Tag: ತೀರ್ಪು

  • `15 ದಿನ ಮೊದಲ ಪತಿಯ ಜೊತೆ 15 ದಿನ ಎರಡನೆಯ ಪತಿ ಜೊತೆ ಸಂಸಾರ ಮಾಡು’

    `15 ದಿನ ಮೊದಲ ಪತಿಯ ಜೊತೆ 15 ದಿನ ಎರಡನೆಯ ಪತಿ ಜೊತೆ ಸಂಸಾರ ಮಾಡು’

    – ಉತ್ತರ ಪ್ರದೇಶ ಪಂಚಾಯತ್ ನಿಂದ ವಿಚಿತ್ರ ಆದೇಶ

    ಲಕ್ನೋ: 15 ದಿನ ಮೊದಲ ಪತಿಯ ಜೊತೆ ಇನ್ನುಳಿದ 15 ದಿನ ಎರಡನೆಯ ಪತಿ ಜೊತೆ ಸಂಸಾರ ಮಾಡು ಎಂದು ವಿಚಿತ್ರವಾದ ತೀರ್ಪನ್ನ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಪಂಚಾಯತ್ ನೀಡಿದೆ.

    2012 ರಲ್ಲಿ ಮಹಿಳೆಯೊಬ್ಬರು ಲಾಯಕ್ ಎಂಬುವ ವ್ಯಕ್ತಿಯನ್ನ ಮದುವೆಯಾಗಿ, ಒಂದು ಮಗುವನ್ನ ಪಡೆದಿದ್ದರು. ಮಗು ಜನಿಸಿದ ಕೆಲವು ತಿಂಗಳಿನಲ್ಲಿ ವರದಕ್ಷಿಣೆಯ ಕಾರಣದಿಂದ ಲಾಯಕ್ ತನ್ನ ಪತ್ನಿಗೆ 2015ರಲ್ಲಿ ವಿಚ್ಛೇದನ ನೀಡಿದ್ದ.

    ಗಂಡನಿಂದ ಬೇರೆಯಾದ ಮಹಿಳೆ ಮಗುವಿನೊಂದಿಗೆ ತನ್ನ ತವರು ಮನೆಗೆ ಹಿಂದಿರುಗಿದ್ದಳು. 2017 ರಲ್ಲಿ ಮನೆಯವರು ಆಕೆಗೆ ಅದೇ ಊರಿನ ವ್ಯಕ್ತಿಯ ಜೊತೆ ಎರಡನೇ ಮದುವೆ ಮಾಡಿದ್ದರು. ಆದರೆ ಮೊದಲನೆಯ ಪತಿಯಾದ ಲಾಯಕ್ ಮಗುವನ್ನ ತನ್ನಿಂದ ಬಲವಂತವಾಗಿ ತೆಗೆದುಕೊಂಡು ಹೋಗಿದ್ದಾನೆ ಎಂದು ಮಹಿಳೆ ದೂರಿದ್ದಾರೆ.

    ಈ ವಿಚಾರವಾಗಿ ಪೊಲೀಸರಿಗೆ ದೂರು ಸಲ್ಲಿಸಿದರೂ ಯಾವುದೇ ಸಹಾಯ ದೊರಕದ ಕಾರಣ, ಸ್ಥಳೀಯ ಪಂಚಾಯತ್ ನ ಮೊರೆ ಹೋಗಿದ್ದರು. ಈಕೆಯ ದೂರನ್ನು ಪರಿಗಣಿಸಿ ಕಾಪ್ ಪಂಚಾಯತ್ 15 ದಿನ ಮೊದಲ ಪತಿಯ ಜೊತೆ ಇನ್ನುಳಿದ 15 ದಿನ ಎರಡನೆಯ ಪತಿಯ ಜೊತೆ ಸಂಸಾರ ಮಾಡು ಎಂದು ವಿಚಿತ್ರವಾದ ಆದೇಶವನ್ನು ನೀಡಿದೆ.

    ಈ ಆದೇಶದ ಬಳಿಕ ಮಹಿಳೆ ಸಾಮಾಜಿಕ ಕಾರ್ಯಕರ್ತರ ಮೊರೆ ಹೋಗಿದ್ದು, ಅವರು ಪೊಲೀಸರಿಂದ ಸಹಾಯ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದೇಶಾದ್ಯಂತ ಪಟಾಕಿ ಸಂಪೂರ್ಣ ನಿಷೇಧ ಸಾಧ್ಯವಿಲ್ಲ: ಸುಪ್ರೀಂ

    ದೇಶಾದ್ಯಂತ ಪಟಾಕಿ ಸಂಪೂರ್ಣ ನಿಷೇಧ ಸಾಧ್ಯವಿಲ್ಲ: ಸುಪ್ರೀಂ

    ನವದೆಹಲಿ: ದೇಶಾದ್ಯಂತ ಪಟಾಕಿಗಳನ್ನು ಸಂಪೂರ್ಣವಾಗಿ ನಿಷೇಧಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ.

    ಸುರಕ್ಷಿತ ಹಾಗೂ ಗ್ರೀನ್ ಪಟಾಕಿಗಳ ಉತ್ಪಾದನೆ ಹಾಗೂ ಮಾರಾಟ ಮುಂದುವರಿಸುವಂತೆ ನ್ಯಾ. ಎ. ಕೆ ಸಿಕ್ರಿ ನೇತೃತ್ವದ ದ್ವಿಸದಸ್ಯ ಪೀಠ ಈ ಆದೇಶ ನೀಡಿದೆ. ತೀರ್ಪಿನಲ್ಲಿ ಬೆಳಗ್ಗೆ 8 ರಿಂದ 10 ವರೆಗೂ ಪಟಾಕಿ ಹೊಡೆಯಬಹುದು. ಹೊಸ ವರ್ಷ ಮತ್ತು ಕ್ರಿಸ್ಮಸ್ ಸಂದರ್ಭದಲ್ಲಿ ರಾತ್ರಿ 12:30 ವರೆಗೂ ಪಟಾಕಿ ಹೊಡೆಯಲು ಅವಕಾಶ ಕಲ್ಪಿಸಲಾಗಿದೆ.

    ಇನ್ಮುಂದೆ ಕೇವಲ ಲೈಸನ್ಸ್ ಹೊಂದಿರುವ ಮಾರಾಟಗಾರರಷ್ಟೇ ಪಟಾಕಿ ಮಾರಾಟ ಮಾಡಬೇಕು ಎಂದಿರುವ ಸುಪ್ರೀಂ, ಆನ್ ಲೈನಲ್ಲಿ ಪಟಾಕಿ ಮಾರಾಟವನ್ನು ಸಂಪೂರ್ಣ ನಿಷೇಧಿಸಿದೆ. ಈ ತೀರ್ಪಿನ ಬಳಿಕವೂ ಪಟಾಕಿಗಳನ್ನು ಆನ್‍ಲೈನಲ್ಲಿ ಮಾರಾಟ ನಡೆಸಿದರೆ ಅವರ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

    ಏನಿದು ಪ್ರಕರಣ?
    ಕಳೆದ ವರ್ಷ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚಳ ಹಿನ್ನೆಲೆಯಲ್ಲಿ ಪಟಾಕಿ ಮಾರಾಟ ನಿಷೇಧಿಸಿ ಸುಪ್ರೀಂಕೋರ್ಟ್ ಆದೇಶಿಸಿತ್ತು. ಅದರ ಬೆನ್ನಲ್ಲೇ ಇಡೀ ದೇಶಾದ್ಯಂತ ಪಟಾಕಿ ಉತ್ಪಾದನೆ ಮತ್ತು ಮಾರಾಟದ ಮೇಲೆ ನಿಷೇಧ ಹೇರಬೇಕೆಂದು ಅರ್ಜಿ ಸಲ್ಲಿಕೆಯಾಗಿತ್ತು.

    ವಿಚಾರಣೆ ವೇಳೆ ದೇಶಾದ್ಯಂತ ಸಂಪೂರ್ಣ ಪಟಾಕಿ ನಿಷೇಧಕ್ಕೆ ಕೇಂದ್ರ ಸರ್ಕಾರ ವಿರೋಧ ವ್ಯಕ್ತಪಡಿಸಿ, ಪಟಾಕಿ ಉತ್ಪಾದನೆ ಮತ್ತು ಮಾರಾಟದ ಮೇಲೆ ಕೆಲವೊಂದು ಷರತ್ತುಗಳನ್ನು ವಿಧಿಸಿ ಅವಕಾಶ ನೀಡಬೇಕೆಂದು ಸಲಹೆ ನೀಡಿತ್ತು. ಈ ಉದ್ಯಮವನ್ನೇ ನಂಬಿಕೊಂಡಿರುವ ಅದೆಷ್ಟೋ ಕುಟುಂಬಗಳು ಬೀದಿಗೆ ಬರಲಿವೆ ಎಂದು ಪಟಾಕಿ ಉತ್ಪಾದಕರು ವಾದಿಸಿದ್ದರು.

     

     

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದೇಶಾದ್ಯಂತ ಪಟಾಕಿ ಆಗುತ್ತಾ ಬ್ಯಾನ್?

    ದೇಶಾದ್ಯಂತ ಪಟಾಕಿ ಆಗುತ್ತಾ ಬ್ಯಾನ್?

    ಬೆಂಗಳೂರು: ದೀಪಾವಳಿಗೆ ಇನ್ನೇನು ಕೆಲವೇ ದಿನಗಳು ಉಳಿದಿವೆ. ಆದರೆ ಈ ಬಾರಿಯ ದೀಪಾವಳಿಯನ್ನು ಪಟಾಕಿ ಸಿಡಿಸದೇ ಆಚರಿಸಬೇಕಾಗಬಹುದು. ಯಾಕಂದರೆ ದೇಶದಲ್ಲಿ ಪಟಾಕಿ ಉತ್ಪಾದನೆ ಮತ್ತು ಮಾರಾಟದ ಮೇಲೆ ನಿಷೇಧ ಹೇರುವ ಕುರಿತು ಇವತ್ತು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಲಿದೆ.

    ಕಳೆದ ವರ್ಷ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚಳ ಹಿನ್ನೆಲೆಯಲ್ಲಿ ಪಟಾಕಿ ಮಾರಾಟ ನಿಷೇಧಿಸಿ ಸುಪ್ರೀಂಕೋರ್ಟ್ ಆದೇಶಿಸಿತ್ತು. ಅದರ ಬೆನ್ನಲ್ಲೇ ಇಡೀ ದೇಶಾದ್ಯಂತ ಪಟಾಕಿ ಉತ್ಪಾದನೆ ಮತ್ತು ಮಾರಾಟದ ಮೇಲೆ ನಿಷೇಧ ಹೇರಬೇಕೆಂದು ಅರ್ಜಿ ಸಲ್ಲಿಕೆಯಾಗಿತ್ತು.

    ದೇಶಾದ್ಯಂತ ಸಂಪೂರ್ಣ ಪಟಾಕಿ ನಿಷೇಧಕ್ಕೆ ಕೇಂದ್ರ ಸರ್ಕಾರ ವಿರೋಧ ವ್ಯಕ್ತಪಡಿಸಿದ್ದು, ಪಟಾಕಿ ಉತ್ಪಾದನೆ ಮತ್ತು ಮಾರಾಟದ ಮೇಲೆ ಕೆಲವೊಂದು ಷರತ್ತುಗಳನ್ನು ವಿಧಿಸಿ ಅವಕಾಶ ನೀಡಬೇಕೆಂದು ಸಲಹೆ ನೀಡಿದೆ.

    ಮತ್ತೊಂದು ಕಡೆ ದೀಪಾವಳಿ ವೇಳೆ ವಾಯುಮಾಲಿನ್ಯ ಹೆಚ್ಚಾಗುತ್ತದೆ ಅನ್ನೋ ಕಾರಣಕ್ಕೆ ಪಟಾಕಿ ಉತ್ಪಾದನೆ ಮೇಲೆಯೇ ನಿಷೇಧ ಹೇರಿದ್ರೆ, ಈ ಉದ್ಯಮವನ್ನೇ ನಂಬಿಕೊಂಡಿರುವ ಅದೆಷ್ಟೋ ಕುಟುಂಬಗಳು ಬೀದಿಗೆ ಬರಲಿವೆ ಅನ್ನೋದು ಪಟಾಕಿ ಉತ್ಪಾದಕರ ವಾದವಾಗಿದೆ. ಹೀಗಾಗಿ ಇವತ್ತು ಸುಪ್ರೀಂಕೋರ್ಟ್ ನೀಡಲಿರುವ ತೀರ್ಪು ಕುತೂಹಲ ಮೂಡಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ತಲಾಖ್ ತೀರ್ಪಿಗೆ ಸ್ವಾಗತ, ಶಬರಿಮಲೆ ತೀರ್ಪಿಗೆ ವಿರೋಧ ಯಾಕೆ: ಸುಬ್ರಮಣಿಯನ್ ಸ್ವಾಮಿ ಪ್ರಶ್ನೆ

    ತಲಾಖ್ ತೀರ್ಪಿಗೆ ಸ್ವಾಗತ, ಶಬರಿಮಲೆ ತೀರ್ಪಿಗೆ ವಿರೋಧ ಯಾಕೆ: ಸುಬ್ರಮಣಿಯನ್ ಸ್ವಾಮಿ ಪ್ರಶ್ನೆ

    ನವದೆಹಲಿ: ಸುಪ್ರಿಂ ಕೋರ್ಟ್ ನ ತ್ರಿವಳಿ ತಲಾಖ್ ತೀರ್ಪಿಗೆ ಸ್ವಾಗತ ಕೋರಿದ್ದವರು ಇಂದು ಶಬರಿಮಲೆಯ ತೀರ್ಪಿನ ವಿರುದ್ಧ ಯಾಕೆ ಬೀದಿಗಿಳಿದಿದ್ದಾರೆ ಎಂದು ಬಿಜೆಪಿ ಮುಖಂಡ, ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಪ್ರಶ್ನಿಸಿದ್ದಾರೆ.

    ಶಬರಿಮಲೆಯಲ್ಲಿ ಮಹಿಳೆಯರ ಪ್ರವೇಶ ವಿರೋಧಿಸಿ ನಡೆಯುತ್ತಿರುವ ಹೋರಾಟಕ್ಕೆ ಪ್ರತಿಕ್ರಿಯಿಸಿದ ಅವರು, ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ನಾವು ಪಾಲಿಸಬೇಕು. ಈ ಹಿಂದೆ ಇದೇ ಸುಪ್ರೀಂ ಕೋರ್ಟ್ ತ್ರಿವಳಿ ತಲಾಖ್ ಬಗ್ಗೆ ತೀರ್ಪು ನೀಡಿದ್ದಾಗ ಎಲ್ಲರೂ ಸಂತಸ ವ್ಯಕ್ತಪಡಿಸಿದ್ದರು. ಆದರೆ ಶಬರಿಮಲೆಗೆ ಮಹಿಳೆಯರ ಪ್ರವೇಶದ ವಿಚಾರದಲ್ಲಿ, ಸುಪ್ರೀಂ ಕೋರ್ಟ್ ತೀರ್ಪು ನಮ್ಮ ಸಂಸ್ಕೃತಿಗೆ ವಿರುದ್ಧವಾದದ್ದು ಎಂದು ಹೇಳುತ್ತಿದ್ದೀರಿ. ಶಬರಿಮಲೆ ವಿವಾದ ನಿಮ್ಮ ಸಂಸ್ಕೃತಿಯಾದರೆ, ತ್ರಿವಳಿ ತಲಾಖ್ ಅವರ ಸಂಸ್ಕೃತಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

    ಈ ವಿವಾದ ಹಿಂದೂ ನವೋದಯ ಮತ್ತು ಗೊಡ್ಡು ಸಂಪ್ರದಾಯದ ನಡುವಿನ ಹೋರಾಟ. ಎಲ್ಲಾ ಹಿಂದುಗಳು ಒಂದೇ. ಎಲ್ಲಾ ಜಾತಿ ಮತ್ತು ಪಂಗಡಗಳೂ ಸಮಾನವಾದದ್ದು. ಜಾತಿ ವ್ಯವಸ್ಥೆ ತೊಲಗಬೇಕು. ಯಾಕೆಂದರೆ ಇಂದು ಬ್ರಾಹ್ಮಣರು ಬೌದ್ಧಿಕರಾಗಿ ಉಳಿದಿಲ್ಲ. ಅವರು ಸಿನಿಮಾ, ವಾಣಿಜ್ಯ ಸೇರಿದಂತೆ ಸಮಾಜದ ಎಲ್ಲ ಕ್ಷೇತ್ರಗಳಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಜಾತಿ ಎಂಬುದು ಹುಟ್ಟಿನಿಂದ ನಿರ್ಧಾರವಾಗುತ್ತದೆ ಎಂಬುದನ್ನು ಎಲ್ಲಿಯೂ ಬರೆದಿಲ್ಲ. ಶಾಸ್ತ್ರಗಳನ್ನೂ ನಾವು ತಿದ್ದುಪಡಿ ಮಾಡಬಹುದು ಎಂದು ಸುಬ್ರಮಣಿಯನ್ ಸ್ವಾಮಿ ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಶಬರಿಮಲೆಗೆ ಮಹಿಳೆಯರು ಪ್ರವೇಶಿಸಿದ್ರೆ ಸಾಮೂಹಿಕ ಆತ್ಮಹತ್ಯೆ- ಶಿವಸೇನಾ ಕಾರ್ಯಕರ್ತೆಯರಿಂದ ಬೆದರಿಕೆ

    ಶಬರಿಮಲೆಗೆ ಮಹಿಳೆಯರು ಪ್ರವೇಶಿಸಿದ್ರೆ ಸಾಮೂಹಿಕ ಆತ್ಮಹತ್ಯೆ- ಶಿವಸೇನಾ ಕಾರ್ಯಕರ್ತೆಯರಿಂದ ಬೆದರಿಕೆ

    ತಿರುವನಂತಪುರಂ: ಶಬರಿಮಲೆಗೆ ಮಹಿಳೆಯರು ಪ್ರವೇಶ ಮಾಡಿದರೆ ನಮ್ಮ ಮಹಿಳಾ ಕಾರ್ಯಕರ್ತೆಯರು ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳಲಿದ್ದಾರೆ ಎಂದು ಕೇರಳದ ಶಿವಸೇನೆ ಹೇಳಿದೆ.

    ಮಾಧ್ಯಮಗಳ ಜೊತೆ ಮಾತನಾಡಿದ ಶಿವಸೇನಾ ಸದಸ್ಯರಾದ ಪೆರಿಂಗಂಮ್ಮಾಲಾ ಅಜಿ, ಸುಪ್ರಿಂ ಕೋರ್ಟ್ ಆದೇಶವನ್ನ ಖಂಡಿಸಿ, ಇದೇ ಅಕ್ಟೋಬರ್ 17 ಮತ್ತು 18 ರಂದು ಪಂಪಾ ನದಿಯ ತೀರದಲ್ಲಿ ನಮ್ಮ ಮಹಿಳಾ ಕಾರ್ಯಕರ್ತರೆಲ್ಲಾ ಸೇರಿ ಪ್ರತಿಭಟನೆ ನಡೆಸಲಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.

    ಆತ್ಮಹತ್ಯೆ ಮಾಡಿಕೊಳ್ಳಲಿರುವ ಮಹಿಳೆಯರು ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದು, ಒಂದು ವೇಳೆ ಮಹಿಳೆಯರು ಶಬರಿಮಲೆಗೆ ಪ್ರವೇಶಿಸಿದರೆ ಸಾಮೂಹಿಕ ಆತ್ಮಹತ್ಯೆಗೆ ಶರಣಾಗಲಿದ್ದಾರೆ ಎಂದು ಪೆರಿಂಗಂಮ್ಮಾಲಾ ಅಜಿ ಹೇಳಿದ್ದಾರೆ.

    ಶಬರಿಮಲೆ ಮಹಿಳೆಯರ ಪ್ರವೇಶದ ವಿಚಾರವಾಗಿ ದೇಶದೆಲ್ಲೆಡೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೇರಳದ ಸರ್ಕಾರ ಮತ್ತು ಇನ್ನಿತರ ಭಕ್ತರು ಈ ಆದೇಶದ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಇದರ ಬೆನ್ನಲ್ಲೇ ಶಿವಸೇನಾ ಕಾರ್ಯಕರ್ತರಿಂದ ಶಬರಿಮಲೆಗೆ ಮಹಿಳೆಯರು ಪ್ರವೇಶಿಸಿದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ.

    ಕಳೆದ ಸೆಪ್ಟಂಬರ್ 28 ರಂದು ಕೇರಳದ ಶಬರಿಮಲೆಯ ಅಯ್ಯಪ್ಪನ ದೇವಸ್ಥಾನಕ್ಕೆ ಎಲ್ಲಾ ವಯೋಮಿತಿಯ ಮಹಿಳೆಯರು ಪ್ರವೇಶಿಸಬಹುದು ಎಂದು ಸುಪ್ರಿಂ ಕೋರ್ಟ್‌ನ  ಮಹತ್ವದ ತೀರ್ಪನ್ನು ನೀಡಿತ್ತು. ಭಕ್ತಿಯನ್ನು ಲಿಂಗದ ಆಧಾರದಲ್ಲಿ ವಿವರಿಸಲು ಸಾಧ್ಯವಿಲ್ಲ. ಧಾರ್ಮಿಕ ಹಕ್ಕಿಗೂ-ದೈಹಿಕ ಸ್ಥಿತಿಗತಿಗೂ ಸಂಬಂಧವೇ ಇಲ್ಲ. ಅಯ್ಯಪ್ಪನ ಭಕ್ತರು ಅನ್ಯಧರ್ಮದವರಂತೆ ಪ್ರತ್ಯೇಕ ಸ್ಥಾನಮಾನ ಹೊಂದಿಲ್ಲ. ಒಂದೆಡೆ ಮಹಿಳೆಯರನ್ನು ದೇವರಂತೆ ಪೂಜಿಸುತ್ತೇವೆ. ಮತ್ತೊಂದೆಡೆ ನಿಷೇಧ ಹೇರಲಾಗಿದೆ. ಮಹಿಳೆ ದೇವರಿಗೆ ಸಮಾನವಾಗಿದ್ದು ಮಹಿಳೆಯರಿಗೆ ಶಬರಿಮಲೆಗೆ ಬಹಿಷ್ಕಾರ ಸರಿಯಲ್ಲ. ಮಹಿಳೆಯರ ಬಗೆಗಿನ ಇಬ್ಬಗೆ ನೀತಿಯಿಂದ ಆಕೆಯ ಸ್ಥಾನಮಾನಕ್ಕೆ ಧಕ್ಕೆಯಾಗಿದೆ ಎಂದು ಕೋರ್ಟ್ ಹೇಳಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸುಪ್ರೀಂಕೋರ್ಟ್ ತೀರ್ಪು-ಬಿಜೆಪಿ, RSSನವರು ಬೆಂಕಿ ಹಚ್ಚೋ ಕೆಲ್ಸ ಮಾಡ್ತಿದ್ದಾರೆ: ಸಿದ್ದರಾಮಯ್ಯ

    ಸುಪ್ರೀಂಕೋರ್ಟ್ ತೀರ್ಪು-ಬಿಜೆಪಿ, RSSನವರು ಬೆಂಕಿ ಹಚ್ಚೋ ಕೆಲ್ಸ ಮಾಡ್ತಿದ್ದಾರೆ: ಸಿದ್ದರಾಮಯ್ಯ

    ಬಾಗಲಕೋಟೆ: ರಾಮಮಂದಿರ ವಿವಾದ ಕುರಿತ ಸುಪ್ರೀಂ ಕೋರ್ಟ್ ತೀರ್ಪಿನ ವಿಚಾರದಲ್ಲಿ ನಮ್ಮದೇ ಗೆಲುವು ಎಂಬಂತೆ ಬಿಜೆಪಿ ಹಾಗೂ ಆರ್‌ಎಸ್‌ಎಸ್ ನವರು ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ.

    ನಮಾಜ್ ಮಾಡಲು ಮಸೀದಿಯೇ ಬೇಕಾಗಿಲ್ಲ ಎನ್ನುವ ಮೂಲಕ 1994 ರ ಫಾರೂಖಿ ತೀರ್ಪನ್ನು ಗುರುವಾರ ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿತ್ತು. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಸುಪ್ರೀಂಕೋರ್ಟ್ ತೀರ್ಪು ಯಾರ ಗೆಲುವೂ ಅಲ್ಲ, ಯಾರ ಸೋಲೂ ಅಲ್ಲ. ಎರಡೂ ಸಮುದಾಯದವರು ಸುಪ್ರೀಂ ತೀರ್ಪನ್ನು ಸ್ವಾಗತಿಸಿದ್ದಾರೆ. ಆದರೆ ಬಿಜೆಪಿ ಹಾಗೂ ಆರ್‌ಎಸ್‌ಎಸ್ ನವರು ಇದು ನಮ್ಮ ಗೆಲುವು ಎಂದು ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ತೀರ್ಪು ಎರಡೂ ಸಮಯದಾಯಗಳಿಗೆ ಸಮಾಧಾನ ತರುವಂತೆ ಬಂದಿದೆ ಎಂದು ಸಂತಸ ವ್ಯಕ್ತಪಡಿಸಿದರು.

    ಇದೇ ವೇಳೆ ಬಿಬಿಎಂಪಿ ಮೇಯರ್ ಚುನಾವಣೆ ವಿಚಾರದ ಬಗ್ಗೆ ಮಾತನಾಡಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳೇ ಗೆಲ್ಲೋದು. ನಮಗೇ ಜಯ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಅಲ್ಲದೇ ಇದೇ ಅಕ್ಟೋಬರ್ 3ರ ನಂತರ ಸಚಿವ ಸಂಪುಟ ವಿಸ್ತರಣೆ ಆಗಲಿದೆ ಎಂದು ತಿಳಿಸಿದರು.

    ಈಗಾಗಲೇ ಬಹಳಷ್ಟು ಜನ ಸಚಿವ ಸ್ಥಾನ ಆಕಾಂಕ್ಷಿಗಳಿದ್ದಾರೆ. ಖಾಲಿ ಇರುವ ಒಟ್ಟು 6 ಸ್ಥಾನಗಳನ್ನು ಏಕಕಾಲಕ್ಕೆ ಭರ್ತಿ ಮಾಡುತ್ತೇವೆ. ಕಾಂಗ್ರೆಸ್ಸಿನ ಐದು ಜೆಡಿಎಸ್ ಒಬ್ಬರನ್ನು ಸಚಿವರನ್ನಾಗಿ ಆಯ್ಕೆ ಮಾಡುತ್ತೇವೆ ಎಂದು ಹೇಳಿದ ಅವರು ಯಾರಿಗೆ ಸ್ಥಾನ ಸಿಗುತ್ತದೆ ಎಂದು ಸ್ಪಷ್ಟಪಡಿಸಲಿಲ್ಲ. ಅಲ್ಲದೆ ಇಪ್ಪತ್ತು ಜನ ಶಾಸಕರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಲಾಗುವುದೆಂದು ಸ್ಪಷ್ಟಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದೇಶ ಬಿಡುವ ಮುನ್ನ ಅರುಣ್ ಜೇಟ್ಲಿ ಜೊತೆ ಮಾತನಾಡಿದ್ದೆ: ವಿಜಯ್ ಮಲ್ಯ

    ದೇಶ ಬಿಡುವ ಮುನ್ನ ಅರುಣ್ ಜೇಟ್ಲಿ ಜೊತೆ ಮಾತನಾಡಿದ್ದೆ: ವಿಜಯ್ ಮಲ್ಯ

    ಲಂಡನ್: ದೇಶದ ಬ್ಯಾಂಕ್‍ಗಳಿಂದ ಸಾಲಪಡೆದು ಮರುಪಾವತಿ ಮಾಡದೆ ಲಂಡನ್‍ಗೆ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ, ತಾನು ಭಾರತವನ್ನು ತೊರೆಯುವ ಮುನ್ನ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರನ್ನು ಭೇಟಿ ಮಾಡಿ ಸಮಸ್ಯೆ ಬಗೆಹರಿಸಿಕೊಳ್ಳಲು ಮಾತುಕತೆ ನಡೆಸಿದ್ದಾಗಿ ಹೇಳಿದ್ದಾರೆ.

    ಭಾರತಕ್ಕೆ ಮಲ್ಯರನ್ನು ಹಸ್ತಾಂತರ ಮಾಡುವ ಕುರಿತು ಲಂಡನ್ ನ್ಯಾಯಾಲಯದಲ್ಲಿ ನಡೆದ ಪ್ರಕರಣದ ವಿಚಾರಣೆಗೆ ಇಂದು ವಿಜಯ್ ಮಲ್ಯ ಹಾಜರಾಗಿದ್ದರು. ಈ ವೇಳೆ ಮಾತನಾಡಿದ ಮಲ್ಯ, ಕೋರ್ಟ್ ಪ್ರವೇಶಕ್ಕೂ ಮುನ್ನ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿ ಈ ಕುರಿತು ಮಾಹಿತಿ ಬಿಚ್ಚಿಟ್ಟಿದ್ದಾರೆ.

    ಲಂಡನ್ ವೆಸ್ಟ್ ಮಿನಿಸ್ಟರ್ ಕೋರ್ಟ್ ಹೊರಾಂಗಣದಲ್ಲಿ ಮಾತನಾಡುವ ವೇಳೆ ಮಲ್ಯ ಈ ಕುರಿತು ಮಾತನಾಡಿದ್ದು, ನನಗೆ ಜಿನಿವಾದಲ್ಲಿ ಪೂರ್ವ ನಿರ್ಧರಿತ ಸಭೆ ಇತ್ತು. ಅದ್ದರಿಂದ ಅಲ್ಲಿಗೆ ಭೇಟಿ ನೀಡಿದ್ದೆ. ಅದಕ್ಕೂ ಮುನ್ನ ಅರುಣ್ ಜೇಟ್ಲಿ ಅವರನ್ನು ಭೇಟಿ ಮಾಡಿದ್ದೆ. ಬ್ಯಾಂಕ್‍ಗಳಿಗೆ ನೀಡಬೇಕಿದ್ದ ಹಣ ಮರುಪಾವತಿ ಬಗ್ಗೆ ಮಾತುಕತೆ ನಡೆಸಿದ್ದೆ. ಇದು ಸತ್ಯ ಎಂದು ಹೇಳಿದ್ದಾರೆ.

    ವಿಜಯ್ ಮಲ್ಯರ ಹೇಳಿಕೆ ಹೊರ ಬೀಳುತ್ತಿದಂತೆ ಸ್ಪಷ್ಟನೆ ನೀಡಿರುವ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, ಮಲ್ಯ ಹೇಳಿಕೆಯಲ್ಲಿ ಯಾವುದೇ ಸತ್ಯಾಂಶವಿಲ್ಲ. 2014ರ ವರೆಗೂ ವಿಜಯ್ ಮಲ್ಯರಿಗೆ ನನ್ನ ಭೇಟಿಗೆ ಅವಕಾಶವನ್ನೇ ನೀಡಿಲ್ಲ ಎಂದಾದರೇ ಭೇಟಿ ಮಾಡಿದ್ದಾರೆ ಎಂಬ ಪ್ರಶ್ನೆಯೇ ಉದ್ಭವವಾಗುವುದಿಲ್ಲ ಎಂದು ತಿಳಿಸಿದ್ದಾರೆ.

    ರಾಜ್ಯಸಭಾ ಸದಸ್ಯರಾಗಿದ್ದ ವೇಳೆ ಮಲ್ಯ ಸಂಸತ್ ಭವನಕ್ಕೆ ಹಾಜರಾಗಿದ್ದರು. ಈ ವೇಳೆ ನಿಯಮಗಳನ್ನು ಮೀರಿ ನಡೆದ ಮಲ್ಯ ನಾನು ನನ್ನ ಕೊಠಡಿಗೆ ತೆರಳುತ್ತಿದ್ದ ವೇಳೆ ಎದುರು ಬಂದು ನಡೆದುಕೊಂಡು ಹೋಗುತ್ತಾ ಕೆಲ ಸಮಯ ಮಾತನಾಡಲು ಯತ್ನಿಸಿದ್ದರು. ಆದರೆ ನಾನು ಅವರ ಮಾತನ್ನು ಮುಂದುವರಿಸಲು ಅವಕಾಶ ನೀಡದೇ ನನ್ನ ಜೊತೆ ಮಾತನಾಡುವ ಅಗತ್ಯವಿಲ್ಲ. ಏನಿದ್ದರೂ ಬ್ಯಾಂಕ್ ಅಧಿಕಾರಿಗಳ ಜೊತೆ ಮಾತನಾಡಿ ಎಂದು ಸೂಚಿಸಿದ್ದೆ ಎಂದು ಹೇಳಿದರು.

    https://www.facebook.com/notes/arun-jaitley/the-factual-situation/878476325674250/

    ಮಲ್ಯ ರಾಜ್ಯಸಭಾ ಸದಸ್ಯರಾಗಿದ್ದ ವೇಳೆ ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಮಾತುಕತೆ ನಡೆಸಲು ಯತ್ನಿಸಿದ್ದರು. ಆದರೆ ಅವರಿಗೆ ನಾನು ಭೇಟಿ ಮಾಡಲು ಯಾವುದೇ ಅವಕಾಶವನ್ನೇ ನೀಡಿಲ್ಲ ಎಂದಾದರೆ ಇನ್ನು ಮಾತುಕತೆ ನಡೆಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟನೆ ನೀಡಿ ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

    ಇತ್ತ ಮಲ್ಯರ ಹೇಳಿಕೆಯನ್ನೇ ಮುಂದಿಟ್ಟುಕೊಂಡು ಕೇಂದ್ರ ಸರ್ಕಾರವನ್ನು ಟಾರ್ಗೆಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, ವಿಜಯ್ ಮಲ್ಯ ದೇಶ ಬಿಡುವ ಮುನ್ನ ಅರುಣ್ ಜೇಟ್ಲಿಯನ್ನು ಭೇಟಿ ಮಾಡಿದ್ದಾಗಿ ತಿಳಿಸಿದ್ದಾರೆ. ಮಲ್ಯ ದೇಶಬಿಟ್ಟು ತೆರಳಲು ಬೇಕಾದ ದಾಖಲೆಗಳನ್ನು ನೀಡಲು ಜೇಟ್ಲಿ ಟ್ರಾವೆಲ್ ಏಜೆನ್ಸಿ ನಡೆಸುತ್ತಿದ್ದರಾ ಎಂದು ವ್ಯಂಗ್ಯವಾಗಿ ಪ್ರಶ್ನೆ ಮಾಡಿ ಟ್ವೀಟ್ ಮಾಡಿದೆ.

    ಇನ್ನು 62 ವರ್ಷದ ವಿಜಯ್ ಮಲ್ಯ ಭಾರತಕ್ಕೆ ಗಡಿಪಾರು ಮಾಡುವ ಮೂಲಕ ಭಾರತದಲ್ಲಿ ವಿಚಾರಣೆ ಎದುರಿಸಲು ಅವಕಾಶ ನೀಡುವ ಕುರಿತು ವಿಚಾರಣೆ ನಡೆಸಿದ ಲಂಡನ್ ವೆಸ್ಟ್ ಮಿನಿಸ್ಟರ್ ಕೋರ್ಟ್ ಮುಖ್ಯ ನ್ಯಾ. ಎಮ್ಮಾ ಅರ್ಬುತ್ನೋಟ್, ಡಿಸೆಂಬರ್ 10ಕ್ಕೆ ಪ್ರಕರಣದ ತೀರ್ಪು ಪ್ರಕಟಿಸಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

     

     

  • ಕೈ ಮುಗಿದು ಕೇಳ್ಕೊತೀನಿ, ಮಹದಾಯಿಗಾಗಿ ಪಕ್ಷಭೇದ ಮರೆತು ಹೋರಾಡೋಣ: ಡಿಕೆಶಿ

    ಕೈ ಮುಗಿದು ಕೇಳ್ಕೊತೀನಿ, ಮಹದಾಯಿಗಾಗಿ ಪಕ್ಷಭೇದ ಮರೆತು ಹೋರಾಡೋಣ: ಡಿಕೆಶಿ

    ಬೆಂಗಳೂರು: ಮಹದಾಯಿಗಾಗಿ ಪಕ್ಷಭೇದ ಮರೆತು ಹೋರಾಡೋಣ ಎಂದು ಜಲಸಂಪನ್ಮೂಲ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ಅವರು ಎಲ್ಲಾ ಪಕ್ಷಗಳ ಮುಖಂಡರುಗಳಲ್ಲಿ ಕೈ ಮುಗಿದು ಕೇಳಿಕೊಂಡರು.

    ವಿಧಾನಸೌಧದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ನಮ್ಮ ರಾಜ್ಯದ ಹಿತ ಕಾಪಾಡಲು, ನಾವು ಏನು ಬೇಕಾದರೂ ತ್ಯಾಗ ಮಾಡಲು ಸಿದ್ಧರಿದ್ದು, ಮಹದಾಯಿಗಾಗಿ ಹೋರಾಟ ಮಾಡಲು ನಾವು ಬದ್ಧರಾಗಿದ್ದೇವೆ. ಈ ಕುರಿತು ಎಲ್ಲಾ ಪಕ್ಷದ ಮುಖಂಡರಿಗೆ ನಾನು ಕೈ ಮುಗಿದು ಕೇಳಿಕೊಳ್ಳುತ್ತೇನೆ. ಮಹಾದಾಯಿಗಾಗಿ ಎಲ್ಲರೂ ಪಕ್ಷಭೇದ ಮರೆತು ಹೋರಾಟ ಮಾಡೋಣ. ಇದರಲ್ಲಿ ರಾಜಕೀಯ ಮಾಡುವುದು ಬೇಡ. ನಮ್ಮ ರಾಜ್ಯಕ್ಕೆ ಅನ್ಯಾಯವಾಗಿರುವುದನ್ನು ಮನಸ್ಸಿನಲ್ಲಿಟ್ಟುಕೊಂಡು ನಾವು ಮುಂದುವರಿಯಬೇಕಾಗಿದೆ. ಒಂದು ತೊಟ್ಟು ನೀರನ್ನು ಉಳಿಸಿಕೊಳ್ಳಲು, ನಾವೆಲ್ಲಾ ಒಗ್ಗಟ್ಟಾಗಿ ಕೆಲಸ ಮಾಡಬೇಕೆಂದು ಹೇಳಿದರು. ಇದನ್ನೂ ಓದಿ: ಮಹದಾಯಿ ನದಿ ನೀರಿಗೆ ಗೋವಾ ಕ್ಯಾತೆ ಯಾಕೆ? ಆರಂಭದಿಂದ ಇಲ್ಲಿಯವರೆಗೆ ಏನಾಗಿದೆ? ಇಲ್ಲಿದೆ ಪೂರ್ಣ ಮಾಹಿತಿ

    ಮಹದಾಯಿ ವಿಚಾರದಲ್ಲಿ ನ್ಯಾಯಾಧೀಕರಣದ ಐ-ತೀರ್ಪಿನಿಂದಾಗಿ ರಾಜ್ಯಕ್ಕೆ ಅನ್ಯಾಯವಾಗಿದೆ. ಈ ವಾರದಲ್ಲಿ ಹಿರಿಯ ಅಧಿಕಾರಿಗಳ ತಂಡದ ಜೊತೆ ಮಹಾದಾಯಿಗೆ ಭೇಟಿ ಮಾಡಿ ಪರಿಶೀಲನೆ ನಡೆಸುತ್ತೇವೆ. ಈ ಸಂಬಂಧ ಮುಖ್ಯಮಂತ್ರಿ ಕುಮಾರಸ್ವಾಮಿಗಳೊಂದಿಗೆ ಸಭೆ ನಡೆಸಿ ಮುಂದಿನ ಹೋರಾಟದ ಬಗ್ಗೆ ಸಿದ್ಧತೆ ಮಾಡಿಕೊಳ್ಳುತ್ತೇವೆ. ಬೇರೆ ರಾಜ್ಯದ ನಡೆ ನಮಗೆ ಬೇಡದ ವಿಚಾರವಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಮಹದಾಯಿ ನ್ಯಾಯಾಧೀಕರಣದ ಐತೀರ್ಪಿಗೆ ಗೋವಾ-ಮಹಾರಾಷ್ಟ್ರ ವಿರೋಧ

    ಇದೇ ವೇಳೆ ಸಚಿವ ಸಂಪುಟ ವಿಸ್ತರಣೆ ಸಂಬಂಧ ದೆಹಲಿಗೆ ಹೋಗುತ್ತೀರಾ ಎಂದು ಪ್ರಶ್ನಿಸಿದಾಗ, ಯಾವುದೇ ಪ್ರತಿಕ್ರಿಯೆ ನೀಡದೇ ಪ್ರಶ್ನೆ ಕೇಳುತ್ತಲೇ ಸ್ಥಳದಿಂದ ತರಾತುರಿಯಲ್ಲಿ ಸಚಿವರು ಹೊರಟು ಹೋಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ತಾಜ್ ಮಹಲಿನಲ್ಲಿ ನಮಾಜ್ ಗೆ ಅವಕಾಶವಿಲ್ಲ: ಸುಪ್ರೀಂ ಕೋರ್ಟ್

    ತಾಜ್ ಮಹಲಿನಲ್ಲಿ ನಮಾಜ್ ಗೆ ಅವಕಾಶವಿಲ್ಲ: ಸುಪ್ರೀಂ ಕೋರ್ಟ್

    ನವದೆಹಲಿ: ತಾಜ್ ಮಹಲ್ ವಿಶ್ವದ 7 ಅದ್ಭುತಗಳಲ್ಲಿ ಒಂದಾಗಿದ್ದು ಅಲ್ಲಿ ನಮಾಜ್ ಮಾಡಬಾರದು ಎಂದು ಸುಪ್ರಿಂ ಕೋರ್ಟ್ ಮಹತ್ವದ ಆದೇಶ ಪ್ರಕಟಿಸಿದೆ.

    ನ್ಯಾಯಮೂರ್ತಿಗಳಾದ ಎ.ಕೆ. ಸಿಕ್ರಿ ಮತ್ತು ಅಶೋಕ್ ಭೂಷಣ್ ನೇತೃತ್ವದ ದ್ವಿಸದಸ್ಯ ಪೀಠ, ತಾಜ್ ಮಹಲ್ ವಿಶ್ವದ ಏಳು ಅದ್ಭುತಗಳಲ್ಲಿ ಒಂದಾಗಿದ್ದು, ತಾಜ್ ಮಹಲ್ ನಲ್ಲಿ ನಮಾಜ್ ಮಾಡಬಾರದು. ನಮಾಜ್ ಮಾಡಲು ಸಮೀಪವೇ ಹಲವು ಮಸೀದಿಗಳಿವೆ. ಜನರು ಅಲ್ಲಿಯೇ ಹೋಗಿ ಪ್ರಾರ್ಥನೆ ಸಲ್ಲಿಸಬೇಕು ಎಂದು ಆದೇಶದಲ್ಲಿ ತಿಳಿಸಿದೆ.

    ತಾಜ್ ಮಹಲ್ ನಲ್ಲಿ ಹೊರಗಿನವರು ಶುಕ್ರವಾರ ಪ್ರಾರ್ಥನೆ ಸಲ್ಲಿಸಲು ಆಗ್ರಾ ಆಡಳಿತ ಮಂಡಳಿ ನಿರಾಕರಿಸಿತ್ತು. ಅಲ್ಲದೇ ಜಿಲ್ಲಾ ನ್ಯಾಯಲಯವು ಸಹ 2018ರ ಜನವರಿ 18ರಂದು ತಾಜ್ ಮಹಲ್ ನಲ್ಲಿ ಶುಕ್ರವಾರ ದಿನದಂದು ಸ್ಥಳಿಯರು ಹಾಗೂ ಹೊರಗಿನವರು ಪ್ರಾರ್ಥನೆಯನ್ನು ಸಲ್ಲಿಸಬಾರದೆಂದು ತೀರ್ಪು ನೀಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ವೇಳೆ ಕೋರ್ಟ್ ಈ ಆದೇಶವನ್ನು ಪ್ರಕಟಿಸಿದೆ.

    ಪ್ರಾರ್ಥನೆ ಸಲ್ಲಿಸಲು ತಾಜ್ ಮಹಲ್‍ಗೆ ಯಾಕೆ ಹೋಗಬೇಕು ಎಂದು ಪ್ರಶ್ನಿಸಿದ ಪೀಠ, ತಾಜ್ ಮಹಲ್ ವಿಶ್ವದ ಅದ್ಭುತ ಪ್ರದೇಶವಾಗಿದ್ದು, ಇಲ್ಲಿಗೆ ದಿನನಿತ್ಯ ಸಾವಿರಾರು ಪ್ರವಾಸಿಗರೂ ವರ್ಷಪೂರ್ತಿ ಆಗಮಿಸುತ್ತಲೇ ಇರುತ್ತಾರೆ. ಹೀಗಾಗಿ ತಾಜ್ ಮಹಲ್ ನಲ್ಲಿ ಪ್ರಾರ್ಥನೆಗೆ ಅವಕಾಶ ನೀಡುತ್ತಿಲ್ಲ. ಅವಕಾಶ ನೀಡಿದರೆ ಭದ್ರತೆಗೆ ಸಮಸ್ಯೆಯಾಗುತ್ತದೆ. ಅಲ್ಲಿಗೆ ತೆರಳಿ ಪ್ರಾರ್ಥನೆ ಸಲ್ಲಿಸುವ ಬದಲು ಸಮೀಪವೇ ಇರುವ ಬೇರೆ ಮಸೀದಿಗಳಿಗೆ ತೆರಳಬಹುದು ಎಂದು ತನ್ನ ಆದೇಶದಲ್ಲಿ ಹೇಳಿದೆ.

  • ದೆಹಲಿಗೆ ಸಂಪೂರ್ಣ ಸ್ಥಾನಮಾನ ಇಲ್ಲ, ಎಲ್‍ಜಿ ಸ್ವತಂತ್ರ ಅಧಿಕಾರ ಹೊಂದಿಲ್ಲ: ಸುಪ್ರೀಂ ತೀರ್ಪಿನಲ್ಲಿರೋ ಪ್ರಮುಖ ಅಂಶಗಳು ಇಲ್ಲಿದೆ

    ದೆಹಲಿಗೆ ಸಂಪೂರ್ಣ ಸ್ಥಾನಮಾನ ಇಲ್ಲ, ಎಲ್‍ಜಿ ಸ್ವತಂತ್ರ ಅಧಿಕಾರ ಹೊಂದಿಲ್ಲ: ಸುಪ್ರೀಂ ತೀರ್ಪಿನಲ್ಲಿರೋ ಪ್ರಮುಖ ಅಂಶಗಳು ಇಲ್ಲಿದೆ

    ನವದೆಹಲಿ: ಲೆಫ್ಟಿನೆಂಟ್ ಗವರ್ನರ್ ಮತ್ತು ದೆಹಲಿ ಸರ್ಕಾರ ನಡುವೆ ಅಧಿಕಾರ ಹಂಚಿಕೆ ಸಂಬಂಧ ನಡೆಯುತ್ತಿದ್ದ ಜಟಾಪಟಿ ಸಂಬಂಧ ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ಪ್ರಕಟಿಸಿದೆ.

    ದೆಹಲಿಯ ಭೂಮಿ, ಕಾನೂನು ವ್ಯವಸ್ಥೆ ಹಾಗೂ ಪೊಲೀಸ್ ಅಧಿಕಾರಿಗಳನ್ನು ರಾಜ್ಯಪಾಲರೇ ನೋಡಿಕೊಳ್ಳಬೇಕೆಂಬ ದೆಹಲಿ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸುಪ್ರೀಂ ಕೋರ್ಟ್ ನ ಮೊರೆ ಹೋಗಿದ್ದರು. ಇಂದು ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಿಂದಾಗಿ ಆಡಳಿತಾರೂಢ ಕೇಜ್ರಿವಾಲ್ ಸರ್ಕಾರಕ್ಕೆ ಸಿಹಿ ಸಿಕ್ಕಿದೆ.

    ಮುಖ್ಯ ನ್ಯಾಯಾಧೀಶರಾದ ದೀಪಕ್ ಮಿಶ್ರಾ ಹಾಗೂ ನ್ಯಾಯಾಧೀಶರಾದ ಎ.ಕೆ.ಸಿಕ್ರಿ, ಎ.ಎಂ.ಖಾನ್ವಿಲ್ಕರ್, ಡಿ.ವೈ.ಚಂದ್ರಚೂಡ್ ಮತ್ತು ಅಶೋಕ್ ಭೂಷಣ್ ಅವರನ್ನು ಒಳಗೊಂಡ ಸಂವಿಧಾನಿಕ ಪೀಠ ಈ ತೀರ್ಪು ಪ್ರಕಟಿಸಿದೆ.

    ತೀರ್ಪಿನಲ್ಲಿ ಹೇಳಿದ್ದು ಏನು?
    ದೆಹಲಿಯು ಕೇಂದ್ರಾಡಳಿತ ಪ್ರದೇಶವಾಗಿದ್ದರಿಂದ ಪೂರ್ಣ ರಾಜ್ಯದ ಸ್ಥಾನಮಾನ ನೀಡಿದರೆ ರಾಷ್ಟ್ರೀಯ ಹಿತಾಸಕ್ತಿಗೆ ಮಾರಕವಾಗುತ್ತದೆ. ರಾಷ್ಟ್ರೀಯ ಹಿತಾಸಕ್ತಿಗೆ ಮಾರಕವಾಗುವ ಹಿನ್ನೆಲೆಯಲ್ಲಿ ಯಾವುದೇ ಚುನಾಯಿತ ಸರ್ಕಾರಕ್ಕೆ ದೆಹಲಿಯ ಸಂಪೂರ್ಣ ಅಧಿಕಾರ ಕೊಡಲು ಸಾಧ್ಯವಿಲ್ಲ.

    ದೆಹಲಿಯು ರಾಷ್ಟ್ರದ ರಾಜಧಾನಿಯಾಗಿರುವುದರಿಂದ ಕೇಂದ್ರ ಸರ್ಕಾರವು ಕೂಡ ಅಧಿಕಾರವನ್ನು ಹೊಂದಿರುತ್ತದೆ. ಮಿಲಿಟರಿ, ರಕ್ಷಣಾ ಹಾಗೂ ಸಾಕಷ್ಟು ವಿಷಯಕ್ಕೆ ಸಂಬಂಧಿಸಿ ಎಲ್ಲಾ ಕೇಂದ್ರ ಕಛೇರಿಗಳು ದೆಹಲಿಯಲ್ಲಿರುವುದರಿಂದ ಸ್ವತಂತ್ರ ರಾಜ್ಯದ ಸ್ಥಾನಮಾನ ನೀಡಲು ಸಾಧ್ಯವಿಲ್ಲ. ಸಂವಿಧಾನವನ್ನು ಪಾಲಿಸುವುದು ಪ್ರತಿಯೊಬ್ಬರ ಕರ್ತವ್ಯ ಮತ್ತು ಜವಾಬ್ದಾರಿಯಾಗಿರುತ್ತದೆ.

    ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಸಂಬಂಧ ಆರೋಗ್ಯಕರವಾಗಿರಬೇಕು. ನಿರಂಕುಶವಾದ ಮತ್ತು ಅರಾಜಕತೆಗೆ ಸಂವಿಧಾನದಲ್ಲಿ ಸ್ಥಳವಿಲ್ಲ. ಲೆಫ್ಟಿನೆಂಟ್ ಗರ್ವನರ್ ರಾಜ್ಯದೊಂದಿಗೆ ಸೌಹಾರ್ದಯುತವಾಗಿ ಕಾರ್ಯನಿರ್ವಹಿಸಬೇಕು. ಲೆಫ್ಟಿನೆಂಟ್ ಗವರ್ನರ್ ಮತ್ತು ಸಚಿವರ ನಡುವೆ ಹೊಂದಾಣಿಕೆ ಅಗತ್ಯವಾಗಿರಬೇಕು.

    ಸಂವಿಧಾನಾತ್ಮಕ ಅವಕಾಶವಿರದ ಹೊರತು ಲೆಫ್ಟಿನೆಂಟ್ ಗವರ್ನರ್ ಸ್ವಂತತ್ರ ಆಡಳಿತ ನಡೆಸಲು ಸಾಧ್ಯವಿಲ್ಲ ಹಾಗೂ ಸರ್ಕಾರದ ಪ್ರತಿರೋಧಿಯಾಗಿ ವರ್ತಿಸುವಂತಿಲ್ಲ. ಎಲ್ಲ ವಿಚಾರಗಳನ್ನು ರಾಷ್ಟ್ರಪತಿಗಳಿಗೆ ಪ್ರಸ್ತಾಪಿಸುವ ಅಗತ್ಯವಿರುವುದಿಲ್ಲ. ದೆಹಲಿಯ ಚುನಾಯಿತ ಸರ್ಕಾರವನ್ನು ಲೆಫ್ಟಿನೆಂಟ್ ಗವರ್ನರ್ ಗೌರವಿಸಬೇಕು ಮತ್ತು ಸಚಿವ ಸಂಪುಟದೊಂದಿಗೆ ಸಲಹೆ ಮತ್ತು ಸಹಕಾರ ಪಡೆದುಕೊಂಡು ಆಡಳಿತ ನಡೆಯಬೇಕು. ನಿರ್ಣಾಯಕ ಸಂದರ್ಭಗಳಲ್ಲಿ ಮಾತ್ರ ಲೆಫ್ಟಿನೆಂಟ್ ಗವರ್ನರ್ ವಿಶೇಷ ಅಧಿಕಾರವನ್ನು ಬಳಸುವ ಅಧಿಕಾರವನ್ನು ಹೊಂದಿರುತ್ತಾರೆ.

    ಮೊದಲು ದೆಹಲಿ ಆಡಳಿತ ಹೇಗಿತ್ತು?
    ದೆಹಲಿಯ ಭೂಮಿ, ಕಾನೂನು ವ್ಯವಸ್ಥೆ, ಪೊಲೀಸ್ ಅಧಿಕಾರಿಗಳು ಹಾಗೂ ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದರೆ ಕಡ್ಡಾಯವಾಗಿ ಲೆಫ್ಟಿನೆಂಟ್ ಗವರ್ನರ್ ಅನುಮತಿ ಪಡೆದುಕೊಳ್ಳಬೇಕಾಗಿತ್ತು. ಇದರಿಂದಾಗಿ ಚುನಾಯಿತ ಸರ್ಕಾರಕ್ಕೆ ಯಾವುದೇ ಸ್ವತಂತ್ರ ಅಧಿಕಾರ ನಿರ್ವಹಿಸುವ ಅಧಿಕಾರವಿರುತ್ತಿರಲಿಲ್ಲ. ನೀರು, ವಿದ್ಯುತ್, ಆಹಾರ ಮತ್ತು ನಾಗರಿಕ ಸರಬರಾಜು, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ, ಸಮಾಜ ಕಲ್ಯಾಣ ಇಲಾಖೆ ಸಂಬಂಧಪಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಲು ಸರ್ಕಾರಕ್ಕೆ ಅನುಮತಿ ಇದೆ. ಉಳಿದ ವಿಚಾರಗಳಿಗೆ ಸಂಬಂಧಿಸಿದಂತೆ ಸರ್ಕಾರ ತೆಗೆದುಕೊಳ್ಳುವ ನಿರ್ಧಾರವನ್ನು ಲೆಫ್ಟಿನೆಂಟ್ ಗವರ್ನರ್ ತಡೆಹಿಡಿಯಲು ಅವಕಾಶವಿತ್ತು. ಈ ವಿಚಾರವನ್ನು ಮುಂದಿಟ್ಟುಕೊಂಡು ಆಪ್ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲು ಏರಿತ್ತು.

    ತೀರ್ಪಿನಿಂದಾದ ಬದಲಾವಣೆ ಏನು?
    ಲೆಫ್ಟಿನೆಂಟ್ ಪರಮಾಧಿಕಾರ ಹೊಂದಿರುವಂತೆ ಅಧಿಕಾರ ನಡೆಸುವಂತಿಲ್ಲ. ದೆಹಲಿಯ ಅಭಿವೃದ್ದಿ ದೃಷ್ಟಿಯಿಂದ ಯಿಂದ ಚುನಾಯಿತ ಸರ್ಕಾರದ ಜೊತೆಗೂಡಿ ಪರಸ್ಪರ ಸಹಕಾರ ಮತ್ತು ಸಹಭಾಳ್ವೆಯಿಂದ ಕಾರ್ಯನಿರ್ವಹಿಸಬೇಕು. ಯಾವುದೇ ಅಧಿಕಾರ ನಿರ್ಣಯ ತೆಗೆದುಕೊಳ್ಳಬೇಕಾದಲ್ಲಿ ಚುನಾಯಿತ ಸರ್ಕಾರದ ಜೊತೆಗೂಡಿ ನಿರ್ಧಾರ ಕೈಗೊಳ್ಳಬೇಕಾಗಿದೆ.

    ಸುಪ್ರೀಂ ಕೋರ್ಟ್ ತೀರ್ಪು ಹೊರಬಿದ್ದ ನಂತರ ತಮ್ಮ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಇದು ದೆಹಲಿ ಜನತೆಗೆ ಸಿಕ್ಕ ದೊಡ್ಡ ಗೆಲುವು, ಪ್ರಜಾಪ್ರಭುತ್ವದ ವಿಜಯ ಎಂದು ಹಾಕಿಕೊಂಡಿದ್ದಾರೆ.

    ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿ ಸೋಡಿಯ ಸಹ ತಮ್ಮ ಟ್ವಿಟ್ಟರ್ ನಲ್ಲಿ, ಇದೊಂದು ಮಹತ್ತರ ತೀರ್ಮಾನವಾಗಿದ್ದು, ಇದರಿಂದಾಗಿ ದೆಹಲಿ ಸರ್ಕಾರ ಪ್ರತಿಯೊಂದು ಅನುಮತಿಗಾಗಿ ಲೆಫ್ಟಿನೆಂಟ್ ಗವರ್ನರ್ ಗೆ ಕಡತಗಳನ್ನು ರವಾನಿಸುವ ಅಗತ್ಯವಿಲ್ಲ. ಇದರಿಂದಾಗಿ ಯಾವುದೇ ಕಾರ್ಯಗಳು ಕುಂಠಿತಗೊಳ್ಳುವುದಿಲ್ಲ ಇದು ಪ್ರಜಾಪ್ರಭುತ್ವದ ಗೆಲುವು. ಸುಪ್ರೀಂ ಕೋರ್ಟ್‍ಗೆ ಧನ್ಯವಾದಗಳು ಎಂದು ಹಾಕಿಕೊಂಡಿದ್ದಾರೆ.

    ದೆಹಲಿ ಸರ್ಕಾರದ ಪರವಾಗಿ ಕಾಂಂಗ್ರೆಸ್ ಮುಖಂಡ ಚಿದಂಬರಂ, ಮಾಜಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಇಂದಿರಾ ಜೈಸಿಂಗ್ ಹಾಗೂ ಸಾಲಿಸಿಟರ್ ಜನರಲ್ ಗೋಪಾಲ್ ಸುಬ್ರಮಣಿಯನ್ ಸೇರಿದಂತೆ ಹಲವು ಹಿರಿಯ ವಕೀಲರು ಕೋರ್ಟ್ ನಲ್ಲಿ ವಾದಿಸಿದ್ದರು.  ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಏನಿದೆ ಪಿಡಿಎಫ್ ಕಾಪಿ ಡೌನ್ ಲೋಡ್ ಮಾಡಲು ಕ್ಲಿಕ್ ಮಾಡಿ..DelhiPowerTussle Supreme Court Verdict