Tag: ತಾತ್ಕಾಲಿಕ ಸೇತುವೆ

  • ಕೊಚ್ಚಿ ಹೋದ ಸೇತುವೆ, ಮೈದುಂಬಿ ಹರಿಯೋ ನದಿಯ ಒಡಲೇ ದಾರಿ!

    ಕೊಚ್ಚಿ ಹೋದ ಸೇತುವೆ, ಮೈದುಂಬಿ ಹರಿಯೋ ನದಿಯ ಒಡಲೇ ದಾರಿ!

    ಚಿಕ್ಕಮಗಳೂರು: ಓಡಾಡೋದಕ್ಕೆ ರಸ್ತೆ ಇಲ್ಲದೆ ಮೈದುಂಬಿ ಹರಿಯೋ ಹೇಮಾವತಿ ನದಿಯೊಳಗೆ ಸ್ಥಳೀಯರು ಒಬ್ಬರಿಗೊಬ್ಬರು ಕೈ ಹಿಡಿದುಕೊಂಡು ನದಿ ದಾಟುವಂತಹಾ ದುಸ್ಸಾಹಸಕ್ಕೆ ಕೈಹಾಕತ್ತಿರೋ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪದ ಬಂಕೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಇದ್ದ ಸೇತುವೆ ಕಳೆದ ಮಲೆಗಾಲದಲ್ಲಿ ನೀರಿನ ರಭಸಕ್ಕೆ ಕೊಚ್ಚಿ ಹೋಗಿತ್ತು.

    ಸೇತುವೆ ಕೊಚ್ಚಿ ಹೋಗಿದ್ದ ವೇಳೆ ಶಾಸಕರು, ಸಚಿವರು ಸ್ಥಳಕ್ಕೆ ಭೇಟಿ ನೀಡಿ ಸೇತುವೆ ನಿರ್ಮಿಸಿಕೊಡುವ ಭರವಸೆ ನೀಡಿದ್ದರು. ಆದರೆ ಜನನಾಯಕರು ಭರವಸೆ ಭರವಸೆಯಾಗೇ ಉಳಿದಿದೆ. ಸೇತುವೆಗೆ ತೀವ್ರ ಹಾನಿಯಾಗಿದ್ದರಿಂದ ಸ್ಥಳೀಯರೇ ತಾತ್ಕಾಲಿಕ ಸೇತುವೆ ನಿರ್ಮಿಸಿಕೊಂಡಿದ್ದರು. ಆದರೆ, ಕಳೆದೊಂದು ವಾರದಿಂದ ಜಿಲ್ಲೆಯ ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗುತ್ತಿದೆ. ಅದರಲ್ಲೂ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ಬಣಕಲ್, ಬಾಳೂರು, ಸುಂಕಸಾಲೆ, ಚಾರ್ಮಾಡಿ ಘಾಟಿಯಲ್ಲಿ ಧಾರಾಕಾರ ಮಳೆಯಾಗುತ್ತಿರುವುದರಿಂದ ಬಂಕೇನಹಳ್ಳಿಯಲ್ಲಿ ಸ್ಥಳೀಯರೇ ನಿರ್ಮಿಸಿಕೊಂಡಿದ್ದ ತಾತ್ಕಾಲಿಕ ಸೇತುವೆ ಕೂಡ ಕೊಚ್ಚಿ ಹೋಗಿದೆ.

    ಸೇತುವೆ ಕೂಡ ಕೊಚ್ಚಿ ಹೋಗಿದ್ದರಿಂದ ಈ ಭಾಗದ ಸುಮಾರು ನಾಲ್ಕೈದು ಹಳ್ಳಿಯ ಜನ ಬೇರೆ ದಾರಿ ಇಲ್ಲದೆ ಕಂಗಾಲಾಗಿದ್ದಾರೆ. ತುರ್ತು ಸಂದರ್ಭದಲ್ಲಿ ಪಟ್ಟಣಕ್ಕೆ ಬರಬೇಕಾದರೆ ಗ್ರಾಮಸ್ಥರು ನೀರಿಗೆ ಇಳಿದು ನಡೆದೇ ದಡ ಸೇರಬೇಕಾಗಿದೆ. ಈ ಭಾಗದಲ್ಲಿ ನಿರಂತರ ಮಳೆಯಾಗುತ್ತಿದ್ದು ನೀರಿನ ಪ್ರಮಾಣ ಕೂಡ ಏರುತ್ತಲೇ ಇದೆ. ಸ್ಥಳೀಯರು ಅಗತ್ಯ ಹಾಗೂ ಅನಿವಾರ್ಯದ ಕೆಲಸಕ್ಕಾಗಿ ಜೀವದ ಹಂಗು ತೊರೆದು ಮಂಡಿ-ತೊಡೆ ಮಟ್ಟದ ನೀರಿಗಿಳಿದು ಅದರಲ್ಲಿ ಒಬ್ಬೊರ ಕೈ ಮತ್ತೊಬ್ಬರು ಹಿಡಿದು ನದಿ ದಾಟುತ್ತಿದ್ದಾರೆ.

    ಜನಪ್ರತಿನಿಧಿಗಳು ಕೂಡಲೇ ನೆರವಿಗೆ ಬರಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ. ಮಳೆಗಾಲವಾದ್ದರಿಂದ ಸೇತುವೆ ನಿರ್ಮಾಣ ಅಸಾಧ್ಯ ಹಾಗಾಗಿ, ಇಲ್ಲಿ ಅನಾಹುತವೊಂದು ಸಂಭವಿಸೋ ಮುನ್ನ ಜನಪ್ರತಿನಿಗಳು ಎಚ್ಚೆತ್ತುಕೊಂಡು ಸ್ಥಳೀಯರಿಗೆ ಓಡಾಡಲು ಬೇರೆ ಸೌಲಭ್ಯವನ್ನಾದರೂ ಕಲ್ಪಿಸಿಕೊಡಬೇಕೆಂದು ಆಗ್ರಹಿಸಿದ್ದಾರೆ.

    &nbsp

  • ಅಘನಾಶಿನಿ ಆಕ್ರೋಶಕ್ಕೆ ಕೊಚ್ಚಿ ಹೋದ ಬ್ರಿಡ್ಜ್- 1 ಲಕ್ಷ ವೆಚ್ಚದಲ್ಲಿ ಗ್ರಾಮಸ್ಥರಿಂದ್ಲೇ ತಾತ್ಕಾಲಿಕ ಸೇತುವೆ

    ಅಘನಾಶಿನಿ ಆಕ್ರೋಶಕ್ಕೆ ಕೊಚ್ಚಿ ಹೋದ ಬ್ರಿಡ್ಜ್- 1 ಲಕ್ಷ ವೆಚ್ಚದಲ್ಲಿ ಗ್ರಾಮಸ್ಥರಿಂದ್ಲೇ ತಾತ್ಕಾಲಿಕ ಸೇತುವೆ

    – ಮರ, ಹಲಗೆಯಿಂದ ಕಟ್ಟೇ ಬಿಟ್ಟರು ಜೀವನ ಸೇತುವೆ

    ಕಾರವಾರ: ಕರಾವಳಿ ಭಾಗದಲ್ಲಿ ಪ್ರವಾಹ ಬಂದು ಹಲವು ಊರುಗಳು ಹೊರ ಜಗತ್ತಿನ ಸಂಪರ್ಕವನ್ನೇ ಕಳೆದುಕೊಂಡಿವೆ. ಅದರಲ್ಲೂ ಉತ್ತರ ಕನ್ನಡದಲ್ಲಿ ಅಘನಾಶಿನಿ ಆಕ್ರೋಶಕ್ಕೆ ಹಲವು ಗ್ರಾಮಗಳು ಜಲಾವೃತಗೊಂಡು, ಸೇತುವೆಗಳು ಕೊಚ್ಚಿಕೊಂಡು ಹೋಗಿದೆ.

    ಜಿಲ್ಲೆಯ ಕುಮಟಾ ತಾಲೂಕಿನ ಸೊಪ್ಪಿನಹೊಸಳ್ಳಿ ಗ್ರಾಮಪಂಚಾಯ್ತಿ ವ್ಯಾಪ್ತಿಯ ಸಂತೆಗುಳಿ ಬಳಿಯ ಗ್ರಾಮದಲ್ಲಿ ಅಘನಾಶಿನಿ ನದಿ ಹರಿದು ಹೋಗುತ್ತದೆ. ಆದ್ದರಿಂದ ನದಿಯ ಪ್ರವಾಹದಿಂದಾಗಿ ಗ್ರಾಮದಲ್ಲಿದ್ದ ತೂಗು ಸೇತುವೆ ಕೊಚ್ಚಿಹೋಗಿತ್ತು. ಈ ಹಿನ್ನೆಲೆಯಲ್ಲಿ ಬಂಗಣೆ, ಕಲವೆ, ಮೊರಸೆ ಗ್ರಾಮಕ್ಕೆ ಹೊರಗಿನ ಸಂಪರ್ಕ ಸಂಪೂರ್ಣ ಕಡಿದು ಹೋಗಿತ್ತು.

    ಈ ಹಿಂದೆಯೇ ಗ್ರಾಮಸ್ಥರು ಸರ್ಕಾರಕ್ಕೆ ಸೇತುವೆ ನಿರ್ಮಿಸಿ ಕೊಡಿ ಎಂದು ಮನವಿ ಕೊಟ್ಟಿದ್ದರು. ಆದರೆ ಈ ಬಗ್ಗೆ ಸರ್ಕಾರ ತಲೆ ಕೆಡಿಸಿಕೊಂಡಿರಲಿಲ್ಲ. ಎಷ್ಟೇ ಬಾರಿ ಮನವಿ ಮಾಡಿದರೂ ಸ್ಪಂದಿಸದ ಸರ್ಕಾರದಿಂದ ಬೇಸತ್ತಿದ್ದ ಗ್ರಾಮಸ್ಥರು ತಮ್ಮ ಕೈಯಿಂದ ಒಂದು ಲಕ್ಷಕ್ಕೂ ಹೆಚ್ಚು ಹಣವನ್ನು ಖರ್ಚು ಮಾಡಿ, ಯಾರ ಸಹಾಯವನ್ನೂ ಬೇಡದೇ ಮರದ ಸೇತುವೆ ನಿರ್ಮಾಣ ಮಾಡಿದ್ದಾರೆ.

    ಊರಿನ ಜನರಿಂದ ಹಣವನ್ನು ಸಂಗ್ರಹಿಸಿ ತಾತ್ಕಾಲಿಕ ಸೇತುವೆ ಕಟ್ಟಿ, ಗ್ರಾಮಸ್ಥರು ಓಡಾಟ ನಡೆಸುತ್ತಿದ್ದಾರೆ. ಅಲ್ಲದೆ ತಮ್ಮ ಕಷ್ಟಕ್ಕೆ ಸ್ಪಂದಿಸದ ಅಧಿಕಾರಿಗಳಿಗೆ ಹಾಗೂ ಸರ್ಕಾರದ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.

    ಪ್ರವಾಹದಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ ಅಧಿಕಾರಿಗಳು, ಜನಪ್ರತಿನಿಧಿಗಳು ಮಾತ್ರ ನಮ್ಮ ನೆರವಿಗೆ ಬಂದಿಲ್ಲ. ಈಗಾಗಲೇ ಹೊಲ, ಗದ್ದೆ, ತೋಟಗಳು ಪ್ರವಾಹಕ್ಕೆ ಹಾನಿಗೊಳಗಾಗಿ ಸಂಪೂರ್ಣ ನಾಶವಾಗಿದೆ. ಯಾರೂ ನಮ್ಮ ಸಹಾಯಕ್ಕೆ ಬಾರದ ಕಾರಣಕ್ಕೆ ನಾವೇ ಹಣವನ್ನು ಸಂಗ್ರಹಿಸಿ ತಾತ್ಕಾಲಿಕ ಸೇತುವೆ ಕಟ್ಟಿದ್ದೇವೆ. ಈ ಬಗ್ಗೆ ಸರ್ಕಾರ ಹಾಗೂ ಅಧಿಕಾರಿಗಳು ಗಮನಹರಿಸಿ ಗ್ರಾಮದಲ್ಲಿ ಸೇತುವೆ ನಿರ್ಮಿಸಿ ಕೊಡಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

  • ಬೀದರ್ ನಲ್ಲಿ ಭಾರೀ ಮಳೆ: ಸಂಪರ್ಕ ಕಳೆದುಕೊಂಡು ಒದ್ದಾಡುತ್ತಿದ್ದಾರೆ ಗ್ರಾಮಸ್ಥರು

    ಬೀದರ್ ನಲ್ಲಿ ಭಾರೀ ಮಳೆ: ಸಂಪರ್ಕ ಕಳೆದುಕೊಂಡು ಒದ್ದಾಡುತ್ತಿದ್ದಾರೆ ಗ್ರಾಮಸ್ಥರು

    ಬೀದರ್: ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು ಔರಾದ್ ತಾಲೂಕಿನ ಗ್ರಾಮದಲ್ಲಿ ನಿರ್ಮಾಣ ಹಂತದ ಸೇತುವೆಯ ಪಕ್ಕ ಹಾಕಲಾಗಿದ್ದ ತಾತ್ಕಾಲಿಕ ಸೇತುವೆಯೊಂದು ಕೊಚ್ಚಿ ಹೋಗಿದೆ.

    ನಿಡೋದಾ ಗ್ರಾಮದಲ್ಲಿ ತಾತ್ಕಾಲಿಕವಾಗಿ ನಿರ್ಮಾಣಗೊಂಡಿದ್ದ ಸೇತುವೆ ಕೊಚ್ಚಿ ಹೋದ ಪರಿಣಾಮ 2 ಸಾವಿರಕ್ಕೂ ಹೆಚ್ಚು ಜನ ವಸತಿ ಇರುವ ಗ್ರಾಮ ಈಗ ಸಂಪರ್ಕ ಕಳೆದುಕೊಂಡಿದೆ.

    ನಿಡೋದಾ ಗ್ರಾಮದ ಬಳಿ ಮಂಜ್ರಾ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಮಾಡುತ್ತಿದ್ದು, ಈ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಸೇತುವೆಯೊಂದನ್ನು ನಿರ್ಮಿಸಲಾಗಿತ್ತು. ಆದರೆ ಜಿಲ್ಲೆಯಾದ್ಯಂತ ಮಳೆ ಹೆಚ್ಚಾಗಿದ್ದರಿಂದ ಮಂಜ್ರಾ ನದಿ ನೀರಿನ ಪ್ರಮಾಣ ಹೆಚ್ಚಾಗಿ ತಡರಾತ್ರಿ ತಾತ್ಕಾಲಿಕ ಸೇತುವೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ.

    ಸುಮಾರು 2000 ಜನವಸತಿ ಹೊಂದಿರುವ ನಿಡೋದಾ ಗ್ರಾಮವು ತಡರಾತ್ರಿಯಿಂದ ಸಂಪರ್ಕ ಕಳೆದುಕೊಂಡಿದೆ. ಈ ಗ್ರಾಮಕ್ಕೆ ಈ ದಾರಿ ಹೊರತು ಪಡಿಸಿ ಯಾವುದೇ ಅನ್ಯ ದಾರಿಗಳಿಲ್ಲದ್ದರಿಂದ ಸಂಚಾರ ಇಲ್ಲದೆ ಗ್ರಾಮಸ್ಥರು ಪರದಾಡುವ ಸ್ಥಿತಿ ಎದುರಾಗಿದೆ.

    ಗ್ರಾಮಸ್ಥರು ಊರಿಂದ ಹೊರಗೆ ಮತ್ತು ಒಳಗೆ ಬಾರದಂತಹ ಅಸಹಾಯಕ ಸ್ಥಿತಿ ಎದುರಾಗಿದೆ. ಗ್ರಾಮಸ್ಥರು ಮಳೆ ಅವಾಂತರದಿಂದ ಒದ್ದಾಡುತ್ತಿದ್ದರೂ, ಇಲ್ಲಿಯವರೆಗೂ ಯಾವುದೇ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿಲ್ಲ. ಇವರೆಲ್ಲರೂ  ಪರಿಷತ್ ಚುನಾವಣೆಯಲ್ಲಿ ಬ್ಯುಸಿ ಆಗಿರುವುದುದರಿಂದ ಸ್ಥಳಕ್ಕೆ ಭೇಟಿ ನೀಡಿಲ್ಲವೆಂದು ತಿಳಿದು ಬಂದಿದೆ.