Tag: ಡಿ.ಬಿ.ನಟೇಶ್

  • ಸಿದ್ದರಾಮಯ್ಯ ಕಟ್ಟಾ ಬೆಂಬಲಿಗ, ಮುಡಾ ಮಾಜಿ ಆಯುಕ್ತ ಡಿ.ಬಿ ನಟೇಶ್ ಮನೆ ಮೇಲೂ ಇಡಿ ದಾಳಿ!

    ಸಿದ್ದರಾಮಯ್ಯ ಕಟ್ಟಾ ಬೆಂಬಲಿಗ, ಮುಡಾ ಮಾಜಿ ಆಯುಕ್ತ ಡಿ.ಬಿ ನಟೇಶ್ ಮನೆ ಮೇಲೂ ಇಡಿ ದಾಳಿ!

    ಮೈಸೂರು: ಮುಡಾ ಸೈಟ್ ಅಕ್ರಮಕ್ಕೆ ಸಂಬಂಧಿಸಿದಂತೆ ಬೆಂಗಳೂರು ಮತ್ತು ಮೈಸೂರಿನ 9 ಕಡೆಗಳಲ್ಲಿ ಜಾರಿ ನಿರ್ದೇಶನಾಲಯ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಡ್ಡಾ ಬೆಂಬಲಿಗ ರಾಕೇಶ್ ಪಾಪಣ್ಣ (Rakesh Papanna) ಅವರ ಮೈಸೂರಿನ ನಿವಾಸ ಹಾಗೂ ಮುಡಾ ಮಾಜಿ ಆಯುಕ್ತ ಡಿ.ಬಿ ನಟೇಶ್ (DB Natesh) ಅವರ ಬೆಂಗಳೂರಿನ ನಿವಾಸದ ಮೇಲೂ ಇಡಿ ದಾಳಿ ನಡೆಸಿದೆ.

    ಸಿಎಂ ಆಪ್ತನ ಮನೆ ಮೇಲೂ ಇ.ಡಿ ತಲಾಶ್:
    ಸಿಎಂ ಆಪ್ತ ರಾಕೇಶ್ ಪಾಪಣ್ಣಗೂ ಶಾಕ್ ನೀಡಿರುವ ಜಾರಿ ನಿರ್ದೇಶನಾಲಯ (ED) ಮೈಸೂರಿನ ಹಿನಕಲ್ ನಿವಾಸದ ಮೇಲೆ ದಾಳಿ ನಡೆಸಿ, ತೀವ್ರ ಶೋಧ ನಡೆಸಿದೆ. ಅಲ್ಲದೇ ರಾಕೇಶ್ ಪಾಪಣ್ಣ ಅವರನ್ನೂ ವಿಚಾರಣೆಗೆ ಒಳಪಡಿಸಿದೆ. ಇದೇ ಸಂದರ್ಭದಲ್ಲಿ ಬೆಂಗಳೂರಿನ ಮಲ್ಲೇಶ್ವರದ 10ನೇ ಕ್ರಾಸ್‌ನಲ್ಲಿರುವ ಮುಡಾ ಮಾಜಿ ಆಯುಕ್ತ ಡಿ.ಬಿ ನಟೇಶ್ ಅವರ ನಿವಾಸದ ಮೇಲೂ ಇಡಿ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಬೆಳಗ್ಗೆ 8 ಗಂಟೆ ಸುಮಾರಿಗೆ ದಾಳಿ ನಡೆಸಿದ ಅಧಿಕಾರಿಳು ತೀವ್ರ ಶೋಧ ನಡೆಸುತ್ತಿದ್ದಾರೆ. ವಿವಿಧ ದಾಖಲೆಗಳನ್ನ ಪರಿಶೀಲಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ರಾಕೇಶ್ ಪಾಪಣ್ಣಗೆ ಯಾಕೆ ಇಡಿ ಬಿಸಿ?
    ಸಿದ್ದರಾಮಯ್ಯರ ಕಟ್ಟಾ ಬೆಂಬಲಿಗನಾದ ರಾಕೇಶ್ ಪಾಪಣ್ಣಗೆ ಇದೇ ವರ್ಷದ ಜೂನ್ ನಲ್ಲಿ ಅಂದಿನ ಮುಡಾ ಆಯುಕ್ತ ದಿನೇಶ್ ಕುಮಾರ್ 50:50 ಅನುಪಾತದಲ್ಲಿ ಒಟ್ಟು 98,850 ಚದರ ಅಡಿ ಜಾಗವನ್ನು ಪರಿಹಾರ ರೂಪದಲ್ಲಿ ನೀಡಿದ್ದರು. ಅಲ್ಲದೇ ಕೆಲವು 50:50 ಅನುಪಾತದ ನಿವೇಶನ ಹಂಚಿಕೆಯಲ್ಲೂ ರಾಕೇಶ್ ಪಾಪಣ್ಣ ಮಧ್ಯಸ್ಥಿಕೆ ಇದೆ ಎಂಬ ಆರೋಪ ಕೇಳಿಬಂದಿದೆ.

    ಡಿ.ಬಿ ನಟೇಶ್‌ ಮೇಲಿನ ಆರೋಪಗಳೇನು?
    ಡಿ.ಬಿ ನಟೇಶ್, 2020 ರಿಂದ 2022ರವರೆಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿ ಕರ್ತವ್ಯ ನಿರ್ವಹಿಸಿದ್ದರು. ಇದೇ ಅವಧಿಯಲ್ಲಿ ಸಿಎಂ ಸಿದ್ದರಾಮಯ್ಯ ಪತ್ನಿಗೆ 50:50 ಅನುಪಾತದಲ್ಲಿ ವಿಜಯನಗರದಲ್ಲಿ 14 ಸೈಟ್ ಮಂಜೂರು ಮಾಡಿದ್ದರು ಎನ್ನಲಾಗಿದೆ. ಅಲ್ಲದೇ ನಟೇಶ್ ಅವಧಿಯಲ್ಲೇ 50:50 ಅನುಪಾತದ ಅಡಿ 500ಕ್ಕೂ ಹೆಚ್ಚು ನಿವೇಶನ ಹಂಚಲಾಗಿದೆ. ಬದಲಿ ನಿವೇಶನಗಳು ಕೂಡ ಇದೇ ವೇಳೆಯ ಹಂಚಿಕೆ ಆಗಿದೆ ಎಂಬ ಆರೋಪ ಇವರ ಮೇಲೆ ಇರುವುದಾಗಿ ಉನ್ನತ ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.

    ಮಾಜಿ ಆಯುಕ್ತ ದಿನೇಶ್‌ ಕುಮಾರ್‌ ಮೇಲಿನ ಆರೋಪ ಏನು?
    ನಟೇಶ್ ಅವರ ನಂತರ 2022ರ ಮೇ ನಿಂದ 2024ರ ಜುಲೈ ವರೆಗೆ ದಿನೇಶ್ ಕುಮಾರ್ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿದ್ದರು. ಇವರ ಅವಧಿಯಲ್ಲಿ ಅತ್ಯಧಿಕ ಅಂದರೆ 1 ಸಾವಿರಕ್ಕೂ ಹೆಚ್ಚು ನಿವೇಶನಗಳನ್ನು 50:50 ಅನುಪಾತದಲ್ಲಿ ನೀಡಲಾಗಿತ್ತು. ಅಲ್ಲದೇ ನೂರಾರು ಸೈಟ್‌ಗಳ ಮೂಲ ವಾರುಸದಾರರಿಗೆ ಪರಿಹಾರ ಹೋಗಿದ್ದರೂ ಮತ್ತೆ ಪರಿಹಾರ ರೂಪದಲ್ಲಿ ನಿವೇಶನ ನೀಡಲಾಗಿದೆ. ಬಹಳಷ್ಟು ನಿವೇಶನಗಳ ವಾರಸುದಾರರನ್ನ ಸೃಷ್ಟಿ ಮಾಡಲಾಗಿದೆ ಎಂಬ ಗಂಭೀರ ಆರೋಪ ಇವರ ಮೇಲಿದೆ.

    ಅಲ್ಲದೇ ಸಿಎಂ ಪತ್ನಿಯ ದಾಖಲೆ ಮೇಲೆ ವೈಟ್ನರ್ ಹಾಕಿರುವ ಪ್ರಕರಣದಲ್ಲೂ ಇವರ ಹೆಸರು ಕೇಳಿ ಬಂದಿದೆ.

  • ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ 80 ಕೋಟಿ ಮೌಲ್ಯದ ಜಾಗ ವಶ

    ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ 80 ಕೋಟಿ ಮೌಲ್ಯದ ಜಾಗ ವಶ

    ಮೈಸೂರು: ನಗರದಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ನಿವೇಶನ ಕಬಳಿಸಿರುವುದು, ಒತ್ತುವರಿ ಮಾಡಿಕೊಂಡಿರುವ ನಿವೇಶನಗಳನ್ನು ಪತ್ತೆ ಮಾಡಿ ತನ್ನ ಸುಪರ್ದಿಗೆ ಪಡೆಯುತ್ತಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ 80 ಕೋಟಿ ರೂ. ಬೆಲೆ ಬಾಳುವ ನಿವೇಶನವನ್ನು ಸ್ವಾಧೀನಕ್ಕೆ ಪಡೆದುಕೊಳ್ಳುವಲ್ಲಿ ಸಫಲವಾಗಿದೆ.

    ಮೈಸೂರು ತಾಲ್ಲೂಕಿನ ಕಸಬಾ ಹೋಬಳಿ ಹಿನಕಲ್ ಗ್ರಾಮದಲ್ಲಿ ಮುಡಾ ಸ್ವಾಧೀನಪಡಿಸಿಕೊಂಡು ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿದ್ದರೂ ವ್ಯಕ್ತಿಯೊಬ್ಬ ಭೂಮಿ ತಮ್ಮದೆಂದು ಹೇಳುತ್ತಿದ್ದ ಜಾಗವನ್ನು ಕಾರ್ಯಾಚರಣೆ ಮೂಲಕ ಸುಪರ್ದಿಗೆ ಪಡೆಯಲಾಗಿದೆ.

    ಕಸಬಾ ಹೋಬಳಿ ಹಿನಕಲ್ ಗ್ರಾಮದ ಸರ್ವೆ ನಂ.331/4 ಮತ್ತು 331/5ರಲ್ಲಿ 8 ಎಕರೆ 31 ಗುಂಟೆ ಜಮೀನನ್ನು ಸ್ವಾಧೀನಪಡಿಸಿಕೊಂಡು ಮುಡಾ ಪರಿಹಾರವನ್ನು ನೀಡಿತ್ತು. ನಿಯಮಾನುಸಾರ ಸ್ವಾಧೀನ ಪ್ರಕ್ರಿಯೆಗಳು ಮುಗಿದು ಮುಡಾ ವ್ಯಾಪ್ತಿಗೆ ಜಮೀನು ಸೇರಿತ್ತು. ಆದರೆ, ಭೂ ಮಾಲೀಕರು ಭೂಸ್ವಾಧೀನ ಪ್ರಕ್ರಿಯೆ ನಂತರ ಭೂಮಿ ಬಿಟ್ಟು ಕೊಡುವ ಬದಲಿಗೆ ನ್ಯಾಯಾಲಯದ ಮೊರೆ ಹೋಗಿದ್ದರು. ಇದನ್ನೂ ಓದಿ: ಎಚ್‍ಡಿಡಿ ಫೋಟೋ ತೆಗೆದಿದ್ದು ಯಾಕೆ – ಹಾಸನದಲ್ಲಿ ಜನಪ್ರತಿನಿಧಿಗಳ ಮಧ್ಯೆ ಗಲಾಟೆ

    ನ್ಯಾಯಾಲಯವು ಭೂಸ್ವಾಧೀನ ಪ್ರಕ್ರಿಯ ಕಾರ್ಯ ಮುಗಿದ ಮೇಲೆ ತಾವು ಯಾವುದೇ ನಿರ್ದೇಶನ ನೀಡಲು ಬರುವುದಿಲ್ಲವೆಂದು ಹೇಳಿ ಆದೇಶ ನೀಡಿತ್ತು. ಹೀಗಿದ್ದರೂ ಭೂ ಮಾಲೀಕರು ಜಾಗ ತೆರವು ಮಾಡಿರಲಿಲ್ಲ. ಅಧಿಕಾರಿಗಳು ಕೂಡ ದಾಖಲೆಗಳನ್ನು ಪರಿಶೀಲಿಸದಿರುವ ಜೊತೆಗೆ ನ್ಯಾಯಾಲಯದ ಆದೇಶವನ್ನು ಪರಿಗಣಿಸದೆ ಕುಳಿತಿದ್ದರು. ಆದರೆ, ಒಂದು ವರ್ಷದಿಂದ ಮುಡಾ ಆಸ್ತಿಯನ್ನು ಗುರುತು ಮಾಡಿ ಕೈಬಿಟ್ಟು ಹೋಗಿರುವುದನ್ನು ವಾಪಸ್ ಪಡೆಯಲು ಮುಂದಾಗಿರುವ ಆಯುಕ್ತ ಡಾ.ಡಿ.ಬಿ.ನಟೇಶ್ ಅವರು, ಕಳೆದ ಮೂರು ತಿಂಗಳಿನಿಂದ ಸರ್ವೆ ನಂ 331/4, 331/5ರ ಕಡತಗಳನ್ನು ಸಂಪೂರ್ಣವಾಗಿ ಪರಿಶೀಲಿಸಿದಲ್ಲದೆ, ನ್ಯಾಯಾಲಯ ನೀಡಿದ್ದ ಆದೇಶದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದರು. ಇದನ್ನೂ ಓದಿ: 1,250 ಕೋಟಿ ರೂ. ಜೊತೆ ಘನಿ ಪರಾರಿ – ಈಗ ಯುಎಇಯಲ್ಲಿ ಆಶ್ರಯ

    ದಾಖಲೆಗಳು ಮೂಡಾ ಪರವಾಗಿ ಇದ್ದ ಕಾರಣ ಅಕ್ರಮ ತೆರವು ಮಾಡಲಾಗಿದೆ. ಈ ಜಾಗದ ಮಾರುಕಟ್ಟೆ ದರವು ಚದರ ಮೀಟರ್‍ಗೆ 5 ಸಾವಿರ ರೂ. ಇದ್ದು, 8.31 ಎಕರೆಗೆ ಅಂದಾಜು 80 ಕೋಟಿ ರೂ. ಮೌಲ್ಯ ಹೊಂದಿದೆ. ನಿವೇಶನವನ್ನು ಜೆಸಿಬಿ ಯಂತ್ರಗಳಿಂದ ಶುಚಿಗೊಳಿಸಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಸ್ತಿಯೆಂದು ಸಾರ್ವಜನಿಕ ಸೂಚನಾ ನಾಮಫಲಕ ಹಾಕುವ ಜತೆಗೆ ಅತಿಕ್ರಮ ಪ್ರವೇಶ ಮಾಡಿದರೆ ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಎಚ್ಚರಿಕೆ ನೀಡಲಾಗಿದೆ.