Tag: ಟಿಡಿಪಿ

  • ನಿರ್ಮಾಣ ಹಂತದಲ್ಲಿದ್ದ YSR ಕಾಂಗ್ರೆಸ್‌ ಪಕ್ಷದ ಕಚೇರಿ ಧ್ವಂಸ – ಸೇಡಿನ ರಾಜಕಾರಣ ಎಂದು ಆಕ್ರೋಶ

    ನಿರ್ಮಾಣ ಹಂತದಲ್ಲಿದ್ದ YSR ಕಾಂಗ್ರೆಸ್‌ ಪಕ್ಷದ ಕಚೇರಿ ಧ್ವಂಸ – ಸೇಡಿನ ರಾಜಕಾರಣ ಎಂದು ಆಕ್ರೋಶ

    ಅಮರಾವತಿ: ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ತಾಡೆಪಲ್ಲಿಯಲ್ಲಿ ನಿರ್ಮಾಣ ಹಂತದಲ್ಲಿದ್ದ ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷದ (YSRCP) ಕಚೇರಿಯನ್ನು ಮುನ್ಸಿಪಲ್ ಕಾರ್ಪೊರೇಷನ್ (MTMC) ಶನಿವಾರ ಮುಂಜಾನೆ ನೆಲಸಮಗೊಳಿಸಿದೆ.

    ಆಂಧ್ರ ಪ್ರದೇಶ ರಾಜಧಾನಿ ಪ್ರದೇಶ ಅಭಿವೃದ್ಧಿ ಪ್ರಧಿಕಾರ ಹಾಗೂ ಮಂಗಲಗಿರಿ ತಡೆಪಲ್ಲಿ ನಗರ ಪಾಲಿಕೆ ಅಧಿಕಾರಿಗಳು ಪೊಲೀಸರ ಸಮ್ಮುಖದಲ್ಲಿ ಕಟ್ಟವನ್ನು ಧ್ವಂಸಗೊಳಿಸುವ ಕೆಲಸ ಮಾಡಿದ್ದಾರೆ. ನೆಲಸಮವಾದ ವೈಎಸ್‌ಆರ್‌ಸಿಪಿ ಕಟ್ಟಡವು ಸೀತಾನಗರಂನ ಬೋಟ್ ಯಾರ್ಡ್ ಆರ್‌ಎಸ್ ನಂ.202-ಎ-1 ನಲ್ಲಿ ಸುಮಾರು 870.40 ಚದರ ಅಡಿಯಷ್ಟು ಸುತ್ತಳತೆ ಹೊಂದಿತ್ತು. ಇದನ್ನೂ ಓದಿ: ಪರೀಕ್ಷಾ ಅಕ್ರಮ ತಡೆಗಟ್ಟಲು ಕೇಂದ್ರ ಸರ್ಕಾರದಿಂದ ಹೊಸ ಕಾನೂನು; 5-10 ವರ್ಷ ಜೈಲು, ಒಂದು ಕೋಟಿ ಕನಿಷ್ಠ ದಂಡ

    ಕಟ್ಟಡ ಧ್ವಂಸಗೊಳಿಸಿದ ಬೆನ್ನಲ್ಲೇ ವೈಎಸ್‌ಆರ್‌ಸಿಪಿ, ಟಿಡಿಪಿ ವಿರುದ್ಧ ಹರಿಹಾಯ್ದಿದೆ. ತನಿಖೆ ಕೋರ್ಟ್‌ನಲ್ಲಿದ್ದರೂ ಧ್ವಂಸಗೊಳಿಸುವ ಕ್ರಮ ಮುಂದುವರಿದಿದೆ. ಇದು ಸೇಡಿನ ರಾಜಕಾರಣ. ಸರ್ವಾಧಿಕಾರಿಗಳಂತೆ ಬುಲ್ಡೋಜರ್‌ ಬಳಿಸಿ ಕಟ್ಟಡವನ್ನು ನೆಲಸಮಗೊಳಿಸಿದ್ದಾರೆ ಎಂದು ಕಿಡಿ ಕಾರಿದೆ. ಇದನ್ನೂ ಓದಿ: ಸೂರಜ್ ರೇವಣ್ಣ ವಿರುದ್ಧ ಅಸಹಜ ಲೈಂಗಿಕ ದೌರ್ಜನ್ಯ ಆರೋಪ – ದೂರು ಬಂದ ಮೇಲೆ ಕ್ರಮ: ಜಿ. ಪರಮೇಶ್ವರ್

    ವೈಎಸ್‌ಆರ್‌ಸಿಪಿ ಗುಂಟೂರು ಜಿಲ್ಲಾಧ್ಯಕ್ಷ ಎಂ.ಶೇಷಗಿರಿ ರಾವ್ ಅವರು ಆಂಧ್ರಪ್ರದೇಶ ಹೈಕೋರ್ಟ್‌ನಲ್ಲಿ ಜೂನ್‌ 10 ರಂದು ರಿಟ್ ಅರ್ಜಿ ಸಲ್ಲಿಸಿದ್ದು, ವಿಚಾರಣೆ ಪೂರ್ಣಗೊಳ್ಳುವವರೆಗೆ ಕಟ್ಟಡದ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ರಾಜ್ಯ ಸರ್ಕಾರ, ಸಿಆರ್‌ಡಿಎ ಮತ್ತು ಎಂಟಿಎಂಸಿಗೆ ನ್ಯಾಯಾಲಯಕ್ಕೆ ಆದೇಶಿಸಬೇಕು ಎಂದು ಕೋರಿದ್ದರು ಎಂದು ವರದಿಯಾಗಿದೆ. ಇದನ್ನೂ ಓದಿ: ರೀಲ್ಸ್‌ ಕ್ರೇಜ್‌ – ಬಾಜಿ ಕಟ್ಟಿ, ಹಠಾತ್ತನೆ ಚಲಿಸುತ್ತಿದ್ದ ಬಸ್‌ ಕೆಳಗೆ ಮಲಗಿದ ಯುವಕ!

  • 31 ತಿಂಗಳ ನಂತರ ಈಡೇರಿತು ಪ್ರತಿಜ್ಞೆ- ಮುಖ್ಯಮಂತ್ರಿಯಾಗಿ ವಿಧಾನಸಭೆಗೆ ಕಾಲಿಟ್ಟ ಚಂದ್ರಬಾಬು ನಾಯ್ಡು

    31 ತಿಂಗಳ ನಂತರ ಈಡೇರಿತು ಪ್ರತಿಜ್ಞೆ- ಮುಖ್ಯಮಂತ್ರಿಯಾಗಿ ವಿಧಾನಸಭೆಗೆ ಕಾಲಿಟ್ಟ ಚಂದ್ರಬಾಬು ನಾಯ್ಡು

    ಅಮರಾವತಿ: ಬರೋಬ್ಬರಿ 31 ತಿಂಗಳ ನಂತರ ಟಿಡಿಪಿಯ (TDP) ಚಂದ್ರಬಾಬು ನಾಯ್ಡು (Chandrababu Naidu) ಮುಖ್ಯಮಂತ್ರಿಯಾಗಿಯೇ ವಿಧಾನಸಭೆ (Vidhana Sabha) ಪ್ರವೇಶಿಸುವ ಮೂಲಕ ಪ್ರತಿಜ್ಞೆ ಈಡೇರಿಸಿದ್ದಾರೆ.

    ವೈಎಸ್‌ಆರ್ ಪಕ್ಷದ ಮುಖಂಡರ ತೀವ್ರ ನಿಂದನೆಯಿಂದ ನೊಂದು ಕಣ್ಣೀರಿಟ್ಟಿದ್ದ ಚಂದ್ರಬಾಬು ನಾಯ್ಡು ಸಿಎಂ ಆಗಿಯೇ ಮತ್ತೆ ಆಂಧ್ರ ಪ್ರದೇಶ (Andhra Pradesh) ವಿಧಾನಸಭೆಗೆ ಕಾಲಿಡುವುದಾಗಿ 2021ರ ನವೆಂಬರ್‌ನಲ್ಲಿ ಶಪಥ ಮಾಡಿದ್ದರು. ಇದನ್ನೂ ಓದಿ: ಚಂದ್ರಬಾಬು ನಾಯ್ಡು ಅವರ ಸೂಪರ್‌ ಸಿಕ್ಸ್‌ ಗ್ಯಾರಂಟಿ ಘೋಷಣೆ ಜಾರಿಗೆ ಬೇಕು 60 ಸಾವಿರ ಕೋಟಿ!

    ಇಂದು ಅಧಿವೇಶನ ಆರಂಭಕ್ಕೆ ಮುನ್ನ ವಿಧಾನಸಭೆಯ ಮೆಟ್ಟಿಲುಗಳಿಗೆ ಸಿಎಂ ಚಂದ್ರಬಾಬು ನಮಸ್ಕಾರ ಮಾಡಿದರು. ಸದನ ಪ್ರವೇಶಿಸುತ್ತಿದ್ದಂತೆ ಆಡಳಿತ ಪಕ್ಷದ ಶಾಸಕರು ಎದ್ದು ನಿಂತು ಚಂದ್ರಬಾಬು ನಾಯ್ಡು ಅವರನ್ನು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಸತ್ಯ ಗೆದ್ದಿದೆ. ಪ್ರಜಾಪ್ರಭುತ್ವ ಉಳಿದಿದೆ ಎಂದು ಟಿಡಿಪಿ ಶಾಸಕರು ಭಿತ್ತಿಪತ್ರ ಪ್ರದರ್ಶಿಸಿ ಸಂಭ್ರಮಿಸಿದರು.

    ಇನ್ನೊಂದು ಕಡೆ ಮಾಜಿ ಸಿಎಂ ವೈಎಸ್ ಜಗನ್‌ಮೋಹನ್‌ರೆಡ್ಡಿ (Jagan Mohan Reddy) ಹಿಂಬಾಗಿಲ ಮೂಲಕ ವಿಧಾನಸಭೆಗೆ ಕಾಲಿಟ್ಟದ್ದು ವಿಶೇಷವಾಗಿತ್ತು. ಇದನ್ನೂ ಓದಿ: ಇಂಡೋ-ಪಾಕ್ ಗಡಿಯಲ್ಲಿ ಸೈನಿಕರೊಂದಿಗೆ ಯೋಗ ಪ್ರದರ್ಶಿಸಿದ ಶ್ವಾನಗಳು

    2021ರಲ್ಲಿ ಆಗಿದ್ದು ಏನು?
    ನವೆಂಬರ್ 19 ರಂದು ಆಗಿನ ಆಡಳಿತದಲ್ಲಿದ್ದ ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷದ (ವೈಎಸ್‌ಆರ್‌ಸಿಪಿ) ಸದಸ್ಯರು ತಮ್ಮ ಪತ್ನಿಯ ಬಗ್ಗೆ ಮಾಡಿದ ನಿಂದನೆಯ  ಹೇಳಿಕೆಯಿಂದ ಬೇಸರಗೊಂಡು ಸದನವನ್ನು ತೊರೆದಿದ್ದರು. ಮಹಿಳಾ ಸಬಲೀಕರಣದ ಚರ್ಚೆಯ ವೇಳೆ ವಿಧಾನಸಭೆಯಿಂದ ಹೊರನಡೆಯುವ ಮುನ್ನ ಚಂದ್ರಬಾಬು ನಾಯ್ಡು ಕಣ್ಣೀರು ಹಾಕಿದ್ದರು.

    ಇದು ಮಹಾಭಾರತದಲ್ಲಿ ದ್ರೌಪದಿಯನ್ನು ಅವಮಾನಿಸಿದ ಕೌರವರ ಸಭೆ ಎಂದು ಕಣ್ಣೀರು ಹಾಕಿದ್ದ ಚಂದ್ರಬಾಬು ನಾಯ್ಡು ಇನ್ನು ಮುಂದೆ ನಾನು ಈ ಸಭೆಗೆ ಹಾಜರಾಗುವುದಿಲ್ಲ. ನಾನು ಮುಖ್ಯಮಂತ್ರಿಯಾದ ನಂತರವೇ ಸದನಕ್ಕೆ ಮರಳುತ್ತೇನೆ ಪ್ರತಿಜ್ಞೆ ಮಾಡಿದ್ದರು.

    ಈ ಬಾರಿ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗೆ ಟಿಡಿಪಿ, ಜನಾಸೇನಾ ಮತ್ತು ಬಿಜೆಪಿ ಮೈತ್ರಿ ಮಾಡಿಕೊಂಡಿತ್ತು. ಈ ಬಾರಿ ಒಟ್ಟು 175 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಟಿಡಿಪಿ 135, ಜನಸೇನಾ 21, ವೈಎಸ್‌ಆರ್‌ಸಿಪಿ 11, ಬಿಜೆಪಿ 8 ಸ್ಥಾನಗಳನ್ನು ಗೆದ್ದುಕೊಂಡಿತ್ತು. 2019ರ ಚುನಾವಣೆಯಲ್ಲಿ ಬಹಳಷ್ಟು ಸೊಷಿಯಲಿಸ್ಟ್‌, ಜನಪ್ರಿಯ ಯೋಜನೆಗಳನ್ನು ಘೋಷಣೆ ಮಾಡಿದ್ದ ಪರಿಣಾಮ ಜಗನ್‌ ನೇತೃತ್ವದ ವೈಎಸ್‌ಅರ್‌ಸಿಪಿ ಕಾಂಗ್ರೆಸ್‌ 151, ಟಿಡಿಪಿ 23, ಜನಸೇನಾ 1 ಸ್ಥಾನವನ್ನು ಗೆದ್ದುಕೊಂಡಿತ್ತು.

     

  • ಟಿಡಿಪಿಯ ಸೂಪರ್‌ ಸಿಕ್ಸ್‌ ಗ್ಯಾರಂಟಿ ಘೋಷಣೆ ಜಾರಿಗೆ ಬೇಕು 60 ಸಾವಿರ ಕೋಟಿ!

    ಟಿಡಿಪಿಯ ಸೂಪರ್‌ ಸಿಕ್ಸ್‌ ಗ್ಯಾರಂಟಿ ಘೋಷಣೆ ಜಾರಿಗೆ ಬೇಕು 60 ಸಾವಿರ ಕೋಟಿ!

    – ಈಗಾಗಲೇ ಸಾಲದ ಸುಳಿಯಲ್ಲಿ ಸಿಲುಕಿರುವ ಆಂಧ್ರ
    – ಜನಪ್ರಿಯ ಯೋಜನೆ ಘೋಷಣೆ ಮಾಡಿ ಹೀನಾಯವಾಗಿ ಸೋತ ಜಗನ್‌

    ಹೈದರಾಬಾದ್‌: ಚುನಾವಣೆಯಲ್ಲಿ ಹಲವು ಭರವಸೆ ನೀಡಿ ಆಂಧ್ರಪ್ರದೇಶದ (Andhra Pradesh) ಅಧಿಕಾರ ಹಿಡಿದಿರುವ ಚಂದ್ರಬಾಬು ನಾಯ್ಡು (Chandrababu Naidu) ನೇತೃತ್ವದ ತೆಲುಗು ದೇಶಂ ಪಕ್ಷ (TDP) ಈ ಭರವಸೆಯನ್ನು ಹೇಗೆ ಈಡೇರಿಸುತ್ತದೆ ಎನ್ನುವುದೇ ದೊಡ್ಡ ಪ್ರಶ್ನೆಯಾಗಿದೆ.

    ನಿರುದ್ಯೋಗಿ ಯುವಕರಿಗೆ ನಗದು ಪಾವತಿ, ಮಹಿಳೆಯರಿಗೆ ಉಚಿತ ಪ್ರಯಾಣ ಮತ್ತು ಉಚಿತ ಎಲ್‌ಪಿಜಿ ಸಿಲಿಂಡರ್‌ ಸೇರಿದಂತೆ ಹಲವು ಭರವಸೆ ಈಡೇರಿಸಲು ಸರ್ಕಾರಕ್ಕೆ ವಾರ್ಷಿಕ ಸುಮಾರು 60 ಸಾವಿರ ಕೋಟಿ ರೂ. ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.

    cm jagan mohan reddy

    ಸಾಲ ಎಷ್ಟಿದೆ?
    ವೈಎಸ್ ಜಗನ್ ಮೋಹನ್ ರೆಡ್ಡಿ (YS Jagan Mohan Reddy) ಸರ್ಕಾರ ಅಧಿಕಾರ ವಹಿಸಿಕೊಂಡ ನಾಲ್ಕು ವರ್ಷದಲ್ಲಿ ಆಂಧ್ರಪ್ರದೇಶದ ಒಟ್ಟು ಸಾಲವು 2023 ರ ಮಾರ್ಚ್ ಅಂತ್ಯದ ವೇಳೆಗೆ 67% ಏರಿಕೆಯಾಗಿ 4,42,442 ಕೋಟಿ ರೂ.ಗೆ ಜಿಗಿದಿದೆ. 2018-19 ರಲ್ಲಿ ರಾಜ್ಯದ ಒಟ್ಟು ವಿತ್ತೀಯ ಕೊರತೆಯು 35,441 ಕೋಟಿ ರೂ. ಇದ್ದರೆ ಮಾರ್ಚ್‌ 31, 2024 ಕ್ಕೆ ಇದು 57% ಏರಿಕೆಯಾಗಿ 55,817.50 ಕೋಟಿ ರೂ. ತಲುಪಿದೆ.

    ಆಡಳಿತದ ವಿಕೇಂದ್ರಿಕರಣ ಮಾಡಲು ಆಂಧ್ರಕ್ಕೆ ಮೂರು ರಾಜಧಾನಿ ಮಾಡಲು ಜಗನ್‌ ಮುಂದಾಗಿದ್ದರೆ ಚಂದ್ರಬಾಬು ನಾಯ್ಡು ಅಮರಾವತಿಯನ್ನೇ ರಾಜಧಾನಿ ಮಾಡಲು ಮುಂದಾಗಿದ್ದರು. ಜಗನ್‌ ಸರ್ಕಾರ ಅಧಿಕಾರಕ್ಕೆ ಏರಿದ ಬಳಿಕ ಅಮರಾವತಿ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಬಿಡುಗಡೆಯಾಗಿರಲಿಲ್ಲ. ಆದರೆ ಈಗ ಚಂದ್ರಬಾಬು ನಾಯ್ಡು ಮರಳಿ ಮುಖ್ಯಮಂತ್ರಿಯಾಗಿರುವ ಕಾರಣ ಹೆಚ್ಚಿನ ಅನುದಾನ ಬಿಡುಗಡೆ ಮಾಡಿದರೆ ಸಾಲ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

    ಈ ವರ್ಷ ಮಂಡನೆಯಾದ ಬಜೆಟ್‌(ಲೇಖಾನುದಾನ)ನಲ್ಲಿ 2024-2025 ರಲ್ಲಿ ಆದಾಯ ಸ್ವೀಕೃತಿಯಿಂದ 2,05,352.19 ರೂ ಬಂದರೆ 2,30,110.41 ಕೋಟಿ ರೂ. ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿತ್ತು. ಇದನ್ನೂ ಓದಿ: ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿ ಕೊಲ್ಲುವಾಗ ಸರ್ಕಾರ ಏನು ಮಾಡ್ತಿತ್ತು?: ಗೋವಿಂದ ಕಾರಜೋಳ

    ಸೂಪರ್‌ ಸಿಕ್ಸ್‌ ಘೋಷಣೆಗಳು:
    ಕರ್ನಾಟಕದಲ್ಲಿ ಕಾಂಗ್ರೆಸ್‌ ಹೇಗೆ 5 ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿತ್ತೋ ಅದೇ ಮಾದರಿಯಲ್ಲಿ ಆಂಧ್ರದಲ್ಲಿ ಚಂದ್ರಬಾಬು ನಾಯ್ಡು ʼಸೂಪರ್‌ ಸಿಕ್ಸ್‌ ಗ್ಯಾರಂಟಿʼ  ಹೆಸರಿನಲ್ಲಿ ಘೋಷಣೆ ಪ್ರಕಟಿಸಿದ್ದರು. ಪ್ರತಿ ತಿಂಗಳು ನಿರುದ್ಯೋಗಿಗಳಿಗೆ 3000 ರೂ. ನಿರುದ್ಯೋಗ ಭತ್ಯೆ, ಶಾಲೆಗೆ ತೆರಳು ಪ್ರತಿ ಮಗುವಿಗೆ ವರ್ಷಕ್ಕೆ 15,000 ರೂ., ಪ್ರತಿ ರೈತರಿಗೆ ವಾರ್ಷಿಕ 20,000 ರೂ., ಸರ್ಕಾರದಿಂದ ಪ್ರತಿ ಮನೆಗೆ ವರ್ಷಕ್ಕೆ 3 ಗ್ಯಾಸ್‌ ಸಿಲಿಂಡರ್‌ ಉಚಿತ, 18 ವರ್ಷ ಮೇಲ್ಪಟ್ಟ ಪ್ರತಿ ಮಹಿಳೆಗೆ ತಿಂಗಳಿಗೆ 1,500 ರೂ., ರಾಜ್ಯಾದ್ಯಂತ ಎಲ್ಲಾ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ ಘೋಷಣೆಗಳನ್ನು ಟಿಡಿಪಿ ಘೋಷಣೆ ಮಾಡಿತ್ತು.

    ಕರ್ನಾಟಕದಲ್ಲಿ ಹೇಗೆ ಮನೆ ಮನೆಗೆ ಕಾಂಗ್ರೆಸ್‌ ಗ್ಯಾರಂಟಿ ಕಾರ್ಡ್‌ಗಳನ್ನು ಹಂಚಿಕೆ ಮಾಡಿತ್ತೋ ಅದೇ ರೀತಿಯಾಗಿ ಆಂಧ್ರದಲ್ಲೂ ಟಿಡಿಪಿ ಮನೆಗೆ ಸೂಪರ್‌ ಸಿಕ್ಸ್‌ ಭರವಸೆಯ ಕಾರ್ಡ್‌ಗಳನ್ನು ಹಂಚಿಕೆ ಮಾಡಿತ್ತು. ಈ ಭರವಸೆಯ ಪರಿಣಾಮ ಆಂಧ್ರ ಚುನಾವಣೆಯಲ್ಲಿ ಜಗನ್‌ ಪಕ್ಷವನ್ನು ಹೀನಾಯವಾಗಿ ಸೋಲಿಸಿತ್ತು. ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಹಿಂದಿನಿಂದ ಎಕ್ಸ್‌ಪ್ರೆಸ್ ರೈಲಿಗೆ ಗುದ್ದಿದ ಗೂಡ್ಸ್ ರೈಲು – ಐವರು ದುರ್ಮರಣ, 25 ಮಂದಿಗೆ ಗಾಯ

    ಕೇಂದ್ರದ ಅನುದಾನ ಸಿಗುತ್ತಾ?
    ಟಿಡಿಪಿ ತನ್ನ ಮೈತ್ರಿಪಕ್ಷವಾಗಿರುವ ಕಾರಣ ಕೇಂದ್ರದಲ್ಲಿರುವ ಎನ್‌ಡಿಎ ಸರ್ಕಾರದ ಅನುದಾನದ ಮೇಲೆ ಚಂದ್ರಬಾಬು ನಾಯ್ಡ ಗಮನ ಕೇಂದ್ರಿಕರಿಸಿದ್ದಾರೆ. ಕೇಂದ್ರದ ವಿಶೇಷ ಅನುದಾನ ಪ್ರಕಟಿಸಿದರೆ ಈ ಯೋಜನೆಗಳನ್ನು ಈಡೇರಿಸಲು ಸ್ವಲ್ಪ ನೆರವಾಗಬಹುದು. ಆದರೆ ಆಂಧ್ರಪ್ರದೇಶಕ್ಕೆ ವಿಶೇಷ ಅನುದಾನ ನೀಡಿದರೆ ಬೇರೆ ರಾಜ್ಯಗಳು ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ ಮೊರೆ ಹೋಗಬಹುದು. ಹೀಗಾಗಿ ಘೋಷಣೆ ಮಾಡಿದ ಭರವಸೆ ಈಡೇರಿಕೆಗೆ ಟಿಡಿಪಿ ಹಣ ಎಲ್ಲಿಂದ ತರುತ್ತದೆ ಎನ್ನುವುದು ದೊಡ್ಡ ಪ್ರಶ್ನೆ

    ಈ ಬಾರಿ ಒಟ್ಟು 175 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಟಿಡಿಪಿ 135, ಜನಸೇನಾ 21, ವೈಎಸ್‌ಆರ್‌ಸಿಪಿ 11, ಬಿಜೆಪಿ 8 ಸ್ಥಾನಗಳನ್ನು ಗೆದ್ದುಕೊಂಡಿತ್ತು. 2019ರ ಚುನಾವಣೆಯಲ್ಲಿ ಜಗನ್‌ ಸರ್ಕಾರ ಬಹಳಷ್ಟು ಸೊಷಿಯಲಿಸ್ಟ್‌, ಜನಪ್ರಿಯ ಯೋಜನೆಗಳನ್ನು ಘೋಷಣೆ ಮಾಡಿದ್ದ ಪರಿಣಾಮ ವೈಎಸ್‌ಅರ್‌ಸಿಪಿ ಕಾಂಗ್ರೆಸ್‌ 151, ಟಿಡಿಪಿ 23, ಜನಸೇನಾ 1 ಸ್ಥಾನವನ್ನು ಗೆದ್ದುಕೊಂಡಿತ್ತು.

     

  • ಮೋದಿ ಸಂಪುಟದಲ್ಲಿ ಟಿಡಿಪಿಗೆ 3, ಜೆಡಿಯುಗೆ 2 ಸಚಿವ ಸ್ಥಾನ? – NDA ಕೂಟದ ಯಾವ ಪಕ್ಷಕ್ಕೆ ಎಷ್ಟು ಸ್ಥಾನ?

    ಮೋದಿ ಸಂಪುಟದಲ್ಲಿ ಟಿಡಿಪಿಗೆ 3, ಜೆಡಿಯುಗೆ 2 ಸಚಿವ ಸ್ಥಾನ? – NDA ಕೂಟದ ಯಾವ ಪಕ್ಷಕ್ಕೆ ಎಷ್ಟು ಸ್ಥಾನ?

    ನವದೆಹಲಿ: ಎನ್‌ಡಿಎ ಮೈತ್ರಿಕೂಟದ ನಾಯಕ ನರೇಂದ್ರ ಮೋದಿ ಅವರು ಭಾನುವಾರ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಪ್ರಧಾನಿ ಮೋದಿ ನೇತೃತ್ವದ ನೂತನ ಸಂಪುಟದಲ್ಲಿ ಚಂದ್ರಬಾಬು ನಾಯ್ಡು ಅವರ ಟಿಡಿಪಿ 3 ಹಾಗೂ ಜೆಡಿಯು ಎರಡು ಖಾತೆಗಳನ್ನು ಪಡೆಯಲಿದೆ ಎಂದು ಮೂಲಗಳು ತಿಳಿಸಿವೆ.

    ಸ್ಪೀಕರ್‌ ಸೇರಿ ಆರು ಸ್ಥಾನಗಳಿಗೆ ಟಿಡಿಪಿ ಬೇಡಿಕೆ ಇಟ್ಟಿತ್ತು. ಆದರೆ ಮಾತುಕತೆ ಮೂಲಕ ಒಪ್ಪಿಗೆ ಪಡೆದು ಮೂರು ಸಚಿವ ಸ್ಥಾನ ನೀಡಲು ನಿರ್ಧರಿಸಲಾಗಿದೆ. ಟಿಡಿಪಿಯ ರಾಮ್ ಮೋಹನ್ ನಾಯ್ಡು, ಹರೀಶ್ ಬಾಲಯೋಗಿ ಮತ್ತು ದಗ್ಗುಮಲ್ಲ ಪ್ರಸಾದ್ ಸಚಿವರಾಗಲಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ನಿತೀಶ್‌ ಕುಮಾರ್‌ಗೆ ‘ಇಂಡಿಯಾ’ ಒಕ್ಕೂಟ ಪ್ರಧಾನಿ ಸ್ಥಾನದ ಆಫರ್‌ ನೀಡಿತ್ತು: ಜೆಡಿಯು ನಾಯಕನ ಸ್ಫೋಟಕ ಹೇಳಿಕೆ

    ಜೆಡಿಯುಗೆ ಎರಡು ಸ್ಥಾನ ನೀಡಲು ನಿರ್ಧಾರಿಸಲಾಗಿದೆ. ಲಾಲನ್ ಸಿಂಗ್ ಮತ್ತು ರಾಮನಾಥ್ ಠಾಕೂರ್‌ಗೆ ಮಂತ್ರಿ ಸ್ಥಾನ ಸಿಗಲಿದೆ. ಶಿವಸೇನೆ ಮತ್ತು ಎಲ್‌ಜೆಪಿ(ಆರ್)ನಿಂದ ತಲಾ ಒಬ್ಬರು ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

    ಬಿಹಾರದ ಹಿಂದೂಸ್ತಾನಿ ಅವಾಮ್ ಮೋರ್ಚಾ (ಎಚ್‌ಎಎಂ) ಮುಖ್ಯಸ್ಥ ಜಿತನ್ ರಾಮ್ ಮಾಂಝಿ ಮತ್ತು ಎಲ್‌ಜೆಪಿ (ಆರ್) ಮುಖ್ಯಸ್ಥ ಚಿರಾಗ್ ಪಾಸ್ವಾನ್ ಕೂಡ ಸಂಪುಟದಲ್ಲಿ ಸ್ಥಾನ ಪಡೆಯಲಿದ್ದಾರೆ. ಆರ್‌ಎಲ್‌ಡಿ ನಾಯಕ ಜಯಂತ್ ಚೌಧ್ರಿಗೂ ಸಚಿವ ಸ್ಥಾನ ಸಿಗಲಿದೆ ಎನ್ನಲಾಗಿದೆ. ಇದನ್ನೂ ಓದಿ: ಜೂ.12 ರಂದು ಆಂಧ್ರ ಸಿಎಂ ಆಗಿ ಚಂದ್ರಬಾಬು ನಾಯ್ಡು ಪ್ರಮಾಣವಚನ

  • ಜೂ.12 ರಂದು ಆಂಧ್ರ ಸಿಎಂ ಆಗಿ ಚಂದ್ರಬಾಬು ನಾಯ್ಡು ಪ್ರಮಾಣವಚನ

    ಜೂ.12 ರಂದು ಆಂಧ್ರ ಸಿಎಂ ಆಗಿ ಚಂದ್ರಬಾಬು ನಾಯ್ಡು ಪ್ರಮಾಣವಚನ

    ಹೈದರಾಬಾದ್: ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು (Chandrababu Naidu) ಅವರು ಇದೇ ಜೂ.12 ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ.

    ಈ ಕುರಿತು ಆಂಧ್ರ (Andhra Pradesh) ಸಿಎಂ ಅಧಿಕೃತ ಖಾತೆಯು ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿದೆ. ಜೂ.12 ರಂದು ಬೆಳಗ್ಗೆ 11:27 ಕ್ಕೆ ಮುಖ್ಯಮಂತ್ರಿಯಾಗಿ ಚಂದ್ರಬಾಬು ನಾಯ್ಡು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಕೃಷ್ಣಾ ಜಿಲ್ಲೆಯ ಗನ್ನವರಂನ ಕೇಸರಪಲ್ಲಿ ಐಟಿ ಪಾರ್ಕ್‌ನಲ್ಲಿ ಪ್ರಮಾಣ ವಚನ ಸಮಾರಂಭ ನಡೆಯಲಿದೆ. ಇದನ್ನೂ ಓದಿ: ಕಾಂಗ್ರೆಸ್‍ನ ಸಂಸದೀಯ ಪಕ್ಷದ ನಾಯಾಕಿಯಾಗಿ ಸೋನಿಯಾ ಗಾಂಧಿ ಮರು ಆಯ್ಕೆ

    ಆಂಧ್ರಪ್ರದೇಶದಲ್ಲಿ ನಡೆದ 2024ರ ವಿಧಾನಸಭಾ ಚುನಾವಣೆಯಲ್ಲಿ ನಾಯ್ಡು ನೇತೃತ್ವದ ತೆಲುಗು ದೇಶಂ ಪಕ್ಷವು 175 ಸ್ಥಾನಗಳ ಪೈಕಿ 135 ಸ್ಥಾನಗಳನ್ನು ಗೆದ್ದು ಅಭೂತಪೂರ್ವ ಸಾಧನೆ ಮಾಡಿತು.

    ಜನಸೇನಾ ಪಕ್ಷ 21, ಆಡಳಿತಾರೂಢ ಪಕ್ಷ ವೈಎಸ್‌ಆರ್‌ಸಿಪಿ ಕೇವಲ 11 ಹಾಗೂ ಬಿಜೆಪಿ 8 ಸ್ಥಾನಗಳನ್ನು ಗೆದ್ದಿದೆ. ಇದನ್ನೂ ಓದಿ: ಮೋದಿ ಸಂಪುಟದಲ್ಲಿ ಹೆಚ್‍ಡಿಕೆಗೆ ಸಚಿವ ಸ್ಥಾನ ಫಿಕ್ಸ್?

  • ಆಂಧ್ರದಲ್ಲಿ YSRP ನಾಯಕ ವಲ್ಲಭನೇನಿ ವಂಶಿ ಮನೆ ಮೇಲೆ ಕಲ್ಲು ತೂರಾಟ

    ಆಂಧ್ರದಲ್ಲಿ YSRP ನಾಯಕ ವಲ್ಲಭನೇನಿ ವಂಶಿ ಮನೆ ಮೇಲೆ ಕಲ್ಲು ತೂರಾಟ

    ಅಮರಾವತಿ: ವೈಎಸ್‌ಆರ್‌ಸಿಪಿ ನಾಯಕ ವಲ್ಲಭನೇನಿ ವಂಶಿ (Vallabhaneni Vamsi) ಅವರ ಮನೆ ಮೇಲೆ ತೆಲುಗು ದೇಶಂ ಪಾರ್ಟಿ (TDP) ಕಾರ್ಯಕರ್ತರು ಕಲ್ಲು ತೂರಾಟ ನಡೆಸಿರುವ ಘಟನೆ ನಡೆದಿದೆ.

    ವಿಜಯವಾಡದಲ್ಲಿ ವಂಶಿ ವಾಸವಿರುವ ಅಪಾರ್ಟ್‌ಮೆಂಟ್‌ನ ಸುತ್ತಲೂ ಟಿಡಿಪಿ ಬೆಂಬಲಿಗರು ಸುತ್ತುವರಿದು ಕಲ್ಲು ತೂರಾಟ ನಡೆಸಿದ್ದಾರೆ. ಅಲ್ಲದೇ ಮನೆ ಮುಂದೆ ನಿಲ್ಲಿಸಿದ್ದ ವಾಹನಗಳನ್ನು ಕೂಡ ಪುಡಿಗೈದಿದ್ದಾರೆ.

    ನಾಲ್ಕು ಕಾರುಗಳಲ್ಲಿ ಆಗಮಿಸಿದ ಟಿಡಿಪಿ ಕಾರ್ಯಕರ್ತರು ಮೊದಲು ವಂಶಿ ನಿವಾಸದ ಮುಂದೆ ಘೋಷಣೆಗಳನ್ನು ಕೂಗಿದರು. ಅಲ್ಲದೇ ವಂಶಿ ಮನೆಯಲ್ಲಿ ಇದ್ದಾರೆ ಎಂಬ ಮಾಹಿತಿ ಮೇರೆಗೆ ಗೇಟು ಒಡೆಯಲು ಯತ್ನಿಸಿದ್ದಾರೆ. ಯುವಕರು ದೊಣ್ಣೆ ಮತ್ತು ಕಲ್ಲುಗಳೊಂದಿಗೆ ಆಗಮಿಸಿದ್ದನ್ನು ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಘಟನೆ ವಿಕೋಪಕ್ಕೆ ಹೋಗುತ್ತಿದ್ದಂತೆಯೇ ಮಧ್ಯಪ್ರವೇಶ ಮಾಡಿ ಟಿಡಿಪಿ ಕಾರ್ಯಕರ್ತರನ್ನು ಚದುರಿಸಿದ್ದಾರೆ. ಇದನ್ನೂ ಓದಿ: 7 ವರ್ಷಗಳಿಂದ ಬಾಲಕನ ಗಂಟಲಲ್ಲಿ ಸಿಲುಕಿದ್ದ ನಾಣ್ಯ ಹೊರ ತೆಗೆದ ವೈದ್ಯರು

    ಇತ್ತೀಚೆಗಷ್ಟೇ ಮಾಜಿ ಸಚಿವ ಕೊಡಲಿ ನಾಣಿ ನಿವಾಸದಲ್ಲೂ ಇದೇ ಪರಿಸ್ಥಿತಿ ನಿರ್ಮಾಣವಾಗಿತ್ತು. ಕೆಲ ಅಪರಿಚಿತರು ನಾನಿ ಮನೆ ಮೇಲೆ ಕಲ್ಲು, ಮೊಟ್ಟೆ ಎಸೆದಿದ್ದರು. ಅಲ್ಲದೇ ಮನೆಗೆ ನುಗ್ಗುವ ಯತ್ನ ಕೂಡ ನಡೆದಿತ್ತು. ಮಾಹಿತಿ ಪಡೆದ ಸ್ಥಳೀಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಅಪರಿಚಿತರನ್ನು ಕಳುಹಿಸಲು ಯತ್ನಿಸಿದ್ದರು. ಈ ವೇಳೆ ಪೊಲೀಸರೊಂದಿಗೆ ವಾಗ್ವಾದ ನಡೆದಿತ್ತು.

    ಒಟ್ಟಿನಲ್ಲಿ ಆಂಧ್ರದಲ್ಲಿ ಚುನಾವಣಾ ಕಾವು ಮುಂದುವರೆದಿದೆ. ಫಲಿತಾಂಶ ಪ್ರಕಟವಾದ ನಂತರ ರಾಜ್ಯದ ಹಲವೆಡೆ ರಾಜಕೀಯ ದಾಳಿ ಮುಂದುವರಿದಿದೆ. ಚುನಾವಣೆಯ ಸಂದರ್ಭದಲ್ಲಿನ ರಾಜಕೀಯ ಸವಾಲುಗಳು, ಪ್ರತಿ ಸವಾಲುಗಳು ಈಗ ಟೆನ್ಶನ್ ಉಂಟು ಮಾಡುತ್ತಿವೆ. ಅಂದು ಟಿಡಿಪಿ ಮೇಲೆ ಕೊಡಲಿ ನಾನಿ, ವಲ್ಲಭನೇನಿ ವಂಶಿ ಸಿಡಿದೆದ್ದಿದ್ದು, ಇದೀಗ ಪಕ್ಷದ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇತ್ತೀಚೆಗಷ್ಟೇ ವಂಶಿ ಮನೆಯಲ್ಲಿ ಟಿಡಿಪಿ ಕಾರ್ಯಕರ್ತರು ಗಲಾಟೆ ಕೂಡ ಮಾಡಿದ್ದರು.

  • ಆಡಳಿತಾರೂಢ ವೈಎಸ್‌ಆರ್‌ಸಿಪಿ ಧೂಳಿಪಟ – ಟಿಡಿಪಿ ತೆಕ್ಕೆಗೆ ಆಂಧ್ರ

    ಆಡಳಿತಾರೂಢ ವೈಎಸ್‌ಆರ್‌ಸಿಪಿ ಧೂಳಿಪಟ – ಟಿಡಿಪಿ ತೆಕ್ಕೆಗೆ ಆಂಧ್ರ

    – ಜೂ.9 ರಂದು ಸಿಎಂ ಆಗಿ ಚಂದ್ರಬಾಬು ನಾಯ್ಡು ಪ್ರಮಾಣ ವಚನ?

    ಅಮರಾವತಿ: ಆಂಧ್ರಪ್ರದೇಶ (Andhra Pradesh) ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು (Chandrababu Naidu) ನೇತೃತ್ವದ ಟಿಡಿಪಿ ಭರ್ಜರಿ ಜಯ ಸಾಧಿಸಿದೆ. ಇದೇ ಜೂ.9 ರಂದು ರಾಜ್ಯದ ಮುಖ್ಯಮಂತ್ರಿಯಾಗಿ ನಾಯ್ಡು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

    175 ವಿಧಾನಸಭಾ ಸ್ಥಾನಗಳ ಪೈಕಿ ಟಿಡಿಪಿ 67 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, 68 ರಲ್ಲಿ ಮುಂದಿದೆ. ಆದರೆ ಜನಸೇನಾ ಪಕ್ಷವು 21 ಸ್ಥಾನಗಳನ್ನು ಹೊಂದಿದೆ. ಬಿಜೆಪಿ 8 ಸ್ಥಾನಗಳನ್ನು ಗೆದ್ದರೆ, ವೈಎಸ್‌ಆರ್‌ಸಿಪಿ 12 ಸ್ಥಾನಗಳಲ್ಲಿ ಜಯಗಳಿಸಿದೆ. ಇದನ್ನೂ ಓದಿ: Assembly Results: ಆಂಧ್ರದಲ್ಲಿ ಟಿಡಿಪಿ ಮತ್ತೆ ಎಂಟ್ರಿ – ಒಡಿಶಾದಲ್ಲಿ ಬಿಜೆಪಿಗೆ ಬಹುಮತ

    cm jagan mohan reddy

    ನಾಯ್ಡು ಜೂನ್ 9 ರಂದು ಅಮರಾವತಿಯಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಫಲಿತಾಂಶದ ಬೆನ್ನಲ್ಲೇ ಸೋಲೊಪ್ಪಿಕೊಂಡ ಜಗನ್ ರೆಡ್ಡಿ ಆಂಧ್ರಪ್ರದೇಶ ರಾಜ್ಯಪಾಲ ಎಸ್.ಅಬ್ದುಲ್ ನಜೀರ್ ಅವರಿಗೆ ರಾಜೀನಾಮೆ ಸಲ್ಲಿಸಿದ್ದಾರೆ.

    ಫಲಿತಾಂಶದ ಬಳಿಕ ಮಾತನಾಡಿದ ನಿರ್ಗಮಿತ ಸಿಎಂ ಜಗನ್‌ (Jagan Mohan Reddy), ನಮ್ಮಿಂದ ಏನು ತಪ್ಪಾಗಿದೆ ಎಂದು ತಿಳಿದಿಲ್ಲ. ಆದರೆ ನಾನು ಪ್ರಾಮಾಣಿಕವಾಗಿ ಜನರ ಸೇವೆ ಮಾಡುತ್ತೇನೆ. ನಾನು ಧ್ವನಿಯಿಲ್ಲದವರಿಗೆ ಧ್ವನಿ ನೀಡಿದ್ದೇನೆ. ಗೆದ್ದವರಿಗೆ ಆಲ್ ದಿ ಬೆಸ್ಟ್ ಎಂದು ಟಿಡಿಪಿ ನಾಯಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ವಾರಣಾಸಿಯಲ್ಲಿ ಮೋದಿಗೆ ಹ್ಯಾಟ್ರಿಕ್‌ ಜಯ – ಕಡಿಮೆಯಾಯ್ತು ಗೆಲುವಿನ ಅಂತರ

    ಆಂಧ್ರಪ್ರದೇಶದಲ್ಲಿ ಎನ್‌ಡಿಎ ಮೈತ್ರಿಕೂಟದ ಅದ್ಭುತ ಪ್ರದರ್ಶನದ ನಂತರ ಚಂದ್ರಬಾಬು ನಾಯ್ಡು ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಮಾತುಕತೆ ನಡೆಸಿದರು. ಮೈತ್ರಿಕೂಟ ಗರಿಷ್ಠ ಸಂಖ್ಯೆಯ ಸ್ಥಾನಗಳನ್ನು ಗೆದ್ದಿದ್ದಕ್ಕಾಗಿ ಪ್ರಧಾನಿ ಮೋದಿ ಮತ್ತು ಶಾ ಇಬ್ಬರನ್ನೂ ಅಭಿನಂದಿಸಿದ್ದಾರೆ. ಪಿಎಂ ಹಾಗೂ ಕೇಂದ್ರ ಗೃಹ ಸಚಿವರೂ ಸಹ ನಾಯ್ಡು ಅವರನ್ನು ಅಭಿನಂದಿಸಿದ್ದಾರೆ.

    ಪಕ್ಷಗಳ ಈಗಿನ ಬಲಾಬಲ
    ಟಿಡಿಪಿ – 134
    ಜೆಎನ್‌ಪಿ – 21
    ಬಿಜೆಪಿ – 8
    ವೈಎಸ್‌ಆರ್‌ಸಿಪಿ – 12

    2019ರಲ್ಲಿ ಏನಾಗಿತ್ತು?
    ಆಂಧ್ರದಲ್ಲಿ 2019ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ 151 ಸ್ಥಾನಗಳನ್ನು ಗೆದ್ದು ವೈಎಸ್‌ಆರ್‌ಸಿಪಿ ಅಧಿಕಾರ ಹಿಡಿದಿತ್ತು. ಟಿಡಿಪಿ 23 ಹಾಗೂ ಜೆಎನ್‌ಪಿ 1 ಸ್ಥಾನ ಗೆದ್ದಿತ್ತು. ಇದನ್ನೂ ಓದಿ: ಒಡಿಶಾದಲ್ಲಿ ಬಿಜೆಡಿ ಕೋಟೆ ಛಿದ್ರ – ಮೊದಲ ಬಾರಿಗೆ ಬಿಜೆಪಿ ಅಧಿಕಾರಕ್ಕೆ

  • Assembly Results: ಆಂಧ್ರದಲ್ಲಿ ಟಿಡಿಪಿ ಮತ್ತೆ ಎಂಟ್ರಿ – ಒಡಿಶಾದಲ್ಲಿ ಬಿಜೆಪಿಗೆ ಬಹುಮತ

    Assembly Results: ಆಂಧ್ರದಲ್ಲಿ ಟಿಡಿಪಿ ಮತ್ತೆ ಎಂಟ್ರಿ – ಒಡಿಶಾದಲ್ಲಿ ಬಿಜೆಪಿಗೆ ಬಹುಮತ

    – ಆಂಧ್ರಪ್ರದೇಶದಲ್ಲಿ ಚಂದ್ರಬಾಬು ನಾಯ್ಡು ಪಟ್ಟಾಭಿಷೇಕಕ್ಕೆ ಸಿದ್ಧತೆ

    ನವದೆಹಲಿ: ಆಂಧ್ರಪ್ರದೇಶ ಮತ್ತು ಒಡಿಶಾ ರಾಜ್ಯಗಳ ವಿಧಾನಸಭಾ ಚುನಾವಣೆಯ ಮತ ಎಣಿಕೆ ನಡೆಯುತ್ತಿದೆ. ಆಂಧ್ರದಲ್ಲಿ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಪುನರಾಗಮನಕ್ಕೆ ಸಿದ್ಧವಾಗಿದೆ. ಇತ್ತ ಒಡಿಶಾದಲ್ಲಿ ಸರಳ ಬಹುಮತ ಸಂಖ್ಯೆ ದಾಟಿ ಬಿಜೆಪಿ ಮುಂದೆ ಸಾಗಿದೆ.

    ಆಂಧ್ರಪ್ರದೇಶದಲ್ಲಿ ಸಿಎಂ ವೈ.ಎಸ್‌.ಜಗನ್‌ ಮೋಹನ್‌ ರೆಡ್ಡಿ ನೇತೃತ್ವದ ಆಡಳಿತಾರೂಢ ವೈಎಸ್‌ಆರ್‌ಸಿಪಿ ಕುಸಿತ ಕಂಡಿದೆ. ರಾಜ್ಯದಲ್ಲಿ ಟಿಡಿಪಿ 131, ಜೆಎನ್‌ಪಿ 20, ವೈಎಸ್‌ಆರ್‌ಸಿಪಿ 17, ಬಿಜೆಪಿ 7 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವೆ.

    ಆಂಧ್ರದಲ್ಲಿ ಗೆಲುವಿನ ಸೂಚನೆ ಸಿಗುತ್ತಿದ್ದಂತೆ ಸರ್ಕಾರ ರಚನೆಗೆ ಚಂದ್ರಬಾಬು ನಾಯ್ಡು ಸಿದ್ಧತೆ ನಡೆಸಿದ್ದಾರೆ. ಮೇ 13ರಂದು ಲೋಕಸಭೆ ಚುನಾವಣೆ ಜೊತೆಗೆ ವಿಧಾನಸಭೆ ಚುನಾವಣೆಯೂ ನಡೆದಿತ್ತು. ಮತ್ತೊಂದು ಅವಧಿಗಾಗಿ ವೈಎಸ್‌ಆರ್‌ಸಿಪಿ ಎಲ್ಲಾ 175 ಸ್ಥಾನಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿತ್ತು. ಟಿಡಿಪಿ 144 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಪಕ್ಷ (ಜೆಎಸ್‌ಪಿ) 21 ಮತ್ತು ಬಿಜೆಪಿ 10 ಸ್ಥಾನಗಳಲ್ಲಿ ಸ್ಪರ್ಧಿಸಿದ್ದವು.

    ಒಡಿಶಾದಲ್ಲಿ ಆಡಳಿತಾರೂಢ ಬಿಜು ಜನತಾ ದಳ ಪಕ್ಷಕ್ಕೆ ಶಾಕ್‌ ಎದುರಾಗಿದೆ. 147 ಸದಸ್ಯ ಬಲದ ವಿಧಾನಸಭೆಗೆ ಸರ್ಕಾರ ರಚಿಸಲು 74 ಸ್ಥಾನಗಳು ಬೇಕು. ಈಗಾಗಲೇ ಬಿಜೆಪಿ ಅಷ್ಟು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ರಾಜ್ಯದಲ್ಲಿ ಸರ್ಕಾರ ರಚನೆಗೆ ಬಿಜೆಪಿ ಸಿದ್ಧತೆ ನಡೆಸಿದೆ. ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ನೇತೃತ್ವದ ಪಕ್ಷ 57 ಸ್ಥಾನಗಳಲ್ಲಷ್ಟೇ ಮುನ್ನಡೆ ಕಾಯ್ದುಕೊಂಡಿದೆ. ಕಾಂಗ್ರೆಸ್‌ 13, ಐಎನ್‌ಡಿ 2 ಹಾಗೂ ಸಿಪಿಐ(ಎಂ) 1 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವೆ.

    ಒಡಿಶಾದಲ್ಲಿ 2019 ರಲ್ಲಿ ಬಿಜೆಡಿ 147 ಸ್ಥಾನಗಳ ಪೈಕಿ 112 ಸೀಟ್‌ಗಳನ್ನು ಗೆದ್ದಿತ್ತು. ಬಿಜೆಪಿ 23 ಹಾಗೂ ಕಾಂಗ್ರೆಸ್‌ 9 ಸ್ಥಾನಗಳಲ್ಲಿ ಗೆದ್ದಿತ್ತು.

  • ತೆಲುಗು ದೇಶಂ ಪಕ್ಷ ಸೇರಿದ ನಟ ನಿಖಿಲ್ ಸಿದ್ದಾರ್ಥ

    ತೆಲುಗು ದೇಶಂ ಪಕ್ಷ ಸೇರಿದ ನಟ ನಿಖಿಲ್ ಸಿದ್ದಾರ್ಥ

    ಲೋಕಸಭಾ ಚುನಾವಣೆ (Election) ಬೆನ್ನಲ್ಲೇ ಹಲವಾರು ನಟ ನಟಿಯರು ನಾನಾ ಪಕ್ಷಗಳನ್ನು ಸೇರುತ್ತಿದ್ದಾರೆ. ತೆಲುಗಿನ ಹೆಸರಾಂತ ನಟ ನಿಖಿಲ್ ಸಿದ್ದಾರ್ಥ್ (Nikhil Siddharth) ಇಂದು ಬೆಳಗ್ಗೆ ತೆಲುಗು ದೇಶಂ ಪಕ್ಷ (TDP) ಸೇರಿದ್ದಾರೆ. ನಿಖಿಲ್ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ ಎಂದು ಹೇಳಲಾಗಿತ್ತು. ಆದರೆ, ಯಾವ ಪಕ್ಷದಿಂದ ಎನ್ನುವುದು ಸಸ್ಪೆನ್ಸ್ ಆಗಿ ಉಳಿದಿತ್ತು.

    ಬಲ್ಲ ಮೂಲಗಳ ಪ್ರಕಾರ ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ನಿಖಿಲ್ ಸ್ಪರ್ಧೆ ಮಾಡುವುದಿಲ್ಲ ಎನ್ನಲಾಗುತ್ತಿದೆ. ಮುಂಬರುವ ಆಂಧ್ರದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿದ್ದಾರಂತೆ. ಅಲ್ಲದೇ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತೆಲುಗು ದೇಶಂ ಪಕ್ಷದ ಸ್ಟಾರ್ ಪ್ರಚಾರಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ.

    ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡಿರುವ ನಿಖಿಲ್, ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಅವರನ್ನು ಗುರಿಯಾಗಿರಿಸಿಕೊಂಡು ನಿಖಿಲ್ ಅವರನ್ನು ತಮ್ಮ ಪಕ್ಷಕ್ಕೆ ಎಳೆದುಕೊಂಡಿದೆ ಟಿಡಿಪಿ.

  • ನಿರ್ದೇಶಕ ವರ್ಮಾ ತಲೆ ತಂದವರಿಗೆ 1ಕೋಟಿ ರೂ.ಬಹುಮಾನ ಘೋಷಣೆ

    ನಿರ್ದೇಶಕ ವರ್ಮಾ ತಲೆ ತಂದವರಿಗೆ 1ಕೋಟಿ ರೂ.ಬಹುಮಾನ ಘೋಷಣೆ

    ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ವಿರುದ್ಧ ಟಿಡಿಪಿ ಕಾರ್ಯಕರ್ತರಿಂದ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ವರ್ಮಾ ನಿರ್ದೇಶನ ಮಾಡಿರುವ ವ್ಯೂಹಂ ಸಿನಿಮಾ ರಿಲೀಸ್ ಮಾಡದಂತೆ ಪ್ರತಿಭಟಿಸಲಾಗುತ್ತಿದೆ. ಈ ಕುರಿತಂತೆ ಮಾಧ್ಯಮದೊಂದಿಗಿನ ಚರ್ಚೆಯಲ್ಲಿ ಭಾಗಿಯಾಗಿ ಮಾತನಾಡಿರುವ ಟಿಡಿಪಿ ಮುಖಂಡ ಕೋಲಿಕಪುಡಿ ಶ್ರೀನಿವಾಸ್ ನಾಯ್ಡು (Kolikapudi Srinivas Naidu), ಎಡವಟ್ಟಿನ ಹೇಳಿಕೆಯನ್ನು ನೀಡಿದ್ದಾರೆ. ವರ್ಮಾ ತಲೆ ಕಡಿದು ತಂದಿವರಿಗೆ ಒಂದು ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.

    ನಿನ್ನೆಯಷ್ಟೇ ರಾಮ್ ಗೋಪಾಲ್ ವರ್ಮಾ ಕಚೇರಿಗೆ ಟಿಡಿಪಿ ಕಾರ್ಯಕರ್ತರು ಮತ್ತು ಎನ್.ಟಿ.ಆರ್ ಅಭಿಮಾನಿಗಳು ಮುತ್ತಿಗೆ ಹಾಕಿದ್ದರು. ಹೈದರಾಬಾದ್ ನಲ್ಲಿರುವ ವರ್ಮಾ ಅವರ ಡೆನ್ ಕಚೇರಿಗೆ ಮುತ್ತಿಗೆ ಹಾಕಿರುವ ಕಾರ್ಯಕರ್ತರು ವ್ಯೂಹಂ ಸಿನಿಮಾದ ಪೋಸ್ಟರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತ ಪಡಿಸಿದ್ದರು.

    ಆಗ ಸಿನಿಮಾಗಳ ಮೂಲಕ ಸಖತ್ ಸುದ್ದಿ ಆಗುತ್ತಿದ್ದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ (Ram Gopal Verma) , ಇದೀಗ ವಿವಾದಗಳಿಂದಾಗಿ ಹೆಚ್ಚು ಪ್ರಚಾರ ಪಡೆಯುತ್ತಿದ್ದಾರೆ. ಸದ್ಯ ವರ್ಮಾ ‘ವ್ಯೂಹಂ’ (Vyuham) ಹೆಸರಿನಲ್ಲಿ ಸಿನಿಮಾ ಮಾಡಿದ್ದು, ಈ ಸಿನಿಮಾಗೆ ಆಂಧ್ರದ ಟಿಡಿಪಿ ನಾಯಕರು ವಿರೋಧ ವ್ಯಕ್ತ ಪಡಿಸಿದ್ದಾರೆ. ಯಾವುದೇ ಕಾರಣಕ್ಕೂ ಈ ಸಿನಿಮಾ ಬಿಡುಗಡೆಗೆ ಅನುಮತಿ ನೀಡಬಾರದು ಎಂದು ಒತ್ತಡ ಹಾಕಿದ್ದಾರೆ.

    ಆಂಧ್ರ ಪ್ರದೇಶ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ಹೊತ್ತಿನಲ್ಲಿ ವ್ಯೂಹಂ ಸಿನಿಮಾ ರಿಲೀಸ್ ಆಗುತ್ತಿದೆ. ಇದು ಆಂಧ್ರದ ಸಿಎಂ ಜಗನ್ ಮೋಹನ್ ರೆಡ್ಡಿ (Jagan Mohan Reddy) ಜೀವನವನ್ನು ಆಧರಿಸಿದ ಸಿನಿಮಾವಾಗಿದ್ದು, ಚಂದ್ರಬಾಬು ನಾಯ್ಡು ಅವರನ್ನು ವಿಲನ್ ರೀತಿಯಲ್ಲಿ ಬಿಂಬಿಸಲಾಗಿದೆ ಎನ್ನುವುದು ಟಿಡಿಪಿ ಸದಸ್ಯರ ಆರೋಪ. ಈ ಕಾರಣದಿಂದಾಗಿ ಚಿತ್ರಕ್ಕೆ ವಿರೋಧವನ್ನು ವ್ಯಕ್ತ ಪಡಿಸುತ್ತಿದ್ದಾರೆ.

    ಈ ಸಿನಿಮಾದಲ್ಲಿ ಇತ್ತೀಚೆಗಷ್ಟೇ ಚಂದ್ರಬಾಬು ನಾಯ್ಡು (Chandra Babu Naidu) ಜೈಲಿಗೆ ಹೋಗಿ ಬಂದಿದ್ದಾರಲ್ಲ, ಆ ದೃಶ್ಯವನ್ನೂ ಸೇರಿಸಲಾಗಿದೆಯಂತೆ. ಇವೆಲ್ಲವೂ ಚುನಾವಣೆ ಮೇಲೆ ಪರಿಣಾಮ ಬೀರಲಿವೆ ಎನ್ನುವ ಕಾರಣದಿಂದಾಗಿ ಚಂದ್ರಬಾಬು ನಾಯ್ಡು ಪುತ್ರ ಲೋಕೇಶ್, ಕೇಂದ್ರ ಸೆನ್ಸಾರ್ ಮಂಡಳಿಗೆ ಪತ್ರ ಬರೆದು, ಈ ಚಿತ್ರವನ್ನು ಸೆನ್ಸಾರ್ ಮಾಡಬಾರದು ಎಂದು ಮನವಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

     

    ಈ ರಾಜಕೀಯ ಕಿತ್ತಾಟಗಳು ಏನೇ ಇದ್ದರೂ, ಈ ಸಿನಿಮಾವನ್ನು ತಾವು ಬಿಡುಗಡೆ ಮಾಡುವುದಾಗಿ ರಾಮ್ ಗೋಪಾಲ್ ವರ್ಮಾ ಹೇಳಿದ್ದಾರೆ. ಒಬ್ಬ ಸಿನಿಮಾ ಮೇಕರ್ ಆಗಿ ನನ್ನ ಕೆಲಸ ಮಾಡಿದ್ದೇನೆ. ಜನರು ಎಲ್ಲವನ್ನೂ ತೀರ್ಮಾನ ಮಾಡಲಿ ಎಂದಿದ್ದಾರೆ.