Tag: ತೌಕ್ತೆ

  • ಇಂದು ರಾತ್ರಿ ಗುಜರಾತ್ ತೀರಕ್ಕೆ ಅಪ್ಪಳಿಸಲಿದೆ ತೌಕ್ತೆ – 1.5 ಲಕ್ಷ ಮಂದಿ ಸ್ಥಳಾಂತರ

    ಇಂದು ರಾತ್ರಿ ಗುಜರಾತ್ ತೀರಕ್ಕೆ ಅಪ್ಪಳಿಸಲಿದೆ ತೌಕ್ತೆ – 1.5 ಲಕ್ಷ ಮಂದಿ ಸ್ಥಳಾಂತರ

    – ಮಹಾರಾಷ್ಟ್ರದ ಕೊಂಕಣ ವಲಯದಲ್ಲಿ 6 ಮಂದಿ ಬಲಿ
    – ಮುಂಬೈಯಲ್ಲಿ ಭಾರೀ ಮಳೆ

    ಮುಂಬೈ/ ಗಾಂಧಿನಗರ: ಕೊರೊನಾ ಮಧ್ಯೆ ತೌಕ್ತೆ ಚಂಡಮಾರುತದ ಅಬ್ಬರ ಜೋರಾಗಿದ್ದು, ಬಿರುಗಾಳಿ ಸಹಿತ ಜೋರು ಮಳೆಗೆ ಮುಂಬೈ ತತ್ತರಿಸಿಹೋಗಿದೆ. ಮುಂಬೈನಲ್ಲಿ ಗಂಟೆಗೆ 120 ಕಿಲೋಮೀಟರ್ ವೇಗದಲ್ಲಿ ಬಿರುಗಾಳಿ ಬೀಸ್ತಿದ್ದು, ಜನಜೀವನ ಸಂಪೂರ್ಣ ಸ್ತಂಬ್ಧಗೊಂಡಿತ್ತು.

    ರೈಲು ಸೇವೆ, ವಿಮಾನ ಸೇವೆಗಳು ಸಂಪೂರ್ಣ ಬಂದ್ ಆಗಿವೆ. ಸದ್ಯ ಮುಂಬೈನಿಂದ 120 ಕಿಲೋಮೀಟರ್ ದೂರದಲ್ಲಿ ವಾಯುವ್ಯ ದಿಕ್ಕಿನತ್ತ ಚಲಿಸುತ್ತಿರುವ  ತೌಕ್ತೆ ಚಂಡಮಾರುತ ಇಂದು ರಾತ್ರಿ 11 ಗಂಟೆ ಒಳಗೆ ಗುಜರಾತ್‍ನ ಪೋರಬಂದರ್ ಮತ್ತು ಮಹುವಾ ನಡುವೆ ತೀರಕ್ಕೆ ಅಪ್ಪಳಿಸುವ ಸಾಧ್ಯತೆಯಿದೆ. ಈ ಸಂದರ್ಭದಲ್ಲಿ ಗಾಳಿಯ ವೇಗ ಗಂಟೆಗೆ 150 ರಿಂದ 160 ಕಿಲೋಮೀಟರ್ ಇರಲಿದ್ದು, ಭಾರೀ ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

    ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿ ಒಟ್ಟು 6 ಜನ ಮೃತಪಟ್ಟಿದ್ದಾರೆ. ಇಂದು ಬೆಳಗ್ಗೆ 8:30ರಿಂದ ಮಧ್ಯಾಹ್ನ 1:30ರ ನಡುವೆ ಮುಂಬೈನಲ್ಲಿ ದಾಖಲೆಯ 157 ಮಿಲಿಮೀಟರ್ ಮಳೆ ಆಗಿದೆ. ಹಲವು ಕ್ವಾರಂಟೈನ್ ಕೇಂದ್ರಗಳು, ಆಸ್ಪತ್ರೆಗಳು ಜಲಮಯವಾಗಿವೆ. ತೌಕ್ತೆ ಕಾರಣ ಇಂದು ಮುಂಬೈನಲ್ಲಿ ವ್ಯಾಕ್ಸಿನೇಷನ್ ರದ್ದು ಮಾಡಲಾಗಿತ್ತು. ಇದರ ನಡುವೆ ಭೂಕಂಪನ ಭೀತಿ ಎದುರಾಗಿದೆ. ಮಹಾರಾಷ್ಟ್ರದ ಸೌರಾಷ್ಟ್ರದಲ್ಲಿ ಮುಂಜಾನೆ 4.5ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಹಾನಿ ಉಂಟಾಗಿಲ್ಲ.

    ಈಗಾಗಲೇ ಗುಜರಾತ್ ತೀರದಲ್ಲಿ ವಾಸವಾಗಿದ್ದ ಒಟ್ಟು 1.5 ಲಕ್ಷಕ್ಕೂ ಹೆಚ್ಚು ಮಂದಿಯನ್ನು ಸ್ಥಳಾಂತರ ಮಾಡಲಾಗಿದೆ. ಎನ್‌ಡಿಆರ್‌ಎಫ್ ಮತ್ತು  ಎಸ್‌ಡಿಆರ್‌ಎಫ್ ಸೇರಿ ಒಟ್ಟು 54 ತಂಡಗಳನ್ನು ನಿಯೋಜಿಸಲಾಗಿದೆ.

    ಕೇಂದ್ರ ಸರ್ಕಾರ ಸೇನೆ, ವಾಯು ಸೇನೆ, ನೌಕಾ ಪಡೆಗಳಿಗೆ ಸನ್ನದ್ಧವಾಗಿರುವಂತೆ ಸೂಚಿಸಿದೆ. ಈಗಾಗಲೇ ಭಾರತೀಯ ಸೇನೆಯ 180 ತುಕಡಿಗಳು ಗುಜರಾತ್ ತೀರಕ್ಕೆ ಲ್ಯಾಂಡ್ ಆಗಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾಣಿ ಅವರಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ದಾರೆ.

    ಮಧ್ಯಪ್ರದೇಶದಲ್ಲೂ ತೌಕ್ತೆಯಿಂದಾಗಿ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, 13 ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಜಾರಿ ಮಾಡಿದೆ.

    ಅರಬ್ಬೀ ಸಮುದ್ರದಲ್ಲಿ ಎದ್ದಿರುವ ಈ ಚಂಡಮಾರುತ ಭಾರೀ ಪ್ರಮಾಣದಲ್ಲಿ ಹಾನಿ ಮಾಡುವ ಸಾಧ್ಯತೆ ಇರುವ ಕಾರಣ ಗುಜರಾತ್ ಸರ್ಕಾರ ತೀರದಲ್ಲಿ ನೆಲೆಸಿರುವ ಜನರನ್ನು ಸ್ಥಳಾಂತರ ಮಾಡಿದೆ.

  • ತೌಕ್ತೆಗೆ ಕರ್ನಾಟಕದಲ್ಲಿ 6 ಬಲಿ – ಗೋವಾದಲ್ಲಿ ಬಿರುಗಾಳಿ ಸಹಿತ ಮಳೆ: ಎಲ್ಲೆಲ್ಲಿ ಏನಾಗಿದೆ?

    ತೌಕ್ತೆಗೆ ಕರ್ನಾಟಕದಲ್ಲಿ 6 ಬಲಿ – ಗೋವಾದಲ್ಲಿ ಬಿರುಗಾಳಿ ಸಹಿತ ಮಳೆ: ಎಲ್ಲೆಲ್ಲಿ ಏನಾಗಿದೆ?

    ಬೆಂಗಳೂರು/ಪಣಜಿ: ತೌಕ್ತೆ ಚಂಡಮಾರುತ ಗುಜರಾತ್‍ನತ್ತ ತೆರಳುತ್ತಿದೆ. ಆದರೆ ತೌಕ್ತೆಯಿಂದ ಸೃಷ್ಟಿಯಾದ ಮಳೆಗೆ ಕರ್ನಾಟಕದಲ್ಲಿ ಆರು ಮಂದಿ ಸಾವನ್ನಪ್ಪಿದ್ದಾರೆ.

    ಬೆಳಗಾವಿಯ ಇಟಗಿಯಲ್ಲಿ ಗೋಡೆ ಕುಸಿದು ಇಬ್ಬರು, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ ಮತ್ತು ಚಿಕ್ಕಮಗಳೂರಿನಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ. ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ 73 ಹಳ್ಳಿಗಳು ಚಂಡಮಾರುತದಿಂದ ತೊಂದರೆ ಅನುಭವಿಸಿವೆ. 112 ಮನೆಗಳಿಗೆ ಹಾನಿ ಉಂಟಾಗಿದೆ. 318 ಮಂದಿಯನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಲಾಗಿದೆ.

    ತೌಕ್ತೆ ಎಫೆಕ್ಟ್ ಉತ್ತರ ಕನ್ನಡದಲ್ಲಿ ಕೊಂಚ ಹೆಚ್ಚೆ ಎನ್ನುವಷ್ಟರ ಮಟ್ಟಿಗೆ ಇತ್ತು. ಕಾರವಾರ, ಕುಮಟಾ, ಹೊನ್ನಾವರ, ಭಟ್ಕಳ ಭಾಗದಲ್ಲಿ ಭಾರೀ ಮಳೆಯಾಗಿದ್ದು, ಪ್ರವಾಹ ಸ್ಥಿತಿ ಏರ್ಪಟ್ಟಿತ್ತು. ನೂರಾರು ಮನೆಗಳು ಜಲಾವೃತಗೊಂಡಿವೆ. ಕುಮಟಾದ ಶಶಿಹಿತ್ತಲು, ಗುಂದ ಗ್ರಾಮದ ನೂರಾರು ಜನರನ್ನು ಸ್ಥಳಾಂತರ ಮಾಡಲಾಗಿದೆ.

    ಮುರ್ಡೇಶ್ವರದ ಬೀಚ್ ಅಸ್ತವ್ಯಸ್ತವಾಗಿದೆ. ಜಿಲ್ಲೆಯ ಹಲವೆಡೆ ಗಾಳಿ ಆರ್ಭಟಕ್ಕೆ ವಿದ್ಯುತ್ ಕಂಬಗಳು, ಮರಗಳು ಧರೆಗುರುಳಿದೆ. ಮಜೋರ್ಡಾ ಬಳಿ ಚಲಿಸ್ತಿದ್ದ ನೇತ್ರಾವತಿ ಎಕ್ಸ್ ಪ್ರೆಸ್ ರೈಲಿನ ಮೇಲೆ ಮರ ಉರುಳಿದೆ. ಅದೃಷ್ಟವಶಾತ್ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಿಲ್ಲ.

    ಉಡುಪಿ ಜಿಲ್ಲೆಯಲ್ಲಿ ಸಮುದ್ರ ಬದಿಯ ಮನೆಗಳು ಮರಳಿನಿಂದ ಭಾಗಶಃ ಮುಳುಗಿದೆ. ನೂರಾರು ತೆಂಗಿನ ಮರ ಸಮುದ್ರದ ಪಾಲಾಗಿವೆ. ಜಿಲ್ಲೆಯಲ್ಲಿ 40ಕ್ಕೂ ಹೆಚ್ಚು ಮನೆ, ಶೆಡ್‍ಗಳಿಗೆ ಹಾನಿಯಾಗಿದೆ. ಮಂಗಳೂರು ಬಳಿಯ ಅರಬ್ಬಿ ಸಮುದ್ರದಲ್ಲಿ ಕೋರಮಂಡಲ್ ಸ್ಟಗ್ ಸಿಲುಕಿದ್ದು, ಅದರಲ್ಲಿರುವ 9 ಮಂದಿಯ ರಕ್ಷಣೆಗೆ ತೀವ್ರ ಪ್ರಯತ್ನ ನಡೆಸಲಾಗ್ತಿದೆ. ಹೆಲಿಕಾಪ್ಟರ್ ನೆರವನ್ನು ಪಡೆಯಲು ಜಿಲ್ಲಾಡಳಿತ ಮುಂದಾಗಿದೆ.

    ಕೊಡಗಿನಲ್ಲಿ ಎಡೆಬಿಡದೇ ಮಳೆ ಸುರಿಯುತ್ತಿದೆ. ಮಾಪಿಳ್ಳೆ ಬಳಿ ಸೇತುವೆ ಕೊಚ್ಚಿಹೋಗಿದೆ. ಸುಂಟಿಕೊಪ್ಪದಲ್ಲಿ ತಡೆ ಗೋಡೆಯೊಂದು ಕುಸಿದಿದೆ. ಕಾವೇರಿ ನದಿ ಹಾಗೂ ಹಳ್ಳ-ಕೊಳ್ಳಗಳಲ್ಲಿ ನೀರಿನಮಟ್ಟ ಸ್ವಲ್ಪ ಏರಿಕೆಯಾಗಿದೆ. ಚಿಕ್ಕಮಗಳೂರು, ಶಿವಮೊಗ್ಗದಲ್ಲಿ ಮಳೆಯಾಗಿದ್ದು ವಿದ್ಯುತ್ ಕಂಬಗಳು, ಮರಗಳು ಧರೆಗುರುಳಿದೆ. ಹಾವೇರಿ, ಬೆಳಗಾವಿ, ಧಾರವಾಡದಲ್ಲೂ ಮಳೆಯಾಗಿದೆ. ಬೆಂಗಳೂರಿನಲ್ಲೂ ಬೆಳಗ್ಗೆಯಿಂದ ಮೋಡ ಕವಿದ ವಾತಾವರಣ ಇತ್ತು.

    ಗೋವಾ ವರದಿ: ನಿನ್ನೆ ಕೇರಳವನ್ನು ತತ್ತರಿಸುವಂತೆ ಮಾಡಿದ್ದ ತೌಕ್ತೆ ಚಂಡಮಾರು ಇಂದು ಪುಟ್ಟ ರಾಜ್ಯ ಗೋವಾಗೆ ಕಂಟಕವಾಗಿದೆ. ಇವತ್ತು ಇಡೀ ಬಿರುಗಾಳಿ ಸಹಿತ ಜೋರು ಮಳೆ ಆಗಿದ್ದು, ನೂರಾರು ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿವೆ. ಪರಿಣಾಮ, ಹೆಚ್ಚುಕಡಿಮೆ ಗೋವಾದ ಬಹುತೇಕ ಕಡೆ ವಿದ್ಯುತ್ ಸರಬರಾಜಿನಲ್ಲಿ ತೀವ್ರ ವ್ಯತ್ಯಯವಾಗಿದೆ.

    ಪಣಜಿ ವಿಮಾನ ನಿಲ್ದಾಣವನ್ನು ಬಂದ್ ಮಾಡಲಾಗಿದೆ. ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ. ಕೇರಳದಲ್ಲಿ ತೌಕ್ತೆ ಚಂಡಮಾರುತದ ತೀವ್ರತೆ ಇವತ್ತು ಹೆಚ್ಚು ಕಂಡುಬರಲಿಲ್ಲ. ಮಹಾರಾಷ್ಟ್ರದಲ್ಲಿಯೂ ಬಿರುಗಾಳಿ ಸಹಿತ ಜೋರು ಮಳೆ ಆಗುತ್ತಿದೆ.. ಮುಂಜಾಗ್ರತಾ ಕ್ರಮವಾಗಿ ನಾಳೆ ಮುಂಬೈನಲ್ಲಿ ವ್ಯಾಕ್ಸಿನೇಷನ್ ರದ್ದು ಮಾಡಲಾಗಿದೆ.

    ನಾಳೆ ಮತ್ತು ನಾಡಿದ್ದು ಗುಜರಾತ್‍ನಲ್ಲಿ ಭಾರೀ ಮಳೆ ಆಗಲಿದ್ದು, ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಮೇ 21ರವರೆಗೂ ಗುಜರಾತ್‍ನಲ್ಲಿ 56 ರೈಲುಗಳನ್ನು ರದ್ದು ಮಾಡಲಾಗಿದೆ. ನಾಳೆ ಸಂಜೆ ಅಥವಾ ನಾಡಿದ್ದು ಬೆಳಗ್ಗೆ ತೌಕ್ತೆ ಚಂಡಮಾರುತ ಗುಜರಾತ್, ಡಿಯು ಡಾಮನ್, ದಾದ್ರಾ ನಗರ್ ಹವೇಲಿಯನ್ನು ಹಾದು ಹೋಗಲಿದೆ.

  • ಸಮುದ್ರಪಾಲಾಯ್ತು  ಮನೆ – ಏಳುತ್ತಿದೆ ರಕ್ಕಸ ಅಲೆಗಳು, ಸುರಿಯುತ್ತಿದೆ ಭಾರೀ ಮಳೆ

    ಸಮುದ್ರಪಾಲಾಯ್ತು ಮನೆ – ಏಳುತ್ತಿದೆ ರಕ್ಕಸ ಅಲೆಗಳು, ಸುರಿಯುತ್ತಿದೆ ಭಾರೀ ಮಳೆ

    – ಮೀನುಗಾರರನ್ನು ರಕ್ಷಿಸಿದ ಕೋಸ್ಟ್ ಗಾರ್ಡ್
    – ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ

    ಮಂಗಳೂರು: ಕರ್ನಾಟಕದ ಕರಾವಳಿ ಇಂದು ತೌಕ್ತೆ ಚಂಡಮಾರುತದ ಹೊಡೆತಕ್ಕೆ ನಲುಗಿ ಹೋಗಿದೆ. ಪರಿಣಾಮ ನಿನ್ನೆ ತಡರಾತ್ರಿಯಿಂದಲೇ ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲಾದ್ಯಂತ ಅಬ್ಬರದ ಮಳೆಯಾಗುತ್ತಿದೆ.

    ಶನಿವಾರ ಮಧ್ಯಾಹ್ನದ ವೇಳೆ ಮಂಗಳೂರಿನ ಪಣಂಬೂರು,ಸೋಮೇಶ್ವರ, ಉಳ್ಳಾಲ, ಕೋಟೆಪುರ, ಕೈಕೋ, ಉಚ್ಚಿಲ, ಸುರತ್ಕಲ್, ಸಸಿಹಿತ್ಲು, ಬೈಕಂಪಾಡಿ ಮುಂತಾದ ಕಡಲತೀರದಲ್ಲಿ ಅಲೆಗಳ ಅಬ್ಬರ ಭಾರೀ ಪ್ರಮಾಣದಲ್ಲಿತ್ತು.

    ಸಮುದ್ರಪಾಲಾದ ಸ್ಮಶಾನ:
    ಮಂಗಳೂರು ಹೊರವಲಯದ ಸೋಮೇಶ್ವರ ಕಡಲ ತೀರದಲ್ಲಿ ಕಡಲು ಪ್ರಕ್ಷುಬ್ಧಗೊಂಡು ಏಕಾಏಕಿ ದಡಕ್ಕೆ ಅಲೆಗಳು ಅಪ್ಪಳಿಸಿದ್ರಿಂದ, ರಕ್ಕಸ ಗಾತ್ರದ ಅಲೆಗಳು ಸ್ಮಶಾನವನ್ನು ಧರಾಶಾಹಿ ಮಾಡಿತ್ತು. ಅಲೆಗಳ ಅಬ್ಬರಕ್ಕೆ ಸಮುದ್ರ ಪಾಲಾದ ಹಿಂದೂ ರುದ್ರಭೂಮಿಯ ತಡೆಗೋಡೆ ನಿನ್ನೆ ಸಮುದ್ರದ ಅಲೆಗಳ ಅಬ್ಬರಕ್ಕೆ ಕುಸಿದಿತ್ತು. ಭಾರೀ ಗಾಳಿ ಮಳೆಗೆ ಹಲವು ಕಟ್ಟಡಗಳು ಧರಾಶಾಹಿಯಾಗಿವೆ. ಅರಬ್ಬೀ ಸಮುದ್ರ ತೀರದ ಹಲವು ಅಂಗಡಿಗಳು ಸಮುದ್ರಪಾಲಾಗಿವೆ. ಸೋಮೇಶ್ವರ, ಸಸಿಹಿತ್ಲು, ಬೈಕಂಪಾಡಿ, ಉಳ್ಳಾಲ ಭಾಗದಲ್ಲಿ ಭಾರೀ ಅಲೆ ಅಬ್ಬರಕ್ಕೆ ಜನರು ಬೆಚ್ಚಿ ಬಿದ್ದಿದ್ದಾರೆ.

    ಬೋಟ್ ರಕ್ಷಣೆ
    ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಮೂವರು ಮೀನುಗಾರರು ಸಮುದ್ರದ ಮದ್ಯೆ ಸಿಲುಕಿಕೊಂಡಿದ್ದರು. ಇವನ್ನು ಕೋಸ್ಟ್ ಗಾರ್ಡ್ ಪಡೆ ರಕ್ಷಿಸಿದೆ. ಬೋಟ್ ಎಂಜಿನ್ ಫೇಲ್ ಆಗಿ ಕೇರಳದ ಕಣ್ಣೂರು ಕಡಲ ತೀರದಿಂದ 10 ನಾಟಿಕಲ್ ಮೈಲ್ ದೂರದಲ್ಲಿ ಆಳ ಸಮುದ್ರ ದಲ್ಲಿ ಮೀನುಗಾರರು ಅಪಾಯದಲ್ಲಿದ್ದರು. ಚಂಡಮಾರುತದ ವಾನಿರ್ಂಗ್ ಇದ್ದರೂ ಮೀನುಗಾರಿಕೆಗೆ ತೆರಳಿದ್ದ ಕೇರಳದ ಮೀನುಗಾರರು ಅಪಾಯದಲ್ಲಿದ್ದರು. ಮೂವರು ಕೇರಳದ ಮೀನುಗಾರರನ್ನು ಮಂಗಳೂರಿನಿಂದ ಹೊರಟಿದ್ದ ಕೋಸ್ಟ್ ಗಾರ್ಡ್ ಶಿಪ್ ರಕ್ಷಿಸಿದೆ. ಮಂಗಳೂರಿನ ಐಸಿಜಿ ವಿಕ್ರಮ್ ಹೆಸರಿನ ಕೋಸ್ಟ್ ಗಾರ್ಡ್ ಹಡಗಿನ ಸಿಬ್ಬಂದಿ ಗಳು ತಡರಾತ್ರಿ ಆಳ ಸಮುದ್ರದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.

    ಸೋಮೇಶ್ವರ ಪುರಸಭೆ ಅಧಿಕಾರಿಗಳಿಂದ ಸಮುದ್ರ ಪಾತ್ರದ ಜನರಿಗೆ ಧ್ವನಿ ವರ್ಧಕದ ಮೂಲಕ ಎಚ್ಚರಿಕೆ ನೀಡಲಾಗಿದೆ. ದಡದಲ್ಲಿದ್ದ ಮೀನುಗಾರಿಕಾ ಬೋಟ್ ಗಳಿಗೂ ಹಾನಿಯಾಗಿದೆ. ದಡದಲ್ಲಿರುವ ಬೋಟ್ ಗಳನ್ನು ಸುರಕ್ಷಿತ ಸ್ಥಳಗಳಿಗೆ ಮೀನುಗಾರರು ರವಾನಿಸಿದ್ದಾರೆ. ಮಂಗಳೂರು ಹೊರವಲಯದ ಸೋಮೇಶ್ವರದ ಕಡಲಕಿನಾರೆಯಲ್ಲಿ ರಸ್ತೆ, ಮನೆಗಳತ್ತ ಸಮುದ್ರದ ನೀರು ನುಗ್ಗಿ ಅವಾಂತರವಾಗಿದೆ.

    ಮಂಗಳೂರಿಗೆ ಹೊಂದಿಕೊಂಡಂತೆ ಇರುವ ಕೇರಳದ ಕಾಸರಗೋಡಿನಲ್ಲೂ ಭಾರೀ ಅನಾಹುತ ಸಂಭವಿಸಿದೆ. ನೋಡನೋಡುತ್ತಿದ್ದಂತೆ  ಉಪ್ಪಳದ ಮಸೋಡಿ ತೀರಪ್ರದೇಶದಲ್ಲಿದ್ದ ಮೂಸ ಎಂಬುವವರಿಗೆ ಸೇರಿದ ಮನೆ ಧರಾಶಾಹಿಯಾಗಿದೆ. ಭಾನುವಾರ ಕೂಡ ಕರ್ನಾಟಕ ಕರಾವಳಿಯಲ್ಲಿ ರೆಡ್ ಅಲರ್ಟ್ ಘೋಷಣೆಯಾಗಿದ್ದು ಕಡಲ ತೀರದ ಜನರು ಎಚ್ಚರಿಕೆಯಿಂದ ಇರಬೇಕಿದೆ.

  • ತೌಕ್ತೆ ಚಂಡಮಾರುತ- ರಾಜ್ಯದ ಹಲವೆಡೆ ಭರ್ಜರಿ ಮಳೆ, ಸಮುದ್ರದಲ್ಲಿ ರಕ್ಕಸ ಅಲೆ, ಕಡಲ್ಕೊರೆತ

    ತೌಕ್ತೆ ಚಂಡಮಾರುತ- ರಾಜ್ಯದ ಹಲವೆಡೆ ಭರ್ಜರಿ ಮಳೆ, ಸಮುದ್ರದಲ್ಲಿ ರಕ್ಕಸ ಅಲೆ, ಕಡಲ್ಕೊರೆತ

    ಬೆಂಗಳೂರು: ಅರಬ್ಬಿ ಸಮುದ್ರದಲ್ಲಿ ತೌಕ್ತೆ ಚಂಡಮಾರುತ ಎದ್ದಿರುವ ಹಿನ್ನೆಲೆ ರಾಜ್ಯದ ಹಲವೆಡೆ ವರುಣ ಅಬ್ಬರಿಸಿ ಬೊಬ್ಬಿರಿಯುತ್ತಿದ್ದು, ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುತ್ತಿದೆ. ಅಲ್ಲದೆ ಸಮುದ್ರದಲ್ಲಿ ರಕ್ಕಸ ಅಲೆಗಳು ಏಳುತ್ತಿದ್ದು, ಕಡಲ್ಕೊರೆತ ಸಂಭವಿಸಿದೆ.

    ದಕ್ಷಿಣ ಕನ್ನ, ಕೊಡಗು, ಉಡುಪಿ, ಚಿಕ್ಕಮಗಳೂರು ಸೇರಿದಂತೆ ಹಲವು ರಾಜ್ಯಗಳಲ್ಲಿ ಮಳೆಯಾಗುತ್ತಿದೆ. ಸಂಜೆ ವೇಳೆ ಇನ್ನೂ ಹಲವು ಜಿಲ್ಲೆಗಳಿಗೆ ಮಳೆ ವ್ಯಾಪಿಸಿಕೊಳ್ಳಲಿದೆ. ಚಂಡಮಾರುತ ಎಫೆಕ್ಟ್ ನಿಂದಾಗಿ ದ.ಕ ಜಿಲ್ಲೆಯಾದ್ಯಾಂತ ಭಾರೀ ಮಳೆಯಾಗುತ್ತಿದೆ. ಮಂಗಳೂರು ನಗರ ಸೇರಿದಂತೆ ಜಿಲ್ಲೆಯ ಎಲ್ಲ ಭಾಗಗಳಲ್ಲೂ ಬೆಳಗ್ಗೆಯಿಂದ ಭಾರೀ ಮಳೆ ಸುರಿಯುತ್ತಿದೆ. ಅರಬ್ಬೀ ಸಮುದ್ರದಲ್ಲೂ ಅಲೆಗಳ ಅಬ್ಬರ ಹೆಚ್ಚಾಗಿದೆ. ಹವಾಮಾನ ಇಲಾಖೆ ಭಾರೀ ಗಾಳಿ, ಮಳೆ ಸುರಿಯುವ ಸೂಚನೆ ನೀಡಿದ್ದು, ಇಂದು ಮತ್ತು ನಾಳೆ ರೆಡ್ ಅಲರ್ಟ್ ಘೋಷಿಸಿದೆ.

    ಕೊಡಗು ಜಿಲ್ಲೆಯಲ್ಲಿ ಸಹ ಬೆಳಗ್ಗೆಯಿಂದ ಎಡಬಿಡದೆ ಮಳೆಯಾಗುತ್ತಿದೆ. ಬಿರುಗಾಳಿ ಸಹಿತ ಮಳೆಗೆ ಜನ ಆತಂಕಗೊಂಡಿದ್ದಾರೆ. ಮಡಿಕೇರಿ, ವಿರಾಜಪೇಟೆ ಸೇರಿದಂತೆ ವಿವಿಧೆಡೆ ವರುಣನ ಆರ್ಭಟ ಜೋರಾಗಿದೆ. ಮಡಿಕೇರಿ ರಸ್ತೆಗಳು ಜನರಿಲ್ಲದೆ ಬಿಕೋ ಎನ್ನುತ್ತಿವೆ. ಕೊಡಗು ಜಿಲ್ಲೆಯಲ್ಲಿ ಸಹ ಎರಡು ದಿನಗಳು ರೆಡ್ ಅಲರ್ಟ್ ಘೊಷಿಸಲಾಗಿದೆ. ಗುಡ್ಡಗಾಡು ಪ್ರದೇಶದ ಜನರಲ್ಲಿ ಆತಂಕ ಶುರುವಾಗಿದೆ. ಮಧ್ಯಾಹ್ನದ ಬಳಿಕ ಮಳೆ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.

    ಉಡುಪಿ ಹಾಗೂ ಚಿಕ್ಕಮಗಳೂರಿನಲ್ಲಿ ತುಂತುರು ಮಳೆಯಾಗುತ್ತಿದ್ದು, ಉಡುಪಿ ಜಿಲ್ಲೆಯಲ್ಲಿ ಗಾಳಿ ಸಹಿತ ತುಂತುರು ಮಳೆಯಾಗುತ್ತಿದೆ. ದಿನವಿಡೀ ಮಳೆ ಸುರಿಯುವ ಸಾಧ್ಯತೆ ಇದ್ದು, ಅತ್ತ ಅರಬ್ಬಿ ಸಮುದ್ರದಲ್ಲಿ ಅಲೆಗಳ ಆರ್ಭಟ ಜೋರಾಗಿದೆ. ಕಡಲಿಗೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ. ಮರವಂತೆ ಉಪ್ಪುಂದ ಪರಿಸರದಲ್ಲಿ ಕಡಲ್ಕೊರೆತ ಉಂಟಾಗಿದೆ. ಇನ್ನೂ ಮೂರು ದಿನ ಮಳೆಯಾಗಲಿದೆ ಎಂದು ರಾಜ್ಯದ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

    ಕಾಫಿನಾಡಿನಲ್ಲಿ ಹಲವೆಡೆ ತುಂತುರು ಮಳೆಯಾಗುತ್ತಿದ್ದು, ಚಿಕ್ಕಮಗಳೂರು ನಗರ, ಮೂಡಿಗೆರೆ, ಕೊಪ್ಪ, ಎನ್.ಆರ್.ಪುರ ಸೇರಿದಂತೆ ಹಲವೆಡೆ ಬೆಳ್ಳಂಬೆಳಗ್ಗೆ ಜಿಟಿಜಿಟಿ ಮಳೆ ಶುರುವಾಗಿದೆ. ಅಲ್ಲದೆ ಜಿಲ್ಲೆಯಲ್ಲಿ ಎರಡು ದಿನ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಮಲೆನಾಡು ಭಾಗದ ಜನರು ಎಚ್ಚರದಿಂದ ಇರುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.