Tag: ಟಿ-20 ಪಂದ್ಯ

  • ಟಿ20 ನಿಯಮದಲ್ಲಿ ಬದಲಾವಣೆ – ನಿಧಾನಗತಿ ಬೌಲಿಂಗ್‌ ಮಾಡಿದ್ರೆ ಮೈದಾನದಲ್ಲೇ ಶಿಕ್ಷೆ

    ಟಿ20 ನಿಯಮದಲ್ಲಿ ಬದಲಾವಣೆ – ನಿಧಾನಗತಿ ಬೌಲಿಂಗ್‌ ಮಾಡಿದ್ರೆ ಮೈದಾನದಲ್ಲೇ ಶಿಕ್ಷೆ

    ದುಬೈ: ಟಿ20 ಪಂದ್ಯದ ವೇಳೆ ನಿಗದಿತ ಸಮಯದ ಒಳಗಡೆ ಓವರ್‌ಗಳನ್ನು ಮುಗಿಸದ ತಂಡಕ್ಕೆ ದಂಡದ ಜೊತೆಗೆ ಪಂದ್ಯ ನಡೆಯುವಾಗಲೇ ಮೈದಾನದಲ್ಲೇ ಶಿಕ್ಷೆಯನ್ನು ವಿಧಿಸಲು ಐಸಿಸಿ ನಿರ್ಧರಿಸಿದೆ.

    ಈ ಹಿಂದೆ ನಿಗದಿತ ಸಮಯದಲ್ಲಿ ಓವರ್‌ಗಳನ್ನು ಮುಗಿಸದ ತಂಡಗಳಿಗೆ ಪಂದ್ಯ ಮುಗಿದ ಮೇಲೆ ದಂಡ ಹಾಕುವ ನಿಯಮ ಚಾಲ್ತಿಯಲ್ಲಿತ್ತು. ಆದರೆ ಈಗ ಆ ನಿಯಮಗಳೊಂದಿಗೆ ಪಂದ್ಯದ ವೇಳೆಯೂ ಶಿಕ್ಷೆ ನೀಡಲು ಐಸಿಸಿ ನಿರ್ಧರಿಸಿದೆ. ಈ ಎಲ್ಲಾ ಹೊಸ ನಿಯಮಗಳು ಈ ತಿಂಗಳಿನಿಂದಲೇ ಜಾರಿಗೆ ಬರಲಿವೆ.

    ಹೊಸ ನಿಯಮದಲ್ಲಿ ಏನಿದೆ?: ಐಸಿಸಿ ನಿಯಮದ ಪ್ರಕಾರ ಒಂದು ಇನ್ನಿಂಗ್ಸ್ ಗರಿಷ್ಠ 85 ನಿಮಿಷದಲ್ಲಿ(2:30 ನಿಮಿಷದ ಎರಡು ಪಾನಿಯ ವಿರಾಮ ಸೇರಿದರೆ 90 ನಿಮಿಷ) ಮುಗಿಯಬೇಕು. ಹೀಗಾಗಿ‌ ಒಂದು ಓವರ್ ಅನ್ನು 4‌ ನಿಮಿಷ 25 ಸೆಕೆಂಡ್ ನಲ್ಲಿ‌ ಮುಗಿಸಬೇಕಾಗುತ್ತದೆ‌.

    ಸದ್ಯ ಐಸಿಸಿಯ ಹೊಸ ನಿಯಮ ಹೇಳುವ ಪ್ರಕಾರ ಬೌಲಿಂಗ್ ತಂಡವೊಂದು ಇನಿಂಗ್ಸ್ ಕೊನೆಯ ಓವರಿನ ಮೊದಲ ಎಸೆತ ಎಸೆಯುವಾಗ ನಿಗದಿತ ಅವಧಿಯಲ್ಲಿ ಇನಿಂಗ್ಸ್ ಮುಗಿಸುವ ಸ್ಥಿತಿಯಲ್ಲಿರಬೇಕು. ಒಂದು ವೇಳೆ ಹೀಗಿರದಿದ್ದಲ್ಲಿ, ಇನಿಂಗ್ಸ್ ಓವರ್‌ಗಳನ್ನು ಎಸೆಯುವಾಗ 30 ಯಾರ್ಡ್ ಹೊರಗಡೆ 5 ಕ್ಷೇತ್ರ ರಕ್ಷಕರ ಬದಲಿಗೆ ಕೇವಲ ನಾಲ್ಕು ಕ್ಷೇತ್ರ ರಕ್ಷಕರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ.

    ಉದಾಹರಣೆಗೆ ಮಧ್ಯಾಹ್ನ 4 ಗಂಟೆ ಹೊತ್ತಿಗೆ ಇನ್ನಿಂಗ್ಸ್ ಮುಗಿಯಬೇಕು ಎಂದಿರುತ್ತದೆ. ಬೌಲಿಂಗ್ ಮಾಡುವ ತಂಡವೊಂದು 81:35 ನಿಮಿಷ ಒಳಗಡೆ 19ನೇ ಓವರ್ ಪೂರ್ಣ ಮಾಡಿರಬೇಕು. ಒಂದು ವೇಳೆ ಆ ಹೊತ್ತಿಗೆ ಇನ್ನೂ 18ನೇ ಓವರ್ ಚಾಲ್ತಿಯಲ್ಲಿದ್ದರೆ, ಅಂಪೈರ್ ಗಳಿಗೆ 30 ಯಾರ್ಡ್ ಹೊರಗಡೆ ಕ್ಷೇತ್ರ ರಕ್ಷಕರನ್ನು ಕಡಿಮೆ ಮಾಡುವ ಅಧಿಕಾರವಿರುತ್ತದೆ.

    ಹಿಂದಿನ ನಿಯಮ ಹೇಗಿತ್ತು?: ನಿಗದಿತ ಅವಧಿಯಲ್ಲಿ ಓವರ್‌ಗಳನ್ನು ಮುಗಿಸದಿದ್ದಲ್ಲಿ ತಂಡದ ನಾಯಕ ಮತ್ತು ಆಟಗಾರರಿಗೆ ಆರ್ಥಿಕ ದಂಡ ವಿಧಿಸಲಾಗುತ್ತಿತ್ತು. ಈ ನಿಯಮಗಳು ಮುಂದೆನೂ ಚಾಲ್ತಿಯಲ್ಲಿರುತ್ತದೆ. ಇದರ ಜೊತೆಗೆ ಹೊಸ ಶಿಕ್ಷೆಯೂ ಸೇರ್ಪಡೆಯಾಗುತ್ತದೆ.

    ಇತರೆ ಬದಲಾವಣೆ: ದ್ವಿಪಕ್ಷೀಯ ಸರಣಿಯಲ್ಲಿ ಐಪಿಎಲ್ ಮಾದರಿಯಲ್ಲಿ ಇನಿಂಗ್ಸ್ ನಡುವೆ 2:30 ನಿಮಿಷಗಳ ಟೈಮ್ ಔಟ್ ತೆಗೆದುಕೊಳ್ಳಲು ಅನುಮತಿಯಿದೆ. ಆದರೆ ಎರಡು ಕ್ರಿಕೆಟ್ ಮಂಡಳಿಗಳು ಸರಣಿ ಆರಂಭದಲ್ಲೇ ಒಪ್ಪಿಗೆ ಮಾಡಿಕೊಂಡರೆ ಮಾತ್ರ ಸಾಧ್ಯ. ಇದರಿಂದ ಪ್ರಸಾರಕರು ಹೆಚ್ಚಿನ ಸಂಖ್ಯೆಯಲ್ಲಿ ಜಾಹೀರಾತು ಪ್ರಸಾರ ಮಾಡಬಹುದಾಗಿದೆ.

    ಬೌಲರ್‌ಗಳು ಸ್ಟಂಪ್ ಔಟ್‍ಗೆ ಮನವಿ ಸಲ್ಲಿಸುವ ವೇಳೆ ಚೆಂಡಿನ ಶೇ.50ರಷ್ಟು ಭಾಗ ಬೇಲ್ಸ್ ಗಳನ್ನು ಆವರಿಸಿಕೊಂಡಿರಬೇಕು. ಈ ಹಿಂದೆ ಬೇಲ್ಸ್ ಗೆ ಚೆಂಡು ತಾಕುವಂತಿದ್ದರೆ ಮಾತ್ರ ಸಾಕಿತ್ತು.

    ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್‍ನ ಹಿಂದಿನ ಆವೃತ್ತಿಯಲ್ಲಿ ಪ್ರತಿ ಸರಣಿಗೆ ಒಟ್ಟಾರೆ ಫಲಿತಾಂಶಗಳ ಲೆಕ್ಕಾಚಾರದಲ್ಲಿ ನೀಡಲಾಗುತ್ತಿತ್ತು. ಇದೀಗ ಪ್ರತಿ ಪಂದ್ಯಗಳ ಫಲಿತಾಂಶವನ್ನು ನೋಡಿಕೊಂಡು ಅಂಕ ನೀಡಲಾಗುತ್ತದೆ. ಇದನ್ನೂ ಓದಿ: ರಾಜ್ಯದಲ್ಲಿ 8,449, ಬೆಂಗಳೂರಿನಲ್ಲಿ 6,812 ಪಾಸಿಟವ್ – 4 ಸಾವು

    ಜನವರಿ 16ರಂದು ಜಮೈಕಾದ ಸಬಿನಾ ಪಾರ್ಕ್‍ನಲ್ಲಿ ನಡೆಯಲಿರುವ ವೆಸ್ಟ್ ಇಂಡೀಸ್ ಮತ್ತು ಐರ್ಲೆಂಡ್ ನಡುವಿನ ಟಿ-20 ಪಂದ್ಯದಿಂದಲೇ ಈ ಹೊಸ ನಿಯಮಗಳು ಅನ್ವಯಿಸಲಿದೆ. ಇದನ್ನೂ ಓದಿ: ಕೊರೊನಾ ನಿಯಮ ಉಲ್ಲಂಘಿಸಿ ಹೋರಾಟ ಮಾಡ್ಬೇಡಿ – ಕಾಂಗ್ರೆಸ್‍ಗೆ ಕಾರಜೋಳ ಮನವಿ

     

  • ಮೊದಲ ಪಂದ್ಯದಲ್ಲೇ ನಟರಾಜನ್ ಸೂಪರ್ ಬೌಲಿಂಗ್ – ಟೀಂ ಇಂಡಿಯಾಗೆ 11 ರನ್‍ಗಳ ರೋಚಕ ಜಯ

    ಮೊದಲ ಪಂದ್ಯದಲ್ಲೇ ನಟರಾಜನ್ ಸೂಪರ್ ಬೌಲಿಂಗ್ – ಟೀಂ ಇಂಡಿಯಾಗೆ 11 ರನ್‍ಗಳ ರೋಚಕ ಜಯ

    ಕ್ಯಾನ್ಬೆರಾ: ಇಂದು ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲನೇ ಟಿ-20 ಪಂದ್ಯದಲ್ಲಿ ಭಾರತ 11 ರನ್‍ಗಳ ಅಂತರದಲ್ಲಿ ರೋಚಕ ಗೆಲುವು ಸಾಧಿಸಿದೆ. ಅಂತಾರಾಷ್ಟೀಯ ಟಿ-20ಗೆ ಪಾದಾರ್ಪಣೆ ಮಾಡಿದ ಮೊದಲ ಪಂದ್ಯದಲ್ಲೇ ವೇಗಿ ಟಿ ನಟರಾಜನ್ ಭರ್ಜರಿ ಪ್ರದರ್ಶನ ತೋರುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

    ಇಂದು ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ, ಆರಂಭದಲ್ಲಿ ಕೆಎಲ್ ರಾಹುಲ್ ಅರ್ಧಶತಕ ಮತ್ತು ಕೊನೆಯಲ್ಲಿ ರವೀಂದ್ರ ಜಡೇಜಾ ಅವರ ಸ್ಫೋಟಕ ಬ್ಯಾಟಿಂಗ್‍ನಿಂದ ನಿಗದಿತ 20 ಓವರಿನಲ್ಲಿ 160 ರನ್ ಪೇರಿಸಿತ್ತು. ಇದನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ ಉತ್ತಮ ಆರಂಭ ಕಂಡರೂ ನಟರಾಜನ್ ಮತ್ತು ಚಹಲ್ ಅವರ ಬೌಲಿಂಗ್ ದಾಳಿಗೆ ತತ್ತರಿಸಿ 20 ಓವರ್ ಮುಕ್ತಾಯಕ್ಕೆ 7 ವಿಕೆಟ್ ಕಳೆದುಕೊಂಡು 150 ರನ್ ಹೊಡೆದು 11 ರನ್ ಅಂತರದಿಂದ ಸೋತಿತು.

    ನಟರಾಜನ್ ಬೌಲಿಂಗ್ ಕಮಾಲ್:
    ಐಪಿಎಲ್‍ನಲ್ಲಿ ಉತ್ತಮ ಪ್ರದರ್ಶನ ತೋರಿದ್ದ ನಟರಾಜನ್ ವರುಣ್ ಚಕ್ರವರ್ತಿಗೆ ಗಾಯವಾದ ಕಾರಣ ಆಸೀಸ್ ಟೂರ್ನಿಗೆ ಆಯ್ಕೆಯಾಗಿದ್ದರು. ಸಿಕ್ಕ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಂಡ ನಟರಾಜನ್ ತಾವಾಡಿದ ಮೊದಲ ಪಂದ್ಯದಲ್ಲೇ ನಾಲ್ಕು ಓವರ್ ಬೌಲ್ ಮಾಡಿ ಮೂರು ವಿಕೆಟ್ ಕಿತ್ತು 30 ರನ್ ನೀಡಿದರು. ನಟರಾಜನ್‍ಗೆ ಉತ್ತಮ ಸಾಥ್ ನೀಡಿದ ಯುಜ್ವೇಂದ್ರ ಚಹಲ್ ನಾಲ್ಕು ಓವರ್ ಸ್ಪಿನ್ ಮಾಡಿ ಮೂರು ವಿಕೆಟ್ ಕಿತ್ತು 25 ರನ್ ನೀಡಿದರು.

    ಭಾರತ ನೀಡಿದ 161 ಟಾರ್ಗೆಟ್ ಬೆನ್ನಟ್ಟಲು ಬಂದ ಆಸೀಸ್ ಪಡೆಗೆ ಉತ್ತಮ ಆರಂಭ ದೊರಕಿತು. ಆರಂಭಿಕರಾಗಿ ಕಣಕ್ಕಿಳಿದ ಡಿ ಆರ್ಸಿ ಶಾರ್ಟ್ ಮತ್ತು ಆರೋನ್ ಫಿಂಚ್ ಉತ್ತಮ ಆರಂಭ ನೀಡಿದರು. ಈ ಜೋಡಿ ಅರ್ಧಶತಕದ ಜೊತೆಯಾಟವಾಡಿ ಮುನ್ನುಗುತ್ತಿತ್ತು ಆದರೆ ಏಳನೇ ಓವರಿನಲ್ಲಿ ಹಾರ್ದಿಕ್ ಪಾಂಡ್ಯ 26 ಬಾಲಿಗೆ 35 ರನ್ ಗಳಿಸಿದ್ದ ಫಿಂಚ್ ಅನ್ನು ಔಟ್ ಮಾಡಿದರು. ನಂತರ ಬಂದ ಸ್ಟೀವನ್ ಸ್ಮಿತ್ ಚಹಲ್ ಸ್ಪಿನ್ ಮೋಡಿಗೆ 12 ರನ್ ಗಳಿಸಿ ಪೆವಿಲಿಯನ್ ಸೇರಿದರು.

    ನಂತರ ಕ್ರೀಸಿಗೆ ಬಂದ ಸ್ಫೋಟಕ ಆಟಗಾರ ಗ್ಲೆನ್ ಮ್ಯಾಕ್ಸ್ ವೆಲ್ ಅನ್ನು ಟಿ ನಟರಾಜನ್ ಔಟ್ ಮಾಡಿದರು. ನಂತರ ಜೊತೆಯಾದ ಡಿ ಆರ್ಸಿ ಶಾರ್ಟ್ ಮತ್ತು ಮೊಯಿಸಸ್ ಹೆನ್ರಿಕ್ಸ್ ಉತ್ತಮ ಜೊತೆಯಾಟವಾಡಿದರು. ಆದರೆ 14ನೇ ಓವರಿನಲ್ಲಿ 34 ರನ್ ಸಿಡಿಸಿದ್ದ ಆರ್ಸಿ ಶಾರ್ಟ್ ಅನ್ನು ಔಟ್ ಮಾಟುವ ಮೂಲಕ ಟಿ ನಟರಾಜನ್ ಅವರು ಪಂದ್ಯಕ್ಕೆ ತಿರುವು ನೀಡಿದರು. ನಂತರ ಬಂದ ಮ್ಯಾಥ್ಯೂ ವೇಡ್ 7 ರನ್ ಗಳಿಸಿ ಚಹಲ್‍ಗೆ ಔಟ್ ಆದರು.

    ಈ ಮೂಲಕ ಪಂದ್ಯ ಭಾರತದ ಕಡೆ ವಾಲಿತು. ನಂತರ ಬ್ಯಾಟಿಂಗ್ ಬಂದ ಮಿಚೆಲ್ ಸ್ಟಾರ್ಕ್ ಅನ್ನು ಟಿ ನಟರಾಜನ್ ಬೌಲ್ಡ್ ಮಾಡಿದರು. 20 ಬಾಲಿಗೆ 30 ರನ್ ಸಿಡಿಸಿ ಆಡುತ್ತಿದ್ದ ಮೊಯಿಸಸ್ ಹೆನ್ರಿಕ್ಸ್ ದೀಪಕ್ ಚಹರ್ ಬೌಲಿಂಗ್‍ನಲ್ಲಿ ಔಟ್ ಆಗಿ ಹೊರನಡೆದರು. ಕೊನೆಯ ಓವರಿನಲ್ಲಿ ಆಸ್ಟ್ರೇಲಿಯಾಗೆ ಗೆಲ್ಲಲು 25 ರನ್ ಬೇಕಿತ್ತು. ಆದರೆ ಶಮಿ ಅವರ ಬಿಗಿಯಾದ ಬೌಲಿಂಗ್ ದಾಳಿಯಿಂದ 15 ರನ್ ಮಾತ್ರ ಆಸ್ಟ್ರೇಲಿಯಾಕ್ಕೆ ಬಂತು ಪರಿಣಾಮ 11 ರನ್‍ಗಳ ಅಂತರದಲ್ಲಿ ಪಂದ್ಯವನ್ನು ಸೋತಿತು.