Tag: ಟೂಲ್ ಕಿಟ್

  • ಭಾರತದ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಚು?

    ಭಾರತದ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಚು?

    – ಪ್ರವಾದಿ ವಿರುದ್ಧ ಹೇಳಿಕೆ ಖಂಡಿಸಿ ಹಿಂಸಾಚಾರ
    – 10 ರಾಜ್ಯಗಳಲ್ಲಿ ಏಕಕಾಲದಲ್ಲಿ ಪ್ರತಿಭಟನೆ
    – ಪಾಕಿಸ್ತಾನ, ಬಾಂಗ್ಲಾದೇಶದಲ್ಲೂ ಪ್ರತಿಭಟನೆ

    ನವದೆಹಲಿ: ಪ್ರವಾದಿ ವಿರುದ್ಧದ ಹೇಳಿಕೆ ಖಂಡಿಸಿ ಭಾರತದಲ್ಲಿ ಶುಕ್ರವಾರ ನಡೆದ ಪ್ರತಿಭಟನೆಗಳು, ಹಿಂಸಾಚಾರಗಳು ಸಂಪೂರ್ಣ ವ್ಯವಸ್ಥಿತವಾದ ಟೂಲ್ ಕಿಟ್ ಭಾಗ ಮತ್ತು ಅಂತಾರಾಷ್ಟ್ರೀಯ ಮಟ್ಟದ ಸಂಚು ಎಂಬ ಗಂಭೀರ ಆರೋಪ ಕೇಳಿ ಬಂದಿದೆ.

    ದೇಶದ 10 ರಾಜ್ಯಗಳಲ್ಲಿ ಏಕಕಾಲದಲ್ಲಿ ನಡೆದ ಪ್ರತಿಭಟನೆಗಳು ಹಿಂಸಾತ್ಮಕ ರೂಪ ಪಡೆದುಕೊಂಡಿದ್ದವು. ಎಲ್ಲ ಪ್ರತಿಭಟನೆಗಳ ನಡುವೆ ಸಾಮ್ಯತೆ ಕೂಡ ಕಂಡು ಬಂದಿದೆ. ಸಾಮೂಹಿಕ ಪ್ರಾರ್ಥನೆ ಬಳಿಕ ಜಮ್ಮು ಕಾಶ್ಮೀರದಿಂದ ಶುರುವಾದ ಪ್ರತಿಭಟನೆ ದೆಹಲಿ ಮೂಲಕ ದಕ್ಷಿಣ ಭಾರತದವರೆಗೂ ಹಬ್ಬಿತ್ತು.

    ಉತ್ತರ ಪ್ರದೇಶ, ಜಮ್ಮುಕಾಶ್ಮೀರ, ಜಾರ್ಖಂಡ್, ತೆಲಂಗಾಣ, ಪಶ್ಚಿಮ ಬಂಗಾಳದಲ್ಲಿ ನಡೆದ ಎಲ್ಲ ಪ್ರತಿಭಟನೆಗಳಲ್ಲಿ ಕಲ್ಲು ತೂರಾಟ ಮತ್ತು ಬೆಂಕಿ ಹಚ್ಚಿ ಶಾಂತಿ ಕದಡುವ ಪ್ರಯತ್ನ ಮಾಡಲಾಗಿದೆ. ಅಲ್ಲದೇ ಸಾರ್ವಜನಿಕರ ಆಸ್ತಿಪಾಸ್ತಿಗೆ ಹಾನಿ ಮಾಡುವ ಯತ್ನವೂ ಆಗಿದೆ. ಇದನ್ನೂ ಓದಿ: ಹಿಜಬ್ ಸಂಘರ್ಷ ಮಧ್ಯೆ ಸಾವರ್ಕರ್ ಫೋಟೋ ವಿವಾದ – ವಿದ್ಯಾರ್ಥಿಗಳ ಮೇಲೆ ಹಲ್ಲೆ

    ಭಾರತದಲ್ಲಿ ಪ್ರತಿಭಟನೆಗಳು ಭುಗಿಲೆದ್ದ ಸಂದರ್ಭದಲ್ಲಿಯೇ ನೆರೆಯ ಪಾಕಿಸ್ತಾನ ಮತ್ತು ಬಾಂಗ್ಲಾದಲ್ಲಿಯೂ ಭಾರೀ ಪ್ರತಿಭಟನೆಗಳು ನಡೆದಿವೆ. ದೇಶದ ಹಲವೆಡೆ ಪರಿಸ್ಥಿತಿ ಇನ್ನೂ ಬೂದಿಮುಚ್ಚಿದ ಕೆಂಡದಂತೆ ಇದೆ. ಅದರಲ್ಲೂ ಬಂಗಾಳದಲ್ಲಿ ಉದ್ವಿಗ್ನ ಪರಿಸ್ಥಿತಿ ಏರ್ಪಟ್ಟಿದೆ. ಹೌರಾದಲ್ಲಿ ಉದ್ರಿಕ್ತರು ಬಿಜೆಪಿ ಕಚೇರಿಗೆ ಬೆಂಕಿ ಹಚ್ಚಿ ದಾಂಧಲೆ ಎಬ್ಬಿಸಿದ್ದಾರೆ. ರಸ್ತೆ ಮತ್ತು ರೈಲು ಮಾರ್ಗಗಳನ್ನು ನಿರ್ಬಂಧಿಸಿದ್ರು. ಪರಿಣಾಮ ಆಗ್ನೇಯ ರೈಲ್ವೇಯ ಹಲವು ರೈಲು ಸೇವೆ ಸಂಪೂೂರ್ಣವಾಗಿ ರದ್ದಾಗಿವೆ. ಉತ್ತರ ಭಾರತದ ಹಲವು ನಗರಗಳಲ್ಲಿ ನಿಷೇಧಾಜ್ಞೆ ಮುಂದುವರೆಸಲಾಗಿದೆ.


    ಉತ್ತರಪ್ರದೇಶದಲ್ಲಿ 109 ಗಲಭೆಕೋರರನ್ನು ಬಂಧಿಸಲಾಗಿದೆ. ದೆಹಲಿ ಮತ್ತು ತೆಲಂಗಾಣದಲ್ಲಿ ಪ್ರತಿಭಟನೆ ಸಂಬಂಧ ಎಂಐಎಂ ಕಾರ್ಯಕರ್ತರನ್ನು, ಇನ್ನೂ ಕೆಲವು ಕಡೆ ಸಿಎಫ್‍ಐ ಸದಸ್ಯರನ್ನು ಬಂಧಿಸಲಾಗಿದೆ. ಕೇಂದ್ರ ಸರ್ಕಾರ ಅಲರ್ಟ್ ಆಗಿದ್ದು, ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿದೆ.

    ಪ್ರವಾದಿ ವಿವಾದ ತೀವ್ರಗೊಳ್ಳಬಹುದು ಮತ್ತಷ್ಟು ಗಲಭೆ, ದೊಂಬಿಗಳು, ಶಾಂತಿ ಕದಡುವ ಕೆಲಸ ಆಗಬಹುದು. ಹೀಗಾಗಿ ಇದನ್ನು ತಡೆಯಲು ರಾಜ್ಯಗಳು ಸನ್ನದ್ಧರಾಗಬೇಕು. ಅಗತ್ಯ ಬಿದ್ದಲ್ಲಿ ಅರೆಸೇನಾ ತುಕಡಿಗಳನ್ನು ಬಳಸಿಕೊಳ್ಳಿ. ಉದ್ರೇಕಕಾರಿ ಭಾಷಣ ಮಾಡುವ ವ್ಯಕ್ತಿಗಳು, ಸೋಶಿಯಲ್ ಮಿಡಿಯಾ ಪೋಸ್ಟ್‌ಗಳ ಮೇಲೆ ನಿಗಾ ಇಡಿ ಎಂದು ಸೂಚಿಸಿದೆ. ಸಮಾಜದ ಶಾಂತಿ ಕದಡುವವರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಿ ಎಂದು ಸೂಚಿಸಿದೆ.

  • ಟೂಲ್‍ಕಿಟ್ ರಚಿಸಿ ಕಾಂಗ್ರೆಸ್‍ನಿಂದ ಭಾರತದ ವಿರುದ್ಧ ವಿಶ್ವಮಟ್ಟದಲ್ಲಿ ಅಪಪ್ರಚಾರ – ಬಿಜೆಪಿ

    ಟೂಲ್‍ಕಿಟ್ ರಚಿಸಿ ಕಾಂಗ್ರೆಸ್‍ನಿಂದ ಭಾರತದ ವಿರುದ್ಧ ವಿಶ್ವಮಟ್ಟದಲ್ಲಿ ಅಪಪ್ರಚಾರ – ಬಿಜೆಪಿ

    – ಸಾಮಾಜಿಕ ಜಾಲತಾಣದಲ್ಲಿ ಪರ, ವಿರೋಧ ಚರ್ಚೆ
    – ಇದು ಬಿಜೆಪಿಯವರೇ ಸೃಷ್ಟಿಸಿದ ಟೂಲ್‍ಕಿಟ್ : ಕಾಂಗ್ರೆಸ್

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಕೊರೊನಾ ವಿಚಾರದಲ್ಲಿ ಕಾಂಗ್ರೆಸ್ ಟೂಲ್ ಕಿಟ್ ರಚಿಸಿ ವಿಶ್ವಮಟ್ಟದಲ್ಲಿ ಅಪಪ್ರಚಾರ ಮಾಡುತ್ತಿದೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ.

    ಕೊರೊನಾ ಸಂದರ್ಭದಲ್ಲಿ ಪಕ್ಷಬೇಧ ಮರೆತು ದೇಶದ ಜೊತೆ ಇರಬೇಕಾದ ಕಾಂಗ್ರೆಸ್ ರಾಜಕೀಯ ಲಾಭಕ್ಕಾಗಿ ಟೂಲ್ ಕಿಟ್ ರಚಿಸಿದೆ ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಗಂಭೀರ ಆರೋಪ ಮಾಡಿದ್ದಾರೆ.

    ಕೊರೊನಾ ಮೊದಲ ಅಲೆಯ ಸಂದರ್ಭದಲ್ಲಿ ಲಾಕ್‍ಡೌನ್ ಯಶಸ್ವಿಯಾಗಿದ್ದರಿಂದ ಕಾಂಗ್ರೆಸ್ ನಾಯಕರಿಗೆ ಮೋದಿ ವಿರುದ್ಧ ಅಪಪ್ರಚಾರ ಮಾಡಲು ಸಾಧ್ಯವಾಗಲಿಲ್ಲ. ಹೀಗಾಗಿ ಎರಡನೇ ಅಲೆಯ ಆರಂಭದಲ್ಲಿ ಲಸಿಕೆಯ ಬಗ್ಗೆ ಅಪಪ್ರಚಾರ ಮಾಡಿ ಜನರಲ್ಲಿ ಭಯ ಮೂಡಿಸಿದರು. ಇದರಿಂದಾಗಿ ಲಸಿಕೆ ಪಡೆದುಕೊಳ್ಳಲು ಜನ ಹಿಂದೇಟು ಹಾಕಿದರು ಎಂದು ಬಿಜೆಪಿ ಆರೋಪಿಸಿದೆ.

    ಸಾಮಾಜಿಕ ಜಾಲತಾಣದಲ್ಲಿ ಟೂಲ್ ಕಿಟ್ ವಿಚಾರ ಈಗ ಟ್ರೆಂಡಿಂಗ್ ಟಾಪಿಕ್ ಆಗಿದ್ದು ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಆರೋಪ ಪ್ರತ್ಯರೋಪ ಮಾಡುತ್ತಿದ್ದಾರೆ.

    ಬಿಜೆಪಿ ಆರೋಪ ಏನು? ಟೂಲ್ ಕಿಟ್‍ನಲ್ಲಿ ಏನಿದೆ?
    ಕೋವಿಡ್ ವೈರಸ್‍ನ ಹೊಸ ರೂಪಾಂತರವನ್ನು ವಿಶ್ವ ಆರೋಗ್ಯ ಸಂಸ್ಥೆ ಹೇಳದೇ ಇದ್ದರೂ ‘ಭಾರತದ ತಳಿ’ ಅಥವಾ ಮೋದಿ ತಳಿ’ ಎನ್ನುವಂತೆ ಪ್ರಚಾರ ಮಾಡಬೇಕು. ಪ್ರಧಾನಿಯವರ ಖ್ಯಾತಿಗೆ ಧಕ್ಕೆ ತರಬೇಕು ಮತ್ತು ಜನಪ್ರಿಯತೆಯನ್ನು ಕುಗ್ಗಿಸಲು ಸಾಮಾಜಿಕ ಜಾಲತಾಣವನ್ನು ಬಳಸಬೇಕು.

    ಭಾರತದಲ್ಲಿರುವ ವಿದೇಶಿ ಪತ್ರಕರ್ತರು ಮೋದಿ ಮತ್ತು ಅವರ ಕೆಟ್ಟ ನಿರ್ವಹಣೆಯ ಬಗ್ಗೆ ವರದಿ ಮಾಡುವಂತೆ ನೋಡಿಕೊಳ್ಳಬೇಕು. ಪರಿಚಯದಲ್ಲಿರುವ ಆಸ್ಪತ್ರೆಯಲ್ಲಿ ಬೆಡ್ ಬುಕ್ ಮಾಡಬೇಕು. ಈ ಮೂಲಕ ಕೃತಕ ಅಭಾವ ಸೃಷ್ಟಿಸಿ ಬೆಡ್ ಕೊರತೆಯಾಗುವಂತೆ ಮಾಡಬೇಕು.

    ಕೋವಿಡ್ ಸಾವು ಮತ್ತು ಶವಸಂಸ್ಕಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ವಿದೇಶಿ ಮಾಧ್ಯಮಗಳಲ್ಲಿ ಬಳಕೆಯಾಗಿರುವ ಚಿತ್ರಗಳನ್ನು ಬಳಸಬೇಕು. ಈ ರೀತಿಯ ಚಿತ್ರಗಳು ಸ್ಥಳೀಯ ಪತ್ರಕರ್ತರಿಗೆ ಲಭ್ಯವಾಗುವಂತೆ ನೋಡಿಕೊಳ್ಳಬೇಕು.

    ಕಾಂಗ್ರೆಸ್ ತಿರುಗೇಟು:
    ಬಿಜೆಪಿ ಆರೋಪಕ್ಕೆ ಕಾಂಗ್ರೆಸ್ ತಿರುಗೇಟು ನೀಡಿದ್ದು ಇದು ಬಿಜೆಪಿಯವರೇ ಸೃಷ್ಟಿಸಿದ ಟೂಲ್ ಕಿಟ್. ಕೊರೊನಾ ನಿಯಂತ್ರಣ ಮಾಡಲು ವಿಫಲವಾದ ಕೇಂದ್ರ ಸರ್ಕಾರ ನಕಲಿ ಟೂಲ್ ಕಿಟ್ ರಚಿಸಿದೆ. ಸರ್ಕಾರದ ವೈಫಲ್ಯವನ್ನು ಪ್ರಶ್ನಿಸಿದ್ದಕ್ಕೆ ನಮ್ಮ ವಿರುದ್ಧ ಈ ಸುಳ್ಳು ಆರೋಪ ಮಾಡಿದೆ ಎಂದು ತಿರುಗೇಟು ನೀಡಿದೆ.

    ಈ ವಿಚಾರವನ್ನು ಗಂಭೀರವಾಗಿ ಸ್ವೀಕರಿಸಿದ ಕಾಂಗ್ರೆಸ್ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ವಕ್ತಾರ ಸಂಬಿತ್ ಪಾತ್ರ, ಕೇಂದ್ರ ಸಚಿವೆ ಸ್ಮೃತಿ  ಇರಾನಿ, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ವಿರುದ್ಧ ದೆಹಲಿ ಪೊಲೀಸ್ ಆಯುಕ್ತರಿಗೆ ದೂರು ನೀಡಿದೆ.

  • ಟೂಲ್‍ಕಿಟ್ ಕೇಸ್- ಬೆಂಗಳೂರಿನ ದಿಶಾ ರವಿಗೆ ಜಾಮೀನು

    ಟೂಲ್‍ಕಿಟ್ ಕೇಸ್- ಬೆಂಗಳೂರಿನ ದಿಶಾ ರವಿಗೆ ಜಾಮೀನು

    ನವದೆಹಲಿ: ಟೂಲ್‍ಕಿಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿಸರ ಹೋರಾಟಗಾರ್ತಿ ಬೆಂಗಳೂರಿನ ದಿಶಾ ರವಿಗೆ ದೆಹಲಿಯ ಪಟಿಯಾಲಾ ಹೌಸ್ ಕೋರ್ಟ್ ಜಾಮೀನು ನೀಡಿದೆ.

    ಇಂದು ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಜಾಮೀನು ನೀಡಿದೆ. ಹೆಚ್ಚುವರಿ ಸೆಶನ್ ಕೋರ್ಟ್ ಜಡ್ಜ್ ಧರ್ಮೇಂದ್ರ ರಾಣಾ ಅವರು ಜಾಮೀನು ನೀಡಿದ್ದು, ಇಬ್ಬರು ಶ್ಯೂರಿಟಿ ನೀಡಬೇಕು ಮತ್ತು 1 ಲಕ್ಷ ರೂ. ಬಾಂಡ್ ಪಾವತಿಸಬೇಕು ಎಂದು ಷರತ್ತು ವಿಧಿಸಿ ಜಾಮೀನು ಮಂಜೂರು ಮಾಡಿದ್ದಾರೆ.

    ಸ್ವಿಡನ್ ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್‍ಬರ್ಗ್ ಟೂಲ್ ಕಿಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ದಿಶಾ ರವಿಯನ್ನ ದೆಹಲಿ ಪೊಲೀಸರು ಬಂಧಿಸಿದ್ದರು. ಬಳಿಕ ನ್ಯಾಯಾಲಯ ಬಂಧಿತ ಆರೋಪಿಯನ್ನು ಐದು ದಿನ ಪೊಲೀಸರ ವಶಕ್ಕೆ ನೀಡಿತ್ತು. ಇದೀಗ ಪೊಲೀಸ್ ಕಸ್ಟಡಿ ಅವಧಿ ಮುಗಿದಿದ್ದರಿಂದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಜಾಮೀನು ನೀಡಿದೆ.

    21 ವರ್ಷದ ದಿಶಾ ರವಿ ಓರ್ವ ಪರಿಸರ ಹೋರಾಟಗಾರ್ತಿಯಾಗಿದ್ದು, ಭಾರತದಲ್ಲಿ ಫ್ರೈಡೆ ಫಾರ್ ಫ್ಯೂಚರ್ ಹೆಸರಿನ ಸರ್ಕಾರೇತರ ಸಂಸ್ಥೆಯನ್ನು ಸ್ಥಾಪಿಸಿದ್ದರು. ದಿಶಾ ರವಿ ತಂದೆ ಮೈಸೂರಿನಲ್ಲಿ ಅಥ್ಲೆಟಿಕ್ಸ್ ಕೋಚ್ ಆಗಿದ್ದು ತಾಯಿ ಗೃಹಿಣಿಯಾಗಿದ್ದಾರೆ. ಈ ಟ್ವೀಟ್ ಮಾಡಿ ಬೆಂಬಲ ನೀಡಲು ಟೂಲ್ ಕಿಟ್ ಮುಖಾಂತರ ಹಣ ಪಡೆದ ಆರೋಪ ದಿಶಾ ರವಿ ಮೇಲಿದೆ.

    ದೇಶದಲ್ಲಿ ನಡೆಯುತ್ತಿರುವ ಕೃಷಿ ಆಂದೋಲನವನ್ನು ಬೆಂಬಲಿಸಿ ಗ್ರೇಟಾ ಥನ್‍ಬರ್ಗ್ ಇತೀಚೆಗೆ ಟ್ವೀಟ್ ಮಾಡಿದ್ದರು. ಇದರ ಜೊತೆ ಇನ್ನೊಂದು ಟ್ವೀಟ್ ಮಾಡಿ ಒಂದು ಡಾಕ್ಯುಮೆಂಟ್ ರಿಲೀಸ್ ಮಾಡಿದ್ದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ವಿರುದ್ಧ ಹೇಗೆ ಚಳವಳಿ ನಡೆಸಬೇಕು ಎಂಬ ಕಾರ್ಯಯೋಜನೆ ಟೂಲ್ ಕಿಟ್ ನಲ್ಲಿತ್ತು. ಆ ಟ್ವೀಟ್ ಭಾರತದಲ್ಲಿನ ಕೃಷಿ ಚಳವಳಿಯಲ್ಲಿ ವಿದೇಶಿ ಶಕ್ತಿಗಳ ಕೈವಾಡವನ್ನು ಬಯಲಿಗೆಳೆದಿದೆ ಎಂದು ಬಿಜೆಪಿ ಆಪಾದಿಸಿತ್ತು. ಈ ಆರೋಪಗಳ ಬೆನ್ನಲ್ಲೇ ಗ್ರೇಟಾ ಥನ್‍ಬರ್ಗ್ ಟೂಲ್ ಕಿಟ್ ತನ್ನ ಟ್ವೀಟ್ ಡಿಲೀಟ್ ಮಾಡಿದ್ದರು. ನಂತರ ಹೊಸ ಟ್ವೀಟ್ ಮಾಡಿ ಹೊಸ ಟೂಲ್ ಕಿಟ್ ಬಿಡುಗಡೆ ಮಾಡಿದ್ದರು.