Tag: ಟಿಡಿಪಿ

  • ಬ್ರಾಹ್ಮಣ ಕನ್ಯೆಯನ್ನು ಮದುವೆಯಾದ್ರೆ ರಾಹುಲ್ ಗಾಂಧಿ ಪ್ರಧಾನಿ ಆಗ್ತಾರೆ: ದಿವಾಕರ್ ರೆಡ್ಡಿ

    ಬ್ರಾಹ್ಮಣ ಕನ್ಯೆಯನ್ನು ಮದುವೆಯಾದ್ರೆ ರಾಹುಲ್ ಗಾಂಧಿ ಪ್ರಧಾನಿ ಆಗ್ತಾರೆ: ದಿವಾಕರ್ ರೆಡ್ಡಿ

    ಬೆಂಗಳೂರು: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಧಾನಿ ಆಗಬೇಕಾದರೆ ಬ್ರಾಹ್ಮಣ ಯುವತಿಯನ್ನು ಮದುವೆ ಆಗಬೇಕು ಎಂದು ತೆಲುಗು ದೇಶಂ ಪಕ್ಷದ (ಟಿಡಿಪಿ) ಶಾಸಕ ಸಿ.ದಿವಾಕರ್ ರೆಡ್ಡಿ ಹೇಳಿದ್ದಾರೆ.

    ವಿಶಾಖಪಟ್ಟಣಂನಲ್ಲಿ ನಡೆದ ಕಾರ್ಯಕ್ರಮವೊಂದರ ಭಾಷಣದ ವೇಳೆ ಶಾಸಕ ಸಿ ದಿವಾಕರ್ ರೆಡ್ಡಿ ಅವರು ಪ್ರಸ್ತಾಪಿಸಿದ ಮಾತುಗಳು ರಾಷ್ಟ್ರ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ರಾಹುಲ್ ಗಾಂಧಿ ಬ್ರಾಹ್ಮಣ ಕನ್ಯೆಯನ್ನು ವರಿಸಿದರೆ ಪ್ರಧಾನಿ ಆಗೋದು ಪಕ್ಕಾ ಎಂದು 2014 ಲೋಕಸಭಾ ಪೂರ್ವದಲ್ಲಿಯೇ ಸೋನಿಯಾ ಗಾಂಧಿ ಅವರಿಗೆ ದಿವಾಕರ್ ರೆಡ್ಡಿ ಅವರು ಹೇಳಿದ್ದರಂತೆ.

    “ರಾಷ್ಟ್ರ ರಾಜಕೀಯದಲ್ಲಿ ಉತ್ತರ ಪ್ರದೇಶ ಬ್ರಾಹ್ಮಣರ ಬೆಂಬಲ ಅಗತ್ಯ. ಏಕೆಂದರೆ ಅಲ್ಲಿ ರಾಜ್ಯವನ್ನು ಆಳುತ್ತಿರುವುದು ಬ್ರಾಹ್ಮಣರೇ. ಹೀಗಾಗಿ ಉತ್ತಮ ಬ್ರಾಹ್ಮಣ ಕನ್ಯೆಯನ್ನು ರಾಹುಲ್ ಅವರಿಗೆ ತನ್ನಿ ಅಂತಾ ಸೋನಿಯಾ ಗಾಂಧಿಗೆ ಹೇಳಿದ್ದೆ. ಆದರೆ ಅವರು ನನ್ನ ಮಾತನ್ನು ಕೇಳಿಲ್ಲ. ಹೀಗಾಗಿ ರಾಹುಲ್ ಗಾಂಧಿ ಅವರಿಗೆ ಪ್ರಧಾನಿ ಸ್ಥಾನ ತಪ್ಪಿತು’ ಎಂದು ಕಾಂಗ್ರೆಸ್ಸಿನಲ್ಲಿ ತಾವು ನೀಡಿದ್ದ ಸಲಹೆಯನ್ನು ಈಗ ಹೊರಹಾಕಿದ್ದಾರೆ.

  • ದೆವ್ವದ ಭಯ ಹೋಗಿಸಲು ಸ್ಮಶಾನದಲ್ಲೇ ಮಲಗಿದ ಶಾಸಕ!

    ದೆವ್ವದ ಭಯ ಹೋಗಿಸಲು ಸ್ಮಶಾನದಲ್ಲೇ ಮಲಗಿದ ಶಾಸಕ!

    ಅಮರಾವತಿ: ಆಂಧ್ರಪ್ರದೇಶದ ಪಶ್ಚಿಮ ಗೋದಾವರಿಯ ಪಲಕೋಳೆಯ ಜನರಲ್ಲಿ ದೆವ್ವದ ಭಯ ಹೋಗಿಸಲು ಟಿಡಿಪಿ ಶಾಸಕ ನಿಮ್ಮಲ ರಾಮ ನಾಯ್ಡುರವರು ಸ್ಮಶಾನದಲ್ಲೇ ಮಲಗಿದ್ದಾರೆ.

    ಪಶ್ಚಿಮ ಗೋದಾವರಿಯ ಪಲಕೋಳೆ ಎಂಬಲ್ಲಿರುವ ಸ್ಮಶಾನದಲ್ಲಿ ಅಭಿವೃದ್ಧಿ ಕಾರ್ಯಕ್ಕಾಗಿ ತೆಲಂಗಾಣ ಸರ್ಕಾರ 3 ಕೋಟಿ ರೂಪಾಯಿ ಬಿಡುಗಡೆಗೊಳಿಸಿತ್ತು. ಹೀಗಾಗಿ ಸ್ಮಶಾನದಲ್ಲಿ ಅಭಿವೃದ್ಧಿ ಹಾಗೂ ಕಟ್ಟಡ ನಿರ್ಮಾಣ ಕಾರ್ಯವನ್ನು ಶಾಸಕ ನಾಯ್ಡುರವರು ಹಮ್ಮಿಕೊಂಡಿದ್ದರು. ಆದರೆ ಯಾವೊಬ್ಬ ಊರಿನವರು ಕಾಮಗಾರಿಗೆ ಬರಲು ಸಿದ್ಧರಿರಲಿಲ್ಲ. ರುದ್ರಭೂಮಿಯಲ್ಲಿ ದಿನನಿತ್ಯ ಹೆಣ ಸುಡುತ್ತಾರೆ, ಅಲ್ಲಿ ಭೂತ ಪ್ರೇತಗಳು ಇವೆ ಎಂಬ ಭಯದಿಂದ ದೂರ ಸರಿದಿದ್ದರು.

    ಜನರಲ್ಲಿದ್ದ ಭಯವನ್ನು ಹೋಗಲಾಡಿಸಲು ಶಾಸಕ ನಾಯ್ಡುರವರು ಸ್ಮಶಾನದಲ್ಲೇ ಮಲಗುವ ಯೋಜನೆ ಹಾಕಿಕೊಂಡಿದ್ದರು. ಅದರಂತೆ ಜೂನ್ 22ರಿಂದ ಮೂರು ದಿನಗಳ ಕಾಲ ಸ್ಮಶಾನದಲ್ಲೇ ಫೋಲ್ಡಿಂಗ್ ಕಾಟ್ ಮತ್ತು ಸೊಳ್ಳೆ ಪರದೆ ಸಹಾಯದಿಂದ ಮಲಗಿದ್ದಾರೆ. ನಿರಂತರವಾಗಿ ಮೂರು ದಿನ ಸ್ಮಶಾನದಲ್ಲೇ ಬೀಡುಬಿಟ್ಟಿದ್ದ ಶಾಸಕರು ಜನರಿಗೆ, ಸ್ಮಶಾನದ ಒಳಗಾಗಲೀ ಅಥವಾ ಹೊರಗಾಗಲೀ ಯಾವುದೇ ಭೂತ-ಪ್ರೇತಗಳಿಲ್ಲ ಎಂದು ಮನವರಿಕೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

    ಶಾಸಕರ ಧೈರ್ಯಕ್ಕೆ ಮೆಚ್ಚಿದ ಊರಿನವರು, ಯಾವುದೇ ಭೂತ-ಪ್ರೇತಗಳು ಇಲ್ಲವೆಂದು ತಿಳಿದು, ಕಾಮಗಾರಿಗೆ ಬರುತ್ತಿದ್ದಾರೆ ಎಂದು ವರದಿಯಾಗಿದೆ. ಅಲ್ಲದೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‍ರವರು ಶಾಸಕ ನಿಮ್ಮಲ ರಾಮ ನಾಯ್ಡುರವರ ಮೂಢನಂಬಿಕೆ ವಿರುದ್ಧ ನಡೆಸಿರುವ ಹೋರಾಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • 2019 ರಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಹಗಲು ಕನಸು: ಚಂದ್ರಬಾಬು ನಾಯ್ಡು

    2019 ರಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಹಗಲು ಕನಸು: ಚಂದ್ರಬಾಬು ನಾಯ್ಡು

    ವಿಜಯವಾಡ: 2019 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ ಇದು ಹಗಲು ಕನಸು ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹೇಳಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿಯವರು ಪ್ರಚಾರ ಪ್ರಿಯರು ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

    ಟಿಡಿಪಿ ವಾರ್ಷಿಕ ಸಮ್ಮೇಳನ ಮಹಾನಾಡು ಉದ್ಘಾಟಿಸಿ ಮಾತನಾಡಿದ ಅವರು ಕೇಂದ್ರ ಸರ್ಕಾರಗಳ ರಚನೆಯಲ್ಲಿ ಟಿಡಿಪಿ ಬಹಳ ಮುಖ್ಯ ಪಾತ್ರವನ್ನು ವಹಿಸುತ್ತಾ ಬಂದಿದೆ. ಪಕ್ಷಕ್ಕೆ ದೇಶದ ರಾಜಕೀಯ ಲೆಕ್ಕಾಚಾರವನ್ನು ಬದಲಿಸುವಷ್ಟು ಶಕ್ತಿ ಇದೆ. ಬಿಜೆಪಿಯನ್ನು ಕಟ್ಟಿಹಾಕಲು ಸಮಾನ ಮನಸ್ಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಲು ತಯಾರಿದ್ದೇವೆ ಎಂದು ತಿಳಿಸಿದರು.

    ಹೊಸದಾಗಿ ನಿರ್ಮಾಣವಾದ ಆಂಧ್ರ ರಾಜ್ಯಕ್ಕೆ ಭರವಸೆಯಂತೆ ವಿಶೇಷ ಅನುದಾನವನ್ನು ಕೇಂದ್ರ ಸರ್ಕಾರ ನೀಡಲಿಲ್ಲ. ಕಾಂಗ್ರೆಸ್ ವಿರೋಧ ಪಕ್ಷದಲ್ಲಿದ್ದು ಹೆಚ್ಚಿನದನ್ನು ಮಾಡಲಿಕ್ಕೆ ಆಗುವುದಿಲ್ಲ ಎಂದು ಹೇಳಿ ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡದಿದ್ದಕ್ಕೆ ಎನ್‍ಡಿಎ ಮೈತ್ರಿ ಕೂಟದಿಂದ ಪಕ್ಷ ಹೊರಬಂದಿದೆ. ರಾಜ್ಯದ ಜನತೆಗೆ ಮೋಸ ಮಾಡಿರುವ ಕೇಂದ್ರದ ಬಿಜೆಪಿ ಸರ್ಕಾರ ಈಗ ವೈಎಸ್‍ಆರ್ ಕಾಂಗ್ರೆಸ್ ಜೊತೆ ಸೇರಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳು ಮಾಡಲು ನೋಡುತ್ತಿದೆ ಎಂದು ಕಿಡಿಕಾರಿದರು.

    ಹೈದ್ರಾಬಾದ್ ತೆಲಂಗಾಣಕ್ಕೆ ಸೇರಿರುವುದರಿಂದ ಆಂಧ್ರ ಪ್ರದೇಶ ರಾಜ್ಯಕ್ಕೆ ವಿಶೇಷ ಅನುದಾನವನ್ನು ನೀಡುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸುತ್ತಾ ಬಂದಿದೆ. 2014 ರಲ್ಲಿ ಘೋಷಣೆಯಾದ ಆಂಧ್ರ ಪ್ರದೇಶ ರಾಜ್ಯಕ್ಕೆ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ಮೊದಲ 5 ವರ್ಷಗಳ ಕಾಲ ವಿಶೇಷ ಅನುದಾನವನ್ನು ನೀಡಲಾಗುತ್ತದೆ ಎಂದು ಘೋಷಿಸಿದ್ದರು.

    14ನೇ ಹಣಕಾಸು ಆಯೋಗದಲ್ಲಿ ಆಂಧ್ರಕ್ಕೆ ವಿಶೇಷ ಅನುದಾನಕ್ಕೆ ನೀಡುವ ಸಂಬಂಧ ಯಾವುದೇ ಪ್ರಸ್ತಾಪ ಇಲ್ಲ ಎಂದು ಹೇಳಿ ಎನ್‍ಡಿಎ ಸರ್ಕಾರ ಆರ್ಥಿಕ ನೆರವು ನೀಡಲು ನಿರಾಕರಿಸಿತ್ತು.

  • ಇಂಧನ ಬೆಲೆ ಏರಿಕೆ ಸ್ಕೂಟರ್ ಗೆ  ಬೆಂಕಿ ಹಚ್ಚಿ ಪ್ರತಿಭಟನೆ

    ಇಂಧನ ಬೆಲೆ ಏರಿಕೆ ಸ್ಕೂಟರ್ ಗೆ ಬೆಂಕಿ ಹಚ್ಚಿ ಪ್ರತಿಭಟನೆ

    ಹೈದರಾಬಾದ್: ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯನ್ನು ಖಂಡಿಸಿ ದೇಶಾದ್ಯಂತ ಜನರು ಪ್ರತಿಭಟನೆಗೆ ಮುಂದಾಗಿದ್ದಾರೆ. ಆಂಧ್ರ ಪ್ರದೇಶದಲ್ಲಿಯೂ ತೆಲಗು ದೇಶಂ ಪಕ್ಷದ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.

    ಆಂಧ್ರ ಪ್ರದೇಶದ ಕೃಷ್ಣಾ ಜಿಲ್ಲೆಯ ನಂದಿಗಾಮ ಗ್ರಾಮದಲ್ಲಿ ಟಿಡಿಪಿ ಕಾರ್ಯಕರ್ತರು ತಮ್ಮ ಸ್ಕೂಟರ್ ಗೆ ಬೆಂಕಿ ಹಚ್ಚುವ ಮೂಲಕ ಆಕ್ರೋಶ ಹೊರಹಾಕಿದ್ರು. ಕಾರ್ಯಕರ್ತರು ಸ್ಕೂಟರ್‍ಗೆ ಬೆಂಕಿ ಹಚ್ಚುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಈಗಾಗಲೇ ಪೆಟ್ರೋಲ್, ಡೀಸೆಲ್ ರೇಟ್ ಜಾಸ್ತಿ ಆಗಿದೆ. ಈ ಮಧ್ಯೆ ಮತ್ತೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಹೆಚ್ಚುತ್ತಲೇ ಇದ್ದು, ಕೆಲದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಪ್ರತಿ ಲೀಟರ್‍ಗೆ 3ರಿಂದ 4 ರೂಪಾಯಿಯಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

    ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಏಪ್ರಿಲ್ 24ರಿಂದ ಮೇ 14ರವರೆಗೆ ಪೆಟ್ರೋಲ್ ಮತ್ತು ಡೀಸೆಲ್ ದರ ಪರಿಷ್ಕರಣೆ ಆಗಿರಲಿಲ್ಲ. ಈಗ ಪ್ರತಿ ದಿನ ಹೆಚ್ಚಾಗುತ್ತಿದ್ದು, ಮಂಗಳವಾರ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 78.12 ರೂ. ಇದ್ದರೆ, ಪ್ರತಿ ಲೀಟರ್ ಡೀಸೆಲ್ ಬೆಲೆ 69.25 ರೂ. ಇದೆ.

    2 ವರ್ಷದ ಹಿಂದೆ ಬ್ರೆಂಟ್ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್ ಗೆ 40 ಡಾಲರ್(ಅಂದಾಜು 2,700 ರೂ.) ಇತ್ತು. ಆದರೆ ಈಗ ದುಪ್ಪಟ್ಟು ಆಗಿದ್ದು 79 ಡಾಲರ್(ಅಂದಾಜು 5,300 ರೂ.) ಆಗಿದೆ.

    ಬೆಲೆ ಏರಿಕೆ ಆಗುತ್ತಿರೋದು ಯಾಕೆ?
    ಈ ಹಿಂದೆ ಪೆಟ್ರೋಲಿಯಂ ರಫ್ತು ರಾಷ್ಟ್ರಗಳ(ಒಪೆಕ್) ನಡುವೆ ಶೀತಲ ಸಮರವಿತ್ತು. ಹೀಗಾಗಿ ಈ ರಾಷ್ಟ್ರಗಳು ತೈಲ ಉತ್ಪಾದನೆಗೆ ಯಾವುದೇ ಮಿತಿ ಹಾಕಿರಲಿಲ್ಲ. ಆದರೆ ಈಗ ಈ ರಾಷ್ಟ್ರಗಳ ಮಿತಿ ಹಾಕಿದ ಪರಿಣಾಮ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ದಿನವೂ ಏರಿಕೆಯಾಗುತ್ತಿದೆ. ಎಸ್‍ಆಂಡ್‍ಪಿ ಗ್ಲೋಬಲ್ ಪ್ಯಾಂಟ್ ಅಧ್ಯಯನದ ಪ್ರಕಾರ ತೈಲ ಉತ್ಪಾದಿಸುವ 14 ದೇಶಗಳಲ್ಲಿ ಉತ್ಪಾದನೆ ಕಡಿಮೆಯಾಗಿದೆ. ಈ ಹಿಂದೆ ಪ್ರತಿದಿನ 32 ದಶಲಕ್ಷ ಬ್ಯಾರೆಲ್ ಉತ್ಪಾದಿಸುತ್ತಿದ್ದರೆ ಏಪ್ರಿಲ್ ನಲ್ಲಿ 1.40 ದಶಲಕ್ಷ ಕಡಿಮೆಯಾಗಿದೆ. ವಿಶ್ವದೆಲ್ಲೆಡೆ ಭಾರೀ ಬೆಲೆ ಏರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಒಪೆಕ್ ರಾಷ್ಟ್ರಗಳು ಜೂನ್ 22 ರಂದು ಸಭೆ ನಡೆಸಲು ತೀರ್ಮಾನಿಸಲಾಗಿದೆ. ಈ ವೇಳೆ ತೈಲ ಉತ್ಪಾನೆಯ ಪ್ರಮಾಣವನ್ನು ಹೆಚ್ಚಿಸುವ ನಿರ್ಧಾರವನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

  • ಶೀಘ್ರವೇ ಪ್ರತಿಪಕ್ಷಗಳ 100 ಸಂಸದರು ರಾಜೀನಾಮೆ!

    ಶೀಘ್ರವೇ ಪ್ರತಿಪಕ್ಷಗಳ 100 ಸಂಸದರು ರಾಜೀನಾಮೆ!

    ನವದೆಹಲಿ: ಕೇಂದ್ರದ ವೈಫಲ್ಯವನ್ನು ಖಂಡಿಸಿ ದೇಶದಲ್ಲಿ ಶೀಘ್ರವೇ ಲೋಕಸಭೆ ಚುನಾವಣೆಗೆ ಆಗ್ರಹಿಸಿ 100 ಮಂದಿ ಸಂಸದರು ರಾಜೀನಾಮೆ ನೀಡುವ ಸಾಧ್ಯತೆಯಿದೆ.

    ಹೌದು. 2019ರ ಲೋಕಸಭಾ ಚುನಾವಣೆ ಸಂಬಂಧ ಮೋದಿ ಅವರನ್ನು ಮಣಿಸಲು ಪ್ರತಿಪಕ್ಷಗಳು ಒಗ್ಗಟ್ಟಿನ ಮಂತ್ರ ಜಪಿಸಿರುವುದು ಹಳೇ ಸುದ್ದಿ. ಆದರೆ ಈಗ ಸರ್ಕಾರವನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಲು 100 ಮಂದಿ ಸಂಸದರು ರಾಜೀನಾಮೆ ನೀಡಲಿದ್ದಾರೆ ಎಂದು ರಾಷ್ಟ್ರೀಯ ವಾಹಿನಿಯೊಂದು ಸುದ್ದಿ ಪ್ರಸಾರ ಮಾಡಿದೆ.

    ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ, ಸುಪ್ರೀಂ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ವಿರುದ್ಧ ಮಹಾಭಿಯೋಗ ಸೇರಿದಂತೆ ಇನ್ನಿತರ ಕಾರಣಗಳನ್ನು ಮುಂದಿಟ್ಟುಕೊಂಡು ಪ್ರತಿಪಕ್ಷಗಳ ಸದಸ್ಯರು ಸಂಸತ್ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಮೂಲಗಳನ್ನು ಆಧಾರಿಸಿ ವಾಹಿನಿಯೊಂದು ಸುದ್ದಿ ಪ್ರಸಾರ ಮಾಡಿದೆ.

    ಈ ಪ್ರತಿಭಟನೆಯ ಅಂಗವಾಗಿ ಇಂದು ವೈಎಸ್‍ಆರ್ ಕಾಂಗ್ರೆಸ್ 5 ಮಂದಿ ಸಂಸದರು ರಾಜೀನಾಮೆ ನೀಡಿದ್ದು ಮುಂದಿನ ದಿನದಲ್ಲಿ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಟಿಡಿಪಿ ಅಧ್ಯಕ್ಷ ಚಂದ್ರಬಾಬು ನಾಯ್ಡು, ಎನ್‍ಸಿಪಿ ಅಧ್ಯಕ್ಷ ಶರದ್ ಪವಾರ್ ನೇತೃತ್ವದಲ್ಲಿ ವಿಪಕ್ಷಗಳು ಈ ತಂತ್ರವನ್ನು ಹೆಣೆದಿವೆ ಎನ್ನಲಾಗಿದೆ.

    ಸಂಸತ್ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗುತ್ತಿರುವ ವಿಚಾರವನ್ನು ಕಾಂಗ್ರೆಸ್ ಮೂಲಗಳು ಖಚಿತ ಪಡಿಸಿದೆ ಎಂದು ವಾಹಿನಿ ಹೇಳಿದೆ. ಎನ್‍ಡಿಎ ಒಕ್ಕೂಟದಿಂದ ಹೊರಬಂದಿರುವ ಚಂದ್ರಬಾಬು ನಾಯ್ಡು ಈ ವಾರ ದೆಹಲಿಯಲ್ಲಿ ಶರದ್ ಪವಾರ್ ಮತ್ತು ಇತರೇ ರಾಜಕೀಯ ನಾಯಕರನ್ನು ಭೇಟಿ ಮಾಡಿದ್ದು ಈ ವೇಳೆ ಸಾಮೂಹಿಕ ರಾಜೀನಾಮೆ ನೀಡುವ ವಿಚಾರವನ್ನು ಚರ್ಚಿಸಿದ್ದಾರೆ ಎನ್ನಲಾಗಿದೆ.

    ಪ್ರತಿಪಕ್ಷಗಳ ಪ್ಲಾನ್ ಏನು?
    2019ಕ್ಕೂ ಮೊದಲೇ ಚುನಾವಣೆ ನಡೆಸಲು ಪ್ರತಿಪಕ್ಷಗಳು ಮುಂದಾಗಿದ್ದು, ಇದಕ್ಕಾಗಿ ಈಗಿನಿಂದಲೇ ತಯಾರಿ ನಡೆಸಿವೆ. ಈಗ ಈ ತಂತ್ರವನ್ನು ಅನುಸರಿಸಿದರೆ ಜನರನ್ನು ತಲುಪಲು ಸುಲಭವಾಗುತ್ತದೆ. ಅಷ್ಟೇ ಅಲ್ಲದೇ ಮೋದಿ ವಿರೋಧಿ ಅಲೆಯನ್ನು ದೇಶದೆಲ್ಲೆಡೆ ಪಸರಿಸಲು ಈ ನಿರ್ಧಾರ ಸೂಕ್ತ ಎನ್ನುವ ತೀರ್ಮಾನಕ್ಕೆ ಬಂದಿದೆ.

    ಬಿಹಾರದಲ್ಲಿ ಜೆಡಿಯು ಮತ್ತು ಬಿಜೆಪಿ ಈಗ ಒಂದಾಗಿದ್ದರೂ ಚುನಾವಣೆಯ ಸಂದರ್ಭದಲ್ಲಿ ಆರ್ ಜೆಡಿ, ಕಾಂಗ್ರೆಸ್, ಜೆಡಿಯು ಮಹಾಘಟಬಂಧನ್ ಮೈತ್ರಿಕೂಟ ಬಿಜೆಪಿಯನ್ನು ಸೋಲಿಸುವಲ್ಲಿ ಯಶಸ್ವಿಯಾಗಿತ್ತು. ಈ ತಂತ್ರದ ಮುಂದುವರಿದ ಭಾಗವಾಗಿ ದೇಶದೆಲ್ಲೆಡೆ ಮೈತ್ರಿ ಮಾಡಿಕೊಂಡರೆ ಹಂಚಿಕೆಯಾಗಲಿರುವ ಮತಗಳು ಓರ್ವ ಅಭ್ಯರ್ಥಿಗೆ ಬೀಳಬಹುದು. ಮೈತ್ರಿಯ ಪೂರ್ವಭಾವಿಯಾಗಿ ಈ ರಾಜೀನಾಮೆ ನೀಡುವ ಮೂಲಕ ಒಗ್ಗಟ್ಟು ಪ್ರದರ್ಶಿಸಲು ವಿಪಕ್ಷಗಳು ಸಿದ್ಧತೆ ನಡೆಸಿವೆ ಎಂದು ಹೇಳಲಾಗುತ್ತಿದೆ.

    ಈ ಬಾರಿಯ ಕಲಾಪ ಸರಿಯಾಗಿ ನಡೆಯದೇ ಇದ್ದ ಕಾರಣ ಎನ್‍ಡಿಎ ಸಂಸದರು ಸಂಬಳವನ್ನು ಪಡೆಯದೇ ಇರುವ ತೀರ್ಮಾನವನ್ನು ಕೈಗೊಂಡಿದ್ದಾರೆ. ಅಷ್ಟೇ ಅಲ್ಲದೇ ವಿಪಕ್ಷಗಳಿಂದಾಗಿ ಕಲಾಪ ಹಾಳಾಗಿದೆ ಎನ್ನುವುದನ್ನು ತೋರಿಸಲು ಜನರ ತೆರಿಗೆ ಹಣವನ್ನು ಪಡೆಯುವುದು ಸಮಂಜಸ ಅಲ್ಲ ಎನ್ನುವ ನಿರ್ಧಾರಕ್ಕೆ ಎನ್‍ಡಿಎ ಬಂದಿದೆ. ನಮ್ಮ ಮೇಲೆ ಬಂದಿರುವ ಈ ಆರೋಪಕ್ಕೆ ತಿರುಗೇಟು ನೀಡಲು ಸದನ ಸರಿಯಾಗಿ ನಡೆಯದೇ ಇರಲು ನಾವು ಕಾರಣವಲ್ಲ. ಸರ್ಕಾರದ ನೀತಿಯಿಂದಲೇ ಕಲಾಪ ವ್ಯರ್ಥವಾಗಿದೆ ಎನ್ನುವುದನ್ನು ಜನರಿಗೆ ವಿವರಿಸಲು ಸಾಮೂಹಿಕ ರಾಜೀನಾಮೆಯ ನಿರ್ಧಾರಕ್ಕೆ ವಿಪಕ್ಷಗಳು ಬಂದಿವೆ ಎನ್ನಲಾಗಿದೆ.

    ಆಂಧ್ರದ ಪ್ರತ್ಯೇಕ ಸ್ಥಾನಮಾನ ನೀಡುವ ವಿಚಾರದಲ್ಲಿ ಕೇಂದ್ರ ಸರ್ಕಾರ ವಿರುದ್ಧ ಅವಿಶ್ವಾಸ ಗೊತ್ತುವಳಿಯನ್ನು ಮಂಡಿಸಲು ಟಿಡಿಪಿ, ವೈಎಸ್ ಆರ್ ಕಾಂಗ್ರೆಸ್, ಕಾಂಗ್ರೆಸ್ ಪ್ರಯತ್ನ ಮಾಡಿದರೂ ಯಶಸ್ವಿಯಾಗಲಿಲ್ಲ. ಹೀಗಾಗಿ ಕೊನೆಯ ಅಸ್ತ್ರ ಎಂಬಂತೆ ಕೇಂದ್ರ ವಿರುದ್ಧ ಹೋರಾಟ ನಡೆಸಲು ವಿಪಕ್ಷಗಳು ಸಾಮೂಹಿಕ ರಾಜೀನಾಮೆಯ ತಂತ್ರಕ್ಕೆ ಬಂದಿದೆ ಎಂದು ಹೇಳಲಾಗುತ್ತದೆ.

    ಸಾಮೂಹಿಕ ರಾಜೀನಾಮೆ ಯಶಸ್ವಿಯಾಗುತ್ತಾ?
    ಸಾಮೂಹಿಕ ರಾಜೀನಾಮೆ ನೀಡುವ ನಿರ್ಧಾರವನ್ನು ಚಂದ್ರಬಾಬು ನಾಯ್ಡು, ರಾಹುಲ್ ಗಾಂಧಿ, ಶರದ್ ಪವಾರ್ ತೆಗೆದುಕೊಂಡಿದ್ದರೂ ಉಳಿದ ನಾಯಕರು ಒಪ್ಪಿಗೆ ಸೂಚಿಸುತ್ತಾರಾ ಎನ್ನುವ ಪ್ರಶ್ನೆ ಎದ್ದಿದೆ. ವಿಶೇಷವಾಗಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಬಹಿರಂಗವಾಗಿಯೇ ರಾಹುಲ್ ಗಾಂಧಿ ವಿರುದ್ಧ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದು, ಕಾಂಗ್ರೆಸ್ ಹೊರತಾಗಿರುವ ಮೂರನೇ ಮೈತ್ರಿಕೂಟ ರಚನೆಯಾಗಬೇಕು ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ ಒಡಿಶಾದಲ್ಲಿ ಬಿಜೆಡಿ ಬೆಂಬಲಿಸುತ್ತಾ ಎನ್ನುವ ಪ್ರಶ್ನೆಯೂ ಎದ್ದಿದೆ.

    ದಕ್ಷಿಣ ಭಾರತದಲ್ಲಿ ರಾಷ್ಟ್ರೀಯ ಪಕ್ಷಗಳಿಗಿಂತಲೂ ಪ್ರಾದೇಶಿಕ ಪಕ್ಷಗಳು ನಿರ್ಣಾಯಕ ಪಾತ್ರವಹಿಸುತ್ತದೆ. ಹೀಗಾಗಿ ಶಿವಸೇನೆ, ಡಿಎಂಕೆ, ಎಐಡಿಎಂಕೆ, ಬಿಜೆಡಿ, ಟಿಎಂಸಿ ನಾಯಕರ ನಿರ್ಧಾರದ ಮೇಲೆ ಸಾಮೂಹಿಕ ರಾಜೀನಾಮೆ ತಂತ್ರ ನಿಂತಿದೆ ಎನ್ನುವ ವಿಶ್ಲೇಷಣೆ ಈಗ ಕೇಳಿಬಂದಿದೆ.

  • ಮಹಿಳೆಯರಿಗೆ ವಿಶೇಷ ಸ್ಥಾನಮಾನಕ್ಕೆ ಆಗ್ರಹಿಸಿ ಸೀರೆ ಧರಿಸಿ ಪ್ರತಿಭಟಿಸಿದ ಸಂಸದ!

    ಮಹಿಳೆಯರಿಗೆ ವಿಶೇಷ ಸ್ಥಾನಮಾನಕ್ಕೆ ಆಗ್ರಹಿಸಿ ಸೀರೆ ಧರಿಸಿ ಪ್ರತಿಭಟಿಸಿದ ಸಂಸದ!

    ನವದೆಹಲಿ: ಆಂಧ್ರಪ್ರದೇಶದ ಮಹಿಳೆಯರಿಗೆ ವಿಶೇಷ ಸವಲತ್ತುಗಳನ್ನು ನೀಡುವಂತೆ ಆಗ್ರಹಿಸಿ ತೆಲುಗು ದೇಶಂ ಪಕ್ಷದ(ಟಿಡಿಪಿ) ಸಂಸದ ಎನ್ ಶಿವಪ್ರಸಾದ್ ವಿನೂತನವಾಗಿ ಪ್ರತಿಭಟನೆ ನಡೆಸಿದ್ದಾರೆ.

    ಮಹಿಳೆಯರಂತೆ ಸೀರೆ ಉಟ್ಟು ಸಂಸದರು ಕೇಂದ್ರ ಸಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಕಾಂಗ್ರೆಸ್ ಸಂಸದೆ ರೇಣುಕಾ ಚೌಧರಿ ಅವರು ಶಿವಪ್ರಸಾದ್ ಅವರಿಗೆ ಸಾಥ್ ನೀಡಿದ್ದಾರೆ.

    2018ರ ಕೇಂದ್ರ ಬಜೆಟ್ ನಲ್ಲಿ ಆಂಧ್ರಪ್ರದೇಶದ ಜನತೆಗೆ ಸಾಕಷ್ಟು ಫಂಡ್ ನೀಡಲಿಲ್ಲ ಎಂದು ಟಿಡಿಪಿ ಕಳೆದ ತಿಂಗಳಿನಿಂದಲೂ ಕೇಂದ್ರ ಸರ್ಕರದ ವಿರುದ್ಧ ವಿನೂತನ ರೀತಿಯಲ್ಲಿ ಪ್ರತಿಭಟಿಸುತ್ತಲೇ ಬಂದಿದೆ. ಇದರ ಹಿತೆಗೆ ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ಕೊಡಬೇಕೆಂದು ಒತ್ತಾಯಿಸಿದ್ದಾರೆ. ಇಲ್ಲಿನ ಸರ್ಕಾರ 2018-19ರಲ್ಲಿ ಸುಮಾರು 416 ಕೋಟಿ ರೂ.ಗಳಷ್ಟು ಆದಾಯದ ಕೊರತೆ ಎದುರಿಸುತ್ತಿದೆ ಅಂತ ರಾಷ್ಟ್ರೀಯ ಪತ್ರಿಕೆಯೊಂದು ವರದಿ ಮಾಡಿದೆ.

    ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ನಮ್ಮ ರಾಜ್ಯಕ್ಕೆ ನ್ಯಾಯ ಒದಗಿಸಬಹುದು ಅಂತ ಅಂದುಕೊಂಡಿದ್ವಿ. ಆದ್ರೆ ಇಲ್ಲಿಯವರೆಗೆ ನಮಗೆ ಯಾವುದೇ ರೀತಿಯ ನ್ಯಾಯ ದೊರಕಿಲ್ಲ. ಕಳೆದ 4 ವರ್ಷದಿಂದ ಕಾಯುತ್ತಿದ್ದೇವೆ. ಯಾವುದೇ ಪ್ರಯೋಜನವಿಲ್ಲ. 2018ರ ಬಜೆಟ್ ನಲ್ಲಾದರೂ ರಾಜ್ಯಕ್ಕೆ ಸರ್ಕಾರ ಕೊಡುಗೆ ನೀಡಬಹುದು ಅಂತ ಆಶಯ ವ್ಯಕ್ತಪಡಿಸಿದ್ವಿ. ಆದ್ರೆ ಈ ಬಾರಿಯ ಬಜೆಟ್ ನಲ್ಲೂ ರಾಜ್ಯಕ್ಕೆ ಕೊಡುಗೆ ನೀಡುವಲ್ಲಿ ಸರ್ಕಾರ ವಿಫಲವಾಗಿದೆ ಅಂತ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ತಿಳಿಸಿದ್ದಾರೆ.

    ಈ ಹಿಂದೆ ಅಂದ್ರೆ 2016ರಲ್ಲಿ ನೋಟು ನಿಷೇಧವಾದ ಸಂದರ್ಭದಲ್ಲಿ ರಾಜ್ಯದ ಜನತೆ ಕಷ್ಟ ಅನುಭವಿಸಿದ್ದು, ಈ ವೇಳೆ ಸಂಸದ ಶಿಪ್ರಸಾದ್ ಅವರು ಕಪ್ಪು-ಬಿಳುಪಿನ ಉಡುಗೆ ತೊಟ್ಟು ಸಂಸತ್ತಿಗೆ ಆಗಮಿಸಿ ಪ್ರತಿಭಟಿಸಿದ್ದರು.

  • ಎನ್‍ಡಿಎಯಿಂದ ಹೊರಬಂದ ಟಿಡಿಪಿ: ಲೋಕಸಭೆ, ರಾಜ್ಯಸಭೆಯಲ್ಲಿ ಬಲಾಬಲ ಹೇಗಿದೆ?

    ಎನ್‍ಡಿಎಯಿಂದ ಹೊರಬಂದ ಟಿಡಿಪಿ: ಲೋಕಸಭೆ, ರಾಜ್ಯಸಭೆಯಲ್ಲಿ ಬಲಾಬಲ ಹೇಗಿದೆ?

    ಹೈದರಾಬಾದ್: ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನ ನೀಡಬೇಕೆಂಬ ಬೇಡಿಕೆಗೆ ಕೇಂದ್ರ ಮಣಿಯದ ಹಿನ್ನೆಲೆಯಲ್ಲಿ ತೆಲುಗು ದೇಶಂ ಪಾರ್ಟಿ(ಟಿಡಿಪಿ) ಎನ್‍ಡಿಎ ಒಕ್ಕೂಟದಿಂದ ಹೊರ ಬಂದಿದೆ.

    ಎನ್‍ಡಿಎ ಒಕ್ಕೂಟದಿಂದ ಹೊರ ಬಂದಿರುವ ಟಿಡಿಪಿ ವೈಎಸ್‍ಆರ್ ಕಾಂಗ್ರೆಸ್ ಜೊತೆಗೂಡಿ ಅವಿಶ್ವಾಸ ಮಂಡನೆಗೆ ಮುಂದಾಗಿದೆ. ಮೋದಿ ಸರ್ಕಾರದ ವಿರುದ್ಧ ಸೋಮವಾರ ಅವಿಶ್ವಾಸ ಗೊತ್ತುವಳಿ ಮಂಡನೆಗೆ ಅವಕಾಶ ನೀಡುವಂತೆ ವೈಎಸ್‍ಆರ್ ಕಾಂಗ್ರೆಸ್ ಪಕ್ಷವು ಗುರುವಾರ ಲೋಕಸಭೆಯಲ್ಲಿ ನೋಟಿಸ್ ನೀಡಿತ್ತು.

    ಅವಿಶ್ವಾಸ ಗೊತ್ತುವಳಿ ಮಂಡನೆಗೆ ಅವಕಾಶ ಪಡೆಯಲು ಲೋಕಸಭೆಯಲ್ಲಿ ಕನಿಷ್ಟ 50 ಸದಸ್ಯರ ಬೆಂಬಲ ಅಗತ್ಯವಿರುತ್ತದೆ. ಪ್ರಸ್ತುತ 536 ಸದಸ್ಯರು ಇರುವ ಲೋಕಸಭೆಯಲ್ಲಿ ಬಿಜೆಪಿ 274 ಸದಸ್ಯರ ಬಲವನ್ನು ಹೊಂದಿದೆ. ಲೋಕಸಭೆಯಲ್ಲಿ ಅರ್ಧಕ್ಕಿಂತಲೂ ಹೆಚ್ಚಿನ ಸಂಖ್ಯೆಯನ್ನು ಹೊಂದಿರುವ ಕಾರಣ ಸರ್ಕಾರ ಬೀಳುವುದಿಲ್ಲ ಎನ್ನುವ ವಿಶ್ವಾಸದಲ್ಲಿ ಬಿಜೆಪಿ ಇದೆ.

    2014 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 282 ಸ್ಥಾನಗಳಿಸಿತ್ತು. ಅಂತಿಮವಾಗಿ ಎನ್‍ಡಿಎ ಮಿತ್ರಕೂಟ 336 ಸ್ಥಾನಗಳನ್ನು ಪಡೆಯುವ ಮೂಲಕ ಮೋದಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದರು.

    ಈಗಿನ ಬಲಾಬಲ ಹೇಗಿದೆ?
    ಟಿಡಿಪಿ ಹೊರಬಂದ ಹಿನ್ನೆಲೆಯಲ್ಲಿ ಎನ್‍ಡಿಎ ಬಲ ಈಗ ಕುಗ್ಗಿದೆ. 22 ಲೋಕಸಭಾ 6 ರಾಜ್ಯಸಭಾ ಸದಸ್ಯರು ಟಿಡಿಪಿಯಲ್ಲಿದ್ದಾರೆ. ಉಪ ಚುನಾವಣೆಯಲ್ಲಿ ಬಿಜೆಪಿ ಸೋತಿದ್ದ ಕಾರಣ ಈಗ ಲೋಕಸಭೆಯಲ್ಲಿ ಬಿಜೆಪಿ ಬಲ ಈಗ 282 ರಿಂದ 274 ಇಳಿಕೆಯಾಗಿದೆ. ಟಿಡಿಪಿ ಬೆಂಬಲ ವಾಪಸ್ ಪಡೆದ ಕಾರಣ ಎನ್‍ಡಿಎ ಸದಸ್ಯರ ಬಲ 331 ರಿಂದ 315ಕ್ಕೆ ಕುಸಿದಿದೆ. ರಾಜ್ಯಸಭೆಯಲ್ಲಿ 79 ಸದಸ್ಯರಿದ್ದ ಎನ್‍ಡಿಎ 73ಕ್ಕೆ ಕುಸಿದಿದೆ. ಇದನ್ನೂ ಓದಿ: ಎನ್‍ಡಿಎ ಮಿತ್ರಕೂಟದಲ್ಲಿ ಒಡಕು – ಮೋದಿಗೆ ಟಿಡಿಪಿ ನಾಯಕರಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ

  • ಎನ್‍ಡಿಎ ಮಿತ್ರಕೂಟದಲ್ಲಿ ಒಡಕು – ಮೋದಿಗೆ ಟಿಡಿಪಿ ನಾಯಕರಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ

    ಎನ್‍ಡಿಎ ಮಿತ್ರಕೂಟದಲ್ಲಿ ಒಡಕು – ಮೋದಿಗೆ ಟಿಡಿಪಿ ನಾಯಕರಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ

    ನವದೆಹಲಿ: ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಗೂ ಮೊದಲೇ ಎನ್‍ಡಿಎ ಕೂಟದಲ್ಲಿ ಬಿರುಕು ಕಾಣಿಸಿಕೊಂಡಿದೆ. ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನದ ವಿಚಾರವಾಗಿ ಮೋದಿ ವಿರುದ್ಧ ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಮುನಿಸಿಕೊಂಡಿದ್ದಾರೆ.

    ಚಂದ್ರಬಾಬು ಸಂಪುಟುದಲ್ಲಿದ್ದ ಬಿಜೆಪಿ ಸಚಿವರಾದ ಕೆ.ಶ್ರೀನಿವಾಸ್ ಮತ್ತು ಮಾಣಿಕ್ಯಲಾ ರಾವ್ ಅವರು ಸ್ಪೀಕರ್‍ಗೆ ರಾಜೀನಾಮೆ ಸಲ್ಲಿಸಿದ್ದರು. ಇದರ ಬೆನ್ನಲ್ಲೇ ಸಂಜೆ ಹೊತ್ತಿಗೆ ಟಿಡಿಪಿ ಮುಖಂಡರಾದ ಕೇಂದ್ರ ವಿಮಾನಯಾನ ಸಚಿವ ಅಶೋಕ್ ಗಜಪತಿರಾಜು, ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ರಾಜ್ಯ ಸಚಿವ ವೈ.ಎಸ್.ಚೌಧರಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

    ರಾಜೀನಾಮೆ ಇನ್ನೂ ಅಂಗೀಕಾರವಾಗಿಲ್ಲ. ಸಂಪುಟದಿಂದ ಹೊರ ಬಂದರೂ ಮೈತ್ರಿಕೂಟದಿಂದ ಹೊರ ಬಂದಿಲ್ಲ ಅಂತ ಗಜಪತಿ ಬಾಬು ಹೇಳಿದ್ದರು. ಇದಕ್ಕೂ ಮುನ್ನ ಚಂದ್ರಬಾಬು ನಾಯ್ಡು ಜೊತೆ ಪ್ರಧಾನಿ ಮೋದಿ 20 ನಿಮಿಷ ದೂರವಾಣಿ ಮೂಲಕ ಸಂಧಾನ ಮಾತುಕತೆ ನಡೆಸಿದ್ದಾರೆ.

    ಟಿಡಿಪಿ ಬೆನ್ನಲ್ಲೇ ಬಿಹಾರದ ನಿತೀಶ್ ಕುಮಾರ್ ಸಹ ನಮಗೂ ವಿಶೇಷ ಸ್ಥಾನಮಾನ ಬೇಕು ಅಂತ ಕೇಳಿದ್ದಾರೆ. ಎನ್‍ಡಿಎ ಕೂಟದ ವಿರುದ್ಧ ಮಿತ್ರಪಕ್ಷಗಳ ಮುನಿಸು ಇದೇ ಮೊದಲೇನಲ್ಲ. ಜೆಡಿಯು, ಶಿವಸೇನೆ, ಅಕಾಲಿದಳ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದು ಯಾವುದೇ ಕ್ಷಣದಲ್ಲೂ ಹೊರಬರುವ ಸಾಧ್ಯತೆ ಇದೆ ಎನ್ನಲಾಗಿದೆ.

    ಟಿಡಿಪಿ ಅರೋಪಕ್ಕೆ ಪ್ರತಿಕ್ರಿಯಿಸಿರೋ ಕೇಂದ್ರ ಸಚಿವ ಸದಾನಂದಗೌಡ, ಟಿಡಿಪಿಗೆ ನಾವು ಎಂದೂ ಮಿತ್ರದ್ರೋಹ ಮಾಡಿಲ್ಲ ಏಳನೇ ಹಣಕಾಸು ಆಯೋಗದಲ್ಲಿ ಆಂಧ್ರಪ್ರದೇಶಕ್ಕೆ ಬೇರೆ ಎಲ್ಲ ರಾಜ್ಯಗಳಿಗಿಂತ ಹೆಚ್ಚು ಅನುದಾನ ಕೊಡಲಾಗಿದೆ. ಆದರೂ ಚಂದ್ರಬಾಬು ನಾಯ್ಡು ಏಕೆ? ಈ ನಿರ್ಧಾರಕ್ಕೆ ಬಂದಿದ್ದಾರೆ ಗೊತ್ತಿಲ್ಲ ಎಂದರು.

    ಇನ್ನೂ ಆಂಧ್ರಪ್ರದೇಶ ವಿಧಾನಸಭೆಯಲ್ಲಿ ಬಿಜೆಪಿ ಸಚಿವರ ರಾಜೀನಾಮೆ ಕುರಿತು ಪ್ರತಿಕ್ರಿಯೆ ನೀಡಿದ ಸಿಎಂ ಚಂದ್ರಬಾಬು ನಾಯ್ಡು ಅವರು, ನಮ್ಮ ಕ್ಯಾಬಿನೆಟ್ ನಲ್ಲಿ ಇಬ್ಬರು ಸಚಿವರು ಉತ್ತಮವಾಗಿ ಕಾರ್ಯನಿರ್ವಹಿಸಿದ್ದರು. ತಮಗೇ ವಹಿಸಿದ್ದ ಇಲಾಖೆಗಳಲ್ಲಿ ಹಲವು ಅಭಿವೃದ್ಧಿ ಕಾರ್ಯಮಾಡಿದ್ದಾರೆ. ಅವರ ಸೇವೆಗೆ ಧನ್ಯವಾದಗಳನ್ನು ತಿಳಿಸಿಸುತ್ತೇನೆ ಎಂದು ಹೇಳಿದರು.

    ಈ ವೇಳೆ ಕೇಂದ್ರದ ನೀತಿಯ ವಿರುದ್ಧ ಕಿಡಿಕಾರಿದ ಅವರು, ಕೇಂದ್ರ ಸರ್ಕಾರ ಈಶಾನ್ಯ ರಾಜ್ಯಗಳ ಅಭಿವೃದ್ಧಿಗೆ ನೀಡುತ್ತಿರುವ ಬೆಂಬಲವನ್ನು ಆಂಧ್ರಪ್ರದೇಶ ಅಭಿವೃದ್ಧಿ ವಿಚಾರದಲ್ಲಿ ನೀಡುತ್ತಿಲ್ಲ. ಕೇಂದ್ರ ಸರ್ಕಾರ ಏಕೆ ಈ ನೀತಿಯನ್ನು ಅನುಸರಿಸುತ್ತಿದೆ ಎಂದು ಪ್ರಶ್ನಿಸಿದರು.

    ಮುನಿಸು ಯಾಕೆ?
    ರಾಜ್ಯದ ಬಿಜೆಪಿ ನಾಯಕರು ಟಿಡಿಪಿಯನ್ನು ಸರ್ಕಾರದ ವಿರುದ್ಧ ಬಹಿರಂಗ ಹೇಳಿಕೆ ನೀಡುತ್ತಿದ್ದ ಹಿನ್ನೆಲೆಯಲ್ಲಿ ಚಂದ್ರ ಬಾಬು ನಾಯ್ಡು ಮೊದಲೇ ಮುನಿಸಿಕೊಂಡಿದ್ದರು. ಆದರೆ ಕೇಂದ್ರದ ಹಣಕಾಸು ಬಜೆಟ್ ನಲ್ಲಿ ವಿಶೇಷ ಅನುದಾನ ನೀಡದ ಹಿನ್ನೆಲೆಯಲ್ಲಿ ಈ ಅಸಮಾಧಾನಗೊಂಡಿದ್ದರು.

    ಚಂದ್ರಬಾಬು ನಾಯ್ಡ, ಬಿಜೆಪಿಯವರು ಪದೇ ಪದೇ ಟೀಕೆ ಮಾಡುತ್ತಿದ್ದರೂ ನಾನು ನಮ್ಮ ಮುಖಂಡರಿಗೆ ತಿರುಗೇಟು ನೀಡದಂತೆ ತಡೆಯುತ್ತಿದ್ದೇನೆ. ಟಿಡಿಪಿ ಈಗಲೂ ಮಿತ್ರ ಧರ್ಮವನ್ನು ಪಾಲಿಸುತ್ತಿದ್ದರೂ ಸ್ಥಳೀಯ ಬಿಜೆಪಿ ನಾಯಕರು ನಮ್ಮ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಹೀಗಾಗಿ ಕೇಂದ್ರದ ಬಿಜೆಪಿ ನಾಯಕರು ಸ್ಥಳೀಯ ನಾಯಕರ ಆರೋಪಗಳ ಬಗ್ಗೆ ಗಮನ ನೀಡುತ್ತಾರೆ ಎನ್ನುವ ಭರವಸೆಯನ್ನು ನಾನು ಹೊಂದಿದ್ದೇನೆ. ಒಂದು ವೇಳೆ ಬಿಜೆಪಿ ಮೈತ್ರಿ ಮುಂದುವರಿಸಲು ಬಯಸದಿದ್ದರೆ ಟಿಡಿಪಿ ತನ್ನದೇ ದಾರಿಯಲ್ಲಿ ಸಾಗಲಿದೆ ಎಂದು ಈ ಹಿಂದೆ ಪ್ರತಿಕ್ರಿಯಿಸಿದ್ದರು.

    ಎನ್‍ಡಿಎ ಮೈತ್ರಿಕೂಟದಲ್ಲಿ ಮಿತ್ರ ಪಕ್ಷಗಳಿಗೆ ಬೆಲೆ ಇಲ್ಲ. ಬಿಜೆಪಿಗೆ ಮಾತ್ರ ಬೆಲೆಯಿದೆ. ನೆಪ ಮಾತ್ರಕ್ಕೂ ಇದುವರೆಗೆ ಮೈತ್ರಿಕೂಟದ ಅಂಗಪಕ್ಷಗಳ ಸಭೆ ನಡೆಸಿಲ್ಲ. ಪ್ರಮುಖ ನಿರ್ಧಾರದ ವೇಳೆ ಅಂಗಪಕ್ಷಗಳನ್ನು ಸಂಪರ್ಕಿಸದೇ ಬಿಜೆಪಿ ಮುಖಂಡರೇ ಏಕಪಕ್ಷೀಯ ನಿರ್ಧಾರ ಕೈಗೊಳ್ಳುತ್ತಿದ್ದಾರೆ ಎನ್ನುವ ಆರೋಪವನ್ನು ಟಿಡಿಪಿ ಮಾಡಿದೆ.

  • ಜೇಟ್ಲಿ ಬಜೆಟ್ ವಿರುದ್ಧ ಮುನಿಸು: ಎನ್‍ಡಿಎ ಮೈತ್ರಿಕೂಟಕ್ಕೆ ಟಿಡಿಪಿ ಗುಡ್‍ಬೈ?

    ಜೇಟ್ಲಿ ಬಜೆಟ್ ವಿರುದ್ಧ ಮುನಿಸು: ಎನ್‍ಡಿಎ ಮೈತ್ರಿಕೂಟಕ್ಕೆ ಟಿಡಿಪಿ ಗುಡ್‍ಬೈ?

    ಹೈದರಾಬಾದ್: ದಕ್ಷಿಣ ಭಾರತದಲ್ಲಿ ಬಿಜೆಪಿಯ ಅತ್ಯಂತ ದೊಡ್ಡ ಮಿತ್ರಪಕ್ಷವಾಗಿರುವ ತೆಲುಗು ದೇಶಂ ಪಾರ್ಟಿ (ಟಿಡಿಪಿ) ಎನ್‍ಡಿ ಮೈತ್ರಿಕೂಟದಿಂದ ಹೊರ ಬರಲು ಚಿಂತನೆ ನಡೆಸಿದ್ದು ಭಾನುವಾರ ನಿರ್ಧಾರ ಪ್ರಕಟವಾಗಲಿದೆ.

    ಹಣಕಾಸು ಬಜೆಟ್ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಆಂಧ್ರ ಸಿಎಂ ಚಂದ್ರಬಾಬು ನಾಯ್ಡ, ಬಜೆಟ್ ನಲ್ಲಿ ನಮಗೆ ಏನು ಸಿಕ್ಕಿಲ್ಲ, ನಮ್ಮ ರಾಜ್ಯವನ್ನು ನಿರ್ಲಕ್ಷ್ಯಿಸಿದೆ ಎಂದು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

    ಭಾನುವಾರ ಪಕ್ಷದ ಮುಖಂಡರ ಜೊತೆ ಮಹತ್ವದ ಸಭೆ ನಡೆಸಲಿದ್ದು ರಾಜ್ಯದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಈ ಸಭೆಯಲ್ಲಿ ಎನ್‍ಡಿಎಗೆ ಬೆಂಬಲ ನೀಡಬೇಕೇ ಬೇಡವೇ ಎನ್ನುವುದರ ಬಗ್ಗೆ ನಿರ್ಧಾರ ಪ್ರಕಟವಾಗುವ ಸಾಧ್ಯತೆಯಿದೆ.

    ಈ ಹಿಂದೆ ಬಿಜೆಪಿ ನಾಯಕರು ಪೋಲಾವರಂ ಯೋಜನೆ ಮತ್ತು ಹೊಸ ರಾಜಧಾನಿ ಅಮರಾವತಿ ನಿರ್ಮಾಣ ಪೂರ್ಣಗೊಳ್ಳುವವರೆಗೆ ಆಂಧ್ರ ಪ್ರದೇಶಕ್ಕೆ ಕೇಂದ್ರದ ಹೆಚ್ಚಿನ ನೆರವು ನೀಡುವುದಾಗಿ ಭರವಸೆ ನೀಡಿದ್ದರು. ವಿಶಾಖಪಟ್ಟಣವನ್ನು ಕೇಂದ್ರವಾಗಿಸಿ ಹೊಸ ರೈಲ್ವೆ ವಲಯ ಸ್ಥಾಪನೆಯಂತಹ ಭರವಸೆಗಳನ್ನು ನೀಡಿದ್ದರೂ ಇದು ಅನುಷ್ಠಾನಕ್ಕೆ ಬಾರದ ಹಿನ್ನೆಲೆಯಲ್ಲಿ ಚಂದ್ರ ಬಾಬು ನಾಯ್ಡು ಅಸಮಾಧಾನಗೊಂಡಿದ್ದಾರೆ.

    ರಾಜ್ಯದ ಬಿಜೆಪಿ ನಾಯಕರು ಟಿಡಿಪಿಯನ್ನು ಸರ್ಕಾರದ ವಿರುದ್ಧ ಬಹಿರಂಗ ಹೇಳಿಕೆ ನೀಡುತ್ತಿದ್ದ ಹಿನ್ನೆಲೆಯಲ್ಲಿ ಚಂದ್ರ ಬಾಬು ನಾಯ್ಡು ಮೊದಲೇ ಮುನಿಸಿಕೊಂಡಿದ್ದರು. ಆದರೆ ಈಗ ಬಜೆಟ್ ನಲ್ಲಿ ವಿಶೇಷ ಅನುದಾನ ನೀಡದ ಹಿನ್ನೆಲೆಯಲ್ಲಿ ಈ ಅಸಮಾಧಾನ ಮತ್ತಷ್ಟು ಹೆಚ್ಚಾಗಿದೆ.

    ಕೆಲ ದಿನಗಳ ಹಿಂದೆ ಚಂದ್ರಬಾಬು ನಾಯ್ಡ, ಬಿಜೆಪಿಯವರು ಪದೇ ಪದೇ ಟೀಕೆ ಮಾಡುತ್ತಿದ್ದರೂ ನಾನು ನಮ್ಮ ಮುಖಂಡರಿಗೆ ತಿರುಗೇಟು ನೀಡದಂತೆ ತಡೆಯುತ್ತಿದ್ದೇನೆ. ಟಿಡಿಪಿ ಈಗಲೂ ಮಿತ್ರ ಧರ್ಮವನ್ನು ಪಾಲಿಸುತ್ತಿದ್ದರೂ ಸ್ಥಳೀಯ ಬಿಜೆಪಿ ನಾಯಕರು ನಮ್ಮ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಹೀಗಾಗಿ ಕೇಂದ್ರದ ಬಿಜೆಪಿ ನಾಐಕರು ಸ್ಥಳೀಯ ನಾಯಕರ ಆರೋಪಗಳ ಬಗ್ಗೆ ಗಮನ ನೀಡುತ್ತಾರೆ ಎನ್ನುವ ಭರವಸೆಯನ್ನು ನಾನು ಹೊಂದಿದ್ದೇನೆ. ಒಂದು ವೇಳೆ ಬಿಜೆಪಿ ಮೈತ್ರಿ ಮುಂದುವರಿಸಲು ಬಯಸದಿದ್ದರೆ ಟಿಡಿಪಿ ತನ್ನದೇ ದಾರಿಯಲ್ಲಿ ಸಾಗಲಿದೆ ಎಂದು ಪ್ರತಿಕ್ರಿಯಿಸಿದ್ದರು.  ಇದನ್ನೂ ಓದಿ: ಎನ್‍ಡಿಎ ಒಕ್ಕೂಟದಿಂದ ಹೊರಬಂದ ಶಿವಸೇನೆ