Tag: ತಲಕಾವೇರಿ

  • ರಾಷ್ಟ್ರಪತಿಗಳಿಂದ ನಾಳೆ ತಲಕಾವೇರಿಯಲ್ಲಿ ಪೂಜೆ- ಮಂಜಿನ ನಗರಿ ಸಜ್ಜು

    ರಾಷ್ಟ್ರಪತಿಗಳಿಂದ ನಾಳೆ ತಲಕಾವೇರಿಯಲ್ಲಿ ಪೂಜೆ- ಮಂಜಿನ ನಗರಿ ಸಜ್ಜು

    – ಜನರಲ್ ತಿಮ್ಮಯ್ಯರ ಸನ್ನಿಸೈಡ್ ಮ್ಯೂಸಿಯಂ ಉದ್ಘಾಟಿಸಲಿರುವ ಕೋವಿಂದ್

    ಮಡಿಕೇರಿ: ಸೇನೆಯ ಜನರಲ್ ಕೆ.ಎಸ್.ತಿಮ್ಮಯ್ಯ ಅವರ ಸನ್ನಿಸೈಡ್ ಮ್ಯೂಸಿಯಂ ಉದ್ಘಾಟನೆಗೆ ಮಡಿಕೇರಿಗೆ ಆಗಮಿಸುತ್ತಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಕಾವೇರಿ ಉಗಮಸ್ಥಾನ ತಲಕಾವೇರಿಯಲ್ಲಿ ಸ್ವಕುಟುಂಬ ಸಮೇತರಾಗಿ ನಾಳೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.

    ಈಗಾಗಲೇ ತಲಕಾವೇರಿಗೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಿದ್ದು, ತಲಕಾವೇರಿಯ ಹೆಬ್ಬಾಗಿಲಿನಲ್ಲೇ ಸೇನೆ ಬಿಡಾರಗಳನ್ನು ಹಾಕಿ ಹೈ ಅಲರ್ಟ್ ಆಗಿದೆ. ತಲಕಾವೇರಿಯ ಎಲ್ಲಡೆ ರೆಡ್ ಕಾರ್ಪೆಟ್ ಹಾಕಿ ಸಿದ್ಧಗೊಳಿಸಲಾಗಿದೆ. ಬಾಗಮಂಡಲ ಸಮೀಪದ ಚೆಟ್ಟಿಮಾನಿಯಲ್ಲಿ ಸಿದ್ಧಗೊಂಡಿರುವ ಹೆಲಿಪ್ಯಾಡ್ ನಲ್ಲಿ ನಾಳೆ ಬೆಳಗ್ಗೆ 11 ಗಂಟೆಗೆ ರಾಮನಾಥ್ ಕೋವಿಂದ್ ಅವರು ಇಳಿಯಲಿದ್ದಾರೆ. ಬಳಿಕ ಕಾರಿನ ಮೂಲಕ ತಲಕಾವೇರಿಗೆ ತೆರಳಿಲಿದ್ದು, 12:30ರ ವರೆಗೆ ತಲಕಾವೇರಿಯಲ್ಲಿ ಪೂಜೆ ಸಲ್ಲಿಸಲಿದ್ದಾರೆ.

    ನಾಳೆ ಬೆಳಗ್ಗೆ 10 ಗಂಟೆಯಿಂದ 1 ಗಂಟೆಯವರೆಗೆ ಬಾಗಮಂಡಲದಿಂದ ತಲಕಾವೇರಿಯವರೆಗೆ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ. ಪೊಲೀಸ್, ಸೇನಾಧಿಕಾರಿಗಳು, ಅಗ್ನಿಶಾಮಕ ದಳ ಮತ್ತು ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ರೂಟ್ ಮಾರ್ಚ್ ಮಾಡಿ ಪೂರ್ವ ತಯಾರಿ ನಡೆಸಿದ್ದಾರೆ.

    ಸೇನೆಯ ಅತ್ಯುನ್ನತ್ತ ಹುದ್ದೆಯನ್ನು ಅಲಂಕರಿಸಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತ್ತಿಸಿಕೊಂಡಿದ್ದ ಕೊಡಗಿನ ಕೆ.ಎಸ್.ತಿಮ್ಮಯ್ಯ ಅವರ ಸನ್ನಿಸೈಡ್ ಮ್ಯೂಸಿಯಂ ಅನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ನಾಳೆ ಉದ್ಘಾಟಿಸಲಿದ್ದಾರೆ. ಮ್ಯೂಸಿಯಂ ಈಗಾಗಲೇ ಸಂಪೂರ್ಣ ಸಿದ್ಧಗೊಂಡಿದೆ. ಯುದ್ಧಟ್ಯಾಂಕರ್, ಸೂಪರ್ ಸಾನಿಕ್ ಯುದ್ಧವಿಮಾನ ಮುಂತಾದವುಗಳನ್ನು ಅಂತಿಮವಾಗಿ ಸಿದ್ಧಗೊಳಿಸಲಾಗುತ್ತಿದೆ.

    ಇಡೀ ಮ್ಯೂಸಿಯಂ ಸಿಂಗಾರಗೊಂಡಿದ್ದು, ವೈಮಾನಿಕ ದೃಶ್ಯವನ್ನು ನೀವೂ ಕಣ್ತುಂಬಿಕೊಳ್ಳಬಹುದು. ಯುದ್ಧ ಸ್ಮಾರಕ ಮತ್ತು ಮ್ಯೂಸಿಯಂ ಒಳಗೆ ಹಾಗೂ ಹೊರಗೆ ಸಂಪೂರ್ಣ ಸೈನಿಕರು ಮತ್ತು ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿದೆ. ಮ್ಯೂಸಿಯಂ ಒಳಗೆ ಈಗಾಗಲೇ ಡಾಗ್ ಸ್ಕ್ವಾಡ್ ಕೂಡ ಪರಿಶೀಲನೆ ನಡೆಸಿದ್ದು, ಮ್ಯೂಸಿಯಂ ಮತ್ತು ಯುದ್ಧ ಸ್ಮಾರಕ ಸೇರಿದಂತೆ ಎಲ್ಲೆಡೆ ಸ್ಯಾನಿಟೈಸಿಂಗ್ ಮಾಡಲಾಗುತ್ತಿದೆ. ಸಂಪೂರ್ಣ ಪೊಲೀಸ್ ಮತ್ತು ಸೈನಿಕರ ಹಿಡಿತದಲ್ಲಿದೆ.

    ನಾಳೆ ಮಧ್ಯಾಹ್ನ ಒಂದು ಗಂಟೆಗೆ ಮಡಿಕೇರಿಯ ಎಫ್‍ಎಂಸಿ ಕಾಲೇಜು ಮೈದಾನದಲ್ಲಿ ನಿರ್ಮಾಣ ಮಾಡಿರುವ ಹೆಲಿಪ್ಯಾಡ್ ಗೆ ಬರಲಿರುವ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಅಲ್ಲಿಂದ ಆರ್ಮಿ ಕ್ಯಾಂಟೀನ್, ಎಲ್‍ಐಸಿ ರಸ್ತೆ ರಾಜಾಸೀಟ್ ರಸ್ತೆ ಮತ್ತು ಈಸ್ಟ್ ಎಂಡ್ ಹೊಟೇಲ್ ರಸ್ತೆ ಮೂಲಕ ಸುದರ್ಶನ್ ಗೆಸ್ಟ್ ಹೌಸ್ ಗೆ ತೆರಳಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ತಿಮ್ಮಯ್ಯ ಮ್ಯೂಸಿಯಂಗೆ ಆಗಮಿಸಲಿರುವ ರಾಮನಾಥ್ ಕೋವಿಂದ್, 45 ನಿಮಿಷಗಳ ಕಾಲ ಮ್ಯೂಸಿಯಂನಲ್ಲೇ ಇರಲಿದ್ದಾರೆ. ಬಳಿಕ ವಾಪಸ್ ಬೆಂಗಳೂರಿಗೆ ತೆರಳಲಿದ್ದಾರೆ.

  • ತಲಕಾವೇರಿ ತೀರ್ಥೋದ್ಭವಕ್ಕೆ ಭಕ್ತರಿಗೆ ನಿರ್ಬಂಧ

    ತಲಕಾವೇರಿ ತೀರ್ಥೋದ್ಭವಕ್ಕೆ ಭಕ್ತರಿಗೆ ನಿರ್ಬಂಧ

    ಮಡಿಕೇರಿ: ಇದೇ ಅಕ್ಟೋಬರ್ 17 ರಂದು ಕನ್ನಡನಾಡಿನ ಜೀವ ನದಿ ತಲಕಾವೇರಿಯಲ್ಲಿ ತೀರ್ಥೋದ್ಭವ ಜರುಗಲಿದೆ. ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ಕಾವೇರಿ ತೀರ್ಥೋದ್ಭವದ ವೇಳೆಯಲ್ಲಿ ಭಕ್ತರಿಗೆ ನಿರ್ಬಂಧ ಮಾಡಲಾಗಿದೆ ಎಂದು ಕೊಡಗು ಜಿಲ್ಲಾಧಿಕಾರಿ ಅನೀಸ್ ಕೆ ಜಾಯ್ ತಿಳಿಸಿದ್ದಾರೆ.

    ಮಡಿಕೇರಿ ತಾಲೂಕಿನ ತಲಕಾವೇರಿಯಲ್ಲಿ ತೀರ್ಥೋದ್ಭವ ಜನದಟ್ಟಣೆ ಆಗದಂತೆ ಸಾಂಪ್ರದಾಯಿಕ ವಿಧಿ-ವಿಧಾನಗಳಿಗೆ ಧಕ್ಕೆಯಾಗದಂತೆ ಪೂಜಾ ವಿಧಿ-ವಿಧಾನಗಳು ನಡೆಯಲಿದೆ. ಅಷ್ಟೇ ಅಲ್ಲದೇ ಈ ಬಾರಿ ತೀರ್ಥೋದ್ಭವದಲ್ಲಿ ಸ್ವಯಂಸೇವಕರು ಹಾಗೂ ಅರ್ಚಕಗಳಿಗೂ ಆರ್‍ಟಿಪಿಸಿಆರ್ ಕೊರೊನಾ ಟೆಸ್ಟ್ ಕಡ್ಡಾಯ. ಕೊವೀಡ್ ಪರೀಕ್ಷಾ ತಪಾಸಣೆಗೆ ಒಳಗಾಗಿ ನೆಗೆಟಿವ್ ವರದಿ ಬರುವವರಿಗೆ ಕಾರ್ಯಕ್ರಮಕ್ಕೆ ಭಾಗವಹಿಸಲು ಪೊಲೀಸ್ ಇಲಾಖೆ ಪಾಸ್ ನೀಡಲಿದೆ.

    ಅಷ್ಟೇ ಅಲ್ಲದೇ ಈ ಬಾರಿ ಅಕ್ಟೋಬರ್ 17 ಮತ್ತು 26 ದಸರಾ ಇರುವ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯ ಎಲ್ಲಾ ಪ್ರವಾಸಿ ತಾಣಗಳನ್ನು ಬಂದ್ ಮಾಡಲಾಗುವುದು. ಪ್ರವಾಸಿಗರು ಸ್ಥಳೀಯರು ಸಹಕಾರಿಸುವಂತೆ ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.

  • ತಗ್ಗಿದ ಮಳೆ ಪ್ರಮಾಣ- ತಲಕಾವೇರಿಗೆ ಭಕ್ತರ ದಂಡು

    ತಗ್ಗಿದ ಮಳೆ ಪ್ರಮಾಣ- ತಲಕಾವೇರಿಗೆ ಭಕ್ತರ ದಂಡು

    ಮಡಿಕೇರಿ: ಅನ್‍ಲಾಕ್ ಬಳಿಕ ಕೊಡಗು ಜಿಲ್ಲೆಯಲ್ಲಿ ತೀವ್ರ ಮಳೆ ಸುರಿದ ಪರಿಣಾಮ ತಲಕಾವೇರಿಯ ಗಜಗಿರಿ ಬೆಟ್ಟ ಕುಸಿದು ಅನಾಹುತ ಸಂಭವಿಸಿತ್ತು. ಹೀಗಾಗಿ ಲಾಕ್‍ಡೌನ್ ನಿಂದ ಐದು ತಿಂಗಳ ಬಳಿಕ ತಲಕಾವೇರಿ ಬಾಗಮಂಡಲ ಸೇರಿದಂತೆ ಪ್ರಮುಖ ದೇವಾಲಯಗಳು ತೆರೆದರೂ ಭಕ್ತರ ಸಂಖ್ಯೆಯಲ್ಲಿ ಕೊರತೆ ಇತ್ತು. ಆದರೀಗ ಮಳೆಯೂ ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದ್ದು, ತಲಕಾವೇರಿಗೆ ಆಗಮಿಸುವ ಭಕ್ತರ ಸಂಖ್ಯೆಯಲ್ಲಿ ಏರಿಕೆಯಾಗಿದೆ.

    ಮಡಿಕೇರಿ ತಾಲೂಕಿನ ಪವಿತ್ರ ಪುಣ್ಯಕ್ಷೇತ್ರ ಕಾವೇರಿ ಉಗಮ ಸ್ಥಾನ ತಲಕಾವೇರಿಯಲ್ಲಿ ಕಾವೇರಿ ಮಾತೆಯ ದರ್ಶನ ಪಡೆದು ಐದು ತಿಂಗಳಾಗಿತ್ತು. ಅನ್‍ಲಾಕ್ ಬಳಿಕ ಬರಬೇಕೆಂದರೆ ಮಳೆ ಆರಂಭವಾಗಿ ಗುಡ್ಡ ಕುಸಿತವಾಯಿತು. ಹೀಗಾಗಿ ಆಗಮಿಸಲು ಸಾಧ್ಯವಾಗಿರಲಿಲ್ಲ. ಇದೀಗ ಮಳೆ ಪ್ರಮಾಣ ತಗ್ಗಿದ್ದು, ಬರಲು ಅವಕಾಶ ಸಿಕ್ಕಿದ್ದು ಖುಷಿಯ ವಿಚಾರವಾಗಿದೆ ಎಂದು ತಲಕಾವೇರಿ ಅಗಮಿಸುವ ಭಕ್ತರು ಸಂತಸ ವ್ಯಕ್ತಪಡಿಸಿದ್ದಾರೆ.

    ಲಾಕ್‍ಡೌನ್ ಆಗಿದ್ದರಿಂದ ಕುಲದೇವರ ಸ್ಥಾನಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಬಳಿಕ ಲಾಕ್‍ಡೌನ್ ಸಡಿಲಿಕೆಯಾದರೂ ಕೊಡಗಿನಲ್ಲಿ ತೀವ್ರ ಮಳೆಯಾಗಿ ತಲಕಾವೇರಿಯಲ್ಲಿ ಭೂಕುಸಿತವಾಗಿ ಬರದಂತಹ ಸ್ಥಿತಿ ನಿರ್ಮಾಣ ಆಗಿತ್ತು. ಇದೀಗ ಅಪಾರ ಪ್ರಮಾಣದಲ್ಲಿ ಭಕ್ತ ದಂಡು ಹರಿದು ಬರುತ್ತಿದ್ದು, ತಲಕಾವೇರಿಗೆ ಪೂಜೆ ಸಲ್ಲಿಸುತ್ತಿದ್ದಾರೆ.

  • ಮೂರು ವರ್ಷಗಳಿಂದ ಬೆಟ್ಟವೆಂದರೆ ಭಯಪಡುತ್ತಿರುವ ಕೊಡಗಿನ ಜನತೆ

    ಮೂರು ವರ್ಷಗಳಿಂದ ಬೆಟ್ಟವೆಂದರೆ ಭಯಪಡುತ್ತಿರುವ ಕೊಡಗಿನ ಜನತೆ

    – ಬೆಟ್ಟದ ಮೇಲೆ ಹೋಂ ಸ್ಟೇ, ಮನೆ ಕಟ್ಟಿಕೊಳ್ಳಿ ಹಿಂದೇಟು

    ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಬ್ರಹ್ಮಗಿರಿ ಬೆಟ್ಟ ಅಪ್ಪಳಿಸಿ ಅರ್ಚಕರ ಮನೆ ನೆಲಸಮವಾಗಿ ನಾಲ್ವರು ಮೃತಪಟ್ಟಿದ್ದರು. ತಲಕಾವೇರಿಯಲ್ಲಿ ಆಗಿದ್ದ ಈ ದುರಂತದಲ್ಲಿ ಕಣ್ಮರೆ ಆಗಿರುವ ಇನ್ನಿಬ್ಬರು ಸುಳಿವು ಇನ್ನೂ ಸಿಕ್ಕಿಲ್ಲ. ಈ ಪ್ರಕರಣ ಮಾಸುವ ಮುನ್ನವೇ ಇದೀಗ ಇನ್ನೂ ಕೆಲ ಗುಡ್ಡಗಳು ಕುಸಿಯುವ ಭೀತಿಯಲ್ಲಿವೆ.

    ಕರ್ನಾಟಕದ ಕಾಶ್ಮೀರ ಎಂದು ಕರೆಸಿಕೊಳ್ಳುವ ಕೊಡಗಿನಲ್ಲಿ ಮೂರು ವರ್ಷಗಳಿಂದ ಆಗುತ್ತಿರುವ ಭೂಕುಸಿತಕ್ಕೆ ಜನರು ಬೆಚ್ಚಿ ಬಿದ್ದಿದ್ದಾರೆ. ಕೆಲವು ಬೆಟ್ಟಗಳಲ್ಲಿ ಮತ್ತೆ ಬಿರುಕುಬಿಟ್ಟಿದ್ದು, ಜನರು ನಿದ್ದೆಬಿಟ್ಟು ರಾತ್ರಿ ಇಡೀ ಪಾರಕಾಯುತ್ತಿದ್ದಾರೆ. ಬೆಟ್ಟದ ಮೇಲೆ ಮನೆ, ಹೋಂ ಸ್ಟೇ, ರೆಸಾರ್ಟ್ ಮಾಡಿ ಪ್ರವಾಸಿಗರನ್ನು ಸೆಳೆಯುತ್ತಿದ್ದ ವ್ಯಾಪಾರಸ್ಥರು, ಕಳೆದ ಮೂರು ವರ್ಷಗಳಿಂದ ಆಗುತ್ತಿರುವ ಭೂಕುಸಿತದಿಂದ ಬೆಟ್ಟಗಳ ಸಹವಾಸವೇ ಬೇಡ ಎನ್ನುವಂತಾಗಿದೆ.

    ವಿರಾಜಪೇಟೆ ನಗರದ ಅಯ್ಯಪ್ಪ ಬೆಟ್ಟದ ತುದಿಯವರೆಗೆ ನೂರಾರು ಜನರು ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಮೂರು ವರ್ಷಗಳಿಂದಲೂ ಆಗಸ್ಟ್ ತಿಂಗಳಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಕಳೆದ ವರ್ಷವೇ ಅಯ್ಯಪ್ಪ ಬೆಟ್ಟದಲ್ಲಿ ಭಾರೀ ಬಿರುಕು ಮೂಡಿತ್ತು. ಆಗಸ್ಟ್ ತಿಂಗಳು ಕಳೆದ ನಂತರ ಮಳೆ ಕಡಿಮೆ ಆಗಿದ್ದರಿಂದ ಅಲ್ಲಿನ ನಿವಾಸಿಗಳು ನಿಟ್ಟುಸಿರು ಬಿಟ್ಟಿದ್ದರು. ಈ ವರ್ಷವೂ ಆಗಸ್ಟ್ ಆರಂಭದಿಂದಲೂ ಭಾರೀ ಮಳೆಯಾಗುತ್ತಿದ್ದು, ಬೆಟ್ಟದ ಹಲವೆಡೆ ಸಣ್ಣ ಪ್ರಮಾಣದಲ್ಲಿ ಕುಸಿದಿದೆ.

    ಕಳೆದ ಬಾರಿ ಬೆಟ್ಟ ಬಿರುಕು ಬಿಟ್ಟ ಜಾಗಕ್ಕೆ ಸಿಮೆಂಟ್ ಹಾಕಿ ಮುಚ್ಚಲಾಗಿತ್ತು. ಈ ಬಾರಿ ಬೆಟ್ಟದ ಮೇಲಿರುವ ಹಲವು ಮನೆಗಳ ಗೋಡೆಗಳಲ್ಲಿ ಬಿರುಕು ಮೂಡಿದ್ದು, ಜನರು ನಿದ್ದೆಬಿಟ್ಟು ರಾತ್ರಿ ಇಡೀ ಪಾರಕಾಯುತ್ತಿದ್ದಾರೆ. ಅದರಲ್ಲೂ ಕಳೆದ ಬಾರಿ ಇದೇ ರೀತಿ ಬಿರುಕು ಬಿಟ್ಟು ಕೆಲವು ದಿನಗಳ ಹಿಂದೆಯಷ್ಟೇ ತಲಕಾವೇರಿಯ ಗಜಗಿರಿ ಬೆಟ್ಟ ಕುಸಿದು ಬಿದ್ದು ಅರ್ಚಕರ ಕುಟುಂಬ ನಾಪತ್ತೆಯಾಗಿತ್ತು. ಈ ದುರಂತದಿಂದ ಬೆಚ್ಚಿಬಿದ್ದಿರುವ ಅಯ್ಯಪ್ಪ ಬೆಟ್ಟದ ನಿವಾಸಿಗಳು ಹಗಲು ರಾತ್ರಿ ಆತಂಕದಲ್ಲೇ ಬದುಕುತ್ತಿದ್ದಾರೆ.

    ವರ್ಷದ ಹಿಂದೆ ಈ ಬೆಟ್ಟ ಬಿರುಕು ಬಿಟ್ಟಾಗ ಜನರನ್ನು ಪರಿಹಾರ ಕೇಂದ್ರಗಳಿಗೆ ಸ್ಥಳಾಂತರ ಮಾಡಲಾಗಿತ್ತು. ಬಳಿಕ ಸಿಮೆಂಟ್ ಹಾಕಿ ಬಿರುಕಿಗೆ ನೀರು ಹೋಗದಂತೆ ಮುಚ್ಚಲಾಗಿತ್ತು. ಆದರೆ ಇದೀಗ ಬೆಟ್ಟ ಅಲ್ಲಲ್ಲಿ ಕುಸಿದಿರುವುದು ಆತಂಕಕ್ಕೆ ಕಾರಣವಾಗಿದೆ. ಈಗಾಗಲೇ ಉಸ್ತುವಾರಿ ಸಚಿವ ವಿ.ಸೋಮಣ್ಣ ಬೆಟ್ಟಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಎಲ್ಲ ಕುಟುಂಬಗಳನ್ನು ಬೇರೆಡೆಗೆ ಸ್ಥಳಾಂತರಿಸಲು ಚಿಂತಿಸಲಾಗಿದೆ. ಮುಂದಿನ ಮಳೆಗಾಲದ ಹೊತ್ತಿಗೆ ಶಾಶ್ವತ ಪರಿಹಾರ ಒದಗಿಸಲಾಗುದು ಎಂದು ವಿರಾಜಪೇಟೆ ಪಟ್ಟಣ ಪಂಚಾಯಿತಿ ಸದಸ್ಯ ರಾಜೇಶ್ ಭರವಸೆ ನೀಡಿದ್ದಾರೆ.

  • ತಲಕಾವೇರಿ ಬ್ರಹ್ಮಗಿರಿ ಬೆಟ್ಟ ಕುಸಿತ ಪ್ರಕರಣ – ಕಾರ್ಯಾಚರಣೆ ಸ್ಥಗಿತ?

    ತಲಕಾವೇರಿ ಬ್ರಹ್ಮಗಿರಿ ಬೆಟ್ಟ ಕುಸಿತ ಪ್ರಕರಣ – ಕಾರ್ಯಾಚರಣೆ ಸ್ಥಗಿತ?

    ಮಡಿಕೇರಿ: ಕೊಡಗಿನ ತಲಕಾವೇರಿ ಬ್ರಹ್ಮಗಿರಿ ಬೆಟ್ಟ ಕುಸಿದು ಇಬ್ಬರು ನಾಪತ್ತೆಯಾಗಿ 15 ದಿನಗಳೇ ಕಳೆದಿವೆ. ಈ ಇಬ್ಬರ ಹುಡುಕಾಟಕ್ಕಾಗಿ ಎನ್.ಡಿ.ಆರ್.ಎಫ್, ಅಗ್ನಿಶಾಮಕ ದಳ ಮತ್ತು ಪೊಲೀಸ್ ಸಿಬ್ಬಂದಿ ಸೇರಿದ್ದಂತೆ 100ಕ್ಕೂ ಹೆಚ್ಚು ಜನರು ನಿರಂತರ ಹುಡುಕಾಟ ನಡೆಸುತ್ತಲೇ ಇದ್ದಾರೆ.

    ಭೂಕುಸಿತದಲ್ಲಿ ಕಣ್ಮರೆಯಾಗಿದ್ದ ಕೇರಳದ ಶ್ರೀನಿವಾಸ್ ಮತ್ತು ನಾರಾಯಣ ಆಚಾರ್ ಅವರ ಪತ್ನಿ ಶಾಂತಾ ಈ ಇಬ್ಬರು ಇನ್ನೂ ಪತ್ತೆಯಾಗಿಲ್ಲ. ಹುಡುಕಾಟ ನಡೆಸಿರುವ ಎನ್.ಡಿ.ಆರ್.ಎಫ್ ತಂಡದ ಕಮಾಂಡರ್ ಇದುವರೆಗೆ ಎಷ್ಟು ಸಾಧ್ಯವೋ ಅಷ್ಟು ಹುಡುಕಿದ್ದೇವೆ. ಮಳೆ ಕೂಡ ಬಿಟ್ಟು ಬಿಟ್ಟು ಬರುತ್ತಲೇ ಇದ್ದು, ಭಾರೀ ಪ್ರಮಾಣದ ಮಂಜು ಸುರಿಯುತ್ತಿದೆ. ಹೀಗಾಗಿ ಇನ್ನೂ ಹುಡುಕಾಡುವುದು ಸವಾಲಿನ ಕೆಲಸ ಎನ್ನುತ್ತಿದ್ದಾರೆ.

    ಒಂದು ವೇಳೆ ರಕ್ಷಣಾ ಕಾರ್ಯಾಚರಣೆ ಸ್ಥಗಿತಗೊಂಡಲ್ಲಿ ಕಳೆದ ಎರಡು ವರ್ಷಗಳಲ್ಲಿ ಭೂಕುಸಿತದಲ್ಲಿ ಕಣ್ಮರೆ ಆಗಿರುವವರನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿದ ರೀತಿಯಲ್ಲಿ ಐದು ಲಕ್ಷ ರೂಪಾಯಿ ಪರಿಹಾರ ಘೋಷಿಸಲಾಗುವುದು ಎಂದು ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

    ಬ್ರಹ್ಮಗಿರಿ ಬೆಟ್ಟ ಕುಸಿದು ಐದು ಜನರು ಕಣ್ಮರೆಯಾಗಿದ್ದರು. ಬಳಿಕ ಅರ್ಚಕ ನಾರಾಯಣ ಆಚಾರ್ ಅವರ ಸಹೋದರ ಆನಂದತೀರ್ಥ ಮತ್ತು ಸಹಾಯಕ ಅರ್ಚಕ ರವಿಕಿರಣ್ ಅವರ ಮೃತದೇಹಗಳು ಪತ್ತೆಯಾಗಿದ್ದವು. ಇನ್ನುಳಿದ ಇಬ್ಬರಿಗಾಗಿ ರಕ್ಷಣಾ ತಂಡಗಳು ನಿರಂತರ ಹುಡುಕಾಟ ನಡೆಸುತ್ತಿದ್ದವು. ಅದರೆ ಇಂದಿಗೂ ಮೃತ ದೇಹ ದೊರಕ್ಕಿಲ್ಲ. ಹೀಗಾಗಿ ಬಹುತೇಕ ಇಂದು ಸಂಜೆಯಿಂದ ಕಾರ್ಯಚರಣೆ ಸ್ಥಗಿತ ಮಾಡುವುದಾಗಿ ಎನ್.ಡಿ.ಆರ್.ಎಫ್ ತಿಳಿಸಿದೆ.

  • ಸ್ವಯಂಕೃತ ಅಪರಾಧದಿಂದ ‘ಕಾವೇರಿ’ ಕೋಪಕ್ಕೆ ತುತ್ತಾದರಾ ಕೊಡಗಿನ ಜನ?

    ಸ್ವಯಂಕೃತ ಅಪರಾಧದಿಂದ ‘ಕಾವೇರಿ’ ಕೋಪಕ್ಕೆ ತುತ್ತಾದರಾ ಕೊಡಗಿನ ಜನ?

    ಮಡಿಕೇರಿ: ಕೊಡಗಿನ ಕುಲದೇವತೆ ಕಾವೇರಿ ಮಾತೆಯ ಭಕ್ತರು ನಾಡಿನೆಲ್ಲೆಡೆ ಇದ್ದಾರೆ. ತಲಕಾವೇರಿಯಲ್ಲಿ ಹುಟ್ಟಿ ನಾಡಿನುದ್ದಕ್ಕೂ ಜೀವಕಳೆ ತುಂಬುವ ಜೀವನದಿ. ಆದರೆ ಕೊಡಗಿನ ಜನರಿಗೆ ಮಾತ್ರ ಕಣ್ಣೀರು ತರಿಸುತ್ತಿದ್ದಾಳೆ. ಕಾವೇರಿ ನದಿ ಹೀಗೆ ತನ್ನೊಡಲ ಜನರಿಗೆ ಸಂಕಷ್ಟ ತಂದಿಟ್ಟಿರುವುದಕ್ಕೆ ಜನರ ಸ್ವಯಂಕೃತ ಅಪರಾಧವೇ ಕಾರಣ ಎಂದು ತಲಕಾವೇರಿ ಮೂಲಸ್ವರೂಪ ರಕ್ಷಣಾ ಸಮಿತಿ ಆರೋಪ ಮಾಡಿದೆ.

    2005 ರಲ್ಲಿ ತಲಕಾವೇರಿಯಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಹಲವು ಕಾಮಗಾರಿಗಳನ್ನು ಮಾಡಲಾಯಿತು. ಇದರ ಪರಿಣಾಮ ಬ್ರಹ್ಮಗಿರಿ ಬೆಟ್ಟದಲ್ಲಿ ಹುಟ್ಟಿ ಬ್ರಹ್ಮಕುಂಡಿಕೆಯಲ್ಲಿ ತೀರ್ಥರೂಪಿಣಿಯಾಗುತ್ತಿದ್ದಳು. ಆದರೆ ಅಭಿವೃದ್ಧಿ ಹೆಸರಿನಲ್ಲಿ ಬ್ರಹ್ಮಕುಂಡಿಕೆ ಮತ್ತು ತೀರ್ಥಕೊಳಗಳಿಗೆ ಕಲ್ಲು ಮತ್ತು ಸಿಮೆಂಟ್ ನಿಂದ ಕಾಮಗಾರಿ ಮಾಡಲಾಯಿತು. ಇದರಿಂದಾಗಿ ಕಾವೇರಿ ಜಲಮೂಲವೇ ಬದಲಾಯಿತು. ಇದರಿಂದಾಗಿ ಇಡೀ ಬೆಟ್ಟವೇ ಕುಸಿದು ಇಂತಹ ಘನಘೋರ ಸ್ಥಿತಿ ನಿರ್ಮಾಣವಾಗಿದೆ ಎಂದು ಸಮಿತಿ ಮುಖಂಡರು ಗಂಭೀರ ಆರೋಪ ಮಾಡುತ್ತಿದ್ದಾರೆ.

    ತಲಕಾವೇರಿಯಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಮಾಡಿದ ಕಾಮಗಾರಿಯಿಂದ ಜಲಮೂಲ ದಿಕ್ಕು ಬದಲಾಯಿಸಿ, ಕುಸಿದಿರುವ ಗಜಗಿರಿ ಬೆಟ್ಟದ ಕಡೆಗೆ ಭೂಮಿಯೊಳಗೆ ಹರಿಯಲು ಆರಂಭಿಸಿತ್ತು. ಈ ಕುರಿತು ಅಷ್ಟಮಂಗಲ ಪ್ರಶ್ನೆಯಲ್ಲೂ ಗೊತ್ತಾಗಿತ್ತು. ಬಳಿಕ ಭೂಗರ್ಭಶಾಸ್ತ್ರಜ್ಞರು ಕೂಡ ಸ್ಪಷ್ಟಪಡಿಸಿದ್ದರು. ಗಜಗಿರಿ ಬೆಟ್ಟದ ಕಡೆಗೆ ಹರಿಯುತ್ತಿದ್ದ ಜಲಮೂಲ ಕಳೆದ ಒಂದು ವರ್ಷದಿಂದ ಅರ್ಚಕ ನಾರಾಯಣ ಆಚಾರ್ ಅವರ ಮನೆ ಬಳಿ ಬರಲು ಆರಂಭಿಸಿತ್ತು. ಆಗಲೇ ಅಷ್ಟಮಂಗಲ ಪ್ರಶ್ನೆ ಸಂದರ್ಭ ಇಲ್ಲಿ ಜಲಗಂಡಾಂತರ ಇದೆ ಎಂದು ಗೊತ್ತಾಗಿತ್ತು. ತಕ್ಷಣವೇ ತಮ್ಮ ಮನೆಯನ್ನು ಖಾಲಿ ಮಾಡುವಂತೆ ಅರ್ಚಕರಿಗೆ ಹಲವು ಬಾರಿ ಹೇಳಿದ್ದೆವು ಎಂದು ಸಮಿತಿ ಸದಸ್ಯರು ತಿಳಿಸಿದ್ದಾರೆ.

    ಈಗ ಗಜಗಿರಿ ಬೆಟ್ಟ ಕುಸಿದಿರುವ ಸ್ಥಳದಲ್ಲಿ ಭಾರೀ ಪ್ರಮಾಣದಲ್ಲಿ ಹರಿಯುತ್ತಿರುವ ಜಲವೇ ಅದೆಲ್ಲವನ್ನೂ ಸ್ಪಷ್ಟಪಡಿಸುತ್ತದೆ ಎನ್ನುತ್ತಾರೆ ಮೂಲ ಸ್ವರೂಪ ರಕ್ಷಣಾ ವೇದಿಕೆ ಮುಖಂಡ ಸೋಮಣ್ಣ.

  • ದುರಂತದ ಬಳಿಕ ತಲಕಾವೇರಿಯಲ್ಲಿ ನಾಳೆ ಪೂಜೆ ಪ್ರಾರಂಭ

    ದುರಂತದ ಬಳಿಕ ತಲಕಾವೇರಿಯಲ್ಲಿ ನಾಳೆ ಪೂಜೆ ಪ್ರಾರಂಭ

    – ನಾಳೆ ಪೂಜೆಗೆ ಪೂರ್ವ ಸಿದ್ಧತೆ ಪರಿಶೀಲಿಸಿದ ಜಿಲ್ಲಾಧಿಕಾರಿ

    ಮಡಿಕೇರಿ: ತಲಕಾವೇರಿಯಲ್ಲಿ ನಾಳೆಯಿಂದ ಪೂಜೆ ನೆರವೇರುವುದರಿಂದ ದೇವಾಲಯದಲ್ಲಿ ನಡೆದಿರುವ ಪೂರ್ವ ಸಿದ್ಧತೆಗಳ ಬಗ್ಗೆ ಜಿಲ್ಲಾಧಿಕಾರಿ ಅನೀಸ್.ಕೆ.ಜಾಯ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

    ಒಂದು ವಾರದ ಹಿಂದೆ ಸುರಿದ ಧಾರಾಕಾರ ಮಳೆಗೆ ತಲಕಾವೇರಿಯ ಬ್ರಹ್ಮಗಿರಿ ಬೆಟ್ಟಸಾಲಿನ ಗಜರಾಜಗಿರಿ ಬೆಟ್ಟ ಕುಸಿದಿದ್ದರಿಂದ ಇಲ್ಲಿ ಪೂಜಿಸುತ್ತಿದ್ದ ಪ್ರಧಾನ ಅರ್ಚಕರ ಕುಟುಂಬವೇ ಕಣ್ಮರೆ ಆಗಿದೆ. ಹೀಗಾಗಿ ವಾರದಿಂದ ತಲಕಾವೇರಿಯಲ್ಲಿ ಪೂಜೆ, ಧಾರ್ಮಿಕ ಕಾರ್ಯಗಳು ನಡೆದಿರಲಿಲ್ಲ.

    ನಾಳೆ ತಲಕಾವೇರಿಯಲ್ಲಿ ಪೂಜೆ ನೆರವೇರಿಸಲು ಸಿದ್ಧತೆ ಮಾಡಿಕೊಂಡಿರುವುದರಿಂದ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಸ್ಥಳಕ್ಕೆ ಭೇಟಿ ನೀಡಿದರು. ಇದೇ ವೇಳೆ ದೇವಾಲಯಕ್ಕೆ ಸಂಪರ್ಕ ಸಲ್ಪಿಸುವ ರಸ್ತೆ ಮೇಲೆಯೇ ಮಣ್ಣಿನ ರಾಶಿ ಹಾಗೂ ಕೆಸರು ಬಿದ್ದಿರುವುದನ್ನು ಕಂಡು, ನಾಳೆಯೊಳಗೆ ತೆರವುಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

    ನಾಳೆಯಿಂದ ತಲಕಾವೇರಿಯಲ್ಲಿ ಮತ್ತೆ ಪೂಜಾ ಕೈಂಕರ್ಯ ಆರಂಭವಾಗಲಿದ್ದು, ಜಿಲ್ಲೆಯಲ್ಲಿ ಸಂಭವಿಸಿದ ದುರ್ಘಟನೆಯಿಂದ ಇದೇ ಮೊದಲ ಬಾರಿ ಇಷ್ಟು ದಿನಗಳು ತಲಕಾವೇರಿಯಲ್ಲಿ ಪೂಜೆ ಸ್ಥಗಿತಗೊಂಡಿದ್ದವು.

  • ‘ವಿಮಾನ ಅಪ್ಪಳಿಸಿದಂತೆ ಕೇಳಿದ್ದು, ರಾತ್ರಿಯೇ ಓಡಿದ್ವಿ- ಕಿ.ಮೀಗಟ್ಟಲೆ ದೂರದಿಂದ ಕೊಚ್ಚಿ ಬಂದವು ಸಾವಿರಾರು ಮರಗಳು’

    ‘ವಿಮಾನ ಅಪ್ಪಳಿಸಿದಂತೆ ಕೇಳಿದ್ದು, ರಾತ್ರಿಯೇ ಓಡಿದ್ವಿ- ಕಿ.ಮೀಗಟ್ಟಲೆ ದೂರದಿಂದ ಕೊಚ್ಚಿ ಬಂದವು ಸಾವಿರಾರು ಮರಗಳು’

    – ಭೀಕರ ದೃಶ್ಯದ ಅನುಭವ ಹಂಚಿಕೊಂಡ ಚೇರಂಗಾಲ ಗ್ರಾಮಸ್ಥರು
    – ತಲಕಾವೇರಿಯಲ್ಲಿ ಕುಸಿದ ಭೂಮಿ
    – ಜೋಡುಪಾಲದಲ್ಲಿ ಸಂಭವಿಸಿದಂತೆ ಮತ್ತೆ ಭೂಕುಸಿತ

    ಮಡಿಕೇರಿ: “ಕೊಡಗಿನಲ್ಲಿ ಮಳೆ ಬರುವುದು ಸಾಮಾನ್ಯ. ಆದರೆ ನಿನ್ನೆ ರಾತ್ರಿ ವಿಮಾನ ಅಪ್ಪಳಿಸದಂತೆ ಏನೋ ಧ್ವನಿ ಕೇಳಿತು. ಕೂಡಲೇ ನಾವೆಲ್ಲ ಮನೆಯಿಂದ ಹೊರ ಬಂದೆವು. ನೋಡಿದಾಗ ಮನೆಯ ಮುಂಭಾಗವೇ ನೀರಿನಲ್ಲಿ ಭಾರೀ ಸಂಖ್ಯೆಯ ಮರಗಳನ್ನು ನೋಡಿ ಜೀವ ಉಳಿಸಿದರೆ ಸಾಕು ಎಂದು ಭಾವಿಸಿ ಮನೆಯನ್ನು ಖಾಲಿ ಮಾಡಿದೆವು” – ಇದು ಕೊಡಗಿನ ಚೇರಂಗಾಲದ ಗ್ರಾಮಸ್ಥರು ರಾತ್ರಿ ನಡೆದ ಘಟನೆಯನ್ನು ವಿವರಿಸಿದ ರೀತಿ.

    ಎರಡು ವರ್ಷದ ಹಿಂದೆ ಕೊಡಗಿನ ಜೋಡುಪಾಲ, ಮದೆನಾಡಿನಲ್ಲಿ ಸಂಭವಿಸಿದಂತೆ ಮತ್ತೆ ಚೇರಂಗಾಲದಲ್ಲಿ ಭೂ ಕುಸಿತ ಸಂಭವಿಸಿದೆ. ತಲಕಾವೇರಿ ಕಾಡಿನಿಂದ ಸಾವಿರಾರು ಮರಗಳು ನೀರಿನ ಚಿಕ್ಕ ಕೊಲ್ಲಿಯಲ್ಲಿ ತೇಲಿಕೊಂಡು ಬಂದಿದ್ದು, ಗ್ರಾಮದ ಮನೆಗಳ ಮುಂಭಾಗ ಶೇಖರಣೆಯಾಗಿವೆ. ಇದರಿಂದಾಗಿ ಕೊಲ್ಲಿಯ ನೀರೆಲ್ಲ ಮನೆಗೆ ನುಗ್ಗಿದ್ದು, ಗ್ರಾಮಸ್ಥರು ಕಂಗಾಲಾಗಿದ್ದಾರೆ.

    ರಾತ್ರಿ 9ಗಂಟೆ ಹೊತ್ತಿಗೆ ವಿಮಾನ ಅಪ್ಪಳಿಸಿದ ಹಾಗೆ ಭಾರೀ ಶಬ್ದ ಕೇಳಿತು, ಆಗ ಕೊಲ್ಲಿಯಲ್ಲಿ ರಭಸವಾಗಿ ನೀರು ಹರಿದು ಬಂದಿದ್ದು, ಇದರೊಂದಿಗೆ ಸಾವಿರಾರು ಮರಗಳು ಸಹ ತೇಲಿ ಬಂದಿವೆ. ನೀರು ಮನೆಗೆ ನುಗ್ಗಿದ್ದು, ಕುಟುಂಬಸ್ಥರು ಪಕ್ಕದ ಮನೆಗೆ ಹೋಗಿದ್ದಾರೆ. ಇಂತಹ ಅನಾಹುತ ಇಲ್ಲಿಯವರೆಗೆ ನಡೆದಿಲ್ಲ ಎಂದು ಗ್ರಾಮಸ್ಥರು ತಿಳಿಸಿದರು.

    ಕಾಡು ಪ್ರದೇಶದಿಂದ ಸುಮಾರು 5 ಕಿ.ಮೀ. ದೂರದಿಂದ ಮರಗಳು ಕೊಚ್ಚಿ ಬಂದಿದ್ದು, ಮರಗಳ ರಾಶಿ ಕೊಲ್ಲಿಯಲ್ಲಿ ನಿಂತಿದ್ದರಿಂದ ಕೊಲ್ಲಿಯ ನೋರು ಮನೆಗೆಳಿಗೆ ನುಗ್ಗಿದೆ. ಅಲ್ಲದೆ ಮರಗಳ ಹೊಡೆತಕ್ಕೆ ವಿದ್ಯುತ್ ಕಂಬಗಳು ಬಿದ್ದಿವೆ. ಹೀಗಾಗಿ ಮನೆಯ ವಿದ್ಯುತ್ ಸಂಪರ್ಕ ಸಹ ಕಡಿತವಾಗಿದೆ. ಗಾಳಿಗೆ ಮನೆಯ ಹೆಂಚುಗಳು ಹಾರಿ ಹೋಗಿವೆ. ಸೇತುವೆ ಕೊಚ್ಚಿ ಹೋಗಿದ್ದರಿಂದ ಇಲ್ಲಿನ 10 ಮನೆಗಳಿಗೆ ಸಂಪರ್ಕವಿಲ್ಲ. ಇದರಿಂದಾಗಿ ಹೊರಗಿನವರಿಗೆ ಇಲ್ಲಿಗೆ ಬರಲು ಸಾಧ್ಯವಾಗುತ್ತಿಲ್ಲ. ಈ ಕುರಿತು ಪಿಡಿಒಗೆ ಮಾಹಿತಿ ನೀಡಲಾಗಿದೆ. ಭಾಗಮಂಡಲದ ಸಂಪರ್ಕ ಸಹ ಕಡಿತವಾಗಿದ್ದರಿಂದ ಗ್ರಾಮಸ್ಥರೂ ಎಲ್ಲಿಗೂ ಹೋಗದ ಸ್ಥಿತಿಯಲ್ಲಿದ್ದಾರೆ. ನಮಗೆ ಏನಾದರೂ ವ್ಯವಸ್ಥೆ ಕಲ್ಪಿಸಿ ಎಂದು ಗ್ರಾಮಸ್ಥರು ವಿಡಿಯೋ ಮೂಲಕ ಮನವಿ ಮಾಡಿದ್ದಾರೆ.

  • ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಿಶೇಷ ಪೂಜೆಗೆ ಇಬ್ಬರೇ ಬನ್ನಿ- ಇತ್ತ ತಲಕಾವೇರಿಯಲ್ಲಿ ಭಕ್ತರ ಸಂಖ್ಯೆ ಇಳಿಕೆ

    ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಿಶೇಷ ಪೂಜೆಗೆ ಇಬ್ಬರೇ ಬನ್ನಿ- ಇತ್ತ ತಲಕಾವೇರಿಯಲ್ಲಿ ಭಕ್ತರ ಸಂಖ್ಯೆ ಇಳಿಕೆ

    ಮಂಗಳೂರು/ಮಡಿಕೇರಿ: ಕೊರೊನಾ ಭೀತಿ ಹಿನ್ನೆಲೆಯಲ್ಲಿ ದಕ್ಷಿಣ ಭಾರತದ ಪವಿತ್ರ ಪುಣ್ಯಕ್ಷೇತ್ರವಾಗಿರೋ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸರ್ಪ ಸಂಸ್ಕಾರ, ನಾಗ ಪ್ರತಿಷ್ಠೆ ಸೇರಿದಂತೆ ವಿವಿಧ ಪೂಜಾ ಕಾರ್ಯಗಳಲ್ಲಿ ತಲಾ ಇಬ್ಬರಂತೆ ಮಾತ್ರ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗುತ್ತಿದೆ.

    ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿಯೇ ದೇವಸ್ಥಾನದ ಆಡಳಿತ ಮಂಡಳಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆಯುವ ಸರ್ಪ ಸಂಸ್ಕಾರ, ಆಶ್ಲೇಷಾ ಬಲಿ ಪೂಜೆ ಸೇರಿದಂತೆ ವಿವಿಧ ಪೂಜಾ ಕಾರ್ಯಗಳಲ್ಲಿ ಇಷ್ಟು ದಿನ ಕುಟುಂಬ ಸದಸ್ಯರು ಪಾಲ್ಗೊಳ್ಳುತ್ತಿದ್ದರು. ಆದರೆ ಕೊರೊನಾ ಭೀತಿ ಹಿನ್ನೆಲೆಯಲ್ಲಿ ತಲಾ ಇಬ್ಬರಂತೆ ಪೂಜೆಯಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗುತ್ತಿದೆ. ಕೊರೊನಾ ವೈರಸ್ ಭೀತಿಯಿಂದಾಗಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತರ ಸಂಖ್ಯೆ ಕಡಿಮೆಯಾಗಿಲ್ಲ. ಆದರೆ ಹೊರ ರಾಜ್ಯದಿಂದ ಬರುವ ಭಕ್ತರ ಸಂಖ್ಯೆಯಲ್ಲಿ ಇಳಿಮುಖವಾಗಿದೆ.

    ತಲಕಾವೇರಿಯಲ್ಲಿ ಭಕ್ತರಿಲ್ಲ: ಕನ್ನಡ ನಾಡಿನ ಜೀವ ನದಿ ಕಾವೇರಿ ಉಗಮ ಸ್ಥಾನ ತಲಕಾವೇರಿಗೂ ತಟ್ಟಿದ ಕೊರೋನಾ ವೈರಸ್ ಎಫೆಕ್ಟ್ ತಾಗಿದೆ. ದೇವಾಲಯದಲ್ಲಿ ಭಕ್ತರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಬೆಳಗ್ಗೆಯಿಂದಲೂ ಧಾರ್ಮಿಕ ಕೇಂದ್ರವಾದ ತಲಕಾವೇರಿ ಭಾಗಮಂಡಲ ದೇವಾಲಯಗಳಲ್ಲಿ ಭಕ್ತರ ಸಂಖ್ಯೆ ವಿರಳವಾಗಿದೆ. ಅಷ್ಟೇ ಅಲ್ಲದೇ ತಲಕಾವೇರಿ ಯ ಬ್ರಹ್ಮಗಿರಿ ಬೆಟ್ಟಕ್ಕೂ ನಿಷೇಧ ಹೇರಲಾಗಿದೆ.

    ಭಕ್ತರ ಸಂಖ್ಯೆ ಇಳಿಮುಖದ ಹಿನ್ನೆಲೆಯಲ್ಲಿ ಕೆಲವು ಬೀದಿ ಬದಿಯ ವ್ಯಾಪಾರಸ್ಥರು ಸ್ವಯಂಪ್ರೇರಿತವಾಗಿ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿದ್ದಾರೆ. ಹೀಗಾಗಿ ತಲಕಾವೇರಿ ಭಾಗಮಂಡಲ ಜನರಿಲ್ಲದೇ ಬಿಕೋ ಎನ್ನುತ್ತಿದೆ. ಹಿಂದೆದೂ ಈ ರೀತಿಯಲ್ಲಿ ಜನ ಸಂಖ್ಯೆ ವಿರಳವಾಗಿರುವುದು ನೋಡಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ.

  • ಕುಲದೇವಿಯ ದರ್ಶನಕ್ಕಿಲ್ಲ ಬಸ್ ಭಾಗ್ಯ – ಭಕ್ತರಿಂದ ಜನಪ್ರತಿನಿಧಿಗಳಿಗೆ ಹಿಡಿಶಾಪ

    ಕುಲದೇವಿಯ ದರ್ಶನಕ್ಕಿಲ್ಲ ಬಸ್ ಭಾಗ್ಯ – ಭಕ್ತರಿಂದ ಜನಪ್ರತಿನಿಧಿಗಳಿಗೆ ಹಿಡಿಶಾಪ

    ಮಡಿಕೇರಿ: ಜೀವನದಿ ಕಾವೇರಿಯ ಉಗಮ ಸ್ಥಾನ ತಲಕಾವೇರಿಗೆ ತೆರಳಲು ಬಸ್ ವ್ಯವಸ್ಥೆ ಕಲ್ಪಿಸಬೇಕೆಂದು ಸ್ಥಳೀಯ ಗ್ರಾಮಸ್ಥರು ಹಾಗೂ ಭಕ್ತರು ಒತ್ತಾಯಿಸಿದ್ದಾರೆ.

    ಭಕ್ತಿಯ ಕ್ಷೇತ್ರವಾಗಿರುವ ತಲಕಾವೇರಿಗೆ ರಾಜ್ಯ ಮತ್ತು ಹೊರ ರಾಜ್ಯದಿಂದ ಪ್ರತಿದಿನ ಸಾವಿರಾರು ಭಕ್ತರು ಬಂದು ಹೋಗುತ್ತಾರೆ. ಆದರೆ ಭಕ್ತರ ಅನುಕೂಲಕ್ಕಾಗಿ ಯಾವುದೇ ಬಸ್ ವ್ಯವಸ್ಥೆಗಳಿಲ್ಲ. ಬೆಳಗ್ಗೆ 7.30 ರಿಂದ 8.30 ರ ಅವಧಿಯಲ್ಲಿ ಒಂದು ಖಾಸಗಿ ಮತ್ತು ಒಂದು ಕೆ.ಎಸ್.ಆರ್.ಟಿ.ಸಿ ಬಸ್ ಮಾತ್ರ ತಲಕಾವೇರಿಗೆ ತೆರಳುತ್ತದೆ. ಆ ನಂತರ ಯಾವುದೇ ಬಸ್‍ಗಳ ಸಂಚಾರ ಇರುವುದಿಲ್ಲ.

    ಇದರಿಂದ ಭಕ್ತರು ಮಾತ್ರವಲ್ಲದೆ ಸ್ಥಳೀಯ ಗ್ರಾಮಸ್ಥರಿಗೂ ಅನಾನುಕೂಲವಾಗಿದೆ. ಭಾಗಮಂಡಲದಿಂದ ತಲಕಾವೇರಿಗೆ ಅಥವಾ ತಲಕಾವೇರಿಯಿಂದ ಭಾಗಮಂಡಲಕ್ಕೆ ತೆರಳುವ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಬಸ್ ವ್ಯವಸ್ಥೆ ಇಲ್ಲದೆ ಪರದಾಡುತ್ತಿದ್ದಾರೆ. ಕಳೆದ ಮಳೆಗಾಲದಲ್ಲಿ ಸಂಚಾರ ಅಸ್ತವ್ಯಸ್ಥಗೊಂಡ ಕಾರಣದಿಂದ ಸ್ಥಗಿತಗೊಂಡಿದ್ದ ಬಸ್ ಸಂಚಾರ ಇಲ್ಲಿಯವರೆಗೆ ಆರಂಭಗೊಂಡಿಲ್ಲ. ಖಾಸಗಿ ಬಸ್ ಮಾಲೀಕರು ನಷ್ಟದ ಕಾರಣ ನೀಡುತ್ತಾರೆ. ಆದರೆ ಕೆ.ಎಸ್.ಆರ್.ಟಿ.ಸಿ ಆಡಳಿತ ಮಂಡಳಿ ಯಾವುದೇ ಕಾರಣ ನೀಡದೆ ಬಸ್‍ಗಳ ಕೊರತೆಯನ್ನು ಸೃಷ್ಟಿಸಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

    ರಾಜ್ಯದ ಎಲ್ಲಾ ಪುಣ್ಯಕ್ಷೇತ್ರಗಳಿಗೂ ಅಗತ್ಯವಿರುವಷ್ಟು ಬಸ್‍ಗಳ ವ್ಯವಸ್ಥೆಯನ್ನು ಕೆ.ಎಸ್.ಆರ್.ಟಿ.ಸಿ ಮಾಡಿದೆ. ಆದರೆ ಕನ್ನಡ ನಾಡಿನ ಕೋಟ್ಯಾಂತರ ಜನರಿಗೆ ಕುಡಿಯುವ ನೀರು ಒದಗಿಸುವ ಜೀವನದಿ ಕಾವೇರಿಯ ಕ್ಷೇತ್ರಕ್ಕೆ ಬಸ್‍ಗಳನ್ನೇ ನಿಯೋಜಿಸದೆ ಅನ್ಯಾಯ ಮಾಡಲಾಗಿದೆ ಎಂದು ಭಕ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೆ.ಎಸ್.ಆರ್.ಟಿ.ಸಿ ವ್ಯವಸ್ಥೆ ಸಾರ್ವಜನಿಕರ ಸೇವೆಗಾಗಿ ಇದೆಯೇ ಹೊರತು ಲಾಭ ಮಾಡುವುದಕ್ಕಾಗಿ ಅಲ್ಲ. ಆದ್ದರಿಂದ ತಕ್ಷಣ ಬಸ್ ವ್ಯವಸ್ಥೆ ಕಲ್ಪಿಸಬೇಕೆಂದು ಭಕ್ತರು ಒತ್ತಾಯಿಸಿದ್ದಾರೆ.