Tag: ಟ್ಯಾಬ್ಲೊ

  • ಟ್ಯಾಬ್ಲೊ ವಿಚಾರದಲ್ಲಿ ದಕ್ಷಿಣ ಭಾರತಕ್ಕೆ ಅನ್ಯಾಯ – ಸಿಡಿದೆದ್ದ ರಾಜ್ಯಗಳು

    ಟ್ಯಾಬ್ಲೊ ವಿಚಾರದಲ್ಲಿ ದಕ್ಷಿಣ ಭಾರತಕ್ಕೆ ಅನ್ಯಾಯ – ಸಿಡಿದೆದ್ದ ರಾಜ್ಯಗಳು

    ನವದೆಹಲಿ : ಗಣರಾಜೋತ್ಸವ ಪರೇಡ್ ನಲ್ಲಿ ಪ್ರದರ್ಶನಗೊಳ್ಳಲಿರುವ ಟ್ಯಾಬ್ಲೊ ವಿಚಾರವಾಗಿ ಈಗ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಸಂಘರ್ಷ ಏರ್ಪಟ್ಟಿದೆ. ಕೇಂದ್ರ ಸರ್ಕಾರದ ವಿರುದ್ಧ ಬಹಿರಂಗವಾಗೇ ಕೇರಳ ಸಿಎಂ ಪಿಣರಾಯಿ ವಿಜಯನ್ ಮತ್ತು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ವಾಗ್ದಾಳಿ ನಡೆಸಿದ್ದಾರೆ.

    ಪ್ರತಿ ವರ್ಷದಂತೆ ಈ ವರ್ಷವೂ ಗಣರಾಜೋತ್ಸವ ಪರೇಡ್‌ನಲ್ಲಿ ಭಾಗಿಯಾಗಲು ರಾಜ್ಯಗಳು ತಮ್ಮ ಟ್ಯಾಬ್ಲೊ ವಿಷಯಗಳನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಟ್ಟಿವೆ. ನೇತಾಜಿ ಸುಭಾಷ್ ಚಂದ್ರ ಬೋಸ್‌ರವರ 125ನೇ ಜನ್ಮದಿನದ ಹಿನ್ನಲೆ ಪಶ್ಚಿಮ ಬಂಗಾಳ ಅವರ ಐಎನ್‌ಎ ವಿಷಯಾಧಾರಿತ ಟ್ಯಾಬ್ಲೊ‌ವನ್ನು, ಕೇರಳ ಸರ್ಕಾರ ಬ್ರಹ್ಮಶ್ರೀ ನಾರಾಯಣ ಗುರುಗಳ ವಿಷಯವನ್ನು ಅಂತಿಮಗೊಳಿಸಿ ಕೇಂದ್ರಕ್ಕೆ ಕಳುಹಿಸಿಕೊಟ್ಟಿತ್ತು.

    ಮೊದಲ ಹಂತದಲ್ಲಿ ಆಯ್ಕೆಯಾಗಿದ್ದ ಈ ವಿಷಯಗಳಿಗೆ ಏಕಾಏಕಿ ತಡೆ ನೀಡಲಾಗಿದೆ. ಈ ಟ್ಯಾಬ್ಲೊ‌ಗಳ ಪ್ರದರ್ಶನಕ್ಕೆ ಕೇಂದ್ರ ಸರ್ಕಾರ ನಿರಾಕರಿಸಿದೆ. ತನ್ನ ನಿರ್ಧಾರದ ಹಿಂದಿನ ಕಾರಣವೇನು ಎನ್ನುವುದನ್ನು ಈವರೆಗೂ ಸ್ಪಷ್ಟಪಡಿಸಿಲ್ಲ. ಇದರಿಂದ ಕೇರಳ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿಗಳು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. ತಮ್ಮ ಪತ್ರದಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಮಮತಾ, ಕೇಂದ್ರ ಸರ್ಕಾರದ ಈ ಮನೋಭಾವದಿಂದ ಬಂಗಾಳಿ ಜನರಿಗೆ ಅತೀವ ನೋವಾಗಿದೆ, ನೇತಾಜಿ ಅವರ ಟ್ಯಾಬ್ಲೋ ತಿರಸ್ಕರಿಸುವ ಮೂಲಕ ಕೇಂದ್ರ ಸರ್ಕಾರ ನೇತಾಜಿ ಅವರ ಹೋರಾಟವನ್ನು ಕಡೆಗಣಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:  ಮಾನ್ಯ ಡಿಕೆಶಿ ಅವರೇ, ನಿಮ್ಮ ಆರೋಗ್ಯ ಹೇಗಿದೆ?: ಬಿಜೆಪಿ

    ದಕ್ಷಿಣದ ರಾಜ್ಯಗಳಿಗೂ ಅನ್ಯಾಯ: ಈ ಬಾರಿ ಕೇಂದ್ರ ಸರ್ಕಾರ 12 ರಾಜ್ಯಗಳಿಗೆ ಮಾತ್ರ ಟ್ಯಾಬ್ಲೊ ಪ್ರದರ್ಶನಕ್ಕೆ ಅವಕಾಶ ನೀಡಿದೆ. ದಕ್ಷಿಣ ಭಾರತದಿಂದ ಕರ್ನಾಟಕ ಮಾತ್ರ ಟ್ಯಾಬ್ಲೊ ಪ್ರದರ್ಶನಕ್ಕೆ ಆಯ್ಕೆಯಾಗಿದೆ. ಮಹಾರಾಷ್ಟ್ರ, ತಮಿಳುನಾಡು, ಗೋವಾ, ಆಂಧ್ರಪ್ರದೇಶ ಕೂಡಾ ತಮ್ಮ ವಿಷಯಗಳ ಪ್ರಸ್ತಾಪವನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿದ್ದವು, ಆದರೆ ಈ ನಾಲ್ಕು ರಾಜ್ಯಗಳ ಪ್ರಸ್ತಾಪವನ್ನು ಕೇಂದ್ರ ತಿರಸ್ಕರಿಸಿದೆ‌. ಮಾಹಿತಿಗಳ ಪ್ರಕಾರ ಈ ಬಾರಿ ತೆಲಂಗಾಣ ಯಾವುದೇ ಪ್ರಸ್ತಾಪ ಕಳುಹಿಸಿಲ್ಲ.

    ತಮ್ಮ ಟ್ಯಾಬ್ಲೊ ವಿಷಯಗಳನ್ನು ನಿರಾಕರಿಸಿರುವುದಕ್ಕೆ ದಕ್ಷಿಣದಲ್ಲಿ ಕೇರಳ ಹೊರತುಪಡಿಸಿ ಮಹಾರಾಷ್ಟ್ರ, ತಮಿಳುನಾಡು, ಗೋವಾ, ಆಂಧ್ರಪ್ರದೇಶ ಯಾವುದೇ ಆಕ್ಷೇಪ ವ್ಯಕ್ತಪಡಿಸಿಲ್ಲ. ಆದರೆ ಕರ್ನಾಟಕ ಹೊರತುಪಡಿಸಿ ದಕ್ಷಿಣ ಭಾರತದ ಪ್ರಮುಖ ರಾಜ್ಯಗಳನ್ನು ಟ್ಯಾಬ್ಲೊ ಪ್ರದರ್ಶನದಿಂದ ಏಕಕಾಲದಲ್ಲಿ ಕೈಬಿಟ್ಟಿರುವುದಕ್ಕೆ ಜನ ಸಾಮಾನ್ಯರಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಕೇಂದ್ರ ಸರ್ಕಾರದ ನಡೆಯಿಂದ ಈ ಬಾರಿ ಗಣರಾಜೋತ್ಸವ ಪರೇಡ್ ನಲ್ಲಿ ದಕ್ಷಿಣ ಭಾರತದ ಅನುಪಸ್ಥಿತಿ ದೊಡ್ಡ ಪ್ರಮಾಣದಲ್ಲಿ ಕಾಣಲಿದೆ ಎಂದು ಸಮಾಜಿಕ ಜಾಲತಾಣಗಳಲ್ಲಿ ಜನರು ಬೇಸರ ವ್ಯಕ್ತಪಡಿಸಿದ್ದಾರೆ.

    ಕಾರಣ ನೀಡದ ಕೇಂದ್ರ: ಇನ್ನು ರಾಜ್ಯಗಳು ನೀಡಿದ ಟ್ಯಾಬ್ಲೊ‌ಗಳ ವಿಷಯಗಳನ್ನು ಯಾಕೆ ನಿರಾಕರಿಸಿದೆ ಎಂದು ಈವರೆಗೂ ಕೇಂದ್ರ ಸರ್ಕಾರ ಎಲ್ಲೂ ಹೇಳಿಲ್ಲ. ನಿಯಮಗಳ ಪ್ರಕಾರ ರಾಜ್ಯಗಳು ಮೂರು ವಿಷಯಗಳನ್ನು ಕೇಂದ್ರದ ಆಯ್ಕೆ ಸಮಿತಿಗೆ ಕಳುಹಿಸಿಕೊಡಲಾಗಿರುತ್ತದೆ. ಅಲ್ಲದೇ ಆ ವಿಷಯದ ಮಹತ್ವವನ್ನು ವಿವರಿಸಲಾಗಿರುತ್ತದೆ. ಒಂದು ವೇಳೆ ರಾಜ್ಯದ ಮೊದಲ ಆದ್ಯತೆಯ ವಿಷಯ ಕೇಂದ್ರದ ತಕರಾರುಗಳಿದ್ದಲ್ಲಿ ಎರಡು ಅಥಾವ ಮೂರನೇ ವಿಷಯವನ್ನು ಆಯ್ಕೆ ಮಾಡುವ ಅವಕಾಶಗಳಿರುತ್ತದೆ. ಇದನ್ನೂ ಓದಿ: ಒಬಿಸಿ ನಾಯಕರಿಂದ ಬಿಜೆಪಿಗೆ ರಾಜೀನಾಮೆ – ದಲಿತರ ಮನೆಯಲ್ಲಿ ಊಟ ಮಾಡಿದ ಯೋಗಿ

    ಆದರೆ ಕೇಂದ್ರ ಸರ್ಕಾರ ಮಾತ್ರ ಈ ನಿಯಮ ಪಾಲಿಸದೇ ಏಕಾಏಕಿ ಕರ್ನಾಟಕ ಹೊರತುಪಡಿಸಿ ದಕ್ಷಿಣ ಭಾರತದ ಎಲ್ಲ ರಾಜ್ಯಗಳ ಟ್ಯಾಬ್ಲೊಗಳ ವಿಷಯಗಳನ್ನು ನಿರಾಕರಿಸಿದೆ. ರಾಜ್ಯಗಳ ವಿಷಯಗಳನ್ನು ನಿರಾಕರಿಸಿದ್ದೇಕೆ? ಇದರ ಹಿಂದಿನ ಕಾರಣ ಏನು ಈವರೆಗೂ ತಿಳಿದು ಬಂದಿಲ್ಲ ಮತ್ತು ಕೇಂದ್ರ ಸರ್ಕಾರವೂ ಈವರೆಗೂ ಯಾವುದೇ ಸ್ಪಷ್ಟನೆ ನೀಡಿಲ್ಲ. ಇದನ್ನೂ ಓದಿ:  ಪಕ್ಷದಿಂದ ಸಚಿವನ ಉಚ್ಛಾಟಿಸಿದ ಬಿಜೆಪಿ – ಮತ್ತೆ ‘ಕೈ’ ಹಿಡೀತಾರಾ ಹರಕ್ ಸಿಂಗ್ ರಾವತ್?

    ದಕ್ಷಿಣ ಭಾರತ ಪ್ರತಿನಿಧಿಸಲಿರುವ ಕರ್ನಾಟಕ: ದಕ್ಷಿಣ ಭಾರತದಿಂದ ಕರ್ನಾಟಕ ಏಕೈಕ ಟ್ಯಾಬ್ಲೊ ಆಯ್ಕೆಯಾಗಿದ್ದು ರಾಜಪಥ್ ನಲ್ಲಿ ಇಡೀ ದಕ್ಷಿಣ ಭಾರತವನ್ನು ಕರ್ನಾಟಕ ಪ್ರತಿನಿಧಿಸಲಿದೆ. ಕರ್ನಾಟಕ ಪಾರಂಪರಿಕ ಕರಕುಶಲ ವಸ್ತುಗಳ ತೊಟ್ಟಿಲು ವಿಷಯ ಆಧಾರಿತ ಟ್ಯಾಬ್ಲೊ ಕರ್ನಾಟಕದಿಂದ ಆಯ್ಕೆಯಾಗಿದೆ. ಸತತವಾಗಿ 13 ನೇ ಬಾರಿ ಟ್ಯಾಬ್ಲೊ ಪ್ರದರ್ಶನಕ್ಕೆ ಅವಕಾಶ ಸಿಕ್ಕಿದೆ.

  • 70ನೇ ಗಣರಾಜ್ಯೋತ್ಸವ- ದೆಹಲಿಯ ರಾಜ್‍ಪಥದಲ್ಲಿ ಮೊಳಗಿತು ಕನ್ನಡದ ಕಹಳೆ

    70ನೇ ಗಣರಾಜ್ಯೋತ್ಸವ- ದೆಹಲಿಯ ರಾಜ್‍ಪಥದಲ್ಲಿ ಮೊಳಗಿತು ಕನ್ನಡದ ಕಹಳೆ

    – ಕರ್ನಾಟಕ ಸ್ತಬ್ಧಚಿತ್ರದ ವಿಶೇಷತೆಯೇನು..?

    ನವದೆಹಲಿ: ಇಲ್ಲಿನ ರಾಜ್‍ಪಥ್ ರಸ್ತೆಯಲ್ಲಿ ನಡೆದ 70ನೇ ಗಣರಾಜ್ಯೋತ್ಸವ ಆಚರಣೆಯ ಅಂಗವಾಗಿ ಕರ್ನಾಟಕದಿಂದ ಈ ಬಾರಿ ಗಾಂಧೀಜಿ ಹಾಗೂ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಸ್ತಬ್ಧ ಚಿತ್ರವನ್ನು ಪ್ರದರ್ಶಿಸಲಾಯಿತು. ಉದಯವಾಯಿತು ನಮ್ಮ ಚೆಲುವ ಕನ್ನಡ ನಾಡು ಹಾಡಿನ ಮೂಲಕ ಎಲ್ಲರ ಗಮನಸೆಳೆಯಿತು.

    ಮಹಾತ್ಮ ಗಾಂಧೀಜಿ ಅವರ 150ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಈ ಬಾರಿ 16 ರಾಜ್ಯಗಳ ಮತ್ತು 6 ಇಲಾಖೆಗಳ ಒಟ್ಟು 22 ಸ್ತಬ್ಧ ಚಿತ್ರಗಳು ಪ್ರದರ್ಶನವಾಗುತ್ತಿದೆ. ಸ್ತಬ್ಧ ಚಿತ್ರಗಳಲ್ಲಿ ಗಾಂಧೀಜಿ ಅವರಿಗೆ ವಿಶೇಷ ಗೌರವ ಸಲ್ಲಿಸಲಾಗುತ್ತಿದೆ. ಹಾಗೆಯೇ ಕರ್ನಾಟಕದಿಂದ ಈ ಬಾರಿ ಬೆಳಗಾವಿಯಲ್ಲಿ ನಡೆದ ಅಧಿವೇಶನದ ಬಗ್ಗೆ ಸ್ತಬ್ಧಚಿತ್ರ ಪ್ರದರ್ಶಿಸಿದೆ.

    ಸ್ತಬ್ಧಚಿತ್ರದ ವಿಶೇಷತೆಯೇನು..?
    ಭಾರತ ರಾಷ್ಟ್ರೀಯ ಕಾಂಗ್ರೆಸ್‍ನ ಐತಿಹಾಸಿಕ ಅಧಿವೇಶನ ನಡೆದ ಆವರಣಕ್ಕೆ ವಿಜಯನಗರ ಎಂದು ನಾಮಕರಣ ಮಾಡಲಾಗಿತ್ತು. ಅಲ್ಲದೇ ಅಧಿವೇಶನ ನಡೆದ ಸ್ಥಳದ ಪ್ರವೇಶ ದ್ವಾರವನ್ನು ಹಂಪೆಯ ವಿರೂಪಾಕ್ಷ ದೇಗುಲದ ಗೋಪುರದ ವಿನ್ಯಾಸದಲ್ಲಿ ಅಲಂಕರಿಸಲಾಗಿತ್ತು. ಅಧಿವೇಶನದಲ್ಲಿ ಭಾಗವಹಿಸಲು ಆಗಮಿಸಿದ್ದ ಪ್ರತಿನಿಧಿಗಳು ಮತ್ತು ಆಹ್ವಾನಿತರು ತಂಗಲು ಕುಟೀರಗಳನ್ನು ಬಿದಿರು ಮತ್ತು ಖಾದಿ ವಸ್ತ್ರಗಳಿಂದ ರೂಪಿಸಲಾಗಿತ್ತು. ಕುಡಿಯುವ ನೀರು ಸರಬರಾಜಿಗಾಗಿ ಹೊಸ ಬಾವಿಯೊಂದನ್ನು ನಿರ್ಮಿಸಿದ್ದು, ಅದಕ್ಕೆ ಪಂಪಾ ಸರೋವರ ಎಂದು ಹೆಸರಿಡಲಾಗಿತ್ತು. ಪ್ರತಿನಿಧಿಗಳ ಊಟೋಪಚಾರದ ವ್ಯವಸ್ಥೆಗೆ ಬೃಹತ್ ಪಾಕಶಾಲೆ ನಿರ್ಮಿಸಲಾಗಿತ್ತು. ಸಮಾವೇಶದ ಇಡೀ ಪ್ರದೇಶದಲ್ಲಿ ಬೆಳಕಿನ ವ್ಯವಸ್ಥೆ ಮಾಡಲು ಮುಂಬೈನಿಂದ ಸಾವಿರಾರು ಸಂಖ್ಯೆಯಲ್ಲಿ ಲಾಟೀನ್‍ಗಳು ಮತ್ತು ಪೆಟ್ರೋಮ್ಯಾಕ್ಸ್ ದೀಪಗಳನ್ನು ತರಿಸಲಾಗಿತ್ತು. ನಾ. ಸೂ. ಹರ್ಡಿಕರ್ ಅವರು ತರಬೇತಿಗೊಳಿಸಿದ್ದ ಹಿಂದೂಸ್ಥಾನ್ ಸೇವಾ ದಳದ ಸ್ವಯಂ ಸೇವಕರು, ಪ್ರತಿನಿಧಿಗಳು ಮತ್ತು ಆಹ್ವಾನಿತರ ಸೇವೆಯ ಮೇಲುಸ್ತುವಾರಿ ವಹಿಸಿದ್ದರು.

    ಮಹಾತ್ಮಾ ಗಾಂಧೀಜಿಯವರು ಮಹಾಧಿವೇಶನಕ್ಕೆ ಆಗಮಿಸಿ ಅಲ್ಲಿ ಸಹೋದರರು, ಸರೋಜಿನಿ ನಾಯ್ಡು, ಜವಾಹರಲಾಲ್ ನೆಹರು, ಸರದಾರ್ ವಲ್ಲಭಾಬಾಯ್ ಪಟೇಲ್ ಮತ್ತಿತರ ಗಣ್ಯನಾಯಕರು ಅವರೊಡನೆ ಇದ್ದರು. ಗಂಗಾಧರ ದೇಶಪಾಂಡೆ ಅವರ ಅಧ್ಯಕ್ಷತೆಯ ಸ್ವಾಗತ ಸಮಿತಿ ಜೊತೆಗೆ ಅಪಾರ ಸಂಖ್ಯೆಯಲ್ಲಿದ್ದ ಗಾಂಧೀ ಅಭಿಮಾನಿಗಳು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಗಣ್ಯರ ಸಮೂಹವನ್ನು ಆತ್ಮೀಯತೆಯಿಂದ ಬರ ಮಾಡಿಕೊಂಡು ಮೆರವಣಿಗೆ ಮೂಲಕ ಕಾಂಗ್ರೆಸ್ ಶಿಬಿರಕ್ಕಿ ಕರೆದೊಯ್ದರು. ಅಧಿವೇಶನದ ಸಂದರ್ಭದಲ್ಲಿ ಕರ್ನಾಟಕ ಮತ್ತು ಕನ್ನಡ ಭಾಷೆಯ ಇತಿಹಾಸ ಮತ್ತು ಸಂಸ್ಕೃತಿಯನ್ನು ಬಿಂಬಿಸಲು ಸರ್ವ ಪ್ರಯತ್ನಗಳನ್ನು ಮಾಡಲಾಗಿತ್ತು. ಸಂಗೀತ ದಿಗ್ಗಜ ವೀಣೆ ಶೇಷಣ್ಣನವರು ವೀಣಾವಾದನ ಮತ್ತು ಹುಯಿಲಗೋಳ ನಾರಾಯಣರಾವ್ ಅವರು ಕನ್ನಡ ರಾಜ್ಯೋದಯದ ಕುರಿತು ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಎಂಬ ಗೀತೆಯನ್ನು ಹಾಡುವ ಮೂಲಕ ಮಹಾಧಿವೇಶನಕ್ಕೆ ವಿಶೇಷ ಮೆರುಗನ್ನು ನೀಡಿದ್ದರು.

    ಬೆಳಗಾವಿ ಮಹಾಧಿವೇಶನದ ವಿಶೇಷವೆಂದರೆ ಸರಿಯಾಗಿ ಮಧ್ಯಾಹ್ನ 3.00ಗಂಟೆಗೆ ಎಲ್ಲ ಕಲಾಪಗಳು ಪ್ರಾರಂಭವಾದದ್ದು, ಮೊಟ್ಟ ಮೊದಲ ಬಾರಿಗೆ ಧ್ವಜಾರೋಹಣದ ಪದ್ಧತಿಯನ್ನು ಪ್ರಾರಂಭಿಸಿಲಾಗಿತ್ತು. ಅಲ್ಲದೇ ಬಿಳಿ, ಹಸಿರು ಮತ್ತು ಕೆಂಪು ಬಣ್ಣದ ಜೊತೆಗೆ ಮಧ್ಯಭಾಗದಲ್ಲಿ ಚರಕದ ಚಿತ್ರವುಳ್ಳ ತ್ರಿವರ್ಣ ಧ್ವಜವನ್ನು ಮೊದಲ ಬಾರಿಗೆ ಹಾರಿಸಲಾಯಿತು. ವಂದೇ ಮಾತರಂ ಗೀತೆಯನ್ನು ಮೊದಲ ಬಾರಿಗೆ ಪಂಡಿತ್ ವಿಷ್ಣು ದಿಗಂಬರ್ ಪಾಲುಸ್ಕರ್ ಮತ್ತು ಅವರ ಶಿಷ್ಯ ಗಣ ವಿಶಿಷ್ಟ ರಾಗದೊಂದಿಗೆ ನುಡಿಸಿದ್ದು ಮತ್ತೊಂದು ವಿಶೇಷವಾಗಿದೆ. ಇದಕ್ಕೂ ಮೊದಲು ಗುರುದೇವ ರವೀಂದ್ರ ನಾಥ್ ಠಾಗೂರ್ ಅವರು ವಂದೇ ಮಾತರಂ ಗೀತೆಯನ್ನು ಹಾಡಿದ್ದು ಉಲ್ಲೇಖಾರ್ಹ.

    39ನೇ ಕಾಂಗ್ರೆಸ್ ಮಹಾಧಿವೇಶನದ ಅಧ್ಯಕ್ಷ ಸ್ಥಾನದಿಂದ ಮಹಾತ್ಮ ಗಾಂಧೀಜಿಯವರು ಹಲವು ಕ್ರಾಂತಿಖಾರಿ ಮತ್ತು ವಿನೂತನ ವಿಷಯಗಳು ಪ್ರತಿಪಾದನೆ ಮಾಡಿದ್ದರು. ಹಿಂದೂ-ಮುಸ್ಲಿಂ ಏಕತೆ, ವಿದೇಶಿ ವಸ್ತುಗಳು ಬಹಿಷ್ಕಾರ, ಚರಕ ಮತ್ತು ಖಾದಿ ನೂಲುವಿಕೆಗೆ ಪ್ರೋತ್ಸಾಹ, ಅಸ್ಪೃಶ್ಯತೆ ನಿವಾರಣೆಗೆ ಶ್ರಮಿಸುವುದು ಇತ್ಯಾದಿ ವಿಚಾರಗಳ ಬಗ್ಗೆ ಗಾಂಧೀಜಿಯವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಬಲವಾದ ಪ್ರತಿಪಾದನೆ ಮಾಡಿದ್ದರು.

    ಮಹಾತ್ಮಾ ಗಾಂಧೀಜಿಯವರ ರಚನಾತ್ಮಕ ಕಾರ್ಯಕ್ರಮಗಳಿಗೆ ಕರ್ನಾಟಕ ಅತ್ಯಂತ ಸಕಾರಾತ್ಮಕವಾಗಿ ಸ್ಪಂದಿಸಿತು. ಖಾದಿ ಪ್ರಚಾರ ಮತ್ತು ಗ್ರಾಮೋದ್ಯೋಗದ ಬಗ್ಗೆ ಕರ್ನಾಟಕದ ಹಲವು ಸಂಘ ಸಂಸ್ಥೆಗಳು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡವು. ಹರಿಜನೋದ್ದಾರಕ್ಕಾಗಿ ರಾಜ್ಯದ ವಿವಿಧ ಸ್ಥಳಗಳಲ್ಲಿ ಕಲ್ಯಾಣ ಕೇಂದ್ರಗಳನ್ನು ಪ್ರಾರಂಭಿಸಲಾಯಿತು. 1922 ರಿಂದ 25ರ ನಡುವೆ ರಾಷ್ಟ್ರೀಯ ನೇತಾರರುಗಳಾದ ಸಿ. ರಾಜಗೋಪಾಲಚಾರಿ, ಚಿತ್ತರಂಜನ್ ದಾಸ್, ಲಾಲಾ ಲಜಪತ್ ರಾಯ್, ಎಸ್. ಶ್ರೀನಿವಾಸ್ ಐಯ್ಯಂಗಾರ್, ಪಟ್ಟಾಭಿ ಸೀತಾರಾಮಯ್ಯ, ಜಮ್ನಾದಾಸ ಮೆಹೆತಾ, ಕೊಂಡ ವೆಂಕಟ್ಟಪ್ಪಯ್ಯ ಮತ್ತಿತರರು ಕರ್ನಾಟಕದ ಮೂಲೆ-ಮೂಲೆಗಳಿಗೆ ಭೇಟಿ ನೀಡಿ ರಾಷ್ಟ್ರೀಯ ಜಾಗೃತಿ ಪ್ರಜ್ಞೆಯನ್ನು ಜೀವಂತವಿರಿಸಿದರು. ಕರ್ನಾಟಕದ ನಾಯಕರುಗಳಾದ ನಾ.ಸೂ ಹರ್ಡೀಕರ್, ಶ್ರೀನಿವಾಸ್ ರಾವ್ ಕೌಜಲಗಿ, ಗಂಗಾಧರ ರಾವ್ ದೇಶಪಾಂಡೆ, ಕಡಪ ರಾಘವೇಂದ್ರ ರಾವ್, ಆರ್. ಆರ್ ದಿವಾಕರ್, ಕೃಷ್ಣ ರಾವ್ ಮುದವೇಡಕರ್ ಮತ್ತಿತರರು ಸ್ವಾತಂತ್ರ್ಯ ಸಂಗ್ರಾಮದ ಜ್ವಾಲೆ ಪ್ರಜ್ವಲಿಸಲು ಶ್ರಮಿಸಿದ್ದರು.

    https://www.youtube.com/watch?v=Fn2jwU5ayD4

    https://www.youtube.com/watch?v=QmK1zbMMIv4

    https://www.youtube.com/watch?v=QxzTqdy-KS4

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv