಲುಪಿರುವ ಈ ಲಿರಿಕಲ್ ವಿಡಿಯೋ ಕೇಳಲು ಮಾತ್ರವಲ್ಲ ನೋಡಲು ಸಹಾ ಅಷ್ಟೇ ಮುದ್ದಾಗಿದೆ. ಇದನ್ನು ಓದಿ:  ಟ್ರೇಲರ್‌ನಲ್ಲಿ ಕಂಡಿದ್ದು ಭಿನ್ನ ಕಥೆಯ ರಂಗನಾಯಕಿ!

    ಶ್ರೀಮತಿ ಮಂಜುಳಾ ಮತ್ತು ಎಸ್.ವಿ. ಕೃಷ್ಣಮೂರ್ತಿ ಅರ್ಪಿಸಿರುವ ಎಸ್.ವಿ. ಎಸ್‍ವೀ ಎಂಟರ್‍ಟೈನ್ಮೆಂಟ್ ಲಾಂಛನದಲ್ಲಿ ತಯಾರಾಗಿರುವ ಈ ಚಿತ್ರಕ್ಕೆ ಬಿ. ರಾಕೇಶ್ ಛಾಯಾಗ್ರಹಣ, ಸುನಿಲ್ ಕಶ್ಯಪ್ ಸಂಕಲನ, ಕದ್ರಿ ಮಣಿಕಾಂತ್ ಸಂಗೀತ, ನವೀನ್ ಕೃಷ್ಣ ಸಂಭಾಷಣೆ, ವೆಂಕಟ್ ದೇವ್ ಸಹನಿರ್ದೇಶನವಿದೆ. ಶ್ರೀನಿ, ಅದಿತಿ ಪ್ರಭುದೇವ ಮತ್ತು ತ್ರಿವಿಕ್ರಮ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದನ್ನು ಓದಿ: ‘ರಂಗನಾಯಕಿ’ ಶುರುವಾಯ್ತು!

  • ‘ರಂಗನಾಯಕಿ’ ಶುರುವಾಯ್ತು!

    ‘ರಂಗನಾಯಕಿ’ ಶುರುವಾಯ್ತು!

    ನಿರ್ದೇಶಕ ದಯಾಳ್ ಪದ್ಮನಾಭನ್ ಕಳೆದ ಒಂಭತ್ತು ತಿಂಗಳಲ್ಲಿ ಮೂರು ಸಿನಿಮಾಗಳನ್ನು ರೂಪಿಸಿ ತೆರೆಗೆ ತಂದಿದ್ದಾರೆ. ಈಗ ಮತ್ತೊಂದು ಸಿನಿಮಾ ಆರಂಭಿಸಿದ್ದಾರೆ. ರಂಗನಾಯಕಿ ಹೆಸರಿನ ಈ ಚಿತ್ರವೀಗ ಟೈಟಲ್ ಲಾಂಚ್ ಮೂಲಕ ಆರಂಭವಾಗಿದ್ದು, ಇದೇ ತಿಂಗಳ 29ರಿಂದ ಚಿತ್ರೀಕರಣ ಶುರುವಾಗಲಿದೆ.

    ಧೈರ್ಯಂ ಸಿನಿಮಾದ ಮೂಲಕ ಸಿನಿಮಾ ನಾಯಕನಟಿಯಾಗಿ ಎಂಟ್ರಿ ಕೊಟ್ಟಿದ್ದ ಅದಿತಿ ಪ್ರಭುದೇವ ಈ ಚಿತ್ರದಲ್ಲಿ ಪ್ರಧಾನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ನಿರ್ಭಯಾ ಪ್ರಕರಣ ನಡೆದ ನಂತರ ದಯಾಳ್ ಒಂದು ಕಾದಂಬರಿಯನ್ನು ಬರೆಯಲು ಆರಂಭಿಸಿದ್ದರಂತೆ. ಕನ್ನಡ ಭಾಷೆ ಗೊತ್ತಿಲ್ಲದ ಕಾರಣ ತಾವು ಇಂಗ್ಲಿಷ್ ಮತ್ತು ತಮಿಳು ಭಾಷೆಯಲ್ಲಿ ರಚಿಸಿದ್ದರಂತೆ. ಇದನ್ನು ದಯಾಳ್ ಅವರ ಅಸೋಸಿಯೇಟ್ಸ್ ಕಿರಣ್ ಹೆಮ್ಮಿಗೆ ಕನ್ನಡೀಕರಿಸಿದ್ದಾರೆ. ರಂಗನಾಯಕಿ ಸಿನಿಮಾದ ಟೈಟಲ್ ಲಾಂಚ್ ಜೊತೆಗೆ ರಂಗನಾಯಕಿ ಕಿರು ಕಾದಂಬರಿ ರೂಪದಲ್ಲೂ ಲೋಕಾರ್ಪಣೆಗೊಂಡಿದೆ. ಡಿಐಜಿ ರೂಪಾ ಅವರು ರಂಗನಾಯಕಿ ಚಿತ್ರದ ಟೈಟಲ್ ಮತ್ತು ಕೃತಿಯನ್ನು ಬಿಡುಗಡೆಗೊಳಿಸಿದ್ದಾರೆ.

    ಕಿರಣ್ ಹೆಮ್ಮಿಗೆ ಕನ್ನಡೀಕರಿಸಿದ್ದಾರೆ. ರಂಗನಾಯಕಿ ಸಿನಿಮಾದ ಟೈಟಲ್ ಲಾಂಚ್ ಜೊತೆಗೆ ರಂಗನಾಯಕಿ ಕಿರು ಕಾದಂಬರಿ ರೂಪದಲ್ಲೂ ಲೋಕಾರ್ಪಣೆಗೊಂಡಿದೆ. ಡಿಐಜಿ ರೂಪಾ ಅವರು ರಂಗನಾಯಕಿ ಚಿತ್ರದ ಟೈಟಲ್ ಮತ್ತು ಕೃತಿಯನ್ನು ಬಿಡುಗಡೆಗೊಳಿಸಿದ್ದಾರೆ.

    “ರಂಗನಾಯಕಿ ಹೆಸರು ಕೇಳಿದರೇನೇ ರೋಮಾಂಚನಗೊಳ್ಳುತ್ತದೆ. ನಾನು ನನ್ನ ಐದನೇ ವಯಸ್ಸಿನಲ್ಲಿ ನನ್ನ ತಂದೆ ತಾಯಿಯೊಂದಿಗೆ ಪುಟ್ಟಣ್ಣ ಕಣಗಾಲರ ರಂಗನಾಯಕಿಯನ್ನು ಚಿತ್ರಮಂದಿರದಲ್ಲಿ ನೋಡಿದ್ದೆ. ಈಗ ಅದೇ ಹೆಸರಿನ ಸಿನಿಮಾದ ಆರಂಭೋತ್ಸವಕ್ಕೆ ನಾನು ಅತಿಥಿಯಾಗಿ ಬಂದಿರೋದು ಖುಷಿ ಎನಿಸುತ್ತಿದೆ. ಹೆಣ್ಣುಮಕ್ಕಳ ಪರವಾದ ಸಾಮಾಜಿಕ ಸಂದೇಶ ಈ ಸಿನಿಮಾದ ಮೂಲಕ ಜಗತ್ತಿಗೆ ರವಾನೆಯಾಗಲಿ” ಎಂದು ರೂಪಾ ಹೇಳಿದರು.

    ನಾಯಕಿ ಅದಿತಿ ಮಾತನಾಡಿ, ಅತ್ಯಾಚಾರದಂತಹ ಅಮಾನವೀಯ ಪ್ರಕರಣಗಳಾದಾಗ ಅದರ ಸುದ್ದಿಗಳನ್ನು ನೋಡಿ ಮನಸ್ಸು ಹಿಂಡುತ್ತದೆ. ಆದರೆ ಈ ಸಿನಿಮಾದಲ್ಲಿ ಅತ್ಯಾಚಾರಕ್ಕೊಳಗಾದ ಹೆಣ್ಣುಮಗಳ ಪಾತ್ರದಲ್ಲಿ ನಟಿಸಲಿದ್ದೇನೆ. ಇದು ನಿಜಕ್ಕೂ ಛಾಲೆಂಜಿಂಗ್ ಆದ ಪಾತ್ರ ಎಂದರು.

    ಇನ್ನು ಈ ಸಿನಿಮಾದಲ್ಲಿ ನಿರ್ದೇಶಕ ಶ್ರೀನಿ, ತ್ರಿವಿಕ್ರಮ್, ಲಾಸ್ಯಾ, ಶಿವಮಣಿ ಸೇರಿದಂತೆ ಸಾಕಷ್ಟು ಜನ ನಟಿಸುತ್ತಿದ್ದಾರೆ. ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನದ ಈ ಸಿನಿಮಾವನ್ನು ಈ ಹಿಂದೆ ಎಟಿಎಮ್ ಸಿನಿಮಾ ನಿರ್ಮಿಸಿದ್ದ ಎಸ್.ವಿ. ನಾರಾಯಣ್ ನಿರ್ಮಿಸುತ್ತಿದ್ದಾರೆ.

     

  • ಗುರುತಿಲ್ಲದ ಜಗತ್ತಿನ ಪರಿಚಯ ಮಾಡಿಸೋ ಅದ್ಭುತ ಚಿತ್ರ ತ್ರಯಂಬಕಂ!

    ಗುರುತಿಲ್ಲದ ಜಗತ್ತಿನ ಪರಿಚಯ ಮಾಡಿಸೋ ಅದ್ಭುತ ಚಿತ್ರ ತ್ರಯಂಬಕಂ!

    ನೀವು ನೋಡದಿದ್ದರೆ ಅಪರೂಪದ ಚಿತ್ರವನ್ನ ಮಿಸ್ ಮಾಡಿಕೊಳ್ತೀರಿ… ಹೀಗಂತ ಆತ್ಮವಿಶ್ವಾಸದಿಂದ ಸಜೆಸ್ಟ್ ಮಾಡುವಂಥಾ ಚಿತ್ರಗಳು ಆಗಾಗ ವಿರಳವಾಗಿ ತೆರೆ ಕಾಣುತ್ತಿರುತ್ತವೆ. ಆ ಸಾಲಿನಲ್ಲಿ ದಯಾಳ್ ಪದ್ಮನಾಭನ್ ನಿರ್ದೇಶನ ಮಾಡಿರೋ ತ್ರಯಂಬಕಂ ಚಿತ್ರವೂ ಖಂಡಿತ ಸೇರಿಕೊಳ್ಳುತ್ತೆ. ಎಲ್ಲ ವರ್ಗದ ಪ್ರೇಕ್ಷಕರನ್ನೂ ಚಕಿತಗೊಳಿಸುತ್ತಲೇ ಸೆಳೆದುಕೊಳ್ಳುವ ಕಥಾ ಹಂದರ ಹೊಂದಿರುವ ಈ ಚಿತ್ರದ ಒಟ್ಟಂದವೇ ಅಂಥಾದ್ದಿದೆ!

    ಈ ಹಿಂದೆ ಆ ಕರಾಳ ರಾತ್ರಿ ಮತ್ತು ಪುಟ 109 ಚಿತ್ರಗಳ ಮೂಲಕ ತಾನು ಭಿನ್ನ ಜಾಡಿನ ನಿರ್ದೇಶಕ ಎಂಬುದನ್ನು ಸಾಬೀತು ಪಡಿಸಿದ್ದವರು ದಯಾಳ್ ಪದ್ಮನಾಭನ್. ಇದೀಗ ಅವರು ತ್ರಯಂಬಕಂ ಚಿತ್ರದ ಮೂಲಕ ಅತ್ಯಂತ ಅಪರೂಪದ ರೋಚಕ ಕಥೆಯ ಮೂಲಕವೇ ಕಮರ್ಷಿಯಲ್ ಆಗಿಯೂ ನೆಲೆಗೊಳ್ಳುವ ಸ್ಪಷ್ಟ ಸೂಚನೆಯನ್ನು ರವಾನಿಸಿದ್ದಾರೆ. ಸಾಮಾನ್ಯ ಆಲೋಚನಾ ಕ್ರಮಕ್ಕೆ ನಿಲುಕದ ಕೆಲ ವಿಚಾರಗಳನ್ನು ಒಟ್ಟುಗೂಡಿಸಿರೋ ದಯಾಳ್ ಅವರು ಥ್ರಿಲ್ಲರ್ ಶೈಲಿಯಲ್ಲಿ, ಅರೆಕ್ಷಣವೂ ಆಚೀಚೆ ಕದಲದಂತೆ ನೋಡಿಸಿಕೊಳ್ಳುವ ಚೇತೋಹಾರಿ ಮಾದರಿಯಾಗಿ ಇಡೀ ಚಿತ್ರವನ್ನು ಕಟ್ಟಿ ಕೊಟ್ಟಿದ್ದಾರೆ.

    ತ್ರಯಂಬಕಂ ಅನ್ನೋದು ಶಿವನ ಮೂರನೇ ಕಣ್ಣು. ಅದಕ್ಕೆ ತಕ್ಕುದಾಗಿಯೇ ಶಿವ ಸಂಬಂಧವಿರುವ ಕಥಾ ಎಳೆಯೇ ಈ ಚಿತ್ರದ ಕೇಂದ್ರಬಿಂದು. ಶಿವನಾಮಸ್ಮರಣೆಯೊಂದಿಗೇ ತೆರೆದುಕೊಳ್ಳುವ ತ್ರಯಂಬಕಂನಲ್ಲಿ ಐದು ಸಾವಿರ ವರ್ಷಗಳ ಹಿಂದೆ ಋಷಿಯೊಬ್ಬರು ಒಂಭತ್ತು ಪಾಶಾಣಗಳನ್ನು ಸೇರಿಸಿ ಆವಿಷ್ಕರಿಸಿದ್ದ ಅಪರೂಪದ ಔಷಧಿಯೇ ಪ್ರಧಾನ ಅಂಶ. ಅದು ಎಂಥಾ ರೋಗಗಳಿಗಾದರೂ ಮದ್ದಾಗಬಲ್ಲ ನವಪಾಶಾಣ. ಇಂಥಾದ್ದೊಂದು ದಿವ್ಯೌಷಧಿ ಈಗಿನ ಆಧುನಿಕ ಯುಗದ ಮನುಷ್ಯರ ಕೈಗೆ ಸಿಕ್ಕರೆ ಏನೇನಾಗಬಹುದೆಂಬುದನ್ನು ಪೂರಕವಾದ ಥ್ರಿಲ್ಲರ್ ಕಥೆಯೊಂದರ ಮೂಲಕ ರೋಚಕವಾಗಿ ಹೇಳಲಾಗಿದೆ.

    ರಾಘವೇಂದ್ರ ರಾಜ್ ಕುಮಾರ್ ಇಲ್ಲಿ ತಂದೆಯ ಪಾತ್ರಕ್ಕೆ ಜೀವ ತುಂಬಿದ್ದಾರೆ. ಅನುಪಮಾ ಗೌಡ ಅವರ ಮಗಳಾಗಿ ನಟಿಸಿದ್ದಾರೆ. ಈ ತಂದೆಗೆ ಇಬ್ಬರು ಹೆಣ್ಣುಮಕ್ಕಳು. ಅದರಲ್ಲೊಬ್ಬಳು ಪ್ರಾಚ್ಯವಸ್ತು ಇಲಾಖೆಯಲ್ಲಿ ಕೆಲಸ ಮಾಡುವವರು. ಮತ್ತೋರ್ವ ಮಗಳು ತನ್ನ ಕಣ್ಣೆದುರೇ ಮರಣ ಹೊಂದುವ ದೃಶ್ಯವೊಂದು ತಂದೆಯನ್ನು ಕನಸಿನಂತೆ, ಆಘಾತದಂತೆ ಪ್ರತೀ ಹಂತದಲ್ಲಿಯೂ ಕಾಡುತ್ತಿರುತ್ತೆ. ವಾಸ್ತವವಾಗಿ ಒಬ್ಬಳೇ ಮಗಳು ಕಣ್ಣ ಮುಂದಿದ್ದರೂ ತನಗೆ ಮತ್ತೊಬ್ಬಳು ಮಗಳಿದ್ದಾಳಾ, ಅವಳೆಂದಾದರೂ ತನ್ನ ಕಣ್ಣೆದುರೇ ಮರಣ ಹೊಂದಿದ್ದಾಳಾ ಎಂಬುದು ಒಗಟಿನಂತೆ ಸದಾ ಕಾಡುತ್ತಿರುತ್ತದೆ.

    ಆದರೆ ತನಗೆ ಇನ್ನೊಬ್ಬಳು ಮಗಳಿದ್ದಳೆಂಬ ಸತ್ಯವೂ ಆತನಿಗೆ ತಿಳಿಯುತ್ತದೆ. ಪ್ರಾಚ್ಯವಸ್ತು ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಆ ಮಗಳೊಂದಿಗೆ ನಂದಿಬೆಟ್ಟಕ್ಕೆ ತೆರಳಿದ್ದು, ಅಲ್ಲಿ ನಡೆದ ಚಿತ್ರವಿಚಿತ್ರ ಘಟನಾವಳಿಗಳು ಮತ್ತು ಮಗಳ ಭೀಕರ ಸಾವಿನ ಅಸ್ಪಷ್ಟ ಚಿತ್ರಗಳು ತಂದೆಯ ಕಣ್ಮುಂದೆ ಕದಲುತ್ತಿರುತ್ತವೆ. ಒಂದರೆಕ್ಷಣವೂ ಗ್ಯಾಪು ಕೊಡದಂತೆ ಈ ಸಿಕ್ಕಿನಲ್ಲಿಯೇ ಥ್ರಿಲ್ಲಿಂಗ್ ಆಗಿ ನೋಡಿಸಿಕೊಂಡು ಹೋಗೋ ಈ ಚಿತ್ರ ಮತ್ತಷ್ಟು ಓಘ ಪಡೆದುಕೊಳ್ಳೋದು ಸೆಕೆಂಡ್ ಹಾಫ್ ನಂತರ. ಇದು ಭ್ರಮೆಯಾ ವಾಸ್ತವವಾ ಅಂತ ಗೊಂದಲಕ್ಕೆ ಬಿದ್ದ ತಂದೆಯ ಮುಂದೆ ತನಗೆ ಮತ್ತೊಬ್ಬಳು ಮಗಳಿದ್ದದ್ದು ಹೌದೆಂಬ ಸತ್ಯದರ್ಶನ ವಾಗುತ್ತೆ. ಇಷ್ಟಾಗುವ ಹೊತ್ತಿಗೆಲ್ಲ ಫಸ್ಟ್ ಹಾಫ್ ಮುಗಿದು ಹೋಗಿರುತ್ತದೆ.

    ಹೀಗೆ ಮತ್ಯಾವುದೋ ಬೇರೆ ಲೋಕದಂಥಾ ಚಿತ್ರಾವಳಿಗಳು ತನ್ನನ್ಯಾಕೆ ಕಾಡುತ್ತವೆ ಎಂಬ ಗೊಂದಲದ ಮಡುವಲ್ಲಿದ್ದಾಗಲೇ ಮತ್ತೊಂದು ದಿಕ್ಕಿನ ರೋಚಕ ಪಯಣ ಶುರುವಾಗುತ್ತೆ. ತನ್ನೊಳಗಿನ ಈ ಎಲ್ಲ ಗೊಂದಲಗಳನ್ನೂ ಕೂಡಾ ಆತ ತನ್ನ ಎರಡನೇ ಮಗಳ ಮುಂದೆ ಪ್ರಾಮಾಣಿಕವಾಗಿ ಬಿಚ್ಚಿಡುತ್ತಾ ಹಗುರಾಗಲು ಪ್ರಯತ್ನಿಸುತ್ತಾನೆ. ಇದೆಲ್ಲದರ ಹಿಂದೆ ಏನೋ ಒಂದು ಸತ್ಯವಿದೆ ಎಂದರಿತ ಎರಡನೇ ಮಗಳು ತನ್ನ ತಂದೆಯ ಮನೋವ್ಯಾಕುಲವನ್ನೆಲ್ಲ ತನ್ನ ಡಿಟೆಕ್ಟಿವ್ ಗೆಳೆಯನ ಬಳಿ ಹೇಳಿಕೊಳ್ಳುತ್ತಾಳೆ. ಆ ಬಳಿಕ ಡಿಟೆಕ್ಟಿವ್ ಗೆಳೆಯ ಮತ್ತು ಎರಡನೇ ಮಗಳು ಸೇರಿಕೊಂಡು ಒಟ್ಟಾರೆ ರಹಸ್ಯವನ್ನು ಬೇಧಿಸುತ್ತಾರಾ? ಆ ತಂದೆಯ ಕನಸಲ್ಲಿ ಭ್ರಮೆಯಂತೆ ಬರುತ್ತಿದ್ದ ವಿಚಾರಗಳೆಲ್ಲ ನಿಜವಾ, ಆಕೆ ಹಾಗೆ ಭೀಕರವಾಗಿ ಸಾಯೋದಕ್ಕೆ ಕಾರಣವೇನು? ಅದಕ್ಕೂ ನವಪಾಶಾಣವೆಂಬ ಐದು ಸಾವಿರ ವರ್ಷಗಳ ಹಿಂದಿನ ನವಪಾಶಾಣ ಔಷಧಿಗೂ ಏನು ಸಂಬಂಧ? ಇಂಥಾ ಪ್ರಶ್ನೆಗಳೇ ನಿಮಗೆ ರೋಚಕವಾಗಿ ಕಾಣಿಸುತ್ತದೆಯಲ್ಲಾ… ಥೇಟರು ಹೊಕ್ಕರೆ ಅದಕ್ಕಿಂತಲೂ ರೋಚಕವಾದ ಉತ್ತರಗಳು ಈ ಚಿತ್ರದಲ್ಲಿ ನಿಮ್ಮನ್ನೆಲ್ಲ ಮುತ್ತಿಕೊಳ್ಳುತ್ತವೆ.

    ಅನುಪಮಾ ಗೌಡ ಎರಡು ಪಾತ್ರಗಳಲ್ಲಿಯೂ ಪರಕಾಯ ಪ್ರವೇಶ ಮಾಡಿದಂತೆ ಅಭಿನಯಿಸಿದ್ದಾರೆ. ಈ ಮೂಲಕ ತಾನು ಯಾವ ಪಾತ್ರಕ್ಕಾದರೂ ನ್ಯಾಯ ಒದಗಿಸಬಲ್ಲ ಪ್ರತಿಭಾವಂತ ನಟಿ ಎಂಬುದನ್ನು ಸಾಬೀತುಗೊಳಿಸಿದ್ದಾರೆ. ಗೆಳೆಯ ಮತ್ತು ಡಿಟೆಕ್ಟಿವ್ ಪಾತ್ರ ಮಾಡಿರುವ ರಾಕ್ ಸ್ಟಾರ್ ರೋಹಿತ್ ಕೂಡಾ ಅಂಥಾದ್ದೇ ನಟನೆ ನೀಡಿದ್ದಾರೆ. ವಿಲನ್ ಆಗಿ ನಿರ್ದೇಶಕರೂ ಆಗಿರೋ ಶಿವಮಣಿ ಪಾತ್ರ ಗಮನ ಸೆಳೆಯುವಂತಿದೆ. ವಿಜಯಲಕ್ಷ್ಮಿ ಸಿಂಗ್ ಸೇರಿದಂತೆ ಉಳಿಕೆ ತಾರಾಗಣವೂ ಅದ್ಭುತವಾಗಿಯೇ ಎಫರ್ಟ್ ಹಾಕಿದೆ. ಬಿ ರಾಕೇಶ್ ಛಾಯಾಗ್ರಹಣ, ನವೀನ್ ಕೃಷ್ಣ ಅವರ ಸಂಭಾಷಣೆಯಂತೂ ಚಿತ್ರಕ್ಕೆ ಮತ್ತಷ್ಟು ಶಕ್ತಿ ತುಂಬುವಂತಿದೆ.

    ನಿಖರವಾಗಿ ಹೇಳಬೇಕೆಂದರೆ ಈ ಮೂಲಕ ದಯಾಳ್ ಪದ್ಮನಾಭನ್ ನಿರ್ದೇಶಕನಾಗಿ ಹೊಸ ಹೆಜ್ಜೆ ಗುರುತು ಮೂಡಿಸಿದ್ದಾರೆ. ಒಂದು ಸೂಕ್ಷ್ಮವಾದ ಕಥೆಗೆ ಥ್ರಿಲ್ಲರ್ ಅಂಶಗಳನ್ನು ಬೆರೆಸಿ ನೋಡುಗರಿಗೆ ಹೊಸ ಅನುಭವ ನೀಡುವಲ್ಲಿ ಅವರು ಗೆದ್ದಿದ್ದಾರೆ. ಈ ಮೂಲಕವೇ ಫ್ಯೂಚರ್ ಎಂಟರ್‍ಟೈನರ್ ಲಾಂಛನದಡಿಯಲ್ಲಿ ನಿರ್ಮಾಣ ಮಾಡಿರೋ ನಿರ್ಮಾಪಕರುಗಳ ಶ್ರಮವೂ ಸಾರ್ಥಕವಾಗಿದೆ. ಇದು ಕುಟುಂಬ ಸಮೇತರಾಗಿ ನೋಡಿ ಎಂಜಾಯ್ ಮಾಡುವಂಥಾ, ಎಲ್ಲ ವರ್ಗದ ಪ್ರೇಕ್ಷಕರೂ ಮಿಸ್ ಮಾಡದೇ ನೋಡುವಂಥಾ ಒಳ್ಳೆ ಚಿತ್ರ.

    ರೇಟಿಂಗ್: 4/5

  • ತ್ರಯಂಬಕಂಗಾಗಿ ಹೇಗೆಲ್ಲ ತಯಾರಿ ನಡೆಸಲಾಗಿತ್ತು ಗೊತ್ತಾ?

    ತ್ರಯಂಬಕಂಗಾಗಿ ಹೇಗೆಲ್ಲ ತಯಾರಿ ನಡೆಸಲಾಗಿತ್ತು ಗೊತ್ತಾ?

    ಒಂದು ಕಥಾ ಎಳೆಯನ್ನು ಸಿನಿಮಾವಾಗಿ ಕಟ್ಟಿ ನಿಲ್ಲಿಸೋದು ಎಂಥಾ ಕಷ್ಟದ ಸಂಗತಿ ಎಂಬುದು ಗೊತ್ತಿರುವವರಿಗಷ್ಟೇ ಗೊತ್ತಾಗಬಲ್ಲ ವಿಚಾರ. ಅದರಲ್ಲಿಯೂ ಇತಿಹಾಸ, ಪುರಾಣದಂಥಾ ಕಥಾ ವಸ್ತುಗಳಿದ್ದರಂತೂ ಅದೆಷ್ಟು ದಿಕ್ಕಿನಿಂದ ಮಾಹಿತಿ ಕಲೆ ಹಾಕಿದರೂ ಸಾಕಾಗೋದಿಲ್ಲ. ಇಂಥಾದ್ದೊಂದು ಹುಡುಕಾಟ, ರಿಸರ್ಚ್‍ಗಳ ಫಲವಾಗಿಯೇ ಈ ವಾರ ತೆರೆಗೆ ಬರಲು ರೆಡಿಯಾಗಿರುವ ಚಿತ್ರ ತ್ರಯಂಬಕಂ.

    ದಯಾಳ್ ಪದ್ಮನಾಭನ್ ಚಿತ್ರಗಳೆಂದರೇನೇ ಇಂಥಾ ಹುಡುಕಾಟ ಬೇಡುವ ಕಥಾ ಹಂದರ ಹೊಂದಿರುತ್ತವೆ. ಆದರೆ ತ್ರಯಂಬಕಂ ಅದರಲ್ಲಿಯೂ ವಿಶೇಷವಾಗಿರೋ ಕಥೆ ಹೊಂದಿರುವ ಚಿತ್ರ. ಇದರಲ್ಲಿನ ಕಥೆ ಐದು ಸಾವಿರ ವರ್ಷಗಳಷ್ಟು ಹಿಂದಿನ ವಿದ್ಯಮಾನಗಳೊಂದಿಗೂ ಕನೆಕ್ಟ್ ಆಗುತ್ತದೆ. ಆದರೆ ಅಂಥಾ ಪುರಾತನ ರಹಸ್ಯಗಳನ್ನು ಹೆಕ್ಕಿ ತಂದಿದ್ದೇ ಒಂದು ರೋಚಕ ಕಥನ.

    ತ್ರಯಂಬಕಂನಲ್ಲಿ ಐದು ಸಾವಿರ ವರ್ಷಗಳ ಹಿಂದಿದ್ದ ನವಪಾಷಾಣ ಔಷಧ ಪದ್ಧತಿಯ ಬಗ್ಗೆ ಪ್ರಧಾನವಾಗಿ ಬೆಳಕು ಚೆಲ್ಲಲಾಗಿದೆ. ಆದರೆ ಅದರ ಬಗ್ಗೆ ಮಾಹಿತಿ ಕಲೆ ಹಾಕೋದು ಅಷ್ಟು ಸಲೀಸಿನ ಸಂಗತಿಯಾಗಿರಲಿಲ್ಲ. ಇದರ ಆಧುನಿಕ ಕುರುಹುಗಳು ಎಲ್ಲಿಯಾದರೂ ಇವೆಯಾ ಎಂಬುದರಿಂದ ಹಿಡಿದು ಪ್ರತಿಯೊಂದಕ್ಕೂ ದಯಾಳ್ ಅವರು ಹುಡುಕಾಡಿದ್ದಾರೆ, ಅಲೆದಾಟ ನಡೆಸಿದ್ದಾರೆ. ಈವತ್ತಿಗೆ ತ್ರಯಂಬಕಂ ಭಾರೀ ಕುತೂಹಲಕ್ಕೆ ಕಾರಣವಾಗಿದೆ ಎಂದರೆ ಅದರ ಹಿಂದೆ ಇಂಥಾ ಶ್ರಮದ ಕಥೆ ಇದೆ. ಹೀಗೆ ಅಗಾಧವಾದ ಶ್ರಮ ಮತ್ತು ಶ್ರದ್ಧೆಯಿಂದ ರೂಪುಗೊಂಡಿರೋ ಈ ಚಿತ್ರ ಈ ವಾರವೇ ಬಿಡುಗಡೆಗೊಳ್ಳಲಿದೆ.