Tag: ಡ್ಯಾಂ

  • ರಾಜ್ಯದ ಕರಾವಳಿ, ಮಲೆನಾಡಿನಲ್ಲಿ ವರುಣನ ಆರ್ಭಟ- ಇನ್ನು ನಾಲ್ಕು ದಿನಗಳ ಕಾಲ ಭಾರೀ ಮಳೆ!

    ರಾಜ್ಯದ ಕರಾವಳಿ, ಮಲೆನಾಡಿನಲ್ಲಿ ವರುಣನ ಆರ್ಭಟ- ಇನ್ನು ನಾಲ್ಕು ದಿನಗಳ ಕಾಲ ಭಾರೀ ಮಳೆ!

    ಬೆಂಗಳೂರು: ರಾಜ್ಯದ ಕರಾವಳಿ ಮತ್ತು ಮಲೆನಾಡಿನಲ್ಲಿ ವರುಣನ ಆರ್ಭಟ ಜೋರಾಗಿದೆ. ಇನ್ನು ನಾಲ್ಕು ದಿನಗಳ ಕಾಲ ಭಾರೀ ಮಳೆಯಾಗಲಿದೆ ಅಂತ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದು ಹೈ ಅಲರ್ಟ್ ಘೋಷಿಸಲಾಗಿದೆ.

    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜುಲೈ 11ರ ತನಕ ಮಳೆ ಮುಂದುವರಿಯಲಿದ್ದು, ಜಿಲ್ಲಾಡಳಿತ ತುರ್ತು ನಿರ್ವಹಣೆಗೆ ಸಿದ್ಧಗೊಂಡಿದೆ. ತಗ್ಗು ಪ್ರದೇಶಗಳೂ ಜಲಾವೃತಗೊಂಡಿದ್ದು, ಅವರನ್ನು ರಕ್ಷಣಾ ತಂಡಗಳು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದೆ. ಪ್ರಾಕೃತಿಕ ವಿಕೋಪ ನಿಧಿಯಿಂದ ಈಗಾಗಲೇ ರಕ್ಷಣಾ ಪರಿಕರಗಳನ್ನು ಜಿಲ್ಲಾಡಳಿತ ಖರೀದಿಸಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್ ಹೋಂ ಗಾರ್ಡ್‍ಗೆ ಹಸ್ತಾಂತರಿಸಿದ್ದಾರೆ.

    ಅಲ್ಲದೆ ಮಳೆಯಿಂದಾಗಿ ಹೆಚ್ಚಿನ ಅನಾಹುತವಾದಲ್ಲಿ ಕ್ರಮಕೈಗೊಳ್ಳಲು ಎರಡು ಪ್ರಾಕೃತಿಕ ವಿಪತ್ತು ನಿರ್ವಾಹಣಾ ತಂಡಗಳು ಜಿಲ್ಲೆಗೆ ಆಗಮಿಸಿದೆ. ಇನ್ನು ಜಿಲ್ಲೆಯ ಎಲ್ಲಾ ಜೀವ ನದಿಗಳೂ ಅಪಾಯದ ಮಟ್ಟ ಮೀರಿ ಮೈದುಂಬಿ ಹರಿಯುತ್ತಿದೆ. ಮಡಿಕೇರಿಯ ಭಾಗಮಂಡಲ ತ್ರಿವೇಣಿ ಸಂಗಮ ಮತ್ತೊಮ್ಮೆ ಜಲಾವೃತವಾಗಿದೆ. ಹಾರಂಗಿ ಡ್ಯಾಂ ಭರ್ತಿಗೆ 4 ಅಡಿ ಮಾತ್ರ ಬಾಕಿಯಿದೆ. ಮಳೆ ಇದೇ ರೀತಿ ಮುಂದುವರಿದರೆ ತಗ್ಗು ಪ್ರದೇಶಗಳು ಇನ್ನಷ್ಟು ಮುಳುಗಡೆಯಾಗುವ ಭೀತಿ ಇದೆ.

    ಡ್ಯಾಂ ಲೆವಲ್
    ಕಾವೇರಿ ಕೊಳ್ಳದ ಜಲಾಶಯಗಳ ಸದ್ಯದ ನೀರಿನ ಪ್ರಮಾಣ ನೋಡೋದಾದ್ರೆ;

    ಕೆಆರ್ ಎಸ್ (ಮಂಡ್ಯ)
    * ಇಂದಿನ ಮಟ್ಟ – 108.78 ಅಡಿ ( ಗರಿಷ್ಠ 124.80 ಅಡಿ)
    * ಒಳ ಹರಿವು – 2505 ಕ್ಯೂಸೆಕ್
    * ಹೊರ ಹರಿವು – 3482 ಕ್ಯೂಸೆಕ್

    ಕಬಿನಿ (ಮೈಸೂರಿನ ಎಚ್.ಡಿ.ಕೋಟೆಯ ಬೀಚನಹಳ್ಳಿಯಲ್ಲಿದೆ)
    * ಇಂದಿನ ಮಟ್ಟ – 2283 ಅಡಿ ( ಗರಿಷ್ಠ 2,284 ಅಡಿ)
    * ಒಳ ಹರಿವು – 22,000 ಕ್ಯೂಸೆಕ್
    * ಹೊರ ಹರಿವು – 25,000 ಕ್ಯೂಸೆಕ್

    ಹಾರಂಗಿ (ಕೊಡಗಿನ ಸೋಮವಾರಪೇಟೆಯ ಹುದ್ಗೂರು)
    * ಇಂದಿನ ಮಟ್ಟ – 2852.49 ಅಡಿ (ಗರಿಷ್ಠ 2,859 ಅಡಿ)
    * ಒಳ ಹರಿವು – 2591 ಕ್ಯೂಸೆಕ್
    * ಹೊರ ಹರಿವು – 1200 ಕ್ಯೂಸೆಕ್

    ಇನ್ನು ಕರ್ನಾಟಕವಷ್ಟೇ ಅಲ್ಲ, ಕೇರಳ, ತೆಲಂಗಾಣ, ಮಹಾರಾಷ್ಟ್ರ ಹಾಗೂ ಗೋವಾದಲ್ಲಿ ಮುಂದಿನ ಐದು ದಿನಗಳವರೆಗೆ ಭಾರೀ ಮಳೆಯಾಗಲಿದೆ ಅಂತ ಹವಾಮಾನ ಇಲಾಖೆ ಎಚ್ಚರಿಸಿದೆ. ಈಗಾಗಲೇ ಭಾರೀ ಮಳೆಗೆ ಮಹಾನರಿ ಮುಂಬೈ ಮುಳುಗಿ ಹೋಗಿದೆ. ಮಲಾಡ್, ಬೋರಿವಿಲಿ, ಪವಾಯಿ, ನವಿ ಮುಂಬೈ, ಥಾಣೆಯಲ್ಲಿ ವರುಣ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ. ಮಳೆ ನೀರು ತಗ್ಗು ಪ್ರದೇಶಗಳಿಗೆ ನುಗ್ಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.

    ನವಿ ಮುಂಬೈನಲ್ಲಿ ಮಳೆ ಆರ್ಭಟದಿಂದ ಟ್ರಾಫಿಕ್ ಉಂಟಾಗಿ ಸವಾರರು ಪರದಾಡಿದ್ರು. ಇನ್ನು ರೈಲ್ವೇ ಹಳಿಗಳು ಜಲಾವೃತವಾಗಿದ್ದು, ರಸ್ತೆಗಳು ಅಯೋಮಯವಾಗಿದೆ. ವರುಣನ ರುದ್ರ ನರ್ತನಕ್ಕೆ ಮುಂಬೈ ನಡುಗಿ ಹೋಗಿದ್ದು, ಜನ ನಿದ್ದೆ ಇಲ್ಲದೇ ದಿನ ದೂಡೋ ಸ್ಥಿತಿ ನಿರ್ಮಾಣವಾಗಿದೆ.

    ಕ್ಯೂಸೆಕ್ ಮತ್ತು ಟಿಎಂಸಿ ಎಂದರೆ ಎಷ್ಟು?
    ಕ್ಯೂಸೆಕ್ ಎಂಬುದು ಕ್ಯೂಬಿಕ್ ಫೀಟ್ ಪರ್ ಸೆಕೆಂಡ್ ನ ಹ್ರಸ್ವರೂಪ. ಪ್ರತಿ ಸೆಕೆಂಡಿಗೆ ಒಂದು ಘನ ಅಡಿ ನೀರು ಹರಿದರೆ ಅದು ಒಂದು ಕ್ಯೂಸೆಕ್ ನೀರು ಎಂದು ಕರೆಯಲ್ಪಡುತ್ತದೆ. ಒಂದು ಘನ ಅಡಿ ನೀರನ್ನು ಲೀಟರುಗಳಿಗೆ ಪರಿವರ್ತಿಸಿದರೆ ಸುಮಾರು 28.317 ಲೀಟರುಗಳಾಗುತ್ತವೆ. 11,524 ಕ್ಯೂಸೆಕ್ ನೀರು 24 ಗಂಟೆಯ ಕಾಲ ನಿರಂತರ ಹರಿದರೆ ಒಂದು ಟಿಎಂಸಿ ಎಂದು ಕರೆಯಲಾಗುತ್ತದೆ. 10 ಸಾವಿರ ಕ್ಯೂಸೆಕ್ ನೀರು 24 ಗಂಟೆ ನಿರಂತರ ಹರಿದರೆ 0.864 ಟಿಎಂಸಿ ಅಡಿ ಆಗುತ್ತದೆ. 35.87 ಅಡಿ ಅಳದಷ್ಟು ನೀರನ್ನು ಒಂದು ಚದರ ಮೈಲಿ ಪ್ರದೇಶದಲ್ಲಿ ಸಂಗ್ರಹಿಸಿದರೆ ಒಂದು ಟಿಎಂಸಿ ಅಡಿ ಆಗುತ್ತದೆ.

  • ರಾಜ್ಯದಲ್ಲಿ ಮುಂಗಾರು ಮಳೆ ಆರ್ಭಟ- ರಾಜ್ಯದ ರೈತರ ಪಾಲಿಗೆ ಸಂತೋಷದ ಸುದ್ದಿ

    ರಾಜ್ಯದಲ್ಲಿ ಮುಂಗಾರು ಮಳೆ ಆರ್ಭಟ- ರಾಜ್ಯದ ರೈತರ ಪಾಲಿಗೆ ಸಂತೋಷದ ಸುದ್ದಿ

    ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ ಆರ್ಭಟ ಜೋರಾಗಿದ್ದು, ನಾಲ್ಕು ವರ್ಷದ ಬರಗಾಲಕ್ಕೆ ಈ ಬಾರಿ ಅಂತ್ಯ ಕಾಣಲಿದೆ. ಅಲ್ಲದೇ ರಾಜ್ಯದ ರೈತರ ಪಾಲಿಗೆ ಸಂತೋಷದ ಸುದ್ದಿ ನೀಡಿದೆ.

    ರಾಜಕ್ಕೆ ಜೂನ್ ತಿಂಗಳಲ್ಲಿ ಶೇಕಡಾ 25 ರಷ್ಟು ಮಳೆ ಹೆಚ್ಚಾಗಿದೆ. ನಾಲ್ಕು ವರ್ಷದಿಂದ ಮಳೆಯ ಕೊರತೆಯನ್ನು ಅನುಭವಿಸಿದ್ದ ರಾಜ್ಯ, ಜೂನ್ ತಿಂಗಳಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿದೆ. ಜೂನ್ ನಲ್ಲಿ ವಾಡಿಕೆಯಂತೆ 162.4 ಮೀಲಿ ಮೀಟರ್ ಮಳೆಯಾಗಬೇಕಿತ್ತು. ಆದರೆ 202.3 ಮೀಲಿ ಮೀಟರ್ ಮಳೆಯಾಗಿದೆ.

    ರಾಜ್ಯದ 30 ಜಿಲ್ಲೆಗಳಲ್ಲಿ ಕೇವಲ ಮೂರು ಜಿಲ್ಲೆಗಳಲ್ಲಿ ಮಾತ್ರ ಮಳೆಯ ಕೊರತೆಯಾಗಿದೆ. 13 ಜಿಲ್ಲೆಗಳಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿದ್ದು, 14 ಜಿಲ್ಲೆಗಳಲ್ಲಿ ವಾಡಿಕೆಯಷ್ಟು ಮಳೆಯಾಗಿದೆ. ಹೀಗಾಗಿ ರಾಜ್ಯದ ಹಲವು ಡ್ಯಾಂ ಗಳಿಗೆ ಜೀವ ಕಳೆ ತುಂಬಿದೆ.

    ಡ್ಯಾಂ ನಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಿದೆ. ಇನ್ನೂ ಮಳೆ ರಾಜ್ಯದಲ್ಲಿ ಸಾಕಷ್ಟು ಅನಾಹುತ ಕೂಡ ಸೃಷ್ಟಿ ಮಾಡಿದ್ದು, ಮಳೆ ಸೃಷ್ಟಿಸಿದ ಅನಾಹುತದಿಂದಾಗಿ 119 ಜನರು ಸಾವನ್ನಪ್ಪಿದ್ದಾರೆ. ಈ ಭಾರಿ ಮುಂಗಾರು ಮಳೆ ಮುಂದಿನ ದಿನಗಳಲ್ಲಿ ಕೂಡ ಉತ್ತಮ ಆಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

    ಸದ್ಯ ರಾಜ್ಯದ ಎಲ್ಲಾ ಡ್ಯಾಂ ಗಳು ತುಂಬುವ ನೀರಿಕ್ಷೆಗಳಿವೆ.

  • ಕೆಮಿಕಲ್ ಸೋರಿಕೆಯಿಂದ ಸುಟ್ಟು ಕರಕಲಾದ ಮರಗಳು

    ಕೆಮಿಕಲ್ ಸೋರಿಕೆಯಿಂದ ಸುಟ್ಟು ಕರಕಲಾದ ಮರಗಳು

    ಕಾರವಾರ: ಕೈಗಾ ಅಣು ವಿದ್ಯುತ್ ಸ್ಥಾವರಕ್ಕೆ ಕೆಮಿಕಲ್ ಸಾಗಿಸುತ್ತಿದ್ದ ಲಾರಿಯಿಂದ ಕೆಮಿಕಲ್ ಸೋರಿಕೆಯಾಗಿ ಮರಗಳು ಸುಟ್ಟು ಹೋಗಿರುವ ಘಟನೆ ಕಾಳಿ ನದಿಯ ಬಳಿ ನಡೆದಿದೆ.

    ಕೈಗಾಗೆ ಹೋಗಬೇಕಿದ್ದ ಲಾರಿ ದಾರಿ ತಪ್ಪಿ ಕದ್ರಾ ಕಡೆ ಬಂದಿದೆ. ಕೈಗಾ ಕಡೆ ಲಾರಿ ತಿರುಗಿಸುವಾಗ ಕೆಮಿಕಲ್ ಸೋರಿಕೆಯಾಗಿ ಮರಗಳು ಸುಟ್ಟು ಹೋಗಿವೆ. ಪಕ್ಕದಲ್ಲೇ ಹರಿಯುತ್ತಿದ್ದ ನೀರಿಗೂ ಕೆಮಿಕಲ್ ಸೇರಿಕೊಂಡಿದೆ. ಇದರಿಂದ ನೂರಾರು ಮೀನುಗಳು ಸಾವನ್ನಪ್ಪಿವೆ ಹಾಗೂ ಒಂದು ಎಮ್ಮೆ ಸತ್ತಿದೆ ಎಂದು ತಿಳಿದುಬಂದಿದೆ.

    ಕದ್ರಾ ಗ್ರಾಮಕ್ಕೆ ಸರಬರಾಜಾಗುವ ಕುಡಿಯುವ ನೀರು ಇದಾಗಿದ್ದು, ಮುನ್ನೇಚ್ಚರಿಕಾ ಕ್ರಮವಾಗಿ ಗ್ರಾಮಕ್ಕೆ ಎರಡು ದಿನ ಕುಡಿಯುವ ನೀರನ್ನು ಸ್ಥಗಿತಗೊಳಿಸಿದ್ದಾರೆ. ನೀರಿನ ಸ್ಯಾಂಪಲ್ ಅನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಕದ್ರಾ ಗ್ರಾಮದಲ್ಲಿ ಸುಮಾರು 5 ಸಾವಿರ ಜನ ವಾಸಮಾಡುತ್ತಾರೆ. ಎರಡು ದಿನ ಕುಡಿಯುವ ನೀರನ್ನು ಸ್ಥಗಿತ ಮಾಡಿದಲ್ಲಿ ತೊಂದರೆಯಾಗುತ್ತದೆ. ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಬಂದಿಲ್ಲ ಎಂದು ಗ್ರಾಮಸ್ಥರು ಅಳಲನ್ನು ತೋಡಿಕೊಂಡಿದ್ದಾರೆ.

    ಕರ್ನಾಟಕ ವಿದ್ಯುತ್ ನಿಗಮ, ಎನ್ ಪಿ ಸಿ ಕಾಲೋನಿಗಳು ಇದೇ ಗ್ರಾಮದಲ್ಲಿ ಇವೆ. ಎರಡು ದಿನ ಕುಡಿಯುವ ನೀರನ್ನು ಬಂದ್ ಮಾಡಿದಲ್ಲಿ ಬೇರೆ ನೀರಿನ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಬೇಕು ಎಂದು ಜನರು ಆಗ್ರಹಿಸಿದ್ದಾರೆ.

    ಲಾರಿ ಸಿಬ್ಬಂದಿಗಳು ಸೋರಿಕೆಯನ್ನು ಸರಿಪಡಿಸಿಕೊಂಡು ಸ್ಥಳದಿಂದ ಹೊರಟು ಹೋಗಿದ್ದಾರೆ. ಈ ವಿಚಾರಕ್ಕೆ ಸಂಬಂಧ ಪಟ್ಟಂತೆ ಯಾವುದೇ ದೂರು ದಾಖಲಾಗಿಲ್ಲ.

  • ಕನ್ನಡಿಗರ ಕೈ ತಪ್ಪಲಿದೆಯೇ ಕಾವೇರಿ ನದಿ, ಡ್ಯಾಂಗಳು?

    ಕನ್ನಡಿಗರ ಕೈ ತಪ್ಪಲಿದೆಯೇ ಕಾವೇರಿ ನದಿ, ಡ್ಯಾಂಗಳು?

    ಬೆಂಗಳೂರು: ಕಾವೇರಿ ನದಿ ಮತ್ತು ಡ್ಯಾಂಗಳು ಕನ್ನಡಿಗರ ಕೈತಪ್ಪಿ ಹೋಗುವ ಸಾಧ್ಯತೆ ದಟ್ಟವಾಗಿದೆ. ಕರ್ನಾಟಕ-ತಮಿಳುನಾಡು ನಡುವಿನ ನದಿ ನೀರು ಹಂಚಿಕೆ ವಿವಾದ ಇತ್ಯರ್ಥಕ್ಕೆ ಕೇಂದ್ರ ಸರ್ಕಾರ 14 ಪುಟಗಳ ಕಾವೇರಿ ಸ್ಕೀಂ ಕರಡುವನ್ನು ಸುಪ್ರೀಂಕೋರ್ಟ್ ಗೆ ಸಲ್ಲಿಸಿದೆ.

    ಇಂದು ಇದರ ಬಗ್ಗೆ ವಿಚಾರಣೆ ನಡೆಯಲಿದ್ದು, ಎಲ್ಲಾ ರಾಜ್ಯಗಳಿಂದ ಒಟ್ಟು 9 ಜನ ಸದಸ್ಯರ ನೇಮಕ ಮಾಡುವುದಾಗಿ ಸ್ಕೀಂ ಕರಡುನಲ್ಲಿ ಉಲ್ಲೇಖಿಸಲಾಗಿದೆ. ಕಾವೇರಿ ಸ್ಕೀಂನ್ನು ಏನೆಂದು ಕರೆಯಬೇಕು, ಪ್ರಾಧಿಕಾರವೋ, ಸಮಿತಿಯೋ, ಮಂಡಳಿಯೋ ಎಂಬುದನ್ನು ನ್ಯಾಯಪೀಠವೇ ತೀರ್ಮಾನಿಸುತ್ತೆ ಅಂತ ಕೇಂದ್ರ ಸರ್ಕಾರ ಹೇಳಿದೆ. ಇದನ್ನೂ ಓದಿ: ಕಾವೇರಿ ಸ್ಕೀಂ ಸುಪ್ರೀಂಗೆ ಕರಡು ಅಫಿಡವಿಟ್ ಸಲ್ಲಿಕೆ: ಹೇಗಿರಲಿದೆ ಸ್ಕೀಂ? ಕಾರ್ಯಗಳು ಏನು? ಯಾರೆಲ್ಲ ಇರಲಿದ್ದಾರೆ?

    ಹಾಗಾದ್ರೆ ಕಾವೇರಿ ಡ್ರಾಫ್ಟ್ ಸ್ಕೀಂ ಕರಡುವಿನಲ್ಲಿರುವ ಅಂಶಗಳು ಏನೇನು ಅಂತ ನೋಡೋದಾದ್ರೆ..
    * ಕಾವೇರಿ ನೀರಿನ ಸಂಗ್ರಹ & ನಿಯಂತ್ರಣ
    * ಜಲಾಶಯ, ನೀರು ಬಿಡುಗಡೆಯ ಮೇಲ್ವಿಚಾರಣೆ
    * ಬಿಳಿಗುಂಡ್ಲು ಬಳಿ ನೀರಿನ ಅಳತೆ ಮಾಡುವ ಜವಾಬ್ದಾರಿ ಪ್ರಾಧಿಕಾರದ್ದೇ
    * ನ್ಯಾಯಮಂಡಳಿ ಆದೇಶದಂತೆ ಕಾವೇರಿ ನೀರು ಬಿಡುಗಡೆಗೆ ಕ್ರಮ ಕೈಗೊಳ್ಳುವುದು
    * ಪ್ರತಿ 10 ದಿನಕ್ಕೊಮ್ಮೆ ಕರ್ನಾಟಕದಿಂದ ತಮಿಳುನಾಡಿಗೆ ನೀರು ಬಿಡುಗಡೆ
    * ನೀರಿನ ಕೊರತೆ ಕಂಡು ಬಂದರೆ ರಾಜ್ಯಗಳ ಪಾಲಿನಲ್ಲಿ ಕಡಿತ
    * ಮುಂಗಾರು ಮಳೆಯ ಆಧರಿಸಿ ಪ್ರಾಧಿಕಾರದಿಂದ ನಿರ್ಧಾರ
    * ಕರ್ನಾಟಕದ ನಾಲ್ಕು ಡ್ಯಾಮ್‍ಗಳು, ಕೇರಳ, ತಮಿಳುನಾಡಿನ ಡ್ಯಾಂಗಳ ನಡುವೆ ಸಮನ್ವಯ
    * ಪ್ರಾಧಿಕಾರದ ಸೂಚನೆಯಂತೆ ಜಲಾಶಯಗಳ ಕಾರ್ಯನಿರ್ವಹಣೆ
    * ಕಾವೇರಿಕೊಳ್ಳದ ಬೆಳೆ ಪ್ರದೇಶ, ಬೆಳೆ ಸ್ವರೂಪದ ಬಗ್ಗೆ ನಿಗಾ
    * ಪ್ರತಿವರ್ಷ ಬೇಕಾದ ನೀರಿನ ಅಗತ್ಯತೆ ಬಗ್ಗೆ ಅಂದಾಜು ಸಲ್ಲಿಕೆ ಕಡ್ಡಾಯ
    * ಪ್ರಾಧಿಕಾರದ ಸದಸ್ಯರ ಡ್ಯಾಮ್‍ಗಳ ಭೇಟಿಗೆ ಪರಮಾಧಿಕಾರ
    * ಡ್ಯಾಮ್‍ಗಳ ಕಾಮಗಾರಿ ಗುತ್ತಿಗೆಗೆ ಪ್ರಾಧಿಕಾರದ ಪೂರ್ವಾನುಮತಿ ಅಗತ್ಯ
    * ಕಾವೇರಿಕೊಳ್ಳದ ರಾಜ್ಯಗಳು ಒಪ್ಪದಿದ್ದರೆ ಕೇಂದ್ರ ಸರ್ಕಾರ ಮಧ್ಯಪ್ರವೇಶ
    * ಕಾವೇರಿ ಪ್ರಾಧಿಕಾರದ ಕೇಂದ್ರ ಕಚೇರಿ ಬೆಂಗಳೂರಿನಲ್ಲಿ ಇರಲಿದೆ

  • ಯಾದಗಿರಿ, ರಾಯಚೂರು ಜಿಲ್ಲೆಗಳ ಜೀವನಾಡಿ ಬಸವಸಾಗರ ಜಲಾಶಯ ಭರ್ತಿ

    ಯಾದಗಿರಿ, ರಾಯಚೂರು ಜಿಲ್ಲೆಗಳ ಜೀವನಾಡಿ ಬಸವಸಾಗರ ಜಲಾಶಯ ಭರ್ತಿ

    ಯಾದಗಿರಿ: ಯಾದಗಿರಿ, ರಾಯಚೂರ ಜಿಲ್ಲೆಗಳ ಜೀವನಾಡಿ ಬಸವಸಾಗರ ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಿದ್ದು ರೈತರು ಸಂತೋಷಗೊಂಡಿದ್ದಾರೆ.

    ಜಿಲ್ಲೆಯ ನಾರಾಯಣಪುರದ ಬಸವಸಾಗರ ಜಲಾಶಯದ ಒಟ್ಟು 33.33 ಟಿಎಂಸಿ ನೀರು ಸಂಗ್ರಹದ ಸಾಮರ್ಥ್ಯ ಹೊಂದಿದ್ದು, ಇದೀಗ ಜಲಾಶಯದಲ್ಲಿ 33 ಟಿಎಂಸಿ ನೀರು ಈಗ ಸಂಗ್ರಹವಾಗಿದೆ.

    ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಜಲಾಶಯ ತುಂಬಿದ್ದು, ಹೆಚ್ಚಿನ ಪ್ರಮಾಣದ ನೀರನ್ನು ಕರ್ನಾಟಕದ ಜಲಾಶಯಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಬಿಡಲಾಗುತ್ತಿದೆ. ಇದರಿಂದ ಆಲಮಟ್ಟಿ, ಬಸವಸಾಗರ ಜಲಾಶಯಗಳು ಭರ್ತಿಯಾಗಿವೆ.

    ಆಲಮಟ್ಟಿ ಜಲಾಶಯಕ್ಕೆ ಭರ್ತಿಯಾಗಿದ್ದು ಅಲ್ಲಿಂದ ನೀರು ಬಿಟ್ಟ ಹಿನ್ನೆಲೆಯಲ್ಲಿ ಈಗ ಬಸವಸಾಗರ ಜಲಾಶಯ ಭರ್ತಿಯಾಗಿದೆ. ಈಗ 20 ಸಾವಿರ ಕ್ಯೂಸೆಕ್ ನೀರು ಒಳಹರಿವು ಇದ್ದು, ಕೃಷ್ಣಾನದಿಗೆ 6 ಸಾವಿರ ಕ್ಯೂಸೆಕ್ ಹಾಗೂ ಕೃಷ್ಣಾ ಎಡ ಮತ್ತು ಬಲದಂಡೆ ಕಾಲುವೆಗಳಿಗೆ 10 ಸಾವಿರ ಕ್ಯೂಸೆಕ್ ನೀರನ್ನು ಹರಿಸಲಾಗುತ್ತಿದೆ.

    ಉತ್ತರ ಕರ್ನಾಟಕದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಬೀಳದೇ ಇದ್ದರೂ ಜಲಾಶಯ ಭರ್ತಿಯಾಗಿದ್ದು, ಮುಂಬರುವ ದಿನಗಳಲ್ಲಿ ಎದರಿಸಬಹುದಾದ ನೀರಿನ ಸಮಸ್ಯೆಗೆ ಮುಕ್ತಿ ಸಿಕ್ಕಿದ್ದಕ್ಕೆ ರೈತರಲ್ಲಿ ಸಂತಸ ಮೂಡಿಸಿದೆ. ನೀರು ಹೊರ ಬಿಡುತ್ತಿರುವುದರಿಂದ ಯಾವುದೇ ಕಾರಣಕ್ಕೂ ಜನತೆ ನದಿ ತೀರಕ್ಕೆ ತೆರಳದಂತೆ ಜಲಾಶಯದ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

    ಕ್ಯೂಸೆಕ್ ಟಿಎಂಸಿ ಎಂದರೆ ಎಷ್ಟು?
    ಕ್ಯೂಸೆಕ್ ಎಂಬುದು cubic foot per second ಹೃಸ್ವರೂಪ. ಪ್ರತಿ ಸೆಕೆಂಡಿಗೆ ಒಂದು ಘನ ಅಡಿ ನೀರು ಹರಿದರೆ ಅದು ಒಂದು ಕ್ಯೂಸೆಕ್ ನೀರು ಎಂದು ಕರೆಯಲ್ಪಡುತ್ತದೆ. ಒಂದು ಘನ ಅಡಿ ನೀರನ್ನು ಲೀಟರುಗಳಿಗೆ ಪರಿವರ್ತಿಸಿದರೆ ಸುಮಾರು 28.317 ಲೀಟರುಗಳಾಗುತ್ತವೆ. 11,524 ಕ್ಯೂಸೆಕ್ ನೀರು 24 ಗಂಟೆಯ ಕಾಲ ನಿರಂತರ ಹರಿದರೆ ಒಂದು ಟಿಎಂಸಿ ಎಂದು ಕರೆಯಲಾಗುತ್ತದೆ. 10 ಸಾವಿರ ಕ್ಯೂಸೆಕ್ ನೀರು 24 ಗಂಟೆ ನಿರಂತರ ಹರಿದರೆ 0.864 ಟಿಎಂಸಿ ಅಡಿ ಆಗುತ್ತದೆ. 35.87 ಅಡಿ ಅಳದಷ್ಟು ನೀರನ್ನು ಒಂದು ಚದರ ಮೈಲಿ ಪ್ರದೇಶದಲ್ಲಿ ಸಂಗ್ರಹಿಸಿದರೆ ಒಂದು ಟಿಎಂಸಿ ಅಡಿ ಆಗುತ್ತದೆ.

    ಇದನ್ನೂ ಓದಿ: ಆಲಮಟ್ಟಿ ಡ್ಯಾಂ ಭರ್ತಿ: ರೈತರ ಮೊಗದಲ್ಲಿ ಸಂತಸ

  • ಕೆಆರ್‍ಎಸ್ ಒಳ ಹರಿವು ಹೆಚ್ಚಳ: ಡ್ಯಾಂನಲ್ಲಿ ನೀರು ಎಷ್ಟಿದೆ?

    ಕೆಆರ್‍ಎಸ್ ಒಳ ಹರಿವು ಹೆಚ್ಚಳ: ಡ್ಯಾಂನಲ್ಲಿ ನೀರು ಎಷ್ಟಿದೆ?

    ಮಂಡ್ಯ: ಕಾವೇರಿ ಕೊಳ್ಳದ ಪ್ರದೇಶದಲ್ಲಿ ಮಳೆಯಾಗುತ್ತಿದ್ದು, ಶ್ರೀರಂಗ ಪಟ್ಟಣದಲ್ಲಿರುವ ಕೃಷ್ಣರಾಜ ಸಾಗರ ಜಲಾಶಯದಲ್ಲಿ ಒಳಹರಿವು ಹೆಚ್ಚಳವಾಗುತ್ತಿದೆ.

    ಈಗ 1262 ಕ್ಯೂಸೆಕ್ ಒಳಹರಿವು ಇದ್ದು, 1076 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. 124.80 ಅಡಿ ನೀರಿನ ಸಂಗ್ರಹ ಸಾಮರ್ಥ್ಯ ಇರುವ ಜಲಾಶಯದಲ್ಲಿ ಈಗ 67.90 ಅಡಿಗಳಷ್ಟು ನೀರು ಸಂಗ್ರಹವಾಗಿದೆ.

    ಕ್ಯೂಸೆಕ್ ಟಿಎಂಸಿ ಎಂದರೆ ಎಷ್ಟು?
    ಕ್ಯೂಸೆಕ್ ಎಂಬುದು cubic foot per second ಹೃಸ್ವರೂಪ. ಪ್ರತಿ ಸೆಕೆಂಡಿಗೆ ಒಂದು ಘನ ಅಡಿ ನೀರು ಹರಿದರೆ ಅದು ಒಂದು ಕ್ಯೂಸೆಕ್ ನೀರು ಎಂದು ಕರೆಯಲ್ಪಡುತ್ತದೆ. ಒಂದು ಘನ ಅಡಿ ನೀರನ್ನು ಲೀಟರುಗಳಿಗೆ ಪರಿವರ್ತಿಸಿದರೆ ಸುಮಾರು 28.317 ಲೀಟರುಗಳಾಗುತ್ತವೆ. 11,524 ಕ್ಯೂಸೆಕ್ ನೀರು 24 ಗಂಟೆಯ ಕಾಲ ನಿರಂತರ ಹರಿದರೆ ಒಂದು ಟಿಎಂಸಿ ಎಂದು ಕರೆಯಲಾಗುತ್ತದೆ. 10 ಸಾವಿರ ಕ್ಯೂಸೆಕ್ ನೀರು 24 ಗಂಟೆ ನಿರಂತರ ಹರಿದರೆ 0.864 ಟಿಎಂಸಿ ಅಡಿ ಆಗುತ್ತದೆ. 35.87 ಅಡಿ ಅಳದಷ್ಟು ನೀರನ್ನು ಒಂದು ಚದರ ಮೈಲಿ ಪ್ರದೇಶದಲ್ಲಿ ಸಂಗ್ರಹಿಸಿದರೆ ಒಂದು ಟಿಎಂಸಿ ಅಡಿ ಆಗುತ್ತದೆ.

     

  • ಕೊಪ್ಪಳ: 42 ವರ್ಷಗಳಲ್ಲಿಯೇ ಭೀಕರ ಬರಕ್ಕೆ ತುತ್ತಾಗಿದೆ, ಗುಳೆ ಹೋಗಿದ್ದಾರೆ ಜನ!

    ಕೊಪ್ಪಳ: 42 ವರ್ಷಗಳಲ್ಲಿಯೇ ಭೀಕರ ಬರಕ್ಕೆ ತುತ್ತಾಗಿದೆ, ಗುಳೆ ಹೋಗಿದ್ದಾರೆ ಜನ!

    ಮುಕ್ಕಣ್ಣ ಕತ್ತಿ

    ಕೊಪ್ಪಳ: ಬರಪೀಡಿತ ಜಿಲ್ಲೆ ಅಂತಾನೇ ಹಣೆಪಟ್ಟಿ ಕಟ್ಟಿಕೊಂಡಿರೋ ಜಿಲ್ಲೆ. ಈ ಜಿಲ್ಲೆಯಲ್ಲಿ ಬಿರು ಬಿಸಿಲಿಗೆ ಒಣಗಿ ಬಾಯಿಬಟ್ಟಿರೋ ಹೊಲ, ಕೆರೆಗಳು.. ಉದ್ಯೋಗ ಅರಿಸಿ ಗುಳೆಹೋಗಿ ಖಾಲಿ ಹೊಡೆಯುತ್ತಿರೋ ತಾಂಡಾಗಳು. ರಣ ರಣ ಬಿಸಿಲಿನಲ್ಲಿ ಬದುಕನ್ನರಿಸಿ ಹೊರಟ ಜೀವಗಳು.. ಇವೆಲ್ಲಾ ಕೊಪ್ಪಳ ಜಿಲ್ಲೆಯ ಬರದ ಭೀಕರತೆ..ಕೊಪ್ಪಳ ಅಂದ್ರೆ ಬರ.. ಬರ ಅಂದ್ರೆ ಕೊಪ್ಪಳ ಅನ್ನುವಷ್ಟರ ಮಟ್ಟಿಗೆ ಬರ ತಾಂಡವಾಡ್ತಿದೆ.

    ಹೌದು. ಕೊಪ್ಪಳ ಜಿಲ್ಲೆಯಲ್ಲೀಗ ಭೀಕರ ಬರಗಾಲದ ಕರಿ ಛಾಯೆ ಆವರಿಸಿದೆ. ಕಳೆದ 42 ವರ್ಷಗಳಲ್ಲಿಯೇ ಭೀಕರ ಅನ್ನುವಂತಹ ಬರಗಾಲ ಈ ಬಾರಿ ಕೊಪ್ಪಳ ಜಿಲ್ಲೆಯನ್ನ ಕಾಡ್ತಿದೆ. ಕುಡಿಯೋ ನೀರಿಗೆ ತಾತ್ವಾರ, ಹೊಲ ಗದ್ದೆಗಳೆಲ್ಲಾ ಒಣಗಿ ಹೋಗಿವೆ. ಕೆರೆಗಳೆಲ್ಲಾ ಬಿರುಕು ಬಿಟ್ಟಿವೆ. ಇಂತಹ ಸಂದರ್ಭದಲ್ಲಿ ಇಡೀ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳು ಸ್ತಬ್ಧವಾಗಿ ಹೊಲಗಳು ರಣಗುಡ್ತಿವೆ.

    ಕಳೆದ 15 ವರ್ಷಗಳಲ್ಲಿ 11 ವರ್ಷ ಕೊಪ್ಪಳ ಜಿಲ್ಲೆಗೆ ಬರ ಅಂಟಿಕೊಂಡಿದೆ. ಕೊಪ್ಪಳ ಜಿಲ್ಲೆಯ ಉತ್ತರ ಒಣವಲಯ 3ರ ಅಡಿಯಲ್ಲಿ ಬರುತ್ತದೆ. ಜಿಲ್ಲೆಯ ವಾರ್ಷಿಕ ವಾಡಿಕೆ ಮಳೆ 599.80 ಮಿ.ಮಿ ಇದೆ. ಶೇ.55, ಶೇ.60 ಕೆಂಪು ಭೂಮಿ ಉಳಿದಂತೆ ಕಪ್ಪು ಭೂಮಿ ಹೊಂದಿದೆ. 2016 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಜೂನ್ ರಿಂದ ಸೆಪ್ಟೆಂಬರ್ ವರಗೆ ವಾಡಿಕೆ ಮಳೆ 376 ಮಿಮೀ ಬೀಳಬೇಕಿತ್ತು. ಆದ್ರೆ ವಾಸ್ತವಿಕವಾಗಿ ಆಗಿದ್ದು 317 ಮಿ.ಮಿ ಅಂದ್ರೆ ಶೇ.16 ರಷ್ಟು ಕೊರತೆ ಇತ್ತು. ಮುಂದೆ ಹಿಂಗಾರಿನಲ್ಲಿ ವಾರ್ಷಿಕ ವಾಡಿಕೆ ಮಳೆ 142 ಮಿ.ಮಿ ಇತ್ತು. ಆಗಿದ್ದು ಮಾತ್ರ ಕೇವಲ `18 ಮಿಮಿ ಅಂದ್ರೆ 87% ರಷ್ಟು ಮಳೆಯ ಕೊರತೆ. ಇದರಿಂದಾಗಿ ಒಣಬೇಸಾಯ ಆಧಾರಿತ ಜಿಲ್ಲೆಯಾಗಿರೋ ಕೊಪ್ಪಳ ಭೀಕರ ಬರಗಾಲಕ್ಕೆ ತುತ್ತಾಗಿದೆ ಅಂತಾ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಹೇಳ್ತಾರೆ.

    ಇನ್ನು ಮುಂಗಾರು ಬಿತ್ತನೆ ಕ್ಷೇತ್ರ 2,52,500 ಹೆಕ್ಟೆರ್ ಇದ್ದು, ಈ ಸಲದ ಮುಂಗಾರಿನಲ್ಲಿ ಬಿತ್ತನೆ ಮಾಡಿದ್ದು 2,67,235 ಹೆಕ್ಟೆರ್ ಅಂದರೆ 105% ರಷ್ಟು ಬಿತ್ತನೆಯಾಗಿತ್ತು. ಯಾಕೆಂದರೆ ಮುಂಗಾರು ಆರಂಭದಲ್ಲಿ ಜೋರಾಗಿ ಸುರಿದಿದ್ದು ರೈತರಲ್ಲಿ ಆಶಾಭಾವನೆ ಹುಟ್ಟಿಸಿತ್ತು. ಇದರಲ್ಲಿ ಬರಗಾಲಕ್ಕೆ ತುತ್ತಾಗಿರುವ ಪ್ರದೇಶ 19,00,037 ಹೆಕ್ಟೆರ್ ಪ್ರದೇಶದಲ್ಲಿ ಹಾನಿ ಸಂಭವಿಸಿತ್ತು. ಅದೇ ರೀತಿ ಹಿಂಗಾರು ಬಿತ್ತನೆ ಕ್ಷೇತ್ರ 1,52,200 ಹೆಕ್ಟೆರ್ ಇದೆ. ಪ್ರಸಕ್ತ ಹಿಂಗಾರಿನಲ್ಲಿ ಶೇ.65 ಬಿತ್ತನೆಯಾಗಿತ್ತು. ಇದು ಸಂಪೂರ್ಣವಾಗಿ ಮಳೆಯಾಶ್ರಿತ ಪ್ರದೇಶವಾಗಿತ್ತು. ಇದ್ರಲ್ಲಿ ಶೇ.100 ಹಾನಿಗೊಳಗಾಗಿದೆ. ಜಿಲ್ಲೆಯ ಪ್ರಮುಖ ಬೆಳೆಗಳಾದ ಮೆಜ್ಜೆ ಜೋಳ, ಸಜ್ಜೆ, ಹೆಸರು, ತೊಗರಿ, ಶೆಂಗಾ, ಸೂರ್ಯಕಾಂತಿ, ಕಡಲೆ, ಹುರುಳಿ ಕುಸುಬೆ, ಜೋಳದ ಬೆಳೆಗಳು ಸಂಪೂರ್ಣವಾಗಿ ಹಾಳಾಗಿ ಇಡೀ ಜಿಲ್ಲೆಯ ರೈತರು ಕಣ್ಣೀರಿನಲ್ಲಿ ಕೈತೊಳೆಯುವ ಪರಿಸ್ಥಿತಿ ಉಂಟಾಗಿದೆ.

    ಡ್ಯಾಂನಲ್ಲಿರೋದು 4 ಟಿಎಂಸಿ: ಇನ್ನು ಕೊಪ್ಪಳ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಾಗಿರೋ 126.55 ಕೋಟಿಯಷ್ಟು ಬೆಳೆ ಹಾನಿ ಪರಿಹಾರಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಹಿಂಗಾರಿನಲ್ಲಿ ಬೆಳೆ ಹಾನಿಯಾಗಿರೋ ನಷ್ಟ ಒಟ್ಟು 66.42 ಕೋಟಿಯಷ್ಟು ಅಂದಾಜಿಸಿದೆ. ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಾಗಿರೋ ಬೆಳೆಹಾನಿ ಪ್ರದೇಶಕ್ಕೆ ಕೇಂದ್ರ ಬರ ಅಧ್ಯಯನ ತಂಡ ಭೇಟಿ ನೀಡಿ ಜಿಲ್ಲೆಯ ವಾಸ್ತವ ಬರ ಸ್ಥಿತಿಯ ಬಗ್ಗೆ ಅಧ್ಯಯನ ನಡೆಸಿದೆ. ಕೊಪ್ಪಳ ಜಿಲ್ಲೆಯ ನಾಲ್ಕು ತಾಲೂಕುಗಳಾದ ಕೊಪ್ಪಳ, ಯಲಬುರ್ಗಾ, ಕುಷ್ಟಗಿ, ಗಂಗಾವತಿ ಬರಪೀಡಿತ ಪ್ರದೇಶ ಅಂತ ಘೋಷಣೆ ಆಗಿದೆ. ಒಟ್ಟಾರೆಯಾಗಿ ಜಿಲ್ಲೆಯಲ್ಲಿ ಮುಂಗಾರು ಮತ್ತು ಹಿಂಗಾರು ಕೈಕೊಟ್ಟಿರೋದ್ರಿಂದ 180 ಕೋಟಿಗೂ ಅಧಿಕ ಅನುದಾನ ನೀಡಲು ಸರಕಾರಕ್ಕೆ ಜಿಲ್ಲಾಡಳಿತ ಪ್ರಸ್ತಾವನೆ ಸಲ್ಲಿಸಿದೆ.

    ಕೊಪ್ಪಳ, ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಗಳ ಜೀವನಾಡಿ ತುಂಗಭದ್ರೆ ತಳ ಕಂಡಿದೆ. ಈ ಸಲ ಎರಡನೇ ಬೆಳೆಗೆ ನೀರು ನೀಡದೆಯಿರೋದ್ರಿಂದ ನೀರಾವರಿಯ ರೈತರು ಸಹ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜೊತೆಗೆ ಈಗ ಡ್ಯಾಂನಲ್ಲಿರೋದು ನೀರು ಕೇವಲ 4 ಟಿಎಂಸಿಯಷ್ಟು. ಈ ನೀರು ಮೂರು ಜಿಲ್ಲೆಗಳ ಜನರ ನೀರಿನ ದಾಹವನ್ನ ಜೂನ್ ರವರೆಗೆ ತೀರಿಸಬೇಕಿದೆ. ಈಗಾಗ್ಲೆ ಕೊಪ್ಪಳ ನಗರ ಕೂಡಾ ತುಂಗಭದ್ರಾ ಡ್ಯಾಂನಿಂದ ಬರೋ ನೀರಿಗೆ ತತ್ವಾರ ಎದುರಾಗಿದೆ.

    ಗುಳೆ ಪರ್ವ ಆರಂಭ: ಕೊಪ್ಪಳ ಜಿಲ್ಲೆಯಲ್ಲಿ ಸ್ಥಾಪಿಸಿರೋ ಹಲವಾರು ದೊಡ್ಡ ದೊಡ್ಡ ಉದ್ಯಮಗಳಲ್ಲಿ ಸ್ಥಳೀಯರಿಗೆ ಉದ್ಯೋಗಗಳೇ ಇಲ್ಲ. ಏನಿದ್ರೂ ಹೊರಗಿನವರದೇ ಕಾರುಬಾರು. ಜಿಲ್ಲೆಯಲ್ಲಿ ಎಲ್ಲೂ ಕೆಲಸವೇ ಇಲ್ಲ. ಬೇರೆ ದಾರಿ ಕಾಣದೆ ಅನ್ನಕ್ಕಾಗಿ, ಕೂಲಿಗಾಗಿ ಜನರು ಗುಳೆ ಹೊರಟಿದ್ದಾರೆ. ಕೇವಲ ಕೆಲವೇ ಜನರಲ್ಲ ಊರಿಗೆ ಊರೇ ಗುಳೆ ಹೊರಟಿದೆ.

    ಕೊಪ್ಪಳ ಜಿಲ್ಲೆಯಲ್ಲಿ ಸಾವಿರಾರು ಜನ ಗುಳೆ ಹೊರಟಿದ್ದಾರೆ, ಹೋಗಿದ್ದಾರೆ. ಕೊಪ್ಪಳ ಜಿಲ್ಲೆಯಲ್ಲಿ ಮತ್ತೊಮ್ಮೆ ದೊಡ್ಡ ಮಟ್ಟದಲ್ಲಿ ಗುಳೆ ಪರ್ವ ಆರಂಭವಾಗ್ತಿದೆ. ಇದು ಕೊಪ್ಪಳ ಜಿಲ್ಲೆಯಲ್ಲಿ ಸ್ವಾಭಾವಿಕ ಪ್ರಕ್ರಿಯೆಯಾಗಿ ಹೋಗಿರುವುದು ನಾಚಿಕೆಗೇಡಿನ ಸಂಗತಿ. ಸರಕಾರದ ಅಧಿಕೃತ ಮಾಹಿತಿ ಪ್ರಕಾರ 2015-16 ಸಾಲಿನಲ್ಲಿ ವಲಸೆ ಹೋದ ಕುಟುಂಬಗಳ ಸಂಖ್ಯೆ 6,000 ಕ್ಕೂ ಹೆಚ್ಚು. ವಲಸೆ ಹೋದ ಕುಟುಂಬದ ಸದಸ್ಯರ ಸಂಖ್ಯೆ 13682. ಅಂದ್ರೆ ನಿಜವಾದ ಸಂಖ್ಯೆ ಇದರ ಮೂರು ಪಟ್ಟು ಹೆಚ್ಚಿದೆ. ಈ ಸಲವಂತೂ ಹತ್ತುಪಟ್ಟು ಹೆಚ್ಚಾಗಿದೆ. ಕೊಪ್ಪಳ ಜಿಲ್ಲೆಯ ಹಲವಾರು ಗ್ರಾಮಗಳು, ತಾಂಡಾಗಳಲ್ಲಿ ಜನರೇ ಇಲ್ಲವೇ ಇಲ್ಲ ಎನ್ನುವಂತಾಗಿದೆ. ಕೊಪ್ಪಳ ಜಿಲ್ಲೆಯ ಯಲಮಗಿರಿ, ಕುಣಕೇರಿ ತಾಂಡಾ ಗುಳೆ ಹೋಗುವ ಕಾರಣಕ್ಕೆ ಹೆಸರು ಮಾಡುತ್ತೆ. ಈ ಊರಿನಲ್ಲಿ ಸರಕಾರದ ಯಾವುದೇ ಯೋಜನೆಗಳು ತಲುಪಿಲ್ಲ. ಅಂದಾಜು 300-400 ಜನರಿರೋ ಈ ತಾಂಡಾದ ಶೇ.90ರಷ್ಟು ಜನ ಗುಳೆ ಹೋಗಿದ್ದಾರೆ.

    ಗುಳೆ ಹೋಗಲು ಕಾರಣ?: ಹೆಚ್ಚಿನ ದುಡಿಮೆಗಾಗಿ ಗುಳೆ ಹೋಗೋದು, ಮಕ್ಕಳ ಶಿಕ್ಷಣ ಇಲ್ಲವೇ ಅವಕಾಶಗಳನ್ನು ಹುಡುಕಿಕೊಂಡು ಹೋಗುವುದು ಒಂದೆಡೆಯಾದ್ರೆ, ಊರಲ್ಲಿ ಕೆಲಸವಿಲ್ಲದೇ ಕೂಲಿಗೂ ಗತಿಯಿಲ್ಲದೇ ಕನಿಷ್ಠ ಪಕ್ಷ ಬದುಕಿದರೆ ಸಾಕು, ದಿನದ ಅನ್ನವನ್ನಾದರೂ ಹುಟ್ಟಿಸಿಕೊಂಡರೇ ಸಾಕು ಎನ್ನುವ ಪರಿಸ್ಥಿತಿಯಲ್ಲಿ ಊರು ಬಿಟ್ಟು ಬೇರೆ ಬೇರೆ ನಗರಗಳಿಗೆ ಗುಳೆ ಹೋಗುತ್ತಿದ್ದಾರೆ.

    ಕಬ್ಬು ಕಟಾವು, ಗೌಂಡಿ ಕೆಲಸ, ಕೂಲಿ ಕೆಲಸಕ್ಕೆ ಗುಳೆ ಹೋಗುತ್ತಾರೆ. ಇಲ್ಲಿಂದ ಬೆಂಗಳೂರು, ಮಂಗಳೂರು, ತಮಿಳುನಾಡು, ಗೋವಾ, ರತ್ನಗಿರಿ, ಕಾರವಾರ, ಹುಬ್ಬಳ್ಳಿ, ಬಳ್ಳಾರಿ, ಮಂಡ್ಯ, ತುಮಕೂರು ಸೇರಿದಂತೆ ಕೆಲಸ ಸಿಕ್ಕಲ್ಲಿ ಗುಳೆ ಹೊರಟಿದ್ದಾರೆ. ಇಡೀ ಗ್ರಾಮದಲ್ಲಿ ಈಗ ಕಾಣಸಿಗುವುದು ವಯಸ್ಸಾದ ಅಜ್ಜ ಅಜ್ಜಿಯರು ಇಲ್ಲವೇ ದೈಹಿಕವಾಗಿ ದುರ್ಬಲರಾಗಿರುವವರು ಮಾತ್ರ. ಕಸ್ತೂರಮ್ಮ ಎನ್ನುವ ಅಜ್ಜಿಯ ಮಕ್ಕಳೆಲ್ಲಾ ದುಡಿಯುವುದಕ್ಕೆ ಹೋಗಿದ್ದಾರೆ. ಮನೆಯಲ್ಲಿ ಅಜ್ಜ-ಅಜ್ಜಿ ಮಾತ್ರ ಇದ್ದಾರೆ. ನಡೆಯಲೂ ಆಗದ ಸ್ಥಿತಿಯಲ್ಲಿರುವ ಈ ಅಜ್ಜಿಗೆ ಕುಡಿಯುವ ನೀರು ಕೊಡಲು ಮೊಮ್ಮಗಳು ಬರಬೇಕು. ನಿಸ್ಸಾಯಕರಾಗಿರುವ ಈ ಜೀವಗಳು ಇಂದು ಕಣ್ಣೀರು ಹಾಕುತ್ತಿವೆ. ನಮ್ಮ ನೋಡಿಕೊಳ್ಳೋವ್ರು ಯಾರು ಅಂತ ವಯೋವೃದ್ಧರು ಚಿಂತೆಗಿಡಾಗಿ ತಾಂಡಾ, ಹಳ್ಳಿಗಳು ವೃದ್ಧಾಶ್ರಮಗಳಾಗ್ತಿವೆ.

    ಮಹಾನಗರದತ್ತ ಕೆಲ ಕುಟುಂಬಗಳು: ಕೊಪ್ಪಳ ತಾಲೂಕಿನ ಕುಣಿಕೇರಿ ತಾಂಡಾ, ಕುಷ್ಟಗಿ ತಾಲ್ಲೂಕಿನ ಹುಲಿಯಾಪೂರ ತಾಂಡಾ, ಕಳಮಳ್ಳಿ ತಾಂಡಾ, ತಾವರಗೇರಾ, ಯಲಬುರ್ಗಾ ತಾಲ್ಲೂಕಿನ ಆಸುಪಾಸಿನ ಹಳ್ಳಿಗಳಲ್ಲಿ ಸಾವಿರಾರು ಕುಟುಂಬಗಳು ಈಗಾಗಲೇ ಮಹಾನಗರಗಳ ಹಾದಿ ಹಿಡಿದು ಹೊರಟಿವೆ. ಇದಕ್ಕೆ ಜಿಲ್ಲೆಯಲ್ಲಿ ಸರಿಯಾದ ಉದ್ಯೋಗ ಸಿಗದಿರೋದು. ಉದ್ಯೋಗ ಖಾತ್ರಿ ಅಡಿ ಕೂಲಿ ಕೆಲಸ ಸಿಕ್ಕಿದರೂ ಕೂಲಿ ಹಣ ಪಡೆಯಲು ಹಲವು ಪ್ರಕ್ರಿಯೆಗಳನ್ನು ಪಾಲಿಸ ಬೇಕಾಗಿರುವುದು, ಸಿಗುವ ಹಣದಲ್ಲೂ ಮಧ್ಯವರ್ತಿಗಳಿಗೆ ಪಾಲು ಕೊಡಬೇಕಾ ಗುವುದು ಹೀಗೆ ಹಲವು ಕಾರಣಗಳನ್ನು ಮುಂದಿಟ್ಟುಕೊಂಡು ವಲಸೆ ಹೋಗ್ತಿದ್ದಾರೆ.

    ಜಾನುವಾರುಗಳ ಮಾರಾಟ: ಜಿಲ್ಲಾಡಳಿತ ಕೊಪ್ಪಳ ಜಿಲ್ಲೆಯಲ್ಲಿ ಪ್ರತಿ ವಿಧಾನಸಭಾಕ್ಷೇತ್ರಕ್ಕೆ ಒಂದರಂತೆ ಐದು ಗೋಶಾಲೆಗಳನ್ನು ತೆರೆದಿದೆ. ಆದ್ರೆ ಅವು ನೆಪಕ್ಕೆ ಮಾತ್ರ ಎನ್ನುವಂತಾದ್ರೂ ಕೆಲವಡೆ ಜಾನುವಾರುಗಳ ಹಸಿವನ್ನ ನೀಗಿಸ್ತಿವೆ. ಇನ್ನು ಕೆಲವಡೆ ರೈತ್ರು ತಮ್ಮ ಜಾನುವಾರುಗಳನ್ನ ಸಾಕಲು ಸಾಧ್ಯವಾಗದೆ ಮಾರಾಟ ಮಾಡ್ತಿದ್ದಾರೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಗಿಣಗೇರಿಯ ಒಂದೆ ಸಂತೆವೊಂದರಲ್ಲಿ 17,143 ಜಾನುವಾರುಗಳು ಮಾರಾಟವಾಗಿವೆ ಅಂದ್ರೆ ಬರಗಾಲದ ಭೀಕರತೆಯ ಅರಿವಾಗ್ತದೆ. ಜಿಲ್ಲೆಯ ವೆಂಕಟಗಿರಿ, ಕನಕಗಿರಿ, ಅಳವಂಡಿ, ಕಲಕೇರಿ, ತಲ್ಲೂರುಗಳಲ್ಲಿ ಗೋಶಾಲೆ ಆರಂಭವಾಗಿವೆ. ಜಿಲ್ಲೆಯಲ್ಲಿ ಅಂದಾಜು ಜಾನುವಾರುಗಳು 3,39,947 ಇವೆ. ಮೇವು 3,50,071 ಮೆಟ್ರಿಕ್ ಟನ್ ನಷ್ಟಿದೆ. ಹೀಗೆ ಗೋ ಶಾಲೆಯಲ್ಲಿ ಅಗತ್ಯ ಮೇವು ನೀರು ಸಂಗ್ರಹಿಸಲಾಗಿದೆ. ಮೇವು ಬ್ಯಾಂಕ್ ಕೂಡಾ ಆರಂಭಿಸಲಾಗಿದೆ. ಇನ್ನು ಜಿಲ್ಲೆ ಹೋಬಳಿವಾರು ಗೋಶಾಲೆ ಆರಂಭಿಸಬೇಕೆನ್ನೋದು ರೈತರ ಒತ್ತಾಯವಾಗಿದೆ.

    ಇನ್ನು ನರೇಗಾ ಯೋಜನೆಯಡಿ ಕೆಲವಡೆ ಜಿಲ್ಲೆಯಲ್ಲಿ ಗುಳೆ ಹೋಗುವುದನ್ನ ತಪ್ಪಿಸಲು ಉದ್ಯೋಗ ನೀಡಲಾಗ್ತಿದೆ. ಉದ್ಯೋಗ ಪಡೆದಿರೋ ಜನ್ರು ದುಡಿಯೋ ಕೈಗೆ ಕೆಲ್ಸ ಸಿಕ್ತು ಅಂತಾ ಕೆಲ್ಸ ಮಾಡ್ತಿದ್ದಾರೆ. ಉದ್ಯೋಗ ಖಾತ್ರಿಯೋಜನೆಯನ್ನು ಜಿಲ್ಲೆಯಲ್ಲಿ ಗುಳೆ ಹೋಗ್ತಿರೋ ಗ್ರಾಮಗಳಲ್ಲಿ ಆರಂಭಿಸೋವತ್ತ ಜಿಲ್ಲಾಡಳಿತ ಕ್ರಮಕೈಗೊಳ್ಳಬೇಕಿದೆ.

    ಬರಡಾದ ಹಿರೇಹಳ್ಳ ಡ್ಯಾಂ: ಕೊಪ್ಪಳ ಜಿಲ್ಲೆಯ ಒಟ್ಟು 739 ಜನ ವಸತಿ ಗ್ರಾಮಗಳಲ್ಲಿ 232 ಗ್ರಾಮಗಳು ಭೀಕರವಾದ ಕುಡಿಯೋ ನೀರಿನ ಸಮಸ್ಯೆಯನ್ನ ಎದುರಿಸ್ತಿವೆ. ಸಿಂಗಟಾಲೂರು, ಕೃಷ್ಣ ಬಿ ಸ್ಕಿಂ ಎಂದು ಹೇಳುವುದೇ ಆಯಿತೇ ಹೊರತು ಅದರಿಂದ ಜನಸಾಮಾನ್ಯರ ಭವಣೆ ತಪ್ಪುವ ಲಕ್ಷಣಗಳೇ ಕಾಣುತ್ತಿಲ್ಲ. ಹಿರೇಹಳ್ಳ ಡ್ಯಾಂ ಬತ್ತಿಬರಡಾಗಿದೆ. ಈ ಭಾಗದ ಹಳ್ಳಿಗಳಿಗೆ ಪೂರೈಕೆ ಆಗ್ತಿದ್ದ ನೀರು ಸ್ತಗಿತವಾಗಿದೆ. ಅಂತರ್ಜಲಮಟ್ಟ ಪಾತಾಳಕ್ಕೆ ಕುಸಿದಿದೆ. ಕೊಪ್ಪಳ ಜಿಲ್ಲೆಯಲ್ಲಿನ ಪ್ರಮುಖ ಕೆರೆಗಳು ಬತ್ತಿ ಬರಡಾಗಿವೆ. ಕುಷ್ಟಗಿ ತಾಲೂಕಿನ ಗಡಿಹಳ್ಳಿಗಳಲ್ಲಿ ನೀರಿನ ಬವಣೆ ಹೇಳತೀರದಾಗಿದೆ. ಕೆಲವಡೆ ಕೆರೆ ತುಂಬಿಸೋ ಕಾರ್ಯವಾದ್ರೆ ಆ ನೀರು ಖಾಲಿಯಾಗಿವೆ. ಆದ್ರೆ ಕೈಕೊಟ್ಟ ಮಳೆ ಎಲ್ಲ ಯೋಜನೆಗಳನ್ನು ಉಲ್ಟಾ ಮಾಡಿದೆ. ಜಿಲ್ಲೆಯಲ್ಲಿ ಖಾಸಗಿ ಕೊಳವೆ ಬಾವಿಗಳನ್ನು ಮಾಸಿಕ ಬಾಡಿಗೆ ಆಧಾರದ ಮೇಲೆ ತೆಗೆದುಕೊಳ್ಳಲಾಗೋದು ಅಂತ ಜಿಲ್ಲಾಡಳಿತ ಹೇಳ್ತಿದೆ.

    ಶುದ್ಧ ಕುಡಿಯೋ ಘಟಕಗಳು ಮಂಜೂರಾದಷ್ಟು ಪೂರ್ಣಗೊಂಡಿಲ್ಲ. ಇದು ಸಹ ಜನ ನೀರಿಗಾಗಿ ಹಾಹಾಕಾರ ಪಡುವಂತೆ ಮಾಡಿದೆ. ಸೂಚಿಸುತ್ತದೆ ಕುಷ್ಟಗಿ, ಯಲಬುರ್ಗಾ, ಕೊಪ್ಪಳ ತಾಲೂಕಿನ ಗ್ರಾಮಗಳಲ್ಲಿ ಫ್ಲೋರೈಡ್ ನೀರೆಗತಿ. ಕುಷ್ಟಗಿ ತಾಲೂಕಿನಲ್ಲಿ ನೀರಿಗಾಗಿ ಮೈಲುದೂರು ಹೋಗಿ ತರುವಂತಾಗಿದೆ. ಇಲ್ಲಿವ್ರಗೂ ಜಿಲ್ಲಾಡಳಿತ ಕುಡಿಯೋ ನೀರಿಗಾಗಿ ಪರ್ಯಾಯ ವ್ಯವಸ್ಥೆ ಕಲ್ಪಿಸಿಲ್ಲ. ಇನ್ಮೇಲಾದ್ರೂ ಜಿಲ್ಲಾಡಳಿತ ಬರವನ್ನ ಗಂಭೀರವಾಗಿ ಪರಿಗಣಿಸಿ ಬರ ಎದುರಿಸಬೇಕಿದೆ.

     

  • ಬಯಲಿಗೆ ಬರುತ್ತಿವೆ ತುಂಗಭದ್ರಾ ಜಲಾಶಯದಲ್ಲಿನ ಮೊಸಳೆಗಳು!

    ಬಯಲಿಗೆ ಬರುತ್ತಿವೆ ತುಂಗಭದ್ರಾ ಜಲಾಶಯದಲ್ಲಿನ ಮೊಸಳೆಗಳು!

    ಬಳ್ಳಾರಿ: ಜಿಲ್ಲೆಯಲ್ಲಿರುವ ತುಂಗಭದ್ರಾ ಜಲಾಶಯದ ನೀರಿನ ಮಟ್ಟ ದಿನೇ ದಿನೇ ತಳ ಮುಟ್ಟುತ್ತಿದೆ. 100 ಟಿಎಂಸಿ ಸಾಮಥ್ರ್ಯದ ಜಲಾಶಯದಲ್ಲೀಗ ಕೇವಲ 4 ಟಿಎಂಸಿ ನೀರು ಮಾತ್ರ ಬಾಕಿ ಉಳಿದಿದ್ದು, ಡ್ಯಾಂನಲ್ಲಿದ್ದ ಮೊಸಳೆಗಳು ಬಯಲಿಗೆ ಬರುತ್ತಿವೆ.

    ಟಿಬಿ ಡ್ಯಾಂನಲ್ಲಿ ಹತ್ತಕ್ಕೂ ಹೆಚ್ಚು ಮೊಸಳೆಗಳಿವೆ. ಡ್ಯಾಂನಲ್ಲಿ ನೀರಿನ ಮಟ್ಟ ಕಡಿಮೆಯಾದ ಪರಿಣಾಮ ಜಲಾಶಯದಲ್ಲಿನ ಮೊಸಳೆಗಳು ಇದೀಗ ಒಂದೊಂದಾಗಿ ನೀರಿನಿಂದ ಹೊರಬರುತ್ತಿವೆ. ಇದು ಡ್ಯಾಂ ನೋಡಲು ಆಗಮಿಸುವ ಪ್ರವಾಸಿಗರಲ್ಲಿ ಭಯ ಮೂಡಿಸಿದೆ.

    ಮೊಸಳೆಗಳು ನೀರಿನಿಂದ ಹೊರಗೆ ಬರುತ್ತಿರುವ ಪರಿಣಾಮ ಅನಾಹುತವಾಗುವ ಮುನ್ನವೇ ಟಿಬಿ ಬೋರ್ಡ್ ಅಧಿಕಾರಿಗಳು ಎಚ್ಚೆತ್ತುಕೊಂಡು ಮೊಸಳೆಗಳನ್ನು ಬೇರೆಡೆ ಸಾಗಿಸಬೇಕಾಗಿದೆ. ಡ್ಯಾಂನಲ್ಲಿ ಡೆಡ್ ಸ್ಟೋರೇಜ್ ನೀರು ಬಾಕಿಯಿರುವ ಪರಿಣಾಮ ಮೊಸಳೆಗಳಿಗೆ ಆಹಾರ ಸಿಗದೆ ನೀರಿನಿಂದ ಹೊರಬರುತ್ತಿವೆ ಎನ್ನಲಾಗಿದೆ. ಆದ್ರೆ ಅಧಿಕಾರಿಗಳು ಅನಾಹುತವಾಗುವ ಮುನ್ನವೇ ಕ್ರಮ ಕೈಗೊಳ್ಳಬೇಕಾಗಿರುವುದು ಅವಶ್ಯವಾಗಿದೆ.

  • ಕೆಆರ್‍ಎಸ್‍ಗೆ ಎದುರಾಗಿದೆ ಕಂಟಕ – ಡ್ಯಾಮ್ ಬುಡದಲ್ಲೇ ಸಿಡಿಯಲಿದೆ ಡೈನಾಮೈಟ್

    – ಸರ್ಕಾರಿ ಯೋಜನೆಗೆ ಮಂಡ್ಯ ಜನರ ಕಿಡಿ

    ಮಂಡ್ಯ: ವಿಶ್ವಪ್ರಸಿದ್ಧ ಕೆಆರ್‍ಎಸ್ ಅಣೆಕಟ್ಟೆಗೆ ಗಂಡಾಂತರ ಎದುರಾಗಿದೆ. ಡ್ಯಾಮ್ ಸಮೀಪವೇ ರಾಜ್ಯ ಸರ್ಕಾರ ಹೊಸ ಯೋಜನೆ ಕೈಗೆತ್ತಿಕೊಂಡಿರೋದೇ ಇದಕ್ಕೆ ಕಾರಣ. ಸರ್ಕಾರದ ಈ ನಿರ್ಧಾರದಿಂದ ರೈತರು ಮತ್ತು ಪ್ರಾಣಿ, ಪಕ್ಷಿ ಸಂಕುಲಕ್ಕೂ ಕಂಟಕ ಎದುರಾಗಿದೆ.

    ಕೃಷ್ಣರಾಜಸಾಗರ ಅಣೆಕಟ್ಟೆ ಸಮೀಪದ ಎಡಮುರಿಯಲ್ಲಿ 0.5 ಮೆಗಾವ್ಯಾಟ್ ಕಿರು ವಿದ್ಯುತ್ ಉತ್ಪಾದನಾ ಯೋಜನೆಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಇದಕ್ಕಾಗಿ ಬೆಂಗಳೂರಿನ ವಿ ಫ್ರಾಮ್ ಅನ್ನೋ ಖಾಸಗಿ ಕಂಪನಿ ಗುತ್ತಿಗೆ ಪಡೆದಿದೆ. ಹೀಗಾಗಿ ಗುತ್ತಿಗೆ ಪಡೆದ ಖಾಸಗಿ ಕಂಪನಿ ಬಂಡೆಗಳನ್ನ ಸ್ಫೋಟಿಸಲು ಡೈನಾಮೈಟ್ ಬಳಸ್ತಿದೆ. ಡೈನಾಮೈಟ್ ಬ್ಲಾಸ್ಟ್ ಆಗೋ ಜಾಗದಿಂದ ಕೆಲವೇ ದೂರಗಳಲ್ಲಿ ಕೆಆರ್‍ಎಸ್ ಡ್ಯಾಮ್ ಇದೆ. ಜೊತೆಗೆ ಪಕ್ಕದಲ್ಲೇ ಇರೋ ಸಿಡಿಎಸ್, ವಿರಿಜಾ, ದೇವರಾಯ ನಾಲೆಗಳಿಗೂ ಅಪಾಯ ಎದುರಾಗಿದೆ.

    ಗುತ್ತಿಗೆ ಅವಧಿ 2015ಕ್ಕೆ ಮುಗಿದಿದ್ರೂ ಈಗ ಯೋಜನೆ ಪ್ರಾರಂಭಿಸಿದೆ. ಇನ್ನು ಡ್ಯಾಂನಿಂದ ನಾಲೆಗಳಿಗೆ ಹರಿಯುವ ನೀರಿನ ದಿಕ್ಕನ್ನೇ ಬದಲಾಯಿಸಿದೆ. ನೀರಿನ ಮಧ್ಯದಲ್ಲೇ ಬಂಡೆ ಹಾಕಿರೋ ಕಾರಣ ನಾಲೆಗೆ ನೀರು ಹರಿಯುತ್ತಿಲ್ಲ. ಅವೈಜ್ಞಾನಿಕ ಯೋಜನೆಯಿಂದಾಗಿ ಜಾನುವಾರುಗಳಿಗೆ ಕುಡಿಯಲು ನೀರು ಸಿಗದಂತಾಗಿದೆ. ಜೊತೆಗೆ ರೈತರು ತಮ್ಮ ಜಮೀನು, ತೋಟಗಳಿಗೆ ಹೋಗಲು ಕಷ್ಟಪಡ್ತಿದ್ದಾರೆ.

    ಒಟ್ಟಾರೆ, ವಿದ್ಯುತ್ ಉತ್ಪಾದನೆಗೆಂದು ರಾಜ್ಯ ಸರ್ಕಾರ ಜಾರಿಗೊಳಿಸಿರುವ ಯೋಜನೆಯಿಂದ ಜನರಿಗೆ ಅನುಕೂಲವಾಗೋ ಬದಲು ಅನಾನುಕೂಲವಾಗ್ತಿದೆ ಅಂತ ಸ್ಥಳೀಯರು ಆರೋಪಿಸಿದ್ದಾರೆ.