Tag: ಟಿಪ್ಪು ಸರ್ಕಲ್

  • ಯಾದಗಿರಿಯಲ್ಲಿ ಟಿಪ್ಪು ಸರ್ಕಲ್ ವಿವಾದ- ಕೋಮು ಪ್ರಚೋದನೆ ನೀಡಿದವರ ಮೇಲೆ ಕೇಸ್, ಅರೆಸ್ಟ್

    ಯಾದಗಿರಿಯಲ್ಲಿ ಟಿಪ್ಪು ಸರ್ಕಲ್ ವಿವಾದ- ಕೋಮು ಪ್ರಚೋದನೆ ನೀಡಿದವರ ಮೇಲೆ ಕೇಸ್, ಅರೆಸ್ಟ್

    ಯಾದಗಿರಿ: ನಗರದಲ್ಲಿ ಎರಡು ಕೋಮುಗಳ ನಡುವಿನ ಸಂಘರ್ಷಕ್ಕೆ ಕಾರಣವಾಗಿದ್ದ ಟಿಪ್ಪು ಸರ್ಕಲ್ (Tippu Circle) ವಿವಾದ ಸದ್ಯ ತಾತ್ಕಾಲಿಕ ಸುಖಾಂತ್ಯ ಕಂಡಿದೆ. ಅಹಿತಕರ ಘಟನೆ ಮುನ್ಸೂಚನೆ ಅರಿತಿದ್ದ ಯಾದಗಿರಿ ಪೊಲೀಸರ (Yadgir Police) ಬುದ್ಧಿವಂತಿಕೆ ನಡೆಯಿಂದ ಪ್ರತಿಭಟನೆಗೂ ಅವಕಾಶ ಸಿಗಲಿಲ್ಲ. ಶಾಂತಿ ಭಂಗಕ್ಕೆ ಮುಂದಾದವರನ್ನು ಬಂಧಿಸಿದ ಪೊಲೀಸರು, ಜನರ ಆತಂಕ ದೂರ ಮಾಡಿದ್ದಾರೆ.

    ಕಳೆದೊಂದು ವಾರದಿಂದ ಇಡೀ ಯಾದಗಿರಿ (Yadgir) ನಗರದ ಸಾಮರಸ್ಯಕ್ಕೆ ಕೊಳ್ಳಿ ಇಟ್ಟು, ಎರಡು ಕೋಮುಗಳ ನಡುವೆ ಪರಸ್ಪರ ತಿಕ್ಕಾಟಕ್ಕೆ ಕಾರಣವಾಗಿದ್ದ ವಿವಾದಿತ ಟಿಪ್ಪು ಸರ್ಕಲ್ ವಿಚಾರ ಇದೀಗ ತಾತ್ಕಾಲಿಕ ಸುಖಾಂತ್ಯ ಕಂಡಿದೆ. ಸರ್ಕಲ್ ತೆರವಿಗೆ ಗಡುವು ನೀಡಿ, ಜೈ ಶಿವಾಜಿ ಸಂಘಟನೆಯ (Jai Shivaji Organisation) ಪರಶುರಾಮ್ ಶೇಗೂರಕರ್ (Parashuram Shegoorkar) ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ಮಾಡಲು ನಿರ್ಧರಿಸಲಾಗಿತ್ತು. ಸ್ವತಃ ತಾವೇ ಪ್ರತಿಭಟನೆ ಮೂಲಕ ವಿವಾದಿತ ಸರ್ಕಲ್‌ನಲ್ಲಿ ಹಾಕಿರುವ ಟಿಪ್ಪು ಭಾವಚಿತ್ರ ಕಿತ್ತೆಸೆಯುವುದಾಗಿ ಹೇಳಿಕೆ ನೀಡಿದ್ದರು.

    ಪರಶುರಾಮ್ ಶೇಗೂರಕರ್ ಈ ಹೇಳಿಕೆಯಿಂದ ಕೆರಳಿ ಕೆಂಡವಾಗಿದ್ದ ಟಿಪ್ಪು ಸಂಘಟನೆ ಅಬ್ದುಲ್ ಕರೀಂ ನೇತೃತ್ವದ ತಂಡ ಪ್ರಾಣ ಹೋದರೂ ತೆರವಿಗೆ ಅವಕಾಶ ಕೊಡಲ್ಲ ಎಂದು ಪ್ರತಿ ಸವಾಲು ಹಾಕಿದ್ದರು. ಇಬ್ಬರ ಹೇಳಿಕೆಗಳಿಂದ ಜನರ ನೆಮ್ಮದಿ ಹಾಳಾಗಿತ್ತು. ಭಾನುವಾರವೇ ಅಲರ್ಟ್ ಆಗಿದ್ದ ಯಾದಗಿರಿ ಪೊಲೀಸರು ಇಬ್ಬರ ಮೇಲೆ ಕೋಮು ಪ್ರಚೋದನೆ, ಸಾಮರಸ್ಯ ಹಾಳು ಮಾಡಿದ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು, ಪ್ರತಿಭಟನೆ ಮಾಡದಂತೆ ಎಚ್ಚರಿಕೆ ನೀಡಿದ್ದರು. ಹೀಗಾಗಿ ಸ್ಥಳದಲ್ಲಿ ಬಿಗಿ ಭದ್ರತೆಯನ್ನೂ ಕೈಗೊಳ್ಳಲಾಗಿತ್ತು. ಆದರೆ ಪೊಲೀಸರ ಎಚ್ಚರಿಕೆಯ ನಡುವೆಯೂ ಪ್ರತಿಭಟನೆಗೆ ಮುಂದಾಗಿದ್ದ ಪರಶುರಾಮ್ ಶೇಗೂರಕರ್ ಹಾಗೂ ಶಂಕರ್‌ನನ್ನು ಬಂಧಿಸಿ ಕರೆದೊಯ್ದಿದ್ದಾರೆ.

    ನಗರದ ಹತ್ತಿಕುಣಿ ಕ್ರಾಸ್ ಬಳಿ ಕಳೆದ 2 ದಿನಗಳಿಂದ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿತ್ತು. ಸ್ವಲ್ಪ ಯಾಮಾರಿದರೂ 2 ಸಮುದಾಯಗಳ ನಡುವಿನ ಸಂಘರ್ಷಕ್ಕೆ ಹಾದಿ ಮಾಡಿಕೊಟ್ಟಂತಾಗುತ್ತಿತ್ತು. ಹೀಗಾಗಿಯೇ ಪೊಲೀಸರು ಪ್ರತಿಭಟನೆಗೆ ಅವಕಾಶ ನೀಡದಂತೆ 144 ಸೆಕ್ಷನ್ ಜಾರಿಗೊಳಿಸಿ, ಆದೇಶ ನೀಡಿದ್ದರು. ಪೊಲೀಸರ ಎಚ್ಚರಿಕೆಯ ನಂತರ ಟಿಪ್ಪು ಸಂಘಟನೆಯ ಅಬ್ದುಲ್ ಕರೀಂ ಭಾನುವಾರ ಮುಂಬೈಗೆ ಹೋಗಿದ್ದಾರೆ. ಆದರೆ ಜೈ ಶಿವಾಜಿ ಸಂಘಟನೆಯ ಪರಶುರಾಮ್ ಶೇಗೂರಕರ್ ಮಾತ್ರ ಪೊಲೀಸರ ನೋಟಿಸ್ ಗೂ ಕ್ಯಾರೇ ಎನ್ನದೇ, ಗುಂಪು ಕಟ್ಟಿಕೊಂಡು ಪ್ರತಿಭಟನೆಗೆ ಮುಂದಾಗಿ, ಬಂಧಿತರಾಗಿದ್ದಾರೆ. ಇದನ್ನೂ ಓದಿ: ಕೋಮು ಸಂಘರ್ಷದ ಉದ್ದೇಶಕ್ಕಾಗಿ ಹಿಂದೂ ಧರ್ಮವನ್ನು ಬಳಸಬೇಡಿ – ಬಿಜೆಪಿ ನಾಯಕನಿಗೆ ಸುಪ್ರೀಂ ಚಾಟಿ

    ಭಾನುವಾರವೇ ಯಾದಗಿರಿಯ ನಗರ ಠಾಣೆಯಲ್ಲಿ ದೂರು ದಾಖಲಾಗಿದ್ದ ಕಾರಣ ಪರಶುರಾಮ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧನದ ವೇಳೆ ಪರಶುರಾಮ್ ಶೇಗೂರಕರ್ ಪೊಲೀಸರ ಜೊತೆ ವಾಗ್ವಾದಕ್ಕಿಳಿದಿದ್ದಾರೆ. ಬಂಧನದ ವೇಳೆ ಯಾದಗಿರಿ ಸಿಪಿಐ ಸುನೀಲ್ ಮೂಲಿಮನಿ ಅವರ ಹಣೆ ಹಾಗೂ ಕೈಗೆ ಗಾಯಗಳಾಗಿದ್ದು, ನೂಕಾಟ, ತಳ್ಳಾಟದ ನಡುವೆಯೇ ಪೊಲೀಸರು ಪರಶುರಾಮ್ ಶೇಗೂರಕರ್‌ನನ್ನು ಬಂಧಿಸಿ ಕರೆದೊಯ್ದಿದ್ದಾರೆ.

    1996ರಲ್ಲಿ ಮೌಲಾನಾ ಅಬ್ದುಲ್ ಕಲಾಂ ಅಜಾದ್ ಅವರ ನಾಮಕರಣದ ವೃತ್ತಕ್ಕೆ 2010ರಲ್ಲಿ ಟಿಪ್ಪು ಸರ್ಕಲ್ ಎಂದು ಮರುನಾಮರಣ ಮಾಡಿದ್ದೇ ವಿವಾದಕ್ಕೆ ಕಾರಣ ಎನ್ನಲಾಗಿದೆ. ಸದ್ಯ ಶಾಂತ ಎನಿಸಿದರೂ, ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಇದನ್ನೂ ಓದಿ: ಕಾಂಗ್ರೆಸ್‍ನಲ್ಲಿ ಚುನಾವಣೆ ಬಂದಾಗ ಮಾತ್ರ ನಾಯಕರು ಕಾಣಿಸುತ್ತಾರೆ- ಅಣ್ಣಾಮಲೈ ವಾಗ್ದಾಳಿ

  • ಯಾದಗಿರಿಯಲ್ಲಿ ಟಿಪ್ಪು ಸರ್ಕಲ್ ವಿವಾದ- ಸಂಘಟನೆಗಳಿಗೆ ವಾರ್ನಿಂಗ್, 144 ಸೆಕ್ಷನ್ ಜಾರಿ

    ಯಾದಗಿರಿಯಲ್ಲಿ ಟಿಪ್ಪು ಸರ್ಕಲ್ ವಿವಾದ- ಸಂಘಟನೆಗಳಿಗೆ ವಾರ್ನಿಂಗ್, 144 ಸೆಕ್ಷನ್ ಜಾರಿ

    ಯಾದಗಿರಿ: ನಗರದ ಹತ್ತಿಕುಣಿ ಸರ್ಕಲ್ ಬಳಿ ಇರುವ ವಿವಾದಿತ ಟಿಪ್ಪು ಸರ್ಕಲ್ (Tippu Circle) ವಿವಾದ ತೀವ್ರ ಜಟಾಪಟಿಗೆ ಕಾರಣವಾಗಿದ್ದು, ಎರಡು ಕೋಮುಗಳ ನಡುವಿನ ಸಾಮರಸ್ಯಕ್ಕೆ ಕೊಳ್ಳಿ ಇಟ್ಟಿದೆ. ಇಂದು ಶಿವಾಜಿ ಸಂಘಟನೆಯಿಂದ ಸರ್ಕಲ್ ತೆರವುಗೊಳಿಸೋದಾಗಿ ಪ್ರತಿಭಟನೆ ಹಮ್ಮಿಕೊಂಡಿದ್ದು, ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಸಂಘರ್ಷದ ಮುನ್ಸೂಚನೆ ಅರಿತ ಪೊಲೀಸರು ತೀವ್ರ ನಿಗಾವಹಿಸಿದ್ದು, 144 ಸೆಕ್ಷನ್ ಜಾರಿಗೊಳಿಸಿದ್ದಾರೆ.

    ಇಷ್ಟು ದಿನಗಳ ಕಾಲ ಶಾಂತವಾಗಿದ್ದ ಯಾದಗಿರಿ ನಗರದಲ್ಲೀಗ ಟಿಪ್ಪು ಸರ್ಕಲ್ ವಿವಾದ ಶುರುವಾಗಿದ್ದು, ಎರಡು ಕೋಮುಗಳ ನಡುವಿನ ಸಂಘರ್ಷಕ್ಕೆ ಕಾರಣವಾಗಿದೆ. ನಗರದ ಹತ್ತಿಕುಣಿ ರಸ್ತೆ ಬಳಿ 2010ರಲ್ಲಿ ನಿರ್ಮಾಣವಾಗಿರುವ ಟಿಪ್ಪು ಸರ್ಕಲ್ ಅನಧಿಕೃತವಾಗಿದೆ ಅಂತಾ ಜೈ ಶಿವಾಜಿ ಸಂಘಟನೆ ಆರೋಪಿಸಿದೆ. ಅನಧಿಕೃತವಾಗಿ ನಿರ್ಮಾಣ ಮಾಡಿರೋ ವೃತ್ತದಲ್ಲಿ ಹಾಕಿರುವ ನಾಮಫಲಕವನ್ನ ತೆರವುಗೊಳಿಸಬೇಕು ಅಂತಾ ಒತ್ತಾಯಿಸಿ, ಗಡುವನ್ನೂ ನೀಡಲಾಗಿತ್ತು. ಆ ಗಡುವು ಮುಕ್ತಾಯವಾಗಿದ್ದು, ಪ್ರತಿಭಟನಾ ಮೆರವಣಿಗೆ ಟಿಪ್ಪು ಸರ್ಕಲ್ ಗೆ ಬಂದು ನಾವೇ ನಾಮಫಲಕ ಕಿತ್ತೊಗಿತೀವಿ ಅಂತಾ ಜಿಲ್ಲಾಡಳಿತ, ಪೊಲೀಸ್ ಇಲಾಖೆಗೆ ಸವಾಲು ಹಾಕಿದ್ದಾರೆ. ಹೀಗಾಗಿ ಟಿಪ್ಪು ಸರ್ಕಲ್ ಬಳಿ ಇರೋ ಏರಿಯಾದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಇದನ್ನೂ ಓದಿ: BMTC ಬಸ್‍ನಿಂದ ಬರೋಬ್ಬರಿ 167 ಲೀಟರ್ ಡೀಸೆಲ್ ಕಳ್ಳತನ!

    ಪ್ರತಿಭಟನೆ ಮೂಲಕ ನಾವೇ ಸರ್ಕಲ್ ಕಿತ್ತು ಹಾಕ್ತೀವಿ ಎಂದಿದ್ದ ಶಿವಾಜಿ ಸಂಘಟನೆ ಅಧ್ಯಕ್ಷ ಪರಶುರಾಮ್ ಶೇಗೂರಕರ್ ಹೇಳಿಕೆಗೆ ಟಿಪ್ಪು ಸಂಘಟನೆ ಮುಖಂಡರು ಕೆಂಡಕಾರಿದ್ದಾರೆ. ಯಾವುದೇ ಕಾರಣಕ್ಕೂ ಸರ್ಕಲ್ ತೆರವು ಮಾಡೋದಕ್ಕೆ ಬಿಡೋದಿಲ್ಲ ಅಂತಾ ಟಿಪ್ಪು ಸಂಘಟನೆಯಿಂದ ಪ್ರತಿ ಸವಾಲ್ ಹಾಕಲಾಗಿದ್ದು, ಸಾವು ನೋವಾದ್ರೆ ನಾವು ಕಾರಣ ಅಲ್ಲ ಅಂತಾ ಎರಡೂ ಸಂಘಟನೆಯವ್ರು ಹೇಳಿಕೆ ಕೊಟ್ಟಿದ್ದಾರೆ. ಈಗಾಗಲೇ ಎರಡೂ ಸಂಘಟನೆಯ ಮುಖಂಡರನ್ನ ಕರೆಸಿ ವಾರ್ನ್ ಮಾಡಿರೋ ಪೊಲೀಸರು ಟಿಪ್ಪು ಸರ್ಕಲ್ ಏರಿಯಾದಲ್ಲಿ 144 ಸೆಕ್ಷನ್ ಜಾರಿ (144 Section) ಮಾಡಿದ್ದಾರೆ. ಯಾವುದೇ ಹೋರಾಟಕ್ಕೂ ಪ್ರತಿಭಟನೆಗೆ ಅವಕಾಶ ಇಲ್ಲ ಅಂತಾ ಪ್ರತಿಭಟನೆ ಮಾಡಲು ನಿರ್ಧರಿಸಿದ್ದವ್ರಿಗೆ ಸೂಚನೆಯನ್ನೂ ನೀಡಲಾಗಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಟಿಪ್ಪು ಸರ್ಕಲ್ ಬಳಿ ಡಿಆರ್ ವ್ಯಾನ್ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು, ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.

    ಸದ್ಯ ವಿವಾದಿತ ಟಿಪ್ಪು ಸರ್ಕಲ್ ಸುತ್ತ ನಿಷೇಧಾಜ್ಞೆ ಜಾರಿ ಮಾಡಿರೋದ್ರಿಂದ, ಪ್ರತಿಭಟನೆಗೆ ಅವಕಾಶ ಇಲ್ಲ ಅನ್ನೋದನ್ನ ಪೊಲೀಸರು ಸ್ಪಷ್ಟವಾಗಿ ಹೇಳಿದ್ದಾರೆ. ಆದ್ರೆ ಹಠಕ್ಕೆ ಬಿದ್ದಿರೋ ಹೋರಾಟಗಾರರು ಸರ್ಕಲ್ ತೆರವುಗೊಳಿಸೋತನಕ ಹೋರಾಟ ಕೈ ಬಿಡೋದಿಲ್ಲ ಅಂತಾ ಪಟ್ಟು ಹಿಡಿದಿದ್ದು, ಏನಾಗುತ್ತೋ ಅನ್ನೋ ಆತಂಕ ಯಾದಗಿರಿ ಜನರಲ್ಲಿ ಮನೆ ಮಾಡಿದೆ.