Tag: ಡಿಸಿ ಜೆ.ಮಂಜುನಾಥ್

  • ಪ್ರತಿ ತಾಲೂಕಿನಲ್ಲಿ ಮುಜರಾಯಿ ಅರ್ಚಕರಿಗೆ ಪಡಿತರ ವಿತರಣೆ: ಜೆ. ಮಂಜುನಾಥ್

    ಪ್ರತಿ ತಾಲೂಕಿನಲ್ಲಿ ಮುಜರಾಯಿ ಅರ್ಚಕರಿಗೆ ಪಡಿತರ ವಿತರಣೆ: ಜೆ. ಮಂಜುನಾಥ್

    ಬೆಂಗಳೂರು: ಕೋವಿಡ್ ಲಾಕ್‍ಡೌನ್ ನಿರ್ಬಂಧಗಳಿಂದಾಗಿ ಮುಜರಾಯಿ ಇಲಾಖೆ ಸೇರಿದ ದೇವಾಲಯಗಳಿಗೆ ಪೂಜಾ ಕೈಂಕರ್ಯಗಳನ್ನು ನಡೆಸುತ್ತಿದ್ದ ಅರ್ಚಕರ ಕುಟುಂಬಗಳು ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ಆದ್ದರಿಂದ ಜಿಲ್ಲಾಡಳಿತದಿಂದ ಪ್ರತಿ ತಾಲೂಕಿನಲ್ಲಿ ಅರ್ಚಕ ಕುಟುಂಬದವರಿಗೆ ಆಹಾರ ಧಾನ್ಯಗಳ ಪಡಿತರ ಕಿಟ್ ವಿತರಣೆ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳಾದ ಜೆ.ಮಂಜುನಾಥ್ ತಿಳಿಸಿದರು

    ಬೆಂಗಳೂರು ನಗರದ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿ ಇಂದು ಕೋವಿಡ್ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟದಲ್ಲಿರುವ ಅರ್ಚಕರ ಕುಟುಂಬಗಳಿಗೆ ಜಿಲ್ಲಾಡಳಿತದ ವತಿಯಿಂದ ಪಡಿತರ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು ಅರ್ಚಕರನ್ನು ಉದ್ದೇಶಿಸಿ ಮಾತನಾಡಿದರು.

    ಮುಜರಾಯಿ ಇಲಾಖೆಗೆ ಸೇರಿದ 82 ಮಂದಿ ಅರ್ಚಕರಿಗೆ ಪಡಿತರ ಕಿಟ್ ಗಳನ್ನು ಜಿಲ್ಲಾಧಿಕಾರಿಗಳು ವಿತರಿಸಿದರು. ಕೊರೊನಾ ಸಾಂಕ್ರಾಮಿಕ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ತಮ್ಮ ಮನೆಯಲ್ಲೇ ಇದ್ದು ಸರ್ಕಾರದ ಮಾರ್ಗಸೂಚಿಯನ್ನು ಪಾಲಿಸುವುದರ ಮೂಲಕ ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕೆಂದು ಅವರು ಮನವಿ ಮಾಡಿದರು.

    ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ರಂಗನಾಥ್, ತಹಶೀಲ್ದಾರ್ ನರಸಿಂಹಮೂರ್ತಿ, ಉಪ ತಹಶೀಲ್ದಾರ್ ಆದ ಅಶೋಕ್, ನಿರೀಕ್ಷಕರಾದ ಬಾಲಮುರಳಿಕೃಷ್ಣ, ಆಡಳಿತಾಧಿಕಾರಿ ಸೇರಿದಂತೆ ಮತ್ತಿತರು ಪಾಲ್ಗೊಂಡಿದ್ದರು.

  • ಬೆಂಗಳೂರಿನಲ್ಲಿ 36.50 ಕೋಟಿ ಮೌಲ್ಯದ ಒಟ್ಟು 20.08 ಎಕರೆ ಒತ್ತುವರಿ ಭೂಮಿ ತೆರವು: ಜೆ.ಮಂಜುನಾಥ್

    ಬೆಂಗಳೂರಿನಲ್ಲಿ 36.50 ಕೋಟಿ ಮೌಲ್ಯದ ಒಟ್ಟು 20.08 ಎಕರೆ ಒತ್ತುವರಿ ಭೂಮಿ ತೆರವು: ಜೆ.ಮಂಜುನಾಥ್

    ಬೆಂಗಳೂರು: ಜಿಲ್ಲೆಯಲ್ಲಿ ಇಂದು ಏಕಕಾಲಕ್ಕೆ ನಾಲ್ಕೂ ತಾಲೂಕುಗಳಲ್ಲಿ ಕೈಗೊಳ್ಳಲಾದ ತೆರವು ಕಾರ್ಯಾಚರಣೆಯಲ್ಲಿ, ಅಕ್ರಮವಾಗಿ ಒತ್ತುವರಿಯಾದ ಒಟ್ಟು ರೂ. 36.50 ಕೋಟಿ ಮೌಲ್ಯದ ಸರ್ಕಾರಿ ಕೆರೆ, ಗುಂಡುತೋಪು, ಗೋಮಾಳ ಜಮೀನುಗಳ ಒಟ್ಟು 20.08 ಎಕರೆ ಪ್ರದೇಶವನ್ನು ತೆರವುಗೊಳಿಸಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಜೆ. ಮಂಜುನಾಥ್ ತಿಳಿಸಿದ್ದಾರೆ.

    ಸರ್ಕಾರಿ ಜಮೀನನ್ನು ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡಿರುವುದನ್ನು ತೆರವು ಕಾರ್ಯಾಚರಣೆ ನಡೆಸಿ, ಜಿಲ್ಲೆಯ ವಿಭಾಗಾಧಿಕಾರಿಗಳು, ಬಿ.ಎಂ.ಟಿ.ಎಫ್. ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಸಂಬಂಧಪಟ್ಟ ತಾಲೂಕು ತಹಶೀಲ್ದಾರ್, ರಾಜಸ್ವ ನಿರೀಕ್ಷಕರು ಹಾಗೂ ಅವರ ಸಿಬ್ಬಂದಿ ವರ್ಗದವರ ಸಹಯೋಗದಿಂದಿಗೆ ತೆರವುಗೊಳಿಸಿ ಜಮೀನನ್ನು ಸರ್ಕಾರದ ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

    ಜಿಲ್ಲೆಯಲ್ಲಿ ಸರ್ಕಾರಿ ಜಮೀನುಗಳ ಒತ್ತುವರಿ ತೆರವುಗೊಳಿಸುವ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿದ್ದು, ಅದರಂತೆ ಬೆಂಗಳೂರು ಉತ್ತರ ತಾಲೂಕು, ದಾಸನಪುರ ಹೋಬಳಿ, ಕುದುರೆಗೆರೆ ಗ್ರಾಮದ 30-31 ಎ/ಗುಂಟೆ ವಿಸ್ತೀರ್ಣದ ಸರ್ಕಾರಿ ಕೆರೆ ಸರ್ವೆ ನಂ. 100 ರಲ್ಲಿ ಒಟ್ಟು 0-30 ಎಕರೆ ಜಮೀನು ಒತ್ತುವರಿಯಾಗಿದ್ದು, ಅದನ್ನು ಬೆಂಗಳೂರು ಉತ್ತರ ತಾಲೂಕು ತಹಶೀಲ್ದಾರ್ ಬಾಲಕೃಷ್ಣ, ಮತ್ತು ಅವರ ಸಿಬ್ಬಂದಿ ಸಹಕಾರದಿಂದ ಇಂದು ತೆರವುಗೊಳಿಸಲಾಗಿದೆ ಎಂದು ತಿಳಿಸಿದ ಜಿಲ್ಲಾಧಿಕಾರಿಗಳು ದಾಸನಪುರ ಹೋಬಳಿ, ಕುದುರೆಗೆರೆ ಗ್ರಾಮದ ಸರ್ಕಾರಿ ಗುಂಡುತೋಪು ಸರ್ವೆ ನಂ. 81 ರಲ್ಲಿ ಒಟ್ಟು 02-30 ಎ/ಗುಂಟೆ ವಿಸ್ತೀರ್ಣದ ಪೈಕಿ 02-30 ಎಕರೆ ಜಮೀನು ಒತ್ತುವರಿಯಾಗಿದ್ದು, ಅಂದಾಜು ರೂ. 06.50 ಕೋಟಿ ಮೌಲ್ಯದ ಸರ್ಕಾರಿ ಜಮೀನನ್ನು ತೆರವುಗೊಳಿಸಲಾಯಿತು ಎಂದು ತಿಳಿಸಿದರು.

    ಯಲಹಂಕ ತಾಲೂಕು, ಹೆಸರಘಟ್ಟ ಹೋಬಳಿ, ಕಾಳತಿಮ್ಮನಹಳ್ಳಿ ಗ್ರಾಮದ ಸರ್ಕಾರಿ ಕೆರೆ ಸರ್ವೆ ನಂ. 25 ರಲ್ಲಿ ಒಟ್ಟು ವಿಸ್ತೀರ್ಣ 18-21 ಎ/ಗುಂಟೆ ಪೈಕಿ 4-00 ಎಕರೆ ಜಮೀನು ಒತ್ತುವರಿಯಾಗಿದ್ದು, ಸದರಿ ಜಮೀನನ್ನು ಒತ್ತುವರಿಯಿಂದ ತೆರವುಗೊಳಿಸಲಾಗಿದೆ ಎಂದು ಮಾಹಿತಿ ನೀಡಿದ ಅವರು ಹೆಸರಘಟ್ಟ ಹೋಬಳಿ, ಮೈಲಪ್ಪನಹಳ್ಳಿ ಗ್ರಾಮದ ಸರ್ಕಾರಿ ಕರೆ ಸರ್ವೆ ನಂ. 91 ರಲ್ಲಿ ಒಟ್ಟು ವಿಸ್ತೀರ್ಣ 11-26 ಎ/ಗುಂಟೆ ಪೈಕಿ 2-11 ಎಕರೆ ಜಮೀನು ಒತ್ತುವರಿಯಾಗಿದ್ದು ಸದರಿ ಜಮೀನನ್ನು ಒತ್ತುವರಿಯಿಂದ ತೆರವುಗೊಳಿಸಲಾಗಿದೆ ಎಂದರು.

    ಹೆಸರಘಟ್ಟ ಹೋಬಳಿ, ಮಾದಪ್ಪನಹಲ್ಳಿ ಗ್ರಾಮದ ಸರ್ಕಾರಿ ಕರೆ ಸರ್ವೆ ನಂ. 73 ರಲ್ಲಿ ಒಟ್ಟು ವಿಸ್ತೀರ್ಣ 2-02 ಎ/ಗುಂಟೆ ಪೈಕಿ 0-20 ಎಕರೆ ಜಮೀನು ಒತ್ತುವರಿಯಾಗಿದ್ದು ಅಂದಾಜು 09-00 ಕೋಟಿ ಮೌಲ್ಯದ ಸರ್ಕಾರಿ ಜಮೀನನ್ನು ತಹಶೀಲ್ದಾರ್ ನರಸಿಂಹಮೂರ್ತಿ ಹಾಗೂ ಅವರ ಸಿಬ್ಬಂದಿಯೊಂದಿಗೆ ತೆರವುಗೊಳಿಸಲಾಯಿತು.

    ಅದರಂತೆ ಬೆಂಗಳೂರು ದಕ್ಷಿಣ ತಾಲ್ಲೂಕು, ಕೆಂಗೇರಿ ಹೋಬಳಿ ಅಗರ ಗ್ರಾಮದ ಸರ್ಕಾರಿ ಗೋಮಾಳ ಸರ್ವೆ ನಂ. 31 ರಲ್ಲಿ ಒಟ್ಟು ವಿಸ್ತೀರ್ಣ 14-34 ಎ/ಗುಂಟೆ ಪೈಕಿ 1-00 ಎಕರೆ ಜಮೀನು ಒತ್ತುವರಿಯಾಗಿದ್ದು, ಸದರಿ ಜಮೀನನ್ನು ಒತ್ತುವರಿಯಿಂದ ತೆರವುಗೊಳಿಸಲಾಗಿರುತ್ತದೆ. ಅಗರ ಗ್ರಾಮದ ಸರ್ಕಾರಿ ಗೋಮಾಳ ಸರ್ವೆ ನಂ. 73 ರಲ್ಲಿ ಒಟ್ಟು ವಿಸ್ತೀರ್ಣ 91-28 ಎ/ಗುಂಟೆ ಪೈಕಿ 2-00 ಎಕರೆ ಜಮೀನು ಒತ್ತುವರಿಯಾಗಿದ್ದು ತೆರವುಗೊಳಿಸಲಾಯಿತು. ಉತ್ತರಹಳ್ಳಿಯ ಕಗ್ಗಲೀಪುರ ಕೆರೆಯ 34.16 ಎ/ಗುಂಟೆ ಪ್ರದೇಶದ ಪೈಕಿ 1.08 ಎಕರೆ ಜಮೀನು ಒತ್ತುವರಿಯಾಗಿದ್ದು, ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಬೆಂಗಳೂರು ದಕ್ಷಿಣ ಉಪವಿಭಾಗಾಧಿಕಾರಿಗಳಾದ ಡಾ|| ಎಂ.ಜಿ.ಶಿವಣ್ಣ, ತಹಶೀಲ್ದಾರ್ ಶಿವಪ್ಪ ಹೆಚ್. ಲಮಾಣಿ , ಹಾಗೂ ಅವರ ಸಿಬ್ಬಂದಿಯೊಡನೆ ಅಂದಾಜು 06-00 ಕೋಟಿ ಮೌಲ್ಯದ ಸರ್ಕಾರಿ ಜಮೀನನ್ನು ತೆರವುಗೊಳಿಸಲಾಗಿದೆ.

    ಬೆಂಗಳೂರು ಪೂರ್ವ ತಾಲೂಕು, ಬಿದರಹಳ್ಳಿ ಹೋಬಳಿ, ಬೊಮ್ಮೇನಹಳ್ಳಿ ಗ್ರಾಮದ ಸರ್ಕಾರಿ ಗೋಮಾಳ ಸರ್ವೆ ನಂ. 96 ರಲ್ಲಿ ಒಟ್ಟು ವಿಸ್ತೀರ್ಣ 04-00 ಎ/ಗುಂಟೆ ಪೈಕಿ 04-00 ಎಕರೆ ಜಮೀನು ಒತ್ತುವರಿಯಾಗಿದ್ದು, ಸದರಿ ಜಮೀನನ್ನು ಒತ್ತುವರಿಯಿಂದ ತೆರವುಗೊಳಿಸಲಾಗಿರುತ್ತದೆ. ವರ್ತೂರು ಹೋಬಳಿ ಮುಳ್ಳೂರು ಗ್ರಾಮದ ಸರ್ಕಾರಿ ಗುಂಡುತೋಪು ಸರ್ವೆ ನಂ. 30 ರಲ್ಲಿ ಒಟ್ಟು ವಿಸ್ತೀರ್ಣ 1-10 ಎ/ಗುಂಟೆ ಪೈಕಿ 0-20 ಗುಂಟೆ ಜಮೀನು ಒತ್ತುವರಿಯಾಗಿದ್ದು ಸದರಿ ಜಮೀನನ್ನು ಒತ್ತುವರಿಯಿಂದ ತೆರವುಗೊಳಿಸಲಾಗಿರುತ್ತದೆ. ವರ್ತೂರು ಹೋಬಳಿ ಮುಳ್ಳೂರು ಗ್ರಾಮದ ಸರ್ಕಾರಿ ಗುಂಡುತೋಪು ಸರ್ವೆ ನಂ. 31 ರಲ್ಲಿ ಒಟ್ಟು ವಿಸ್ತೀರ್ಣ 0-13 ಗುಂಟೆ ಪೈಕಿ 0-02 ಗುಂಟೆ ಜಮೀನು ಒತ್ತುವರಿಯಾಗಿದ್ದು ಸದರಿ ಜಮೀನನ್ನು ಒತ್ತುವರಿಯಿಂದ ತೆರವುಗೊಳಿಸಲಾಗಿರುತ್ತದೆ.

    ವರ್ತೂರು ಹೋಬಳಿ ಗುಂಜೂರು ಗ್ರಾಮದ ಸರ್ಕಾರಿ ಖರಾಬು ಸರ್ವೆ ನಂ. 290 ರಲ್ಲಿ ಒಟ್ಟು ವಿಸ್ತೀರ್ಣ 1-07 ಗುಂಟೆ ಪೈಕಿ 0-07 ಗುಂಟೆ ಜಮೀನು ಒತ್ತುವರಿಯಾಗಿದ್ದು ಅಂದಾಜು 15-00 ಕೋಟಿ ಮೌಲ್ಯದ ಈ ಸರ್ಕಾರಿ ಜಮೀನನ್ನು ತಹಶೀಲ್ದಾರ್, ಅಜಿತ್ ರೈ ಸಾರೋಕೆ ಮತ್ತು ಅವರ ಸಿಬ್ಬಂದಿಯೊಡನೆ ತೆರವುಗೊಳಿಸಲಾಯಿತು ಎಂದು ಅವರು ತಿಳಿಸಿದರು.