Tag: ಡ್ರಿಂಕ್ &ಡ್ರೈವ್

  • ಮದ್ಯ ಸೇವಿಸಿ ಕಾರು ಚಾಲನೆ – ಸರಣಿ ಅಪಘಾತದಲ್ಲಿ ಯುವಕ ಸಾವು

    ಮದ್ಯ ಸೇವಿಸಿ ಕಾರು ಚಾಲನೆ – ಸರಣಿ ಅಪಘಾತದಲ್ಲಿ ಯುವಕ ಸಾವು

    ಬೆಂಗಳೂರು: ಮದ್ಯ ಸೇವಿಸಿ ಕಾರು ಚಾಲನೆ ಮಾಡಿ ಸರಣಿ ಅಪಘಾತ ಮಾಡಿರುವ ಘಟನೆ ಸಿಲಿಕಾನ್ ಸಿಟಿಯ ರಿಚ್ಮಂಡ್ ವೃತ್ತದಲ್ಲಿ ಗುರುವಾರ ರಾತ್ರಿ ನಡೆದಿದೆ.

    ಮದ್ಯ ಸೇವಿಸಿ ವಾಹನ ಚಲಾಯಿಸುತ್ತಿದ್ದ ಆರೋಪಿಯನ್ನು ರೋಹಿತ್ ಕೇಡಿಯಾ ಎಂದು ಗುರುತಿಸಲಾಗಿದೆ. ಈ ಸರಣಿ ಅಪಘಾತದಲ್ಲಿ ಇನ್ಶೂರೆನ್ಸ್ ಕಂಪನಿಯಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಕಿರಣ್ (23) ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಮತ್ತೋರ್ವ ಕಾರು ಚಾಲಕ ಶ್ರೀಕಾಂತ್‍ಗೆ ಗಾಯವಾಗಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಮಧ್ಯರಾತ್ರಿ ರೋಹಿತ್ ಕೇಡಿಯಾ ಕಂಠಪೂರ್ತಿ ಕುಡಿದು ಕಾರು ಓಡಿಸಿಕೊಂಡು ಬಂದಿದ್ದಾನೆ. ನಂತರ ರಿಚ್ಮಂಡ್ ವೃತ್ತದ ಸಿಗ್ನಲ್ ಅಲ್ಲಿ ನಿಂತಿದ್ದ ಕಿರಣ್ ಬೈಕಿಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಕಿರಣ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ನಂತರ ಕಾರು ನಿಯಂತ್ರಣಕ್ಕೆ ಸಿಗದೆ, ಮೊತ್ತೊಂದು ಕಾರಿಗೂ ಡಿಕ್ಕಿ ಆಗಿದೆ. ಅದರಲ್ಲಿದ್ದ ಡ್ರೈವರ್ ಶ್ರೀಕಾಂತ್‍ಗೆ ಗಂಭೀರವಾಗಿ ಗಾಯವಾಗಿದ್ದು, ಆತನಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

    ಆರೋಪಿ ರೋಹಿತ್ ಕೇಡಿಯಾನನ್ನು ವಿಲ್ಸನ್ ಗಾರ್ಡನ್ ಸಂಚಾರಿ ಪೊಲೀಸರು ಬಂಧಿಸಿದ್ದು, ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ನ್ಯಾಯಾಧೀಶರು ಆರೋಪಿಯನ್ನು 14 ದಿನ ನ್ಯಾಯಾಂಗ ಬಂಧನಕ್ಕೊಪ್ಪಿಸಿ ಆದೇಶ ನೀಡಿದ್ದಾರೆ. ಈ ಸಂಬಂಧ ವಿಲ್ಸನ್ ಗಾರ್ಡನ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿ ಮದ್ಯದ ಜೊತೆಗೆ ಡ್ರಗ್ಸ್ ತೆಗೆದುಕೊಂಡಿರುವ ಅನುಮಾನ ವ್ಯಕ್ತವಾಗಿದೆ. ಹೀಗಾಗಿ ಆರೋಪಿಯ ರಕ್ತದ ಮಾದರಿ ಸಂಗ್ರಹಿಸಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಪೊಲೀಸರು ರವಾನೆ ಮಾಡಿದ್ದಾರೆ.

  • ಟ್ರಾಫಿಕ್ ಪೊಲೀಸರಿಗೂ ತಟ್ಟಿತು ಕೊರೋನಾ ವೈರಸ್ ಎಫೆಕ್ಟ್

    ಟ್ರಾಫಿಕ್ ಪೊಲೀಸರಿಗೂ ತಟ್ಟಿತು ಕೊರೋನಾ ವೈರಸ್ ಎಫೆಕ್ಟ್

    ಬೆಂಗಳೂರು: ಕೊರೊನಾ ವೈರಸ್ ಎಫೆಕ್ಟ್ ನಗರದ ಟ್ರಾಫಿಕ್ ಪೊಲೀಸರಿಗೂ ತಟ್ಟಿದೆ. ಬೆಂಗಳೂರಿನ ಟೆಕ್ಕಿಯೊಬ್ಬರಿಗೆ ಕೊರೊನಾ ವೈರಸ್ ಧೃಡಪಟ್ಟ ಹಿನ್ನೆಲೆಯಲ್ಲಿ ನಗರದ ಟ್ರಾಫಿಕ್ ಪೊಲೀಸರು ಡ್ರಿಂಕ್ & ಡ್ರೈವ್ ಚೆಕ್ ಮಾಡುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ.

    ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು, ಈಗಾಗಲೇ ಬೆಂಗಳೂರಿಗೆ ಕೊರೊನಾ ಬಂದಿರುವ ವಿಚಾರ ತಿಳಿದು ನಮ್ಮ ಸಿಬ್ಬಂದಿ ಭಯಗೊಂಡಿದ್ದಾರೆ. ಡ್ರಿಂಕ್ & ಡ್ರೈವ್ ಚೆಕ್ ಮಾಡುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಬಾಯಿ ವಾಸನೆ ಮೂಲಕ ನಾವು ಡ್ರಿಂಕ್ & ಡ್ರೈವ್ ಚೆಕ್ ಮಾಡಬೇಕು. ನಂತರ ಡಿಡಿ ಮಿಷಿನ್‍ನಲ್ಲಿ ಚೆಕ್ ಮಾಡುವುದು. ಹಾಗಾಗಿ ನಮಗೂ ಕೊರೊನಾ ವೈರಸ್ ತಗುಲುವ ಸಾಧ್ಯತೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಇದನ್ನೂ ಓದಿ: ಬೆಂಗಳೂರು ಟೆಕ್ಕಿಗೆ ಕೊರೋನಾ ಬಂದಿದ್ದು ಹೇಗೆ?

    ಈಗಾಗಲೇ ಕೆಲ ವಿದೇಶಗಳಲ್ಲಿ ಹ್ಯಾಂಡ್ ಶೇಕ್ ಮಾಡುವುದು, ಪರಸ್ಪರ ಚುಂಬಿಸುವುದನ್ನು ನಿಷೇಧಿಸಲಾಗಿದೆ. ಈ ಬಗ್ಗೆ ನಮ್ಮ ಮೇಲಾಧಿಕಾರಿಗಳ ಗಮನ ಹರಿಸಬೇಕು, ನಮಗೂ ಫ್ಯಾಮಿಲಿಗಳಿವೆ. ಏನಾದರೂ ಹೆಚ್ಚು ಕಮ್ಮಿಯಾದರೆ ಯಾರು ಹೊಣೆ ಎಂದು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು. ಇದನ್ನೂ ಓದಿ: 24 ವರ್ಷದ ಬೆಂಗ್ಳೂರು ಟೆಕ್ಕಿಗೆ ಕೊರೋನಾ ವೈರಸ್

    ಬೆಂಗಳೂರಿನಲ್ಲಿ ಕೆಲಸ ಮಾಡುವ ಹೈದರಾಬಾದ್ ಮೂಲದ ಟೆಕ್ಕಿಗೆ ಕೊರೊನಾ ವೈರಸ್ ಪತ್ತೆಯಾಗಿದ್ದು, ಟೆಕ್ಕಿಗೆ ಹೈದರಾಬಾದ್‍ನಲ್ಲಿ ಚಿಕಿತ್ಸೆ ಮುಂದುವರಿದಿದೆ. ಇದರ ಎಫೆಕ್ಟ್ ಈಗ ಪೊಲೀಸರಿಗೂ ತಟ್ಟಿದೆ.

  • ಕುಡಿದು ಟೈಟ್ ಆಗಿ ಪೊಲೀಸರನ್ನೇ ತಳ್ಳಾಡಿ ಗಲಾಟೆ ಮಾಡಿದ್ರು!

    ಕುಡಿದು ಟೈಟ್ ಆಗಿ ಪೊಲೀಸರನ್ನೇ ತಳ್ಳಾಡಿ ಗಲಾಟೆ ಮಾಡಿದ್ರು!

    ಬೆಂಗಳೂರು: ಕಂಠಪೂರ್ತಿ ಕುಡಿದ ಇಬ್ಬರು ಪೊಲೀಸರೊಂದಿಗೇ ವಾಗ್ವಾದ ನಡೆಸಿದ ಘಟನೆ ಬೆಂಗಳೂರಿನ ಕಾರ್ಪೊರೇಷನ್ ಸರ್ಕಲ್ ಬಳಿ ನಡೆದಿದೆ.

    ಶುಕ್ರವಾರ ರಾತ್ರಿ 2 ಗಂಟೆ ಸುಮಾರಿಗೆ ಇನ್ಸ್ ಪೆಕ್ಟರ್ ಮುಹಮ್ಮದ್ ಅಲಿಯವರು ತಮ್ಮ ಸಿಬ್ಬಂದಿಯೊಂದಿಗೆ ಡ್ರಿಂಕ್ ಅಂಡ್ ಡ್ರೈವ್ ಚೆಕ್ ಮಾಡ್ತಿದ್ರು. ಈ ವೇಳೆ ಬೈಕ್‍ನಲ್ಲಿ ಬಂದ ನಾಗರಬಾವಿ ನಿವಾಸಿ ವಿಜಯ್ ಕುಮಾರ್ ಮತ್ತು ಲೋಕೇಶ್‍ಗೆ ಡ್ರಿಂಕ್ & ಡ್ರೈವ್ ಪರೀಕ್ಷಿಸುವ ಯಂತ್ರಕ್ಕೆ ಊದಲು ಪೊಲೀಸರು ಹೇಳಿದ್ದರು. ಆದ್ರೆ ರಾತ್ರಿ ಎಂ.ಜಿ.ರೋಡ್ ನಿಂದ ಪಾರ್ಟಿ ಮುಗಿಸಿ ಗಡದ್ದಾಗಿ ಕುಡಿದು ಬಂದಿದ್ದ ಇಬ್ಬರು ಡ್ರಿಂಕ್ & ಡ್ರೈವ್ ಪರಿಶೀಲಿಸುವ ಯಂತ್ರಕ್ಕೆ ಊದಲು ನಿರಾಕರಿಸಿದ್ರು.

    ಜೊತೆಗೆ ಜನಪ್ರತಿನಿಧಿಗಳ ಹೆಸರು ಹೇಳಿಕೊಂಡು ಇನ್ಸ್ ಪೆಕ್ಟರ್‍ರನ್ನೇ ತಳ್ಳಾಡಿದ್ರು. ಕುಡುಕರ ಉಪಟಳ ಹೆಚ್ಚುತ್ತಿದ್ದಂತೆ ಸ್ಥಳಕ್ಕೆ ಬಂದ ಹಲಸೂರು ಗೇಟ್ ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ.