Tag: ಡಿಸಿ ಆರ್. ಲತಾ

  • ಯೋಗ ಇರೋರು ಮಾತ್ರ ಯೋಗ ಮಾಡುತ್ತಾರೆ: ಡಿಸಿ ಆರ್ ಲತಾ

    ಯೋಗ ಇರೋರು ಮಾತ್ರ ಯೋಗ ಮಾಡುತ್ತಾರೆ: ಡಿಸಿ ಆರ್ ಲತಾ

    ಚಿಕ್ಕಬಳ್ಳಾಪುರ: ಯೋಗ ಇರೋರು ಮಾತ್ರ ಯೋಗ ಮಾಡುತ್ತಾರೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್.ಲತಾ ಅಭಿಪ್ರಾಯಪಟ್ಟಿದ್ದಾರೆ.

    ಜಿಲ್ಲಾಡಳಿತ ಭವನದ ಸರ್.ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಆಯುಷ್ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಆಜಾದಿ ಕಾ ಅಮೃತ ಮಹೋತ್ಸವ ಮತ್ತು 4ನೇ ರಾಷ್ಟ್ರೀಯ ಪೋಷಣ್ ಮಾಸಾಚರಣೆ ಅಂಗವಾಗಿ ಉದ್ಯೋಗಸ್ಥರಿಗೆ ಯೋಗ ತರಬೇತಿ ಕಾರ್ಯಕ್ರಮವನ್ನು ಆರ್.ಲತಾ ಉದ್ಘಾಟಿಸಿದರು. ಇದನ್ನೂ ಓದಿ: ಫ್ಲೈಓವರ್ ಮೇಲಿಂದ ಬಿದ್ದು ಅಪಘಾತವಾದ ಸ್ಥಳದಲ್ಲೇ ಮತ್ತೊಂದು ಅಪಘಾತ

    ಈ ವೇಳೆ ವೇದಿಕೆ ಮೇಲೆ ಮಾತನಾಡಿದ ಅವರು, ಈವರೆಗೆ ಯಾರು ಯೋಗ ಮಾಡುತ್ತಿಲ್ಲವೋ ಅಥವಾ ಯೋಗಾಭ್ಯಾಸ ಮಾಡಲು ಆರಂಭಿಸಿಲ್ಲವೊ ಅವರು ಜೀವನದಲ್ಲಿ ಏನೋ ಒಂದನ್ನು ಕಳೆದುಕೊಂಡಿದ್ದಾರೆ ಎಂಬುದು ನನ್ನ ಭಾವನೆ. ಯೋಗಾಭ್ಯಾಸದಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಸುತ್ತದೆ. ಎಷ್ಟೇ ಕಾರ್ಯ ಒತ್ತಡಗಳನ್ನು ನಿಭಾಯಿಸುವ ಶಕ್ತಿಯನ್ನು ಯೋಗ ಮಾತ್ರ ನೀಡಬಲ್ಲದು. ಯೋಗ ಮಾಡಿದರೆ ದಿನ ಪೂರ್ತಿ ಲವಲವಿಕೆಯಿಂದ ಇರಲು ಸಾಧ್ಯವಾಗುತ್ತದೆ ಹಾಗೂ ಅಂದಿನ ಕಾರ್ಯಕ್ಷಮತೆಯನ್ನು ಇಮ್ಮಡಿಗೊಳಿಸುತ್ತೆ ಎಂದರು.

    108 ಸೂರ್ಯ ನಮಸ್ಕಾರ ಮಾಡುತ್ತೇನೆ!

    ಯೋಗ ಇರೋರು ಮಾತ್ರ ಯೋಗ ಮಾಡುತ್ತಾರೆ. ಯೋಗ ಮಾಡಿದರೆ ರೋಗ ಬರುವುದಿಲ್ಲ ಎಂಬ ನಾಣ್ಣಡಿ ಅಕ್ಷರಶಃ ಸತ್ಯ ಇಷ್ಟೆಲ್ಲಾ ಮಹತ್ವಗಳು ನನಗೆ ತಿಳಿದಿರುವುದು ನನ್ನ ಯೋಗಾಭ್ಯಾಸದ ಸ್ವಂತ ಅನುಭವದಿಂದ ಎಂದು ಹೇಳಲು ಇಚ್ಚಿಸುತ್ತೇನೆ. ಕಳೆದ 5 ವರ್ಷಗಳಿಂದ ಪ್ರತಿ ದಿನ ಮುಂಜಾನೆ ನಾನು ಸಹ ಎರಡು ತಾಸು ಯೋಗಾಭ್ಯಾಸ ಮಾಡುತ್ತೇನೆ. 108 ಸೂರ್ಯ ನಮಸ್ಕಾರ ಆಸನಗಳನ್ನು ಹಾಗೂ ಪ್ರಾಣಾಯಾಮವನ್ನು ಮಾಡುತ್ತೇನೆ. ಪ್ರತಿಯೊಬ್ಬರೂ ಒತ್ತಡದಿಂದ ಪಾರಾಗಲು ದಿನನಿತ್ಯ ಯೋಗಾಭ್ಯಾಸ ಮಾಡಿ. ಯಾರು ಇವರೆಗೆ ಯೋಗ ಆರಂಭಿಸಿಲ್ಲವೋ ಅಂತಹವರು ಯೋಗವನ್ನು ಕಲಿತು ಅಭ್ಯಾಸದಲ್ಲಿ ತೊಡಗಿಸಿಕೊಳ್ಳುವಂತೆ ನೆರೆದಿದ್ದ ಉದ್ಯೋಗಸ್ಥ ಸರ್ಕಾರಿ ನೌಕರರಿಗೆ ಕರೆ ನೀಡಿದರು. ಇದನ್ನೂ ಓದಿ: ಅಂಗಾಂಗಗಳನ್ನು ದಾನ ಮಾಡಿ – ಡೆತ್‍ನೋಟ್ ಬರೆದು ಉಡುಪಿಯ ಬಿಜೆಪಿ ನಾಯಕಿ ಆತ್ಮಹತ್ಯೆ

    ಸಂಭಾವ್ಯ ಕೋವಿಡ್ ನ 3ನೇ ಅಲೆ ಬರುತ್ತದೋ ಇಲ್ಲವೋ ಗೊತ್ತಿಲ್ಲ ಆದರೂ ಕೂಡ ಜಿಲ್ಲೆಯಲ್ಲಿ ಅಪೌಷ್ಟಿಕತೆಯನ್ನು ನಿವಾರಿಸುವ ಕಾರ್ಯಕ್ರಮಗಳನ್ನು ಹೆಚ್ಚಾಗಿ ಅನುಷ್ಠಾನ ಗೊಳಿಸಲಾಗುತ್ತಿದೆ. ಜಿಲ್ಲೆಯಲ್ಲಿ ಸಾಮಾನ್ಯ ಅಪೌಷ್ಟಿಕತೆಯಿಂದ 5,200 ಮತ್ತು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ 87 ಮಕ್ಕಳಿದ್ದಾರೆ. ಈ ಮಕ್ಕಳಿಗೆ ಪೌಷ್ಟಿಕ ಆಹಾರಗಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ವಿತರಿಸಲಾಗುತ್ತಿದೆ. ಇಂತಹ ಮಕ್ಕಳ ಮನೆಗೆ ಇಲಾಖೆಯಿಂದ ಪೌಷ್ಟಿಕ ಆಹಾರ ಪೂರೈಕೆ ಆಗುತ್ತಿದ್ದೆಯೇ ಇಲ್ಲವೇ ಎಂಬುದನ್ನು ಶಿಶು ಅಭಿವೃದ್ಧಿ ಅಧಿಕಾರಿಗಳು ಪರಿಶೀಲಿಸಬೇಕು. ಮಕ್ಕಳನ್ನು ಬಲಪಡಿಸುವ ಮತ್ತು ಕೋವಿಡ್ ನಿಂದ ಬಾಧಿತರಾಗದಂತೆ ತಡೆಗಟ್ಟುವ ಕೆಲಸವನ್ನು ಸಮರ್ಪಕವಾಗಿ ನಿರ್ವಹಿಸಬೇಕೆಂದರು.

    ಪೌಷ್ಠಿಕ ಪೌಡರ್ ವಿತರಿಸಲಾಗಿದೆ!

    ಸತ್ಯಸಾಯಿ ಟ್ರಸ್ಟ್ ಇವರ ಸಹಯೋಗದಲ್ಲಿ ಸಾಯಿ ಶೂರ್ ಪೌಷ್ಠಿಕ ಪೌಡರ್ ಅನ್ನು ಜಿಲ್ಲೆಯಾದ್ಯಂತ ವಿತರಿಸಲಾಗಿದೆ. ಶಿಶು ಮತ್ತು ಚಿಕ್ಕ ಮಕ್ಕಳ ಆಹಾರ ಪದ್ಧತಿಗಳ ಹಾಗೂ ಎದೆ ಹಾಲಿನ ಮಹತ್ವದ ಕುರಿತು ಜಾಗೃತಿ ಮೂಡಿಸುವ ಕರಪತ್ರಗಳನ್ನು ಬಿಡುಗಡೆ ಮಾಡಿದರು. ಇದನ್ನೂ ಓದಿ: ಅಮ್ಮ ನೀವು ಸೂಪರ್ ವುಮೆನ್ – ಹಾಡಿ ಹೊಗಳಿದ ರಾಧಿಕಾ ಪಂಡಿತ್

    ಮಹಿಳೆಯರು ತಮ್ಮ ಕುಟುಂಬ ಸದಸ್ಯರ ಆರೋಗ್ಯದ ಕುರಿತು ಕಾಳಜಿ ವಹಿಸುತ್ತಾರೆ. ಆದರೆ ಸ್ವಂತ ಆರೋಗ್ಯವನ್ನು ನಿರ್ಲಕ್ಷಿಸುತ್ತಾರೆ. ಯಾವಾಗಲೂ ಮನೆ ಕೆಲಸದಲ್ಲಿಯೇ ತಲ್ಲೀನರಾಗುತ್ತಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಮನೆಯಲ್ಲಿಯೇ ಸಿದ್ಧಪಡಿಸುವ ಆಹಾರವನ್ನು ಸಯಮಕ್ಕೆ ಸರಿಯಾಗಿ ಸೇವಿಸಬೇಕು. ಪೌಷ್ಟಿಕಾಂಶವುಳ್ಳ ಆಹಾರವನ್ನು ಸೇವಿಸಬೇಕು. ಮಕ್ಕಳಲ್ಲಿ, ಗರ್ಭಣಿಯರು ಮತ್ತು ಬಾಣಂತಿಯರಲ್ಲಿ ಅಪೌಷ್ಟಿಕತೆಯನ್ನು ಹೋಗಲಾಡಿಸಲು ಒಂದು ತಿಂಗಳ ಕಾಲ ಪೋಷಣ್ ಮಾಸಾಚರಣೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಆಯುಷ್ ಇಲಾಖೆಯ ಮುಖಾಂತರ ಹಮ್ಮಿಕೊಂಡಿರುವುದನ್ನು ಅರ್ಥ ಪೂರ್ಣವಾಗಿ ಆಚರಿಸಬೇಕು.

    ಈ ಮಾಸಾಚರಣೆಯ ಸದುಪಯೋಗವನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಬೇಕೆಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು. ಈ ವೇಳೆ ಯೋಗ ಗುರುಗಳಾದ ಗೋವಿಂದರಾಜು ಅವರು ನೆರೆದಿದ್ದ ಸರ್ಕಾರಿ ಅಧಿಕಾರಿ, ಸಿಬ್ಬಂದಿಗಳಿಗೆ ಯೋಗದ ವಿವಿಧ ಆಸನಗಳನ್ನು ಮಾಡಿಸಿ ಯೋಗದ ಉಪಯೋಗಗಳನ್ನು ತಿಳಿಸಿಕೊಟ್ಟರು. ಇದನ್ನೂ ಓದಿ: ಪ್ರಿಯತಮೆ ಜೊತೆ ಸೇರಿ 2 ತಿಂಗಳಲ್ಲಿ 21 ಮನೆಗೆ ಕನ್ನ

    ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಇಲಾಖೆಯ ಉಪನಿರ್ದೇಶಕರಾದ ನಟರಾಜು, ಜಿಲ್ಲಾ ಆಯುಷ್ ಅಧಿಕಾರಿಗಳಾದ ಡಾ.ತಬೀಬಾ ಬಾನು ಹಾಗೂ ವಿವಿಧ ಇಲಾಖೆಗಳ ಅಧಿಕಾರಿ ಮತ್ತು ಸಿಬ್ಬಂದಿ ಭಾಗಿಯಾಗಿದ್ದರು.

  • ಗ್ರಾಮದಲ್ಲಿ ಕೊರೊನಾ ಸ್ಫೋಟ- ಗ್ರಾಮಸ್ಥರಿಗೆ ಧೈರ್ಯ ತುಂಬಿದ ಡಿಸಿ ಆರ್.ಲತಾ

    ಗ್ರಾಮದಲ್ಲಿ ಕೊರೊನಾ ಸ್ಫೋಟ- ಗ್ರಾಮಸ್ಥರಿಗೆ ಧೈರ್ಯ ತುಂಬಿದ ಡಿಸಿ ಆರ್.ಲತಾ

    – ಮಂಚನಬಲೆ ಗ್ರಾಮದಲ್ಲಿ ಕೊರೊನಾ ಸ್ಫೋಟ

    ಚಿಕ್ಕಬಳ್ಳಾಪುರ: ತಾಲೂಕಿನ ಮಂಚನಬಲೆ ಗ್ರಾಮದಲ್ಲಿ ಕೊರೊನಾ ಸ್ಫೋಟವಾಗಿದೆ. ಗ್ರಾಮಕ್ಕೆ ಜಿಲ್ಲಾಧಿಕಾರಿ ಆರ್ ಲತಾ ಭೇಟಿ ಮಾಡಿ ಆತಂಕಕ್ಕೊಳಗಾಗಿದ್ದ ಗ್ರಾಮಸ್ಥರಿಗೆ ಧೈರ್ಯ ತುಂಬುವ ಕೆಲಸ ಮಾಡಿದರು.

    ಮಂಚನಬಲೆ ಗ್ರಾಮ ಪಂಚಾಯತಿ ಅತಿ ಹೆಚ್ಚು ಕೊರೊನಾ ಪ್ರಕರಣಗಳು ದಾಖಲಾಗಿವೆ. ಸದ್ಯ 28 ಸಕ್ರಿಯ ಪ್ರಕರಣಗಳಿದ್ದು, ಅದರಲ್ಲಿ 14 ಮಂದಿ ಮಂಚನಬಲೆ ಗ್ರಾಮದವರಾಗಿದ್ದಾರೆ. ಈ ಕೊರೊನಾದಿಂದ 3 ಮಂದಿ ಸಹ ಮೃತಪಟ್ಟಿದ್ದಾರೆ. ಆದರೆ ಜನ ಹೇಳುವ ಪ್ರಕಾರ ಕಳೆದ 10 ದಿನಗಳಲ್ಲಿ 10 ಮಂದಿ ಕೋರೋನಾ ಸೇರಿ ವಿವಿಧ ಶ್ವಾಸಕೋಶದ ಸಮಸ್ಯೆಗಳಿಂದ ಮೃತಪಟ್ಟಿದ್ದಾರೆ. ಇದರಿಂದ ಗ್ರಾಮದ ಜನ ಸಾಕಷ್ಟು ಆತಂಕಗೊಂಡಿದ್ದರು.

    ಈ ಮಧ್ಯೆ ಹೋಂ ಐಸೋಲೇಷನ್ ನಲ್ಲಿದ್ದ ಕೊರೊನಾ ಸೋಂಕಿತನೊರ್ವ ಮನೆಯಲ್ಲಿರದೆ ಒಡಾಡುತ್ತಿದ್ದನು. ಮತ್ತೊಂದೆಡೆ ವ್ಯಾಕ್ಸಿನೇಷನ್ ಪಡೆಯಲು ಗ್ರಾಮದ ಕೆಲ ಜನ ಹಿಂಜರಿತಿದ್ರು. ಈ ಎಲ್ಲಾ ಸಮಸ್ಯೆಗಳನ್ನ ತಿಳಿದ ನಿಮ್ಮ ಪಬ್ಲಿಕ್ ಟಿವಿ ವರದಿ ಸಹ ಬಿತ್ತರ ಮಾಡಿತ್ತು. ಇದಾದ ಬೆನ್ನಲ್ಲೇ ಡಿಸಿ ಆರ್.ಲತಾ ಹಾಗೂ ಡಿಎಚ್‍ಓ ಇಂದಿರಾ ಕಬಾಡೆ, ಅಧಿಕಾರಿಗಳೊಂದಿಗೆ ಗ್ರಾಮಕ್ಕೆ ಭೇಟಿ ನೀಡಿ ಟಾಸ್ಕ್ ಪೋರ್ಸ್ ಸಭೆ ನಡೆಸಿದರು.

    ಕೋವಿಡ್ ಸಂಬಂಧ ತೆಗೆದುಕೊಂಡ ಕ್ರಮಗಳ ಬಗ್ಗೆ ಆಶಾಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರ ಬಳಿ ಮಾಹಿತಿ ಪಡೆದುಕೊಂಡರು. ಗ್ರಾಮಸ್ಥರಿಗೆ ಅಭಯ ತುಂಬಿದ ಡಿ ಸಿ ಆರ್ ಲತಾ, ಕಡ್ಡಾಯವಾಗಿ ಮಾಸ್ಕ್ ಧರಿಸಿ, ದೈಹಿಕ ಅಂತರ ಕಾಯ್ದುಕೊಂಡು ಕೊರೊನಾ ಕಡಿವಾಣಕ್ಕೆ ಜನ ಸಹಕಾರ ನೀಡುವಂತೆ ತಿಳಿಸಿದರು.

  • ಚಿಕ್ಕಬಳ್ಳಾಪುರ ನಗರ ಸಂಪೂರ್ಣ ಸೀಲ್‍ಡೌನ್: ಡಿಸಿ ಆರ್.ಲತಾ

    ಚಿಕ್ಕಬಳ್ಳಾಪುರ ನಗರ ಸಂಪೂರ್ಣ ಸೀಲ್‍ಡೌನ್: ಡಿಸಿ ಆರ್.ಲತಾ

    ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ನಗರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾದ ಹಿನ್ನೆಲೆಯಲ್ಲಿ ಇಂದಿನಿಂದಲೇ ಚಿಕ್ಕಬಳ್ಳಾಪುರ ನಗರವನ್ನು ಸಂಪೂರ್ಣ ಸೀಲ್‍ಡೌನ್ ಮಾಡಲಾಗುತ್ತಿದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದ್ದಾರೆ.

    ಇಂದು ಹೊಸದಾಗಿ ಮೂರು ಕೊರೊನಾ ಕೇಸ್ ದೃಢವಾದ ಹಿನ್ನಲೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನಂತರ ಮಾತನಾಡಿದ ಡಿಸಿ ಆರ್.ಲತಾ, 17 ನೇ ವಾರ್ಡಿನಲ್ಲಿ ಕೊರೊನಾ ಗೆ ಮೃತನಾದ ವೃದ್ಧನ ಕೊನೆಯ ಮಗ ಹಾಗೂ ಎದುರುಗಡೆ ಮನೆಯ ಇಬ್ಬರಿಗೆ ಸೋಂಕು ದೃಢಪಟ್ಟಿದೆ ಎಂದು ಮಾಹಿತಿ ನೀಡಿದರು.

    ಮುನ್ನೆಚ್ಚರಿಕೆ ಕ್ರಮವಾಗಿ ವೃದ್ಧ ಮೃತಪಟ್ಟಾಗ 17ನೇ ವಾರ್ಡು ಸೇರಿದಂತೆ ಅಕ್ಕ ಪಕ್ಕದ ಮೂರ್ನಾಲ್ಕು ವಾರ್ಡುಗಳನ್ನು ಮಾತ್ರ ಸೀಲ್‍ಡೌನ್ ಮಾಡಲಾಗಿತ್ತು. ಈಗ ಸೋಂಕಿತರ ಸಂಖ್ಯೆ ಹೆಚ್ಚಳವಾದ ಹಿನ್ನೆಲೆ ಇಡೀ ಚಿಕ್ಕಬಳ್ಳಾಪುರ ನಗರವನ್ನೇ ಸಂಪೂರ್ಣ ಸೀಲ್‍ಡೌನ್ ಮಾಡಲಾಗುತ್ತಿದೆ. ಆಯಾ ವಾರ್ಡುವಾರು ಸ್ವಯಂಸೇವಕರ ಮೂಲಕ ಅಗತ್ಯ ವಸ್ತುಗಳನ್ನು ಮನೆ ಬಾಗಿಲಿಗೆ ತಲುಪಿಸಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಹೇಳಿದರು.

    ಸದ್ಯ ಚಿಕ್ಕಬಳ್ಳಾಪುರ ನಗರದ ಜನತೆ ಇನ್ನೂ ಮುಂದೆ ಅಗತ್ಯ ವಸ್ತುಗಳ ಖರೀದಿ ನೆಪದಲ್ಲೂ ಹೊರಗೆ ಬರುವಂತಿಲ್ಲ. ಪ್ರಸ್ತುತ ಜಿಲ್ಲೆಯಲ್ಲಿ ಕೊರೊನಾ ಪೀಡಿತರ ಸಂಖ್ಯೆ 16ಕ್ಕೆ ಏರಿದ್ದು, 8 ಮಂದಿ ಗುಣಮುಖರಾಗಿದ್ದಾರೆ. ಜೊತೆಗೆ ಇಬ್ಬರು ಮೃತಪಟ್ಟಿದ್ದಾರೆ. ಉಳಿದ 06 ಮಂದಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂದು ಡಿಸಿ ಮಾಹಿತಿ ನೀಡಿದರು.

  • ದೆಹಲಿಯಿಂದ ಬಂದ 8 ಮಂದಿಯಲ್ಲಿ ಓರ್ವನಿಗೆ ಕೊರೊನಾ ಸೋಂಕು

    ದೆಹಲಿಯಿಂದ ಬಂದ 8 ಮಂದಿಯಲ್ಲಿ ಓರ್ವನಿಗೆ ಕೊರೊನಾ ಸೋಂಕು

    ಚಿಕ್ಕಬಳ್ಳಾಪುರ: ಜಿಲ್ಲೆಯ ಗೌರಿಬಿದನೂರಿನಲ್ಲಿ ಮತ್ತೊಂದು ಹೊಸ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 11ಕ್ಕೆ ಏರಿದೆ. ಅಂದಹಾಗೆ ಈಗಾಗಲೇ ಗೌರಿಬಿದನೂರು ನಗರದ 10 ಮಂದಿಗೆ ಸೋಂಕು ದೃಢವಾಗಿ ಓರ್ವ ವೃದ್ಧೆ ಮೃತಪಟ್ಟಿದ್ದರು.

    ಈಗ ದೆಹಲಿಯಿಂದ ವಾಪಸ್ ಆದ 23 ವರ್ಷದ ಯುವಕನಿಗೆ ಕೊರೊನಾ ಸೋಂಕು ತಗುಲಿದ್ದು ಸೋಂಕಿತರ ಸಂಖ್ಯೆ 11ಕ್ಕೆ ಏರಿದೆ. ಈ ಹೊಸ ಪ್ರಕರಣದಿಂದ ಗೌರಿಬಿದನೂರಿನಲ್ಲಿ ಮತ್ತಷ್ಟು ಆತಂಕ ಹೆಚ್ಚಾಗಿದೆ. ಮಾರ್ಚ್ 6 ರಂದು ದೆಹಲಿಯ ನಿಜಾಮುದ್ದೀನ್ ನಿಂದ ರೈಲಿನ ಮೂಲಕ ಗೌರಿಬಿದನೂರು ಗಡಿಭಾಗ ಆಂಧ್ರದ ಹಿಂದೂಪುರಕ್ಕೆ ಆಗಮಿಸಿ, ಅಲ್ಲಿಂದ ಬಸ್ ಮೂಲಕ ಗೌರಿಬಿದನೂರು ನಗರಕ್ಕೆ ಆಗಮಿಸಿದ್ದಾನೆ.

    ತನ್ನ ಮನೆಗೆ ಬಂದು ತನ್ನ ತಾಯಿ ಜೊತೆ ವಾಸವಾಗಿದ್ದ ಯುವಕನ ಮನೆಗೆ ಈತನ ಅಕ್ಕ-ಬಾವ ಹಾಗೂ ಇಬ್ಬರು ಮಕ್ಕಳ ಸಹ ಬಂದು ಹೋಗಿದ್ದಾರೆ. ಮತ್ತೊಂದೆಡೆ ಈತ ತನ್ನ ಸ್ನೇಹಿತನ ಜೊತೆಗೂಡಿ ಆಂಧ್ರದ ಹಿಂದೂಪುರಕ್ಕೆ ನಾಲ್ಕೈದು ಬಾರಿ ಹೋಗಿ ಬಂದಿದ್ದಾನೆ. ದೆಹಲಿಯ ನಿಜಾಮುದ್ದೀನ್ ಪ್ರಕರಣ ಬಯಲಾದ ನಂತರ ಈತನನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿತ್ತು. ಇಂದು ಈತನ ವರದಿ ಲಭ್ಯವಾಗಿದ್ದು ಪಾಸಿಟಿವ್ ಬಂದಿದೆ.

    ಹೀಗಾಗಿ ಯುವಕನ ತಾಯಿ, ಅಕ್ಕ-ಬಾವ ಹಾಗೂ ಅವರ ಇಬ್ಬರು ಮಕ್ಕಳು ಸೇರಿದಂತೆ ಸ್ನೇಹಿತ ಹಾಗೂ ಸ್ನೇಹಿತನ ತಾಯಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಈ ಯುವಕ ಸೇರಿದಂತೆ 8 ಮಂದಿ ದೆಹಲಿಯ ಜಮಾತ್ ಗೆ ಹೋಗಿ ಬಂದಿದ್ದು, ಇವರಲ್ಲಿ ಈತನಿಗೆ ಬಿಟ್ಟು ಬೇರೆ ಯಾರಿಗೂ ಸೋಂಕು ತಗುಲಿಲ್ಲ. ಹೀಗಾಗಿ ಈತನಿಗೆ ದೆಹಲಿಯಲ್ಲೇ ಸೋಂಕು ತಗಲಿದೆಯಾ ಅಥವಾ ಹಿಂದೂಪುರದಲ್ಲಿ ಸಹ ಸಾಕಷ್ಟು ಪಾಸಿಟಿವ್ ಪ್ರಕರಣಗಳಿದ್ದು ಅಲ್ಲಿ ಏನಾದ್ರೂ ಸೋಂಕು ತಗುಲಿದೆಯಾ ಅನ್ನೋ ಅನುಮಾನ ಜಿಲ್ಲಾಡಳಿತಕ್ಕೆ ಮೂಡಿದೆ.

    ಹೀಗಾಗಿ ಪೇಷೆಂಟ್ ನಂಬರ್ 180ರ ಮತ್ತಷ್ಟು ಟ್ರಾವೆಲ್ ಹಿಸ್ಟರಿ ಕಲೆ ಹಾಕುವಲ್ಲಿ ಪೊಲೀಸರು ನಿರತರಾಗಿದ್ದು, ಅಗತ್ಯ ಮುಂಜಾಗ್ರತಾ ಕ್ರಮಗಳನ್ನ ವಹಿಸಲಾಗುತ್ತಿದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್ ಲತಾ ತಿಳಿಸಿದ್ದಾರೆ.

  • ಚಿಕ್ಕಬಳ್ಳಾಪುರದಲ್ಲಿ ಸೋಂಕಿತರ ಸಂಪರ್ಕದಲ್ಲಿದ್ದ 50 ಮಂದಿಗಿಲ್ಲ ಕೊರೊನಾ

    ಚಿಕ್ಕಬಳ್ಳಾಪುರದಲ್ಲಿ ಸೋಂಕಿತರ ಸಂಪರ್ಕದಲ್ಲಿದ್ದ 50 ಮಂದಿಗಿಲ್ಲ ಕೊರೊನಾ

    ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಕೊರೊನಾ ಸೋಂಕು ತಗುಲಿರುವ ಶಂಕೆಯ ಮೇರೆಗೆ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದ 50 ಮಂದಿಯ ವರದಿಯೂ ಕೊರೊನಾ ನೆಗೆಟಿವ್ ಬಂದಿದೆ ಎಂದು ಜಿಲ್ಲಾಧಿಕಾರಿ ಆರ್. ಲತಾ ಅವರು ತಿಳಿಸಿದ್ದಾರೆ.

    ಜಿಲ್ಲೆಯ ಗೌರಿಬಿದನೂರಿನಲ್ಲಿ 10 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಅವರಲ್ಲಿ ಒರ್ವ 70 ವರ್ಷದ ವೃದ್ಧೆ ಮೃತಪಟ್ಟಿದ್ದರು. ಹೀಗಾಗಿ 10 ಮಂದಿ ಸೊಂಕಿತರಿಂದ ಪ್ರಥಮ ಸಂಪರ್ಕಕ್ಕೆ ಗುರಿಯಾಗಿದ್ದ ಅವರ ಕುಟುಂಬದ ಸದಸ್ಯರಲ್ಲಿ 38 ಮಂದಿಯನ್ನ ಹೈ ರಿಸ್ಕ್ ಕ್ವಾರಂಟೈನ್ ಎಂದು ಗುರುತಿಸಿ ಪರೀಕ್ಷಗೆ ಒಳಪಡಿಸಲಾಗಿತ್ತು. ತದನಂತರ ಈ 28 ಮಂದಿ ಜೊತೆ ಸಂಪರ್ಕಕ್ಕೆ ಒಳಗಾಗಿದ್ದ 12 ಮಂದಿಯನ್ನ ಸಹ ಹಾಸ್ಪಿಟಲ್ ಕ್ವಾರಂಟೈನ್ ಮಾಡಲಾಗಿತ್ತು.

    ಪ್ರಥಮ ಸಂಪರ್ಕಿತರ 38 ಮಂದಿಯ ರಕ್ತ ಮಾದರಿ ಹಾಗೂ ಗಂಟಲು ದ್ರವ ಪರೀಕ್ಷಗೆ ಕಳುಹಿಸಲಾಗಿತ್ತು. ಇಂದು ಈ 38 ಮಂದಿಯ ಕೊರೊನಾ ಪರೀಕ್ಷಾ ವರದಿ ಜಿಲ್ಲಾಢಳಿತದ ಕೈ ಸೇರಿದ್ದು, ಎಲ್ಲರ ವರದಿಯೂ ನೆಗಟಿವ್ ಬಂದಿದೆ. 38 ಮಂದಿಯ ವರದಿ ನೆಗಟಿವ್ ಬಂದಿರೋದ್ರಿಂದ ಅವರ ಸಂಪರ್ಕಕ್ಕೆ ಒಳಗಾಗಿರೋ 12 ಮಂದಿ ಸಹ ಸೇಫ್ ಆಗಿದ್ದಾರೆ. ಹೀಗಾಗಿ ಸದ್ಯ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 10ರಲ್ಲೇ ಇದೆ. ಅದು ಎರಡು ಕುಟುಂಬಗಳ ಸದಸ್ಯರಲ್ಲೇ ಇದ್ದು ಸಮುದಾಯದ ಹಂತಕ್ಕೆ ಹರಡಿಲ್ಲ ಅನ್ನೋದು ಸ್ಪಷ್ಟವಾಗಿದೆ.

    ಈಗಾಗಲೇ ವಿದೇಶಗಳಿಂದ ಆಗಮಿಸಿದ್ದ 200 ಮಂದಿಯ ಪೈಕಿ ಬಹುತೇಕರ 14 ದಿನಗಳ ಕ್ವಾರಂಟೈನ್ ಅವಧಿ ಸಹ ಪೂರ್ಣಗೊಂಡಿದೆ. ಹೀಗಾಗಿ ಜಿಲ್ಲೆ ರೆಡ್‍ಝೋನ್‍ನಲ್ಲಿದ್ದರೂ ಕೊರೊನಾ ಸೋಂಕಿತ ಹೊಸ ಪ್ರಕರಣಗಳು ಪತ್ತೆಯಾಗಿಲ್ಲ. ಕೊರೊನಾ ವೈರಸ್ ಹರುಡವಿಕೆಯನ್ನ ತಡೆಯುವಲ್ಲಿ ಜಿಲ್ಲಾಢಳಿತ ಯಶಸ್ವಿಯಾಗಿದ್ದು, ಜಿಲ್ಲೆಯ ಜನತೆ ಆತಂಕಕ್ಕೆ ಒಳಗಾಗದಂತೆ ಡಿಸಿ ಆರ್. ಲತಾ ಮನವಿ ಮಾಡಿಕೊಂಡಿದ್ದಾರೆ. ಹಾಗೆಯೇ ಹೊಸ ಪ್ರಕರಣಗಳು ಪತ್ತೆಯಾಗಿಲ್ಲ ಅಂತ ಜನ ದಯವಿಟ್ಟು ಬೀದಿಗೆ ಬರಬೇಡಿ ಇನ್ನೂ ಲಾಕ್‍ಡೌನ್ ಅವಧಿ ಪೂರ್ಣಗೊಳ್ಳುವವರೆಗೂ ಮನೆಯಲ್ಲಿದ್ದು ಸಹಕರಿಸಿ ಎಂದು ಡಿಸಿ ಕೇಳಿಕೊಂಡಿದ್ದಾರೆ.