Tag: ಡೆಲ್ಲಿ ಕ್ಯಾಪಿಟಲ್

  • ಪ್ಲೇ ಆಫ್ ಸನಿಹಕ್ಕೆ ಡೆಲ್ಲಿ – ಪಂಜಾಬ್ ಕನಸು ನುಚ್ಚುನೂರು

    ಪ್ಲೇ ಆಫ್ ಸನಿಹಕ್ಕೆ ಡೆಲ್ಲಿ – ಪಂಜಾಬ್ ಕನಸು ನುಚ್ಚುನೂರು

    ಮುಂಬೈ: ಪ್ಲೇ ಆಫ್‍ಗೇರಲು ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಉತ್ತಮ ನಿರ್ವಹಣೆ ತೋರಿದ ಡೆಲ್ಲಿ ತಂಡ ಪಂಜಾಬ್ ವಿರುದ್ಧ 17 ರನ್‍ಗಳ ಅಂತರದ ಗೆಲುವು ದಾಖಲಿಸಿತು. ಈ ಮೂಲಕ ಡೆಲ್ಲಿ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿಕೊಂಡರೆ, ಇತ್ತ ಪಂಜಾಬ್ ಈ ಸೋಲಿನೊಂದಿಗೆ ಬಹತೇಕ ಟೂರ್ನಿಯಿಂದ ಹೊರಬಿದ್ದಿದೆ.

    ಡೆಲ್ಲಿ ನೀಡಿದ 160 ರನ್‍ಗಳ ಗುರಿಯನ್ನು ಬೆನ್ನಟ್ಟಿದ ಪಂಜಾಬ್ ತಂಡದ ಗೆಲುವಿಗಾಗಿ ಜಿತೇಶ್ ಶರ್ಮಾ ಮತ್ತು ರಾಹುಲ್ ಚಾಹರ್ ಹೋರಾಟ ನಡೆಸಿದರು. ಕೊನೆಯಲ್ಲಿ ಡೆಲ್ಲಿ ಬೌಲರ್‌ಗಳ ವೇಗಕ್ಕೆ ಥಂಡಾ ಹೂಡಿದ ಪಂಜಾಬ್ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 142 ರನ್ ಸಿಡಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು.

    ಅಲ್ಪಮೊತ್ತವನ್ನು ಬೆನ್ನಟ್ಟುವ ವಿಶ್ವಾಸದಲ್ಲಿ ಕಣಕ್ಕಿಳಿದ ಪಂಜಾಬ್‍ನ ಆರಂಭಿಕ ಆಟಗಾರರಾದ ಜಾನಿ ಬೈರ್‌ಸ್ಟೋವ್ ಮತ್ತು ಶಿಖರ್ ಧವನ್ ಉತ್ತಮ ಆರಂಭ ನೀಡುವಲ್ಲಿ ವಿಫಲರಾದರು. ಬೈರ್‌ಸ್ಟೋವ್ ಸಿಡಿಯುವ ಸೂಚನೆ ನೀಡಿ 28 ರನ್ (15 ಎಸೆತ, 4 ಬೌಂಡರಿ, 1 ಸಿಕ್ಸ್) ಬಾರಿಸಿ ವಿಕೆಟ್ ಕೈಚೆಲ್ಲಿಕೊಂಡರು. ಆ ಬಳಿಕ ವಿಕೆಟ್ ಒಂದರ ಹಿಂದೆ ಒಂದು ಬೀಳತೊಡಗಿತು. ಈ ನಡುವೆ ಉತ್ತಮವಾಗಿ ಬ್ಯಾಟ್‍ಬೀಸುತ್ತಿದ್ದ ಧವನ್ 19 ರನ್ (16 ಎಸೆತ, 3 ಬೌಂಡರಿ) ವಿಕೆಟ್ ಕಳೆದುಕೊಂಡರು. ಆ ಬಳಿಕ ಡೆಲ್ಲಿ ಚೇತರಿಸಿಕೊಳ್ಳಲಿಲ್ಲ.

    ಈ ಮೊದಲು ಟಾಸ್ ಗೆದ್ದ ಪಂಜಾಬ್ ಎದುರಾಳಿ ತಂಡವನ್ನು ಬ್ಯಾಟಿಂಗ್‍ಗೆ ಆಹ್ವಾನಿಸಿತು. ಡೆಲ್ಲಿ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಶೂನ್ಯ ಸುತ್ತಿ ನಿರಾಸೆ ಮೂಡಿಸಿದರು. ಇನ್ನೋರ್ವ ಆರಂಭಿಕ ಆಟಗಾರ ಸರ್ಫರಾಜ್ ಖಾನ್ ಸ್ಫೋಟಕ 32 ರನ್ (16 ಎಸೆತ, 5 ಬೌಂಡರಿ, 1 ಸಿಕ್ಸ್) ಚಚ್ಚಿ ಔಟ್ ಆದರು.

    ಇನ್ನೊಂದೆಡೆ ಮಿಚೆಲ್ ಮಾರ್ಷ್ ಡೆಲ್ಲಿ ರನ್ ಏರಿಸುವ ಹೊಣೆ ಹೊತ್ತರು. ಇವರಿಗೆ ಕೆಲ ಹೊತ್ತು ಲಲಿತ್ ಯಾದವ್ 24 ರನ್ (21 ಎಸೆತ, 1 ಬೌಂಡರಿ, 1 ಸಿಕ್ಸ್) ಬಾರಿಸಿ ಔಟ್ ಆದರು. ಆ ಬಳಿಕ ಪಟಪಟನೇ ವಿಕೆಟ್ ಕಳೆದುಕೊಂಡು ಸಾಗಿದ ಡೆಲ್ಲಿಗೆ ಮಾರ್ಷ್ ಮಾತ್ರ ಏಕಾಂಗಿ ಹೋರಾಟ ನಡೆಸಿ ಅರ್ಧಶತಕ ಸಿಡಿಸಿ ಮಿಂಚಿದರು.

    ಪಂಜಾಬ್ ಬೌಲರ್‌ಗಳಿಗೆ ಕಾಡಿದ ಮಾರ್ಷ್ 63 ರನ್ (48 ಎಸೆತ, 4 ಬೌಂಡರಿ, 3 ಸಿಕ್ಸ್) ಬಾರಿಸಿ ವಿಕೆಟ್ ಕಳೆದುಕೊಂಡರು. ಕೊನೆಯಲ್ಲಿ ಅಕ್ಷರ್ ಪಟೇಲ್ ಅಜೇಯ 17 ರನ್ (20 ಎಸೆತ, 2 ಬೌಂಡರಿ) ಸಿಡಿಸಿ ತಂಡದ ಮೊತ್ತವನ್ನು 150ರ ಗಡಿದಾಟಿಸಿದರು.

    ಅಂತಿಮವಾಗಿ ಡೆಲ್ಲಿ 7 ವಿಕೆಟ್ ಕಳೆದುಕೊಂಡು 159 ರನ್ ಒಟ್ಟುಗೂಡಿಸಿತು. ಪಂಜಾಬ್ ಪರ ಲಿವಿಂಗ್‍ಸ್ಟೋನ್ ಮತ್ತು ಅರ್ಷದೀಪ್ ಸಿಂಗ್ ತಲಾ 3 ವಿಕೆಟ್ ಕಿತ್ತು ಡೆಲ್ಲಿ ರನ್ ಓಟಕ್ಕೆ ಬ್ರೇಕ್ ಹಾಕಿದರು.

  • ರಬಡಾ ಬೌಲಿಂಗ್‍ಗೆ ಧೋನಿ ಬಾಯ್ಸ್ ತತ್ತರ – ಚೆನ್ನೈಗೆ ಎರಡನೇ ಸೋಲು

    ರಬಡಾ ಬೌಲಿಂಗ್‍ಗೆ ಧೋನಿ ಬಾಯ್ಸ್ ತತ್ತರ – ಚೆನ್ನೈಗೆ ಎರಡನೇ ಸೋಲು

    ದುಬೈ: ಡೆಲ್ಲಿ ಕ್ಯಾಪಿಟಲ್ ತಂಡದ ಶಿಸ್ತುಬದ್ಧವಾದ ಬೌಲಿಂಗ್ ದಾಳಿಗೆ ತತ್ತರಿಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಐಪಿಎಲ್-2020ಯಲ್ಲಿ ಎರಡನೇ ಸೋಲು ಕಂಡಿದೆ. ಈ ಮೂಲಕ ಡೆಲ್ಲಿ ತಂಡ 44 ರನ್‍ಗಳ ಅಂತರದಲ್ಲಿ ಟೂರ್ನಿಯಲ್ಲಿ ಎರಡನೇ ಗೆಲುವು ಸಾಧಿಸಿತು.

    ಟಾಸ್ ಸೋತು ಮೊದಲು ಬ್ಯಾಟಿಂಗ್ ಬಂದ ಡೆಲ್ಲಿ ಕ್ಯಾಪಿಟಲ್ ತಂಡ ಪೃಥ್ವಿ ಶಾ ಅವರು ಭರ್ಜರಿ ಅರ್ಧಶತಕ ಮತ್ತು ಪಂತ್ ಅವರ ಸೂಪರ್ ಬ್ಯಾಟಿಂಗ್ ಫಲದಿಂದ ನಿಗದಿತ 20 ಓವರಿನಲ್ಲಿ 175 ರನ್ ಟಾರ್ಗೆಟ್ ನೀಡಿತ್ತು. ಈ ಮೊತ್ತವನ್ನು ಬೆನ್ನತ್ತಿದ್ದ ಚೆನ್ನೈ ಆರಂಭದಿಂದಲೂ ಮಂದಗತಿಯ ಬ್ಯಾಟಿಂಗ್‍ಗೆ ಮುಂದಾಗಿತ್ತು. ಪರಿಣಾಮ ನಿಗದಿತ 20 ಓವರಿನಲ್ಲಿ ಕೇವಲ 131 ಗಳಿಸಿ ಟೂರ್ನಿಯಲ್ಲಿ ಎರಡನೇ ಸೋಲು ಕಂಡಿತು. ಕೊನೆಯಲ್ಲಿ ಧೋನಿ ಇದ್ದರೂ ಯಾವುದೇ ಮ್ಯಾಜಿಕ್ ನಡೆಯಲಿಲ್ಲ.

    ಡೆಲ್ಲಿ ಕ್ಯಾಪಿಟಲ್ ತಂಡದ ಎಲ್ಲ ಬೌಲರ್ ಗಳು ಉತ್ತಮವಾಗಿ ಬಾಲಿಂಗ್ ಮಾಡಿದರು. ಬೌಲಿಂಗ್‍ನಲ್ಲಿ ಕಮಾಲ್ ಮಾಡಿದ ಅಕ್ಷರ್ ಪಟೇಲ್ ಪಟೇಲ್ ನಾಲ್ಕು ಓವರ್ ಬೌಲ್ ಮಾಡಿ ಕೇವಲ 18 ರನ್ ಕೊಟ್ಟು ಒಂದು ವಿಕೆಟ್ ಪಡೆದರು. ಇವರ ನಂತರ ಅನ್ರಿಚ್ ನಾಟ್ರ್ಜೆ ಅವರು 4 ಓವರ್ ಬೌಲ್ ಮಾಡಿ ಎರಡು ವಿಕೆಟ್ ಕಿತ್ತು ಕೇವಲ 21 ರನ್ ನೀಡಿದರು. ಡೆತ್ ಓವರಿನಲ್ಲಿ ಉತ್ತಮವಾಗಿ ಬೌಲ್ ಮಾಡಿದ ರಬಡಾ ನಾಲ್ಕು ಓವರ್ ಎಸೆದು ಮೂರು ವಿಕೆಟ್ ಕಿತ್ತು 26 ರನ್ ನೀಡಿದರು.

    ಚೆನ್ನೈಗೆ ಆರಂಭಿಕ ಅಘಾತ ನೀಡಿದ ಅಕ್ಷರ್ ಪಟೇಲ್ 14 ರನ್‍ಗಳಿಸಿ ಆಡುತ್ತಿದ್ದ ಶೇನ್ ವ್ಯಾಟ್ಸನ್ ಹೆಟ್ಮಿಯರ್ ಅವರಿಗೆ ಕ್ಯಾಚ್ ಇತ್ತು ಔಟ್ ಆದರು. ನಂತರ ಪವರ್ ಪ್ಲೇ ಮುಕ್ತಾಯದ ಕೊನೆ ಬಾಲಿನಲ್ಲಿ ಮುರಳಿ ವಿಜಯ್ ಅವರು ಕೂಡ ಅನ್ರಿಚ್ ನಾಟ್ರ್ಜೆ ಅವರಿಗೆ ಔಟ್ ಆಗಿ ಪೆವಿಲಿಯನ್ ಸೇರಿದರು. ಈ ಮೂಲಕ ಚೆನ್ನೈ ಆರು ಓವರ್ ಮುಕ್ತಾಯದ ವೇಳೆ ಎರಡು ಪ್ರಮುಖ ವಿಕೆಟ್ ಕಳೆದುಕೊಂಡು ಕೇವಲ 34 ರನ್ ಪೇರಿಸಿತು.

    ಮೊದಲಿನಿಂದಲೂ ಡೆಲ್ಲಿ ಬೌಲರ್ ಚೆನ್ನೈ ಬ್ಯಾಟ್ಸ್ ಮ್ಯಾನ್‍ಗಳ ಮೇಲೆ ಒತ್ತಡ ಹಾಕಿದರು. ಇದೇ ವೇಳೆ ಇಲ್ಲದ ರನ್ ಕದಿಯಲು ಹೋಗಿ ಋತುರಾಜ್ ಗಾಯಕವಾಡ್ ಅವರು ರನ್ ಔಟ್ ಆದರು. ನಂತರ ಜೊತೆಯಾದ ಕೇದಾರ್ ಜಾಧವ್ ಮತ್ತು ಫಾಫ್ ಡು ಪ್ಲೆಸಿಸ್ ತಾಳ್ಮೆಯ ಆಟಕ್ಕೆ ಮುಂದಾದರು. ಈ ವೇಳೆ ಪ್ಲೆಸಿಸ್ ಅವರಿಗೆ ಹೆಟ್ಮಿಯರ್ ಅವರು ಒಂದು ಜೀವದಾನ ಕೂಡ ನೀಡಿದರು.

    ಇದೇ ವೇಳೆ 39 ಬಾಲಿಗೆ 54 ರನ್ ಸಿಡಿಸಿದ್ದ ಜೊತೆಯಾಟವನ್ನು ಅನ್ರಿಚ್ ನಾಟ್ರ್ಜೆ ಮುರಿದು ಹಾಕಿದರು. 26 ರನ್ ಗಳಿಸಿ ಆಡುತ್ತಿದ್ದ ಜಾಧವ್ ಅವರನ್ನು ನಾಟ್ರ್ಜೆ ಅವರು ಎಲ್‍ಬಿಡಬ್ಯ್ಲೂಗೆ ಬೀಳಿಸಿದರು. ನಂತರ ರಬಡಾ ಅವರ ಬೌಲಿಂಗ್‍ನಲ್ಲಿ 43ರನ್ ಸಿಡಿಸಿದ್ದ ಫಾಫ್ ಡು ಪ್ಲೆಸಿಸ್ ಅವರು ಔಟ್ ಆದರು. ಇದಾದ ನಂತರ ಕೊನೆಯ ಓವರಿನಲ್ಲಿ ನಾಯಕ ಧೋನಿಯವರು ಪಂತ್‍ಗೆ ಕ್ಯಾಚ್ ನೀಡಿ ಹೊರ ನಡೆದರು. ಇದಾದ ನಂತರ ಜಡೇಜಾ ಅವರು ಕೂಡ ರಬಡಾ ಬೌಲಿಂಗ್‍ಗೆ ಬಲಿಯಾದರು.

  • ಪೃಥ್ವಿ ಶಾ ಅರ್ಧಶತಕ, ಪಂತ್ ಅಬ್ಬರ – ಚೆನ್ನೈಗೆ 176 ರನ್ ಟಾರ್ಗೆಟ್

    ಪೃಥ್ವಿ ಶಾ ಅರ್ಧಶತಕ, ಪಂತ್ ಅಬ್ಬರ – ಚೆನ್ನೈಗೆ 176 ರನ್ ಟಾರ್ಗೆಟ್

    ದುಬೈ: ಆರಂಭಿಕ ಆಟಗಾರ ಪೃಥ್ವಿ ಶಾ ಅವರ ಮಿಂಚಿನ ಅರ್ಧಶತಕ ಮತ್ತು ರಿಷಭ್ ಪಂತ್ ಅವರು ಅಬ್ಬರದ ಬ್ಯಾಟಿಂಗ್ ಫಲವಾಗಿ ಐಪಿಎಲ್ ಏಳನೇ ಮ್ಯಾಚಿನಲ್ಲಿ ಡೆಲ್ಲಿ ತಂಡ ಚೆನ್ನೈಗೆ 176 ರನ್‍ಗಳ ಟಾರ್ಗೆಟ್ ನೀಡಿದೆ.

    ಡೆಲ್ಲಿಗೆ ಸಾಧಾರಣ ಆರಂಭ ನೀಡಿದ ಪೃಥ್ವಿ ಶಾ ಮತ್ತು ಶಿಖರ್ ಧವನ್, ಪವರ್ ಪ್ಲೇ ಮುಕ್ತಾಯದ ವೇಳೆಗೆ ಒಂದು ವಿಕೆಟ್ ಕಳೆದುಕೊಳ್ಳದೇ ಡೆಲ್ಲಿ 36 ರನ್ ಸೇರಿಸಿತು. ಪವರ್ ಪ್ಲೇ ವೇಳೆ ಚೆನ್ನೈ ತಂಡ ಉತ್ತಮವಾಗಿ ಫೀಲ್ಡಿಂಗ್ ಮಾಡಿತು. ನಂತರ ಚೆನ್ನೈ ಸ್ಪಿನ್ನರ್ ಗಳನ್ನು ದಂಡಿಸಿದ ಧವನ್ ಮತ್ತು ಪೃಥ್ವಿ ಶಾ ಬ್ಯಾಕ್ ಟು ಬ್ಯಾಕ್ ಫೋರ್ ಹೊಡೆದು ಮಿಂಚಿದರು. ಈ ವೇಳೆ ಭರ್ಜರಿಯಾಗಿ ಆಡಿದ ಪೃಥ್ವಿ ಶಾ 35 ಎಸೆತಗಳಲ್ಲಿ ಐದನೇ ಐಪಿಎಲ್ ಅರ್ಧಶತಕ ಪೂರ್ಣಗೊಳಿಸಿದರು.

    ಸಿಕ್ಸರ್ ಮತ್ತು ಫೋರುಗಳ ಸುರಿಮಳೆಗೈದ ಡೆಲ್ಲಿ ಆರಂಭಿಕ ಬ್ಯಾಟ್ಸ್ ಮ್ಯಾನ್‍ಗಳು, 10 ಓವರ್ ಮುಕ್ತಾಯಕ್ಕೆ ಯಾವುದೇ ವಿಕೆಟ್ ಕಳೆದುಕೊಳ್ಳದೇ 88 ರನ್ ಸಿಡಿಸಿದರು. ಈ ವೇಳೆ 35 ರನ್ ಸಿಡಿಸಿ ಉತ್ತಮವಾಗಿ ಆಡುತ್ತಿದ್ದ ಧವನ್ ಅವರು ಸಲ್ಲದ ಹೊಡೆತಕ್ಕೆ ಕೈ ಹಾಕಿ ಚಾವ್ಲಾ ಅವರಿಗೆ ವಿಕೆಟ್ ಒಪ್ಪಿಸಿದರು. ನಂತರ 43 ಎಸೆತಗಳಿಗೆ 64 ರನ್ (9 ಫೋರ್, 1 ಸಿಕ್ಸ್) ಸಿಡಿಸಿ ಮುನ್ನುಗ್ಗುತ್ತಿದ್ದ ಪೃಥ್ವಿ ಶಾ ಧೋನಿಯವರ ಸ್ಟಂಪಿಂಗ್‍ಗೆ ಬಲಿಯಾದರು.

    15 ಓವರಿನ ಮುಕ್ತಾಯಕ್ಕೆ ಎರಡು ವಿಕೆಟ್ ಕಳೆದುಕೊಂಡ ಡೆಲ್ಲಿ ತಂಡ 124 ರನ್ ಕಲೆಹಾಕಿತು. ಬಳಿಕ ಒಂದಾದ ನಾಯಕ ಶ್ರೇಯಸ್ ಐಯ್ಯರ್ ಮತ್ತು ರಿಷಭ್ ಪಂತ್ ರನ್ ವೇಗವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಬ್ಯಾಟ್ ಬೀಸಿದರು. ಜೊತೆಗೆ ಈ ಜೋಡಿ 35 ಎಸೆತಗಳಲ್ಲಿ ಅರ್ಧಶತಕದ ಜೊತೆಯಾಟವಾಡಿತು. ಆದರೆ 18ನೇ ಓವರಿನ ಕೊನೆಯ ಬಾಲಿನಲ್ಲಿ ಧೋನಿ ಹಿಡಿದ ಸೂಪರ್ ಕ್ಯಾಚಿಗ್ 26 ರನ್ ಗಳಿಸಿದ್ದ ಐಯ್ಯರ್ ಬಲಿಯಾದರು.

    ಈ ವೇಳೆ ಮಿಂಚಿನ ಬ್ಯಾಟಿಂಗ್ ಮಾಡಿದ ರಿಷಭ್ ಪಂತ್ ಅವರು, 25 ಬಾಲಿಗೆ 37 ರನ್ ಸಿಡಿಸಿ ಡೆಲ್ಲಿ ತಂಡ 170 ಗಡಿ ದಾಟಲು ಸಹಾಯಕವಾದರು. ಈ ಇನ್ನಿಂಗ್ಸ್‍ನಲ್ಲಿ ಪಂತ್ 6 ಭರ್ಜರಿ ಫೋರ್ ಚಚ್ಚಿದರು. ಚೆನ್ನೈ ತಂಡ ಬೌಲರ್ ಗಳು ಉತ್ತಮವಾಗಿ ಬೌಲ್ ಮಾಡಿದರು. ಇಂದಿನ ಪಂದ್ಯದಲ್ಲಿ ಚೆನ್ನೈ ತಂಡದ ಫೀಲ್ಡಿಂಗ್ ಕ್ಲಿಕ್ ಆಯ್ತು.

  • ಸಿಕ್ಸರ್, ಬೌಂಡರಿ ಸುರಿಮಳೆ – ಸ್ಟೊಯಿನಿಸ್ ಸ್ಫೋಟಕ ಆಟ, ಪಂಜಾಬ್‍ಗೆ 158 ರನ್ ಗುರಿ

    ಸಿಕ್ಸರ್, ಬೌಂಡರಿ ಸುರಿಮಳೆ – ಸ್ಟೊಯಿನಿಸ್ ಸ್ಫೋಟಕ ಆಟ, ಪಂಜಾಬ್‍ಗೆ 158 ರನ್ ಗುರಿ

    ದುಬೈ: 13 ರನ್‍ಗೆ 3 ವಿಕೆಟ್ ಪತನ, 96 ರನ್‍ಗಳಿಸುವಷ್ಟರಲ್ಲಿ 6 ವಿಕೆಟ್ ಪತನ. ಆರಂಭಿಕ ಹಿನ್ನಡೆ ಕಂಡರೂ ಸ್ಟೊಯಿನಿಸ್ ಸ್ಪೋಟಕ ಆಟದಿಂದ ಡೆಲ್ಲಿ ಕ್ಯಾಪಿಟಲ್ ತಂಡ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ 158 ರನ್‍ಗಳ ಗುರಿಯನ್ನು ನೀಡಿದೆ.

    ಇಂದು ನಡೆಯುತ್ತಿರುವ ಪಂದ್ಯದಲ್ಲಿ ಟಾಗ್ ಗೆದ್ದು ಕಿಂಗ್ಸ್ ಇಲೆವೆನ್ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆ ಬ್ಯಾಟಿಂಗ್‍ಗೆ ಬಂದ ದೆಹಲಿ ತಂಡಕ್ಕೆ ಆರಂಭಿಕ ಆಘಾತ ಎದುರಾಗಿತ್ತು. ಆದರೆ ಕೊನೆಯಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಿದ ಮಾರ್ಕಸ್ ಸ್ಟೊಯಿನಿಸ್ 53 ರನ್((20 ಎಸೆತ, 3 ಸಿಕ್ಸರ್ 7 ಬೌಂಡರಿ) ಭರ್ಜರಿ ಅರ್ಧ ಶತಕದ ನೆರವಿನಿಂದ ಡೆಲ್ಲಿ 157ರನ್ ಹೊಡೆಯಿತು.

    ಪಂದ್ಯದ ಆರಂಭದಲ್ಲೇ ಎಡವಿದ ಡೆಲ್ಲಿ ತಂಡದ ಆರಂಭಿಕ ಬ್ಯಾಟ್ಸ್‍ಮ್ಯಾನ್ ಶಿಖರ್ ಧವನ್ ಎರಡನೇ ಓವರ್‍ನಲ್ಲಿ ಇಲ್ಲದ ರನ್ ಕದಿಯಲು ಹೋಗಿ ರನೌಟ್ ಆದರು. ಮೂರನೇ ಓವರ್‍ನಲ್ಲಿ ಶಮಿ ಬೌನ್ಸರ್ ಗೆ ಪೃಥ್ವಿ ಶಾ ವಿಕೆಟ್ ಒಪ್ಪಿಸಿದರು. ಅದೇ ಓವರ್‍ನಲ್ಲಿ ಸ್ಫೋಟಕ ಬ್ಯಾಟಿಂಗ್‍ಗೆ ಮುಂದಾದ ಶಿಮ್ರಾನ್ ಹೆಟ್ಮಿಯರ್ ಕೂಡ ಕ್ಯಾಚ್ ಕೊಟ್ಟ ನಿರ್ಗಗಮಿಸಿದರು. ನಾಲ್ಕು ಓವರ್ ಮುಕ್ತಾಯಕ್ಕೆ 13 ರನ್‍ಗಳಿಸಿ ಡೆಲ್ಲಿ ಕ್ಯಾಪಿಟಲ್ 3 ವಿಕೆಟ್ ಕಳೆದುಕೊಂಡಿತ್ತು.

    ನಂತರ ಜೊತೆಯಾದ ಶ್ರೇಯಸ್ ಐಯ್ಯರ್ ಮತ್ತು ರಿಷಭ್ ಪಂತ್ ಉತ್ತಮ ಜೊತೆಯಾಟವಾಡಿದರು. ಇದರ ಪರಿಣಾಮ 10 ಓವರ್ ಮುಕ್ತಾಯಕ್ಕೆ ಡೆಲ್ಲಿ 49 ಪೇರಿಸಿತು. ಈ ವೇಳೆ ಕ್ಯಾಪ್ಟನ್ ಇನ್ನಿಂಗ್ಸ್ ಆಡಿದ ಐಯ್ಯರ್ ಬ್ಯಾಕ್ ಟು ಬ್ಯಾಕ್ ಸಿಕ್ಸರ್ ಭಾರಿಸಿದರು. ಇವರಿಗೆ ರಿಷಭ್ ಪಂತ್ 31 ರನ್(29 ಎಸೆತ) ಕೂಡ ಉತ್ತಮವಾಗಿ ಸಾಥ್ ನೀಡಿದರು. ಆದರೆ 13ನೇ ಓವರಿನ ಕೊನೆಯ ಬಾಲಿನಲ್ಲಿ ರವಿ ಬಿಷ್ಣೋಯ್ ಅವರಿಗೆ ಪಂತ್ ಬೌಲ್ಡ್ ಆದರು.

    ಇದಾದ ನಂತರ 39 ರನ್ ಗಳಿಸಿ ಆಡುತ್ತಿದ್ದ ಶ್ರೇಯಸ್ ಐಯ್ಯರ್ 14ನೇ ಓವರ್‍ನಲ್ಲಿ ಶಮಿ ಬೌಲಿಂಗ್‍ಗೆ ಕ್ರಿಸ್ ಜೋರ್ಡಾನ್‍ಗೆ ಕ್ಯಾಚ್ ನೀಡಿದರು. ನಂತರ ಆಕ್ಸಾರ್ ಪಟೇಲ್ ಶೆಲ್ಡನ್ ಕಾಟ್ರೆಲ್ ಅವರಿಗೆ ವಿಕೆಟ್ ಒಪ್ಪಿಸಿದರು. ಇವರ ನಂತರ ಬಂದ ಯಾವುದೇ ಆಟಗಾರ ಕ್ರಿಸ್‍ನಲ್ಲಿ ಹೆಚ್ಚು ಕಾಲ ಉಳಿಯಲಿಲ್ಲ. ಆದರೆ ಮಾರ್ಕಸ್ ಸ್ಟೊಯಿನಿಸ್ ಮಾತ್ರ ಉತ್ತಮವಾಗಿ ಬ್ಯಾಟ್ ಬೀಸಿ ತಂಡ 157 ರನ್ ಸೇರಿದುವಲ್ಲಿ ಉತ್ತಮ ಕೊಡುಗೆ ನೀಡಿದರು.

    ಸ್ಟೊಯಿನಿಸ್ ಆಟದಿಂದ 18ನೇ ಓವರ್ ನಲ್ಲಿ 13 ರನ್, 19 ನೇ ಓವರ್ ನಲ್ಲಿ 14 ರನ್, 20ನೇ ಓವರ್ ನಲ್ಲಿ 30 ರನ್ ಡೆಲ್ಲಿ ತಂಡಕ್ಕೆ ಬಂದಿತ್ತು. ಜೋರ್ಡನ್ ಎಸೆದ ಕೊನೆಯ ಓವರ್ ನಲ್ಲಿ 2 ಸಿಕ್ಸರ್, 3 ಬೌಂಡರಿಯನ್ನು ಸ್ಟೊಯಿನಿಸ್ ಚಚ್ಚಿದ್ದರು.

    ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಉತ್ತಮವಾಗಿ ಬೌಲ್ ಮಾಡಿದ ಅನುಭವಿ ವೇಗಿ ಮೊಹಮ್ಮದ್ ಶಮಿಯವರು ನಾಲ್ಕು ಓವರ್ ಬೌಲ್ ಮಾಡಿ ಮೂರು ವಿಕೆಟ್ ಕಿತ್ತು ಕೇವಲ 15 ರನ್ ನೀಡಿದರು. ಇವರಿಗೆ ಉತ್ತಮವಾಗಿ ಸಾಥ್ ಕೊಟ್ಟ ಶೆಲ್ಡನ್ ಕಾಟ್ರೆಲ್ ಅವರು ನಾಲ್ಕು ಓವರ್ ಬೌಲ್ ಮಾಡಿ 24 ರನ್ ನೀಡಿ 2 ವಿಕೆಟ್ ಪಡೆದರು. ಇದೇ ವೇಳೆ ರವಿ ಬಿಷ್ಣೋಯ್ ಅವರು ಕೂಡ ತಮ್ಮ ಚೊಚ್ಚಲ ಐಪಿಎಲ್ ವಿಕೆಟ್ ಪಡೆದರು.

  • ರಾಹುಲ್ Vs ಐಯ್ಯರ್, ಪಾಂಟಿಂಗ್ Vs ಕುಂಬ್ಳೆ – ಪಂಜಾಬ್, ಡೆಲ್ಲಿ ತಂಡಗಳ ಬಲಾಬಲ

    ರಾಹುಲ್ Vs ಐಯ್ಯರ್, ಪಾಂಟಿಂಗ್ Vs ಕುಂಬ್ಳೆ – ಪಂಜಾಬ್, ಡೆಲ್ಲಿ ತಂಡಗಳ ಬಲಾಬಲ

    ನವದೆಹಲಿ: ಐಪಿಎಲ್ ಎರಡನೇ ದಿನವಾದ ಇಂದು ಸಂಡೇ ಧಮಾಕದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ಡೆಲ್ಲಿ ಕ್ಯಾಪಿಟಲ್ ತಂಡಗಳು ಮುಖಾಮುಖಿಯಾಗಲಿವೆ.

    ಎರಡು ತಂಡದಲ್ಲಿ ಯುವ ಆಟಗಾರರು ಮತ್ತು ಯುವ ನಾಯಕರು ಇಂದು ಮೈದಾನಕ್ಕಿಳಿಯಲು ಸಜ್ಜಾಗಿದ್ದಾರೆ. ಪಂಜಾಬ್ ಮತ್ತು ಡೆಲ್ಲಿ ಎರಡು ತಂಡದಲ್ಲಿ ಒಳ್ಳೆಯ ವಿದೇಶಿ ಆಟಗಾರಿದ್ದು, ಇಂದು ರನ್ ಮಳೆಯೇ ಹರಿಯುವ ಸಾಧ್ಯತೆ ಇದೆ. ಎರಡು ತಂಡಗಳ ಬಲಾಬಲವನ್ನು ನೋಡುವುದಾದರೆ ಉಭಯ ತಂಡಗಳಲ್ಲಿ ಸರಿಸಮಾನ ಆಟಗಾರರು ಇದ್ದಾರೆ.

    ರಾಹುಲ್ ವರ್ಸಸ್ ಐಯ್ಯರ್
    ಈ ಬಾರಿ ಭಾರತ ತಂಡದ ಪ್ರತಿಭಾನ್ವಿತ ಆಟಗಾರ ಕೆಎಲ್ ರಾಹುಲ್ ಅವರು ಕಿಂಗ್ಸ್ ಇಲೆವೆನ್ ತಂಡದ ನಾಯಕತ್ವವನ್ನು ವಹಿಸಿಕೊಂಡಿದ್ದಾರೆ. ಇತ್ತ ಯುವ ಆಟಗಾರ ಶ್ರೇಯಸ್ ಐಯ್ಯರ್ ಕೂಡ ಡೆಲ್ಲಿ ಕ್ಯಾಪಿಟಲ್ ತಂಡದ ಚುಕ್ಕಾಣಿ ಹಿಡಿದಿದ್ದು, ಬ್ಯಾಟಿಂಗ್ ಮತ್ತು ನಾಯಕ್ವ ಎರಡು ವಿಚಾರದಲ್ಲಿ ರಾಹುಲ್ ಹಾಗೂ ಐಯ್ಯರ್ ನಡುವೆ ಇಂದು ಬಿಗ್ ಫೈಟ್ ನಡೆಯಲಿದೆ. ಜೊತೆಗೆ ಭಾರತ ತಂಡದಲ್ಲಿ ಸ್ಥಾನ ಗಳಿಸಲು ಇಬ್ಬರಿಗೂ ಐಪಿಎಲ್ ಬಹಳ ಪ್ರಮುಖವಾಗಿದೆ.

    ಪಂಟರ್ ವರ್ಸಸ್ ಜಂಬೋ
    ಇಂದಿನ ಪಂದ್ಯಗಳು ಡೆಲ್ಲಿ ಮತ್ತು ಪಂಜಾಬ್ ತಂಡಗಳ ಕೋಚ್‍ಗಳಿಗೂ ಪ್ರತಿಷ್ಠೆಯ ಕಣವಾಗಿದೆ. ಪಂಜಾಬ್ ತಂಡವನ್ನು ಅನಿಲ್ ಕುಂಬ್ಳೆಯವರು ಮುನ್ನಡೆಸುತ್ತಿದ್ದರೆ, ಇತ್ತ ಆಸ್ಟೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಡೆಲ್ಲಿ ಕ್ಯಾಪಿಟಲ್ ತಂಡವನ್ನು ಕೋಚ್ ಮಾಡುತ್ತಿದ್ದಾರೆ. ಈ ಇಬ್ಬರು ದಿಗ್ಗಜ ಮಾಜಿ ಆಟಗಾರರ ತರಬೇತಿಯಲ್ಲಿ ಪಳಗಿರುವ ಯುವ ತಂಡಗಳು ಇಂದು ಮುಖಾಮುಖಿಯಾಗಲಿವೆ.

    ಮ್ಯಾಕ್ಸ್‌ವೆಲ್‌ಗೆ ಸ್ಟೋಯಿನಿಸ್ ಪವರ್
    ಎರಡು ತಂಡದಲ್ಲಿ ವಿದೇಶಿ ಆಟಗಾರರ ದಂಡೇ ಇದೆ. ಆದರೆ ಆಸೀಸ್‍ನ ಸ್ಟಾರ್ ಆಲ್‍ರೌಂಡರ್ ಗಳಾದ ಮಾರ್ಕಸ್ ಸ್ಟೋಯಿನಿಸ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಉಭಯ ತಂಡದಲ್ಲಿ ಇದ್ದಾರೆ. ಪಂಜಾಬ್ ತಂಡದಲ್ಲಿ ಮ್ಯಾಕ್ಸ್‌ವೆಲ್ ಮ್ಯಾಜಿಕ್ ಮಾಡಲು ತಯಾರಗಿದ್ದರೆ, ಇತ್ತ ಸ್ಟೋಯಿನಿಸ್ ಕೂಡ ಪಂಜಾಬ್‍ಗೆ ಟಾಂಗ್ ಕೊಡಲು ಸಿದ್ಧವಾಗಿದ್ದಾರೆ. ಈ ಇಬ್ಬರು ಆಟಗಾರರು ಒಳ್ಳೆಯ ಲಯದಲ್ಲಿದ್ದು, ಕಳೆದ ತಿಂಗಳು ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ 174 ರನ್‍ಗಳ ಜೊತೆಯಾಟವಾಡಿದ್ದರು.

    ಅಗರ್ವಾಲ್ ವರ್ಸಸ್ ಪೃಥ್ವಿ
    ಡೋಪಿಂಗ್ ವಿಚಾರದಲ್ಲಿ ಕೆಲ ಕಾಲ ಕ್ರಿಕೆಟ್‍ನಿಂದ ಬ್ಯಾನ್ ಆಗಿದ್ದ ಪೃಥ್ವಿ ಶಾ ಕಾಮ್‍ಬ್ಯಾಕ್ ಮಾಡಲು ಸಿದ್ಧವಾಗಿದ್ದಾರೆ. ಡೆಲ್ಲಿ ಕ್ಯಾಪಿಟಲ್ ತಂಡದ ಪರವಾಗಿ ಶಿಖರ್ ಧವನ್ ಅವರ ಜೊತೆ ಓಪನಿಂಗ್ ಮಾಡಲಿದ್ದಾರೆ. ಇತ್ತ ಮಯಾಂಕ್ ಅಗರ್ವಾಲ್ ಕೂಡ ಪಂಜಾಬ್ ತಂಡದಲ್ಲಿ ಆರಂಭಿಕನಾಗಿ ಅಬ್ಬರಿಸಲು ರೆಡಿಯಾಗಿದ್ದಾರೆ. ಐಪಿಎಲ್‍ನಲ್ಲಿ ಉತ್ತಮ ಪ್ರದರ್ಶನ ನೀಡಿ ಟೀಂ ಇಂಡಿಯಾದಲ್ಲಿ ಖಾಯಂ ಸ್ಥಾನ ಗಿಟ್ಟಿಸಲು ಪ್ರಯತ್ನ ಮಾಡುತ್ತಿದ್ದಾರೆ.

     

    ವಿಕೆಟ್ ಕೀಪಿಂಗ್‍ನಲ್ಲಿ ರಾಹುಲ್, ಪಂತ್
    ಉಭಯ ತಂಡದಲ್ಲಿ ಇಬ್ಬರು ಯುವ ವಿಕೆಟ್ ಕೀಪರ್ ಗಳು ಇದ್ದಾರೆ. ಡೆಲ್ಲಿಯಲ್ಲಿ ರಿಷಭ್ ಪಂತ್ ವಿಕೆಟ್ ಕೀಪರ್ ಜವಾಬ್ದಾರಿ ಹೊತ್ತುಕೊಂಡಿದ್ದರೆ, ಇತ್ತ ನಾಯಕ ರಾಹುಲ್ ಪಂಜಾಬ್ ತಂಡದಲ್ಲಿ ವಿಕೆಟ್ ಕೀಪಿಂಗ್ ಮಾಡಲಿದ್ದಾರೆ. ಧೋನಿ ನಂತರ ಯಾರು ಟೀಂ ಇಂಡಿಯಾಗೆ ಖಾಯಂ ವಿಕೆಟ್ ಕೀಪರ್ ಆಗಲಿದ್ದಾರೆ ಎಂಬುದಕ್ಕೆ ಈ ಬಾರಿ ಐಪಿಎಲ್ ಉತ್ತರ ನೀಡಲಿದ್ದು, ರಿಷಭ್ ಮತ್ತು ರಾಹುಲ್ ನಡುವೆ ಸ್ಪರ್ಧೆ ಏರ್ಪಟ್ಟಿದೆ.

    ಶಮಿ ಸ್ವಿಂಗ್, ಇಶಾಂತ್ ಬೌನ್ಸರ್
    ಬೌಲಿಂಗ್ ವಿಭಾಗಕ್ಕೆ ಬಂದರೆ ಎರಡು ತಂಡಗಳು ಕೂಡ ಒಳ್ಳೆಯ ವೇಗಿಗಳನ್ನು ಹೊಂದಿದೆ. ಭಾರತದ ಟೀಂನಲ್ಲಿ ಅನುಭವಿ ವೇಗಿ ಎನಿಸಿಕೊಂಡಿರುವ ಮೊಹಮ್ಮದ್ ಶಮಿ ಪಂಜಾಬ್ ತಂಡಕ್ಕೆ ಸಾಥ್ ನೀಡಲಿದ್ದಾರೆ. ಮತ್ತೋರ್ವ ಅನುಭವಿ ವೇಗಿ ಇಶಾಂತ್ ಶರ್ಮಾ ಡೆಲ್ಲಿ ಕ್ಯಾಪಿಟಲ್ ತಂಡದಲ್ಲಿ ಆಡಲಿದ್ದಾರೆ. ಇಂದಿನ ಪಂದ್ಯದಲ್ಲಿ ಈ ಇಬ್ಬರು ಅನುಭವಿ ವೇಗಿಗಳ ಮೇಲೆ ನಿರೀಕ್ಷೆ ಹೆಚ್ಚಾಗಿದೆ.

  • ದೆಹಲಿಗೆ ಅಶ್ವಿನ್, ಕಿಂಗ್ಸ್​​ಗೆ ಕನ್ನಡಿಗ ರಾಹುಲ್ ಕ್ಯಾಪ್ಟನ್?

    ದೆಹಲಿಗೆ ಅಶ್ವಿನ್, ಕಿಂಗ್ಸ್​​ಗೆ ಕನ್ನಡಿಗ ರಾಹುಲ್ ಕ್ಯಾಪ್ಟನ್?

    ನವದೆಹಲಿ: 2020ರ ಐಪಿಎಲ್ ಆವೃತ್ತಿಯಲ್ಲಿ ಕನ್ನಡಿಗ ಕೆ.ಎಲ್ ರಾಹುಲ್ ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ನಾಯಕನಾಗುವ ಸಾಧ್ಯತೆಯಿದೆ.

    ಕಿಂಗ್ಸ್ ಇಲೆವೆಲ್ ಪಂಜಾಬ್ ತಂಡದ ಆಡಳಿತ ಮಂಡಳಿ, ಕಳೆದ ಆವೃತ್ತಿಯಲ್ಲಿ ಆರಂಭಿಕನಾಗಿ ಉತ್ತಮವಾಗಿ ಬ್ಯಾಟ್ ಬೀಸಿದ ಕೆ.ಎಲ್ ರಾಹುಲ್ ಅವರಿಗೆ ನಾಯಕ ಸ್ಥಾನವನ್ನು ನೀಡಲು ತೀರ್ಮಾನ ಮಾಡಿದೆ. ಕಳೆದ ವರ್ಷ ಪಂಜಾಬ್ ತಂಡದ ನಾಯಕನಾಗಿದ್ದ ಅಶ್ವಿನ್ ದೆಹಲಿ ತಂಡಕ್ಕೆ ಹೋಗಲಿದ್ದಾರೆ ಎಂದು ವರದಿಯಾಗಿದೆ.

    ದೆಹಲಿ ತಂಡ, ನಾಯಕ ಶ್ರೇಯಸ್ ಅಯ್ಯರ್, ಮುಖ್ಯ ಕೋಚ್ ರಿಕಿ ಪಾಂಟಿಂಗ್ ಮತ್ತು ಮಾರ್ಗದರ್ಶಕ ಸೌರವ್ ಗಂಗೂಲಿಯವರ ನೇತೃತ್ವದಲ್ಲಿ ಒಳ್ಳೆಯ ಪ್ರದರ್ಶನ ನೀಡುತ್ತಿದೆ. ಆದರೆ ದೆಹಲಿ ತಂಡದಲ್ಲಿ ಅನುಭವಿ ಸ್ಪಿನ್ನರ್‍ ಗಳ ಕೊರತೆ ಇದ್ದು, ಆರ್ ಅಶ್ವಿನ್ ಅವರಿಗೆ ಅ ಸ್ಥಾನ ನೀಡಲು ದೆಹಲಿ ಕ್ಯಾಪಿಟಲ್ ತಂಡದ ಆಡಳಿತ ಮಂಡಳಿ ತೀರ್ಮಾನ ಮಾಡಿದೆ ಎಂದು ಹೇಳಲಾಗಿದೆ.

    ಈಗ ಸದ್ಯ ದೆಹಲಿ ತಂಡದಲ್ಲಿ 36 ವರ್ಷದ ಸ್ಪಿನ್ನರ್ ಅಮಿತ್ ಮಿಶ್ರಾ ಇದ್ದು, ಅವರಿಂದ ನಿರೀಕ್ಷಿತ ಮಟ್ಟದ ಬೌಲಿಂಗ್ ಪ್ರದರ್ಶನ ಕಂಡು ಬಂದಿಲ್ಲ. ಅದ್ದರಿಂದ ಭಾರತ ತಂಡದಲ್ಲಿ ಹೆಚ್ಚು ಅನುಭವ ಇರುವ ಆರ್ ಅಶ್ವಿನ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವ ತೀರ್ಮಾನವನ್ನು ದೆಹಲಿ ಕ್ಯಾಪಿಟಲ್ ಮಾಡಿದೆ. ಈ ಮೂಲಕ ಬೌಲಿಂಗ್ ವಿಭಾಗವನ್ನು ಬಲಪಡಿಸುವ ಪ್ರಯತ್ನ ಮಾಡುತ್ತಿದೆ ಎನ್ನಲಾಗಿದೆ.

    ಕಳೆದ ಎರಡು ಆವೃತ್ತಿಯಲ್ಲಿ ಪಂಜಾಬ್ ತಂಡವನ್ನು ಮುನ್ನಡೆಸಿದ ಅಶ್ವಿನ್ ಅವರು, ತಂಡವನ್ನು ಫ್ಲೇ ಆಫ್ ಹಂತಕ್ಕೆ ಕರೆದುಕೊಂಡು ಹೋಗುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ಕ್ಯಾಪ್ಟನ್ ಬದಲಾವಣೆಯ ಯೋಜನೆ ಮಾಡಿರುವ ಪಂಜಾಬ್ ತಂಡ ಆರಂಭಿಕನಾಗಿ ಉತ್ತಮ ಪ್ರದರ್ಶನ ನೀಡಿರುವ ಯುವ ಆಟಗಾರ ಕನ್ನಡಿಗ ಕೆ.ಎಲ್ ರಾಹುಲ್‍ಗೆ ಅ ಸ್ಥಾನವನ್ನು ನೀಡಲು ಮುಂದಾಗಿದೆ ಎಂದು ಹೇಳಲಾಗಿದೆ.

    ಅಶ್ವಿನ್ ಐಪಿಎಲ್‍ನಲ್ಲಿ ಒಟ್ಟು 139 ಪಂದ್ಯಗಳನ್ನು ಆಡಿ 26.48 ಸರಾಸರಿಯಲ್ಲಿ 125 ವಿಕೆಟ್ ಪಡೆದಿದ್ದಾರೆ. 2018 ರಲ್ಲಿ ಚೆನ್ನೈ ತಂಡ ಇವರನ್ನು ಕೈಬಿಟ್ಟ ಮೇಲೆ ಪಂಜಾಬ್ 7.6 ಕೋಟಿ ರೂ. ನೀಡಿ ತಮ್ಮ ತಂಡಕ್ಕೆ ಖರೀದಿ ಮಾಡಿ ನಾಯಕ ಸ್ಥಾನ ನೀಡಿತ್ತು. ಆದರೆ ತಂಡವನ್ನು ಮುನ್ನಡೆಸುವಲ್ಲಿ ವಿಫಲರಾದ ಅಶ್ವಿನ್ ಕೆಳದ ಆವೃತ್ತಿಯಲ್ಲಿ ಆಡಿದ 14 ಪಂದ್ಯಗಳಲ್ಲಿ 15 ವಿಕೆಟ್ ಕಿತ್ತು ಕೇವಲ 42 ರನ್ ಗಳಿಸಿದ್ದರು. ಈ ಮೂಲಕ ಪಂಜಾಬ್ ತಂಡ ಅಂಕ ಪಟ್ಟಿಯಲ್ಲಿ 6ನೇ ಸ್ಥಾನ ಪಡೆದುಕೊಂಡಿತ್ತು.

  • ಕೊಹ್ಲಿ ಒಬ್ಬ ಅಪ್ರಬುದ್ಧ ಆಟಗಾರ – ರಬಾಡ

    ಕೊಹ್ಲಿ ಒಬ್ಬ ಅಪ್ರಬುದ್ಧ ಆಟಗಾರ – ರಬಾಡ

    ನವದೆಹಲಿ: ಕೊಹ್ಲಿ ಪಂದ್ಯದ ಸಮಯದಲ್ಲಿ ಎದುರಾಳಿಗಳನ್ನು ನಿಂದಿಸುತ್ತಾರೆ. ಆದರೆ ಎದುರಾಳಿಗಳು ನಿಂದಿಸಿದಾಗ ಕೋಪಗೊಳ್ಳುತ್ತಾರೆ. ಹೀಗಾಗಿ ಅವರೊಬ್ಬ ಅಪ್ರಬುದ್ಧ ಆಟಗಾರ ಎಂದು ದಕ್ಷಿಣ ಆಫ್ರಿಕಾದ ಯುವ ವೇಗಿ ಕಗಿಸೋ ರಬಾಡ ಅವರು ಹೇಳಿದ್ದಾರೆ.

    ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಪಂದ್ಯದ ವೇಳೆ ಆಕ್ರಮಣಕಾರಿ ವ್ಯಕ್ತಿತ್ವ ತೋರುವ ವಿಚಾರದ ಬಗ್ಗೆ ಮಾತನಾಡಿರುವ ರಬಾಡ ಐಪಿಎಲ್ ವೇಳೆ ತಮ್ಮ ಮತ್ತು ಕೊಹ್ಲಿ ನಡುವಿನ ಘಟನೆಯನ್ನು ಹಂಚಿಕೊಂಡಿದ್ದಾರೆ.

    ಕೊಹ್ಲಿ ಪಂದ್ಯದ ವೇಳೆ ಎದುರಾಳಿಗಳನ್ನು ನಿಂದಿಸುತ್ತಾರೆ. ಆದರೆ ಯಾರದರು ಅವರನ್ನು ನಿಂದಿಸಿದರೆ ಕೋಪಗೊಳ್ಳುತ್ತಾರೆ. ಇದೇ ರೀತಿ ಐಪಿಎಲ್‍ನಲ್ಲಿ ಡೆಲ್ಲಿ ಕ್ಯಾಪಿಟಲ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯವೊಂದರಲ್ಲಿ ನನ್ನ ಎಸೆತಕ್ಕೆ ಬೌಂಡರಿ ಬಾರಿಸಿದ ಕೊಹ್ಲಿ ಅವರು ನನ್ನನ್ನು ನಿಂದಿಸಿ ಮಾತನಾಡಿದರು. ನಂತರ ಎಸೆದ ಎಸೆತ ಡಾಟ್ ಅದ ಕಾರಣ ನಾನು ಅವರನ್ನು ನಿಂದಿಸಿದೆ. ಇದನ್ನು ಸಹಿಸಿಕೊಳ್ಳದ ಕೊಹ್ಲಿ ನನ್ನ ಮೇಲೆ ಕೋಪಗೊಂಡರು ಎಂದು ವಿವರಿಸಿದರು.

    ವಿರಾಟ್ ಒಬ್ಬ ಅತ್ಯುತ್ತಮ ಆಟಗಾರ. ಒಳ್ಳೆಯ ಬ್ಯಾಟ್ಸ್‌ಮನ್ ಆಕ್ರಮಣಕಾರಿ ಆಟದ ಮೂಲಕ ತಂಡಕ್ಕೆ ಗೆಲುವು ತಂದು ಕೊಡುವ ಅದ್ಭುತ ಆಟಗಾರ. ಆದರೆ ಎದುರಾಳಿಗಳನ್ನು ಜರಿಯುವ ಅವರು ಎದುರಾಳಿಗಳ ಜರಿಯುವಿಕೆಯನ್ನು ಸ್ವೀಕಾರ ಮಾಡುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ರಬಾಡ ಅವರು 2018ರಲ್ಲಿ ಕೊಹ್ಲಿ ಅವರನ್ನು ಹಿಂದಿಕ್ಕಿ ಐಸಿಸಿಯ ವರ್ಷದ ಆಟಗಾರ ಪ್ರಶಸ್ತಿ ಮತ್ತು ಆದೇ ವರ್ಷ ಅತ್ಯುತ್ತಮ ಟೆಸ್ಟ್ ಆಟಗಾರ ಪ್ರಶಸ್ತಿಯನ್ನು ಕಸಿದುಕೊಂಡಿದ್ದರು.

    ಈ ವಿಚಾರದ ಬಗ್ಗೆ ಮಾತನಾಡಿದ ರಬಾಡ, ಕೊಹ್ಲಿ ಅವರು ಕಳೆದ ಐದು ವರ್ಷದಿಂದ ಭಾರತೀಯ ಕ್ರಿಕೆಟ್‍ನ ಆಧಾರ ಸ್ತಂಭ ಅವರು ಈ ಎಲ್ಲಾ ಪ್ರಶಸ್ತಿಗಳಿಗೂ ಅರ್ಹರಾಗಿದ್ದಾರೆ. ಕೊಹ್ಲಿ ಅವರು ಆಡುವ ಆಟದ ವಿಷಯದಲ್ಲಿ ನೀವು ತಪ್ಪು ಹುಡುಕಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

    2019ರ ವಿಶ್ವಕಪ್‍ನ ತನ್ನ ಮೊದಲ ಪಂದ್ಯವನ್ನು ಕೊಹ್ಲಿ ನೇತೃತ್ವದ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಜೂನ್ 5 ರಂದು ಆಡಲಿದೆ.