Tag: ತೇಜು ಬೆಳವಾಡಿ

  • ರಿಷಬ್ ಶೆಟ್ಟಿ  ನಿರ್ಮಾಣದ ‘ಲಾಫಿಂಗ್ ಬುದ್ಧ’ ಶೂಟಿಂಗ್ ಮುಕ್ತಾಯ

    ರಿಷಬ್ ಶೆಟ್ಟಿ ನಿರ್ಮಾಣದ ‘ಲಾಫಿಂಗ್ ಬುದ್ಧ’ ಶೂಟಿಂಗ್ ಮುಕ್ತಾಯ

    ಖ್ಯಾತ ನಟ, ನಿರ್ದೇಶಕ ರಿಷಬ್ ಶೆಟ್ಟಿ (Rishabh Shetty) ತಮ್ಮ ರಿಷಬ್ ಶೆಟ್ಟಿ ಫಿಲಂಸ್ ಲಾಂಛನದಲ್ಲಿ ನಿರ್ಮಿಸುತ್ತಿರುವ ‘ಲಾಫಿಂಗ್ ಬುದ್ದ’ (Laughing Buddha) ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಒಂದು ಕಡೆ ರಿಷಬ್ ಶೆಟ್ಟಿ ತಮ್ಮ ನಿರ್ದೇಶನದ ಕಾಂತಾರ ಸಿನಿಮಾದ ಚಿತ್ರೀಕರಣಕ್ಕೆ ರೆಡಿ ಆಗುತ್ತಿದ್ದರೆ, ಮತ್ತೊಂದು ಕಡೆ ತಮ್ಮದೇ ನಿರ್ಮಾಣದ ಲಾಫಿಂಗ್ ಬುದ್ದ ಚಿತ್ರೀಕರಣ ಕಂಪ್ಲೀಟ್ ಮಾಡಿದ್ದಾರೆ.

    ಭದ್ರಾವತಿ, ಕಾರ್ಗಲ್ ಹಾಗೂ ಬೆಂಗಳೂರಿನಲ್ಲಿ ಚಿತ್ರೀಕರಣವಾಗಿದೆ. ಭದ್ರಾವತಿಯ ಚಂಡಿಕಾ ದುರ್ಗ ದೇವಸ್ಥಾನದಲ್ಲಿ ಚಿತ್ರೀಕರಣ ಆರಂಭವಾಗಿತ್ತು. ಇತ್ತೀಚೆಗೆ ಬೆಂಗಳೂರಿನಲ್ಲಿ ಚಿತ್ರೀಕರಣ ಮುಕ್ತಾಯವಾಗಿದೆ. ಪೋಸ್ಟ್ ಪ್ರೊಡಕ್ಷನ್ ವರ್ಕ್ ಆರಂಭವಾಗಿದೆ. ಇದನ್ನೂ ಓದಿ:ರಾಘವ್ ಲಾರೆನ್ಸ್-ಕಂಗನಾ ನಟನೆಯ ‘ಚಂದ್ರಮುಖಿ 2’ ಎಂಟ್ರಿಗೆ ಮುಹೂರ್ತ ಫಿಕ್ಸ್

    ಕಾಂತಾರ 2 RISHAB SHETTY

    ಕಾಮಿಡಿ ಹಾಗೂ ಡ್ರಾಮಾ ಜಾನರ್ ನ ಈ ಚಿತ್ರವನ್ನು ಎಂ.ಭರತ್ ರಾಜ್ ನಿರ್ದೇಶಿಸಿದ್ದಾರೆ (M. Bharat Raj) . ಪ್ರಮೋದ್ ಶೆಟ್ಟಿ ಹಾಗೂ ತೇಜು ಬೆಳವಾಡಿ (Teju Belawadi) ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ಎಂ.ಭರತ್ ರಾಜ್ ನಿರ್ದೇಶಿಸುತ್ತಿರುವ ಈ ಚಿತ್ರದ ಮುಖ್ಯಪಾತ್ರದಲ್ಲಿ ಪ್ರಮೋದ್ ಶೆಟ್ಟಿ ಹಾಗೂ ತೇಜು ಬೆಳವಾಡಿ ನಟಿಸುತ್ತಿದ್ದಾರೆ.

    ವಿಷ್ಣುವಿಜಯ್ ಸಂಗೀತ ನಿರ್ದೇಶನ, ಚಂದ್ರಶೇಖರ್ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನ ‘ಲಾಫಿಂಗ್ ಬುದ್ದ’ ಚಿತ್ರಕ್ಕಿದೆ. ಇದೊಂದು ಹೊಸ ಬಗೆಯ ಕಥೆಯನ್ನು ಹೊಂದಿರುವ ಸಿನಿಮಾವಾಗಿದ್ದು, ಇದೇ ಮೊದಲ ಬಾರಿಗೆ ಪ್ರಮೋದ್ (Pramod Shetty) ಈ ಸಿನಿಮಾದ ಮೂಲಕ ನಾಯಕರಾಗುತ್ತಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸ್ಟಾರ್ ಸಿನಿಮಾಗಳ ಅಬ್ಬರದಲ್ಲೂ ಗೆದ್ದ ‘ಗಂಟುಮೂಟೆ’!

    ಸ್ಟಾರ್ ಸಿನಿಮಾಗಳ ಅಬ್ಬರದಲ್ಲೂ ಗೆದ್ದ ‘ಗಂಟುಮೂಟೆ’!

    ಬೆಂಗಳೂರು: ಒಂದೊಳ್ಳೆ ಕಂಟೆಂಟು, ಹೊಸತನಗಳನ್ನು ಜೀವಾಳವಾಗಿಸಿಕೊಂಡ ಚಿತ್ರಗಳನ್ನು ಕನ್ನಡದ ಪ್ರೇಕ್ಷಕರು ಯಾವತ್ತಿಗೂ ಕೈ ಬಿಡುವುದಿಲ್ಲ. ಇದುವರೆಗೂ ಈ ವಿಚಾರ ಅಡಿಗಡಿಗೆ ಸಾಬೀತಾಗುತ್ತಲೇ ಬಂದಿದೆ. ಅದು ರೂಪಾ ರಾವ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಗಂಟುಮೂಟೆ ವಿಚಾರದಲ್ಲಿಯೂ ನಿಜವಾಗಿದೆ. ಅಷ್ಟಕ್ಕೂ ಭರಾಟೆಯಂಥಾ ಸಿನಿಮಾಗಳ ಅಬ್ಬರದ ನಡುವೆ ಈ ಚಿತ್ರ ತೆರೆಗಾಣುವ ಸನ್ನಾಹದಲ್ಲಿದ್ದಾಗಲೇ ಜನರಲ್ಲೊಂದು ಅಚ್ಚರಿ ಮನೆ ಮಾಡಿಕೊಂಡಿತ್ತು. ಆದರೆ ನೋಡುಗರೆಲ್ಲರಿಗೂ ಅಚ್ಚರಿಯಂಥಾ ತಾಜಾ ಕಥೆಯೊಂದಿಗೆ ಗಂಟುಮೂಟೆ ಚಿತ್ರ ಈ ರೇಸಿನಲ್ಲಿ ಜಯಿಸಿಕೊಂಡಿದೆ.

    ಇದು ನವ ನಿರ್ದೇಶಕಿ ರೂಪಾ ರಾವ್ ಅವರ ಚೊಚ್ಚಲ ಚಿತ್ರ. ಆದರೆ ಮೊದಲ ಹೆಜ್ಜೆಯಲ್ಲಿ ಎಂಥವರಾದರೂ ಹಿಂದೇಟು ಹಾಕುವಂಥಾ ಕಥೆಯನ್ನೇ ಅವರು ಈ ಮೂಲಕ ಹೇಳಿದ್ದಾರೆ. ತೊಂಬತ್ತರ ದಶಕದ ಹೈಸ್ಕೂಲು ಪ್ರೇಮ ಕಥಾನಕವನ್ನೊಳಗೊಂಡಿರೋ ಗಂಟುಮೂಟೆ ಪ್ರತಿಯೊಬ್ಬರನ್ನೂ ಖುಷಿಗೊಳಿಸಿದೆ. ಅನೇಕರು ತಮ್ಮದೇ ನೆನಪುಗಳ ನೆತ್ತಿ ಸವರಿಕೊಂಡು ಥ್ರಿಲ್ ಆಗಿದ್ದಾರೆ. ಮತ್ತೆ ಕೆಲವರು ಇಲ್ಲಿರೋ ಬಿಡುಬೀಸಾದ ನಿರೂಪಣೆ ಮತ್ತು ತಣ್ಣಗೆ ಪ್ರವಹಿಸುವ ಭಾವತೀವ್ರತೆಗೆ ಮನ ಸೋತಿದ್ದಾರೆ. ಎಲ್ಲರನ್ನೂ ಒಂದೊಂದು ರೀತಿಯಲ್ಲಿ ಆವರಿಸಿಕೊಂಡಿರುವ ಈ ಚಿತ್ರವೀಗ ಅದೇ ಬಲದಿಂದ ಗೆದ್ದಿದೆ.

    ಅಷ್ಟಕ್ಕೂ ಬಿಡುಗಡೆಗೂ ತುಂಬಾ ಮುಂಚೆಯೇ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಈ ಚಿತ್ರ ಹೆಸರು ಗಳಿಸಿತ್ತು. ಅಲ್ಲಿಯೂ ಮೆಚ್ಚುಗೆ ಗಳಿಸಿಕೊಂಡು ಪ್ರಶಸ್ತಿ ಪಡೆಯೋ ಮೂಲಕ ಕನ್ನಡದ ಘನತೆಯನ್ನು ಮಿರುಗಿಸಿತ್ತು. ಇಂಥಾ ಚಿತ್ರವೀಗ ಕನ್ನಡದಲ್ಲಿಯೂ ಗೆದ್ದಿದೆ. ದೊಡ್ಡ ಚಿತ್ರಗಳ ಭರಾಟೆಯಲ್ಲಿ ಹೊಸಬರ ಚಿತ್ರಗಳು ನೆಲೆ ಕಂಡುಕೊಳ್ಳೋದು ಎಂಥಾ ಸವಾಲಿನ ಸಂಗತಿ ಅನ್ನೋದು ಗೊತ್ತಿರುವಂಥಾದ್ದೇ. ಅದನ್ನು ರೂಪಾ ರಾವ್ ಸಾಧ್ಯವಾಗಿಸಿದ್ದಾರೆ. ತೇಜು ಬೆಳವಾಡಿ, ನಿಶ್ಚಿತ್ ಮುಂತಾದ ಹೊಸಬರನ್ನೇ ಚೆಂದಗೆ ನಟಿಸುವಂತೆ ಮಾಡಿ, ಅತ್ಯಂತ ಅಪರೂಪದ ಕಥೆ ಹೇಳುವ ಮೂಲಕ ರೂಪಾ ರಾವ್ ಕನ್ನಡ ಚಿತ್ರರಂಗದ ಭರವಸೆಯ ನಿರ್ದೇಶಕಿಯಾಗಿ ನೆಲೆ ಕಂಡುಕೊಂಡಿದ್ದಾರೆ.

    https://www.facebook.com/publictv/videos/742395332886864/?v=742395332886864

  • ‘ಗಂಟುಮೂಟೆ’ಯೊಳಗಿನ ಮ್ಯಾಜಿಕ್‍ಗೆ ಮರುಳಾದ ಪ್ರೇಕ್ಷಕರು!

    ‘ಗಂಟುಮೂಟೆ’ಯೊಳಗಿನ ಮ್ಯಾಜಿಕ್‍ಗೆ ಮರುಳಾದ ಪ್ರೇಕ್ಷಕರು!

    ಬೆಂಗಳೂರು: ರೂಪಾ ರಾವ್ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಗಂಟುಮೂಟೆ ಚಿತ್ರದ ಟ್ರೇಲರ್ ನೋಡಿದವರೆಲ್ಲ ಈ ಸಿನಿಮಾದಲ್ಲೇನೋ ಇದೆ ಎಂಬಂಥಾ ಗಾಢವಾದ ನಂಬಿಕೆ ಹೊಂದಿದ್ದರು. ಈ ಚಿತ್ರ ಅಂಥಾ ನಂಬಿಕೆಗಳನ್ನೆಲ್ಲ ನಿಜವಾಗಿಸೋ ಸ್ವರೂಪದೊಂದಿಗೇ ತೆರೆ ಕಂಡಿದೆ. ತೊಂಭತ್ತರ ದಶಕದ ಹೈಸ್ಕೂಲು ಪ್ರೇಮವೊಂದರ ಘಮ ಹೊತ್ತು ತಂದಿರುವ ಈ ಚಿತ್ರ ಬಹುತೇಕರ ನೆನಪುಗಳನ್ನು ಕೆಣಕಿದೆ. ತನ್ನ ಸೂಕ್ಷ್ಮ ಕಥಾ ಹಂದರದಿಂದ ಹಲವರ ಭಾವಕೋಶಗಳನ್ನು ನವಿರಾಗಿಯೇ ತಾಕಿದೆ. ಇದು ಯಶಸ್ವಿ ಚಿತ್ರವೊಂದರ ಲಕ್ಷಣ. ಅದಿಲ್ಲದೇ ಹೋಗಿದ್ದರೆ ದೊಡ್ಡ ಸಿನಿಮಾಗಳ ನಡುವೆ ಕಾಲೂರಿ ನಿಂತು ಯಶಸ್ವಿ ಪ್ರದರ್ಶನ ಕಾಣುವ ಕಸುವು ಈ ಚಿತ್ರಕ್ಕೆ ಬರುತ್ತಿರಲಿಲ್ಲವೇನೋ…?

    ಈ ಸ್ಪರ್ಧೆಯ ತೀವ್ರತೆಯ ನಡುವೆ ಸರಿಕಟ್ಟಾದೊಂದು ಕಂಟೆಂಟಿಲ್ಲದೇ ಹೋದರೆ ಹೊಸಬರ ತಂಡವೊಂದು ಅಖಾಡಕ್ಕಿಳಿದು ಸೆಣೆಸುವುದು ಸಾಧ್ಯವಾಗದ ಮಾತು. ಆದರೆ ರೂಪಾ ರಾವ್ ತಮ್ಮ ಮೊದಲ ಹೆಜ್ಜೆಯಲ್ಲಿಯೇ ಹೊಸಬರನ್ನು ಜೊತೆಗಿಟ್ಟುಕೊಂಡೂ ಗೆದ್ದಿದ್ದಾರೆ. ಸ್ಟಾರ್ ಸಿನಿಮಾಗಳಿದ್ದರೂ ಕೂಡಾ ಪ್ರೇಕ್ಷಕರೆಲ್ಲ ಗಂಟುಮೂಟೆಯನ್ನು ನೋಡುತ್ತಾ ಮುದಗೊಳ್ಳುತ್ತಿದ್ದಾರೆ. ಎಲ್ಲ ಚೌಕಟ್ಟುಗಳನ್ನು ಮೀರಿದ ಈ ಚೇತೋಹಾರಿ ಚಿತ್ರವೀಗ ಬಾಯಿಂದ ಬಾಯಿಗೆ ಹರಡಿಕೊಂಡಿರೋ ಒಳ್ಳೆ ಮಾತುಗಳ ಮೂಲಕವೇ ಯಶಸ್ವೀ ಪ್ರದರ್ಶನ ಕಾಣುತ್ತಿದೆ.

    ಇದು ಅದಾಗ ತಾನೇ ಹದಿಹರೆಯದ ಹೊಸ್ತಿಲ ಬಳಿ ಹೆಜ್ಜೆಯಿಡುತ್ತಿರೋ ಹೈಸ್ಕೂಲು ಜೀವನದ ಕಥೆಯಾಧಾರಿತ ಚಿತ್ರ. ಅದು ಮೊದಲ ಪ್ರೇಮದ ಪುಳಕಗಳು ಎಳೇ ಮನಸೊಳಗೆ ಹುರಿಗೊಳ್ಳುವ ಕಾಲ. ಇಂಥಾ ಹೊತ್ತಿನಲ್ಲಿಯೇ ಬೆಂಗಳೂರಿನ ಒಳ್ಳೆಯ ಕುಟುಂಬದ ಕುಡಿಯಂತಿರೋ ನಾಯಕಿ ಮೀರಾ ಕೂಡಾ ಅಂಥಾದ್ದೇ ಭಾವಗಳಿಗೆ ಪಕ್ಕಾಗುತ್ತಾಳೆ. ಆಕೆಯ ಮನೋಭೂಮಿಕೆಯ ಇಶಾರೆಯ ಮೇರೆಗೆ ಇಡೀ ಕಥೆ ಕದಲುತ್ತದೆ. ಇಂಥಾ ಕಥೆಗಳು ಹೆಣ್ಣಿನ ಮೂಲಕ ನಿರೂಪಣೆಗೊಳ್ಳೋದೇ ಹೊಸ ವಿಚಾರ. ಅದನ್ನು ಮತ್ತಷ್ಟು ಹೊಸತನಗಳೊಂದಿಗೆ ರೂಪಾ ರಾವ್ ಕಟ್ಟಿ ಕೊಟ್ಟಿದ್ದಾರೆ. ಗಂಟು ಮೂಟೆ ಚಿತ್ರಕ್ಕೆ ರಾಜ್ಯಾದ್ಯಂತ ವ್ಯಾಪಕ ಬೆಂಬಲವೇ ತೋರಿ ಬರುತ್ತಿದೆ. ದಿನದಿಂದ ದಿನಕ್ಕೆ ಕಲೆಕ್ಷನ್ ವಿಚಾರದಲ್ಲಿಯೂ ಏರುಗತಿ ಕಾಣುತ್ತಿದೆ. ಈ ಎಲ್ಲ ಅಂಶಗಳೊಂದಿಗೆ ರೂಪಾ ರಾವ್ ನಿರ್ದೇಶನದ ಗಂಟುಮೂಟೆ ಗೆದ್ದಿದೆ.

  • ಗಂಟುಮೂಟೆ: ಹರೆಯದ ಹೊಸ್ತಿಲ ಮೋಹಕ ಲೋಕದ ಚಿತ್ತಾರ!

    ಗಂಟುಮೂಟೆ: ಹರೆಯದ ಹೊಸ್ತಿಲ ಮೋಹಕ ಲೋಕದ ಚಿತ್ತಾರ!

    ಬೆಂಗಳೂರು: ನಿರ್ದೇಶಕಿ ರೂಪಾ ರಾವ್ ಖಂಡಿತಾ ಒಂದು ಮ್ಯಾಜಿಕ್ ಮಾಡುತ್ತಾರೆ. ಹೀಗಂತ ಗಂಟುಮೂಟೆ ಚಿತ್ರದ ಟ್ರೈಲರ್ ನೋಡಿದ ಪ್ರತಿಯೊಬ್ಬರೂ ಅಂದುಕೊಂಡಿದ್ದರು. ಹದಿಹರೆಯದ ಹತ್ತತ್ತಿರ ಸಾಗುತ್ತಿರೋ ಮನಸುಗಳ ಕಥೆಯ ಸುಳಿವಿನೊಂದಿಗೆ ಈ ಚಿತ್ರದ ಟ್ರೈಲರ್ ಅಷ್ಟೊಂದು ಪರಿಣಾಮಕಾರಿಯಾಗಿ ಮೂಡಿ ಬಂದಿತ್ತು. ಇದೀಗ ಗಂಟುಮೂಟೆ ಪ್ರೇಕ್ಷಕರೆದುರು ತೆರೆದುಕೊಂಡಿದೆ. ಅದರೊಳಗೆ ಕಾಣಿಸಿದ ಹರೆಯದ ಹೊಸ್ತಿಲ ಮೋಹಕ ಲೋಕದ ಚಿತ್ತಾರ ಕಂಡು ಪ್ರತೀ ಪ್ರೇಕ್ಷಕರು ಮುದಗೊಂಡಿದ್ದಾರೆ.

    ಈಗಾಗಲೇ ಸಿನಿಮಾ ರಂಗದಲ್ಲಿ ಹಲವಾರು ವರ್ಷಗಳ ಅನುಭವ ಹೊಂದಿರುವ ರೂಪಾ ರಾವ್ ಅದನ್ನೆಲ್ಲ ಒಟ್ಟುಗೂಡಿಸಿಕೊಂಡು ಕನ್ನಡ ಪ್ರೇಕ್ಷಕರಿಗೆ ಹೊಸ ಬಗೆಯ ಲೋಕವನ್ನೇ ಈ ಮೂಲಕ ತೆರೆದಿಟ್ಟಿದ್ದಾರೆ. ಯಾವುದೇ ಕಥೆಗಳಾದರೂ ಹುಡುಗನ ಕಣ್ಣೋಟದಿಂದಲೇ ಬಿಚ್ಚಿಕೊಳ್ಳುತ್ತದೆ. ಆತನ ಮನೋಭೂಮಿಕೆಯ ಇಷಾರೆಯ ಮೇರೆಗೇ ಕಥೆ ಕದಲುತ್ತದೆ. ಆದರೆ ಈ ಚಿತ್ರದಲ್ಲಿ ಕಥೆ ಬಿಚ್ಚಿಕೊಳ್ಳೋದೇ ನಾಯಕಿ ಮೀರಾಳ ದೃಷ್ಟಿಯಲ್ಲಿ. ಇದರಾಚೆಗೆ ಚದುರಿಕೊಳ್ಳುವ ಕಥೆ ಹಲವು ದಿಕ್ಕುಗಳಲ್ಲಿ ವಿಸ್ತಾರಗೊಳ್ಳುತ್ತಾ ತಾಜಾ ಅನುಭವವನ್ನು ಪ್ರೇಕ್ಷಕರ ಎದೆ ತುಂಬುವಷ್ಟು ಇಲ್ಲಿನ ದೃಶ್ಯಗಳು ಶಕ್ತವಾಗಿವೆ.

    ಮೀರಾ ಎಂಬುದು ಈ ಚಿತ್ರದ ಕೇಂದ್ರ ಬಿಂದುವಿನಂಥಾ ಪಾತ್ರ. ಇದು ಬೆಂಗಳೂರಿನ ಮಧ್ಯಮ ವರ್ಗದ ಭೂಮಿಕೆಯಲ್ಲಿ ಜರುಗೋ ಕಥೆ. ಕಥಾ ನಾಯಕಿ ಮೀರಾ ಹೈಸ್ಕೂಲ್ ಹುಡುಗಿ. ಮೃದು ಮಧುರ ಸ್ವಭಾವದ ಮೀರಾಗೆ ಸಿನಿಮಾ ಗುಂಗು. ಆಕೆ ಹಿಂದಿ ಸಿನಿಮಾವೊಂದನ್ನು ನೋಡಿ ಸಲ್ಮಾನ್ ಖಾನ್ ಅಭಿಮಾನಿಯಾಗಿ ಬಿಟ್ಟಿರುತ್ತಾಳೆ. ಅದು ಎಷ್ಟರ ಮಟ್ಟಿಗೆಂದರೆ ತನ್ನ ಬದುಕಿನ ಪಲ್ಲಟಗಳನ್ನೂ ಕೂಡಾ ಆ ಚಿತ್ರದ ದೃಶ್ಯಗಳೇ ಎಂಬಷ್ಟು ತೀವ್ರವಾಗಿ ಫೀಲ್ ಮಾಡಿಕೊಳ್ಳುವಷ್ಟು. ಅಂಥಾ ಹುಡುಗಿಯಲ್ಲಿ ಹೈಸ್ಕೂಲು ತಲುಪುತ್ತಲೇ ಪ್ರೇಮದ ಭಾವಗಳು ಚಿಗುರಿಕೊಳ್ಳುತ್ತವೆ. ಅದರಲ್ಲಿಯೂ ಕೂಡಾ ಸಲ್ಮಾನ್ ಖಾನ್ ಚಿತ್ರದ ಚಹರೆಗಳಿರುತ್ತವೆ.

    ತನ್ನನ್ನು ಪ್ರೇಮಿಸೋ ಹುಡುಗ ಕೂಡಾ ಸಲ್ಮಾನ್ ಖಾನನಂತಿರಬೇಕೆಂಬುದು ಆಕೆಯ ಬಯಕೆ. ಈ ದೆಸೆಯಲ್ಲಿ ಮೀರಾ ಹುಡುಕಾಡಿ ಕಡೆಗೂ ತನ್ನದೇ ಕ್ಲಾಸ್ ರೂಮಿನ ಮಧು ಎಂಬ ಹುಡುಗನಲ್ಲಿ ಸಲ್ಮಾನ್ ಚಹರೆಗಳನ್ನು ಕಂಡುಕೊಳ್ಳುತ್ತಾಳೆ. ಆ ನಂತರ ಪ್ರೇಮ ಮೂಡಿಕೊಂಡು ಕಥೆಯ ಓಘ ತೀವ್ರವಾಗುತ್ತದೆ. ಆ ಮೇಲೇನಾಗುತ್ತದೆ ಅನ್ನೋದಕ್ಕೆ ರೂಪಾ ರಾವ್ ಅತ್ಯಂತ ಚುರುಕಾದ ಅಪರೂಪದ ಉತ್ತರವನ್ನೇ ಸೃಷ್ಟಿಸಿದ್ದಾರೆ. ಇಲ್ಲಿ ಭಾವ ತೀವ್ರತೆ ಇದೆ. ಹರೆಯದ ಕೀಟಲೆ, ಭೋಳೇತನ, ರೋಮಾಂಚಕ ಅಂಶಗಳು ಸೇರಿದಂತೆ ಎಲ್ಲವೂ ಇವೆ.

    ಮೀರಾ ಪಾತ್ರಧಾರಿ ತೇಜು ಬೆಳವಾಡಿ ಪಾಲಿಗಿದು ಮೊದಲ ಅನುಭವ. ಆದರೆ ಆಕೆ ಪಳಗಿದ ನಟಿಯಂತೆ ಈ ಪಾತ್ರಕ್ಕೆ ಜೀವ ತುಂಬಿದ್ದಾರೆ. ಇವರಿಗೆ ಜೋಡಿಯಾಗಿ ಮಧು ಎಂಬ ಪಾತ್ರದಲ್ಲಿ ನಟಿಸಿರೋ ನಿಶ್ಚಿತ್ ಕೊರೋಡಿ ಕೂಡಾ ಚೆಂದಗೆ ನಟಿಸಿದ್ದಾರೆ. ರೂಪಾರಾವ್ ಈ ಮೂಲಕವೇ ತಾನು ಭಿನ್ನ ನೋಟದ ನಿರ್ದೇಶಕಿ ಎಂಬುದನ್ನು ಸಾಬೀತು ಪಡಿಸುತ್ತಲೇ ನಿರ್ದೇಶಕಿಯಾಗಿ ನೆಲೆಗೊಳ್ಳುವ ಭರವಸೆ ಮೂಡಿಸಿದ್ದಾರೆ. ಅಷ್ಟು ತೀವ್ರತೆಯಿಂದ ಅವರಿಲ್ಲಿ ತೊಂಭತ್ತರ ದಶಕದ ಪ್ರೇಮಕಾವ್ಯವನ್ನು ಕಟ್ಟಿ ಕೊಟ್ಟಿದ್ದಾರೆ. ಒಂದೊಳ್ಳೆ ಚಿತ್ರ ನೋಡಿದ ಅನುಭವಕ್ಕಾಗಿ ಖಂಡಿತಾ ಗಂಟುಮೂಟೆಯನ್ನೊಮ್ಮೆ ಎಲ್ಲರೂ ನೋಡಬಹುದು.

    ರೇಟಿಂಗ್-4/5