Tag: ಜ್ಲಾನ ದೀವಿಗೆ

  • ಬೀದರ್‌ ಗ್ರಾಮೀಣ ಭಾಗದ 114 ಮಕ್ಕಳಿಗೆ ಟ್ಯಾಬ್‌ ವಿತರಣೆ

    ಬೀದರ್‌ ಗ್ರಾಮೀಣ ಭಾಗದ 114 ಮಕ್ಕಳಿಗೆ ಟ್ಯಾಬ್‌ ವಿತರಣೆ

    ಬೀದರ್ : ಪಬ್ಲಿಕ್ ಟಿವಿ ಹಾಗೂ ರೋಟರಿ ಕ್ಲಬ್ ಜ್ಲಾನದೀವಿಗೆ ಅಭಿಯಾನದ ಅಡಿ ಬೀದರ್ ಜಿಲ್ಲೆಯ ಗ್ರಾಮೀಣ ಭಾಗದ ಸರ್ಕಾರಿ ಶಾಲೆಯ 114 ವಿದ್ಯಾರ್ಥಿಗಳಿಗೆ ಇಂದು ಉಚಿತ ಟ್ಯಾಬ್‌ ವಿತರಣೆ ಮಾಡಲಾಯಿತು.

    ಬಸವಕಲ್ಯಾಣ ತಾಲೂಕಿನ ತಾಲೂಕಿನ ಗೌರ ಮತ್ತು ಸಸ್ತಾಪೂರ್ ಹಾಗೂ ಹುಲಸೂರ ತಾಲೂಕಿನ ಮುಚಳಂಬ ಗ್ರಾಮದ  ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್‌ ವಿತರಣೆ ಮಾಡಲಾಯಿತು. ಟ್ಯಾಬ್‌ ದಾನಿಗಳಾದ ಬಸವಕಲ್ಯಾಣದ ಬಿಜೆಪಿ ಮುಖಂಡರಾದ ಶರಣು ಸಲಗಾರ ಅವರು ಮಚಳಂಬ ಸರ್ಕಾರಿ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್‌ಗಳನ್ನು ವಿತರಣೆ ಮಾಡಿದರು.

    ಕೊರೊನಾ ಸಮಯದಲ್ಲಿ ಶಾಲೆಗಳು ಇಲ್ಲದೆ ಕಲಿಕೆಯಲ್ಲಿ ನಾವು ಹಿಂದೆ ಉಳಿದಿದ್ದೇವೆ. ಹೀಗಾಗಿ ಮುಂಬರುವ ಪರೀಕ್ಷೆಯನ್ನು ಬರೆಯುವುದು ಹೇಗೆ ಎಂಬ ಭಯ ಶುರುವಾಗಿತ್ತು. ಈಗ ಪಬ್ಲಿಕ್‌ ಟಿವಿ ನಮಗೆ ಉಚಿತ ಟ್ಯಾಬ್‌ಗಳನ್ನು ನೀಡಿದೆ. ಇದರ ಸದುಪಯೋಗ ಪಡೆದು ಒಳ್ಳೆಯ ಫಲಿತಾಂಶ ಪಡೆಯುತ್ತೇವೆ. ಉಚಿತವಾಗಿ ಟ್ಯಾಬ್‌ ನೀಡಿದ ಪಬ್ಲಿಕ್ ಟಿವಿ ಹಾಗೂ ದಾನಿಗಳಿಗೆ ವಿದ್ಯಾರ್ಥಿಗಳು ಧನ್ಯವಾದಗಳನ್ನು ತಿಳಿಸಿದರು.

    ಟ್ಯಾಬ್‌ ಕೊಡುಗೆ ನೀಡಿದ ಶರಣು ಸಲಗಾರ ಮಾತನಾಡಿ, ಶ್ರೀಮಂತರ ಮಕ್ಕಳು ಹೈಟೆಕ್ ಶಿಕ್ಷಣ ಪಡೆಯುತ್ತಿದ್ದಾರೆ. ಆದರೆ ಗ್ರಾಮೀಣ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ. ಈ ದಿಶೆಯಲ್ಲಿ ಪಬ್ಲಿಕ್‌ ಟಿವಿ ಉತ್ತಮ ಕಾರ್ಯ ಮಾಡುತ್ತಿದ್ದು, ಈ ಕಾರ್ಯ ನನಗೆ ವೈಯುಕ್ತಿಕವಾಗಿ ಖುಷಿ ನೀಡಿದೆ. ಬಡ ಮಕ್ಕಳಿಗೆ ಅನುಕೂಲ ಮಾಡಿಕೊಡಲು ಅವಕಾಶ‌ ನೀಡಿದ ಪಬ್ಲಿಕ್‌ ಟಿವಿಗೆ ಧನ್ಯವಾದಗಳು ಎಂದು ಹೇಳಿದರು.

    ಕಾರ್ಯಕ್ರಮದಲ್ಲಿ ನಾಗಭೂಷಣ ಶಿವಯೋಗಿ ಮಠದ ಪೀಠಾಧಿಪತಿಗಳಾದ ಪ್ರಣವಾನಂದ ಶಿವಯೋಗಿಗಳು, ಶಿಕ್ಷಕರು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ವಿದ್ಯಾರ್ಥಿಗಳು ಭಾಗಿಯಾಗಿದ್ದರು.