Tag: ತೇಜಸ್ವಿ ಸೂರ್ಯ

  • ಅನಂತ್​ಕುಮಾರ್​ ಗೆ ಅನ್ಯಾಯ – ಟಿಕೆಟ್ ಸಿಗದ್ದಕ್ಕೆ ತೇಜಸ್ವಿನಿ ಅಭಿಮಾನಿಗಳು ಆಕ್ರೋಶ

    ಅನಂತ್​ಕುಮಾರ್​ ಗೆ ಅನ್ಯಾಯ – ಟಿಕೆಟ್ ಸಿಗದ್ದಕ್ಕೆ ತೇಜಸ್ವಿನಿ ಅಭಿಮಾನಿಗಳು ಆಕ್ರೋಶ

    ಬೆಂಗಳೂರು: ಲೋಕಸಭೆ ಚುನಾವಣೆಗೆ ಬೆಂಗಳೂರು ದಕ್ಷಿಣದಿಂದ ದಿವಂಗತ ಅನಂತ್​ಕುಮಾರ್ ಅವರ ಪತ್ನಿ ತೇಜಸ್ವಿನಿಗೆ ಬಿಜೆಪಿಯಿಂದ ಟಿಕೆಟ್ ನೀಡುವುದಾಗಿ ಹೇಳಿ, ಕೊನೆಗೆ ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ತೇಜಸ್ವಿ ಸೂರ್ಯ ಅವರಿಗೆ ಟಿಕೆಟ್ ನೀಡಿರುವುದಕ್ಕೆ, ತೇಜಸ್ವಿನಿ ಅವರ ಅಭಿಮಾನಿಗಳು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ತೇಜಸ್ವಿನಿ ಅವರ ನಿವಾಸ ಮುಂದೆ ಮಾಧ್ಯಮಗಳ ಜೊತೆ ಮಾತನಾಡಿದ ಅಭಿಮಾನಿಗಳು, ಅನಂತ್​ಕುಮಾರ್ ಅವರು ಕೇಂದ್ರದಲ್ಲಿ ಉತ್ತಮ ಆಡಳಿತ ಮಾಡಿ ರಾಜ್ಯಕ್ಕೆ ಹಾಗೂ ದೇಶಕ್ಕೆ ಹೆಸರನ್ನು ತಂದುಕೊಟ್ಟಿದ್ದಾರೆ. ಆದರೆ ಬಿಜೆಪಿ ಹೈಕಮಾಂಡ್ ಲೋಕಸಭೆ ಚುನಾವಣೆಗೆ ಅವರ ಪತ್ನಿ ತೇಜಸ್ವಿನಿ ಅವರಿಗೆ ಟಿಕೆಟ್ ನೀಡುವುದಾಗಿ ತಿಳಿಸಿ, ಕೊನೆ ಕ್ಷಣದಲ್ಲಿ ಮತ್ತೊಬ್ಬರನ್ನು ಅಭ್ಯರ್ಥಿಯಾಗಿ ಮಾಡಿರುವುದು ತಪ್ಪು. ಇದು ಅನ್ಯಾಯ. ಪಕ್ಷಕ್ಕೊಸ್ಕರ ದುಡಿದ ಪ್ರಭಾವಿ ನಾಯಕನ ಪತ್ನಿಗೆ ಟಿಕೆಟ್ ನೀಡದಿರುವುದು ಮೋಸ ಎಂದು ಕಿಡಿಕಾರಿದರು. ಇದನ್ನು ಓದಿ:ಮೂರು ದಿನದ ಹಿಂದೆ ತೇಜಸ್ವಿ ಸೂರ್ಯಗೆ ಮನವಿ ಮಾಡಿದ್ದ ತೇಜಸ್ವಿನಿ!

    ರಾಜ್ಯಕ್ಕೆ ಒಳ್ಳೆದನ್ನ ಮಾಡಿದ್ದು ನೀವೊಬ್ಬರೆ ಎಂದು ಅನಂತ್​ಕುಮಾರ್ ಅವರಿಗೆ ಹಾಡಿ ಹೊಗಳಿ ಈಗ ಅವರ ಮನೆಯವರಿಗೆ ಮೋಸ ಮಾಡುತ್ತಿರುವುದು ಕಾಣದ ಕೈಗಳ ಕೈವಾಡ. ತೇಜಸ್ವಿನಿ ಅವರು ಯಾವಾಗಲು ದೇಶ ಮೊದಲು, ಪಕ್ಷ ಹಾಗೂ ವ್ಯಕ್ತಿ ಅದರನಂತರ ಎಂದು ಹೇಳುತ್ತಾರೆ. ಅದಮ್ಯ ಚೇತನ ಎಂಬ ಸಾಮಾಜಿಕ ಸಂಸ್ಥೆ ಮೂಲಕ ಕಳೆದ ನಾಲ್ಕು ವರ್ಷಗಳಿಂದ ಒಳ್ಳೆಯ ಕೆಲಸ ಮಾಡಿಕೊಂಡು ಬಂದಿದ್ದಾರೆ. ಆದರೆ ಯಾವತ್ತು ಅವರು ಇದನ್ನೆಲ್ಲ ತೋರಿಸಿಕೊಂಡಿಲ್ಲ. ಅದಮ್ಯ ಚೇತನ ಸಂಸ್ಥೆ ಜೊತೆ ಹೊರಗೆಲ್ಲೂ ಕಾಣಿಸಿಕೊಂಡಿಲ್ಲ. ಇನ್ನು ಮುಂದಾದರು ಅವರು ನಮ್ಮೊಂದಿಗೆ ಕಾಣಿಸಿಕೊಳ್ಳಬೇಕು. ಆಗ ಅವರ ಕೆಲಸಗಳು ಜನರಿಗೆ ತಿಳಿಯುತ್ತದೆ ಎಂದು ಮನವಿ ಮಾಡಿದರು. ಇದನ್ನು ಓದಿ:ಬೆಂಗಳೂರು ದಕ್ಷಿಣದಲ್ಲಿ ತೇಜಸ್ವಿ ಸೂರ್ಯಗೆ ಬಿಜೆಪಿ ಟಿಕೆಟ್

    ಬಳಿಕ ಕಳೆದ 30 ವರ್ಷಗಳಿಂದ ತೇಜಸ್ವಿನಿ ಅವರು ಅನಂತ್​ಕುಮಾರ್ ಅವರ ಜೊತೆಗೂಡಿ ಜನಪರ ಕೆಲಸ ಮಾಡಿದ್ದಾರೆ. ಆದರೆ ಅದ್ಯಾವುದು ಬೆಳಕಿಗೆ ಬಂದಿಲ್ಲ. ತೆರೆಮರೆಯಲ್ಲಿದ್ದುಕೊಂಡೆ ತೇಜಸ್ವಿನಿ ಅವರು ಸಾಕಷ್ಟು ಸಾಮಾಜಿಕ ಕೆಲಸಗಳನ್ನು ಮಾಡಿದ್ದಾರೆ. ಅದ್ಯಾವುದಕ್ಕೂ ಇಗ ಬೆಲೆ ಇಲ್ಲದಂತಾಗಿದೆ. ಬಿಜೆಪಿ ತೇಜಸ್ವಿನಿ ಅವರಿಗೆ ಟಿಕೆಟ್ ನೀಡಿ ಇನ್ನಷ್ಟು ಜನಪರ ಕೆಲಸಗಳನ್ನು ಮಾಡಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.

  • ಅನಂತ್‌ಕುಮಾರ್‌ ತನ್ನನ್ನು ಬೆಳೆಸಿದ ಕಥೆಯನ್ನು ಬಿಚ್ಚಿಟ್ಟ ತೇಜಸ್ವಿ ಸೂರ್ಯ!

    ಅನಂತ್‌ಕುಮಾರ್‌ ತನ್ನನ್ನು ಬೆಳೆಸಿದ ಕಥೆಯನ್ನು ಬಿಚ್ಚಿಟ್ಟ ತೇಜಸ್ವಿ ಸೂರ್ಯ!

    ಬೆಂಗಳೂರು: ದಿವಂಗತ ಅನಂತ್ ಕುಮಾರ್ ಅವರು ಬೆಳೆಸಿದ ಹುಡುಗ ನಾನು. ತೇಜಸ್ವಿನಿ ಅನಂತ್ ಕುಮಾರ್ ಅವರು ನನ್ನನ್ನು ಬೆಂಬಲಿಸುತ್ತಾರೆ. ಅಲ್ಲದೆ ಪ್ರೋತ್ಸಾಹ ಕೂಡ ನೀಡಲಿದ್ದಾರೆ ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಹೇಳಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು ಅನಂತ್ ಕುಮಾರ್ ಜೊತೆಗಿನ ಸಂಬಂಧದ ಬಗ್ಗೆ ಮೆಲುಕು ಹಾಕಿಕೊಂಡರು. ತೇಜಸ್ವಿನಿ ಅನಂತ್ ಕುಮಾರ್ ಅವರು ಆಶೀರ್ವಾದ ಹಾಗೂ ಸಂಪೂರ್ಣ ಬೆಂಬಲ ನೀಡುವವರಿದ್ದಾರೆ. ಅನಂತ್ ಕುಮಾರ್ ಅವರು ಹೈಸ್ಕೂಲ್ ದಿವಸದಿಂದ ನನ್ನನ್ನು ಬೆಳೆಸಿದವರು. ಅಂತಹ ಮೇರು ನಾಯಕರು ಇದ್ದಂತಹ ಕ್ಷೇತ್ರದಲ್ಲಿ ನನಗೆ ಅವಕಾಶ ಸಿಕ್ಕಿರುವುದು ನನ್ನ ಪುಣ್ಯ. ಹೀಗಾಗಿ ಎಲ್ಲರು ಸಹಕರಿಸುವಂತೆ ಮತದಾರರಲ್ಲಿ ಹಾಗೂ ಪಕ್ಷದ ಕಾರ್ಯಕರ್ತರಲ್ಲಿ ಮನವಿ ಮಾಡಿಕೊಂಡರು.

    ನಾನು ಪ್ರಥಮ ಪಿಯುಸಿಯಲ್ಲಿ ಓದುತ್ತಿದ್ದಾಗ ಅದಮ್ಯ ಚೇತನ ಕಾರ್ಯಕ್ರಮದಲ್ಲಿ ನನ್ನನ್ನು ಗುರುತಿಸುತ್ತಿದ್ದರು. ಕಾರ್ಯಕ್ರಮದ ನಿರೂಪಣೆ ಮಾಡಲು ಅವಕಾಶ ನೀಡುತ್ತಿದ್ದರು. ಅಷ್ಟು ಮಾತ್ರವಲ್ಲದೇ ಯಾವುದಾದರೂ ಕಾರ್ಯಕ್ರಮದಲ್ಲಿ 5-10 ನಿಮಿಷ ಮಾತನಾಡಲು ಅವಕಾಶ ನೀಡುವ ಮೂಲಕ ನನ್ನನ್ನು ಬೆಳೆಸಿದ್ದಾರೆ ಅಂದ್ರು.

    ಅಡ್ವಾಣಿಯವರ ಜನಚೇತನ ಯಾತ್ರೆ ನಡೆಯುತ್ತಿದ್ದ ಸಂದರ್ಭದಲ್ಲಿ, ಕಾರ್ಯಕ್ರಮಕ್ಕೆ ನನ್ನನ್ನು ಕಳುಹಿಸಿ ಎಂದು ನಾನು ಅನಂತ್ ಕುಮಾರ್ ಅವರನ್ನು ಬಹಳ ಕಾಡಿದ್ದೆನು. ಹೀಗಾಗಿ ಸಾಹೆಬ್ರು ನನ್ನನ್ನು ಜನಚೇತನ ಯಾತ್ರೆಗೆ ಕಳುಹಿಸಿದ್ದರು. ಆವಾಗಿಂದಲೇ ಅವರು ನನ್ನನ್ನು ಬೆಳೆಸಿಕೊಂಡು ಬಂದಿದ್ದಾರೆ ಎಂದು ಹೇಳುವ ಮೂಲಕ ಹಳೆಯ ನೆನಪನ್ನು ಮೆಲುಕು ಹಾಕಿದ್ರು.

    ನಮ್ಮ ತಾಯಿಯಂತೆ ಅವರು ಕೂಡ ನನ್ನನ್ನು ಬೆಳೆಸಿಕೊಂಡು ಬಂದಿದ್ದಾರೆ ಎಂದು ಹಲವು ಬಾರಿ ಹೇಳಿದ್ದೆ. ಹೀಗಾಗಿ ಈ ಹಿಂದೆ ತೇಜಸ್ವಿನಿ ಅನಂತ್ ಕುಮಾರ್ ಅವರು ಅಭ್ಯರ್ಥಿ ಎಂದು ಹೆಸರು ಕಳುಹಿಸಿದ್ರೋ, ಆವಾಗ ಟ್ವೀಟ್ ಮಾಡುವ ಮೂಲಕ ಬಹಳ ಸಂತೋಷದ ಸಂಗತಿ. ಅಂಥವರು ಇಲ್ಲಿಗೆ ನಾಯಕರಾಗಬೇಕು ಎಂದು ಹೇಳಿದ್ದೆ. ಆದ್ರೆ ಪಕ್ಷದ ಹೈಕಮಾಂಡ್ ಯಾವ ದೃಷ್ಟಿಯಿಂದ ಈ ರೀತಿಯ ನಿರ್ಧಾರ ತೆಗೆದುಕೊಂಡಿತೆಂದು ಗೊತ್ತಿಲ್ಲ. ಅವರು ಅಭ್ಯರ್ಥಿಯಾಗ್ತಿದ್ರೆ ಖುಷಿ ಪಡುತ್ತಿದ್ದರು. ನಾನು ಕೂಡ ನಮ್ಮ ತಾಯಿ ಅಭ್ಯರ್ಥಿಯಾಗುತ್ತಿದ್ರೆ ಎಷ್ಟು ಖುಷಿ ಪಡುತ್ತಿದ್ದೆನೋ ಅಷ್ಟೇ ಖುಷಿ ಅವರು ಕ್ಯಾಂಡಿಡೇಟ್ ಆದಾಗಲೂ ಖುಷಿಯಾಗುತ್ತಿದ್ದೆ. ಆದ್ರೂ ಅವರು ಈ ಸಂದರ್ಭದಲ್ಲಿ ನನಗೆ ಪ್ರೋತ್ಸಾಹ ಕೊಡುವವರಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು.

    ಪಕ್ಷದ ಅಧ್ಯಕ್ಷರು ಹೋಗಿ ಗೆದ್ದು ಬಾ ಎಂದು ನನಗೆ ಇಂದು ಸಂಪೂರ್ಣ ಆಶೀರ್ವಾದ ಮಾಡಿದರು. ಒಬ್ಬ ಕಾರ್ಯಕರ್ತನನ್ನು ಗುರುತಿಸಿ, ಪಕ್ಷದ ಬೆಳವಣಿಗೆಗೆ ಹಾಗೂ ಪಕ್ಷಕ್ಕೆ ಬಹಳ ಅವಕಾಶ ಆಗುತ್ತೆ. ಹೀಗಾಗಿ ಈ ಕಾರ್ಯಕರ್ತನನ್ನು ಬೆಳೆಸಬೇಕು ಎನ್ನುವ ದೃಷ್ಟಿಯಿಂದ ಪಕ್ಷ ಈ ನಿರ್ಧಾರ ತೆಗೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಪಕ್ಷದ ನಾಯಕತ್ವಕ್ಕೆ ಬಹಳ ಕೃತಜ್ಞತೆ ಸಲ್ಲಿಸುತ್ತೇನೆ. ಇಂದು ನಾಮಪತ್ರ ಸಲ್ಲಿಸುವುದಾಗಿ ತಿಳಿಸಿದ್ರು.

    ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಮತ್ತು ರಾಜ್ಯದ ನಾಯಕರಾದ ಯಡಿಯೂರಪ್ಪ, ಅಶೋಕ್, ಸತೀಶ್ ರೆಡ್ಡಿ ಹಾಗೂ ಸೋಮಣ್ಣ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ್ರು.

  • ನೀನು ಸೂರ್ಯ, ನಿನ್ನಲ್ಲಿ ತೇಜಸ್ಸು ಇದೆ: ಪ್ರಧಾನಿ ಮೋದಿ

    ನೀನು ಸೂರ್ಯ, ನಿನ್ನಲ್ಲಿ ತೇಜಸ್ಸು ಇದೆ: ಪ್ರಧಾನಿ ಮೋದಿ

    ಬೆಂಗಳೂರು: ಸಿಲಿಕಾನ್ ಸಿಟಿಯ ದಕ್ಷಿಣ ಲೋಕಸಭಾ ಕ್ಷೇತ್ರದ ಟಿಕೆಟ್ ಪಡೆದ ತೇಜಸ್ವಿ ಸೂರ್ಯ ಅವರನ್ನು ಪ್ರಧಾನಿ ಮೋದಿ ಅವರೇ ಆಯ್ಕೆ ಮಾಡಿದ್ದಾರಾ ಹೀಗೊಂದು ಚರ್ಚೆ ಈಗ ಬಿಜೆಪಿ ವಲಯದಲ್ಲಿ ಆರಂಭವಾಗಿದೆ.

    ಈ ಹಿಂದೆ ವಿಡಿಯೋ ಕಾನ್ಫರೆನ್ಸ್ ನಲ್ಲಿ ಪ್ರಧಾನಿ ಮೋದಿ ಕರ್ನಾಟಕದ ಬಿಜೆಪಿ ಯುವಾ ಮೋರ್ಚಾದ ಜತೆ ಮಾತನಾಡುತ್ತಿದ್ದರು. ಈ ವೇಳೆ ತೇಜಸ್ವಿಸೂರ್ಯ ಅವರ ಹೆಸರನ್ನು ಹೇಳಿ, “ನೀನು ಸೂರ್ಯ, ನಿನ್ನಲ್ಲಿ ತೇಜಸ್ಸು ಇದೆ” ಎಂದು ಮೋದಿ ಹೊಗಳಿದ್ದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಲು ಆರಂಭವಾಗಿದೆ.

    ಸಂವಾದದ ಆರಂಭದಲ್ಲಿ “ಮೋದಿಜೀ ನಮಸ್ತೇ” ಎಂದು ತೇಜಸ್ವಿ ಸೂರ್ಯ ಹೇಳಿ ಮಾತನ್ನು ಆಡಲು ಆರಂಭಿಸುತ್ತಾರೆ. ಈ ವೇಳೆ ಮೋದಿ, “ಅಪ್ ತೋ ಸ್ವಯಂ ಸೂರ್ಯ ಹೇ ಔರ್ ತೇಜಸ್ವಿ ಬಿ ಹೇ” ಎಂದು ಹೇಳಿ ಹೊಗಳಿದ್ದರು. ಇದನ್ನೂ ಓದಿ: ಮೂರು ದಿನದ ಹಿಂದೆ ತೇಜಸ್ವಿ ಸೂರ್ಯಗೆ ಮನವಿ ಮಾಡಿದ್ದ ತೇಜಸ್ವಿನಿ!

    ಕರ್ನಾಟಕದ ಪೈಕಿ ಬೆಂಗಳೂರು ದಕ್ಷಿಣ ಕೇತ್ರ ಬಿಜೆಪಿಯ ಭದ್ರಕೋಟೆಯಾಗಿದೆ. 1977ಕ್ಕೆ ಲೋಕಸಭಾ ಕ್ಷೇತ್ರವಾಗಿ ರಚನೆಯಾಗಿದ್ದು ಆರಂಭದ ಮೂರು ಚುನಾವಣೆಯಲ್ಲಿ ಜನತಾ ಪಕ್ಷ ಇಲ್ಲಿ ಗೆಲುವನ್ನು ಕಂಡಿತ್ತು. 1989 ರಲ್ಲಿ ಒಂದು ಬಾರಿ ಕಾಂಗ್ರೆಸ್ ಗೆಲುವು ಕಂಡಿದ್ದು, ನಂತರ ನಡೆದ ಎಲ್ಲ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿದೆ. 1996ರಿಂದ 2014ರ ವರೆಗೆ ನಡೆದ ಎಲ್ಲ ಚುನಾವಣೆಯಲ್ಲಿ ಕಳೆದ ವರ್ಷ ನಿಧನರಾಗಿದ್ದ ಕೇಂದ್ರ ಸಚಿವ ಅನಂತ್ ಕುಮಾರ್ ಜಯಗಳಿಸುತ್ತಾ ಬಂದಿದ್ದರು. ಇದನ್ನೂ ಓದಿ: ‘ಅನುಕಂಪದ ಮೇಲೆ ಟಿಕೆಟ್ ಕೊಟ್ಟರೆ ಪಕ್ಷ ಸಂಘಟನೆ ಮಾಡೋದು ಹೇಗೆ?’

    ಅನಂತ್ ಕುಮಾರ್ ಅವರನ್ನು ಸೋಲಿಸಲೇಬೇಕೆಂದು ಕಾಂಗ್ರೆಸ್ ಕಳೆದ ಬಾರಿ ಇನ್ಫೋಸಿಸ್ ಸಹ ಸಂಸ್ಥಾಪಕ ನಂದನ್ ನಿಲೇಕಣಿ ಅವರನ್ನು ಕಣಕ್ಕೆ ಇಳಿಸಿತ್ತು. ಬೆಂಗಳೂರು ದಕ್ಷಿಣ ಕ್ಷೇತ್ರ ನಗರದಲ್ಲೇ ಇರುವುದರ ಜೊತೆಗೆ ಸಾಕ್ಷರತಾ ಮತದಾರರ ಸಂಖ್ಯೆಯೂ ಹೆಚ್ಚು ಇರುವ ಕಾರಣದಿಂದಲೂ ಈ ಕ್ಷೇತ್ರದಲ್ಲಿ ಭಾರೀ ಸ್ಪರ್ಧೆ ನಡೆಯಲಿದೆ ಎಂದು ವಿಶ್ಲೇಷಿಸಲಾಗಿತ್ತು. ಆದರೆ ಅಂತಿಮವಾಗಿ ಅನಂತ್ ಕುಮಾರ್ 2.28 ಲಕ್ಷ ಮತಗಳ ಅಂತರದಿಂದ ವಿಜಯಿಯಾದರು. ಅನಂತ್ ಕುಮಾರ್ 6,33,816 ಮತಗಳನ್ನು ಪಡೆದಿದ್ದರೆ, ನಿಲೇಕಣಿ 4,05,241 ಮತಗಳನ್ನು ಪಡೆದಿದ್ದರು.

  • ಮೂರು ದಿನದ ಹಿಂದೆ ತೇಜಸ್ವಿ ಸೂರ್ಯಗೆ ಮನವಿ ಮಾಡಿದ್ದ ತೇಜಸ್ವಿನಿ!

    ಮೂರು ದಿನದ ಹಿಂದೆ ತೇಜಸ್ವಿ ಸೂರ್ಯಗೆ ಮನವಿ ಮಾಡಿದ್ದ ತೇಜಸ್ವಿನಿ!

    ಬೆಂಗಳೂರು: ಅನಂತ್ ಕುಮಾರ್ ಪತ್ನಿ ತೇಜಸ್ವಿನಿ ಅವರು ಮೂರು ದಿನಗಳ ಹಿಂದೆಯಷ್ಟೇ ರಾಜ್ಯ ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ತೇಜಸ್ವಿ ಸೂರ್ಯ ಅವರನ್ನು ಭೇಟಿ ಮಾಡಿಕೊಂಡಿದ್ದರು.

    ತೇಜಸ್ವಿನಿ ಅನಂತ್ ಕುಮಾರ್ ಅವರು ಮೂರು ದಿನಗಳ ಹಿಂದೆ ಶಾಸಕ ರವಿಸುಬ್ರಮಣ್ಯ ಮನೆಗೆ ತೆರಳಿದ್ದರು. ಇದೇ ವೇಳೆ ರವಿಸುಬ್ರಮಣ್ಯ ಅಣ್ಣನ ಮಗ ರಾಜ್ಯ ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ತೇಜಸ್ವಿ ಸೂರ್ಯ ಜೊತೆಯೂ ಮಾತುಕತೆ ನಡೆಸಿದ್ದರು.

    ಇದೇ ಸಂದಂರ್ಭದಲ್ಲಿ ತೇಜಸ್ವಿನಿ ಅನಂತಕುಮಾರ್ ಅವರು ಬಿಜೆಪಿ ರಾಷ್ಟ್ರೀಯ ಸಾಮಾಜಿಕ ಜಾಲತಾಣದ ಸದಸ್ಯರಾಗಿರುವ ತೇಜಸ್ವಿ ಸೂರ್ಯ ಅವರ ಬಳಿಕ ನಮ್ಮ ಪ್ರಚಾರ ಹೆಚ್ಚು ಮಾಡಪ್ಪ ಎಂದು ಮನವಿ ಮಾಡಿಕೊಂಡಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಬಿಜೆಪಿ ಹೈಕಮಾಂಡ್ ತೇಜಸ್ವಿನಿಗೆ ಟಿಕೆಟ್ ನೀಡದೇ ತೇಜಸ್ವಿ ಸೂರ್ಯ ಅವರಿಗೆ ನೀಡಿದೆ.

    ಅನಂತ್ ಕುಮಾರ್ ಪತ್ನಿ ತೇಜಸ್ವಿನಿ ಮತ್ತು ತೇಜಸ್ವಿ ಸೂರ್ಯ ಮಧ್ಯೆ ಯಾರಿಗೆ ಟಿಕೆಟ್ ನೀಡಬೇಕು ಎನ್ನುವ ಚರ್ಚೆಯ ಮಧ್ಯೆ ಬಿಜೆಪಿ ಹೈಕಮಾಂಡ್ ರವಿಸುಬ್ರಹ್ಮಣ್ಯ ಅವರಿಗೆ ಟಿಕೆಟ್ ನೀಡಲು ಮುಂದಾಗಿತ್ತು. ಆದರೆ ರವಿ ಸುಬ್ರಹ್ಮಣ್ಯ ಟಿಕೆಟ್ ಆಫರ್ ನಿರಾಕರಿಸಿದ ಹಿನ್ನೆಲೆಯಲ್ಲಿ ಅವರ ಅಣ್ಣನ ಮಗನಾದ ತೇಜಸ್ವಿ ಸೂರ್ಯ ಅವರಿಗೆ ಹೈಕಮಾಂಡ್ ಟಿಕೆಟ್ ನೀಡಿದೆ.

    ಕೇಂದ್ರ ಸಚಿವ ಅನಂತ್ ಕುಮಾರ್ ನಿಧನದ ಬಳಿಕ ಈ ಕ್ಷೇತ್ರವನ್ನು ಅವರ ಪತ್ನಿ ತೇಜಸ್ವಿನಿ ಅವರಿಗೆ ನೀಡಲು ಪಕ್ಷದ ಮುಖಂಡರು ಮುಂದಾಗಿದ್ದರು. ಈ ಸಂಬಂಧ ದಕ್ಷಿಣ ಭಾಗದ ಬಿಜೆಪಿ ಶಾಸಕರು, ಮುಖಂಡರ ಸಭೆ ನಡೆಸಿದ ಬಳಿಕ ರಾಜ್ಯ ನಾಯಕರು ಹೈಕಮಾಂಡಿಗೆ ತೇಜಸ್ವಿನಿ ಅವರ ಹೆಸರನ್ನು ಶಿಫಾರಸು ಮಾಡಿದ್ದರು.

  • ‘ಅನುಕಂಪದ ಮೇಲೆ ಟಿಕೆಟ್ ಕೊಟ್ಟರೆ ಪಕ್ಷ ಸಂಘಟನೆ ಮಾಡೋದು ಹೇಗೆ?’

    ‘ಅನುಕಂಪದ ಮೇಲೆ ಟಿಕೆಟ್ ಕೊಟ್ಟರೆ ಪಕ್ಷ ಸಂಘಟನೆ ಮಾಡೋದು ಹೇಗೆ?’

    – ತೇಜಸ್ವಿ ಸೂರ್ಯ ಪರ ಬಿಎಲ್ ಸಂತೋಷ್ ಬ್ಯಾಟಿಂಗ್
    – ಸಂತೋಷ್ ಮಾತಿಗೆ ಹೈಕಮಾಂಡ್ ಮಣೆ

    ಬೆಂಗಳೂರು: ಯುವ ನಾಯಕ ತೇಜಸ್ವಿ ಸೂರ್ಯ ಅವರಿಗೆ ಬೆಂಗಳೂರು ದಕ್ಷಿಣ ಕ್ಷೇತ್ರದ ಟಿಕೆಟ್ ನೀಡುವ ಕಾರ್ಯದಲ್ಲಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಯಶಸ್ವಿಯಾಗಿದ್ದಾರೆ.

    ಕೇಂದ್ರ ಸಚಿವ ಅನಂತ್ ಕುಮಾರ್ ನಿಧನರಾದ ಬಳಿಕ ಈ ಕ್ಷೇತ್ರಕ್ಕೆ ಅಭ್ಯರ್ಥಿ ಯಾರಾಗಬೇಕು ಎನ್ನುವ ವಿಚಾರದ ಬಗ್ಗೆ ರಾಜ್ಯ ನಾಯಕರು ಸಭೆ ನಡೆಸಿ ಅನಂತ್ ಕುಮಾರ್ ಪತ್ನಿ ತೇಜಸ್ವಿನಿ ಅವರಿಗೆ ಟಿಕೆಟ್ ನೀಡಬಹುದು ಎನ್ನುವ ಪ್ರಸ್ತಾಪವನ್ನು ಮುಂದಿಟ್ಟಿದ್ದರು.

    ದೆಹಲಿಯಲ್ಲಿರುವ ಚುನಾವಣಾ ಸಮಿತಿ ಅಭ್ಯರ್ಥಿಗಳ ಆಯ್ಕೆ ಮಾಡುವಾಗ ಬಿಎಲ್ ಸಂತೋಷ್ ಅವರು ಅನುಕಂಪದ ಮೇಲೆ ಟಿಕೆಟ್ ಕೊಟ್ಟರೆ ಮುಂದಿನ ಕಥೆಯೇನು? ಇನ್ನು ಹಲವು ವರ್ಷ ಪಕ್ಷ ಕಟ್ಟಿ, ಬೆಳೆಸುವವರು ಯಾರು ಎಂದು ಹೇಳಿ ತೇಜಸ್ವಿ ಸೂರ್ಯ ಹೆಸರನ್ನೂ ಪರಿಗಣಿಸಬಹುದು ಎಂದು ನಾಯಕರಿಗೆ ಮನವರಿಕೆ ಮಾಡಿದ್ದಾರೆ.

    ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರು ದಕ್ಷಿಣದಿಂದ ಸ್ಪರ್ಧೆ ಮಾಡುತ್ತಾರೆ ಎನ್ನುವ ಸುದ್ದಿಯೂ ಹರಿದಾಡತೊಡಗಿ ಈ ಕ್ಷೇತ್ರದ ಬಗ್ಗೆ ಮತ್ತಷ್ಟು ಕುತೂಹಲ ಹೆಚ್ಚಾಯಿತು. ಅಂತಿಮವಾಗಿ ಹೈಕಮಾಂಡ್ ಸಂತೋಷ್ ಹೇಳಿದಂತೆ ತೇಜಸ್ವಿ ಸೂರ್ಯ ಅವರಿಗೆ ಟಿಕೆಟ್ ನೀಡಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

    ಒಂದು ಕಾಲದಲ್ಲಿ ಅನಂತ್ ಕುಮಾರ್ ಟಿಕೆಟ್ ಘೋಷಣೆ ಮಾಡುತ್ತಿದ್ದರು. ಆದರೆ ಇಂದು ಒಂದು ಟಿಕೆಟ್‍ಗಾಗಿ ಕಡೆ ದಿನದವರೆಗೂ ತೇಜಸ್ವಿನಿ ಅನಂತಕುಮಾರ್ ಕಾದಿದ್ದರು. ಅಂದು ಅನಂತಕುಮಾರ್ ಜತೆ ಸಂತೋಷ್ ಚುನಾವಣಾ ತಂತ್ರಗಾರಿಕೆ ಮಾಡುತ್ತಿದ್ದರು. ಆದರೆ ಇಂದು ಬಿ.ಎಲ್.ಸಂತೋಷ್ ಚದುರಾಂಗದಾಟದಲ್ಲಿ ಎಲ್ಲವೂ ಉಲ್ಟಾವಾಗಿದೆ ಎನ್ನುವ ವಿಚಾರ ಈಗ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.

    ಇದರ ಜೊತೆಯಲ್ಲಿ ಮಂಡ್ಯದಲ್ಲಿ ಸುಮಲತಾ ಅವರಿಗೆ ಬಿಜೆಪಿ ಬೆಂಬಲ ನೀಡುತ್ತದೆ. ಆದರೆ ಬೆಂಗಳೂರು ದಕ್ಷಿಣದಲ್ಲಿ ಅನಂತ್ ಕುಮಾರ್ ನಿಧನರಾದರೂ ಪತ್ನಿಗೆ ಟಿಕೆಟ್ ನೀಡದೇ ಇರುವುದು ಎಷ್ಟು ಸರಿ ಎನ್ನುವ ಮಾತು ಕೇಳಿ ಬಂದಿದೆ.

    ನನಗೆ ನಂಬಲು ಸಾಧ್ಯವಾಗುತ್ತಿಲ್ಲ. 28 ವರ್ಷದ ಯುವಕನ ಮೇಲೆ ನಂಬಿಕೆ ಇಟ್ಟು ಬೆಂಗಳೂರಿನ ದಕ್ಷಿಣ ಕ್ಷೇತ್ರದ ಟಿಕೆಟ್ ನೀಡಿದ ಪ್ರಧಾನಿ ಮೋದಿ, ಅಮಿತ್ ಶಾ ಅವರಿಗೆ ಧನ್ಯವಾದಗಳು. ಈ ರೀತಿ ಟಿಕೆಟ್ ಬಿಜೆಪಿ ಪಕ್ಷದಲ್ಲಿ ಮಾತ್ರ ಸಿಗುತ್ತದೆ. ನನ್ನನ್ನು ಬೆಂಬಲಿಸಿದ ನಾಯಕರಾದ ಮುಕುಂದ ಮತ್ತು ಬಿಎಲ್ ಸಂತೋಷ್ ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದು ತೇಜಸ್ವಿ ಸೂರ್ಯ ಅವರು ಟ್ವೀಟ್ ಮಾಡಿದ್ದಾರೆ.

     

  • ಬೆಂಗಳೂರು ದಕ್ಷಿಣದಲ್ಲಿ ತೇಜಸ್ವಿ ಸೂರ್ಯಗೆ ಬಿಜೆಪಿ ಟಿಕೆಟ್

    ಬೆಂಗಳೂರು ದಕ್ಷಿಣದಲ್ಲಿ ತೇಜಸ್ವಿ ಸೂರ್ಯಗೆ ಬಿಜೆಪಿ ಟಿಕೆಟ್

    ಬೆಂಗಳೂರು: ಕುತೂಹಲ ಕೆರಳಿಸಿ ಸುದ್ದಿಯಾಗಿದ್ದ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ರಾಜ್ಯ ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ತೇಜಸ್ವಿ ಸೂರ್ಯ ಕಣಕ್ಕೆ ಇಳಿಯಲಿದ್ದಾರೆ.

    ಅನಂತ್ ಕುಮಾರ್ ಪತ್ನಿ ತೇಜಸ್ವಿನಿ ಮತ್ತು ತೇಜಸ್ವಿ ಸೂರ್ಯ ಮಧ್ಯೆ ಯಾರಿಗೆ ಟಿಕೆಟ್ ನೀಡಬೇಕು ಎನ್ನುವ ಚರ್ಚೆಯ ಮಧ್ಯೆ ಬಿಜೆಪಿ ಹೈಕಮಾಂಡ್ ರವಿಸುಬ್ರಹ್ಮಣ್ಯ ಅವರಿಗೆ ಟಿಕೆಟ್ ನೀಡಲು ಮುಂದಾಗಿತ್ತು. ಆದರೆ ರವಿ ಸುಬ್ರಹ್ಮಣ್ಯ ಟಿಕೆಟ್ ಆಫರ್ ನಿರಾಕರಿಸಿದ ಹಿನ್ನೆಲೆಯಲ್ಲಿ ಅವರ ಅಣ್ಣನ ಮಗನಾದ ತೇಜಸ್ವಿ ಸೂರ್ಯ ಅವರಿಗೆ ಹೈಕಮಾಂಡ್ ಟಿಕೆಟ್ ನೀಡಿದೆ.

    ಕೇಂದ್ರ ಸಚಿವ ಅನಂತ್ ಕುಮಾರ್ ನಿಧನದ ಬಳಿಕ ಈ ಕ್ಷೇತ್ರವನ್ನು ಅವರ ಪತ್ನಿ ತೇಜಸ್ವಿನಿ ಅವರಿಗೆ ನೀಡಲು ಪಕ್ಷದ ಮುಖಂಡರು ಮುಂದಾಗಿದ್ದರು. ಈ ಸಂಬಂಧ ದಕ್ಷಿಣ ಭಾಗದ ಬಿಜೆಪಿ ಶಾಸಕರು, ಮುಖಂಡರ ಸಭೆ ನಡೆಸಿದ ಬಳಿಕ ರಾಜ್ಯ ನಾಯಕರು ಹೈಕಮಾಂಡಿಗೆ ತೇಜಸ್ವಿನಿ ಅವರ ಹೆಸರನ್ನು ಶಿಫಾರಸು ಮಾಡಿದ್ದರು.

    ಅನಂತ್ ಕುಮಾರ್ ಅವರ ಸತತ ಜಯದಿಂದ ಬಿಜೆಪಿಯ ಭದ್ರಕೋಟೆ ಆಗಿರುವ ಈ ಕ್ಷೇತ್ರದಲ್ಲಿ ಸುಲಭವಾಗಿಯೇ ಅಭ್ಯರ್ಥಿ ಆಯ್ಕೆಯನ್ನು ಬಿಜೆಪಿ ಮಾಡುತ್ತದೆ ಎಂದು ನಿರೀಕ್ಷೆ ಮಾಡಲಾಗಿತ್ತು. ಈ ಮಧ್ಯೆ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್ ಅವರು ತೇಜಸ್ವಿನಿ ಅವರಿಗೆ ಟಿಕೆಟ್ ನೀಡಲು ಆರ್‍ಎಸ್‍ಎಸ್ ಆಕ್ಷೇಪ ವ್ಯಕ್ತಪಡಿಸುತ್ತದೆ. ಹೀಗಾಗಿ ಪಕ್ಷದ ಯುವಮೋರ್ಚಾದ ಪ್ರಧಾನ ಕಾರ್ಯದರ್ಶಿ ತೇಜಸ್ವಿಸೂರ್ಯ ಅವರನ್ನು ಕಣಕ್ಕೆ ಇಳಿಸಬಹುದು ಎಂದು ಹೈಕಮಾಂಡ್ ಮಟ್ಟದವರಿಗೆ ಸಲಹೆ ನೀಡಿದ್ದಾರೆ. ಈ ಸಲಹೆಯನ್ನು ಪರಿಗಣಿಸಿದ ಹೈಕಮಾಂಡ್ ಈಗ ತೇಜಸ್ವಿನಿ ಅವರನ್ನು ಇಳಿಸಬೇಕೋ ಅಥವಾ ತೇಜಸ್ವಿ ಸೂರ್ಯ ಅವರನ್ನು ಇಳಿಸಬೇಕೋ ಎನ್ನುವ ಗೊಂದಲದಲ್ಲಿತ್ತು. ಕೊನೆಗೆ ತೇಜಸ್ವಿ ಸೂರ್ಯ ಅವರಿಗೆ ಟಿಕೆಟ್ ಸಿಕ್ಕಿದ್ದು, ಮೂಲಕ ಬಿಎಲ್ ಸಂತೋಷ್ ಗೆದ್ದಿದ್ದಾರೆ.

    ಜಯನಗರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಹಾಲಿ ಶಾಸಕರಾಗಿದ್ದ ವಿಜಯ್ ಕುಮಾರ್ ಅವರು ಮೃತಪಟ್ಟಿದ್ದರು. ಹೀಗಾಗಿ ನಂತರ ನಡೆದ ಚುನಾವಣೆಯಲ್ಲಿ ವಿಜಯ್ ಕುಮಾರ್ ಅವರ ಸಹೋದರ ಪ್ರಹ್ಲಾದ್ ಬಾಬು ಅವರನ್ನು ಬಿಜೆಪಿ ಕಣಕ್ಕೆ ಇಳಿಸಿತ್ತು. ಅನುಕಂಪದ ಅಲೆಯಲ್ಲಿ ಪ್ರಹ್ಲಾದ್ ಬಾಬು ಅವರಿಗೆ ಜಯ ಸಿಗಬಹುದು ಎಂದು ಎಣಿಸಿ ಟಿಕೆಟ್ ನೀಡಿದ್ದರೂ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಸೌಮ್ಯಾ ರೆಡ್ಡಿ ಜಯಗಳಿಸಿದ್ದರು. ಹೀಗಾಗಿ ಯಾವಾಗಲೂ ಅನುಕಂಪ ಕೆಲಸ ಮಾಡುವುದಿಲ್ಲ. ಪಕ್ಷ ಸಂಘಟನೆಯ ದೃಷ್ಟಿಯಿಂದಾಗಿ ಕ್ಷೇತ್ರದಲ್ಲಿ ಗಟ್ಟಿ ಅಭ್ಯರ್ಥಿಯನ್ನು ಹಾಕಬೇಕು ಎನ್ನುವ ವಿಚಾರದ ಬಗ್ಗೆ ಚರ್ಚೆ ನಡೆದು ಹೈಕಮಾಂಡ್ ತೇಜಸ್ವಿನಿ ಅವರಿಗೆ ಟಿಕೆಟ್ ನಿರಾಕರಿಸಿದೆ ಎನ್ನಲಾಗಿದೆ.

     

    ಯಾರು ತೇಜಸ್ವಿ ಸೂರ್ಯ?
    ಕಾನೂನು ಪದವಿ ಓದಿರುವ ತೇಜಸ್ವಿ ಸೂರ್ಯ, ಪ್ರಸ್ತುತ ರಾಜ್ಯ ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಬಿಜೆಪಿ ರಾಷ್ಟ್ರೀಯ ಸಾಮಾಜಿಕ ಜಾಲತಾಣದ ಸದಸ್ಯರಾಗಿರುವ ಇವರು ಶಾಸಕ ರವಿ ಸುಬ್ರಮಣ್ಯ ಅವರ ಅಣ್ಣನ ಮಗ. ಆರ್ಎಸ್‍ಎಸ್‍ನ ಮೂಲಕ ರಾಜಕಾರಣಕ್ಕೆ ಎಂಟ್ರಿ ಕೊಟ್ಟ ಇವರು 4 ವರ್ಷಗಳ ಹಿಂದೆ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಮಾಧ್ಯಮಗಳ ಚರ್ಚಾ ಕಾರ್ಯಕ್ರಮದಲ್ಲಿ ಪಕ್ಷದ ಪರವಾಗಿ ಭಾಗವಹಿಸುತ್ತಿರುವ ಇವರು ಉತ್ತಮ ಭಾಷಣಕಾರರಾಗಿದ್ದಾರೆ.

  • ಬೆಂಗಳೂರು ದಕ್ಷಿಣದ ಟಿಕೆಟ್ ಯಾರಿಗೆ – ತೇಜಸ್ವಿನಿಗೋ, ತೇಜಸ್ವಿ ಸೂರ್ಯಗೋ?

    ಬೆಂಗಳೂರು ದಕ್ಷಿಣದ ಟಿಕೆಟ್ ಯಾರಿಗೆ – ತೇಜಸ್ವಿನಿಗೋ, ತೇಜಸ್ವಿ ಸೂರ್ಯಗೋ?

    ಬೆಂಗಳೂರು: ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್  ಬೆಂಗಳೂರು ದಕ್ಷಿಣ ಕ್ಷೇತ್ರದ ಟಿಕೆಟ್ ಗೊಂದಲಕ್ಕೆ ಕಾರಣ ಎನ್ನುವ ಮಾತು ಬಿಜೆಪಿ ವಲಯದಿಂದ ಈಗ ಕೇಳಿ ಬಂದಿದೆ.

    ಹೌದು. ಕೇಂದ್ರ ಸಚಿವ ಅನಂತ್ ಕುಮಾರ್ ನಿಧನದ ಬಳಿಕ ಈ ಕ್ಷೇತ್ರವನ್ನು ಅವರ ಪತ್ನಿ ತೇಜಸ್ವಿನಿ ಅವರಿಗೆ ನೀಡಲು ಪಕ್ಷದ ಮುಖಂಡರು ಮುಂದಾಗಿದ್ದರು. ಈ ಸಂಬಂಧ ದಕ್ಷಿಣ ಭಾಗದ ಬಿಜೆಪಿ ಶಾಸಕರು, ಮುಖಂಡರ ಸಭೆ ನಡೆಸಿದ ಬಳಿಕ ರಾಜ್ಯ ನಾಯಕರು ಹೈಕಮಾಂಡಿಗೆ ತೇಜಸ್ವಿನಿ ಅವರ ಹೆಸರನ್ನು ಶಿಫಾರಸು ಮಾಡಿದ್ದರು.

    ಅನಂತ್ ಕುಮಾರ್ ಅವರ ಸತತ ಜಯದಿಂದ ಬಿಜೆಪಿಯ ಭದ್ರಕೋಟೆ ಆಗಿರುವ ಈ ಕ್ಷೇತ್ರದಲ್ಲಿ ಸುಲಭವಾಗಿಯೇ ಅಭ್ಯರ್ಥಿ ಆಯ್ಕೆಯನ್ನು ಬಿಜೆಪಿ ಮಾಡುತ್ತದೆ ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ಬಿಜೆಪಿ ತನ್ನ ಐದು ಪಟ್ಟಿಯನ್ನು ಬಿಡುಗಡೆ ಮಾಡಿದರೂ ಬೆಂಗಳೂರು ದಕ್ಷಿಣದ ಅಭ್ಯರ್ಥಿಯನ್ನು ಘೋಷಿಸದೇ ಕುತೂಹಲ ಮೂಡಿಸಲು ಕಾರಣ ಬಿಎಲ್ ಸಂತೋಷ್ ಕಾರಣ ಎನ್ನುವ ಮಾತು ಪಕ್ಷದ ಮೂಲದಿಂದ ತಿಳಿದು ಬಂದಿದೆ.

    ತೇಜಸ್ವಿನಿ ಅವರಿಗೆ ಟಿಕೆಟ್ ನೀಡಲು ಆರ್‍ಎಸ್‍ಎಸ್ ಆಕ್ಷೇಪ ವ್ಯಕ್ತಪಡಿಸುತ್ತದೆ. ಹೀಗಾಗಿ ಪಕ್ಷದ ಯುವಮೋರ್ಚಾದ ಪ್ರಧಾನ ಕಾರ್ಯದರ್ಶಿ ತೇಜಸ್ವಿಸೂರ್ಯ ಅವರನ್ನು ಕಣಕ್ಕೆ ಇಳಿಸಬಹುದು ಎಂದು ಹೈಕಮಾಂಡ್ ಮಟ್ಟದವರಿಗೆ ಸಲಹೆ ನೀಡಿದ್ದಾರೆ. ಈ ಸಲಹೆಯನ್ನು ಪರಿಗಣಿಸಿದ ಹೈಕಮಾಂಡ್ ಈಗ ತೇಜಸ್ವಿನಿ ಅವರನ್ನು ಇಳಿಸಬೇಕೋ ಅಥವಾ ತೇಜಸ್ವಿ ಸೂರ್ಯ ಅವರನ್ನು ಇಳಿಸಬೇಕೋ ಎನ್ನುವ ಗೊಂದಲದಲ್ಲಿದೆ.

    ತೇಜಸ್ವಿನಿ ಹೆಸರನ್ನು ಶಿಫರಾಸು ಮಾಡಿದ ಬಳಿಕ ಸಂತೋಷ್ ಅವರು ಮತ್ತೊಂದು ಹೆಸರನ್ನು ಪ್ರಸ್ತಾಪಿಸಿದ್ದಕ್ಕೆ ರಾಜ್ಯ ನಾಯಕರು ಸಂತೋಷ್ ವಿರುದ್ಧ ಅಸಮಾಧಾನಗೊಂಡಿದ್ದಾರೆ ಎಂದು ಬಿಜೆಪಿ ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.

    ಸಂತೋಷ್ ಅವರ ಪ್ರಸ್ತಾಪಕ್ಕೆ ಕೆಲ ಬಿಜೆಪಿ ನಾಯಕರು ಸಹಮತವನ್ನೂ ಸೂಚಿಸಿದ್ದಾರೆ ಎನ್ನಲಾಗಿದೆ. ಜಯನಗರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಹಾಲಿ ಶಾಸಕರಾಗಿದ್ದ ವಿಜಯ್ ಕುಮಾರ್ ಅವರು ಮೃತಪಟ್ಟಿದ್ದರು. ಹೀಗಾಗಿ ನಂತರ ನಡೆದ ಚುನಾವಣೆಯಲ್ಲಿ ವಿಜಯ್ ಕುಮಾರ್ ಅವರ ಸಹೋದರ ಪ್ರಹ್ಲಾದ್ ಬಾಬು ಅವರನ್ನು ಬಿಜೆಪಿ ಕಣಕ್ಕೆ ಇಳಿಸಿತ್ತು. ಅನುಕಂಪದ ಅಲೆಯಲ್ಲಿ ಪ್ರಹ್ಲಾದ್ ಬಾಬು ಅವರಿಗೆ ಜಯ ಸಿಗಬಹುದು ಎಂದು ಎಣಿಸಿ ಟಿಕೆಟ್ ನೀಡಿದ್ದರೂ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಸೌಮ್ಯಾ ರೆಡ್ಡಿ ಜಯಗಳಿಸಿದ್ದರು. ಹೀಗಾಗಿ ಯಾವಾಗಲೂ ಅನುಕಂಪ ಕೆಲಸ ಮಾಡುವುದಿಲ್ಲ. ಪಕ್ಷ ಸಂಘಟನೆಯ ದೃಷ್ಟಿಯಿಂದಾಗಿ ಕ್ಷೇತ್ರದಲ್ಲಿ ಗಟ್ಟಿ ಅಭ್ಯರ್ಥಿಯನ್ನು ಹಾಕಬೇಕು ಎನ್ನುವ ವಿಚಾರದ ಬಗ್ಗೆ ಬಿಜೆಪಿ ನಾಯಕರು ಚರ್ಚೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

    ಸಂಜೆ ಇತ್ಯರ್ಥ: ಸೋಮವಾರ ಬೆಳಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಬಿಎಸ್ ಯಡಿಯೂರಪ್ಪ ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಯಾರು ಎನ್ನುವುದು ಇಂದು ಸಂಜೆ ಇತ್ಯರ್ಥವಾಗಲಿದೆ ಎಂದು ತಿಳಿಸಿದ್ದಾರೆ.