Tag: ದಕ್ಷಿಣ ಕನ್ನಡ ಗಲಭೆ

  • ಪೊಲೀಸರಿಗೆ ಸರಿಯಾದ ಊಟ, ಮಲಗೋಕೆ ಜಾಗ ಇಲ್ಲ – ಇದು ದಕ್ಷಿಣ ಕನ್ನಡದ ಗಲಭೆ ಎಫೆಕ್ಟ್

    ಪೊಲೀಸರಿಗೆ ಸರಿಯಾದ ಊಟ, ಮಲಗೋಕೆ ಜಾಗ ಇಲ್ಲ – ಇದು ದಕ್ಷಿಣ ಕನ್ನಡದ ಗಲಭೆ ಎಫೆಕ್ಟ್

    ಮಂಗಳೂರು: ಕಳೆದೆರಡು ತಿಂಗಳಿಂದ ದಕ್ಷಿಣ ಕನ್ನಡ ಜಿಲ್ಲೆ ಬೂದಿಮುಚ್ಚಿದ ಕೆಂಡದಂತಾಗಿತ್ತು. ಗಲಭೆ ನಿಯಂತ್ರಣಕ್ಕೆ ಸರ್ಕಾರವೇನೋ ಕಳೆದ 58 ದಿನಗಳಿಂದ ನಿಷೇಧಾಜ್ಞೆ ಹೇರಿದೆ. ಆದ್ರೆ ತಮ್ಮ ಮನೆ, ಕುಟುಂಬ ಎಲ್ಲವನ್ನೂ ಬಿಟ್ಟು ಕಾರ್ಯನಿರ್ವಹಿಸುತ್ತಿರುವ ಪೊಲೀಸರ ಪರಿಸ್ಥಿತಿ ನೋಡಿದ್ರೆ ಅಯ್ಯೋ ಪಾಪ ಎನ್ನುವಂತಿದೆ.

    ಹೌದು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ 58 ದಿನಗಳಿಂದ ನಿಷೇಧಾಜ್ಞೆ ಹೇರಲಾಗಿದೆ. ಕೆಎಸ್‍ಆರ್‍ಪಿ ಜೊತೆಗೆ ಬಳ್ಳಾರಿ, ದಾವಣಗೆರೆ ಸೇರಿ 12 ಜಿಲ್ಲೆಗಳ ಒಂದು ಸಾವಿರಕ್ಕೂ ಹೆಚ್ಚು ಪೊಲೀಸರು ಕಾವಲು ಕಾಯುತ್ತಿದ್ದಾರೆ. ಕಳೆದೆರಡು ತಿಂಗಳಿಂದ ಹೆಂಡತಿ, ಮಕ್ಕಳನ್ನೂ ನೋಡದೇ ಕಾರ್ಯನಿರ್ವಹಿಸುತ್ತಿರೋ ಇವರಿಗೆ ಉಳಿದುಕೊಳ್ಳಲು ಸರಿಯಾದ ವ್ಯವಸ್ಥೆ ಕಲ್ಪಿಸಿಲ್ಲ. ಜೊತೆಗೆ ಇವರಿಗೆ ಕೊಡ್ತಿರೋದು ಕೇವಲ ಅನ್ನ, ಸಾರು ಮಾತ್ರ.

    ಮೊದಲು 4 ತಾಲೂಕು ವ್ಯಾಪ್ತಿಯಲ್ಲಿದ್ದ ನಿಷೇಧಾಜ್ಞೆಯನ್ನು ಈಗ ಬಂಟ್ವಾಳಕ್ಕೆ ಸೀಮಿತಗೊಳಿಸಲಾಗಿದೆ. ಆದ್ರೆ ನಿಷೇಧಾಜ್ಞೆ ನಡುವೆಯೇ 2 ಕೊಲೆಗಳು ನಡೆದಿವೆ. ಈಗಲೂ ಬಂಟ್ವಾಳದ ಪರಿಸ್ಥಿತಿ ಸುಧಾರಣೆ ಆಗಿಲ್ಲ.

    ಗಲಭೆ ಎಬ್ಬಿಸಿ ಶಾಂತಿಗಾಗಿ ಸೆಕ್ಷನ್ ಜಾರಿಮಾಡಿರುವ ಜನನಾಯಕರು ಇನ್ನಾದ್ರೂ ಈ ಬಗ್ಗೆ ಗಮಹರಿಸಬೇಕಿದೆ. ಶಾಂತಿಗಾಗಿ ಕಾಯುವ ಪೊಲೀಸರಿಗೆ ಕನಿಷ್ಠ ಸೌಲಭ್ಯವನ್ನಾದ್ರೂ ಒದಗಿಸಬೇಕಿದೆ.

  • ಬಿಎಸ್‍ವೈ, ಕಟೀಲ್ ವಿರುದ್ಧ ಆರ್‍ಎಸ್‍ಎಸ್ ಮಾಜಿ ಪ್ರಚಾರಕರಿಂದ ಮಾನವ ಹಕ್ಕು ಆಯೋಗಕ್ಕೆ ದೂರು

    ಬಿಎಸ್‍ವೈ, ಕಟೀಲ್ ವಿರುದ್ಧ ಆರ್‍ಎಸ್‍ಎಸ್ ಮಾಜಿ ಪ್ರಚಾರಕರಿಂದ ಮಾನವ ಹಕ್ಕು ಆಯೋಗಕ್ಕೆ ದೂರು

    ಬೆಂಗಳೂರು: ಇತ್ತೀಚೆಗೆ ಕಲ್ಲಡ್ಕ ಪ್ರಭಾಕರ್ ಭಟ್ ಕುರಿತು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿಕೆಯೊಂದನ್ನು ನೀಡಿದ್ದು, ಇದೀಗ ಬಿಎಸ್‍ವೈ ವಿರುದ್ಧ ಮಾಜಿ ಆರ್‍ಎಸ್‍ಎಸ್ ಪ್ರಚಾರಕರೊಬ್ಬರು ತಿರುಗಿ ಬಿದ್ದಿದ್ದಾರೆ.

    ಯಡಿಯೂರಪ್ಪ ಹಾಗೂ ಸಂಸದ ನಳೀನ್ ಕುಮಾರ್ ಕಟಿಲು ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಆರ್‍ಎಸ್‍ಎಸ್ ಮಾಜಿ ಪ್ರಚಾರಕ ಎನ್ ಹನುಮೇಗೌಡ ಮಾನವ ಹಕ್ಕು ಆಯೋಗಕ್ಕೆ ದೂರು ನೀಡಿದ್ದಾರೆ.

    ದೂರು ನೀಡಿದ್ದು ಯಾಕೆ?: ಇತ್ತೀಚೆಗೆ ಬಂಟ್ವಾಳದ ಆರ್ ಎಸ್ ಎಸ್ ಕಾರ್ಯಕರ್ತ ಶರತ್ ಮಡಿವಾಳ ದುಷ್ಕರ್ಮಿಗಳ ದಾಳಿಗೆ ಬಲಿಯಾಗಿದ್ದು, ಈ ಹಿನ್ನೆಲೆಯಲ್ಲಿ ಮಾತನಾಡುವ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು `ಕಲ್ಲಡ್ಕ ಪ್ರಭಾಕರ್ ಭಟ್ ಮುಟ್ಟಿದ್ರೆ ರಾಜ್ಯದಲ್ಲಿ ಬೆಂಕಿ ಹತ್ತಿ ಉರಿಯುತ್ತೆ’ ಅನ್ನೋ ಹೇಳಿಕೆಯೊಂದನ್ನು ನೀಡಿದ್ದರು. ಇದೊಂದು ಪ್ರಚೋದನಕಾರಿ ಹೇಳಿಕೆಯಾಗಿದ್ದು, ಈ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ವಿಧಾನಸೌಧ ಪೊಲೀಸರಿಗೆ ಹನುಮೇಗೌಡ ದೂರು ನೀಡಿದ್ದರು.

    ಹನುಮೇಗೌಡ ಅವರು ಪೋಲೀಸರಿಗೆ ಈ ದೂರನ್ನು ಕಳೆದ ಶನಿವಾರ ನೀಡಿದ್ದು, ಈವರೆಗೂ ಈ ಇಬ್ಬರ ವಿರುದ್ಧ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿರಲಿಲ್ಲ. ಹೀಗಾಗಿ ಇದೀಗ ಅವರು ಮಾನವ ಹಕ್ಕು ಆಯೋಗಕ್ಕೆ ದೂರು ನೀಡಿದ್ದು, ಬಿಎಸ್‍ವೈ ಹಾಗೂ ನಳೀನ್ ಕುಮಾರ್ ಕಟೀಲ್ ವಿರುದ್ಧ ಶೀಘ್ರವೇ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.