Tag: ಜಿಯೋ

  • ವರ್ಕ್ ಫ್ರಮ್ ಹೋಂ- ಜಿಯೋದಿಂದ ಆಫರ್

    ವರ್ಕ್ ಫ್ರಮ್ ಹೋಂ- ಜಿಯೋದಿಂದ ಆಫರ್

    ನವದೆಹಲಿ: ಮಹಾಮಾರಿ ಕೊರೊನಾ ಭೀತಿ ಹಿನ್ನೆಲೆ ಬಹುತೇಕ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ಎಂದು ಘೋಷಿಸಿದ್ದು, ಗ್ರಾಹಕರಿಗೆ ಅನುಕೂಲವಾಗುವಂತೆ ಜಿಯೋ ಆಫರ್ ಘೋಷಿಸಿದೆ.

    ಜಿಯೋ ಫೈಬರ್ ನೆಟ್ ಬಳಸುವವರಿಗೆ ಆಫರ್ ಘೋಷಿಸಿದ್ದು, ಯಾವುದೇ ಸೇವಾ ಶುಲ್ಕವಿಲ್ಲದೆ ಬೇಸಿಕ್ ಜಿಯೋ ಫೈಬರ್ ಬ್ರಾಡ್ ಬ್ಯಾಂಡ್ ಕನೆಕ್ಷನ್ ನೀಡುತ್ತಿದೆ. ಆಯಾ ಏರಿಯಾಗಳ ಆಧಾರದ ಮೇಲೆ ಫೈಬರ್ ನೆಟ್ ನೀಡಲು ಮುಂದಾಗಿದೆ. ಹೊಸ ಗ್ರಾಹಕರಿಗೆ ಸೇವಾ ಶುಲ್ಕವಿಲ್ಲದೆ ಕನೆಕ್ಷನ್ ನೀಡುವುದರ ಜೊತೆಗೆ ಪ್ರತಿ ಸೆಕೆಂಡಿಗೆ 10 ಎಂಬಿ ವೇಗದಲ್ಲಿ ಉಚಿತವಾಗಿ ಇಂಟರ್‍ನೆಟ್ ನೀಡುವುದಾಗಿ ಘೋಷಿಸಿದೆ. ಅಷ್ಟೇ ಅಲ್ಲದೆ ಈಗಿರುವ ಗ್ರಾಹಕರಿಗೆ ಎಲ್ಲ ಪ್ಲಾನ್‍ಗಳಿಗೆ ಹೆಚ್ಚುವರಿಯಾಗಿ ಡಬಲ್ ಡಾಟಾ ನೀಡಲು ಮುಂದಾಗಿದೆ.

    ಇಂತಹ ಕಷ್ಟದ ಸಂದರ್ಭದಲ್ಲಿಯೂ ಯಾವುದೇ ರೀತಿಯ ತೊಂದರೆ ಇಲ್ಲದೆ ಕಂಪನಿ ಕಾರ್ಯನಿರ್ವಹಿಸಲಿದೆ. ಎಲ್ಲ ಸಮಯದಲ್ಲಿಯೂ ಗ್ರಾಹಕರಿಗೆ ಸೇವೆ ಒದಗಿಸಲಿದೆ ಎಂದು ಸಂಸ್ಥೆ ಖಚಿತಪಡಿಸಿದೆ. ಈ ಮೂಲಕ ಕೊರೊನಾ ವಿರುದ್ಧದ ಹೋರಾಟದಲ್ಲಿ ರಿಲಾಯನ್ಸ್ ಜಿಯೋ ಕೈ ಜೋಡಿಸಿದೆ.

    ರಿಲಾಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಬೇಸಿಕ್ ಜಿಯೋ ಫೈಬರ್ ಬ್ರಾಡ್‍ಬ್ಯಾಂಡ್ ಕನೆಕ್ಷನ್ ನೀಡುತ್ತಿದ್ದು, ಪ್ರತಿ ಸೆಕೆಂಡಿಗೆ 10 ಎಂಬಿ ವೇಗದಲ್ಲಿ ಇಂಟರ್ ನೆಟ್ ಒದಗಿಸಲಿದೆ. ಆದರೆ ರೂಟರ್ ಗಾಗಿ ಗ್ರಾಹಕರು ಹಣ ಪಾವತಿಸಬೇಕಾಗುತ್ತದೆ. ಇದಕ್ಕೂ ಸಹ ಮಿನಿಮಮ್ ರೀಫಂಡೇಬಲ್ ಪ್ಲಾನ್ ಇದ್ದು, ಹೋಮ್ ಗೇಟ್‍ವೇ ರೂಟರ್ ಗಳಿಗೆ ಕನಿಷ್ಠ ಮರುಪಾವತಿಸಬಹುದಾದ ಠೇವಣಿ ನೀಡಲಾಗುತ್ತಿದೆ. ಈಗಾಗಲೇ ಜಿಯೋ ಫೈಬರ್ ಬ್ರಾಡ್ ಬ್ಯಾಂಡ್ ಗ್ರಾಹಕರಾಗಿದ್ದಲ್ಲಿ ಪ್ರಸ್ತುತ ಒದಗಿಸುತ್ತಿರುವುದಕ್ಕಿಂತ ಹೆಚ್ಚುವರಿಯಾಗಿ ದುಪ್ಪಟ್ಟು ಡಾಟಾ ನೀಡಲಾಗುವುದು ಎಂದು ಕಂಪನಿ ತಿಳಿಸಿದೆ.

    ಇತ್ತೀಚೆಗಷ್ಟೇ ಜಿಯೋ ಆಫರ್ ಘೋಷಿಸಿದ್ದು, 4ಜಿ ಬಳಕೆದಾರರಿಗೆ ಆಡ್ ಆನ್ ವೋಚರ್ ಮೂಲಕ ಡಬಲ್ ಡಾಟಾ ಕೊಡಲು ಮುಂದಾಗಿದೆ. ಇದರಿಂದ ಜಿಯೋ ಬದಲಿಗೆ ಇತರೆ ನೆಟ್‍ವರ್ಕ್ ಗಳ ಕರೆ ಶುಲ್ಕವನ್ನು ಕಡಿತಗೊಳಿಸಲಾಗಿದ್ದು, ಯಾವುದೇ ಶುಲ್ಕವಿಲ್ಲದೆ ಬೇರೆ ನೆಟ್‍ವರ್ಕ್‍ಗೆ ಕರೆ ಮಾಡಬಹುದಾಗಿದೆ. ಈ ಸೇವೆ ಒದಗಿಸಲು ಸಹಾಯ ಮಾಡುವ ಸಿಬ್ಬಂದಿಯನ್ನು ದೇಶಾದ್ಯಂತ ರೋಟೇಶನ್ ಆಧಾರದ ಮೇಲೆ ನಿಯೋಜಿಸಲಾಗುವುದು ಸಂಸ್ಥೆ ಮಾಹಿತಿ ನೀಡಿದೆ.

    ಜಗತ್ತಿನಾದ್ಯಂತ ರೌದ್ರತಾಂಡವವಾಡ್ತಿರುವ ಕೊರೊನಾ ಹೆಮ್ಮಾರಿಗೆ ಇಲ್ಲಿವರೆಗೆ 15,306 ಮಂದಿ ಬಲಿಯಾಗಿದ್ದಾರೆ. 3.50 ಲಕ್ಷ ಮಂದಿ ಸೋಂಕಿತರಾಗಿದ್ದಾರೆ. ಅಮೆರಿಕಾದಲ್ಲಿ ಕೊರೋನಾಗೆ ನಿನ್ನೆ ಒಂದೇ ದಿನ 100 ಮಂದಿ ಮೃತಪಟ್ಟಿದ್ದು, ಒಟ್ಟಾರೆ 458 ಮಂದಿ ಬಲಿಯಾಗಿದ್ದಾರೆ. ಸೋಂಕಿತರ ಸಂಖ್ಯೆ 34 ಸಾವಿರ ದಾಟಿದೆ.

    ಚೀನಾ ಇಟಲಿ ಬಳಿಕ ಹೆಚ್ಚಿನ ಸಂಖ್ಯೆ ವೈರಸ್ ಬಾಧಿತರು ಇರೋದು ಅಮೆರಿಕಾದಲ್ಲಿ ಎಂದು ವರದಿಯಾಗಿದೆ. ಇಟಲಿಯಲ್ಲಿ ಎರಡು ದಿನಕ್ಕೆ ಹೋಲಿಸಿದ್ರೆ ನಿನ್ನೆ ಮೃತರ ಸಂಖ್ಯೆ ಕಡಿಮೆಯಾಗಿದೆ. ನಿನ್ನೆ 651 ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ಮೃತರ ಸಂಖ್ಯೆ 5500ಕ್ಕೆ ಏರಿಕೆಯಾಗಿದೆ. ಸ್ಪೇನ್‍ನಲ್ಲಿ 2182, ಇರಾನ್‍ನಲ್ಲಿ 1812, ಫ್ರಾನ್ಸ್ 674, ಬ್ರಿಟನ್ 281, ನೆದರ್ ಲೆಂಡ್‍ನಲ್ಲಿ 179, ಜರ್ಮನಿಯಲ್ಲಿ 111 ಮಂದಿ ಸಾವನ್ನಪ್ಪಿದ್ದಾರೆ. ಜರ್ಮನಿ ಚಾನ್ಸಲರ್ ಏಂಜೆಲಾ ಮಾರ್ಕೆಲ್‍ರಲ್ಲಿ ಸೋಂಕು ಲಕ್ಷಣ ಕಂಡು ಬಂದಿದ್ದು, ಕ್ವಾರಂಟೇನ್‍ನಲ್ಲಿ ಇರಿಸಲಾಗಿದೆ. ನ್ಯೂಯಾರ್ಕ್ ನಗರದ ಜೈಲುಗಳಲ್ಲಿ 38 ಮಂದಿಗೆ ಕೊರೊನಾ ಸೋಂಕು ಕಂಡು ಬಂದಿದೆ.

  • ಗೇಲ್ ಗ್ಯಾಸ್ ಸ್ಫೋಟ, ಅಂಗವಿಕಲ ಮಹಿಳೆಗೆ ಗಂಭೀರ ಗಾಯ

    ಗೇಲ್ ಗ್ಯಾಸ್ ಸ್ಫೋಟ, ಅಂಗವಿಕಲ ಮಹಿಳೆಗೆ ಗಂಭೀರ ಗಾಯ

    ಬೆಂಗಳೂರು: ಭೂಮಿಯಡಿಯಲ್ಲಿ ಅಳವಡಿಸಿರುವ ಗೇಲ್ ಗ್ಯಾಸ್ ಕಂಪನಿಯ ಪೈಪ್ ಲೈನ್ ಸೋರಿಕೆಯಾಗಿ ಪದೇ ಪದೆ ಅವಘಡಗಳು ಸಂಭವಿಸುತ್ತಿದ್ದು, ಇದೀಗ ಜಿಯೋ ಕಂಪನಿ ಕೇಬಲ್ ಅಳವಡಿಸುವ ವೇಳೆ ಗ್ಯಾಸ್ ಸೋರಿಕೆಯಾಗಿ ಸ್ಫೋಟ ಸಂಭವಿಸಿದೆ.

    ಬೆಂಗಳೂರು ಹೊರವಲಯದ ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸರೋಡ್ ಬಳಿ ಘಟನೆ ನಡೆದಿದ್ದು, ಅಂಗವಿಕಲ ಮಹಿಳೆಗೆ ಗಂಭೀರ ಗಾಯಗೊಂಡಿದ್ದಾರೆ. ಸಂಜೆ 7 ಗಂಟೆ ಸುಮಾರಿಗೆ ಘಟನೆ ಸಂಭವಿಸಿದ್ದು, ಗಾಯಗೊಂಡ ಮಹಿಳೆಯನ್ನು ಸಂಧ್ಯಾರಾಣಿ ಎಂದು ಗುರುತಿಸಲಾಗಿದೆ. ಮೊದಲೇ ಅಂಗವಿಕಲೆಯಾಗಿರುವ ಸಂಧ್ಯಾರಾಣಿಯವರಿಗೆ, ಇದೀಗ ಮತ್ತೊಂದು ಕಾಲು ಸಹ ಊನವಾಗಿದೆ. ಸದ್ಯ ಮಹಿಳೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

    ಪರಪ್ಪನ ಅಗ್ರಹಾರ ಎಚ್.ಎಸ್.ಆರ್. ಬಡಾವಣೆ ಸುತ್ತ ಮನೆಗಳಲಿಗೆ ಪೈಪ್ ಮೂಲಕ ಗ್ಯಾಸ್ ಸರಬರಾಜು ಮಾಡಲು ಗೇಲ್ ಕಂಪನಿ ನೆಲದಾಳದಲ್ಲಿ ಪೈಪ್ ಅಳವಡಿಸಿದೆ. ಭೂಮಿ ಅಗೆಯುವ ವೇಳೆ ಹಲವು ಬಾರಿ ಗ್ಯಾಸ್ ಸೋರಿಕೆಯಾಗಿ ಅವಘಡ ಸಂಭವಿಸಿವೆ. ಇಂದು ಜಿಯೋ ಕಂಪನಿ ಕೇಬಲ್ ಅಳವಡಿಸುವ ವೇಳೆ ಗ್ಯಾಸ್ ಸೋರಿಕೆಯಾಗಿ ಮತ್ತೊಂದು ಅವಘಡ ಸಂಭವಿಸಿದೆ.

    ಕೆಲ ದಿನಗಳ ಹಿಂದಷ್ಟೇ ಇದೇ ರೀತಿ ಗ್ಯಾಸ್ ಸೋರಿಕೆಯಾಗಿ ನಾಲ್ಕು ಮನೆಗಳು ಜಖಂ ಆಗಿದ್ದವು. ಅಲ್ಲದೆ ಐದಾರು ಮಂದಿ ಗಂಭೀರ ಗಾಯಗೊಂಡಿದ್ದರು. ಇಷ್ಟೆಲ್ಲ ಅವಾಂತರ ನಡೆಯುತ್ತಿದ್ದರೂ ಪಾಲಿಕೆ ಅಧಿಕಾರಿಗಳು ನಿರ್ಲಕ್ಷವಹಿಸಿರುವುದು ಪದೇ ಪದೆ ಘಟನೆ ಸಂಭವಿಸಲು ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.

  • ಅಮೇಜಾನ್, ಫ್ಲಿಪ್‍ಕಾರ್ಟ್‍ಗೆ ಸ್ಪರ್ಧೆ – ಶೀಘ್ರವೇ ಜಿಯೋ ಮಾರ್ಟ್ ಆರಂಭ, ಉಚಿತ ಡೆಲಿವರಿ

    ಅಮೇಜಾನ್, ಫ್ಲಿಪ್‍ಕಾರ್ಟ್‍ಗೆ ಸ್ಪರ್ಧೆ – ಶೀಘ್ರವೇ ಜಿಯೋ ಮಾರ್ಟ್ ಆರಂಭ, ಉಚಿತ ಡೆಲಿವರಿ

    ಮುಂಬೈ : ಟೆಲಿಕಾಂ ವಲಯದಲ್ಲಿ ಸಂಚಲನ ಸೃಷ್ಟಿಸಿದ್ದ ಜಿಯೋ ಶೀಘ್ರದಲ್ಲೇ ‘ಜಿಯೋ ಮಾರ್ಟ್’ ಆರಂಭಿಸುವ ಮೂಲಕ ಇ ಕಾಮರ್ಸ್ ಉದ್ಯಮಕ್ಕೆ ಕಾಲಿಡಲಿದೆ. ಮುಂಬೈನಲ್ಲಿ ಇ ಕಾಮರ್ಸ್ ಸಂಸ್ಥೆ ಆರಂಭಿಸಿ ಫ್ಲಿಪ್‍ಕಾರ್ಟ್ ಮತ್ತು ಅಮೇಜಾನ್ ಕಂಪನಿಗಳಿಗೆ ಸವಾಲೊಡ್ಡಲು ಜಿಯೋ ಸಿದ್ಧವಾಗಿದೆ.

    ಈಗಾಗಲೇ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿದ್ದು ಇಷ್ಟು ದಿನ ಟೆಲಿಕಾಂ ವಲಯದಲ್ಲಿ ಕ್ರಾಂತಿ ಮಾಡಿದ್ದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್  ಕಂಪನಿ ಈಗ ಇ ಕಾಮರ್ಸ್ ವಲಯದಲ್ಲೂ ಆಫರ್ ಗಳನ್ನು ಬಿಡುವ ಮೂಲಕ ಹೊಸ ಇತಿಹಾಸ ಬರೆಯಬಹುದು ಎಂಬ ವಿಶ್ಲೇಷಣೆ ಕೇಳಿಬಂದಿದೆ.

    ಪ್ರಾಯೋಗಿಕವಾಗಿ ಹೊಸ ಮುಂಬೈ, ಥಾಣೆ ಮತ್ತು ಕಲ್ಯಾಣ್‍ನಲ್ಲಿ ಜಿಯೋಮಾರ್ಟ್ ಆರಂಭವಾಗಲಿದೆ. ಈಗಾಗಲೇ ಪ್ರಚಾರ ಆರಂಭಗೊಂಡಿದ್ದು ಮುಂಬೈನ ಜಿಯೋ ಬಳಕೆದಾರರಿಗೆ ಜಿಯೋಮಾರ್ಟ್ ಆರಂಭಿಸುವ ಜಾಹೀರಾತು ಸಂದೇಶಗಳನ್ನು ಕಳುಹಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕ್ರಮೇಣ ಭಾರತಾದ್ಯಂತ ವಿಸ್ತರಿಸಲು ಜಿಯೋ ಮುಂದಾಗುತ್ತಿದೆ.

    ರಿಲಯನ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಈ ವರ್ಷದ ಅಗಸ್ಟ್ ನಲ್ಲಿ ನಡೆದ 42ನೇ ವಾರ್ಷಿಕ ಸಭೆಯಲ್ಲಿ ಇ-ಕಾಮರ್ಸ್ ಉದ್ಯಮವನ್ನು ಹೊಸ ವಾಣಿಜ್ಯ ಉಪಕ್ರಮ ಎಂದು ಕರೆಯುವ ಮೂಲಕ ಜಿಯೋ ಮಾರ್ಟ್ ಆರಂಭಿಸುವ ಸುಳಿವು ನೀಡಿದ್ದರು. ಮೂರು ಕೋಟಿ ಆಫ್‍ಲೈನ್ ಚಿಲ್ಲರೆ ವ್ಯಾಪಾರಿಗಳನ್ನು ದೇಶದ 20 ಕೋಟಿ ಮನೆಗಳೊಂದಿಗೆ ಸಂಪರ್ಕಿಸುವ ನಿರೀಕ್ಷೆಯಿದೆ ಎಂದು ಅವರು ಹೇಳಿದ್ದರು.

    ತನ್ನ ಇ-ಕಾಮರ್ಸ್ ಕಾರ್ಯಾಚರಣೆಯನ್ನು ಪ್ರಾರಂಭಿಸಲು ರಿಲಯನ್ಸ್ ರಿಟೇಲ್ ಜಿಯೋಮಾರ್ಟ್‍ಗಾಗಿ ಪೂರ್ವ ನೋಂದಣಿಗಳಿಗೆ ಆಹ್ವಾನಿಸಿದೆ. ಈ ಹೊಸ ಉದ್ಯಮವು 50 ಸಾವಿರಕ್ಕೂ ಹೆಚ್ಚು ಕಿರಾಣಿ ಉತ್ಪನ್ನಗಳಿಗೆ ಬಂಡವಾಳ ನೀಡಲು ಅವಕಾಶ ಮಾಡಿಕೊಟ್ಟಿದೆ. ಕಡಿಮೆ ಬೆಲೆ ಮತ್ತು ಉಚಿತ ಡೆಲಿವರಿಗೆ ಹೆಚ್ಚು ಆದ್ಯತೆ ನೀಡಿದ್ದು ಉತ್ಪನ್ನಗಳು ವಾಪಸ್ ಆಗದ ರೀತಿಯಲ್ಲಿ ಎಕ್ಸ್‍ಪ್ರೆಸ್ ಡೆಲಿವರಿ ಸೇವೆಯನ್ನ ಗ್ರಾಹಕರಿಗೆ ಒದಗಿಸಲಿದೆ. ಇದಕ್ಕಾಗಿ ಜಿಯೋ ಮಾರ್ಟ್ “ದೇಶ್ ಕೀ ನಾಯ್ ದುಕಾನ್” (ದೇಶದ ಹೊಸ ಅಂಗಡಿ) ಸಬ್ ಟೈಟಲ್ ನ್ನು ನೀಡಿದ್ದು ಅಮೇಜಾನ್ ಫ್ಲಿಪ್‍ಕಾರ್ಟ್ ನಂತೆ ತನ್ನತ್ತ ಗ್ರಾಹಕರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದೆ.

    ವರದಿಗಳ ಪ್ರಕಾರ ರಿಲಯನ್ಸ್ ರಿಟೇಲ್, ತನ್ನ ಜಿಯೋ ಬಳಕೆದಾರರಿಗೆ ಜಿಯೋಮಾರ್ಟ್‍ಗೆ ನೋಂದಾಯಿಸಲು ಮತ್ತು ಪ್ರಾಥಮಿಕ ರಿಯಾಯಿತಿಗಳನ್ನು ಪಡೆದುಕೊಳ್ಳಲು ಆಹ್ವಾನವನ್ನು ಕಳುಹಿಸುತ್ತಿದೆ. 3 ಸಾವಿರ ರೂ. ನೀಡಿ ನೊಂದಾಯಿಸಿದ್ದಲ್ಲಿ ಜಿಯೋ ಮಾರ್ಟ್ ನಲ್ಲಿ ಹೆಚ್ಚಿನ ರಿಯಾಯಿತಿ ಪಡೆಯುವ ಅವಕಾಶ ನೀಡುವುದಾಗಿ ಹೇಳಿದೆ.

    ಜಿಯೋ ಮಾರ್ಟ್ ಸ್ಥಳೀಯ ಉಗ್ರಾಣವನ್ನು ನಿರ್ಮಿಸುವ ಬದಲು, “ಆನ್‍ಲೈನ್ – ಟು – ಆಫ್‍ಲೈನ್” ಮಾರುಕಟ್ಟೆ ನಿರ್ಮಿಸುತ್ತಿದೆ. ಅಮೆಜಾನ್ ಪ್ರೈಮ್ ನೌ ಮತ್ತು ಗ್ರೂಫರ್ಸ್‍ನಂತೆಯೇ ಕಿರಾಣಿ ವಸ್ತುಗಳನ್ನು ಹತ್ತಿರದ ವ್ಯಾಪಾರಿಗಳಿಂದ ಪಡೆದು ಗ್ರಾಹಕರಿಗೆ ತಲುಪಿಸುವ ಕೆಲಸ ಮಾಡಲಿದೆ. ಇದರಿಂದ ಜಿಯೋ ಮಾರ್ಟ್ ಹೊಸ ಉದ್ಯಮವು ಆಫ್‍ಲೈನ್ ಚಿಲ್ಲರೆ ವ್ಯಾಪಾರಿಗಳಿಗೆ ತಮ್ಮ ಪ್ರದೇಶದಲ್ಲಿನ ಆನ್‍ಲೈನ್ ಕೇಂದ್ರೀಕೃತ ಗ್ರಾಹಕರಿಗೆ ತಮ್ಮ ಉತ್ಪನ್ನಗಳನ್ನು ಪೂರೈಸುವ ವೇದಿಕೆಯಾಗಿ ಹೊರ ಹೊಮ್ಮಲಿದೆ ಎನ್ನಲಾಗಿದೆ.

    ಆರಂಭದಲ್ಲಿ, ಜಿಯೋಮಾರ್ಟ್, ದೈನಂದಿನ ಅವಶ್ಯಕತೆಗಳಾದ ಸಾಬೂನು, ಶ್ಯಾಂಪೂ ಮತ್ತು ಇತರ ಮನೆ ಬಳಕೆಯ ವಸ್ತುಗಳನ್ನು ಕೇವಲ ಎರಡು ಗಂಟೆಯಲ್ಲಿ ಪೂರೈಕೆ ಮಾಡಲಿದೆ ಎಂದು ಹೇಳಿಕೊಂಡಿದೆ. ಜಿಯೋ ಮಾರ್ಟ್‍ನ ಈ ಬೆಳವಣಿಗೆ ಅಮೆಜಾನ್‍ನ ಪ್ರೈಮ್ ನೌಗೆ ಕಷ್ಟ ಕರವಾಗಲಿದೆ ಎಂದು ವಿಶ್ಲೇಷಿಸಲಾಗಿದೆ. ಮುಂದಿನ ದಿನಗಳಲ್ಲಿ ಆಂಡ್ರಾಯ್ಡ್ ಮತ್ತು ಐಓಎಸ್ ಜಿಯೋಮಾರ್ಟ್ ಅಪ್ಲಿಕೇಶನ್ ಗಳನ್ನು ಬಿಡುಗಡೆ ಮಾಡಲಿದೆ.

  • ಸಿಮ್ ಖರೀದಿಸಿದ್ರೆ ಕೆಜಿ ಈರುಳ್ಳಿ ಫ್ರಿ!

    ಸಿಮ್ ಖರೀದಿಸಿದ್ರೆ ಕೆಜಿ ಈರುಳ್ಳಿ ಫ್ರಿ!

    ಶಿವಮೊಗ್ಗ: ಆಫರ್‌ಗಳ ಮೇಲೆ ಆಫರ್‌ಗಳನ್ನು ಕೊಡುತ್ತಾ ಬರುತ್ತಿರುವ, ಅಗ್ಗದ ದರದಲ್ಲಿ (ಉಚಿತವಾಗಿ) ಕರೆ ಸೌಲಭ್ಯವನ್ನು ನೀಡಿದ ಜಿಯೋ ಸಂಸ್ಥೆ ಈಗ ದಿನಬಳಕೆ ವಸ್ತುಗಳ ಮೇಲೂ ಆಫರ್ ನೀಡಲು ಮುಂದಾಗಿದೆ.

    ಈರುಳ್ಳಿ ಬೆಲೆ ಶತಕ ಬಾರಿಸಿದ್ದೇ ತಡ ಈರುಳ್ಳಿ ಕೇಂದ್ರಿತ ಭಿನ್ನ ಭಿನ್ನ ಆಫರ್‌ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಇದೀಗ ಈರುಳ್ಳಿಯನ್ನು ಜಿಯೋ ಸಂಸ್ಥೆ ಆಫರ್‌ನಲ್ಲಿ ನೀಡುತ್ತಿದೆ. ಸಿಮ್ ಖರೀದಿಸಿದರೆ ಒಂದು ಕೆಜಿ ಈರುಳ್ಳಿ ಉಚಿತವಾಗಿ ನೀಡುತ್ತಿದೆ. ಇದನ್ನೂ ಓದಿ: ಮೊಬೈಲ್ ಕೊಂಡ್ರೆ 1 ಕೆ.ಜಿ ಈರುಳ್ಳಿ ಫ್ರೀ

    ಶಿವಮೊಗ್ಗ ತಾಲೂಕಿನ ಪುರದಾಳು ಗ್ರಾಮಕ್ಕೆ ಟೆಲಿಕಾಂ ಸಂಸ್ಥೆ ತಂಡ ಆಗಮಿಸಿದೆ. ಗ್ರಾಹಕರು 300 ರೂ. ಕೊಟ್ಟು ಸಿಮ್ ಖರೀದಿಸಿದರೆ, ಅವರಿಗೆ 120 ರೂ. ಬೆಲೆಯಿರುವ ಈರುಳ್ಳಿಯನ್ನು ಉಚಿತವಾಗಿ ನೀಡಲಾಗುತ್ತಿದೆ. ಈ ಮೂಲಕ ಟೆಲಿಕಾಂ ಸಂಸ್ಥೆ ಗ್ರಾಹಕರ ಗಮನವನ್ನು ಸೆಳೆಯುತ್ತಿದೆ.

  • ವೊಡಾಫೋನ್ Vs ಏರ್‌ಟೆಲ್  – ದರ ಏರಿಕೆ ಸಮರದಿಂದ ಜಿಯೋಗೆ ಲಾಭವಂತೆ

    ವೊಡಾಫೋನ್ Vs ಏರ್‌ಟೆಲ್ – ದರ ಏರಿಕೆ ಸಮರದಿಂದ ಜಿಯೋಗೆ ಲಾಭವಂತೆ

    ನವದೆಹಲಿ: ಜಿಯೋ ಸೇವೆ ಆರಂಭಗೊಂಡ ನಂತರ ಡೇಟಾ ವಾರ್ ಶುರುವಾಗಿ ಉಳಿದ ಟೆಲಿಕಾಂ ಕಂಪನಿಗಳು ನಷ್ಟ ಅನುಭವಿಸಿದ್ದು ಈಗ ನಿಧನವಾಗಿ ದರ ಏರಿಕೆ ಮಾಡಲು ಮುಂದಾಗುತ್ತಿದೆ. ಏರ್‌ಟೆಲ್, ವೊಡಾಫೋನ್ ಕಂಪನಿಗಳು ಈಗಾಗಲೇ ಡೇಟಾ ದರ ಏರಿಸಿವೆ. ಈಗ ದರ ಏರಿಕೆಯ ಸಮರ ಆರಂಭಗೊಂಡಿದ್ದರೂ ಈ ‘ಹೈಕ್ ವಾರ್’ ನಲ್ಲಿ ಜಿಯೋಗೆ ಲಾಭವಾಗಲಿದೆ ಎನ್ನುವ ವಿಶ್ಲೇಷಣೆ ಕೇಳಿ ಬಂದಿದೆ.

    ಹೌದು. ಈಗಾಗಲೇ ವೊಡಾಫೋನ್ ಮತ್ತು ಏರ್‌ಟೆಲ್ ಕಂಪನಿಗಳು ಶೇ.20-41 ಅಂದಾಜಿನಲ್ಲಿ ಡೇಟಾ ಪ್ಯಾಕ್ ಗಳ ದರ ಏರಿಕೆ ಮಾಡಿವೆ. ಜಿಯೋ ಈ ಹಿಂದೆಯೇ ತಿಳಿಸಿದಂತೆ ಉಳಿದ ಕಂಪನಿಗಳ ದರವನ್ನು ನೋಡಿಕೊಂಡು ದರವನ್ನು ಏರಿಸಲಾಗುವುದು ಎಂದು ತಿಳಿಸಿತ್ತು. ಅದರಂತೆ ಡಿ.6 ರಿಂದ ಹೊಸ ದರದ ಪ್ಲ್ಯಾನ್ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದೆ.

    ಈ ಮಧ್ಯೆ ಪ್ರಸಿದ್ಧ ಪ್ಲ್ಯಾನ್‍ಗಳ ದರವನ್ನು ಶೇ.40 ರಷ್ಟು ಏರಿಸುವುದಿಲ್ಲ. ಬದಲಾಗಿ ಶೇ.25 – 30 ರಷ್ಟು ಏರಿಸಬಹುದು ಎಂದು ಬ್ಯಾಂಕ್ ಆಫ್ ಅಮೇರಿಕಾ ಮೆರಿಲ್ ಲಿಂಚ್ ವರದಿ ತಿಳಿಸಿದೆ. ಜಿಯೋ ಈಗ ಹೊಸ ಪ್ಲ್ಯಾನ್ ಬಗ್ಗೆ ಮಾಹಿತಿ ಪ್ರಕಟಿಸಿದೆ. ಡಿ.6 ರಂದು ಆಲ್ ಇನ್ ಒನ್ ಪ್ಲ್ಯಾನ್ ಆರಂಭಿಸುತ್ತಿದ್ದೇವೆ. 6 ರೀತಿ ದರ ಇರುವ ಈ ಪ್ಲ್ಯಾನ್ ನಲ್ಲಿ ಅನ್ ಲಿಮಿಟೆಡ್ ಕರೆ ಮತ್ತು ಡೇಟಾ ಸಿಗಲಿದೆ. ಈ ಹಿಂದಿನ ಪ್ಲ್ಯಾನ್ ಗಳಿಗೆ ಹೋಲಿಸಿದರೆ ಇದರಿಂದ ಶೇ.300 ರಷ್ಟು ಪ್ರಯೋಜನವಾಗಲಿದೆ ಎಂದು ತಿಳಿಸಿದೆ.

    ಈಗ ದರ ಏರಿಕೆಯಾದರೂ ಉಳಿದ ಕಂಪನಿಗಳ ದರಕ್ಕೆ ಹೋಲಿಸಿದರೆ ಜಿಯೋ ಆಯ್ದ ಪ್ಯಾಕ್ ಗಳ ಬೆಲೆ ಶೇ.20- 30 ರಷ್ಟು ಕಡಿಮೆ ಇರಲಿದೆ. ನ್ಯಾಯಯುತ ಬಳಕೆ ರೂಪದಲ್ಲಿ ಜಿಯೋ ದರಗಳು ನಿಯಂತ್ರಣದಲ್ಲಿ ಇರದೇ ಇದ್ದರೆ ಟೆಲಿಕಾಂ ಕಂಪನಿಗಳು ಪ್ಲ್ಯಾನ್‍ಗಳು ತಲೆಕೆಳಗಾಬಹುದು ಎಂದು ಬ್ಯಾಂಕ್ ಆಫ್ ಅಮೇರಿಕಾ ಮೆರಿಲ್ ಲಿಂಚ್ ಅಭಿಪ್ರಾಯಪಟ್ಟಿದೆ.

    ಜಿಯೋ ಡೇಟಾ ದರ ಸಮರ ಆರಂಭಗೊಂಡ ಬಳಿಕ ಭಾರತದಲ್ಲಿ ಹಲವು ಕಂಪನಿಗಳು ದೊಡ್ಡ ಕಂಪನಿಗಳ ಜೊತೆ ವಿಲೀನಗೊಂಡಿತ್ತು. ಜೊತೆಗೆ ಬಳಕೆದಾರರು ಜಿಯೋಗೆ ಪೋರ್ಟ್ ಮಾಡಿದ್ದರು. ಪರಿಣಾಮ ದೇಶದ ಎರಡನೇ ಅತಿ ದೊಡ್ಡ ಕಂಪನಿಯಾಗಿ ಜಿಯೋ ಹೊರ ಹೊಮ್ಮಿದೆ. ಈಗ ದರ ಏರಿಕೆಯ ಸಮರದಲ್ಲಿ ಯಾವ ಟೆಲಿಕಾಂ ಕಂಪನಿಗೆ ಲಾಭವಾಗಲಿದೆ ಎನ್ನುವ ಕುತೂಹಲ ಹೆಚ್ಚಾಗಿದೆ. ಇದನ್ನೂ ಓದಿ: ಗ್ರಾಹಕರಿಗೆ ಉಚಿತ ಡೇಟಾ ನೀಡಿದ್ದ ಜಿಯೋಗೆ ಆಗಿರುವ ನಷ್ಟ ಎಷ್ಟು ಗೊತ್ತೆ?

    ಮಾರುಕಟ್ಟೆಯಲ್ಲಿ ಜಿಯೋಗೆ ಸ್ಪರ್ಧೆ ನೀಡಲು ಮೂರು ವರ್ಷಗಳಿಂದ ದರವನ್ನು ಇಳಿಸಿದ್ದ ಟೆಲಿಕಾಂ ಕಂಪನಿಗಳು ಈಗ ದರ ಏರಿಸುತ್ತಿವೆ. ವೊಡಾಫೋನ್ ಐಡಿಯಾ, ಏರ್‌ಟೆಲ್ ಕಳೆದ ವಾರ ಪ್ರತ್ಯೇಕ ಹೇಳಿಕೆಯನ್ನು ಬಿಡುಗಡೆ ಮಾಡಿ ಕಂಪನಿಗೆ ಆಗುತ್ತಿರುವ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು ಬೆಲೆ ಏರಿಕೆ ಮಾಡಲಾಗುವುದು ಎಂದು ಹೇಳಿಕೊಂಡಿತ್ತು.

    ಟೆಲಿಕಾಂ ಕ್ಷೇತ್ರದಲ್ಲಿ ತಂತ್ರಜ್ಞಾನ ಬದಲಾವಣೆ ಆಗುತ್ತಲೇ ಇರುತ್ತದೆ. ಹೀಗಾಗಿ ಹೊಸತನಕ್ಕೆ ತೆರೆಯಬೇಕಾದರೆ ಕೋಟ್ಯಂತರ ರೂ. ಹಣ ಹೂಡಬೇಕಾಗುತ್ತದೆ. ನಷ್ಟದಲ್ಲಿದ್ದುಕೊಂಡು ಹೂಡಿಕೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ದರ ಏರಿಕೆ ಅನಿವಾರ್ಯ ಎಂದು ಕಂಪನಿಗಳು ತಮ್ಮ ನಿರ್ಧಾರವನ್ನು ಸ್ಪಷ್ಟಪಡಿಸಿತ್ತು.

    ವಿಶ್ವದಲ್ಲಿ ಈಗ ಭಾರತದಲ್ಲಿ ಅತಿ ಕಡಿಮೆ ದರದಲ್ಲಿ ಡೇಟಾ ಲಭ್ಯವಿದೆ. ಜಿಯೋಗೆ ಸ್ಪರ್ಧೆ ನೀಡಲು ಡೇಟಾ ಮತ್ತು ಕರೆ ದರವನ್ನು ಕಡಿತಗೊಳಿಸಿದ ಪರಿಣಾಮ ಟೆಲಿಕಾಂ ಕಂಪನಿಗಳು ಭಾರೀ ನಷ್ಟಕ್ಕೆ ತುತ್ತಾಗಿವೆ.

    ವೊಡಾಫೋನ್ ಸೆಪ್ಟೆಂಬರಿಗೆ ಅಂತ್ಯಗೊಂಡ ದ್ವಿತೀಯ ತ್ರೈಮಾಸಿಕದಲ್ಲಿ 50,921 ರೂ. ಕೋಟಿಗಳಷ್ಟು ನಷ್ಟ ದಾಖಲಿಸಿದ್ದರೆ, ಭಾರ್ತಿ ಏರ್‌ಟೆಲ್ 23,045 ಕೋಟಿ ರೂ. ನಷ್ಟ ಅನುಭವಿಸಿದೆ. ಹೊಂದಾಣಿಕೆ ಮಾಡಲಾದ ನಿವ್ವಳ ಆದಾಯ (ಅಡ್ಜಸ್ಟೆಡ್ ಗ್ರಾಸ್ ರೆವೆನ್ಯೂ- ಎಜಿಆರ್) ಪ್ರಕರಣದಲ್ಲಿ ಟೆಲಿಕಾಂ ಕಂಪನಿಗಳು ಕೇಂದ್ರ ಸರ್ಕಾರಕ್ಕೆ ತರಂಗಾಂತರ ಬಳಕೆ ಮತ್ತು ಲೈಸೆನ್ಸ್ ಶುಲ್ಕವನ್ನು ದಂಡ, ಬಡ್ಡಿ ಜತೆ ಪಾವತಿಸಬೇಕಿದೆ. ತಮ್ಮ ಆದಾಯದ ಬಹಭಾಗವನ್ನು ಪ್ರತ್ಯೇಕವಾಗಿ ತೆಗೆದಿರಿಸಿದ ಪರಿಣಾಮ ಟೆಲಿಕಾಂ ಕಂಪನಿಗಳ ನಷ್ಟ ಭಾರೀ ಏರಿಕೆಯಾಗಿದೆ. ಶುಲ್ಕ ಮತ್ತು ದಂಡ ಪಾವತಿಸುವಂತೆ ಸುಪ್ರೀಂಕೋರ್ಟ್ ತೀರ್ಪು ಪರಾಮರ್ಶೆಗೆ ಅರ್ಜಿ ಸಲ್ಲಿಸಲು ವೊಡಾಫೋನ್ ಸಿದ್ಧತೆ ನಡೆಸುತ್ತಿದೆ.  ಇದನ್ನೂ ಓದಿ: ಜಿಯೋ ಎಷ್ಟು ಲಾಭವಾಗಿದೆ? ಭಾರತದಲ್ಲಿ  ಇತಿಹಾಸ ಸೃಷ್ಟಿಸಿದ ರಿಲಯನ್ಸ್

    ಹೊಂದಾಣಿಕೆ ಮಾಡಲಾದ ನಿವ್ವಳ ಆದಾಯ (ಅಡ್ಜಸ್ಟೆಡ್ ಗ್ರಾಸ್ ರೆವೆನ್ಯೂ- ಎಜಿಆರ್) ಪ್ರಕರಣದಲ್ಲಿ ಅಕ್ಟೋಬರ್ 26 ರಂದು ಕೇಂದ್ರ ಸರ್ಕಾರದ ಪರ ತೀರ್ಪು ನೀಡಿರುವ ಸುಪ್ರೀಂಕೋರ್ಟ್ 92 ಸಾವಿರ ಕೋಟಿ ರೂ. ಹಣವನ್ನು ಟೆಲಿಕಾಂ ಕಂಪನಿಗಳಿಂದ ವಸೂಲು ಮಾಡಲು ಅನುಮತಿ ನೀಡಿತ್ತು.

    ಭಾರತಿ ಏರ್‌ಟೆಲ್ 21,682 ಕೋಟಿ ರೂ., ವೊಡಾಫೋನ್ ಜೊತೆ ಐಡಿಯಾ ವಿಲೀನಗೊಂಡಿದ್ದರಿಂದ 28,300 ಕೋಟಿ ರೂ., ರಿಲಯನ್ಸ್ ಕಮ್ಯೂನಿಕೇಷನ್ಸ್ 16,456 ಕೋಟಿ ರೂ., ಬಿಎಸ್‍ಎನ್‍ಎಲ್ 2,098 ಕೋಟಿ ರೂ. ಹಾಗೂ ಎಂಟಿಎನ್‍ಎಲ್ 2,537 ಕೋಟಿ ರೂ. ಪಾವತಿಸಬೇಕಾಗಿದೆ. ಇದನ್ನೂ ಓದಿ: ಕೇಂದ್ರದಿಂದ ಟೆಲಿಕಾಂ ಕಂಪನಿಗಳಿಗೆ ಬಿಗ್ ರಿಲೀಫ್

    ಏನಿದು ಎಜಿಆರ್?
    ದೇಶದ ಹೊಸ ಟೆಲಿಕಾಂ ನೀತಿ ಪ್ರಕಾರ, ದೂರಸಂಪರ್ಕ ಆದಾಯದ ಜತೆಗೆ ಬಾಡಿಗೆ, ಲಾಭಾಂಶ, ನಿಶ್ಚಿತ ಠೇವಣಿಯಿಂದ ಬರುವ ಹಾಗೂ ಇನ್ನಿತರೆ ಆದಾಯಗಳನ್ನು ಎಜಿಆರ್ ಎಂದು ಪರಿಗಣಿಸಲಾಗುತ್ತದೆ. ಕೇಂದ್ರ ಸರ್ಕಾರದ ಅನುಮತಿ ಪಡೆದು ಕಾರ್ಯನಿರ್ವಹಿಸುವ ಕಂಪನಿಗಳು ತಮ್ಮ ಎಜಿಆರ್ ನಲ್ಲಿ ಒಂದಷ್ಟು ಪಾಲನ್ನು ಕೇಂದ್ರ ಸರ್ಕಾರಕ್ಕೆ ನೀಡಬೇಕಾಗುತ್ತದೆ. ಅದನ್ನು ವಾರ್ಷಿಕ ಲೈಸೆನ್ಸ್ ಶುಲ್ಕ ಎಂದು ಕರೆಯಲಾಗುತ್ತದೆ. ಇದರ ಜತೆಗೆ ತಮಗೆ ಹಂಚಿಕೆಯಾದ ಸ್ಪೆಕ್ಟ್ರಂ ಅನ್ನು ಬಳಕೆ ಮಾಡಿದ್ದಕ್ಕೆ ಬಳಕೆ ಶುಲ್ಕವನ್ನೂ ಪಾವತಿಸಬೇಕಾಗಿದೆ.

  • ವೊಡಾಫೋನ್, ಏರ್‌ಟೆಲ್  ಕರೆ, ಡೇಟಾ ದರ ಹೆಚ್ಚಾಯ್ತು – ಎಷ್ಟು ಏರಿಕೆ? ಇಲ್ಲಿದೆ ಪೂರ್ಣ ಮಾಹಿತಿ

    ವೊಡಾಫೋನ್, ಏರ್‌ಟೆಲ್ ಕರೆ, ಡೇಟಾ ದರ ಹೆಚ್ಚಾಯ್ತು – ಎಷ್ಟು ಏರಿಕೆ? ಇಲ್ಲಿದೆ ಪೂರ್ಣ ಮಾಹಿತಿ

    ನವದೆಹಲಿ: ಐಡಿಯಾ ವೊಡಾಫೋನ್ ಮತ್ತು ಏರ್‌ಟೆಲ್ ಕಂಪನಿಗಳು ಡಿ.3 ರಿಂದ ಮೊಬೈಲ್ ಕರೆ ಮತ್ತು ಡೇಟಾ ದರಗಳನ್ನು ಏರಿಸುವುದಾಗಿ ತಿಳಿಸಿದೆ. ಈ ಹಿಂದಿನ ದರಗಳಿಗೆ ಹೋಲಿಸಿದರೆ ಶೇ.42 ರಷ್ಟು ದರ ಹಚ್ಚಳವಾಗಲಿದೆ.

    ಮಾರುಕಟ್ಟೆಯಲ್ಲಿ ಜಿಯೋಗೆ ಸ್ಪರ್ಧೆ ನೀಡಲು ಮೂರು ವರ್ಷಗಳಿಂದ ದರವನ್ನು ಇಳಿಸಿದ್ದ ಟೆಲಿಕಾಂ ಕಂಪನಿಗಳು ಈಗ ದರ ಏರಿಸುತ್ತಿವೆ. ವೊಡಾಫೋನ್ ಐಡಿಯಾ, ಏರ್‌ಟೆಲ್ ಕಳೆದ ವಾರ ಪ್ರತ್ಯೇಕ ಹೇಳಿಕೆಯನ್ನು ಬಿಡುಗಡೆ ಮಾಡಿ ಕಂಪನಿಗೆ ಆಗುತ್ತಿರುವ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು ಬೆಲೆ ಏರಿಕೆ ಮಾಡಲಾಗುವುದು ಎಂದು ಹೇಳಿಕೊಂಡಿತ್ತು.

    ಟೆಲಿಕಾಂ ಕ್ಷೇತ್ರದಲ್ಲಿ ತಂತ್ರಜ್ಞಾನ ಬದಲಾವಣೆ ಆಗುತ್ತಲೇ ಇರುತ್ತದೆ. ಹೀಗಾಗಿ ಹೊಸತನಕ್ಕೆ ತೆರೆಯಬೇಕಾದರೆ ಕೋಟ್ಯಂತರ ರೂ. ಹಣ ಹೂಡಬೇಕಾಗುತ್ತದೆ. ನಷ್ಟದಲ್ಲಿದ್ದುಕೊಂಡು ಹೂಡಿಕೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ದರ ಏರಿಕೆ ಅನಿವಾರ್ಯ ಎಂದು ಕಂಪನಿಗಳು ತಮ್ಮ ನಿರ್ಧಾರವನ್ನು ಸ್ಪಷ್ಟಪಡಿಸಿತ್ತು.

    ವಿಶ್ವದಲ್ಲಿ ಈಗ ಭಾರತದಲ್ಲಿ ಅತಿ ಕಡಿಮೆ ದರದಲ್ಲಿ ಡೇಟಾ ಲಭ್ಯವಿದೆ. ಜಿಯೋಗೆ ಸ್ಪರ್ಧೆ ನೀಡಲು ಡೇಟಾ ಮತ್ತು ಕರೆ ದರವನ್ನು ಕಡಿತಗೊಳಿಸಿದ ಪರಿಣಾಮ ಟೆಲಿಕಾಂ ಕಂಪನಿಗಳು ಭಾರೀ ನಷ್ಟಕ್ಕೆ ತುತ್ತಾಗಿವೆ.

    ವೊಡಾಫೋನ್ ಸೆಪ್ಟೆಂಬರಿಗೆ ಅಂತ್ಯಗೊಂಡ ದ್ವಿತೀಯ ತ್ರೈಮಾಸಿಕದಲ್ಲಿ 50,921 ರೂ. ಕೋಟಿಗಳಷ್ಟು ನಷ್ಟ ದಾಖಲಿಸಿದ್ದರೆ, ಭಾರ್ತಿ ಏರ್‌ಟೆಲ್ 23,045 ಕೋಟಿ ರೂ. ನಷ್ಟ ಅನುಭವಿಸಿದೆ. ಹೊಂದಾಣಿಕೆ ಮಾಡಲಾದ ನಿವ್ವಳ ಆದಾಯ (ಅಡ್ಜಸ್ಟೆಡ್ ಗ್ರಾಸ್ ರೆವೆನ್ಯೂ- ಎಜಿಆರ್) ಪ್ರಕರಣದಲ್ಲಿ ಟೆಲಿಕಾಂ ಕಂಪನಿಗಳು ಕೇಂದ್ರ ಸರ್ಕಾರಕ್ಕೆ ತರಂಗಾಂತರ ಬಳಕೆ ಮತ್ತು ಲೈಸೆನ್ಸ್ ಶುಲ್ಕವನ್ನು ದಂಡ, ಬಡ್ಡಿ ಜತೆ ಪಾವತಿಸಬೇಕಿದೆ. ತಮ್ಮ ಆದಾಯದ ಬಹಭಾಗವನ್ನು ಪ್ರತ್ಯೇಕವಾಗಿ ತೆಗೆದಿರಿಸಿದ ಪರಿಣಾಮ ಟೆಲಿಕಾಂ ಕಂಪನಿಗಳ ನಷ್ಟ ಭಾರೀ ಏರಿಕೆಯಾಗಿದೆ. ಶುಲ್ಕ ಮತ್ತು ದಂಡ ಪಾವತಿಸುವಂತೆ ಸುಪ್ರೀಂಕೋರ್ಟ್ ತೀರ್ಪು ಪರಾಮರ್ಶೆಗೆ ಅರ್ಜಿ ಸಲ್ಲಿಸಲು ವೊಡಾಫೋನ್ ಸಿದ್ಧತೆ ನಡೆಸುತ್ತಿದೆ.

    ಹೊಂದಾಣಿಕೆ ಮಾಡಲಾದ ನಿವ್ವಳ ಆದಾಯ (ಅಡ್ಜಸ್ಟೆಡ್ ಗ್ರಾಸ್ ರೆವೆನ್ಯೂ- ಎಜಿಆರ್) ಪ್ರಕರಣದಲ್ಲಿ ಅಕ್ಟೋಬರ್ 26 ರಂದು ಕೇಂದ್ರ ಸರ್ಕಾರದ ಪರ ತೀರ್ಪು ನೀಡಿರುವ ಸುಪ್ರೀಂಕೋರ್ಟ್ 92 ಸಾವಿರ ಕೋಟಿ ರೂ. ಹಣವನ್ನು ಟೆಲಿಕಾಂ ಕಂಪನಿಗಳಿಂದ ವಸೂಲು ಮಾಡಲು ಅನುಮತಿ ನೀಡಿತ್ತು.

    ಭಾರತಿ ಏರ್‌ಟೆಲ್ 21,682 ಕೋಟಿ ರೂ., ವೊಡಾಫೋನ್ ಜೊತೆ ಐಡಿಯಾ ವಿಲೀನಗೊಂಡಿದ್ದರಿಂದ 28,300 ಕೋಟಿ ರೂ., ರಿಲಯನ್ಸ್ ಕಮ್ಯೂನಿಕೇಷನ್ಸ್ 16,456 ಕೋಟಿ ರೂ., ಬಿಎಸ್‍ಎನ್‍ಎಲ್ 2,098 ಕೋಟಿ ರೂ. ಹಾಗೂ ಎಂಟಿಎನ್‍ಎಲ್ 2,537 ಕೋಟಿ ರೂ. ಪಾವತಿಸಬೇಕಾಗಿದೆ.

    ಏನಿದು ಎಜಿಆರ್?
    ದೇಶದ ಹೊಸ ಟೆಲಿಕಾಂ ನೀತಿ ಪ್ರಕಾರ, ದೂರಸಂಪರ್ಕ ಆದಾಯದ ಜತೆಗೆ ಬಾಡಿಗೆ, ಲಾಭಾಂಶ, ನಿಶ್ಚಿತ ಠೇವಣಿಯಿಂದ ಬರುವಲಾಭ ಹಾಗೂ ಇನ್ನಿತರೆ ಆದಾಯಗಳನ್ನು ಎಜಿಆರ್ ಎಂದು ಪರಿಗಣಿಸಲಾಗುತ್ತದೆ. ಕೇಂದ್ರ ಸರ್ಕಾರದ ಅನುಮತಿ ಪಡೆದು ಕಾರ್ಯನಿರ್ವಹಿಸುವ ಕಂಪನಿಗಳು ತಮ್ಮ ಎಜಿಆರ್ ನಲ್ಲಿ ಒಂದಷ್ಟು ಪಾಲನ್ನು ಕೇಂದ್ರ ಸರ್ಕಾರಕ್ಕೆ ನೀಡಬೇಕಾಗುತ್ತದೆ. ಅದನ್ನು ವಾರ್ಷಿಕ ಲೈಸೆನ್ಸ್ ಶುಲ್ಕ ಎಂದು ಕರೆಯಲಾಗುತ್ತದೆ. ಇದರ ಜತೆಗೆ ತಮಗೆ ಹಂಚಿಕೆಯಾದ ಸ್ಪೆಕ್ಟ್ರಂ ಅನ್ನು ಬಳಕೆ ಮಾಡಿದ್ದಕ್ಕೆ ಬಳಕೆ ಶುಲ್ಕವನ್ನೂ ಪಾವತಿಸಬೇಕಾಗಿದೆ.

  • ಇತಿಹಾಸ ಸೃಷ್ಟಿಸಿದ ರಿಲಯನ್ಸ್ – ಒಂದು ಒಪ್ಪಂದ, ಒಂದು ಹೇಳಿಕೆಯಿಂದ ಮಾರುಕಟ್ಟೆ ಮೌಲ್ಯ 10 ಲಕ್ಷ ಕೋಟಿ ರೂ.ಗೆ ಏರಿಕೆ

    ಇತಿಹಾಸ ಸೃಷ್ಟಿಸಿದ ರಿಲಯನ್ಸ್ – ಒಂದು ಒಪ್ಪಂದ, ಒಂದು ಹೇಳಿಕೆಯಿಂದ ಮಾರುಕಟ್ಟೆ ಮೌಲ್ಯ 10 ಲಕ್ಷ ಕೋಟಿ ರೂ.ಗೆ ಏರಿಕೆ

    ಮುಂಬೈ: ಒಂದು ಒಪ್ಪಂದ ಮತ್ತು ಒಂದು ಮಾಧ್ಯಮ ಹೇಳಿಕೆಯಿಂದಾಗಿ 10 ಲಕ್ಷ ಕೋಟಿ ರೂ. ಮಾರುಕಟ್ಟೆ ಮೌಲ್ಯ ಹೊಂದಿದ ದೇಶದ ಮೊದಲ ಕಂಪನಿಯಾಗಿ ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್(ಆರ್‌ಐಎಲ್) ಹೊರಹೊಮ್ಮಿದೆ.

    ಗುರುವಾರ ರಿಲಯನ್ಸ್ ಷೇರು ಸಾರ್ವಕಾಲಿಕ ಗರಿಷ್ಠ 1,581 ರೂ. ತಲುಪುವ ಮೂಲಕ ಮಾರುಕಟ್ಟೆ ಮೌಲ್ಯ ದಾಖಲೆಯ ಮಟ್ಟಕ್ಕೆ ಏರಿಕೆಯಾಗಿದೆ. 2019ರಲ್ಲಿ ರಿಲಯನ್ಸ್ ಷೇರು ಶೇ. 40ರಷ್ಟು ಏರಿಕೆ ಕಂಡಿದ್ದರೆ ಇಂದು ಶೇ.0.70ರಷ್ಟು ಏರಿಕೆ ಕಂಡಿದ್ದರಿಂದ ಈ ದಾಖಲೆ ನಿರ್ಮಾಣವಾಗಿದೆ.

    ಸೌದಿ ಅರಾಮ್ಕೋ ಕಂಪನಿಯ ಜೊತೆಗೆ ರಿಲಯನ್ಸ್ ಒಪ್ಪಂದ ಮತ್ತು ಡಿಸೆಂಬರ್ ತಿಂಗಳಿನಲ್ಲಿ ಜಿಯೋ ತನ್ನ ಕರೆ ಮತ್ತು ಡೇಟಾ ದರಗಳನ್ನು ಏರಿಸುವುದಾಗಿ ಹೇಳಿತ್ತು. ಇದರಿಂದಾಗಿ ಷೇರು ಮಾರುಕಟ್ಟೆಯಲ್ಲಿ ಉತ್ಸಾಹ ಕಂಡು ಬಂದಿದ್ದು ಹೂಡಿಕೆದಾರರು ಷೇರುಗಳನ್ನು ಖರೀದಿಸಲು ಆಸಕ್ತಿ ತೋರಿದ್ದರಿಂದ ರಿಲಯನ್ಸ್ ಭಾರತದಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ.

    ಅಗಸ್ಟ್ ತಿಂಗಳಿನಲ್ಲಿ ನಡೆದ ಕಂಪನಿಯ ವಾರ್ಷಿಕ ಸಭೆಯಲ್ಲಿ ಮುಕೇಶ್ ಅಂಬಾನಿ, ವಿಶ್ವದ ಅತಿ ದೊಡ್ಡ ತೈಲ ಉತ್ಪಾದನಾ ಕಂಪನಿ ಸೌದಿ ಅರಾಮ್ಕೋ ಜೊತೆ ರಿಲಯನ್ಸ್ ಆಯಿಲ್ ಟು ಕೆಮಿಕಲ್ಸ್(ಒಟಿಸಿ) ಕಂಪನಿ ತನ್ನ ಶೇ.20 ರಷ್ಟು ಪಾಲನ್ನು ಮಾರಾಟ ಮಾಡಲು ಸಮ್ಮತಿ ಸೂಚಿಸಿದೆ. ಒಟ್ಟು 75 ಶತಕೋಟಿ ಡಾಲರ್(5.3 ಲಕ್ಷ ಕೋಟಿ ರೂ.) ಒಪ್ಪಂದಕ್ಕೆ ರಿಲಯನ್ಸ್ ಸಹಿ ಹಾಕಲಿದೆ. ಸೌದಿ ಅರಾಮ್ಕೊ ಕಂಪನಿಗೆ ರಿಲಯನ್ಸ್ ಷೇರುಗಳನ್ನು ಮಾರಾಟ ಮಾಡುವ ಮೂಲಕ 18 ತಿಂಗಳಲ್ಲಿ ಸಂಸ್ಥೆಯನ್ನು ಸಾಲಮುಕ್ತಗೊಳಿಸುವುದಾಗಿ ಘೋಷಿಸಿದ್ದರು.

    ಆರ್ಥಿಕ ನಷ್ಟದ ಹಿನ್ನೆಲೆಯಲ್ಲಿ ವೊಡಾಫೋನ್ ಐಡಿಯಾ ಮತ್ತು ಭಾರ್ತಿ ಏರ್ ಟೆಲ್ ಕಂಪನಿಯಿಂದ ಡಿಸೆಂಬರಿನಿಂದ ಡೇಟಾ ಮತ್ತು ಕರೆ ದರಗಳನ್ನು ಏರಿಕೆ ಮಾಡುತ್ತೇವೆ ಎಂಬ ಪ್ರಕಟಣೆ ಹೊರ ಬಿದ್ದ ಬೆನ್ನಲ್ಲೇ ಮುಕೇಶ್ ಅಂಬಾನಿ ಮಾಲೀಕತ್ವದ ಜಿಯೋ ಸಹ ಕರೆ ದರಗಳನ್ನು ಏರಿಸುವುದಾಗಿ ಹೇಳಿದೆ. ಇದನ್ನೂ ಓದಿ: ಮೊಬೈಲ್ ಡೇಟಾ ಹನಿಮೂನ್ ಅವಧಿ ಮುಕ್ತಾಯ – ಒಬ್ಬ ಗ್ರಾಹಕನಿಂದ ಟೆಲಿಕಾಂ ಕಂಪನಿಗೆ ಎಷ್ಟು ಆದಾಯ ಬರುತ್ತೆ?

    ಕಳೆದ ತಿಂಗಳು ಡಿಜಿಟಲ್ ಸರ್ವಿಸ್ ಬಿಸಿನೆಸ್ ಸಂಬಂಧ ಕಂಪನಿ ಸ್ಥಾಪಿಸುವುದಾಗಿ ರಿಲಯನ್ಸ್ ಹೇಳಿತ್ತು. ಸೆಪ್ಟೆಂಬರ್ ತಿಂಗಳಿನಲ್ಲಿ ಅಂತ್ಯಗೊಂಡ ತ್ರೈಮಾಸಿಕದಲ್ಲಿ ಜಿಯೋಗೆ 35 ಕೋಟಿ ಗ್ರಾಹಕರಿದ್ದರೆ 12,354 ಕೋಟಿ ರೂ. ಆದಾಯ ಗಳಿಸಿತ್ತು. ಅಷ್ಟೇ ಅಲ್ಲದೇ 990 ಕೋಟಿ ರೂ. ನಿವ್ವಳ ಲಾಭ ಗಳಿಸಿತ್ತು.

    ರಿಲಯನ್ಸ್ ಕಂಪನಿ ಭಾರತದ ಇತಿಹಾಸದಲ್ಲಿ ದೊಡ್ಡ ವಿದೇಶಿ ನೇರ ಹೂಡಿಕೆ(ಎಫ್‍ಡಿಐ) ಸಂಬಂಧ ಸೌದಿ ಕಂಪನಿಯ ಜೊತೆ ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದದ ಅನ್ವಯ ಸೌದಿ ಅರಾಮ್ಕೋ ಕಂಪನಿ ಜಾಮ್ ನಗರದಲ್ಲಿರುವ ರಿಲಾಯನ್ಸ್ ರಿಫೈನಿಂಗ್ ಘಟಕಕ್ಕೆ ಪ್ರತಿದಿನ 5 ಲಕ್ಷ ಬ್ಯಾರಲ್ ಕಚ್ಚಾ ತೈಲವನ್ನು ಪೂರೈಸಲಿದೆ.

    ತೈಲ, ಟೆಲಿಕಾಂ, ರಿಟೇಲ್ ಈ ಮೂರು ಕ್ಷೇತ್ರಗಳಲ್ಲಿ ಉತ್ತಮ ಸಾಧನೆಗೈಯುತ್ತಿರುವ ದೇಶದ ಏಕೈಕ ಕಂಪನಿ ರಿಲಯನ್ಸ್ ಎಂದು ಮುಕೇಶ್ ಅಂಬಾನಿ ವಾರ್ಷಿಕ ಸಭೆಯಲ್ಲಿ ತಿಳಿಸಿದ್ದರು.

    ಸೌದಿ ಅರಾಮ್ಕೋ ಸೌದಿ ಅರೇಬಿಯಾದ ರಾಷ್ಟ್ರೀಯ ಪೆಟ್ರೋಲ್ ಮತ್ತು ನೈಸರ್ಗಿಕ ಗ್ಯಾಸ್ ಕಂಪನಿಯಾಗಿದೆ. ವಿಶ್ವದಲ್ಲೇ ಅತಿ ಹೆಚ್ಚು ಆದಾಯ ಮತ್ತು ವಿಶ್ವದಲ್ಲೇ ಅತಿ ಹೆಚ್ಚು ಲಾಭಗಳಿಸುವ ತೈಲ ಕಂಪನಿಯಾಗಿ ಹೊರಹೊಮ್ಮಿದೆ.

    ಜಾಮ್ ನಗರದಲ್ಲಿರುವ ಘಟಕ ಸದ್ಯ ಪ್ರತಿ ದಿನ 14 ಲಕ್ಷ ಬ್ಯಾರೆಲ್ ಕಚ್ಚಾ ತೈಲವನ್ನು ಸಂಸ್ಕರಿಸುವ ಸಾಮರ್ಥ್ಯವನ್ನು ಹೊಂದಿದ್ದು 2030ರ ವೇಳೆಗೆ 20 ಲಕ್ಷ ಬ್ಯಾರೆಲ್ ಕಚ್ಚಾ ತೈಲವನ್ನು ಸಂಸ್ಕರಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಿದ್ದೇವೆ ಎಂದು ಕೇಂದ್ರ ಸರ್ಕಾರಕ್ಕೆ ಕಂಪನಿ ತಿಳಿಸಿದೆ.

  • ಮೊಬೈಲ್ ಡೇಟಾ ಹನಿಮೂನ್ ಅವಧಿ ಮುಕ್ತಾಯ – ಒಬ್ಬ ಗ್ರಾಹಕನಿಂದ ಟೆಲಿಕಾಂ ಕಂಪನಿಗೆ ಎಷ್ಟು ಆದಾಯ ಬರುತ್ತೆ?

    ಮೊಬೈಲ್ ಡೇಟಾ ಹನಿಮೂನ್ ಅವಧಿ ಮುಕ್ತಾಯ – ಒಬ್ಬ ಗ್ರಾಹಕನಿಂದ ಟೆಲಿಕಾಂ ಕಂಪನಿಗೆ ಎಷ್ಟು ಆದಾಯ ಬರುತ್ತೆ?

    – ದರ ಏರಿಕೆಯಿಂದ ಜಿಯೋಗ ವರದಾನ, ಆದಾಯ ಏರಿಕೆ
    – ಡಿಸೆಂಬರ್‌ನಿಂದ ಡೇಟಾ ದರ ಏರಿಕೆ

    ಮುಂಬೈ: ಅಗ್ಗವಾಗಿ ಸಿಗುತ್ತಿದ್ದ ಮೊಬೈಲ್ ಡೇಟಾ/ ಕರೆ ದರಗಳು ಡಿಸೆಂಬರ್‌ನಿಂದ ಏರಿಕೆಯಾಗಲಿದೆ. ಈ ಮೂಲಕ ಕಡಿಮೆ ಬೆಲೆಯಲ್ಲಿ ಡೇಟಾ ಪಡೆಯುತ್ತಿದ್ದ ಮೂರು ವರ್ಷದ ಹನಿಮೂನ್ ಅವಧಿ ಅಂತ್ಯವಾಗಲಿದೆ.

    ಆರ್ಥಿಕ ನಷ್ಟದ ಹಿನ್ನೆಲೆಯಲ್ಲಿ ವೊಡಾಫೋನ್ ಐಡಿಯಾ ಮತ್ತು ಭಾರ್ತಿ ಏರ್‌ಟೆಲ್‌ ಕಂಪನಿಯಿಂದ ಡಿಸೆಂಬರ್‌ನಿಂದ ಡೇಟಾ ಮತ್ತು ಕರೆ ದರಗಳನ್ನು ಏರಿಕೆ ಮಾಡುತ್ತೇವೆ ಎಂಬ ಪ್ರಕಟಣೆ ಹೊರ ಬಿದ್ದ ಬೆನ್ನಲ್ಲೇ ಈಗ ಮುಕೇಶ್ ಅಂಬಾನಿ ಮಾಲೀಕತ್ವದ ಜಿಯೋ ಸಹ ಕರೆ ದರಗಳನ್ನು ಏರಿಸುವುದಾಗಿ ಹೇಳಿದೆ.

    ಎಷ್ಟು ಪ್ರಮಾಣದಲ್ಲಿ ದರವನ್ನು ಏರಿಕೆ ಮಾಡುತ್ತದೆ ಎನ್ನುವುದನ್ನು ಟೆಲಿಕಾಂ ಕಂಪನಿಗಳು ತಿಳಿಸಿಲ್ಲ. ಆದರೆ ಟೆಲಿಕಾಂ ವಲಯದಲ್ಲಿರುವ ತಜ್ಞರು ಶೇ.15-30 ರಷ್ಟು ಏರಿಕೆ ಆಗಬಹುದು ಎಂದು ಅಂದಾಜಿಸಿದ್ದಾರೆ.

    2016ರಲ್ಲಿ ಜಿಯೋ ಆರಂಭಕ್ಕೂ ಮೊದಲು 30 ದಿನಗಳ ವ್ಯಾಲಿಡಿಟಿ ಹೊಂದಿರುವ ಒಂದು ಜಿಬಿ ಡೇಟಾಕ್ಕೆ 250 ರೂ. ಇತ್ತು. ಸಾಧಾರಣವಾಗಿ ಈ ದರದ ಅಸುಪಾಸಿನಲ್ಲೇ ಎಲ್ಲ ಟೆಲಿಕಾಂ ಕಂಪನಿಗಳು 1 ಜಿಬಿ ಡೇಟಾವನ್ನು ನೀಡುತಿತ್ತು. ಈಗ ಸರಿ ಸುಮಾರು 15 ರೂ.ಗೆ ಭಾರತದಲ್ಲಿ 1 ಜಿಬಿ ಡೇಟಾ ಲಭ್ಯವಾಗುತ್ತಿದೆ.

    ಜಿಯೋ ಆರಂಭಗೊಂಡು ಮೊದಲ 3 ತಿಂಗಳು ಉಚಿತ ಡೇಟಾ ನೀಡಿ ಬಳಿಕ ಹ್ಯಾಪಿ ನ್ಯೂ ಇಯರ್ ಸೇರಿದಂತೆ ಇತರೇ ಡೇಟಾ ಪ್ಲ್ಯಾನ್ ಗಳ ಆಫರ್ ಬಿಡುಗಡೆ ಮಾಡಿದ ಪರಿಣಾಮ ಈಗ ದೇಶದ ಎರಡನೇ ಅತಿ ದೊಡ್ಡ ಟೆಲಿಕಾಂ ಕಂಪನಿಯಾಗಿ ಹೊರಹೊಮ್ಮಿದೆ. ‘ನಮ್ಮಲ್ಲಿ ಡೇಟಾಕ್ಕೆ ಮಾತ್ರ ದರ ಕರೆ ಉಚಿತ’ ಎಂದು ಜಿಯೋ ಪ್ಲ್ಯಾನ್‍ಗಳನ್ನು ಬಿಡುಗಡೆ ಮಾಡಿದ ಬೆನ್ನಲ್ಲೇ ಉಳಿದ ಟೆಲಿಕಾಂ ಕಂಪನಿಗಳು ದರ ಇಳಿಸಿದ ಪರಿಣಾಮ ದೇಶದಲ್ಲಿ ಡೇಟಾ ವಾರ್ ಆರಂಭಗೊಂಡಿತ್ತು.

    ಡೇಟಾ ಸಮರದಿಂದಾಗಿ ಡಿಮೆ ಗ್ರಾಹಕರನ್ನು ಹೊಂದಿದ್ದ ಕಂಪನಿಗಳು ನಷ್ಟವಾಗತೊಡಗಿತು. ಪರಿಣಾಮ ಟೆಲಿನಾರ್ ಕಂಪನಿಯನ್ನು ಏರ್‌ಟೆಲ್‌ ಖರೀದಿಸಿತ್ತು. ಬಳಿಕ ಟಾಟಾ ಡೊಕೊಮೊ ಏರ್‌ಟೆಲ್‌  ಜೊತೆ ವಿಲೀನಗೊಂಡರೆ ಐಡಿಯಾ ಕಂಪನಿ ವೊಡಾಫೋನ್ ವಿಲೀನಗೊಂಡಿತ್ತು. ಟೆಲಿಕಾಂ ಕಂಪನಿಗಳು ವಿಲೀನಗೊಂಡು ಸ್ಪರ್ಧೆ ನೀಡಿದರೂ ಮಾರುಕಟ್ಟೆಯಲ್ಲಿ ಉತ್ತಮ 4ಜಿ ಸೇವೆ ನೀಡುತ್ತಿದ್ದರಿಂದ ಜಿಯೋ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿತ್ತು.

    ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಮಂಗಳವಾರ ಬಿಡುಗಡೆ ಮಾಡಿದ ವರದಿ ಪ್ರಕಾರ ಸೆಪ್ಟೆಂಬರ್ ತಿಂಗಳಲ್ಲಿ ಏರ್‌ಟೆಲ್‌ ಹಾಗೂ ವೊಡಾಫೋನ್ 49 ಲಕ್ಷ ಚಂದಾದಾರರನ್ನು ಕಳೆದುಕೊಂಡಿವೆ. ಇದರಲ್ಲಿ ಏರ್‌ಟೆಲ್‌ 23.8 ಲಕ್ಷ, ವೊಡಾಫೋನ್  25.7 ಲಕ್ಷ ಗ್ರಾಹಕರನ್ನು ಕಳೆದುಕೊಂಡಿದೆ. ಆದರೆ ಜಿಯೋ ಮತ್ತು ಬಿಎಸ್‍ಎನ್‍ಎಲ್ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಜಿಯೋಗೆ 69.83 ಲಕ್ಷ ಹೊಸ ಚಂದಾದಾರರು ಸೇರ್ಪಡೆಯಾದರೆ, ಬಿಎಸ್‍ಎನ್‍ಎಲ್‍ಗೆ 7.37 ಲಕ್ಷ ಹೊಸ ಗ್ರಾಹಕರು ಸೇರಿದ್ದಾರೆ. ವೊಡಾಫೋನ್  37.24 ಕೋಟಿ, ರಿಲಯನ್ಸ್ ಜಿಯೋ 35.52 ಕೋಟಿ, ಏರ್‌ಟೆಲ್‌ 32.55 ಕೋಟಿ, ಬಿಎಸ್‍ಎನ್‍ಎಲ್ 11.69 ಕೋಟಿ ಹಾಗೂ ಎಂಟಿಎನ್‍ಎಲ್ 33.93 ಲಕ್ಷ ಗ್ರಾಹಕರನ್ನು ಹೊಂದಿದೆ ಎಂದು ತಿಳಿಸಿದೆ.

    ಎಆರ್‌ಪಿಯು ಎಷ್ಟು?
    ವೊಡಾಫೋನ್ ಕಂಪನಿಗೆ ಪ್ರತಿ ಬಳಕೆದಾರರಿಂದ ಬರುವ ಸರಾಸರಿ ಆದಾಯ(ಎವರೆಜ್ ರೆವೆನ್ಯೂ ಪರ್ ಯೂಸರ್- ಎಆರ್‌ಪಿಯು) ತಿಂಗಳಿಗೆ 107 ರೂ. ಇದ್ದರೆ ಏರ್‌ಟೆಲ್‌ 128 ರೂ. ಪಡೆಯುತ್ತಿದೆ. ಜಿಯೋ 120 ರೂ. ಪಡೆಯುತ್ತಿದೆ. ಡೇಟಾ ದರ ಸಮರ ಆರಂಭಕ್ಕೂ ಮುನ್ನ 2016ರ ಜೂನ್ ತಿಂಗಳಿನಲ್ಲಿ ಏರ್‌ಟೆಲ್‌ ಎಆರ್‌ಪಿಯು  198 ರೂ. ಇತ್ತು.

    ಇತರ ಕಂಪನಿಗಳಂತೆ ಸರ್ಕಾರದ ನಿಯಂತ್ರಣ ವ್ಯವಸ್ಥೆಗೆ ಸ್ಪಂದಿಸಿ ದೇಶದ ಟೆಲಿಕಾಂ ವಲಯದ ಬಲವರ್ಧನೆಗೆ ಕೆಲಸ ಮಾಡುವ ನಿಟ್ಟಿನಲ್ಲಿ ಮುಂದಿನ ವಾರದಲ್ಲಿ ಡೇಟಾ ಬಳಕೆಯ ಮೇಲೆ ಅಡ್ಡ ಪರಿಣಾಮ ಉಂಟಾಗದಂತೆ ಸೂಕ್ತ ರೀತಿಯಲ್ಲಿ ಬೆಲೆ ಏರಿಕೆ ಮಾಡುತ್ತೇವೆ ಎಂದು ಜಿಯೋ ತಿಳಿಸಿದ ಬೆನ್ನಲ್ಲೇ ಈಗ ಟೆಲಿಕಾಂ ಕಂಪನಿಗಳು ಎಷ್ಟು ಪ್ರಮಾಣದಲ್ಲಿ ಡೇಟಾ, ಕರೆ ದರಗಳನ್ನು ಏರಿಸುತ್ತದೆ ಎನ್ನುವ ಕುತೂಹಲ ಮೂಡಿದೆ.

    ನಷ್ಟದಲ್ಲಿ ಟೆಲಿಕಾಂ ಕಂಪನಿಗಳು:
    ಸೆಪ್ಟೆಂಬರ್‍ಗೆ ಅಂತ್ಯಗೊಂಡ ತ್ರೈಮಾಸಿಕದಲ್ಲಿ ವೊಡಾಫೋನ್ ಇಂಡಿಯಾ 50,922 ಕೋಟಿ ರೂ. ನಿವ್ವಳ ನಷ್ಟ ಅನುಭವಿಸಿದರೆ ಏರ್‌ಟೆಲ್‌ 23,045 ಕೋಟಿ ರೂ. ನಷ್ಟವನ್ನು ಹೊಂದಿತ್ತು. ಜಿಯೋ 990 ಕೋಟಿ ರೂ. ನಿವ್ವಳ ಆದಾಯ ಹೊಂದಿತ್ತು.

    ಜಿಯೋಗೆ ಲಾಭ:
    ಜಿಯೋ ಸೇವೆ ಆರಂಭಗೊಂಡ ಬಳಿಕ ಹೊರ ಹೋಗುವ ಎಲ್ಲ ಕರೆಗಳು ಉಚಿತವಾಗಿತ್ತು. ಆದರೆ ಅಕ್ಟೋಬರಿನಲ್ಲಿ ಜಿಯೋ ಸಂಖ್ಯೆ ಬಿಟ್ಟು ಹೊರಹೋಗುವ ಇತರ ನಂಬರ್‌ಗಳ ಕರೆಗೆ ಪ್ರತಿ ನಿಮಿಷಕ್ಕೆ 6 ಪೈಸೆ ವಿಧಿಸಲಾಗುವುದು ಎಂದು ಹೇಳಿತ್ತು. ಈಗ ಇತರ ಟೆಲಿಕಾಂ ಕಂಪನಿಗಳು ದರ ಏರಿಸುತ್ತಿರುವುದು ಜಿಯೋಗೆ ವರದಾನವಾಗಿದ್ದು ಆದಾಯ ಮತ್ತಷ್ಟು ಹೆಚ್ಚಳವಾಗಲಿದೆ. ಇದನ್ನೂ ಓದಿ: 15 ತಿಂಗಳ ನಂತ್ರ ಲಾಭಕ್ಕೆ ಮರಳಿದ ಜಿಯೋ- ಏರ್ ಟೆಲ್ ಆದಾಯ ಕುಸಿತ

    ಜಿಯೋ ಸೇವೆ ಆರಂಭಗೊಂಡ ಬಳಿಕ ಈ ಐಯುಸಿಯನ್ನು ತಗೆದು ಹಾಕಬೇಕೆಂದು ಟ್ರಾಯ್ ಮುಂದೆ ವಾದ ಮಂಡಿಸುತಿತ್ತು. ಆದರೆ ಬೇರೆ ಟೆಲಿಕಾಂ ಕಂಪನಿಗಳು ಐಯುಸಿಯನ್ನು ತೆಗೆದು ಹಾಕಬಾರದು ದರವನ್ನು ಹೆಚ್ಚಿಸಬೇಕು ಎಂದು ವಾದಿಸುತ್ತಿದ್ದವು. ಆದರೆ ಟ್ರಾಯ್ ಹಂತ ಹಂತವಾಗಿ ಐಯುಸಿ ದರವನ್ನು ಕಡಿತಗೊಳಿಸುತ್ತಿದ್ದು ಮುಂದಿನ ವರ್ಷದಲ್ಲಿ ಸಂಪೂರ್ಣವಾಗಿ ತೆಗೆದು ಹಾಕುವ ಸಾಧ್ಯತೆಯಿದೆ.

    ಏನಿದು ಐಯುಸಿ?
    ಇಂಟರ್ ಕನೆಕ್ಟ್ ಯೂಸೇಜ್ ಚಾರ್ಜ್(ಐಯುಸಿ) ಟ್ರಾಯ್ ನಿಗದಿ ಪಡಿಸುತ್ತದೆ. ಉದಾಹರಣೆಗೆ ಜಿಯೋ ಗ್ರಾಹಕರೊಬ್ಬರು ವೊಡಾಫೋನ್ ಗ್ರಾಹಕರಿಗೆ ಕರೆ ಮಾಡಿದರೆ ಜಿಯೋ ಟ್ರಾಯ್ ನಿಗದಿ ಪಡಿಸಿದ ಐಯುಸಿಯನ್ನು ವೊಡಾಫೋನ್  ಕಂಪನಿಗೆ ಪಾವತಿಸಬೇಕಾಗುತ್ತದೆ.

    2003ರಲ್ಲಿ ಒಳಬರುವ ಕರೆಯನ್ನು ಉಚಿತವಾಗಿ ನೀಡುವ ಸಲುವಾಗಿ ಟ್ರಾಯ್ ಐಯುಸಿಯನ್ನು ತಂದಿತ್ತು. 2004ರ ಫೆಬ್ರವರಿಯಲ್ಲಿ ಟ್ರಾಯ್ ಪ್ರತಿ ನಿಮಿಷಕ್ಕೆ 30 ಪೈಸೆ, 2009ರ ಏಪ್ರಿಲ್ ನಲ್ಲಿ 20 ಪೈಸೆ, 2015ರ ಮಾರ್ಚ್ ನಲ್ಲಿ 14 ಪೈಸೆ, ಪ್ರಸ್ತುತ ಈಗ 6 ಪೈಸೆ ಐಯುಸಿ ಬೆಲೆಯನ್ನು ಟ್ರಾಯ್ ನಿಗದಿಪಡಿಸಿದೆ.

    ಐಯುಸಿಯಿಂದಾಗಿ ಏರ್‌ಟೆಲ್‌, ವೊಡಾಫೋನ್ ಕಂಪನಿಗಳು ಸಾವಿರಾರು ಕೋಟಿ ರೂ. ಆದಾಯಗಳಿಸುತ್ತಿದೆ ಎನ್ನುವುದು ಜಿಯೋ ಆರೋಪ. ಕಳೆದ 3 ವರ್ಷಗಳಲ್ಲಿ ಜಿಯೋ ಐಯುಸಿಗೆಂದು ಒಟ್ಟು 12 ಸಾವಿರ ಕೋಟಿ ರೂ. ಹಣವನ್ನು ವಿವಿಧ ಟೆಲಿಕಾಂ ಕಂಪನಿಗಳಿಗೆ ಪಾವತಿಸಿದೆ. ಹೊರ ಹೋಗುವ ಕರೆಗಳು ಉಚಿತವಾಗಿ ಇರುವ ಕಾರಣ ಬೇರೆ ಕಂಪನಿಯ ಗ್ರಾಹಕರು ನಮ್ಮ ಕಂಪನಿಯ ಗ್ರಾಹಕರಿಗೆ ಮಿಸ್ ಕಾಲ್ ನೀಡುತ್ತಿದ್ದರು. ಇದರಿಂದಾಗಿ ನಮಗೆ ಭಾರೀ ನಷ್ಟವಾಗಿದೆ ಎಂದು ಜಿಯೋ ಹೇಳಿತ್ತು.

    ಈ ಹಿಂದೆ ಭಾರತಿ ಎಂಟಪ್ರ್ರೈಸಸ್ ಮುಖ್ಯಸ್ಥ ಸುನೀಲ್ ಮಿತ್ತಲ್ ಟ್ರಾಯ್ ಮುಖ್ಯಸ್ಥರಿಗೆ ಪತ್ರ ಬರೆದು ಪ್ರಸ್ತುತ ಐಯುಸಿ ಕಡಿಮೆ ಇದೆ. ಪಾರದರ್ಶಕವಾಗಿ ಹೊಸ ಬೆಲೆಯನ್ನು ನಿಗದಿಪಡಿಸಬೇಕೆಂದು ಮನವಿ ಮಾಡಿದ್ದರು.

  • 2 ಪಟ್ಟು ಡೇಟಾ – ಜಿಯೋಫೋನ್ ಆಲ್ ಇನ್ ಒನ್ ಪ್ಲಾನ್ ಘೋಷಣೆ

    2 ಪಟ್ಟು ಡೇಟಾ – ಜಿಯೋಫೋನ್ ಆಲ್ ಇನ್ ಒನ್ ಪ್ಲಾನ್ ಘೋಷಣೆ

    ಮುಂಬೈ: ಸ್ಮಾರ್ಟ್ ಫೋನ್  ಆಲ್-ಇನ್-ಒನ್ ಪ್ಲಾನ್‍ಗಳ ಯಶಸ್ಸಿನ ನಂತರ, ಜಿಯೋದಿಂದ ಜಿಯೋಫೋನ್ ಆಲ್- ಇನ್-ಒನ್ ಪ್ಲಾನ್ ಘೋಷಣೆಯಾಗಿದೆ.

    ಒಂದೇ ಪ್ಲಾನ್‍ನಲ್ಲಿ ಎಲ್ಲ ಸೇವೆಗಳೂ ಇರುವ ಅಪರಿಮಿತ ಪ್ಲಾನ್‍ಗಳು ಇದೀಗ ಜಿಯೋಫೋನ್‍ಗೂ ಲಭ್ಯವಾಗಿದ್ದು ಡೇಟಾ ಬಳಕೆದಾರರಿಗೆ ದೊಡ್ಡ ಕೊಡುಗೆ ಎಂಬಂತೆ ಕೇವಲ ರೂ. 30 ಪಾವತಿಸಿ, ಎರಡು ಪಟ್ಟು ಡೇಟಾವನ್ನು ಪಡೆಯಬಹುದಾಗಿದೆ.

    ಅತಿ ಹೆಚ್ಚು ಪ್ರಮಾಣದ ಡೇಟಾ, ವಾಯ್ಸ್ ಹಾಗೂ ಮೌಲ್ಯವರ್ಧಿತ ಸೇವೆಗಳಿರುವ ಪ್ಲಾನ್‍ಗಳು ಈಗ ಇರುವ ಜಿಯೋಫೋನ್ ಪ್ಲಾನ್‍ಗಳೂ ಮುಂದುವರಿಯಲಿವೆ.

    ಪ್ಲಾನ್‍ಗಳ ವೈಶಿಷ್ಟ್ಯವೇನು?
    ಇವು ಸರಳ ಹಾಗೂ ಗೊಂದಲರಹಿತ ಪ್ಲಾನ್‍ಗಳಾಗಿದ್ದು, ಎಲ್ಲ ಸೇವೆಗಳೂ ಒಂದೇ ಪ್ಲಾನ್‍ನಲ್ಲಿ ಲಭ್ಯವಿರುವುದರ ಜೊತೆಗೆ ಅವುಗಳ ದರವನ್ನು ನೆನಪಿಟ್ಟುಕೊಳ್ಳುವುದೂ ಸುಲಭವಾಗಿದೆ. ಇವು ಕಡಿಮೆ ಬೆಲೆಯ ಪ್ಲಾನ್‍ಗಳಾಗಿದ್ದು ಅಪರಿಮಿತ ವಾಯ್ಸ್ ಹಾಗೂ ಡೇಟಾ ಒದಗಿಸುವ ರೂ. 75ರ ಪ್ಲಾನ್ ಭಾರತದಲ್ಲೇ ಅತಿ ಕಡಿಮೆ ಬೆಲೆಯದ್ದಾಗಿದೆ. ತಮ್ಮ ವರ್ಗದಲ್ಲೇ ಅತ್ಯುತ್ತಮವಾದ ಈ ಪ್ಲಾನ್‍ಗಳು ತಮ್ಮ ಸ್ಪರ್ಧೆಗಿಂತ 25 ಪಟ್ಟು ಹೆಚ್ಚಿನ ಮೌಲ್ಯ ನೀಡುತ್ತವೆ. ಈ ಅಪರಿಮಿತ ಪ್ಲಾನ್‍ಗಳು ಫೀಚರ್ ಫೋನ್ ವಿಭಾಗಕ್ಕೂ ಅಪರಿಮಿತ ಸೇವೆಗಳನ್ನು ನೀಡುತ್ತಿವೆ.

  • ಇಂದಿನಿಂದ ಎಲ್ಲ ಜಿಯೋ ಕರೆ ಉಚಿತವಲ್ಲ – ನಿಮ್ಮ ಎಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

    ಇಂದಿನಿಂದ ಎಲ್ಲ ಜಿಯೋ ಕರೆ ಉಚಿತವಲ್ಲ – ನಿಮ್ಮ ಎಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

    ಬೆಂಗಳೂರು: ಇಂದಿನಿಂದ ಜಿಯೋ ಗ್ರಾಹಕರು ಬೇರೆ ಟೆಲಿಕಾಂ ಕಂಪನಿಯ ಕರೆಗಳಿಗೆ ಕರೆ ಮಾಡಿದರೆ ಹಣವನ್ನು ಪಾವತಿಸಬೇಕಾಗುತ್ತದೆ.

    ಜಿಯೋ ಬೇರೆ ಟೆಲಿಕಾಂ ಕಂಪನಿಗಳಿಗೆ ಹೊರಹೋಗುವ ಎಲ್ಲ ಕರೆಗಳಿಗೆ ಪ್ರತಿ ನಿಮಿಷಕ್ಕೆ 6 ಪೈಸೆ ದರ ವಿಧಿಸಲಾಗುವುದು ಎಂದು ಪ್ರಕಟಿಸಿದೆ. ಇಲ್ಲಿಯವರೆಗೆ ಜಿಯೋ ಇಂಟರ್ ಕನೆಕ್ಟ್ ಯೂಸೇಜ್ ಚಾರ್ಜ್ (ಐಯುಸಿ) ವಿಧಿಸುತ್ತಿರಲಿಲ್ಲ. ಆದರೆ ಈಗ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ನಿಗದಿ ಪಡಿಸಿದಂತೆ ಐಯುಸಿ ವಿಧಿಸಲು ಜಿಯೋ ಮುಂದಾಗುತ್ತಿದೆ. ಐಯುಸಿಗಾಗಿ ಈಗ ಜಿಯೋ ಟಾಪ್ ಅಪ್ ಪ್ಲಾನ್ ಪ್ರಕಟಿಸಿದೆ.

    ಬೇರೆ ಕಂಪನಿಗಳ ನಂಬರ್ ಗಳ ಕರೆಗಳಿಗೆ ಮಾತ್ರ ದರ ವಿಧಿಸಲಾಗಿದ್ದು ಜಿಯೋದಿಂದ ಜಿಯೋ ನಂಬರಿಗೆ ಹೋಗುವ ಕರೆಗಳು ಎಂದಿನಂತೆ ಉಚಿತವಾಗಿ ಇರಲಿದೆ. ಇದರ ಜೊತೆ ಡೇಟಾ ಬಳಸಿಕೊಂಡು ಮಾಡುವ ವಾಟ್ಸಪ್ ಕರೆ, ವಿಡಿಯೋ ಕರೆಗಳಿಗೆ ಯಾವುದೇ ದರ ಇಲ್ಲ.

    ಜಿಯೋ ಈ ಹಿಂದೆ ಜಾರಿಗೆ ತಂದ ಡೇಟಾ ಪ್ಲಾನ್‍ಗಳು ಈಗಲೂ ಚಾಲ್ತಿಯಲ್ಲಿದೆ. ಈ ದರದಲ್ಲಿ ಯಾವುದೇ ಬದಲಾವಣೆ ಇಲ್ಲ. ಉದಾಹರಣೆಗೆ ಹಿಂದೆ 449 ರೂ. ರಿಚಾರ್ಜ್ ಮಾಡಿದರೆ 91 ದಿನಗಳ ಕಾಲ ಉಚಿತವಾಗಿ ಯಾವುದೇ ಟೆಲಿಕಾಂ ಕಂಪನಿಯ ನಂಬರಿಗೆ ಕರೆ ಮಾಡಬಹುದಿತ್ತು. ಈ ಪ್ಲಾನ್ ನಲ್ಲಿ ಪ್ರತಿ ದಿನ ಗರಿಷ್ಟ 1.5 ಜಿಬಿ ಡೇಟಾ ಬಳಸಬಹುದಿತ್ತು. ಈಗಲೂ ಈ ಪ್ಲಾನ್ ಚಾಲ್ತಿಯಲ್ಲಿದೆ. ನೀವು ಜಿಯೋ ನಂಬರಿಗೆ ಮಾತ್ರ ಕರೆ ಮಾಡುತ್ತಿದ್ದರೆ ಟಾಪ್ ಅಪ್ ಹಾಕುವ ಅಗತ್ಯವಿಲ್ಲ. ಆದರೆ ಬೇರೆ ನಂಬರಿಗೆ ಕರೆ ಮಾಡಬೇಕಾದರೆ ಡೇಟಾ ಪ್ಲಾನ್ ಜೊತೆಗೆ ಟಾಪ್ ಅಪ್ ಹಾಕಬೇಕಾಗುತ್ತದೆ.

    ಎಷ್ಟು ಟಾಪ್ ಅಪ್ ಹಾಕಬೇಕು?
    ಜಿಯೋ 10 ರೂ. ನಿಂದ ಆರಂಭಿಸಿ 1000 ರೂ. ಟಾಪ್ ಅಪ್ ಪರಿಚಯಿಸಿದೆ. ಈ ಟಾಪ್ ಅಪ್‍ಗಳು ಎಲ್ಲ ಡೇಟಾ ಪ್ಲಾನ್‍ಗಳಿಗೆ ಅನ್ವಯವಾಗಲಿದೆ. ಅಂದರೆ ಒಂದೊಂದು ಡೇಟಾ ಪ್ಲಾನ್ ಗಳಿಗೆ ಪ್ರತ್ಯೇಕವಾಗಿ ಯಾವುದೇ ಟಾಪ್ ಅಪ್ ಇಲ್ಲ. 98 ರೂ.ನಿಂದ ಹಿಡಿದು 9999 ರೂ. ವರೆಗಿನ ಎಲ್ಲ ಡೇಟಾ ಪ್ಲಾನ್ ಗಳಿಗೆ ಒಂದೇ ರೀತಿಯ ಟಾಪ್ ಅಪ್ ದರ ನಿಗದಿಯಾಗಿದೆ.

    ಟಾಪ್ ಅಪ್ ಹಾಕಿದ್ದಕ್ಕೆ ಹೆಚ್ಚುವರಿ ಡೇಟಾ(10 ರೂ.ಗೆ 1 ಜಿಬಿ) ನೀಡುವುದಾಗಿ ಜಿಯೋ ಹೇಳಿದೆ. ಅದಕ್ಕೂ ಬೆಲೆ ನಿಗದಿ ಪಡಿಸಿದ್ದು 10 ರೂ. ಟಾಪ್ ಅಪ್ ಹಾಕಿಸಿದರೆ 1 ಜಿಬಿ ಡೇಟಾ ಸಿಕ್ಕರೆ 1000 ರೂ. ಹಾಕಿದರೆ 100 ಜಿಬಿ ಡೇಟಾ ಸಿಗಲಿದೆ.

    10 ರೂ.ಗೆ 124 ನಿಮಿಷ, 20 ರೂ. ಗೆ 249 ನಿಮಿಷ, 50 ರೂ.ಗೆ 656 ನಿಮಿಷ, 100 ರೂ.ಗೆ 1362 ನಿಮಿಷ, 500 ರೂ.ಗೆ 7,012 ನಿಮಿಷ, 1000 ರೂ.ಗೆ 14,074 ನಿಮಿಷ ಕರೆಯನ್ನು ಮಾಡಬಹುದಾಗಿದೆ.

    ಈ ಹಿಂದೆ ಪ್ಲಾನ್ ಹಾಕಿದ್ರೆ ಏನು ಮಾಡಬೇಕು?
    ನಿನ್ನೆಯವರೆಗೆ ಯಾರೆಲ್ಲ ಯಾವ ಡೇಟಾ ಪ್ಲಾನ್ ಹಾಕಿದ್ದೀರೋ ಅವರೆಲ್ಲ ಆ ಪ್ಲಾನ್ ನಲ್ಲಿ ಘೋಷಣೆಯಾಗಿರುವ ವ್ಯಾಲಿಡಿಟಿಯವರೆಗೆ ಯಾವುದೇ ನಂಬರಿಗೆ ಉಚಿತವಾಗಿ ಕರೆ ಮಾಡಬಹುದು. ಯಾಕೆಂದರೆ ರಿಚಾರ್ಜ್ ಮಾಡಿದ ಕೂಡಲೇ ಇಂತಿಷ್ಟು ದಿನದವರೆಗೆ ಹೊರ ಹೋಗುವ ಕರೆಗಳು ಉಚಿತ ಎಂದು ಸಂದೇಶ ಇರುವ ಮೆಸೇಜ್ ಬಂದಿರುತ್ತದೆ. ಹೀಗಾಗಿ ಆ ಗ್ರಾಹಕರು ವ್ಯಾಲಿಡಿಟಿ ಮುಗಿಯುವವರೆಗೂ ಯಾವುದೇ ಟಾಪ್ ಅಪ್ ಹಾಕುವ ಅಗತ್ಯವಿಲ್ಲ. ವ್ಯಾಲಿಡಿಟಿ ಮುಗಿದ ಬಳಿಕ ಡೇಟಾ ಪ್ಲಾನ್ ಹಾಕುವಾಗ ಪ್ರತ್ಯೇಕವಾಗಿ ಟಾಪ್ ಅಪ್ ರಿಚಾರ್ಜ್ ಮಾಡಬೇಕಾಗುತ್ತದೆ.

    ಜಿಯೋ ಸೇವೆ ಆರಂಭಗೊಂಡ ಬಳಿಕ ಈ ಐಯುಸಿಯನ್ನು ತಗೆದು ಹಾಕಬೇಕೆಂದು ಟ್ರಾಯ್ ಮುಂದೆ ವಾದ ಮಂಡಿಸುತಿತ್ತು. ಆದರೆ ಬೇರೆ ಟೆಲಿಕಾಂ ಕಂಪನಿಗಳು ಐಯುಸಿಯನ್ನು ತೆಗೆದು ಹಾಕಬಾರದು ದರವನ್ನು ಹೆಚ್ಚಿಸಬೇಕು ಎಂದು ವಾದಿಸುತ್ತಿದ್ದವು. ಆದರೆ ಟ್ರಾಯ್ ಹಂತ ಹಂತವಾಗಿ ಐಯುಸಿ ದರವನ್ನು ಕಡಿತಗೊಳಿಸುತ್ತಿದ್ದು ಮುಂದಿನ ವರ್ಷದಲ್ಲಿ ಸಂಪೂರ್ಣವಾಗಿ ತೆಗೆದು ಹಾಕುವ ಸಾಧ್ಯತೆಯಿದೆ.

    ಏನಿದು ಐಯುಸಿ?
    ಇಂಟರ್ ಕನೆಕ್ಟ್ ಯೂಸೇಜ್ ಚಾರ್ಜ್(ಐಯುಸಿ) ಟ್ರಾಯ್ ನಿಗದಿ ಪಡಿಸುತ್ತದೆ. ಉದಾಹರಣೆಗೆ ಜಿಯೋ ಗ್ರಾಹಕರೊಬ್ಬರು ವೊಡಾಫೋನ್ ಗ್ರಾಹಕರಿಗೆ ಕರೆ ಮಾಡಿದರೆ ಜಿಯೋ ಟ್ರಾಯ್ ನಿಗದಿ ಪಡಿಸಿದ ಐಯುಸಿಯನ್ನು ವೊಡಾಫೋನ್ ಕಂಪನಿಗೆ ಪಾವತಿಸಬೇಕಾಗುತ್ತದೆ.

    2003ರಲ್ಲಿ ಒಳಬರುವ ಕರೆಯನ್ನು ಉಚಿತವಾಗಿ ನೀಡುವ ಸಲುವಾಗಿ ಟ್ರಾಯ್ ಐಯುಸಿಯನ್ನು ತಂದಿತ್ತು. 2004ರ ಫೆಬ್ರವರಿಯಲ್ಲಿ ಟ್ರಾಯ್ ಪ್ರತಿ ನಿಮಿಷಕ್ಕೆ 30 ಪೈಸೆ, 2009ರ ಏಪ್ರಿಲ್ ನಲ್ಲಿ 20 ಪೈಸೆ, 2015ರ ಮಾರ್ಚ್ ನಲ್ಲಿ 14 ಪೈಸೆ, ಪ್ರಸ್ತುತ ಈಗ 6 ಪೈಸೆ ಐಯುಸಿ ಬೆಲೆಯನ್ನು ಟ್ರಾಯ್ ನಿಗದಿಪಡಿಸಿದೆ.

    ಐಯುಸಿಯಿಂದಾಗಿ ಏರ್ ಟೆಲ್, ವೊಡಾಫೋನ್ ಕಂಪನಿಗಳು ಸಾವಿರಾರು ಕೋಟಿ ರೂ. ಆದಾಯಗಳಿಸುತ್ತಿದೆ ಎನ್ನುವುದು ಜಿಯೋ ಆರೋಪ. ಕಳೆದ 3 ವರ್ಷಗಳಲ್ಲಿ ಜಿಯೋ ಐಯುಸಿಗೆಂದು ಒಟ್ಟು 12 ಸಾವಿರ ಕೋಟಿ ರೂ. ಹಣವನ್ನು ವಿವಿಧ ಟೆಲಿಕಾಂ ಕಂಪನಿಗಳಿಗೆ ಪಾವತಿಸಿದೆ. ಹೊರ ಹೋಗುವ ಕರೆಗಳು ಉಚಿತವಾಗಿ ಇರುವ ಕಾರಣ ಬೇರೆ ಕಂಪನಿಯ ಗ್ರಾಹಕರು ನಮ್ಮ ಕಂಪನಿಯ ಗ್ರಾಹಕರಿಗೆ ಮಿಸ್ ಕಾಲ್ ನೀಡುತ್ತಿದ್ದಾರೆ. ಪ್ರತಿ ದಿನ ಜಿಯೋಗೆ  25 ರಿಂದ 30 ಕೋಟಿ ಮಿಸ್ ಕಾಲ್ ಗಳು ಬರುತ್ತಿದೆ. ಇದರಿಂದಾಗಿ ನಮಗೆ ಪ್ರತಿ ದಿನ 65 ರಿಂದ 75 ಕೋಟಿ ನಷ್ಟವಾಗುತ್ತಿದೆ ಎಂದು ಜಿಯೋ ಹೇಳಿದೆ.

    ಈ ಹಿಂದೆ ಭಾರತಿ ಎಂಟರ್ಪ್ರೈಸಸ್ ಮುಖ್ಯಸ್ಥ ಸುನೀಲ್ ಮಿತ್ತಲ್ ಟ್ರಾಯ್ ಮುಖ್ಯಸ್ಥರಿಗೆ ಪತ್ರ ಬರೆದು ಪ್ರಸ್ತುತ ಐಯುಸಿ ಕಡಿಮೆ ಇದೆ. ಪಾರದರ್ಶಕವಾಗಿ ಹೊಸ ಬೆಲೆಯನ್ನು ನಿಗದಿಪಡಿಸಬೇಕೆಂದು ಮನವಿ ಮಾಡಿದ್ದರು.

    ಜಿಯೋ ವಿರೋಧ ಯಾಕೆ?
    ಇಲ್ಲಿಯವರೆಗೆ ಟೆಲಿಕಾಂ ಕಂಪನಿಗಳು ಕರೆ ಮತ್ತು ಡೇಟಾ ಸೇವೆಗಳನ್ನು ಪ್ರತ್ಯೇಕವಾಗಿ ನಿಭಾಯಿಸುತಿತ್ತು. ಆದರೆ ಜಿಯೋ ಈ ಎರಡನ್ನೂ ಒಟ್ಟಿಗೆ ನಿಭಾಯಿಸುತ್ತದೆ. ಇದರಿಂದಾಗಿ ಖರ್ಚು ಕಡಿಮೆ ಆಗುತ್ತದೆ. ಡೇಟಾವನ್ನು ಬಳಸಿಕೊಂಡು ಕರೆ ಮಾಡುವ ತಂತ್ರಜ್ಞಾನವೇ ವಾಯ್ಸ್ ಓವರ್ ಲಾಂಗ್ ಟರ್ಮ್ ಎವಲ್ಯೂಶನ್(ಎಲ್‍ಟಿಇ). ಇದರಲ್ಲಿ ಕರೆಗೆ ಬೇರೆ, ಡೇಟಾಗೆ ಬೇರೆ ಎಂದು ಹಣ ನೀಡಬೇಕಿಲ್ಲ. ಡೇಟಾಗೆ ನೀಡಿದ ಹಣದಲ್ಲೇ ಕರೆಯನ್ನೂ ಉಚಿತವಾಗಿ ಮಾಡಬಹುದು. ಈ ಕಾರಣಕ್ಕಾಗಿ ಜಿಯೋ ಸಂಪೂರ್ಣವಾಗಿ ಐಯುಸಿಯನ್ನು ತೆಗೆದು ಹಾಕಬೇಕೆಂದು ವಾದ ಮಂಡಿಸುತ್ತಿದೆ. ಐಯುಸಿಯಿಂದ ನಮಗೆ ಹೊರೆಯಾಗುತ್ತಿದೆ. ಇತರೇ ಟೆಲಿಕಾಂ ಕಂಪೆನಿಗಳು ತಮ್ಮ ಆದಾಯವನ್ನು ಹೆಚ್ಚಿಸಲು ಮಾಡಿಕೊಂಡ ತಂತ್ರ ಎಂದು ಜಿಯೋ ವಾದಿಸುತ್ತಿದೆ.