Tag: ಟ್ರಕ್ ಚಾಲಕರು

  • ಉಗ್ರ ಸ್ವರೂಪ ಪಡೆದ ಟ್ರಕ್‌ ಚಾಲಕರ ಪ್ರತಿಭಟನೆ – ಕೆನಡಾದಲ್ಲಿ ತುರ್ತು ಪರಿಸ್ಥಿತಿ ಘೋಷಣೆ

    ಉಗ್ರ ಸ್ವರೂಪ ಪಡೆದ ಟ್ರಕ್‌ ಚಾಲಕರ ಪ್ರತಿಭಟನೆ – ಕೆನಡಾದಲ್ಲಿ ತುರ್ತು ಪರಿಸ್ಥಿತಿ ಘೋಷಣೆ

    ಒಟ್ಟಾವಾ: ಲಸಿಕೆ ಆದೇಶಗಳು ಸೇರಿದಂತೆ ಕೋವಿಡ್‌ ಸಂಬಂಧಿತ ಕ್ರಮಗಳ ವಿರುದ್ಧ ನಡೆಯುತ್ತಿರುವ ಟ್ರಕ್‌ ಚಾಲಕ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರಡೊ, ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.

    ನಾವು ಕಾನೂನು ಬಾಹಿರ ಮತ್ತು ಅಪಾಯಕಾರಿ ಚಟುವಟಿಕೆಗಳನ್ನು ತಡೆಗಟ್ಟುತ್ತೇವೆ. ಇಂತಹ ಚಟುವಟಿಕೆಗಳಿಗೆ ಅನುಮತಿ ನೀಡುವುದಿಲ್ಲ ಎಂದು ರಾಜಧಾನಿಯಲ್ಲಿ ತಿಳಿಸಿದ್ದಾರೆ. ತಕ್ಷಣದಿಂದಲೇ ತುರ್ತು ಪರಿಸ್ಥಿತಿ ಆದೇಶ ಜಾರಿಗೆ ಬಂದಿದ್ದು, 30 ದಿನಗಳವರೆಗೆ ಇರಲಿದೆ. ಇದನ್ನೂ ಓದಿ: ಲಸಿಕೆ ಕಡ್ಡಾಯ ನಿಯಮ ವಿರೋಧಿಸಿ ತೀವ್ರ ಪ್ರತಿಭಟನೆ – ರಹಸ್ಯ ಸ್ಥಳಕ್ಕೆ ಕೆನಡಾ ಪಿಎಂ ಸ್ಥಳಾಂತರ

    ಪ್ರತಿಭಟನಾಕಾರರ ಕೂಟಗಳನ್ನು ಚದುರಿಸಲು ಕಾನೂನು ಜಾರಿಗಾಗಿ ಕ್ರಮ ವಹಿಸಲಾಗುವುದು. ಪ್ರತಿಭಟನಾನಿರತ ವ್ಯಕ್ತಿಗಳು ಮತ್ತು ಸಂಸ್ಥೆಗಳ ಖಾತೆಗಳನ್ನು ಬಂದ್‌ ಮಾಡಲು ಹಣಕಾಸು ಸಂಸ್ಥೆಗಳಿಗೆ ತಿಳಿಸಲಾಗಿದೆ. ಪ್ರತಿಭಟನಾಕಾರರ ಪ್ರತಿನಿಧಿಗಳೊಂದಿಗೆ ಚರ್ಚಿಸಲು ಪ್ರಧಾಣಿ ನಿರಾಕರಿಸಿದ್ದಾರೆ.

    ಕೆನಡಾ ಮತ್ತು ಯುಎಸ್‌ ಅನ್ನು ಸಂಪರ್ಕಿಸುವ ಒಂಟಾರಿಯೊದ ವಿಂಡ್ಸರ್‌ ಮತ್ತು ಮಿಚಿಗನ್‌ನ ಡೆಟ್ರಾಯಿಟ್‌ ನಡುವಿನ ರಾಯಭಾರಿ ಸೇತುವೆಯನ್ನು ಪ್ರತಿಭಟನಾಕಾರರಿಂದ ಪೊಲೀಸರು ತೆರವುಗೊಳಿಸಿದ್ದಾರೆ. ಇದಾದ ಬಳಿಕ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಇದನ್ನೂ ಓದಿ: ಭಾರತ ವಿರೋಧಿ ಸ್ನೇಹಿತರು ಟ್ರುಡೊರನ್ನು ರಕ್ಷಿಸಬಹುದು: ಇದು ಕರ್ಮ ಎಂದ ಸಿಂಘ್ವಿ

    ಜನವರಿ ಮಧ್ಯ ಭಾಗದಲ್ಲಿ ಗಡಿಯಾಚೆಗಿನ ಟ್ರಕ್‌ ಚಾಲಕರಿಗೆ ಎರಡು ಡೋಸ್‌ ಲಸಿಕೆ ಕಡ್ಡಾಯಗೊಳಿಸಿದ ಕೆನಡಾ ಸರ್ಕಾರದ ವಿರುದ್ಧ ವ್ಯಾಪಕ ಪ್ರತಿಭಟನೆ ನಡೆಯುತ್ತಿದೆ. ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಕೆನಡಾ ಪ್ರಧಾನಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಂಡಿದ್ದರು. ಆದರೆ ಆದೇಶವನ್ನು ಹಿಂತೆಗೆದುಕೊಳ್ಳುವ ಯಾವುದೇ ಕ್ರಮಕೈಗೊಂಡಿಲ್ಲ.

  • ಲಸಿಕೆ ಕಡ್ಡಾಯ ನಿಯಮ ವಿರೋಧಿಸಿ ತೀವ್ರ ಪ್ರತಿಭಟನೆ – ರಹಸ್ಯ ಸ್ಥಳಕ್ಕೆ ಕೆನಡಾ ಪಿಎಂ ಸ್ಥಳಾಂತರ

    ಲಸಿಕೆ ಕಡ್ಡಾಯ ನಿಯಮ ವಿರೋಧಿಸಿ ತೀವ್ರ ಪ್ರತಿಭಟನೆ – ರಹಸ್ಯ ಸ್ಥಳಕ್ಕೆ ಕೆನಡಾ ಪಿಎಂ ಸ್ಥಳಾಂತರ

    ಒಟ್ಟಾವಾ: ಕೋವಿಡ್‌-19 ಲಸಿಕೆಯನ್ನು ಕಡ್ಡಾಯಗೊಳಿಸಿರುವುದನ್ನು ವಿರೋಧಿಸಿ ವ್ಯಾಪಕ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೊ ಮತ್ತು ಅವರ ಕುಟುಂಬ ರಾಜಧಾನಿಯಲ್ಲಿನ ತಮ್ಮ ಮನೆ ತೊರೆದು ರಹಸ್ಯ ಸ್ಥಳಕ್ಕೆ ಸ್ಥಳಾಂತರಗೊಂಡಿದ್ದಾರೆ.

    ಗಡಿಯಂಚಿನ ಟ್ರಕ್‌ ಚಾಲಕರಿಗೆ ಕೋವಿಡ್‌ ಲಸಿಕೆ ಕಡ್ಡಾಯ ಎಂಬ ನಿಯಮವನ್ನು ಕೆನಡಾ ಸರ್ಕಾರ ಹೊರಡಿಸಿದ್ದು, ಇದರ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಕಡ್ಡಾಯ ನಿಯಮವನ್ನು ಹಿಂತೆಗೆದುಕೊಳ್ಳಬೇಕು ಎಂದು ರಾಜಧಾನಿಯಲ್ಲಿ ಅಪಾರ ಸಂಖ್ಯೆಯಲ್ಲಿ ಟ್ರಕ್‌ ಚಾಲಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ವೇಳೆ ನೂರಾರು ಸಂಖ್ಯೆಯಲ್ಲಿ ಟ್ರಕ್‌ಗಳನ್ನು ಪ್ರತಿಭಟನಾ ಸ್ಥಳದಲ್ಲಿ ನಿಲ್ಲಿಸಿದ್ದಾರೆ. ಇದನ್ನೂ ಓದಿ: ಆಹಾರಕ್ಕಾಗಿ ಅಪ್ಘಾನ್‌ ಜನರಿಂದ ಮಕ್ಕಳು, ದೇಹದ ಅಂಗಾಂಗಗಳ ಮಾರಾಟ

    ಕೋವಿಡ್‌ ಲಸಿಕೆ ಆದೇಶ ಮತ್ತು ಇತರ ಸಾರ್ವಜನಿಕ ಆರೋಗ್ಯ ನಿರ್ಬಂಧಗಳನ್ನು ತೆಗೆದುಹಾಕಲು ಕ್ರಮವಹಿಸುವಂತೆ ಶನಿವಾರ ರಾಜಧಾನಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಟ್ರಕ್‌ ಚಾಲಕರು, ಇತರೆ ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. ಮಕ್ಕಳು, ವೃದ್ಧರು, ಅಂಗವಿಕಲರೂ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಕೆಲವರು ಪ್ರತಿಭಟನಾಕಾರರು ಪ್ರಮುಖ ಯುದ್ಧ ಸ್ಮಾರಕದ ಮೇಲೆ ನೃತ್ಯ ಮಾಡಿರುವ ದೃಶ್ಯ ಸೆರೆಯಾಗಿದೆ.

    ತೀವ್ರ ಶೀತದ ಎಚ್ಚರಿಕೆಯ ಹೊರತಾಗಿಯೂ ನೂರಾರು ಪ್ರತಿಭಟನಾಕಾರರು ಸಂಸತ್ತಿನ ಆಚರಣಕ್ಕೆ ನುಗ್ಗಿದ್ದಾರೆ. ಹೆಚ್ಚಿನ ಅನಾಹುತ ತಪ್ಪಿಸಲು ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್‌ ಬಂದೋಬಸ್ತ್‌ ಕಲ್ಪಿಸಲಾಗಿದೆ. ಪ್ರತಿಭಟನೆ ತೀವ್ರತೆ ಅರಿತ ಕೆನಡಾ ಪ್ರಧಾನಿ ಅವರನ್ನು ರಹಸ್ಯ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಇದನ್ನೂ ಓದಿ: ಪತ್ನಿಯ ಹುಟ್ಟುಹಬ್ಬಕ್ಕೆ ಬುರ್ಜ್ ಖಲಿಫಾದಲ್ಲಿ ಫೋಟೋ ಹಾಕಿ ಶುಭ ಕೋರಿದ ರೊನಾಲ್ಡೊ

  • ಪಶುವೈದ್ಯೆಯನ್ನ ಗ್ಯಾಂಗ್‍ರೇಪ್ ಮಾಡಿ, ಕೊಲೆ – 25 ಕಿ.ಮೀ ದೂರ ಶವವೊಯ್ದು ಸುಟ್ಟರು

    ಪಶುವೈದ್ಯೆಯನ್ನ ಗ್ಯಾಂಗ್‍ರೇಪ್ ಮಾಡಿ, ಕೊಲೆ – 25 ಕಿ.ಮೀ ದೂರ ಶವವೊಯ್ದು ಸುಟ್ಟರು

    – ಪಂಕ್ಚರ್ ಸರಿ ಮಾಡುವ ನೆಪದಲ್ಲಿ ರೇಪ್
    – ಸಿಸಿಟಿವಿ ದೃಶ್ಯಾವಳಿಯಿಂದ ಆರೋಪಿಗಳು ಪತ್ತೆ
    – ಕೃತ್ಯವೆಸೆಗಿದ ಟ್ರಕ್ ಡ್ರೈವರ್ ಸೇರಿ ನಾಲ್ವರು ಅರೆಸ್ಟ್

    ಹೈದರಾಬಾದ್: ತೆಲಂಗಾಣದಲ್ಲಿ ಪಶುವೈದ್ಯೆಯನ್ನು ಓರ್ವ ಟ್ರಕ್ ಚಾಲಕ ಸೇರಿದಂತೆ ಒಟ್ಟು ನಾಲ್ಕು ಮಂದಿ ಸಾಮೂಹಿಕ ಅತ್ಯಾಚಾರಗೈದು ಕೊಲೆ ಮಾಡಿ, ಘಟನಾ ಸ್ಥಳದಿಂದ 25 ಕಿ.ಮೀ ದೂರ ಶವವನ್ನು ಕೊಂಡೊಯ್ದು ಸುಟ್ಟಿರುವುದು ಬಯಲಾಗಿದೆ.

    ತೆಲಂಗಾಣದ ಕೊಲ್ಲೂರು ಗ್ರಾಮದ ಪಶುವೈದ್ಯಕೀಯ ಆಸ್ಪತ್ರೆಯಲ್ಲಿ ಪಶುವೈದ್ಯೆಯಾದ ಪ್ರಿಯಾಂಕಾ ರೆಡ್ಡಿ, ಬುಧವಾರ ಬೆಳಗ್ಗೆ ಶಾದ್‍ನಗರದ ತನ್ನ ಮನೆಯಿಂದ ತಾನು ಕೆಲಸಕ್ಕೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟು ನಂತರ ರಾತ್ರಿ ಸ್ಕೂಟಿ ಪಂಕ್ಚರ್ ಆಗಿದೆ ಎಂದು ತನ್ನ ತಂಗಿಗೆ ಕರೆ ಮಾಡಿದ್ದರು. ಆ ಬಳಿಕ ಅವರ ನಾಪತ್ತೆಯಾಗಿದ್ದರು. ಆದರೆ ಗುರುವಾರ ಬೆಳಗ್ಗೆ ಶಾಡ್‍ನಗರದಲ್ಲಿ ಅಂಡರ್ ಬ್ರಿಡ್ಜ್ ನ ಕೆಳಗೆ ಪ್ರಿಯಾಂಕಾ ಶವವಾಗಿ ಪತ್ತೆಯಾಗಿದ್ದರು.

    ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ತೊಂಡುಪಲ್ಲಿ ಟೋಲ್ ಪ್ಲಾಝಾ ಬಳಿ ಬೆಳಗ್ಗೆ ವೈದ್ಯೆ ತನ್ನ ಸ್ಕೂಟಿ ಪಾರ್ಕ್ ಮಾಡಿ ಗಚಿಬೌಲಿಗೆ ತೆರೆಳಿದ್ದರು. ಇದನ್ನು ಲಾರಿ ಚಾಲಕ ಮಹ್ಮದ್ ಪಾಷಾ, ಆತನ ಸಹಾಯಕ ಹಾಗೂ ಇನ್ನೂ ಇಬ್ಬರು ಗಮನಿಸಿದ್ದರು. ಸಂಜೆ ವೈದ್ಯೆ ಸ್ಕೂಟಿ ತೆಗೆದುಕೊಂಡು ಹೋಗಲು ಬಂದೇ ಬರುತ್ತಾರೆ ಎಂದು ತಿಳಿದುಕೊಂಡು ಬೇಕಂತಲೆ ವಾಹನವನ್ನು ಪಂಕ್ಚರ್ ಮಾಡಿದ್ದರು.

    ರಾತ್ರಿ 8 ಗಂಟೆ ವೇಳೆಗೆ ಗಚಿಬೌಲಿಯಿಂದ ವಾಪಸ್ ಆಗಿದ್ದ ವೈದ್ಯೆ ಟೋಲ್ ಬಳಿ ಸ್ಕೂಟಿ ತೆಗೆದುಕೊಂಡು ಹೋಗಲು ಬಂದಿದ್ದರು. ಆಗ ಸ್ಕೂಟಿ ಪಂಚರ್ ಆಗಿದ್ದನ್ನು ನೋಡಿ ಏನು ಮಾಡುವುದು ಎಂದು ತೋಚದೇ ಆತಂಕದಲ್ಲಿದ್ದರು. ಈ ವೇಳೆ ಮೊದಲೇ ಪ್ಲಾನ್ ಮಾಡಿಕೊಂಡಿದ್ದ ಆರೋಪಿಗಳು ಪಂಕ್ಚರ್ ರಿಪೇರಿ ಮಾಡಲು ಸಹಾಯ ಮಾಡುತ್ತೇವೆ ಎಂದು ವೈದ್ಯೆಗೆ ನಂಬಿಸಿದರು. ಬಳಿಕ ಸಹಾಯ ಮಾಡುವ ನೆಪದಲ್ಲಿ ವೈದ್ಯೆಯನ್ನು ಟೋಲ್‍ನಿಂದ ತುಸು ದೂರ ಕರೆದುಕೊಂಡು ಹೋಗಿ ಸಾಮೂಹಿಕ ಅತ್ಯಾಚಾರ ನಡೆಸಿದರು. ನಂತರ ವೈದ್ಯೆಯನ್ನು ಕೊಲೆಗೈದು, ಮೃತದೇಹವನ್ನು ಸುಮಾರು 25 ಕಿ.ಮೀ ದೂರ ಕೊಂಡೊಯ್ದು ಶಾಡ್‍ನಗರದಲ್ಲಿ ಅಂಡರ್ ಬ್ರಿಡ್ಜ್ ಕೆಳಗೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಘಟನಾ ಸ್ಥಳದ ಹತ್ತಿರವಿದ್ದ ಟಯರ್ ರಿಪೇರಿ ಅಂಗಡಿ ಮಾಲೀಕನನ್ನು ವಿಚಾರಿಸಿದಾಗ, ರಾತ್ರಿ ಸುಮಾರು 9:30 ಗಂಟೆಯಿಂದ 10 ಗಂಟೆ ವೇಳೆಯಲ್ಲಿ ಚಾಲಕರು ಸ್ಕೂಟಿ ತೆಗೆದುಕೊಂಡು ಬಂದಿದ್ದರು. ರಿಪೇರಿ ಆದ ಬಳಿಕ ಅದನ್ನು ತೆಗೆದುಕೊಂಡು ಹೋಗಿದ್ದರು ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಆಧಾರದ ಮೇಲೆ ಪೊಲೀಸರು ಆರೋಪಿಗಳ ಪತ್ತೆಗೆ ಹೊರಟಾಗ ಇಬ್ಬರು ಚಾಲಕರು ಸಿಕ್ಕಿಬಿದ್ದಿದ್ದಾರೆ. ಸ್ಥಳೀಯ ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸಿದಾಗ ಆರೋಪಿಗಳ ಬಗ್ಗೆ ಪತ್ತೆಯಾಗಿದ್ದು, ಸದ್ಯ 4 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಜೊತೆಗೆ ಟೋಲ್ ಪ್ಲಾಝಾ ಬಳಿ ಇದ್ದ ವೈದ್ಯೆಯ ಸ್ಕೂಟಿ, ಬಟ್ಟೆ, ಚಪ್ಪಲಿ ಹಾಗೂ ಮದ್ಯದ ಬಾಟಲಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ಪ್ರಿಯಾಂಕಾ ಅವರ ಬಗ್ಗೆ ತಂಗಿ ಭವ್ಯ ಮಾತನಾಡಿ, ನನಗೆ ಪ್ರಿಯಾಂಕಾ ರಾತ್ರಿ 9:15 ಸುಮಾರಿಗೆ ಕರೆ ಮಾಡಿದಳು. ನನ್ನ ಬೈಕ್ ಪಂಕ್ಚರ್ ಆಗಿದೆ. ನನಗೆ ಭಯವಾಗುತ್ತಿದೆ ಎಂದು ಹೇಳಿದಳು. ನಂತರ ನಾನು ಅವಳಿಗೆ ಹತ್ತಿರದ ಟೋಲ್ ಬಳಿ ಹೋಗಲು ಹೇಳಿದೆ. ಆದರೆ ಅವಳು ನನಗೆ ತುಂಬಾ ಭಯವಾಗುತ್ತಿದೆ. ಇಲ್ಲಿ ಯಾರೋ ಅಪರಿಚಿತ ವ್ಯಕ್ತಿಗಳು ಓಡಾಡುತ್ತಿದ್ದಾರೆ ಹಾಗೂ ತುಂಬಾ ಲಾರಿಗಳನ್ನು ಪಾರ್ಕ್ ಮಾಡಲಾಗಿದೆ ಎಂದು ಹೇಳಿದ್ದಳು.

    ನಾನು ನಂತರ ಅವಳಿಗೆ ಭಯಪಡಬೇಡ ಬೈಕನ್ನು ಅಲ್ಲೇ ನಿಲ್ಲಿಸಿ ನೀನು ಅಲ್ಲಿಂದ ಬಾ ಎಂದು ಹೇಳಿದೆ. ನಂತರ ಮತ್ತೆ ಅವಳ ಫೋನ್‍ಗೆ ಕರೆ ಮಾಡಿದಾಗ ಅವಳ ಫೋನ್ ಸ್ವಿಚ್ ಆಫ್ ಬಂತು. ಆದರೆ ಬೆಳಗ್ಗೆ ಶಾಡ್‍ನಗರದಲ್ಲಿ ಅಂಡರ್ ಬ್ರಿಡ್ಜ್ ಕೆಳಗೆ ಪತ್ತೆಯಾಗದ ರೀತಿಯಲ್ಲಿ ಸುಟ್ಟು ಹೋದ ಅವಳ ದೇಹ ದೊರಕಿದೆ. ಆಕೆ ಹಾಕಿದ್ದ ಚೈನ್ ಲಾಕೆಟ್ ನೋಡಿ ನಾವು ದೇಹವನ್ನು ಗುರುತಿಸಿದೆವು ಎಂದು ಭವ್ಯ ತಿಳಿಸಿದ್ದರು.

  • ಕಾಶ್ಮೀರದಲ್ಲಿ ಮತ್ತೆ ಉಗ್ರರ ಅಟ್ಟಹಾಸ – ಗುಂಡಿಕ್ಕಿ ಇಬ್ಬರು ಟ್ರಕ್ ಚಾಲಕರ ಹತ್ಯೆ

    ಕಾಶ್ಮೀರದಲ್ಲಿ ಮತ್ತೆ ಉಗ್ರರ ಅಟ್ಟಹಾಸ – ಗುಂಡಿಕ್ಕಿ ಇಬ್ಬರು ಟ್ರಕ್ ಚಾಲಕರ ಹತ್ಯೆ

    ಶ್ರೀನಗರ: ಕಣಿವೆ ರಾಜ್ಯದಲ್ಲಿ ಮತ್ತೆ ಉಗ್ರರು ಅಟ್ಟಹಾಸ ಮೆರೆಯುತ್ತಿದ್ದು, ಗುರುವಾರ ಸಂಜೆ ಇಬ್ಬರು ಟ್ರಕ್ ಚಾಲಕರನ್ನು ಉಗ್ರರು ಗುಂಡಿಕ್ಕಿ ಕೊಲೆಗೈದಿದ್ದಾರೆ. ಜೊತೆಗೆ ಅವರ ಟ್ರಕ್‍ಗೆ ಬೆಂಕಿ ಹಚ್ಚಿ ವಿಕೃತಿ ಮೆರೆದಿದ್ದಾರೆ.

    ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ರಾಜಸ್ಥಾನದ ಮೊಹಮ್ಮದ್ ಇಲಿಯಾಸ್ ಮತ್ತು ಪಂಜಾಬ್‍ನ ಜೀವನ್ ಮೃತ ಚಾಲಕರು. ಈ ಇಬ್ಬರು ಚಾಲಕರನ್ನು ಉಗ್ರರು ಗುರುವಾರ ಗುಂಡಿಕ್ಕಿ ಕೊಂದಿದ್ದಾರೆ. ಸೇಬು ಹಣ್ಣುಗಳನ್ನು ತುಂಬಿಸಿಕೊಳ್ಳಲು ತೆರಳಿದ್ದ ಟ್ರಕ್‍ಗಳನ್ನು ಉಗ್ರರು ಅಡ್ಡಗಟ್ಟಿ, ಅದರೊಳಗಿದ್ದ ಚಾಲಕರನ್ನು ಗುಂಡಿಕ್ಕಿ ಕೊಲೆ ಮಾಡಿದ್ದಾರೆ. ಅಲ್ಲದೆ ಅವರ ಟ್ರಕ್‍ಗೆ ಬೆಂಕಿ ಹಚ್ಚಿದ್ದಾರೆ. ಈ ವೇಳೆ ಇನ್ನೋರ್ವ ಚಾಲಕ ಗಾಯಗೊಂಡಿದ್ದು, ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಚಾಲಕರು ನಿರ್ಜನ ಪ್ರದೇಶಕ್ಕೆ ತೆರಳುತ್ತಿರುವ ಬಗ್ಗೆ ನಮಗೆ ಮಾಹಿತಿ ನೀಡಿರಲಿಲ್ಲ. ಭದ್ರತಾ ಪಡೆಗೆ ತಿಳಿಸದೆ ಚಾಲಕರು ಟ್ರಕ್‍ಗಳನ್ನು ಕೊಂಡೊಯ್ದಿದ್ದರು ಎಂದು ಭದ್ರತಾ ಪಡೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹಾಗೆಯೇ ಕಳೆದ 3 ದಿನಗಳಲ್ಲಿ ಇದು ಟ್ರಕ್ ಚಾಲಕರನ್ನು ಉಗ್ರರು ಕೊಂದ ಮೂರನೇ ಪ್ರಕರಣವಾಗಿದೆ.

    ಈಗಾಗಲೇ ಘಟನಾ ಸ್ಥಳದಿಂದ ಚಾಲಕರ ಮೃತದೇಹವನ್ನು ತರಲಾಗಿದೆ. ಇತ್ತ ಗಾಯಗೊಂಡ ಚಾಲಕನನ್ನು ಶ್ರೀನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಗಳನ್ನು ಪತ್ತೆಹಚ್ಚಲು ತನಿಖೆ ಕೈಗೊಂಡಿದ್ದು, ಆದಷ್ಟು ಬೇಗ ಉಗ್ರರನ್ನು ಬಂಧಿಸುವ ಪ್ರಯತ್ನದಲ್ಲಿದ್ದೇವೆ ಎಂದು ಭದ್ರತಾ ಪಡೆ ತಿಳಿಸಿದೆ.

    ಆಗಸ್ಟ್ 5ರಿಂದ ಕಾಶ್ಮಿರದಲ್ಲಿ ಪೋಸ್ಟ್ ಪೇಡ್ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಸತತ 70 ದಿನಗಳ ಬಳಿಕ ಮತ್ತೆ ಪೋಸ್ಟ್ ಪೇಡ್ ಮೊಬೈಲ್ ಸೇವೆ ಆರಂಭಗೊಳಿಸಲಾಗಿದೆ. ಹೀಗಾಗಿ ಮತ್ತೆ ಕಣಿವೆ ರಾಜ್ಯದಲ್ಲಿ ವ್ಯಾಪಾರ, ವ್ಯಹಿವಾಟು ಎಂದಿನಂತೆ ಆರಂಭಗೊಂಡಿದೆ. ಆದರೆ ಉಗ್ರರು ವಲಸಿಗ ವ್ಯಾಪಾರಿಗಳು ಹಾಗೂ ಟ್ರಕ್ ಚಾಲಕರಲ್ಲಿ ಭಯಹುಟ್ಟಿಸಲು ಅವರ ಮೇಲೆ ದಾಳಿ ನಡೆಸುತ್ತಿದ್ದಾರೆ. ಕಾಶ್ಮೀರ ಸಾಮಾನ್ಯ ಸ್ಥಿತಿಗೆ ಮರಳಿಲ್ಲ ಎಂದು ಬಿಂಬಿಸಲು ಈ ರೀತಿ ದಾಳಿಗಳನ್ನು ಉಗ್ರರು ಮಾಡುತ್ತಿದ್ದಾರೆ.

  • ಹಗಲು ಟೈಲರ್, ರಾತ್ರಿಯಾದರೆ ಹಂತಕ- 36 ಜನರನ್ನು ಕೊಂದ ಆರೋಪಿ ಕೊನೆಗೂ ಅರೆಸ್ಟ್

    ಹಗಲು ಟೈಲರ್, ರಾತ್ರಿಯಾದರೆ ಹಂತಕ- 36 ಜನರನ್ನು ಕೊಂದ ಆರೋಪಿ ಕೊನೆಗೂ ಅರೆಸ್ಟ್

    ಭೋಪಾಲ್: ಹಗಲಿನಲ್ಲಿ ಟೈಲರ್ ಕೆಲಸ ಮಾಡಿ ರಾತ್ರಿ ವೇಳೆ ಮನುಷ್ಯರನ್ನು ಕೊಲೆ ಮಾಡಿ ತೃಪ್ತಿ ಪಡುತ್ತಿದ್ದ ವಿಕೃತ ಮನಸ್ಸಿನ ವ್ಯಕ್ತಿಯನ್ನು ಮಧ್ಯಪ್ರದೇಶದ ಪೊಲೀಸರು ಬಂಧಿಸಿದ್ದಾರೆ.

    ಭೋಪಾಲ್‍ನ ಮನ್‍ದೀಪ್ ನಿವಾಸಿ ಆದೇಶ್ ಖಾಮ್ರಾ ಬಂಧಿತ ಆರೋಪಿ. 2010 ರಲ್ಲಿ ಅಮರಾವತಿಯಲ್ಲಿ ಮೊದಲ ಬಾರಿಗೆ ಕೊಲೆ ಮಾಡಿದ್ದ. ಅಲ್ಲಿಂದ ಪ್ರಾರಂಭವಾದ ಆತನ ವಿಕೃತ ವರ್ತನೆಯಿಂದ ನಾಸಿಕ್, ಮಹಾರಾಷ್ಟ್ರ, ಮಧ್ಯಪ್ರದೇಶ, ಬಿಹಾರ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ 36 ಜನರು ಕೊಲೆಯಾಗಿದ್ದಾರೆ.

    ಮಧ್ಯರಾತ್ರಿ ಭೋಪಾಲ್ ನಗರದ ಎಸ್‍ಪಿ ಬಿತ್ತು ಶರ್ಮಾ ನೇತೃತ್ವದ ತಂಡದ ಬಲೆಗೆ ಆದೇಶ್ ಸಿಕ್ಕಿಬಿದ್ದಿದ್ದು, ಆತನನ್ನು ವಿಚಾರಣೆಗೆ ಒಳಪಡಿಸಿದಾಗ ವಿಚಿತ್ರ ಸತ್ಯಗಳು ಬಯಲಿಗೆ ಬಂದಿವೆ. ನನ್ನ ಟಾರ್ಗೆಟ್ ಟ್ರಕ್ ಚಾಲಕರು ಎಂದು ಆದೇಶ್ ತಿಳಿಸಿದ್ದಾನೆ.

    ಟ್ರಕ್ ಚಾಲಕರೇ ಏಕೆ?
    ಟ್ರಕ್ ಚಾಲಕರ ಜೀವನ ಬಹಳ ಕಷ್ಟದಿಂದ ಕೂಡಿದೆ. ಅವರಿಗೆ ಮುಕ್ತಿ ನೀಡುವುದಕ್ಕಾಗಿ ನಾನು ಅವರನ್ನು ಕೊಲೆ ಮಾಡುತ್ತಿದ್ದೆ. ನಾನು ಕೊಲೆ ಮಾಡಿದ್ದು ಹೆಚ್ಚಾಗಿ ಹೆಚ್ಚಾಗಿ ಟ್ರಕ್ ಚಾಲಕರು ಹಾಗೂ ಅವರ ಸಹಾಯಕನನ್ನೆ ಎಂದು ಆದೇಶ್ ಒಪ್ಪಿಕೊಂಡಿದ್ದಾನೆ.

    ಆದೇಶ್ ತನ್ನ ಗ್ಯಾಂಗ್ ಜೊತೆಗೂಡಿ ಟ್ರಕ್ ಚಾಲಕರನ್ನು ಲೂಟಿ ಮಾಡುತ್ತಿದ್ದ. ಲೂಟಿ ಮಾಡಿದ ಬಳಿಕ ಉದ್ದನೆಯ ಹಗ್ಗವನ್ನು ಚಾಲಕರ ಕುತ್ತಿಗೆಗೆ ಬಿಗಿದು ಕೊಲೆ ಮಾಡುತ್ತಿದ್ದ. ಅಷ್ಟೇ ಅಲ್ಲದೆ ಮೃತ ದೇಹದ ಬಟ್ಟೆ ಬಿಚ್ಚಿ, ಹೆಣದ ಗುರುತು ಸಿಗದಂತೆ ಮಾಡಿ, ಬೆಟ್ಟ ಪ್ರದೇಶದಲ್ಲಿ ಎಸೆಯುತ್ತಿದ್ದ. ಇಲ್ಲವೇ ಮಣ್ಣಿನಲ್ಲಿ ಹೂಳುತ್ತಿದ್ದ. ಕೆಲವೊಮ್ಮೆ ಕೊಲೆ ಮಾಡಲು ಚಾಲಕರಿಗೆ ವಿಷ ಕುಡಿಸುತ್ತಿದ್ದ ವಿಚಾರ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

    ಆದೇಶ್ ಚಿಕ್ಕಪ್ಪ ಅಶೋಕ್ ಖಾಮ್ರಾ ಕೂಡಾ ಸುಮಾರು 100 ಟ್ರಕ್ ಚಾಲಕರನ್ನು ಕೊಲೆ ಮಾಡಿದ್ದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿದ್ದಾನೆ. ಆತನ ಪ್ರೇರಣೆಯಿಂದಲೇ ಆದೇಶ್ ಈ ಕೃತ್ಯಕ್ಕೆ ಮುಂದಾಗಿರಬಹುದು ಎನ್ನುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv