Tag: ತುಳು ಚಿತ್ರ

  • ನಮ್ಮ ಕುಡ್ಲ ಟಾಕೀಸ್ ನಲ್ಲಿ “ಪೆಪ್ಪೆರೆರೆ ಪೆರೆರೆರೆ” ತುಳುಚಿತ್ರ ಬಿಡುಗಡೆ

    ನಮ್ಮ ಕುಡ್ಲ ಟಾಕೀಸ್ ನಲ್ಲಿ “ಪೆಪ್ಪೆರೆರೆ ಪೆರೆರೆರೆ” ತುಳುಚಿತ್ರ ಬಿಡುಗಡೆ

    ಮಂಗಳೂರು: ನಿಶಾನ್ ವರುಣ್ ಮೂವೀಸ್ ಬ್ಯಾನರ್‍ನಡಿ ತಯಾರಾಗಿರುವ ವಿಜಯ್ ಶೋಭರಾಜ್ ಪಾವೂರು ನಿರ್ದೇಶನದ ಪೆಪ್ಪೆರೆರೆ ಪೆರೆರೆರೆ ತುಳು ಸಿನಿಮಾ ಭಾನುವಾರ (ಮಾರ್ಚ್ 7ರಂದು) ನಮ್ಮ ಕುಡ್ಲ ಟಾಕೀಸ್‍ನಲ್ಲಿ ಬಿಡುಗಡೆಗೊಂಡಿತು. ನಮ್ಮ ಕುಡ್ಲ ಕಚೇರಿಯಲ್ಲಿ ನಡೆದ ಬಿಡುಗಡೆ ಕಾರ್ಯಕ್ರಮದಲ್ಲಿ ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ, ನೋಟರಿ ವಕೀಲ ಪದ್ಮರಾಜ್ ಆರ್, ನಟರಾದ ದೇವದಾಸ್ ಕಾಪಿಕಾಡ್, ನವೀನ್ ಡಿ. ಪಡೀಲ್, ಭೋಜರಾಜ್ ವಾಮಂಜೂರು, ಸತ್ಯಜಿತ್ ಸುರತ್ಕಲ್ ಮೊದಲಾದವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

    ಪೆಪ್ಪೆರೆರೆ ಪೆರೆರೆರೆ ತುಳು ಸಿನಿಮಾ ನಮ್ಮ ಕುಡ್ಲ ಟಾಕೀಸ್‍ನಲ್ಲಿ ಬಿಡುಗಡೆಗೊಂಡ ಮೊದಲ ಸಿನಿಮಾ. ಭಾನುವಾರ ಮಧ್ಯಾಹ್ನ 1.30, ಸಂಜೆ 6 ಹಾಗೂ ರಾತ್ರಿ 9 ಗಂಟೆಗೆ ಮೊದಲ ಪ್ರದರ್ಶನ ಕಂಡಿತು. ಈ ಸಿನಿಮಾ ಮಾರ್ಚ್ ತಿಂಗಳ ಪ್ರತಿ ಭಾನುವಾರ 3 ಪ್ರದರ್ಶನಗಳಂತೆ ಒಟ್ಟು 12 ಪ್ರದರ್ಶನ ಕಾಣಲಿದೆ. ವಿಜಯ್ ಶೋಭರಾಜ್ ಪಾವೂರು ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನ ಮಾಡಿದ್ದು, ರಾಹುಲ್ ಅಮೀನ್ ಸಹ ನಿರ್ದೇಶನ ಮಾಡಿದ್ದಾರೆ. ಪ್ರಶಾಂತ್ ಪಾಟೀಲ್ ಕ್ಯಾಮೆರಾ, ಅಶೋಕ್, ಸುಶಾಂತ್ ಶೆಟ್ಟಿ ಸಂಕಲನ, ಗುರು ಬಾಯಾರು ಸಂಗೀತ ಚಿತ್ರಕ್ಕಿದೆ. ದೇವದಾಸ್ ಕಾಪಿಕಾಡ್, ನವೀನ್ ಡಿ. ಪಡೀಲ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ. ಸಿನಿಮಾದಲ್ಲಿ ನಾಲ್ಕು ಹಾಡುಗಳಿದ್ದು, ಕಾಪಿಕಾಡ್ ಹಾಗೂ ಭೋಜರಾಜ್ ಹಾಡಿರುವುದು ವಿಶೇಷತೆಯಾಗಿದೆ.

    ಮನೆಯೇ ಥಿಯೇಟರ್:
    ನಮ್ಮ ಕುಡ್ಲ ಟಾಕೀಸ್ ಎಂದರೆ ಮನೆಯೇ ಟಾಕೀಸ್ ಎಂಬ ಪರಿಕಲ್ಪನೆ. ಕೇಬಲ್ ಟಿವಿ ಸಂಪರ್ಕ ಇರುವ ಮನೆಗಳಲ್ಲಿ ಟಿವಿ ಮೂಲಕ ಹೊಸ ತುಳು ಸಿನಿಮಾವನ್ನು ನೋಡುವ ಅವಕಾಶ. ಮಲ್ನಾಡ್ ಇನ್ಫೋಟೆಕ್ ಹಾಗೂ ವಿ4 ಇನ್ಫೋಟೆಕ್ ಸಂಪರ್ಕದ ಎಲ್ಲ ಕೇಬಲ್ ಆಪರೇಟರ್‍ಗಳು ಗ್ರಾಹಕರಿಗೆ ನಮ್ಮ ಕುಡ್ಲ ಟಾಕೀಸ್ ಎಂಬ ಪ್ರತ್ಯೇಕ ಚಾನೆಲ್‍ನ ಸಂಪರ್ಕ ಕೊಡಿಸುವರು. ಸಾಮಾನ್ಯ ಟಿವಿಯಲ್ಲಿ ಸಿನಿಮಾ ವೀಕ್ಷಣೆಗೆ 120 ರೂ. ಹಾಗೂ ಎಚ್‍ಡಿ ಟಿ.ವಿ.ಯಲ್ಲಿ 160 ರೂ. ಪಾವತಿಸಬೇಕು. ಚಾನೆಲ್ ಸಂಖ್ಯೆ 88 ಅಥವಾ 888ರಲ್ಲಿ ಪ್ರತಿ ಭಾನುವಾರ 3 ದೇಖಾವೆಗಳನ್ನು ಒಂದು ತಿಂಗಳ ಪರ್ಯಂತ ಒಟ್ಟು 12 ಬಾರಿ ನಮ್ಮ ಕುಡ್ಲ ಟಾಕೀಸ್‍ನಲ್ಲಿ ವೀಕ್ಷಿಸಬಹುದು. ಸಿನಿಮಾ ವೀಕ್ಷಣೆಗೆ ಕೇಬಲ್ ಅಪರೇಟರ್‍ರನ್ನು ಸಂಪರ್ಕಿಸಬಹುದು.

  • ಉಡುಪಿ: ಪೇಜಾವರ ಶ್ರೀಗಳಿಂದ `ದಿಬ್ಬಣ’ ಧ್ವನಿಸುರುಳಿ ಬಿಡುಗಡೆ

    ಉಡುಪಿ: ಪೇಜಾವರ ಶ್ರೀಗಳಿಂದ `ದಿಬ್ಬಣ’ ಧ್ವನಿಸುರುಳಿ ಬಿಡುಗಡೆ

    ಉಡುಪಿ: ಸ್ಯಾಂಡಲ್ ವುಡ್ ನಲ್ಲಿ ಒಂದೆಡೆ ಸಾಲು ಸಾಲು ಚಿತ್ರಗಳು ತೆರೆ ಕಾಣುತ್ತಿದ್ದರೆ ಇತ್ತ ಕರಾವಳಿಯಲ್ಲಿ ತುಳು ಚಿತ್ರಗಳ ಸಂಖ್ಯೆ ದಿನೇ ದಿನೆ ಜಾಸ್ತಿಯಾಗುತ್ತಿದೆ. ಈ ನಡುವೆ ಉಡುಪಿಯಲ್ಲಿ `ದಿಬ್ಬಣ’ ಅನ್ನೋ ಚಿತ್ರದ ಧ್ವನಿ ಸುರುಳಿ ಬಿಡುಗಡೆಯಾಗಿದೆ.

    ಪರ್ಯಾಯ ಪೇಜಾವರ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ಉಡುಪಿ ಶ್ರೀ ಕೃಷ್ಣ ಮಠದಲ್ಲಿ ವಾರಿನ್ ಕಂಬೈನ್ಸ್ ರವರ “ರಂಗ್ ರಂಗ್ ದ ದಿಬ್ಬಣ” ತುಳು ಚಿತ್ರದ ಧ್ವನಿ ಸುರುಳಿಯನ್ನು ಬಿಡುಗಡೆ ಮಾಡಿದರು.

    ಸಿಡಿ ಬಿಡುಗಡೆ ಮಾಡಿ ಮಾತನಾಡಿದ ಸ್ವಾಮೀಜಿ, ತುಳು ಭಾಷೆಯಲ್ಲಿ ಹಲವಾರು ಚಲನಚಿತ್ರಗಳು ಬರುತ್ತಿದೆ. ಚಲನಚಿತ್ರಗಳ ಸಂಖ್ಯೆ ಜಾಸ್ತಿಯಾಗುವುದು ಸಾಧನೆಯಲ್ಲ. ಅದು ಜನರ ಮನಸ್ಸಿಗೆ ಎಷ್ಟರ ಮಟ್ಟಿಗೆ ಧನಾತ್ಮಕ ಚಿಂತನೆಗಳನ್ನು ಕೊಡುತ್ತದೆ ಎಂಬುವುದು ಮುಖ್ಯ. ಕೃಷ್ಣಮಠದಲ್ಲಿ ಹಲವಾರು ಚಲನಚಿತ್ರಗಳ ಮುಹೂರ್ತಗಳು ನಡೆದಿದೆ. ಭಕ್ತಿಪ್ರಧಾನ ಚಿತ್ರಗಳು ಕೂಡಾ ಬರಬೇಕು ಎಂದು ಹೇಳಿದರು.

    ಈ ಸಂದರ್ಭದಲ್ಲಿ ನಿರ್ಮಾಪಕ ಶರತ್ ಕೋಟ್ಯಾನ್, ನಿರ್ದೇಶಕ ಕೃಷ್ಣ ಪ್ರಸಾದ್ ಉಪ್ಪಿನಕೋಟೆ, ಸಂಗೀತ ನಿರ್ದೇಶಕ ಎಸ್.ಪಿ.ಚಂದ್ರಕಾಂತ್, ನಾಯಕ ನಟ ನಟಿಯರಾದ ರವಿರಾಜ್ ಶೆಟ್ಟಿ, ಪ್ರಶಾಂತ್ ಸಾಮಗ, ಸ್ವಾತಿ ಬಂಗೇರ, ಸಂಹಿತಾ ಶಾ ಮುಂತಾದವರು ಉಪಸ್ಥಿತರಿದ್ದರು.