Tag: ತ್ರಿವಳಿ ಮಕ್ಕಳು

  • ಕೊಟ್ಟ ಮಾತಿನಂತೆ ನಡೆದ ಸೋನು ಸೂದ್ – ಯಾದಗಿರಿಯ ಕುಟುಂಬಕ್ಕೆ ಬಂತು ದಿನಸಿ

    ಕೊಟ್ಟ ಮಾತಿನಂತೆ ನಡೆದ ಸೋನು ಸೂದ್ – ಯಾದಗಿರಿಯ ಕುಟುಂಬಕ್ಕೆ ಬಂತು ದಿನಸಿ

    ಯಾದಗಿರಿ: ತ್ರಿವಳಿ ಮಕ್ಕಳ ಜನನದಿಂದಾಗಿ ಚಿಂತೆಗೀಡಾಗಿದ್ದ, ಯಾದಗಿರಿ ತಾಲೂಕಿನ ರಾಮಸಮುದ್ರ ಗ್ರಾಮದ ಪದ್ಮಾ ಕುಟುಂಬಕ್ಕೆ ನಟ ಸೋನು ಸೂದ್ ಕೊಟ್ಟ ಮಾತಿನಂತೆ ಸಹಾಯವನ್ನು ಮಾಡಿದ್ದಾರೆ.

    ಈ ತಿಂಗಳ 22ರಂದು ಪದ್ಮಾ ದಂಪತಿಗೆ ಏಕಕಾಲದಲ್ಲಿ ಮೂರು ಗಂಡು ಮಕ್ಕಳು ಜನಿಸಿದ್ದವು. ಕಡು ಬಡತನದಲ್ಲಿದ್ದ ಈ ಕುಟುಂಬ ಪಬ್ಲಿಕ್ ಟಿವಿ ಮೂಲಕ ಸಹಾಯ ಹಸ್ತವನ್ನು ಚಾಚಿದ್ದರು, ಈ ಸುದ್ದಿಯನ್ನು ಯಾದಗಿರಿಯ ಮಲ್ಲಿಕಾರ್ಜುನ ರೆಡ್ಡಿಯವರು ನಟ ಸೋನು ಸೂದ್‍ಗೆ ಕಳುಹಿಸಿದ್ದರು. ಸುದ್ದಿ ನೋಡಿದ ಸೋನು ಸೂದ್ ಪದ್ಮಾ ಕುಟುಂಬಕ್ಕೆ ರೇಷನ್ ನೀಡುವ ಭರವಸೆ ನೀಡಿದ್ದರು. ಭರವಸೆ ನೀಡಿದ ಎರಡೇ ದಿನಕ್ಕೆ ಮುಂಬೈಯಿಂದ ದಿನಸಿ ಕಳುಹಿಸಿದ್ದಾರೆ.

    ಎರಡು ತಿಂಗಳಿಗಾಗುವಷ್ಟು ಅಡುಗೆ ಎಣ್ಣೆ, ಅಕ್ಕಿ, ಸಕ್ಕರೆ, ಬೆಳೆಯನ್ನು ಅಮೆಜಾನ್ ಮೂಲಕ ಮೂರು ಬಾಕ್ಸ್‍ಗಳಲ್ಲಿ ಪಾರ್ಸಲ್ ಮಾಡಿದ್ದಾರೆ. ಈ ಬಗ್ಗೆ ಪಬ್ಲಿಕ್ ಟಿವಿಗೆ ವಿಡಿಯೋ ಕಳುಹಿಸಿರುವ ಸೋನು ಸೂದ್, ಮುಂದಿನ ದಿನಗಳಲ್ಲಿ ವೈದ್ಯಕೀಯ ಸಹಾಯ ನೀಡುವ ಮತ್ತು ಮಕ್ಕಳಿಗೆ ಬಟ್ಟೆ ಕಳುಹಿಸಲು ಭರವಸೆ ನೀಡಿದ್ದಾರೆ. ಮಕ್ಕಳ ತಂದೆ ನಾಗರಾಜ್ ನಟನಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

  • ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ಮಹಿಳೆ

    ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ಮಹಿಳೆ

    ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಸೋಲಿಗ ಮಹಿಳೆಯೊಬ್ಬರು ಮೂವರು ಮಕ್ಕಳಿಗೆ ಜನ್ಮ ನೀಡಿದ್ದಾರೆ.

    ಜಿಲ್ಲೆಯ ಕೆ.ಗುಡಿ ಅರಣ್ಯ ವ್ಯಾಪ್ತಿಯ ಭೂತಣ್ಣಿ ಪೋಡಿನ ನಿವಾಸಿ ಬಸಮಣಿ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ಜನ್ಮದಾತೆ. ಜಿಲ್ಲಾಸ್ಪತ್ರೆಯಲ್ಲಿ ಸಿಜೇರಿಯನ್ ಮೂಲಕ ಬಸಮಣಿಗೆ ವೈದ್ಯರು ಹೆರಿಗೆ ಮಾಡಿಸಿದ್ದು, ಮೂರು ಮಕ್ಕಳಿಗೆ ತಾಯಿ ಜನ್ಮ ನೀಡಿದ್ದಾರೆ.

    ಮೂರು ಮಕ್ಕಳು ಸಹ ತಲಾ ಒಂದೂವರೆ ಕೆ.ಜಿ ತೂಕವಿದ್ದು, ಚಾಮರಾಜನಗರ ಜಿಲ್ಲಾಸ್ಪತ್ರೆಯ ವಿಶೇಷ ನಿಗಾ ಘಟಕದಲ್ಲಿ ಮಕ್ಕಳ ಚಿಕಿತ್ಸೆ ಮುಂದುವರಿದಿದೆ. ಮೂರು ಮಕ್ಕಳು ಸಹ ಆರೋಗ್ಯವಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ. ಬಸಮಣಿ ಕುಟುಂಬಸ್ಥರಲ್ಲೂ ಸಂತಸ ಮನೆ ಮಾಡಿದ್ದು, ಮೂರು ಮಕ್ಕಳು ಜನಿಸಿದ್ದಕ್ಕೆ ಖುಷಿಪಟ್ಟಿದ್ದಾರೆ.

    ಮಂಗಳವಾರ ಮಹಾರಾಷ್ಟ್ರದ 38 ವರ್ಷದ ಮಹಿಳೆಯೊಬ್ಬರು ಬೆಳಗಾವಿಯನ್ನು 17ನೇ ಮಗುವಿಗೆ ಜನ್ಮ ನೀಡುವ ಮೂಲಕ ಭಾರೀ ಸುದಿಯಾಗಿದ್ದಾರೆ. ಬೀಡ್ ಜಿಲ್ಲೆಯ ಮಜಲ್‍ಗಾಂವ್ ಮೂಲದ ಲಂಕಾಬಾಯಿ(38) ಅವರು ತಮ್ಮ 17ನೇ ಮಗುವಿಗೆ ಜನ್ಮ ನೀಡಿದ್ದರು. ಆದರೆ ದುರಾದೃಷ್ಟವಶಾತ್ ಆರೋಗ್ಯ ಸಮಸ್ಯೆಯಿಂದ ಹುಟ್ಟಿದ ಬಳಿಕ ಆ ಹೆಣ್ಣು ಮಗು ಮೃತಪಟ್ಟಿದೆ. ಲಂಕಾಬಾಯಿ ಕುಟುಂಬ ಅಲೆಮಾರಿ ಸಮುದಾಯದವರಾಗಿದ್ದು, ಕೆಲಸ ಅರಸಿ ಆಕೆಯ ಕುಟುಂಬ ಕರ್ನಾಟಕಕ್ಕೆ ಬಂದಿತ್ತು.

    ಸದ್ಯ ಕರ್ನಾಟಕದಲ್ಲಿ ಕಬ್ಬಿನ ಕಟಾವಿನ ಸಮಯವಾಗಿದ್ದು, ಬೆಳಗಾವಿಯ ಕಬ್ಬಿನ ಗದ್ದೆಯೊಂದರಲ್ಲಿ ಮಹಿಳೆ ಹಾಗೂ ಆಕೆಯ ಕುಟುಂಬ ಕೆಲಸ ಮಾಡುತ್ತಿತ್ತು. ಕೆಲಸ ಮಾಡುತ್ತಿದ್ದ ವೇಳೆಯೇ ಹೆರಿಗೆ ನೋವು ಕಾಣಿಸಿಕೊಂಡ ಪರಿಣಾಮ, ಮಹಿಳೆ ಕಬ್ಬಿನ ಗದ್ದೆಯಲ್ಲಿಯೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆದರೆ ಹುಟ್ಟಿದ ಬಳಿಕ ಮಗು ಸಾವನ್ನಪ್ಪಿದೆ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದರು.

    20ನೇ ಬಾರಿಗೆ ಈ ಮಹಿಳೆ ಗರ್ಭ ಧರಿಸಿರುವ ಬಗ್ಗೆ ಆರೋಗ್ಯಾಧಿಕಾರಿಗಳು ಮಾಹಿತಿ ದಾಖಲಿಸಿಕೊಂಡಿದ್ದಾರೆ. ಈಗಾಗಲೇ ಮಹಿಳೆಗೆ 11 ಮಕ್ಕಳಿದ್ದು, ಅದರಲ್ಲಿ 9 ಹೆಣ್ಣು ಮಕ್ಕಳಿದ್ದಾರೆ. ಮೂರು ಬಾರಿ ಗರ್ಭಪಾತವಾಗಿದೆ, 5 ಮಗು ಸಾವನ್ನಪ್ಪಿದೆ ಎಂದು ಆರೋಗ್ಯಾಧಿಕಾರಿ ಡಾ. ಪವಾರ್ ಮಾಹಿತಿ ನೀಡಿದ್ದರು.

  • ಮೊದಲ ಹೆರಿಗೆಯಲ್ಲೇ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ

    ಮೊದಲ ಹೆರಿಗೆಯಲ್ಲೇ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ

    ವಿಜಯಪುರ: ನಗರದ ಖಾಸಗಿ ಆಸ್ಪತ್ರೆಯಲ್ಲಿ ಅಶ್ವಿನಿ ಎಂಬವರು ತಮ್ಮ ಮೊದಲ ಹೆರಿಗೆಯಲ್ಲೇ ತ್ರಿವಳಿ ಮಕ್ಕಳಿಗೆ ಜನ್ಮ ನೀಡುವ ಮೂಲಕ ಮಹಾತಾಯಿ ಎನಿಸಿಕೊಂಡಿದ್ದಾರೆ.

    ಸಿಂದಗಿ ತಾಲೂಕಿನ ಖೈನೂರು ಗ್ರಾಮದ ಅಶ್ವಿನಿ ಮೊದಲ ಹೆರಿಗೆಯಲ್ಲಿಯೇ ಎರಡು ಹೆಣ್ಣು, ಒಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮೂರು ಮಕ್ಕಳು ಆರೋಗ್ಯವಾಗಿರುವುದಾಗಿ ವೈದ್ಯರು ಮಾಹಿತಿ ನೀಡಿದ್ದಾರೆ.

    ಮೂರು ವರ್ಷಗಳ ಹಿಂದೆ ಅಶ್ವಿನಿ ಅವರನ್ನು ಶಾಂತಪ್ಪ ಎಂಬವರನ್ನು ವರಿಸಿದ್ದರು. ಕಳೆದ ಜನವರಿ ಆಸ್ಪತ್ರೆಗೆ ದಾಖಲಾಗಿದ್ದ ಅಶ್ವಿನಿ ಅವರು ಮೂರು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಅಂದಹಾಗೇ ವೃತ್ತಿಯಲ್ಲಿ ಶಾಂತಪ್ಪ ಹೊಸಮನಿ ಜೆಸಿಬಿ ಆಪರೇಟರ್ ಆಗಿದ್ದು, ಪತ್ನಿ ನೀಡಿದ ಬಂಪರ್ ಕೊಡುಗೆಗೆ ಸಂತಸ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಅವಧಿಗೆ ಮುನ್ನವೇ ಹೆರಿಗೆ- ಮೃತಪಟ್ಟ ತ್ರಿವಳಿ ಮಕ್ಕಳು

    ಅವಧಿಗೆ ಮುನ್ನವೇ ಹೆರಿಗೆ- ಮೃತಪಟ್ಟ ತ್ರಿವಳಿ ಮಕ್ಕಳು

    ದಾವಣಗೆರೆ: ಅವಧಿಗೂ ಮುನ್ನವೇ ತಾಯಿಯೊಬ್ಬರು ಮೂರು ಮಕ್ಕಳಿಗೆ ಜನ್ಮ ನೀಡಿದ್ದು, ಹೆರಿಗೆ ನಂತರ ಮೂರು ನವಜಾತ ಶಿಶುಗಳು ಮೃತಪಟ್ಟಿರುವ ಪ್ರಕರಣವೊಂದು ದಾವಣಗೆರೆಯಲ್ಲಿ ಬೆಳಕಿಗೆ ಬಂದಿದೆ.

    ಬಿಳಚೋಡು ಗ್ರಾಮದ ನಿವಾಸಿ ಕಾವೇರಿ(24) ಅವರಿಗೆ ಬುಧವಾರ ಬೆಳಗಿನ ಜಾವ 4.30ರ ಸುಮಾರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ದಾವಣಗೆರೆ ಜಿಲ್ಲಾಸ್ಪತ್ರೆಗೆ ಅಂಬುಲೆನ್ಸ್ ನಲ್ಲಿ ಸಾಗಿಸುವಾಗ ಹೆರಿಗೆ ನೋವು ಜಾಸ್ತಿಯಾಗಿದೆ.

    ಕಾವೇರಿ ಅಂಬುಲೆನ್ಸ್ ನಲ್ಲೇ ಎರಡು ಹೆಣ್ಣು ಮಗು ಹಾಗೂ ಒಂದು ಗಂಡು ಶಿಶುವಿಗೆ ಜನ್ಮ ನೀಡಿದ್ದಾರೆ. ಮೂರು ಶಿಶುಗಳು ಕೇವಲ 300 ರಿಂದ 350 ಗ್ರಾಂ ತೂಕವಿತ್ತು. ಹಾಗಾಗಿ ಮೂರು ಶಿಶುಗಳು ಮೃತಪಟ್ಟಿದೆ. ತಾಯಿ ಕಾವೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವರಮಹಾಲಕ್ಷ್ಮಿ ಹಬ್ಬದಂದೇ ಜನನ- 2ನೇ ಹೆರಿಗೆಯಲ್ಲಿ 3 ಮಕ್ಕಳಿಗೆ ಜನ್ಮ

    ವರಮಹಾಲಕ್ಷ್ಮಿ ಹಬ್ಬದಂದೇ ಜನನ- 2ನೇ ಹೆರಿಗೆಯಲ್ಲಿ 3 ಮಕ್ಕಳಿಗೆ ಜನ್ಮ

    ಮೈಸೂರು: ವರಮಹಾಲಕ್ಷ್ಮಿ ಹಬ್ಬದಂದೇ ತಾಯಿಯೊಬ್ಬರು ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲಿ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ.

    ವಿಜಯನಗರ ನಿವಾಸಿ ಪ್ರೇಮ್ ಕುಮಾರ್ ಅವರ ಪತ್ನಿ ಸವಿತಾಗೆ 3 ಮಕ್ಕಳ ಜನ್ಮವಾಗಿದೆ. ಸವಿತಾ ತಮ್ಮ 2ನೇ ಹೆರಿಗೆಯಲ್ಲಿ ಮೂರು ಮಕ್ಕಳಿಗೆ ಜನ್ಮ ನೀಡಿದ್ದಾರೆ. ವೈದ್ಯರು ಆಪರೇಷನ್ ಮೂಲಕ ಮೂರು ಮಕ್ಕಳನ್ನು ಯಶಸ್ವಿಯಾಗಿ ಡೆಲಿವರಿ ಮಾಡಿಸಿದ್ದಾರೆ.

    ಮೂರು ಮಕ್ಕಳಲ್ಲಿ ಎರಡು ಗಂಡು ಮಕ್ಕಳು, ಒಂದು ಹೆಣ್ಣು ಮಗುವಾಗಿದೆ. ಪತ್ನಿಗೆ ಮೂರು ಮಕ್ಕಳಾದ ಹಿನ್ನಲೆಯಲ್ಲಿ ಪತಿ ಪ್ರೇಮ್ ಕುಮಾರ್ ಸಂತಸ ವ್ಯಕ್ತಪಡಿಸಿದರು. ಸದ್ಯ ಆಸ್ಪತ್ರೆಯಲ್ಲಿ ತಾಯಿ ಹಾಗೂ ಮೂವರು ಮಕ್ಕಳೂ ಕ್ಷೇಮವಾಗಿದ್ದಾರೆ.

    ಈ ಹಿಂದೆ ಬಳ್ಳಾರಿಯಲ್ಲಿ ಮಹಿಳೆಯೊಬ್ಬರು 10 ವರ್ಷದ ನಂತರ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಸಿರಗುಪ್ಪ ಪಟ್ಟಣದ ಸದಾಶಿವನಗರದ ಆಸ್ಪತ್ರೆಯಲ್ಲಿ ಸೀಮಾಂದ್ರದ ಕೌತಾಳಂನ ಮಾರಮ್ಮ ಎರಡು ಹೆಣ್ಣು ಹಾಗೂ ಒಂದು ಗಂಡು ಮಗುವಿಗೆ ಜನ್ಮ ನೀಡಿದ್ದರು. ಮದುವೆಯಾಗಿ 10 ವರ್ಷದ ನಂತರ ಏಕಕಾಲಕ್ಕೆ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿರುವ ಕುಟುಂಬದವರಿಗೆ ತ್ರಿವಳಿ ಧಮಾಕಾ ಎನ್ನುವಂತಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 10 ವರ್ಷದ ನಂತರ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ

    10 ವರ್ಷದ ನಂತರ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ

    ಬಳ್ಳಾರಿ: ಅವಳಿ ಜವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಂದಿರನ್ನ ನೋಡಿರಬಹುದು, ಆದರೆ ಜಿಲ್ಲೆಯಲ್ಲಿ ಮಹಿಳೆಯೊಬ್ಬರು 10 ವರ್ಷದ ನಂತರ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ.

    ಸಿರಗುಪ್ಪ ಪಟ್ಟಣದ ಸದಾಶಿವನಗರದ ಆಸ್ಪತ್ರೆಯಲ್ಲಿ ಸೀಮಾಂದ್ರದ ಕೌತಾಳಂನ ಮಾರಮ್ಮ ಎರಡು ಹೆಣ್ಣು ಹಾಗೂ ಒಂದು ಗಂಡು ಮಗುವಿಗೆ ಜನ್ಮ ನೀಡಿದ್ದು ಮಕ್ಕಳು ಆರೋಗ್ಯವಾಗಿದ್ದಾರೆ.

    ಮದುವೆಯಾಗಿ ಹತ್ತು ವರ್ಷದ ನಂತರ ಏಕಕಾಲಕ್ಕೆ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿರುವ ಕುಟುಂಬದವರಿಗೆ ತ್ರಿವಳಿ ಧಮಾಕ ಎನ್ನುವಂತಾಗಿದೆ. ಮೂವರು ಮಕ್ಕಳು ಆರೋಗ್ಯವಾಗಿರುವ ಪರಿಣಾಮ ಕುಟುಂಬದ ಸದಸ್ಯರಲ್ಲಿ ಹರ್ಷ ಮೂಡಿದೆ.

     

  • ರಾಯಚೂರಿನಲ್ಲಿ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ಮಹಿಳೆ

    ರಾಯಚೂರಿನಲ್ಲಿ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ಮಹಿಳೆ

    ರಾಯಚೂರು: ಇಲ್ಲಿನ ಶಕ್ತಿನಗರದಲ್ಲಿ ಮಹಿಳೆಯೊಬ್ಬರು ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ.

    ಮೂಲತಃ ತೆಲಂಗಾಣ ಮೂಲದವರದ ಸುಜಾತ ಸೂಗಪ್ಪ ಎಂಬವರೆ ಮೂರು ಮಕ್ಕಳಿಗೆ ಜನ್ಮ ನೀಡಿರುವ ಮಹಿಳೆ. ತ್ರಿವಳಿ ಮಕ್ಕಳಲ್ಲಿ ಒಂದು ಗಂಡು ಹಾಗೂ ಎರಡು ಹೆಣ್ಣು ಮಕ್ಕಳಾಗಿದ್ದು, ತಾಯಿ ಹಾಗೂ ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

    ಹೆರಿಗೆ ನೋವಿನಿಂದ ಬಳ್ಳಾರಿಯ ಶಕ್ತಿ ನಗರದ ಕೆಪಿಸಿಎಲ್ ಆಸ್ಪತ್ರೆಗೆ ದಾಖಲಾಗಿದ್ದ ಸುಜಾತ ಅವರಿಗೆ ವೈದ್ಯರು ಶಸ್ತ್ರ ಚಿಕಿತ್ಸೆ ನಡೆಸಿ ಹೆರಿಗೆ ಮಾಡಿಸಿದ್ದಾರೆ.

    ಇದನ್ನು ಓದಿ : ಮದುವೆಯಾಗಿ 10 ವರ್ಷ ಮಕ್ಕಳಿಲ್ಲದೆ ಕೊರಗ್ತಿದ್ದ ದಂಪತಿಗೆ ತ್ರಿವಳಿ ಮಕ್ಕಳ ಸೌಭಾಗ್ಯ

     

  • ಮದುವೆಯಾಗಿ 10 ವರ್ಷ ಮಕ್ಕಳಿಲ್ಲದೆ ಕೊರಗ್ತಿದ್ದ ದಂಪತಿಗೆ ತ್ರಿವಳಿ ಮಕ್ಕಳ ಸೌಭಾಗ್ಯ

    ಮದುವೆಯಾಗಿ 10 ವರ್ಷ ಮಕ್ಕಳಿಲ್ಲದೆ ಕೊರಗ್ತಿದ್ದ ದಂಪತಿಗೆ ತ್ರಿವಳಿ ಮಕ್ಕಳ ಸೌಭಾಗ್ಯ

    ಮೈಸೂರು: ಮದುವೆಯಾಗಿ 10 ವರ್ಷ ಮಕ್ಕಳಿಲ್ಲದೆ ಕೊರಗುತ್ತಿದ್ದ ದಂಪತಿಗೆ ತ್ರಿವಳಿ ಮಕ್ಕಳು ಜನಿಸಿದ ಘಟನೆ ನಂಜನಗೂಡುನಲ್ಲಿ ನಡೆದಿದೆ.

    ನಂಜನಗೂಡು ತಾಲೂಕಿನ ಮಾದಾಪುರ ಗ್ರಾಮದ ಮಂಜುನಾಥ್ ಮತ್ತು ರೂಪಾ ದಂಪತಿಗೆ ಮೂರು ಮಕ್ಕಳು ಜನನವಾಗಿದೆ. ಒಂದು ಗಂಡು ಮತ್ತು ಎರಡು ಹೆಣ್ಣು ಮಕ್ಕಳಿಗೆ ರೂಪಾ ಜನ್ಮ ನೀಡಿದ್ದಾರೆ. ರೂಪಾ ನಂಜನಗೂಡಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು.

    ಹೆರಿಗೆಯ ನಂತರ ತಾಯಿ – ಮಕ್ಕಳು ಆರೋಗ್ಯವಾಗಿದ್ದಾರೆ. ರೂಪಾ ಹಾಗೂ ಮಂಜುನಾಥ್ ಹತ್ತು ವರ್ಷಗಳ ಹಿಂದೆ ವಿವಾಹವಾಗಿದ್ದರು. ಮಕ್ಕಳಿಲ್ಲದ ಕೊರಗಿನಲ್ಲಿದ್ದ ಈ ದಂಪತಿಗೆ ತ್ರಿವಳಿ ಮಕ್ಕಳ ಜನನದಿಂದ ಖುಷಿ ತಂದಿದೆ.