Tag: ತನಿಖಾ ವರದಿ

  • ಮೋರ್ಬಿ ಸೇತುವೆ ದುರಂತ – ಅರ್ಧದಷ್ಟು ತಂತಿಗಳಿಗೆ ತುಕ್ಕು ಹಿಡಿದಿದ್ದೇ ಕಾರಣ: ತನಿಖಾ ವರದಿ

    ಮೋರ್ಬಿ ಸೇತುವೆ ದುರಂತ – ಅರ್ಧದಷ್ಟು ತಂತಿಗಳಿಗೆ ತುಕ್ಕು ಹಿಡಿದಿದ್ದೇ ಕಾರಣ: ತನಿಖಾ ವರದಿ

    ಗಾಂಧಿನಗರ: ಕಳೆದ ವರ್ಷ ಬರೋಬ್ಬರಿ 135 ಜನರ ಸಾವಿಗೆ ಕಾರಣವಾದ ಗುಜರಾತ್‌ನ (Gujarat) ಮೋರ್ಬಿಯಲ್ಲಿನ ಸೇತುವೆ ದುರಂತದ (Morbi Bridge Tragedy) ಕೆಲವು ನಿಜ ಅಂಶಗಳು ತನಿಖಾ ವರದಿಯಲ್ಲಿ ಬಯಲಾಗಿದೆ. ತೂಗು ಸೇತುವೆಯ ಕೆಲವು ತಂತಿಗಳು ಮೊದಲೇ ಮುರಿದಿದ್ದು, ಹಲವು ತುಕ್ಕು ಹಿಡಿದಿದ್ದವು ಎಂದು ತನಿಖೆಯ ವರದಿ ತಿಳಿಸಿದೆ.

    ಮೋರ್ಬಿ ಸೇತುವೆ ದುರಂತದ ತನಿಖೆಯನ್ನು ಗುಜರಾತ್ ಸರ್ಕಾರ ವಿಶೇಷ ತನಿಖಾ ತಂಡಕ್ಕೆ (SIT) ವಹಿಸಿತ್ತು. ಇದೀಗ ಎಸ್‌ಐಟಿ ಸೇತುವೆ ದುರಸ್ತಿ, ನಿರ್ವಹಣೆ ಹಾಗೂ ಕಾರ್ಯಾಚರಣೆಯಲ್ಲಿ ಹಲವು ಲೋಪಗಳನ್ನು ಪತ್ತೆ ಮಾಡಿದೆ.

    ಮಚ್ಚು ನದಿಯ ಮೇಲೆ 1887ರಲ್ಲಿ ಆಗಿನ ಆಡಳಿತಗಾರರು ನಿರ್ಮಿಸಿದ್ದ ಸೇತುವೆಯ 2 ಮುಖ್ಯ ಕೇಬಲ್‌ಗಳಲ್ಲಿ ಒಂದು ಕೇಬಲ್‌ನಲ್ಲಿ ತುಕ್ಕಿನ ಸಮಸ್ಯೆಯಿತ್ತು. ಅದರ ಅರ್ಧದಷ್ಟು ತಂತಿಗಳಿಗೆ ತುಕ್ಕು ಹಿಡಿದಿತ್ತು. ಇದು ಕಳೆದ ವರ್ಷ ಅಕ್ಟೋಬರ್ 30 ರಂದು ದುರಂತ ಸಂಭವಿಸಲು ಕಾರಣವಾಗಿರುವ ಸಾಧ್ಯತೆಯಿದೆ. ನದಿಯ ಮೇಲ್ಭಾಗದ ಮುಖ್ಯ ಕೇಬಲ್ ತುಂಡಾಗಿರುವುದೂ ದುರಂತಕ್ಕೆ ಕಾರಣ ಎಂದು ಎಸ್‌ಐಟಿ ತಿಳಿಸಿದೆ. ಇದನ್ನೂ ಓದಿ: ಓವೈಸಿ ಮನೆ ಮೇಲೆ ದುಷ್ಕರ್ಮಿಗಳಿಂದ ಕಲ್ಲು ತೂರಾಟ

    ಸೇತುವೆಯ ಪ್ರತಿಯೊಂದು ಕೇಬಲ್ ಅನ್ನು 7 ಎಳೆಗಳಿಂದ ರಚಿಸಲಾಗಿದ್ದು, ಅವು ಉಕ್ಕಿನ ತಂತಿಗಳಾಗಿವೆ. ಈ ಕೇಬಲ್ ಅನ್ನು ರೂಪಿಸಲು ಒಟ್ಟು 49 ತಂತಿಗಳನ್ನು 7 ಎಳೆಗಳಲ್ಲಿ ಒಟ್ಟಿಗೆ ಜೋಡಿಸಲಾಗಿದೆ. 49 ತಂತಿಗಳಲ್ಲಿ 22 ತುಕ್ಕು ಹಿಡಿದಿರುವುದು ಗಮನಿಸಲಾಗಿದೆ. ಇದು ಘಟನೆಗೂ ಮೊದಲೇ ಮುರಿದು ಹೋಗಿರುವುದನ್ನು ಸೂಚಿಸುತ್ತದೆ ಎಂದು ವರದಿಯಲ್ಲಿ ತಿಳಿಸಿದೆ.

    ಇನ್ನು ಸೇತುವೆ ನವೀಕರಣದ ಸಮಯದಲ್ಲಿ ಹಳೆಯ ಸಸ್ಪೆಂಡರ್‌ಗಳನ್ನು (ಕೇಬಲ್‌ಗಳನ್ನು ಸಂಪರ್ಕಿಸುವ ಸ್ಟೀಲ್ ರಾಡ್‌ಗಳು) ಹೊಸ ಸಸ್ಪೆಂಡರ್‌ಗಳೊಂದಿಗೆ ಬೆಸುಗೆ ಹಾಕಲಾಗಿದೆ ಎಂಬುದನ್ನು ಎಸ್‌ಐಟಿ ಕಂಡುಹಿಡಿದಿದೆ. ಆದ್ದರಿಂದ ಸಸ್ಪೆಂಡರ್‌ಗಳ ನಡವಳಿಕೆ ಬದಲಾಗಿದ್ದು, ದುರಂತ ಸಂಭವಿಸಲು ಕಾರಣವಾಗಿದೆ ಎಂದು ಉಲ್ಲೇಖಿಸಿದೆ.

    ದುರಂತ ಸಂಭವಿಸುವ ಸಂದರ್ಭ ಸೇತುವೆ ಮೇಲೆ 300 ಜನರಿದ್ದರು. ಇದು ಸೇತುವೆ ಭಾರವನ್ನು ಹೊರುವ ಸಾಮರ್ಥ್ಯಕ್ಕಿಂತಲೂ ಹೆಚ್ಚಾಗಿದೆ. ಆದರೂ ಸೇತುವೆಯ ನೈಜ ನಾಮರ್ಥ್ಯವನ್ನು ಪ್ರಯೋಗಾಲಯದ ವರದಿಗಳಿಂದ ದೃಢೀಕರಿಸಲಾಗುವುದು ಎಂದು ತಿಳಿಸಲಾಗಿದೆ. ಇದನ್ನೂ ಓದಿ: 9 ಪ್ರಶ್ನೆಗಳಿಗೆ ಉತ್ತರ ಕೊಡಿ: ರೂಪಾಗೆ ರೋಹಿಣಿ ಅಭಿಮಾನಿಗಳ ಪ್ರಶ್ನೆ

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ರಾವತ್ ಇದ್ದ ಹೆಲಿಕಾಪ್ಟರ್ ಪತನದ ತನಿಖಾ ವರದಿ ಮುಂದಿನ ವಾರ ಸಲ್ಲಿಕೆ?

    ರಾವತ್ ಇದ್ದ ಹೆಲಿಕಾಪ್ಟರ್ ಪತನದ ತನಿಖಾ ವರದಿ ಮುಂದಿನ ವಾರ ಸಲ್ಲಿಕೆ?

    ನವದೆಹಲಿ: ಇತ್ತೀಚೆಗಷ್ಟೇ ಹುತಾತ್ಮರಾದ ಸೇನಾ ಪಡೆಗಳ ಮುಖ್ಯಸ್ಥ (ಸಿಡಿಎಸ್) ಬಿಪಿನ್ ರಾವತ್ ಅವರಿದ್ದ ಹೆಲಿಕಾಪ್ಟರ್ ಪತನದ ತನಿಖಾ ವರದಿಯನ್ನು ಮುಂದಿನ ವಾರ ಸರ್ಕಾರಕ್ಕೆ ಸಲ್ಲಿಸುವ ಸಾಧ್ಯತೆಯಿದೆ.

    ಡಿ.8ರಂದು ತಮಿಳುನಾಡಿನ ಕುನೂರಿನಲ್ಲಿ ಸಂಭವಿಸಿದ ಹೆಲಿಕಾಪ್ಟರ್ ದುರ್ಘಟನೆಯಲ್ಲಿ ಸೇನಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಸೇರಿ 13 ಮಂದಿ ಹುತಾತ್ಮರಾಗಿದ್ದರು. ರಾವತ್ ಅವರು ಕೊಯಮತ್ತೂರು ಬಳಿಯ ಸೂಲೂರಿನಿಂದ ವೆಲ್ಲಿಂಗ್ಟನ್‌ನಲ್ಲಿರುವ ಡಿಫೆನ್ಸ್ ಸ್ಟಾಫ್ ಕಾಲೇಜಿಗೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿತ್ತು.

    ಈ ದುರಂತಕ್ಕೆ ಕಾರಣವೇನು ಎಂಬ ಪ್ರಶ್ನೆ ಹಲವರಲ್ಲಿ ಕಾಡಿತ್ತು. ಈ ಹಿನ್ನೆಲೆಯಲ್ಲಿ ಹೆಲಿಕಾಪ್ಟರ್ ಪತನಕ್ಕೆ ಕಾರಣ ತಿಳಿಯಲು ರಕ್ಷಣಾ ಸಚಿವಾಲಯ ತ್ರಿಸೇವಾ ತನಿಖೆಗೆ ಆದೇಶಿಸಿತ್ತು. ಕೂನೂರಿನಲ್ಲಿ ಸಂಭವಿಸಿದ್ದ ಸೇನಾ ಹೆಲಿಕಾಪ್ಟರ್ ದುರಂತದ ಬಗ್ಗೆ ಸೇನಾ ಪಡೆಗಳ 3 ವಿಭಾಗಗಳ ತಜ್ಞರನ್ನು ಒಳಗೊಂಡ ಸಮಿತಿ ತನಿಖೆ ನಡೆಸಿತ್ತು.

    ಏರ್ ಮಾರ್ಷಲ್ ಮಾನವೇಂದ್ರ ಸಿಂಗ್ ಈ ತಂಡದ ನೇತೃತ್ವ ವಹಿಸಿದ್ದರು. ಅವರು ಐಎಎಫ್‌ನ ತರಬೇತಿ ಕಮಾಂಡರ್‌ನ ಕಮಾಂಡರ್ ಮತ್ತು ಸ್ವತಃ ಚಾಪರ್ ಪೈಲಟ್ ಆಗಿದ್ದಾರೆ. ಅವರ ಜೊತೆ ಭಾರತೀಯ ಸೇನೆ ಮತ್ತು ನೌಕಾಪಡೆಯ ಇಬ್ಬರು ಬ್ರಿಗೇಡಿಯರ್ ಶ್ರೇಣಿಯ ಅಧಿಕಾರಿಗಳು ತನಿಖೆಯಲ್ಲಿ ಸಹಾಯಕರಾಗಿದ್ದಾರೆ. ಇದನ್ನೂ ಓದಿ:  ಬಿಹಾರ್‌ ಸಿಎಂ ಪುತ್ರ ತನ್ನ ತಂದೆಗಿಂತಲೂ 5 ಪಟ್ಟು ಹೆಚ್ಚು ಶ್ರೀಮಂತ

    ಹೆಲಿಕಾಪ್ಟರ್ ಪತನಕ್ಕೆ ಲ್ಯಾಂಡಿಂಗ್ ಆಗುವ ವೇಳೆ ಸಿಬ್ಬಂದಿ ದಿಗ್ಭ್ರಮೆಗೆ ಸಿಲುಕಿದ್ದು ಸೇರಿದಂತೆ ಎಲ್ಲಾ ಆಯಾಮಗಳಲ್ಲೂ ತನಿಖೆ ಕೈಗೊಳ್ಳಲಾಗಿದೆ. ಹೆಲಿಕಾಪ್ಟರ್‌ನ ಬ್ಲ್ಯಾಕ್ ಬಾಕ್ಸ್ ನಲ್ಲಿ ಕಾಕ್‌ಪಿಟ್ ಧ್ವನಿ ರೆಕಾರ್ಡ್ ಮತ್ತು ಫ್ಲೈಟ್ ಡಾಟಾ ರೆಕಾರ್ಡ್ ಗಳನ್ನೆಲ್ಲಾ ಪರಿಶೀಲಿಸಲಾಗಿದೆ. ಇದನ್ನೂ ಓದಿ: New Year – ಪಾಕಿಸ್ತಾನ, ಚೀನಾ ಸೈನಿಕರಿಗೆ ಸಿಹಿ ಹಂಚಿ ವಿಶ್‌ ಮಾಡಿದ ಭಾರತೀಯ ಯೋಧರು

    ತನಿಖೆಯ ಎಲ್ಲಾ ವರದಿ ಅಂತಿಮ ಘಟ್ಟದಲ್ಲಿದೆ. ಹೀಗಾಗಿ ಮುಂದಿನ ವಾರ ಎಲ್ಲಾ ಅಂಶಗಳನ್ನು ಒಳಗೊಂಡ ಬೃಹತ್ ಗಾತ್ರದ ತನಿಖಾ ವರದಿ ವಾಯುಪಡೆ ಮುಖ್ಯ ಕಚೇರಿಗೆ ಸಲ್ಲಿಕೆ ಆಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

  • ಸುನಂದಾ ನಿಗೂಢ ಸಾವು: ತರೂರ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ

    ಸುನಂದಾ ನಿಗೂಢ ಸಾವು: ತರೂರ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ

    ನವದೆಹಲಿ: ಸುನಂದಾ ಪುಷ್ಕರ್ ನಿಗೂಢ ಸಾವಿನ ಪ್ರಕರಣದ ತನಿಖೆ ನಡೆಸಿದ ದೆಹಲಿಯ ವಿಶೇಷ ತನಿಖಾ ತಂಡದ ಪೊಲೀಸರು ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ಸಂಸದ ಶಶಿ ತರೂರ್ ವಿರುದ್ಧ ಚಾರ್ಜ್‍ಶೀಟ್ ಸಲ್ಲಿಸಿದ್ದಾರೆ.

    ಭಾರತೀಯ ದಂಡ ಸಂಹಿತೆಯ ಸೆಕ್ಷನ್ 306(ಆತ್ಮಹತ್ಯೆಗೆ ಕುಮ್ಮಕ್ಕು) ಸೆಕ್ಷನ್ 498 ಎ(ಮಹಿಳೆಯನ್ನು ಗಾಯಗೊಳಿಸುವುದು/ ಅಥವಾ ಪ್ರಾಣಾಪಾಯ ತಂದೊಡ್ಡುವುದು, ಅಥವಾ ಆತ್ಮಹತ್ಯೆಗೆ ಪ್ರಚೋದಿಸುವುದು) ಅಡಿಯಲ್ಲಿ ಪೊಲೀಸರು ಆರೋಪ ಪಟ್ಟಿಯನ್ನು ಸಲ್ಲಿಸಿದ್ದಾರೆ.

    ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಧರ್ಮೇಂದ್ರ ಸಿಂಗ್ ಮುಂದೆ ಸುಮಾರು 3000 ಪುಟಗಳ ಚಾರ್ಜ್‍ಶೀಟ್ ಸಲ್ಲಿಕೆಯಾಗಿದ್ದು, ಮೇ 24 ರಂದು ವಿಚಾರಣೆಗೆ ಬರಲಿದೆ.

    ಚಾರ್ಜ್‍ಶೀಟ್ ಸಲ್ಲಿಕೆಯಾದ ಬಳಿಕ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿರುವ ಶಶಿ ತರೂರ್, ತನಿಖಾ ವರದಿ ಅಸಮಂಜಸವಾಗಿದೆ. ಪುಷ್ಕರ್ ಅವರನ್ನು ಹತ್ತಿರದಿಂದ ಬಲ್ಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದರೆ ನಂಬುವುದಿಲ್ಲ. 4 ವರ್ಷ ತನಿಖೆಯ ನಂತರ ದೆಹಲಿ ಪೊಲೀಸರು ಆತ್ಮಹತ್ಯೆ ಪ್ರಚೋದನೆಯ ಆರೋಪವನ್ನು ನನ್ನ ಮೇಲೆ ಹೊರಿಸಿದ್ದಾರೆ. ಇದು ಉದ್ದೇಶ ಪೂರಿತವಾಗಿದೆ. ಈ ಪ್ರಕರಣದಲ್ಲಿ ಯಾರ ವಿರುದ್ಧವು ಸಾಕ್ಷಿ ದೊರೆತಿಲ್ಲವೆಂದು 2017ರ ಅಕ್ಟೋಬರ್‍ನಲ್ಲಿ ಕಾನೂನು ಅಧಿಕಾರಿಗಳು ಹೈಕೋರ್ಟ್ ಗೆ ಹೇಳಿಕೆ ನೀಡಿದ್ದರು. ಆದರೆ ಆರು ತಿಂಗಳಲ್ಲಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದೇನೆ ಎಂದು ಹೇಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಏನಿದು ಪ್ರಕರಣ ಏನು?
    ತಿರುವನಂತಪುರದ ಕಾಂಗ್ರೆಸ್ ಸಂಸದ ಶಶಿ ತರೂರ್ ಪತ್ನಿ ಸುನಂದಾ ಪುಷ್ಕರ್ 2014ರ ಜನವರಿಯಲ್ಲಿ ನಗರದ ಲೀಲಾ ಪ್ಯಾಲೆಸ್ ಹೋಟೆಲ್ ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದರು. ಮೊದಲಿಗೆ ಆತ್ಮಹತ್ಯೆ ಎಂದು ಪೊಲೀಸರು ಶಂಕಿಸಿದ್ದರು. ನಂತರ ನಿಗೂಢವಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿಯಲಾಯಿತು. ಏಮ್ಸ್ ಆಸ್ಪತ್ರೆಯಲ್ಲಿ ನಡೆದ ಮರಣೋತ್ತರ ಪರೀಕ್ಷೆಯಲ್ಲಿ ಸುನಂದಾ ದೇಹದಲ್ಲಿ ಗಾಯವಾಗಿರುವ ವಿಚಾರ ಬೆಳಕಿಗೆ ಬಂದಿತ್ತು. ಅತಿ ಹೆಚ್ಚು ಮಾತ್ರೆಗಳನ್ನು ಸೇವಿಸಿದ ಪರಿಣಾಮ ಸುನಂದಾ ಮೃತಪಟ್ಟಿದ್ದಾರೆ ಎಂದು ಮರಣೋತ್ತರ ಪರೀಕ್ಷೆಯ ವರದಿ ಹೇಳಿತ್ತು. 2014ರ ಜುಲೈನಲ್ಲಿ ಏಮ್ಸ್ ವೈದ್ಯ ಸುದೀರ್ ಗುಪ್ತಾ ಸುಳ್ಳು ವರದಿ ನೀಡುವಂತೆ ನಮ್ಮ ಮೇಲೆ ಒತ್ತಡ ಇತ್ತು ಹೇಳಿಕೆ ನೀಡಿದ್ದರು. 2014ರ ಅಕ್ಟೋಬರ್ 10ರಂದು ಸುನಂದಾ ಅವರನ್ನು ವಿಷಪ್ರಾಶಣ ಮಾಡಿ ಹತ್ಯೆ ಮಾಡಲಾಗಿದೆ ಎಂದು ಈ ಪ್ರಕರಣವನ್ನು ತನಿಖೆ ನಡೆಸಿದ ವೈದ್ಯಕೀಯ ತಂಡ ವರದಿ ನೀಡಿತ್ತು. 2015ರ ಜನವರಿಯಲ್ಲಿ ದೆಹಲಿ ಪೊಲೀಸರು ತರೂರ್ ವಿರುದ್ಧ ಎಫ್‍ಐಆರ್ ದಾಖಲಿಸಿದ್ದರು.

    ತರೂರ್ ನಿವಾಸದಲ್ಲಿದ್ದ ಮನೆ ಕೆಲಸ ಮಾಡುತ್ತಿದ್ದ ನರೈನ್ ಪೊಲೀಸ್ ವಿಚಾರಣೆ ವೇಳೆ ಸುನಂದಾ ಜೊತೆ ತರೂರ್ ನಿತ್ಯ ಗಲಾಟೆ ಮಾಡುತ್ತಿದ್ದರು. ಸುನಂದಾ ಮೃತಪಡುವ ಎರಡೂ ದಿನದ ಮೊದಲು ಇಬ್ಬರ ನಡುವೆ ಜಗಳ ನಡೆದಿತ್ತು. ಈ ವೇಳೆ ನಾನು ನಿಮ್ಮ ಎಲ್ಲ ವಿಚಾರಗಳನ್ನು ಮಾಧ್ಯಮಗಳಿಗೆ ತಿಳಿಸಿದರೆ ನಿಮ್ಮ ಜೀವನ ಅಂತ್ಯವಾಗುತ್ತದೆ ಎಂದು ಸುನಂದಾ ಪುಷ್ಕರ್ ಹೇಳಿದ್ದರು ಎಂದು ತಿಳಿಸಿದ್ದ. ಈ ಪ್ರಕರಣದಲ್ಲಿ ಬಿಜೆಪಿ ಮುಖಂಡ, ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಅವರು ಪ್ರತಿವಾದಿಯಾಗಿದ್ದಾರೆ.