Tag: ಜೂಹಿ ಚಾವ್ಲಾ

  • ಭೂಮಿ ರಹಿತ ರೈತರ ಸಹಾಯಕ್ಕೆ ಮುಂದಾದ ಜೂಹಿ ಚಾವ್ಲಾ

    ಭೂಮಿ ರಹಿತ ರೈತರ ಸಹಾಯಕ್ಕೆ ಮುಂದಾದ ಜೂಹಿ ಚಾವ್ಲಾ

    ಮುಂಬೈ: ಲಾಕ್‍ಡೌನ್ ರೈತರನ್ನು ಹಿಂಡಿ ಹಿಪ್ಪೆ ಮಾಡಿದೆ. ಬೆಳೆ ಕೈಗೆ ಬಂದರೂ ಇತ್ತ ದರ ಸಿಗದೆ ರೈತರು ಕಂಗಾಲಾಗಿದ್ದರೆ, ಇನ್ನೊಂದೆಡೆ ಭೂಮಿ ಇಲ್ಲದೆ, ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ ರೈತರು ಇನ್ನೂ ಹೆಚ್ಚಿನ ಸಂಕಷ್ಟದಲ್ಲಿದ್ದಾರೆ. ತುತ್ತು ಅನ್ನಕ್ಕೂ ಕಷ್ಟ ಪಡುತ್ತಿದ್ದಾರೆ. ಇಂತಹವರಿಗೆ ಸಹಾಯ ಮಾಡಲು ಬಾಲಿವುಡ್ ನಟಿ ಜೂಹಿ ಚಾವ್ಲಾ ಮುಂದಾಗಿದ್ದು, ಅವರಿಗಾಗಿ ಹೊಸ ಯೋಜನೆ ರೂಪಿಸಿದ್ದಾರೆ.

    ಕೊರೊನಾ ಹಿನ್ನೆಲೆ ಸಾಕಷ್ಟು ಜನ ಸಂಕಷ್ಟ ಎದುರಿಸುತ್ತಿದ್ದು, ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ಇದನ್ನು ಮನಗಂಡ ಬಾಲಿವುಡ್ ನಟ, ನಟಿಯರು, ಧನಿಕರು ಬಡವರ ನಿರ್ಗತಿಕರ ಸಹಾಯಕ್ಕೆ ಧಾವಿಸಿದ್ದಾರೆ. ಹಲವು ನಟ, ನಟಿಯರು ವಿವಿಧ ರೀತಿಯಲ್ಲಿ ಸಹಾಯ ಮಾಡುತ್ತಿದ್ದಾರೆ. ಕೆಲವರು ಅಗತ್ಯ ವಸ್ತುಗಳನ್ನು ನೀಡುತ್ತಿದ್ದರೆ, ಇನ್ನೂ ಕೆಲವರು ಊಟವನ್ನೇ ನೀಡುತ್ತಿದ್ದಾರೆ. ಆದರೆ ಪ್ರೇಮ ಲೋಕದ ಬೆಡಗಿ ಜೂಹಿ ಚಾವ್ಲಾ ರೈತರಿಗೆ ವಿಭಿನ್ನವಾಗಿ ಸಹಾಯ ಮಾಡುತ್ತಿದ್ದಾರೆ. ತಮ್ಮದೇ ಸ್ವಂತ ಭೂಮಿಯಲ್ಲಿ ಕೃಷಿ ಮಾಡಲು ಆಹ್ವಾನ ನೀಡಿದ್ದಾರೆ.

    ಭೂಮಿ ರಹಿತ ರೈತರಿಗೆ ಈ ಕುರಿತು ಆಹ್ವಾನ ನೀಡಿದ್ದು, ಮುಂಬೈನ ಹೊರ ವಲಯದಲ್ಲಿರುವ ವಾಡಾ ಫಾರ್ಮ್ ಹೌಸ್ ಬಳಿ 2 ಕಡೆ ಜಮೀನು ಹೊಂದಿದ್ದು, ಸಾವಯವ ಕೃಷಿ ಮಾಡುವಂತೆ ಆಹ್ವಾನ ನೀಡಿದ್ದಾರೆ. ಜೂಹಿ ಅವರಿಗೆ ಈ ಜಮೀನು ತಂದೆ ನೀಡಿದ್ದಾರಂತೆ. 20 ವರ್ಷಗಳ ಹಿಂದೆ ನಮ್ಮ ತಂದೆ ನಿವೃತ್ತರಾದ ನಂತರ ಮುಂಬೈ ಹೊರ ವಲಯದ ವಾಡಾದಲ್ಲಿ ಜಮೀನು ಖರೀದಿಸಿದರು. ಇದು ವೈತಾರ್ಣ ನದಿಯ ದಡದಲ್ಲಿದೆ. ನಮ್ಮ ತಂದೆಯವರು ಹೊಲದ ಕೆಲಸದಲ್ಲಿ ಬ್ಯುಸಿಯಾಗಿದ್ದರು. ನಾನು ಶೂಟಿಂಗ್‍ನಲ್ಲಿ ಬ್ಯುಸಿಯಾಗಿದ್ದೆ. ಕಳೆದ 10 ವರ್ಷಗಳ ಹಿಂದೆ ಅವರು ಸಾವನ್ನಪ್ಪಿದರು. ನಂತರ ಅದನ್ನು ನನ್ನ ಸುಪರ್ದಿಗೆ ಬಂತು ಎಂದು ಹೇಳಿಕೊಂಡಿದ್ದಾರೆ.

    ಅಲ್ಲದೆ ಪತಿ ಜಯ್ ಮೆಹ್ತಾ ಸಹ ತಮ್ಮ ರೆಸ್ಟೋರೆಂಟ್‍ಗಾಗಿ ತರಕಾರಿ ಬೆಳೆಯಲು ನಿರ್ಧರಿಸಿದ್ದರು. ಹೀಗಾಗಿ ಸಾವಯವ ತೋಟಗಾರಿಕೆ ಕುರಿತು ಅಧ್ಯಯನ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಸಾವಯವ ಕೃಷಿಗೆ ಒತ್ತು ನೀಡುವ ಜೂಹಿ, ತಮ್ಮ ಭೂಮಿಯಲ್ಲಿ ಕೃಷಿ ಮಾಡುವ ರೈತರಿಗೂ ಇದೇ ಕಂಡೀಶನ್ ಹಾಕಿದ್ದಾರೆ. ರೈತರು ಸಾವಯವ ಕೃಷಿ ಮೂಲಕ ಭತ್ತ ಬೆಳೆದರೆ ಅದರ ಫಸಲಿನಲ್ಲಿ ಒಂದು ಪಾಲು ನೀಡುವುದಾಗಿ ಹೇಳಿದ್ದಾರೆ.

    ಇದು ಹೊಸ ಪದ್ಧತಿಯೇನಲ್ಲ, ದಶಕಗಳ ಹಿಂದಿನ ಕೃಷಿ ಪದ್ಧತಿಯೇ ಆಗಿದೆ. ಇದು ಚಾಣಾಕ್ಷ ಮಾರ್ಗವಲ್ಲವೇ ಎಂದು ಪ್ರಶ್ನಿಸಿದ್ದಾರೆ. ನಗರವಾಸಿಗಳು ಪಠ್ಯದ ಮೂಲಕ ನೈಸರ್ಗಿಕತೆ, ಕೃಷಿ ಬಗ್ಗೆ ತಿಳಿದುಕೊಂಡಿರುತ್ತೇವೆ. ಆದರೆ ನಮ್ಮ ರೈತರ ಬದುಕೇ ಕೃಷಿ. ಹೀಗಾಗಿ ಭೂಮಿ, ಮಣ್ಣು, ಗಾಳಿ ಬಗ್ಗೆ ಅವರಿಗೆ ವಿಶೇಷವಾಗಿ ಹೇಳಬೇಕಿಲ್ಲ ಎಂದಿದ್ದಾರೆ.

  • ಈ ಕನ್ನಡ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಜೂಹಿ ಚಾವ್ಲಾ

    ಈ ಕನ್ನಡ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಜೂಹಿ ಚಾವ್ಲಾ

    ಬೆಂಗಳೂರು: ಬಾಲಿವುಡ್ ಬೆಡಗಿ ಜೂಹಿ ಚಾವ್ಲಾ ಈ ಹಿಂದೆ ಪ್ರೇಮಲೋಕ, ಕಿಂದರಿ ಜೋಗಿ ಮುಂತಾದ ಹಲವು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇದೀಗ ಮತ್ತೊಮ್ಮೆ ಕನ್ನಡ ಚಿತ್ರವೊಂದರಲ್ಲಿ ಜೂಹಿ ಅಭಿನಯಿಸಲಿದ್ದಾರೆ.

    ಜೂಹಿ ಚಾವ್ಲಾ ಕೊನೆಯ ಬಾರಿ ಕನ್ನಡ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದು ರಮೇಶ್ ಅರವಿಂದ್ ಅವರ 100ನೇ ಸಿನಿಮಾ ಪುಷ್ಪಕ ವಿಮಾನ ದಲ್ಲಿ. ಇದೀಗ ವೆರಿ ಗುಡ್ 10/10 ಚಿತ್ರದಲ್ಲಿ ಜೂಹಿ ಚಾವ್ಲಾ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೂಲಗಳ ಮಾಹಿತಿ ಪ್ರಕಾರ ಈ ಚಿತ್ರದಲ್ಲಿ ಜೂಹಿ ಸಂಗೀತ ಶಿಕ್ಷಕಿಯ ಪಾತ್ರ ಮಾಡ್ತಿದ್ದಾರೆ. ಚಿತ್ರವನ್ನ ಯಶವಂತ್ ಸರ್‍ದೇಶ್‍ಪಾಂಡೆ ನಿರ್ದೇಶನ ಮಾಡ್ತಿದ್ದಾರೆ.

    ಚಿತ್ರದಲ್ಲಿನ ತಮ್ಮ ಪಾತ್ರದ ಬಗ್ಗೆ ಮಾತನಾಡಿದ ಜೂಹಿ, ತಮ್ಮ ಸಂಗೀತ ಪರಿಣತಿಯ ಬಗ್ಗೆ ಹೇಳಿಕೊಂಡಿದ್ದಾರೆ. ಲಂಡನ್‍ನ ಭಾರತೀಯ ವಿದ್ಯಾ ಭವನದಲ್ಲಿ ಪಂಡಿತ್ ವಿಶ್ವ ಪ್ರಕಾಶ್ ಅವರ ಬಳಿ ಜೂಹಿ ಸಂಗೀತಾಭ್ಯಾಸ ಮಾಡಿದ್ದಾರೆ. ಭಾರತಕ್ಕೆ ಮರಳಿದ ನಂತರ ನಟಿ ಪದ್ಮಿನಿ ಕೊಲ್ಹಾಪುರಿ ಅವರ ತಂದೆಯ ಮಾರ್ಗದರ್ಶನದಲ್ಲಿ ಸಂಗೀತಾಭ್ಯಾಸ ಮಾಡಿದ್ದಾರೆ.

    10/10 ಚಿತ್ರದಲ್ಲಿ ಅತಿಥಿ ಪಾತ್ರದ ಜೊತೆಗೆ ಎರಡು ಹಾಡುಗಳಲ್ಲೂ ಜೂಹಿ ಕಾಣಿಸಿಕೊಳ್ಳಲಿದ್ದಾರೆ. ಇದು ಮಕ್ಕಳ ಚಿತ್ರವಾದ್ದರಿಂದ ನಿರ್ದೇಶಕ ಯಶವಂತ್ ಏಪ್ರಿಲ್ 10 ರಿಂದ ಮೇ 20ರವರೆಗೆ ಆಡಿಷನ್ಸ್ ಮಾಡಿ ಚಿತ್ರಕ್ಕಾಗಿ ಅನೇಕ ಮಕ್ಕಳನ್ನ ಆಯ್ಕೆ ಮಾಡಿದ್ದಾರೆ.

    ಇನ್ನು ಚಿತ್ರಕ್ಕೆ ವಿ ಮನೋಹರ್ ಸಂಗೀತವಿದ್ದು, ರಮಾನಾತ್ ಕೊಟಿಯಾನ್ ಹಣ ಹೂಡಿದ್ದಾರೆ. ಚಿತ್ರವನ್ನ ಇಂಗ್ಲಿಷ್ ಹಾಗೂ ಹಿಂದಿಯಲ್ಲೂ ಡಬ್ ಮಾಡೋ ಬಗ್ಗೆ ಚಿಂತನೆ ನಡೆಸ್ತಿದ್ದಾರೆ.

    ಮಕ್ಕಳ ಚಿತ್ರವಾದ್ದರಿಂದ ಈ ಚಿತ್ರವನ್ನ ಒಪ್ಪಿಕೊಂಡೆ ಅಂತಾರೆ ಪ್ರೇಮಲೋಕದ ಬೆಡಗಿ ಜೂಹಿ.