ಬೆಂಗಳೂರು: ಭಾರೀ ವಿರೋಧದ ನಡುವೆಯೇ ಸ್ಯಾಂಡಲ್ವುಡ್ನಲ್ಲಿ ಶುಕ್ರವಾರ `ಸತ್ಯದೇವ್ ಐಪಿಎಸ್’ ಡಬ್ಬಿಂಗ್ ಚಿತ್ರ ರಿಲೀಸ್ಗೆ ರೆಡಿಯಾಗಿದೆ. ರಾಜ್ಯದ 50 ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡಲಾಗುವುದು ಎಂದು ಡಬ್ಬಿಂಗ್ ವಾಣಿಜ್ಯ ಮಂಡಳಿ ಅಧ್ಯಕ್ಷ ಕೃಷ್ಣೇಗೌಡ ಹೇಳಿದ್ದಾರೆ.
ಸತ್ಯದೇವ ಐಪಿಎಸ್ ಚಿತ್ರವನ್ನು ತಮಿಳಿನ ಎನೈ ಅರಿಂದಾಲ್ ಸಿನಿಮಾದಿಂದ ಡಬ್ ಮಾಡಲಾಗಿದ್ದು, ಅಜಿತ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಸತ್ಯದೇವ್ ಐಪಿಎಸ್ ಸಿನಿಮಾ ಸದ್ಯಕ್ಕೆ ಬೆಂಗಳೂರು ನಗರದಲ್ಲಿ ರಿಲೀಸ್ ಆಗುತ್ತಿಲ್ಲ. ಬದಲಿಗೆ ಮೈಸೂರು, ಹುಬ್ಬಳ್ಳಿ, ಗದಗ್, ಹೊಸಪೇಟೆಯಲ್ಲಿ ರಿಲೀಸ್ ಮಾಡಲು ಸಿದ್ಧತೆ ನಡೆಯುತ್ತಿದೆ.
ಡಬ್ಬಿಂಗ್ ಸಿನಿಮಾಕ್ಕೆ ಪ್ರೇಕ್ಷಕರಿಂದ ಯಾವ ರೀತಿಯಲ್ಲಿ ಪ್ರತಿಕ್ರಿಯೆ ಸಿಗುತ್ತದೆ ಎನ್ನುವ ಕುತೂಹಲ ಎಲ್ಲರಲ್ಲೂ ಇದ್ದು, ಫೆ.22 ರಂದು ಬಿಡುಗಡೆಯಾದ ಈ ಚಿತ್ರದ ಟ್ರೇಲರನ್ನು 2 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.
ಬೆಂಗಳೂರು:ಡಬ್ಬಿಂಗ್ ಚಿತ್ರ ಬಿಡುಗಡೆಯಾದರೆ ಆ ಚಿತ್ರಮಂದಿರಕ್ಕೆ ಬೆಂಕಿ ಹಾಕಲು ಸಿದ್ಧ ಎಂದು ನಟ ಜಗ್ಗೇಶ್ ಹೇಳಿದ್ದಾರೆ.
ಮಾರ್ಚ್ 3ರಂದು ಬಿಡುಗಡೆಯಾಗಲಿರುವ ಸತ್ಯದೇವ್ ಐಪಿಎಸ್ ಚಿತ್ರವನ್ನು ವಿರೋಧಿಸಿ ಪ್ರೆಸ್ ಕ್ಲಬ್ನಲ್ಲಿ ಆಯೋಜನೆಗೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಡಬ್ಬಿಂಗ್ ಚಿತ್ರ ಬಿಡುಗಡೆಯಾಗಬಾರದು. ನಾನು ಜೈಲಿಗೆ ಹೋದರೂ ಚಿಂತೆಯಿಲ್ಲ. ಒಂದು ವೇಳೆ ಬಿಡುಗಡೆಯಾದರೆ ಆ ಚಿತ್ರ ಮಂದಿರಕ್ಕೆ ಬೆಂಕಿ ಹಚ್ಚುತ್ತೇವೆ ಆಕ್ರೋಶ ವ್ಯಕ್ತಪಡಿಸಿದರು.
ಹುಚ್ಚು ಕಲ್ಪನೆ: ತಮಿಳನಾಡಿನಲ್ಲಿ ಹಿಂದಿ ಭಾಷೆಯನ್ನು ಬಿಟ್ಟಿಲ್ಲ. ಬಹಳ ಜನ ಡಬ್ಬಿಂಗ್ ಬೆಂಬಲಿಸುತ್ತಾರೆ ಎನ್ನುವ ಹುಚ್ಚು ಕಲ್ಪನೆ ಇದೆ. ಹೃದಯದಿಂದ ಕನ್ನಡವನ್ನು ಪ್ರೀತಿಸುವ ಅಭಿಮಾನಿಗಳು ಅಖಂಡ ಕರ್ನಾಟಕದಲ್ಲಿ ಇದ್ದಾರೆ. ಅವರೆಲ್ಲ ಹೋರಾಟಕ್ಕೆ ಇಳಿದರೆ ಡಬ್ಬಿಂಗ್ ಬೇಕು ಅಂತ ಹೇಳುತ್ತಿರುವವರು ಕೊಚ್ಚಿಕೊಂಡು ಹೋಗುತ್ತಾರೆ ಎಂದರು.
ಜ್ಲಾನ ಸಿಗಲ್ಲ: ಅಂದು ಕನ್ನಡ ಚಿತ್ರಗಳಿಗೆ ಸ್ಟುಡಿಯೋ ಸಿಕ್ಕುತ್ತಿರಲಿಲ್ಲ. ಅಂತಹ ಸಮಯದಲ್ಲಿ ಡಬ್ಬಿಂಗ್ನ ಡಾ.ರಾಜ್ಕುಮಾರ್ ಅನಕೃ ನೇತೃತ್ವದಲ್ಲಿ ವಿರೋಧಿಸಿದರು ಎನ್ನುವ ಅಂತಹ ಕಲ್ಪನೆ ಇದ್ರೆ ಬಿಟ್ಬಿಡೋದು ಒಳ್ಳೆಯದು. ಕನ್ನಡದ ಜ್ಞಾನ ಡಬ್ಬಿಂಗ್ ನಿಂದ ಆಗುತ್ತದೆ ಎನ್ನುವುದು ಸುಳ್ಳು ಎಂದು ಜಗ್ಗೇಶ್ ತಿಳಿಸಿದರು.
ಅಲ್ಲಿ ಬಿಡುಗಡೆಯಾಗುತ್ತಾ: ನನ್ನ ಕಾಳಜಿ ಇರುವುದು ಮುಂದಿನ ಪೀಳಿಗೆಯ ಉಳಿವಿಗಾಗಿ. ಡಬ್ಬಿಂಗ್ ಬಂದ್ರೆ ನಮ್ಮ ಚಿತ್ರರಂಗದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ತಮಿಳು ನಾಡಲ್ಲಿ 17-18 ಲಕ್ಷ, ಆಂಧ್ರದಲ್ಲಿ 25 ಲಕ್ಷ ಜನ ಕನ್ನಡಿಗರಿದ್ದಾರೆ. ಅಲ್ಲಿ ಕನ್ನಡ ಚಿತ್ರಗಳು ಬಿಡುಗಡೆಯಾಗಲು ಸಾಧ್ಯವೇ ಎಂದು ಪ್ರಶ್ನಿಸಿದ ಅವರು ನಾನು ರಜನಿಕಾಂತ್ ಸಿನಿಮಾ ನೋಡಿದ್ದು ಅವರು ಕನ್ನಡಿಗರು ಎನ್ನುವ ಕಾರಣಕ್ಕೆ ಎಂದು ತಿಳಿಸಿದರು.
ಸುಮಾರು 300, 400 ಚಿತ್ರಗಳನ್ನು ಈಗಾಗಲೇ ಡಬ್ಬಿಂಗ್ ಮಾಡಿದ್ದಾರೆ. ಇದಾದ ಬಳಿಕ ಟಿವಿ ಧಾರವಾಹಿಗಳು ಡಬ್ಬಿಂಗ್ ಆಗಿ ಕನ್ನಡಕ್ಕೆ ಬರುತ್ತವೆ. ಆಂಧ್ರದ ಮಂದಿ ಬೆಂಗಳೂರಿನ ಗಾಂಧಿ ನಗರದಲ್ಲೇ ಕಚೇರಿ ಆರಂಭಿಸುತ್ತಾರೆ. ಈ ಎಲ್ಲ ಪರಿಣಾಮದಿಂದಾಗಿ 6 ಲಕ್ಷ ಮಂದಿಯ ಜೀವನ ಬೀದಿಗೆ ಬೀಳುತ್ತದೆ ಎಂದು ಜಗ್ಗೇಶ್ ವಿವರಿಸಿದರು.
ವಾಟಾಳ್ ನಾಗರಾಜ್ ಮಾತನಾಡಿ, ಡಬ್ಬಿಂಗ್ ಚಿತ್ರ ವಿರೋಧಿಸಿ ಪೊಲೀಸರ ಬೂಟ್ ಪೆಟ್ಟು ತಿಂದವನು ನಾನು. ಡಬ್ಬಿಂಗ್ ತೀರಾ ಕೆಟ್ಟ ಸಂಸ್ಕೃತಿಯಾಗಿದ್ದು, ಅದು ಯಾವ ರೀತಿ ಬಿಡುಗಡೆ ಮಾಡ್ತಿರೋ ನಾವು ನೋಡುತ್ತೇವೆ. ಯಾವುದೇ ಕಾರಣಕ್ಕೂ ಬಿಡುಗಡೆ ಮಾಡಲು ಬಿಡುವುದಿಲ್ಲ. ಯಾವುದೇ ಕಾರಣಕ್ಕೂ ಕರ್ನಾಟಕದಲ್ಲಿ ಡಬ್ಬಿಂಗ್ ಕಾಲಿಡೋದಕ್ಕೆ ಕನ್ನಡ ಒಕ್ಕೂಟ ಬಿಡುವುದಿಲ್ಲ ಎಂದು ತಿಳಿಸಿದರು.
ಮಾರ್ಚ್ 6ರಂದು 11 ಘಂಟೆಗೆ ಎಲ್ಲಾ ಚಿತ್ರೋದ್ಯಮದವರ ಸಭೆ ಕರೆದಿದ್ದೇವೆ. 11ರಂದು ಚಿತ್ರರಂಗ ಬಂದ್ ಮಾಡಿ ಮೈಸೂರು ಬ್ಯಾಂಕ್ ನಿಂದ ಬೃಹತ್ ಮೆರವಣಿಗೆ ಮಾಡಲಾಗುವುದು ಎಂದು ವಾಟಾಳ್ ನಾಗರಾಜ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ರಂಗಾಯಣ ರಘು, ನಿರ್ದೇಶಕ ಎನ್ ಆರ್ ರಮೇಶ್, ಹಿರಿಯ ನಟ ಶಿವರಾಂ, ಸಾಧು ಕೋಕಿಲಾ ಮತ್ತು ಹಿರಿಯ ನಟ ಶ್ರೀನಿವಾಸ್ ಮೂರ್ತಿ ಉಪಸ್ಥಿತರಿದ್ದರು
ಬೆಂಗಳೂರು: ನವರಸ ನಾಯಕ ಜಗ್ಗೇಶ್ ಡಬ್ಬಿಂಗ್ ವಿಚಾರದ ಬಗ್ಗೆ ಮತ್ತೆ ಗುಡುಗಿದ್ದಾರೆ.
ಜೆಪಿನಗರದ ದೊಡ್ಡ ಪಬ್ನಲ್ಲಿ ಮುಗುಳು ನಗೆ ಹಾಡಿನ ಚಿತ್ರೀಕರಣ ನಡೆಯುತ್ತಿದ್ದು ನಿರ್ದೇಶಕ ಯೋಗರಾಜ್ ಭಟ್, ನವರಸ ನಾಯಕ ಜಗ್ಗೇಶ್ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಒಟ್ಟಿಗೆ ಸೇರಿದ್ರು. ಸೆಟ್ನಲ್ಲಿ ಸಖತ್ ಮಸ್ತ್ ಮಜಾ ಮಾಡ್ತಿದ್ದ ಸಿನಿಮಾ ತಂಡ ಪಬ್ಲಿಕ್ ಟಿವಿ ಜೊತೆ ಮಾತಿಗೆ ಇಳೀತು. ಈ ವೇಳೆ ಜಗ್ಗೇಶ್ ಸ್ಯಾಂಡಲ್ವುಡ್ನಲ್ಲಿ ನಡೆಯುತ್ತಿರುವ ಡಬ್ಬಿಂಗ್ ವಿಚಾರವಾಗಿ ಸ್ವಲ್ಪ ಗರಂ ಆದ್ರು.
ಡಬ್ಬಿಂಗ್ ವಿಚಾರದಲ್ಲಿ ಜಗ್ಗೇಶ್ ಧ್ವನಿ ಎತ್ತಿದ್ದಕ್ಕೆ ಕೆಲವರು ಅವರ ಬಗ್ಗೆ, ಅವರ ವೈಯುಕ್ತಿಕ ಜೀವನದ ಬಗ್ಗೆ ಮಾತನಾಡಿದ್ದಾರಂತೆ. ಇದರಿಂದ ಕುಪಿತರಾದ ಜಗ್ಗೇಶ್, ಹಿಂದೆ ಮಾತನಾಡುವ ಮಂದಿಗೆ ಖಡಕ್ ಆಗಿ ಉತ್ತರ ಕೊಟ್ಟಿದ್ದಾರೆ.
ಏನೇನ್ ನಡೆಯುತ್ತೆ ನಡೆಯಲಿ. ಶಾರದೆ ನನಗೆ ಎಲ್ಲವನ್ನೂ ಕೊಟ್ಟಿದ್ದಾಳೆ. ನನ್ನ ಉದ್ದೇಶ ಈ ಉದ್ಯಮ ಉಳಿಯಲಿ ಅನ್ನೋದು ಅಷ್ಟೆ. ಇದನ್ನ ಮಧ್ಯದಲ್ಲಿ ಯಾರ್ಯಾರೋ ಅವರ ಸ್ವಾರ್ಥಕ್ಕಾಗಿ ಬಳಸುತ್ತಿದ್ದಾರೆ. ಅವರ ಬೆನ್ನ ಹಿಂದೆ ತುಂಬಾ ದೊಡ್ಡ ತಲೆಗಳಿವೆ. ನನ್ನ ರಾಜಕೀಯದ ಬಗ್ಗೆ ಎಲ್ಲಾ ಮಾತನಾಡ್ತಿದ್ದಾರೆ. ಈ ರಾಜ್ಯಕ್ಕೇ ಉತ್ತರ ಕೊಟ್ಟಿದ್ದೇನೆ. ಚಿಕ್ಕ ಚಿಕ್ಕ ಹುಡುಗರಿಗೆಲ್ಲಾ ನಾನು ಈ ಮೆಸೇಜ್ ಹೇಳೋಕೆ ಹೋಗಲ್ಲ. ಅವರೆಲ್ಲಾ ತೃಣಕ್ಕೆ ಸಮಾನ ಅಂದ್ರು.
ಒಟ್ನಲ್ಲಿ ಮುಗುಳು ನಗೆ ಸೆಟ್ ಗೆ ಭೇಟಿ ಕೊಟ್ಟಿದ್ದರಿಂದ ಡಬ್ಬಿಂಗ್ ಬಗ್ಗೆ ಜಗ್ಗೇಶ್ ತನ್ನ ಮನದಾಳವನ್ನು ಹೇಳಿಕೊಂಡ್ರು. ಮುಂದಿನ ದಿನಗಳಲ್ಲಿ ಡಬ್ಬಿಂಗ್ ವಿಚಾರ ಯಾವ ಟರ್ನ್ ಪಡೆಯುತ್ತೆ ಕಾದು ನೋಡ್ಬೇಕು.
೬ಸಾವಿರ ಕನ್ನಡಚಿತ್ರದ ಕಾರ್ಮಿಕರ ಭವಿಷ್ಯ ಹಾಗು ನಮ್ಮ ಕನ್ನಡದ ಹೊಸ ಯುವಪೀಳಿಗೆಯ ಭವಿಷ್ಯಅಡಗಿದೆ!ನಾವು ದುಡಿದು ದಡಸೇರಿದ್ದೇವೆ. ಪಾಪ ಮುಂದಿನಪೀಳಿಗೆ ಪಾಡು?
ಬೆಂಗಳೂರು: ಬಾಹುಬಲಿ 2 ಕನ್ನಡಕ್ಕೆ ಡಬ್ ಆಗಬೇಕೆಂದು ಆಗ್ರಹಿಸಿ ಟ್ವಿಟ್ಟರ್ನಲ್ಲಿ ಕನ್ನಡಿಗರು ಆಗ್ರಹಿಸಿದ್ದಾರೆ.
ಕನ್ನಡ ಗ್ರಾಹಕ ವೇದಿಕೆಯವರು ಆಯೋಜಿಸಿದ ಈ ಅಭಿಯಾನಕ್ಕೆ ಜನ ಬೆಂಬಲ ವ್ಯಕ್ತಪಡಿಸುತ್ತಿದ್ದು, #Bahubali2InKannada ಹ್ಯಾಶ್ ಟ್ಯಾಗ್ ಬಳಸಿ ಟ್ವೀಟ್ ಮಾಡುತ್ತಿದ್ದಾರೆ. ಸಂಜೆ 6.30ಕ್ಕೆ ಆರಂಭವಾದ ಈ ಆಂದೋಲನ ಬೆಂಗಳೂರಿನಲ್ಲಿ ಟ್ರೆಂಡಿಂಗ್ ಟಾಪಿಕ್ ಆಗಿದೆ.
ರಾಜಮೌಳಿ ನಿರ್ದೇಶನದ ತೆಲುಗು, ತಮಿಳು, ಮಲೆಯಾಳಂ, ಹಿಂದಿ ಭಾಷೆಯಲ್ಲಿ ಮೂಡಿ ಬರಲಿರುವ ಬಾಹುಬಲಿ2 ಏಪ್ರಿಲ್ 28ರಂದು ಬಿಡುಗಡೆಯಾಗಲಿದೆ.
ಜನರ ಕೆಲ ಟ್ವೀಟ್ ಗಳನ್ನು ಇಲ್ಲಿ ನೀಡಲಾಗಿದೆ
– ಕನ್ನಡಿಗರು ಕರ್ನಾಟಕದಲ್ಲಿ ಕನ್ನಡ ಬಿಟ್ಟು ಬೇರೆ ಭಾಷೆಯಲ್ಲಿ ಬಾಹುಬಲಿ ಚಿತ್ರ ನೋಡುವುದು ಹೇಗೆ? ಕನ್ನಡದಲ್ಲೆ ಬಂದರೆ ನಮಗೆಲ್ಲರಿಗೂ ಸುಲಭವಾಗಿ ಅರ್ಥವಾಗುತ್ತದೆ.
– ಡಬ್ಬಿಂಗ್ ನಿಂದಾಗಿ ಇಂಡಸ್ಟ್ರಿ ಹಾಳಾಗುತ್ತದೆ ಎನ್ನುವುದಾದರೆ ತಮಿಳು, ತೆಲುಗು ಇಂಡಸ್ಟ್ರಿ ಇಷ್ಟರೊಳಗೆ ನೆಲಕಚ್ಚಬೇಕಿತ್ತು. ಹೀಗಾಗಿ ಕನ್ನಡಕ್ಕೆ ಡಬ್ಬಿಂಗ್ ಬೇಕು.
– ಕನ್ನಡ ನಾಡಿನಲ್ಲಿ ಮನರಂಜನೆ ಕನ್ನಡದಲ್ಲೇ ಸಿಗುವ ಹೆಜ್ಜೆಯಾಗಿ ಬಾಹುಬಲಿ ಕನ್ನಡಕ್ಕೆ ಡಬ್ ಆಗಿ ಬರಲಿ.
– ಇಡೀ ಕರ್ನಾಟಕ ಏನ್ ನೋಡಬೇಕು, ಏನ್ ನೋಡಬಾರದು ಎಂದು ನಿರ್ಧಾರ ಮಾಡಲು ಇವರು ಯಾರು?
– ಬಾಹುಬಲಿ ನಿರ್ದೇಶಕ ರಾಜಮೌಳಿ ಕನ್ನಡಿಗರು, ಸುದೀಪ್ ಅಸ್ಲಂ ಖಾನ್ ಪಾತ್ರ ಮಾಡಿದ್ದಾರೆ. ಅನುಷ್ಕಾ ಶೆಟ್ಟಿ ಮಂಗಳೂರಿನವರು. ಸಿನಿಮಾದ ಆಡಿಯೋ ಹಕ್ಕನ್ನು ಲಹರಿ ಸಂಸ್ಥೆ ಖರೀದಿಸಿದೆ. ಕನ್ನಡಿಗರೇ ಚಿತ್ರದಲ್ಲಿ ಕೆಲಸ ಮಾಡಿರುವಾಗ ಕನ್ನಡದಲ್ಲಿ ಬಾಹುಬಲಿ ಬಂದರೆ ಸಮಸ್ಯೆ ಏನು?
ಬೆಂಗಳೂರು: ಮಾಸ್ತಿಗುಡಿ ಕ್ಲೈಮ್ಯಾಕ್ಸ್ ಚಿತ್ರೀಕರಣದ ವೇಳೆ ದುರಂತ ಸಾವು ಕಂಡ ನಟ ಉದಯ್ ಪಾತ್ರಕ್ಕೆ ಖಳನಟ ಮಧು ಗುರುಸ್ವಾಮಿ ಡಬ್ಬಿಂಗ್ ಮಾಡ್ತಿದ್ದಾರೆ.
ಅಬ್ಬಯ್ಯ ನಾಯ್ಡು ಸ್ಟುಡಿಯೋದಲ್ಲಿ ಡಬ್ಬಿಂಗ್ ನಡೆಯುತ್ತಿದೆ. ಭಜರಂಗಿ ಚಿತ್ರದಲ್ಲಿ ಮಂತ್ರವಾದಿ, ವಜ್ರಕಾಯ ಸಿನಿಮಾದಲ್ಲಿ ಹುಜುರ್,
ಜೈ ಮಾರುತಿ 800 ಚಿತ್ರದಲ್ಲಿ ವೀರಪ್ಪನಾಗಿ ನಟಿಸಿದ್ದ ಮಧು ಗುರುಸ್ವಾಮಿ ನಟ ಉದಯ್ ಪಾತ್ರಕೆ ಧ್ವನಿಯಾಗಿದ್ದಾರೆ. ಅನಿಲ್ ಪಾತ್ರಕ್ಕೆ ನಟ ವಸಿಷ್ಠ ಅವರು ಈಗಾಗಲೇ ಡಬ್ಬಿಂಗ್ ಮಾಡಿದ್ದಾರೆ. ನಿರ್ದೇಶಕ ನಾಗಶೇಖರ್ ಡಬ್ಬಿಂಗ್ ಕೆಲಸಕ್ಕೆ ಸಾಥ್ ನೀಡಿದ್ದಾರೆ
ಫೆಬ್ರವರಿ 24ರಂದು ಮಾಸ್ತಗುಡಿ ಚಿತ್ರದ ಆಡಿಯೋ ಲಾಂಚ್ ಗೆ ಚಿತ್ರ ತಂಡ ಪ್ಲಾನ್ ಮಾಡಿದೆ. ಏಪ್ರಿಲ್ 14 ಕ್ಕೆ ಸಿನಿಮಾ ರಿಲೀಸ್ಗೆ ಸಿದ್ಧತೆ ನಡೆಸಿದೆ.