Tag: ಝೊಮ್ಯಾಟೋ ಡೆಲಿವರಿ ಬಾಯ್

  • ಕಾರು, ಮೋಟಾರ್ ಬೈಕ್ ಡಿಕ್ಕಿ – ಝೊಮ್ಯಾಟೋ ಡೆಲಿವರಿ ಬಾಯ್, ಇಬ್ಬರು ಯುವತಿಯರು ಸಾವು

    ಕಾರು, ಮೋಟಾರ್ ಬೈಕ್ ಡಿಕ್ಕಿ – ಝೊಮ್ಯಾಟೋ ಡೆಲಿವರಿ ಬಾಯ್, ಇಬ್ಬರು ಯುವತಿಯರು ಸಾವು

    ನವದೆಹಲಿ: ಕಾರು ಮತ್ತು ಮೋಟಾರ್ ಬೈಕ್ ಡಿಕ್ಕಿಯಾಗಿ ಝೊಮ್ಯಾಟೋ ಡೆಲಿವರಿ ಬಾಯ್ ಸೇರಿ ಇಬ್ಬರು ಹದಿಹರೆಯದವರು ಸಾವನ್ನಪ್ಪಿದ ಘಟನೆ ನಿನ್ನೆ ರಾತ್ರಿ ಈಶಾನ್ಯ ದೆಹಲಿಯ ಶಕರ್‌ಪುರ್ ಪ್ರದೇಶದಲ್ಲಿ ನಡೆದಿದೆ.

    ಜ್ಯೋತಿ (17) ಮತ್ತು ಭಾರತಿ (19) ಮೃತ ದುರ್ದೈವಿಗಳು. ಯುವತಿಯರು ಮತ್ತು ಅವರ ಕುಟುಂಬದ ಇತರ ಐವರು ಪಶ್ಚಿಮ ದೆಹಲಿಯ ಪೀರಾಗರ್ಹಿಯಿಂದ ಕರ್ಕರ್ಡೂಮಾದಲ್ಲಿರುವ ತಮ್ಮ ಮನೆಗೆ ತೆರಳುತ್ತಿದ್ದರು. ಕಾರಿನ ಮುಂಬದಿಯಲ್ಲಿ ಮೂವರು ಕುಳಿತಿದ್ದರೆ, ನಾಲ್ವರು ಹಿಂದೆ ಕುಳಿತಿದ್ದರು. ಈ ವೇಳೆ ಕಾರು ಲಕ್ಷ್ಮಿನಗರದಲ್ಲಿ ಹಾದು ಹೋಗುತ್ತಿದ್ದಾಗ ಝೊಮ್ಯಾಟೋ ಡೆಲಿವರಿ ಬಾಯ್ ಬೈಕ್ ಅಡ್ಡ ಬಂದಿದೆ. ಈ ವೇಳೆ ಕಾರು ಬೈಕ್‍ಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ನೇಣು ಬಿಗಿದ ಸ್ಥಿತಿಯಲ್ಲಿ ನರ್ಸ್ ಮೃತದೇಹ ಪತ್ತೆ – ಅತ್ಯಾಚಾರ ಆರೋಪ ಮಾಡಿದ ಕುಟುಂಬಸ್ಥರು

    ಪಲ್ಟಿಯಾದ ಕಾರಿನೊಳಗೆ ಸಿಲುಕಿದ್ದವರನ್ನು ಹೊರತೆಗೆದು ಆಸ್ಪತ್ರೆಗೆ ಸಾಗಿಸಲಾಗಿದ್ದು, ಇನ್ನಿಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಮೃತ ಝೊಮ್ಯಾಟೋ ಡೆಲಿವರಿ ಬಾಯ್ ಯಾರು ಎಂದು ಇನ್ನೂ ಗುರುತಿಸಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

    ಅಪಘಾತದ ನಂತರ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು. ಆಸ್ಪತ್ರೆಯ ಅಧಿಕಾರಿಗಳು, ಯಾವುದೇ ಹಾಸಿಗೆ ಲಭ್ಯವಿಲ್ಲ ಎಂದು ಹೇಳಿದರು. ಅವರು ಹಾಸಿಗೆಯ ವ್ಯವಸ್ಥೆ ಮಾಡಲು ಪ್ರಯತ್ನಿಸುತ್ತಿದ್ದಂತೆ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ. ಇದನ್ನೂ ಓದಿ:  ಆ್ಯಸಿಡ್ ದಾಳಿಗೆ ಒಳಗಾದ ಯುವತಿ ಚಿಕಿತ್ಸೆಗೆ 1 ಲಕ್ಷ ರೂ. ಚಕ್ ಕೊಟ್ಟ 

    ಗ್ರಾಹಕರಿಗೆ ಆರ್ಡರ್ ಮಾಡಿದ ಆಹಾರವನ್ನು 10 ನಿಮಿಷದಲ್ಲಿ ತಲುಪಿಸಲಾಗುವುದು ಎಂದು ಝೊಮ್ಯಾಟೋ ಘೋಷಿಸಿದ ಒಂದು ತಿಂಗಳ ನಂತರ ಈ ರೀತಿಯ ಅನಾಹುತಗಳು ಸಂಭವಿಸುತ್ತಿವೆ. ನಿಗದಿತ ಸಮಯಕ್ಕೆ ಆರ್ಡರ್ ಡೆಲಿವರಿ ಮಾಡುವ ಧಾವಂತದಲ್ಲಿ ಇಂತಹ ದುರಂತಗಳು ಸಂಭವಿಸುತ್ತಿರುವುದು ಡೆಲಿವರಿ ಬಾಯ್‍ಗಳ ಸುರಕ್ಷತೆಯ ಬಗ್ಗೆ ಆತಂಕ ಮೂಡಿಸಿದೆ.

     

  • ಪಾರ್ಕಿಂಗ್ ವಿಚಾರಕ್ಕೆ ಕಿತ್ತಾಟ – ಝೊಮ್ಯಾಟೋ ಡೆಲಿವರಿ ಬಾಯ್‍ಗೆ ಚಾಕು ಇರಿದು ಕೊಂದ ವ್ಯಾಪಾರಿ

    ಪಾರ್ಕಿಂಗ್ ವಿಚಾರಕ್ಕೆ ಕಿತ್ತಾಟ – ಝೊಮ್ಯಾಟೋ ಡೆಲಿವರಿ ಬಾಯ್‍ಗೆ ಚಾಕು ಇರಿದು ಕೊಂದ ವ್ಯಾಪಾರಿ

    – ಹಣ್ಣಿನ ಗಾಡಿಯನ್ನು ಅಡ್ಡಾದಿಡ್ಡಿ ನಿಲ್ಲಿಸಿದಕ್ಕೆ ಗಲಾಟೆ
    – ಇಬ್ಬರು ಹಣ್ಣಿನ ವ್ಯಾಪಾರಿಗಳು ಅರೆಸ್ಟ್

    ಮುಂಬೈ: ಹಣ್ಣು ಮಾರುವ ಗಾಡಿಯನ್ನು ಅಡ್ಡಾದಿಡ್ಡಿ ನಿಲ್ಲಿಸಿದಕ್ಕೆ ಬೇರೆ ವಾಹನಗಳ ಪಾರ್ಕಿಂಗ್‍ಗೆ ತೊಂದರೆ ಆಗುತ್ತಿದೆ ಎಂದು ಆರಂಭವಾದ ಜಗಳ ಕೊನೆಗೆ ಕೊಲೆಯಲ್ಲಿ ಅಂತ್ಯಕಂಡಿದೆ.

    ನಗರದ ಸಬ್ ಅರ್ಬನ್ ಪೊವಾಯಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಬುಧವಾರ ಹಣ್ಣಿನ ವ್ಯಾಪಾರಿಗಳಿಬ್ಬರು ಜೊತೆಗೂಡಿ ಝೊಮ್ಯಾಟೋ ಡೆಲಿವರಿ ಬಾಯ್‍ಗೆ ಚಾಕು ಇರಿದು ಕೊಲೆ ಮಾಡಿದ್ದಾರೆ. ಆರೋಪಿಗಳನ್ನು ಪೊವಾಯಿ ನಿವಾಸಿ ಸಚಿನ್ ದಿನೇಶ್ ಸಿಂಗ್(20) ಹಾಗೂ ಜಿತೇಂದ್ರ ಹರಿರಾಮ್ ರೈಕರ್(32) ಎಂದು ಗುರುತಿಸಲಾಗಿದೆ. ಕೊಲೆಯಾದ ಝೊಮ್ಯಾಟೋ ಡೆಲಿವರಿ ಬಾಯ್ ಅನ್ನು ಅನ್ಮೋಲ್ ಭಾಸ್ಕರ್ ಸುರತ್ಕಲ್(30) ಎಂದು ಗುರುತಿಸಲಾಗಿದೆ.

    ಸಚಿನ್ ಮತ್ತು ಜಿತೇಂದ್ರ ಇಬ್ಬರು ಪೊವಾಯಿಯಲ್ಲಿ ತಳ್ಳುವ ಗಾಡಿಯ ಹಣ್ಣಿನ ವ್ಯಾಪ್ಯಾರಿಗಳಾಗಿದ್ದು, ಪಾರ್ಕಿಂಗ್ ಸ್ಥಳದಲ್ಲಿ ತಮ್ಮ ಹಣ್ಣಿನ ಗಾಡಿಯನ್ನು ಅಡ್ಡಾದಿಡ್ಡಿ ನಿಲ್ಲಿಸುತ್ತಿದ್ದರು. ಇದರಿಂದ ಇತರೆ ವಾಹನಗಳನ್ನು ನಿಲ್ಲಿಸಲು ಸಮಸ್ಯೆ ಆಗುತ್ತಿತ್ತು. ಆದ್ದರಿಂದ ಮಂಗಳವಾರ ಅನ್ಮೋಲ್ ನಿಮ್ಮ ಗಾಡಿಯನ್ನು ಸರಿಯಾಗಿ ನಿಲ್ಲಿಸಿ, ನಿಮ್ಮಿಂದ ಬೇರೆಯವರಿಗೆ ತೊಂದರೆ ಆಗುತ್ತಿದೆ ಎಂದು ಹೇಳಿದ್ದನು. ಈ ವೇಳೆ ಸಚಿನ್ ಹಾಗೂ ಅನ್ಮೋಲ್ ನಡುವೆ ಜಗಳವಾಗಿತ್ತು.

    ಅದೇ ಸಿಟ್ಟಲ್ಲಿದ್ದ ಸಚಿನ್ ರಾತ್ರಿ ಸ್ನೇಹಿತರೊಂದಿಗೆ ಮದ್ಯ ಸೇವಿಸಿ ಅನ್ಮೋಲ್ ವಿರುದ್ಧ ಕಿಡಿಕಾರಿದ್ದನು. ಆಗ ಜಿತೇಂದ್ರ ಹಾಗೂ ಇತರೆ ಸ್ನೇಹಿತರು ಈ ವಿಚಾರವನ್ನು ಅಂತ್ಯಗೊಳಿಸು ಎಂದು ಹೇಳಿದ್ದರು. ಅದನ್ನೇ ತಲೆಯಲ್ಲಿ ಇಟ್ಟುಕೊಂಡಿದ್ದ ಸಚೀನ್ ಅನ್ಮೋಲ್‍ನನ್ನು ಕೊಲೆ ಮಾಡಲು ನಿರ್ಧರಿಸಿದ. ಬೇಕಂತಲೇ ಅನ್ಮೋಲ್ ಜೊತೆ ಜಗಳವಾಡುತ್ತಾ ಏಕಾಏಕಿ ಆತನಿಗೆ ಚಾಕು ಇರಿದು ಸಚೀನ್ ಪರಾರಿಯಾದ. ಆರೋಪಿಯೊಂದಿಗೆ ಇದ್ದ ಜಿತೇಂದ್ರ ಕೂಡ ಓಡಿಹೋದ.

    ರಸ್ತೆ ಮೇಲೆ ಬಿದ್ದಿದ್ದ ಅನ್ಮೋಲ್‍ನನ್ನು ಗಮನಿಸಿದ ಸ್ಥಳೀಯರು ಆತನನ್ನು ಆಸ್ಪತ್ರೆಗೆ ರವಾನಿಸಿದರು. ಆದರೆ ಅಷ್ಟರಲ್ಲಿ ಅನ್ಮೋಲ್ ಸಾವನ್ನಪ್ಪಿದ್ದನು. ಆರೋಪಿಗಳು ಅನ್ಮೋಲ್‍ನ ಹೊಟ್ಟೆ ಹಾಗೂ ಎದೆಗೆ ಚಾಕು ಇರಿದಿದ್ದ ಪರಿಣಾಮ ಅಧಿಕ ರಕ್ತಸ್ರಾವವಾಗಿ ಆತ ಸ್ಥಳದಲ್ಲಿಯೇ ಸಾವನ್ನಪ್ಪಿದ್ದನು ಎಂದು ವೈದ್ಯರು ತಿಳಿಸಿದರು.

    ಈ ಘಟನೆ ನಡೆದ ಬಳಿಕ ಆರೋಪಿಗಳು ಉತ್ತರ ಪ್ರದೇಶಕ್ಕೆ ಹೋಗಿ ತಲೆಮರಿಸಿಕೊಳ್ಳಲು ರೈಲ್ವೆ ನಿಲ್ದಾಣಕ್ಕೆ ತೆರೆಳಿದ್ದರು. ಈ ಬಗ್ಗೆ ತಿಳಿದ ಪೊಲೀಸರು ಆರೋಪಿಗಳನ್ನು ಬಂಧಿಸಿ, ಅವರ ವಿರುದ್ಧ ಐಪಿಸಿ ಸೆಕ್ಷನ್ 302(ಕೊಲೆ) ಪ್ರಕರಣ ದಾಖಲಿಸಿದ್ದಾರೆ.