Tag: ಜೆಡಿಎಸ್ ಅಧ್ಯಕ್ಷೆ

  • ಜೆಡಿಎಸ್ ನಾಯಕಿಯ ಮಗಳಿಗಾಗಿ ರೌಡಿ ಲಕ್ಷ್ಮಣ್ ಬರ್ಬರ ಕೊಲೆ

    ಜೆಡಿಎಸ್ ನಾಯಕಿಯ ಮಗಳಿಗಾಗಿ ರೌಡಿ ಲಕ್ಷ್ಮಣ್ ಬರ್ಬರ ಕೊಲೆ

    ಬೆಂಗಳೂರು: ರೌಡಿ ಲಕ್ಷ್ಮಣ್ ಕೊಲೆ ಹಿಂದೆ ಹೆಣ್ಣಿನ ನೆರಳು ಇದೆ ಎಂದು ಸಿಸಿಬಿ ಪೊಲೀಸರು ಆರೋಪಿಸಿದ್ದರು. ಈಗ ಜೆಡಿಎಸ್ ಅಧ್ಯಕ್ಷೆಯ ಮಗಳಿಗಾಗಿ ರೌಡಿಯನ್ನು ಕೊಲೆ ಮಾಡಲಾಗಿದೆ ಎಂದು ಪೊಲೀಸರ ಪ್ರಾಥಮಿಕ ತನಿಖೆ ವೇಳೆ ಬೆಳಕಿಗೆ ಬಂದಿದೆ.

    ಕೊಲೆಯಾದ ದಿನ ಲಕ್ಷ್ಮಣನಿಗೆ ಹುಡುಗಿಯೊಬ್ಬಳು ವಾಟ್ಸಪ್ ಕಾಲ್ ಮಾಡಿದ್ದಳು. ಈ ಬಗ್ಗೆ ಲಕ್ಷ್ಮಣ್ ಪತ್ನಿ ಚೈತ್ರಾ ಎಫ್‍ಐಆರ್ ನಲ್ಲೂ ಉಲ್ಲೇಖಿಸಿದ್ದರು. ರೌಡಿ ಲಕ್ಷ್ಮಣನ ಮನೆ ಹತ್ತಿರವೇ ಜೆಡಿಎಸ್ ಅಧ್ಯಕ್ಷೆ ಮತ್ತು ಆಕೆಯ ಮಗಳು ಇದ್ದರು. ಹೀಗಾಗಿ ಸುಮಾರು ವರ್ಷದಿಂದ ಪರಿಚಯವಿತ್ತು ಎಂದು ಹೇಳಲಾಗುತ್ತಿದೆ.

    ಕೊಲೆಗೆ ಕಾರಣ?
    ಜೆಡಿಎಸ್ ಅಧ್ಯಕ್ಷೆಯ ಮಗಳಿಗೂ ರೂಪೇಶ್‍ಗೂ ಸಲುಗೆ ಇತ್ತು. ಜೆಡಿಎಸ್ ಮಗಳ ಡ್ಯಾನ್ಸ್ ಕ್ಲಾಸ್‍ನಲ್ಲಿ ರೂಪೇಶ್ ಮತ್ತು ಆಕೆಗೂ ಪರಿಚಯವಾಗಿತ್ತು. ದಿನಕಳೆದಂತೆ ತನ್ನನ್ನ ಪ್ರೀತಿಸುವಂತೆ ಜೆಡಿಎಸ್ ನಾಯಕಿಯ ಮಗಳ ಹಿಂದೆ ರೂಪೇಶ್ ಬಿದ್ದಿದ್ದನು. ಈ ಬಗ್ಗೆ ತಿಳಿದ ಜೆಡಿಎಸ್ ಮುಖಂಡೆ ತನ್ನ ಮಗಳಿಂದ ದೂರ ಇರುವಂತೆ ರೂಪೇಶ್‍ಗೆ ವಾರ್ನ್ ಮಾಡುವಂತೆ ರೌಡಿ ಲಕ್ಷ್ಮಣ್‍ಗೆ ಹೇಳಿದ್ದರು.

    ಹೀಗಾಗಿ ರೌಡಿ ಲಕ್ಷ್ಮಣ್ ಎರಡು-ಮೂರು ಬಾರಿ ರೂಪೇಶ್‍ಗೆ ವಾರ್ನ್ ಮಾಡಿದ್ದನು. ಇದರಿಂದ ತನ್ನ ಪ್ರೀತಿಗೆ ಅಡ್ಡಿ ಆಗಿದ್ದ ರೌಡಿ ಲಕ್ಷ್ಮಣ್ ನನ್ನು ಕೊಲೆ ಮಾಡಲು ರೂಪೇಶ್ ಸ್ಕೆಚ್ ಹಾಕಿದ್ದನು. ಅದರಂತೆಯೇ ಇಂದು ಬಂಧಿಸಿರುವ ರೌಡಿ ಹೇಮಿಯನ್ನು ಭೇಟಿಯಾಗಿ ಅವನ ಜೊತೆ ಸೇರಿಕೊಂಡು ಜೈಲಿನಿಂದ ಬಿಡುಗಡೆಯಾದ ಎರಡು ದಿನಗಳಲ್ಲಿ ಇಸ್ಕಾನ್ ದೇವಾಲಯದ ಬಳಿ ಮಧ್ಯಾಹ್ನದ ವೇಳೆಯೇ ರೌಡಿ ಲಕ್ಷ್ಮಣ್‍ನನ್ನು ಕೊಲೆ ಮಾಡಿದ್ದಾರೆ ಎಂದು ಸಿಸಿಬಿ ಪೊಲೀಸರಿಗೆ ಪ್ರಾಥಮಿಕ ತನಿಖೆ ವೇಳೆ ಮಾಹಿತಿ ಸಿಕ್ಕಿದೆ.

    ರೂಪೇಶ್ ಯಾರು?
    ರೂಪೇಶ್ ಮೂಲತಃ ಮಂಡ್ಯ-ಮದ್ದೂರಿನವಾಗಿದ್ದು, ಈ ಹಿಂದೆ 2018 ಮೇ ತಿಂಗಳಲ್ಲಿ ಮಂಡ್ಯ ಶಾಸಕರಾಗಿರುವ ಅನ್ನದಾನಿ ಅವರ ಮನೆಯಲ್ಲಿ ಕಳ್ಳತನ ಮಾಡಿದ್ದನು. ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿತ್ತು.

    ಈ ಪ್ರಕರಣ ದಿನದಿಂದ ದಿನಕ್ಕೆ ತಿರುವು ಪಡೆದುಕೊಳ್ಳುತ್ತಿದೆ. ಇದುವರೆಗೂ ನಾವು ಐದು ಆರೋಪಿಗಳನ್ನು ಬಂಧಿಸಿದ್ದೇವೆ. ಅಲೋಕ್, ದೇವರಾಜು, ಮಧು, ವರುಣ್ ಮತ್ತು ರೂಪೇಶ್ ನನ್ನು ಬಂಧಿಸಲಾಗಿದೆ. ಕೊಲೆ ದಿನ ವಾಟ್ಸಪ್, ಮೆಸೇಜ್ ಕಾಲ್ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ರೂಪೇಶ್ ಮತ್ತು ಜೆಡಿಎಸ್ ನಾಯಕಿಯ ಮಗಳನ್ನು ವಶಕ್ಕೆ ಪಡೆದು ತನಿಖೆ ಮಾಡುತ್ತಿದ್ದೇವೆ. ಸದ್ಯಕ್ಕೆ ಇನ್ನೂ ಎರಡು-ಮೂರು ದಿನಗಳಲ್ಲಿ ಸಂಪೂರ್ಣ ತನಿಖೆ ಮುಗಿಯಲಿದೆ ಎಂದು ಡಿಸಿಪಿ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv