Tag: ಜಾಲಿವುಡ್‌ ಸ್ಟುಡಿಯೋಸ್‌

  • ಒಂದು ಬಾರಿ ನೋಟಿಸ್ ಕೊಟ್ಟ ಮೇಲೆ ಅದು ಸರಿ ಆಗೋವರೆಗೂ ಬೀಗ ತೆಗೆಯೋದು ಸರಿಯಲ್ಲ: ರಾಮಲಿಂಗಾರೆಡ್ಡಿ

    ಒಂದು ಬಾರಿ ನೋಟಿಸ್ ಕೊಟ್ಟ ಮೇಲೆ ಅದು ಸರಿ ಆಗೋವರೆಗೂ ಬೀಗ ತೆಗೆಯೋದು ಸರಿಯಲ್ಲ: ರಾಮಲಿಂಗಾರೆಡ್ಡಿ

    ಬೆಂಗಳೂರು: ಒಂದು ಬಾರಿ ಬಿಗ್‌ಬಾಸ್ (Bigg Boss Kannada 12) ಶೋಗೆ ನೋಟಿಸ್ ಕೊಟ್ಟ ಮೇಲೆ ಅದು ಸರಿ ಆಗೋವರೆಗೂ ಬೀಗ ತೆಗೆಯೋದು ಸರಿಯಲ್ಲ ಎಂದು ಸಚಿವ ರಾಮಲಿಂಗಾರೆಡ್ಡಿ (Ramalingareddy) ಬಿಗ್‌ಬಾಸ್ ವಿಚಾರದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ನಡೆಗೆ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ.

    ಬಿಗ್‌ಬಾಸ್‌ಗೆ ಬೀಗ ಹಾಕಿ ಮತ್ತೆ ತೆಗೆದ ವಿಚಾರಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ನಾನು ಈ ವಿಷಯವನ್ನು ಮಾಧ್ಯಮಗಳ ಮೂಲಕ ನೋಡಿದೆ. ಮಾಲಿನ್ಯ ನಿಯಂತ್ರಣ ಬೋರ್ಡ್ ಅಧ್ಯಕ್ಷ ನರೇಂದ್ರಸ್ವಾಮಿ ಅವರು ಬಿಗ್‌ಬಾಸ್ ನಿಯಮ ಮೀರಿದ್ದಾರೆ ಅಂತ ನೋಟಿಸ್ ಕೊಟ್ಟಿದ್ದರು. ಅವರು ನೋಟಿಸ್‌ಗೂ ಕ್ಯಾರೆ ಎನ್ನಲಿಲ್ಲ ಅಂತ ಬೀಗ ಹಾಕಿದ್ರು. ಈಗ ನಿನ್ನೆ ಡಿಕೆ ಶಿವಕುಮಾರ್ (D.K.Shivakumar) ಅನುಮತಿ ಕೊಡಿ ಅಂತ ಹೇಳಿದ್ದಾರೆ ಅಂತ ಮಾಧ್ಯಮಗಳಲ್ಲಿ ನೋಡಿದೆ. ನನಗೆ ಇಷ್ಟೇ ಮಾಹಿತಿ ಗೊತ್ತಿರೋದು. ನಾನು ಊರಲ್ಲಿ ಇರಲಿಲ್ಲ. ಇಷ್ಟೇ ಗೊತ್ತಿರೋದು ಅಂತ ತಿಳಿಸಿದರು. ಇದನ್ನೂ ಓದಿ: ಬಿಗ್‌ಬಾಸ್ ಮನೆ ಬೀಗ ಓಪನ್ ಆದ್ರೂ ಶೂಟಿಂಗ್ ಇನ್ನೂ ಶುರುವಾಗಿಲ್ಲ!

    ಒಂದು ಸಾರಿ ನೋಟಿಸ್ ಕೊಟ್ಟ ಮೇಲೆ, ಮುಚ್ಚಿದ ಮೇಲೆ ಅದು ಸರಿ ಆಗೋವರೆಗೂ ತೆಗೆಯೋಕೆ ಅವಕಾಶ ಕೊಡಬಾರದು. ನನಗೆ ಡಿಸಿ ಮಾಹಿತಿ ಕೊಡೋಕೆ ನಾನು ಊರಲ್ಲಿ ಇರಲಿಲ್ಲ. ಮಾಲಿನ್ಯ ‌ಬೋರ್ಡ್ ಸ್ವಾಯತ್ತ ಸಂಸ್ಥೆ. ಅದರ ಕೆಲಸ ಅದು ಮಾಡಿದೆ. ಏನಾಗಿದೆ ತಿಳಿದುಕೊಳ್ಳುತ್ತೇನೆ. ಈಗ ಏನ್ ಆಯ್ತು ಅಂತ ಡಿಕೆ ಶಿವಕುಮಾರ್ ಅವರನ್ನೇ ಕೇಳಿ ಎಂದರು.

    ಪರಿಸರ ನಿಯಮ ಉಲ್ಲಂಘಿಸಿದ ಆರೋಪದಲ್ಲಿ ಬಿಡದಿಯಲ್ಲಿರುವ ಜಾಲಿವುಡ್‌ ಸ್ಟುಡಿಯೋಸ್‌ ಬಂದ್‌ ಮಾಡಲಾಗಿತ್ತು. ಅಲ್ಲೇ ಇರುವ ಬಿಗ್‌ಬಾಸ್‌ ಮನೆಗೂ ಇದರ ಬಿಸಿ ತಟ್ಟಿತ್ತು. ರಾತ್ರೋರಾತ್ರಿ ಬಿಗ್‌ಬಾಸ್‌ ಸ್ಪರ್ಧಿಗಳನ್ನು ಮನೆಯಿಂದ ಹೊರಹಾಕಲಾಗಿತ್ತು. ಒಂದು ದಿನದ ನಾಟಕೀಯ ಬೆಳವಣಿಗೆ ಬೆನ್ನಲ್ಲೇ, ಜಾಲಿವುಡ್‌ ಸ್ಟುಡಿಯೋಸ್‌ ಗೇಟ್‌ಗೆ ಹಾಕಿರುವ ಸೀಲ್‌ ತೆಗೆಯುವಂತೆ ಡಿಸಿಎಂ ಸೂಚನೆ ನೀಡಿದರು. ಈಗ ಜಾಲಿವುಡ್‌ ಓಪನ್‌ ಆಗಿದ್ದು, ಸ್ಪರ್ಧಿಗಳು ಕೂಡ ಬಿಗ್‌ಬಾಸ್‌ ಮನೆಗೆ ವಾಪಸ್‌ ಆಗಿದ್ದಾರೆ. ಇದನ್ನೂ ಓದಿ: ಡಿಕೆಶಿ ವೈಲ್ಡ್‌ ಕಾರ್ಡ್‌ಎಂಟ್ರಿ – ಬಿಗ್‌ಬಾಸ್‌ ಮನೆ ಓಪನ್‌ | ರಾತ್ರಿ ಏನೇನಾಯ್ತು? ಇಲ್ಲಿದೆ ಇನ್‌ಸೈಡ್‌ ಸ್ಟೋರಿ

  • ತಕ್ಷಣವೇ ಜಾಲಿವುಡ್‌ ಸ್ಟುಡಿಯೋಸ್‌ ಸೀಲ್‌ ತೆಗೆಯಿರಿ: ಬೆ.ದಕ್ಷಿಣ ಡಿಸಿಗೆ ಡಿಕೆಶಿ ಸೂಚನೆ

    ತಕ್ಷಣವೇ ಜಾಲಿವುಡ್‌ ಸ್ಟುಡಿಯೋಸ್‌ ಸೀಲ್‌ ತೆಗೆಯಿರಿ: ಬೆ.ದಕ್ಷಿಣ ಡಿಸಿಗೆ ಡಿಕೆಶಿ ಸೂಚನೆ

    – ಈಗಲ್‌ಟನ್‌ ರೆಸಾರ್ಟ್‌ನಿಂದ ಬಿಗ್‌ಬಾಸ್‌ ಮನೆಗೆ 17 ಸ್ಪರ್ಧಿಗಳು ಇಂದೇ ಶಿಫ್ಟ್‌

    ಜಾಲಿವುಡ್‌ ಬಂದ್‌ನಿಂದ ಸಂಕಷ್ಟಕ್ಕೆ ಸಿಲುಕಿದ್ದ ಬಿಗ್‌ಬಾಸ್‌ಗೆ ಕೊನೆಗೂ ಗುಡ್‌ನ್ಯೂಸ್‌ ಸಿಕ್ಕಿದೆ. ತಕ್ಷಣವೇ ಜಾಲಿವುಡ್‌ ಸ್ಟುಡಿಯೋಸ್‌ ಸೀಲ್‌ ತೆಗೆಯುವಂತೆ ಬೆಂಗಳೂರು ದಕ್ಷಿಣ ಡಿಸಿಗೆ ಡಿಸಿಎಂ ಡಿ.ಕೆ.ಶಿವಕುಮಾರ್‌ ನಿರ್ದೇಶನ ನೀಡಿದ್ದಾರೆ.

    ಡಿಸಿಎಂ ಎಕ್ಸ್‌ ಪೋಸ್ಟ್‌ನಲ್ಲೇನಿದೆ?
    ಈ ಕುರಿತು ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಡಿಕೆಶಿ, ಬಿಗ್‌ಬಾಸ್ ಕನ್ನಡ ಚಿತ್ರೀಕರಣ ನಡೆಯುತ್ತಿರುವ ಬಿಡದಿಯಲ್ಲಿರುವ ಜಾಲಿವುಡ್ ಆವರಣದ ಸೀಲ್ ಅನ್ನು ತೆಗೆದುಹಾಕಲು ಬೆಂಗಳೂರು ದಕ್ಷಿಣ ಜಿಲ್ಲೆಯ ಜಿಲ್ಲಾಧಿಕಾರಿಗೆ ನಾನು ನಿರ್ದೇಶನ ನೀಡಿದ್ದೇನೆ.

    ಪರಿಸರ ಅನುಸರಣೆ ಪ್ರಮುಖ ಆದ್ಯತೆಯಾಗಿ ಉಳಿದಿದ್ದರೂ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ನಿಗದಿಪಡಿಸಿದ ಮಾನದಂಡಗಳಿಗೆ ಅನುಗುಣವಾಗಿ ಉಲ್ಲಂಘನೆಗಳನ್ನು ಪರಿಹರಿಸಲು ಸ್ಟುಡಿಯೋಗೆ ಸಮಯ ನೀಡಲಾಗುವುದು.

    ಕನ್ನಡ ಮನರಂಜನಾ ಉದ್ಯಮವನ್ನು ಬೆಂಬಲಿಸಲು ನಾನು ಬದ್ಧನಾಗಿರುತ್ತೇನೆ, ಜೊತೆಗೆ ಪರಿಸರ ಸಂರಕ್ಷಣೆಯ ಬಗ್ಗೆ ನಮ್ಮ ಜವಾಬ್ದಾರಿಯನ್ನು ಎತ್ತಿಹಿಡಿಯುತ್ತೇನೆ ಎಂದು ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

  • ಬಿಗ್ ಬಾಸ್ ಮನೆಗೆ ಬೀಗ; ಮಾಜಿ ಸ್ಪರ್ಧಿಗಳು ತೀವ್ರ ಬೇಸರ

    ಬಿಗ್ ಬಾಸ್ ಮನೆಗೆ ಬೀಗ; ಮಾಜಿ ಸ್ಪರ್ಧಿಗಳು ತೀವ್ರ ಬೇಸರ

    – ರಾಜಕೀಯ ದುರುದ್ದೇಶ ಎಂದ ಪ್ರಶಾಂತ್ ಸಂಬರಗಿ

    ರಿಸರ ನಿಯಮ ಉಲ್ಲಂಘನೆ ಆರೋಪದ ಮೇಲೆ ಬಿಗ್‌ಬಾಸ್ (Bigg Boss) ರಿಯಾಲಿಟಿ ಶೋ ನಡೆಯುತ್ತಿದ್ದ ಜಾಲಿವುಡ್ ಸ್ಟುಡಿಯೋಸ್‌ಗೆ ಬೀಗ ಬಿದ್ದಿತ್ತು. ಈ ಹಿನ್ನೆಲೆ ಜಾಲಿವುಡ್ ಸ್ಟುಡಿಯೋದಿಂದ ಬಿಗ್‌ಬಾಸ್ 12ರ ಎಲ್ಲಾ ಸ್ಪರ್ಧಿಗಳನ್ನು ಹೊರಗೆ ಕಳುಹಿಸಲಾಗಿತ್ತು. ಶೋ ಸ್ಥಗಿತಗೊಂಡ ಬಗ್ಗೆ ಬಿಗ್‌ಬಾಸ್‌ನ ಮಾಜಿ ಸ್ಪರ್ಧಿಗಳು ಬೇಸರ ಹೊರಹಾಕಿದ್ದಾರೆ.

    ರಾಜಕೀಯ ದುರುದ್ದೇಶ: ಪ್ರಶಾಂತ್ ಸಂಬರಗಿ
    ಜಾಲಿವುಡ್‌ಗೆ ಬೀಗ ಬಿದ್ದ ಬಗ್ಗೆ `ಪಬ್ಲಿಕ್ ಟಿವಿ’ಯೊಂದಿಗೆ ಮಾತನಾಡಿದ ಬಿಗ್‌ಬಾಸ್ ಮಾಜಿ ಸ್ಪರ್ಧಿ ಪ್ರಶಾಂತ್ ಸಂಬರಗಿ (Prashanth Sambargi) ಮಾತನಾಡಿ, ರಾಜಕೀಯ ದುರುದ್ದೇಶದಿಂದ ಈ ನಿರ್ಧಾರ ಮಾಡಲಾಗಿದೆ. ಕಳೆದ ಬಾರಿ ಹುಲಿ ಉಗುರಿನ ಕಥೆ ಹೇಳಿ ವರ್ತೂರ್ ಸಂತೋಷ್‌ರನ್ನ ಬಂಧನ ಮಾಡಲಾಗಿತ್ತು. ನಾವು ಸ್ಪರ್ಧಿಯಾಗಿದ್ದಾಗಲು ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ಮಾಡಿ ರೋಲ್ ಕಾಲ್ ಮಾಡಿಕೊಂಡಿದ್ದನ್ನ ನೋಡಿದ್ದೇವೆ. ಈ ಬಾರಿಯೂ ಕಾಂಗ್ರೆಸ್ ಏಜೆಂಟ್‌ಗಳಾಗಿರುವ ನಕಲಿ, ಡೋಂಗಿ ಕನ್ನಡ ಹೋರಾಟಗಾರರ ದೂರಿನ ಮೇಲೆ ಕ್ರಮ ಮಾಡಲಾಗಿದೆ ಎಂದು ಕಿಡಿಕಾರಿದ್ದಾರೆ.

    ಸ್ಪರ್ಧಿಗಳು ನೂರಾರು ಕನಸು ಕಟ್ಟಿಕೊಂಡು ಬಂದಿರ್ತಾರೆ: ಶಿಶಿರ್ ಶಾಸ್ತ್ರಿ
    ಬಿಗ್‌ಬಾಸ್ 11ರ ಸ್ಪರ್ಧಿ ಶಿಶಿರ್ ಶಾಸ್ತ್ರಿ (Shishir Shastry) ಮಾತನಾಡಿ, ಶೋ ಹೀಗೆ ಸಡನ್ ಆಗಿ ನಿಂತಿರೋದು ತುಂಬಾ ಬೇಸರ ತಂದಿದೆ. 3 ತಿಂಗಳು ನಡೆಯುವ ಶೋ ಆಗಿರುವ ಬಿಗ್‌ಬಾಸ್‌ನಲ್ಲಿ ನೂರಾರು ಕಾರ್ಮಿಕರ ಶ್ರಮ ಇದೆ. ಶೋ ನಿಂತಿರೋದ್ರಿಂದ ಅವ್ರ ಜೀವನವೂ ಸಹ ಕಷ್ಟಕರವಾಗಲಿದೆ. ಸ್ಪರ್ಧಿಗಳು ಸಹ ನೂರಾರು ಕನಸು ಕಟ್ಟಿಕೊಂಡು ಶೋಗೆ ಹೋಗಿದ್ದಾರೆ. ಸಹಜವಾಗಿಯೇ ಅವರಿಗೆ ಶಾಕ್ ಆಗಿರುತ್ತದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ತಾತ್ಕಾಲಿಕವಾಗಿ ಶೋಗೆ ಹಿನ್ನೆಡೆ: ರಜತ್
    ಬಿಗ್‌ಬಾಸ್ 11ರ ಸ್ಪರ್ಧಿ ರಜತ್ (Rajath) ಮಾತನಾಡಿ, ಕಾನೂನಿನ ಮೇಲೆ ನನಗೆ ಅಪಾರವಾದ ಗೌರವ ಇದೆ. ಕೆಲವು ಸಂಘಟನೆಗಳು ಯಾಕೆ ಹೀಗೆ ಮಾಡುತ್ತಿವೆ ಅನ್ನೋದು ಗೊತ್ತಾಗುತ್ತಿಲ್ಲ. ಸ್ಪರ್ಧಿಗಳು ಬಿಗ್‌ಬಾಸ್‌ಗೆ ಸಾವಿರಾರು ಕನಸುಗಳನ್ನ ಕಟ್ಟಿಕೊಂಡು ಬಂದಿರುತ್ತಾರೆ. ತಾತ್ಕಾಲಿಕವಾಗಿ ಸ್ವಲ್ಪ ಹಿನ್ನೆಡೆ ಆಗಿ ಶೋ ನಿಂತಿರಬಹುದು. ಆದರೆ ಸುದೀಪ್ ಅವ್ರಿಗೆ ದೊಡ್ಡ ಶಕ್ತಿಯಿದೆ. ಮತ್ತೆ ಬಿಗ್‌ಬಾಸ್ ಪ್ರಾರಂಭವಾಗುತ್ತದೆ ಎಂದಿದ್ದಾರೆ.

    ಸ್ಪರ್ಧಿಗಳ ಕನಸಿಗೆ ಬರೆ: ಬಸ್ ಕಂಡೆಕ್ಟರ್ ಆನಂದ್
    ಬಿಗ್‌ಬಾಸ್ 6ರ ಸ್ಪರ್ಧಿ ಬಸ್ ಕಂಡೆಕ್ಟರ್ ಆನಂದ್ (Bus conductor Anand) ಪ್ರತಿಕ್ರಿಯಿಸಿ, ಇದು ಬಿಗ್‌ಬಾಸ್ ಮೇಲೆ ಬಂದ ಆರೋಪವಲ್ಲ. ಇದು ಕನ್ನಡ ರಿಯಾಲಿಟಿ ಶೋಗೆ ಆದ ಅವಮಾನ. ಶೋನಲ್ಲಿ ಕೆಲಸ ಮಾಡುತ್ತಿದ್ದ ಹಾಗೂ ಸ್ಪರ್ಧಿಗಳ ಕನಸುಗಳಿಗೆ ಬರೆ ಎಳೆದ ಹಾಗೆ ಆಗಿದೆ. ಜಾಲಿವುಡ್‌ನಲ್ಲಿ ಬಿಗ್‌ಬಾಸ್ ಸೆಟ್ ಹಾಕುವಾಗ ಗಮನಹರಿಸಬೇಕಿತ್ತು. ದುಡುಕಿ ನಿರ್ಧಾರ ತೆಗೆದುಕೊಂಡಿದ್ದಾರೆ. ಸೂರ್ಯ ಚಂದ್ರರೂ ಇರೋದು ಎಷ್ಟು ಸತ್ಯವೋ, ಇನ್ನೆರಡು ದಿನದ ಒಳಗೆ ಬಿಗ್‌ಬಾಸ್ ಆರಂಭವಾಗೋದು ಅಷ್ಟೇ ಸತ್ಯ ಎಂದು ಹೇಳಿದ್ದಾರೆ.

    ಸ್ಪರ್ಧಿಗಳು ಮತ್ತೆ ಬಿಗ್‌ಬಾಸ್ ಮನೆ ಒಳಗೆ: ರಕ್ಷಕ್ ಬುಲೆಟ್
    ಬಿಗ್‌ಬಾಸ್ ಸ್ಪರ್ಧಿ ರಕ್ಷಕ್ ಬುಲೆಟ್ (Rakshak Bullet) ಪ್ರತಿಕ್ರಿಯಿಸಿ, ಸಡನ್ನಾಗಿ ಎಲ್ಲಾ ಸ್ಪರ್ಧಿಗಳನ್ನು ಹೊರಗೆ ಕಳುಹಿಸಿದಾಗ ಸಹಜವಾಗಿಯೇ ಅವರಿಗೆ ಬೇಜಾರಾಗಿರುತ್ತದೆ. ಇಡೀ ಮನೆ ಲಾಕ್ ಆಗಿದೆ. ಈ ಸಲ ಮಾತ್ರ ಹೀಗೆ ಆಗಿದೆ. ಬಿಗ್‌ಬಾಸ್ ಶೋಗೆ ಸ್ಪರ್ಧಿಗಳು ಕನಸು ಕಟ್ಕೊಂಡು ಬಂದಿರುತ್ತಾರೆ. ಏಕಾಏಕಿ ಶೋ ಬಂದ್ ಆದಾಗ ಭಯ ಇರುತ್ತದೆ. ಆದರೆ ಈಗ ಮತ್ತೆ ಸ್ಪರ್ಧಿಗಳು ಬಿಗ್‌ಬಾಸ್ ಮನೆ ಒಳಗೆ ಹೋಗ್ತಿದ್ದಾರೆ ಎಂದಿದ್ದಾರೆ.

  • ಬಿಗ್ ಬಾಸ್‌ಗೆ 10 ದಿನ ಕಾಲಾವಕಾಶ; ನಮಗೆ ಯಾವುದೇ ರೀತಿ ಮನವಿ ಬಂದಿಲ್ಲ: ನರೇಂದ್ರಸ್ವಾಮಿ

    ಬಿಗ್ ಬಾಸ್‌ಗೆ 10 ದಿನ ಕಾಲಾವಕಾಶ; ನಮಗೆ ಯಾವುದೇ ರೀತಿ ಮನವಿ ಬಂದಿಲ್ಲ: ನರೇಂದ್ರಸ್ವಾಮಿ

    – ನಾವು ಯಾವುದೇ ರೀತಿ ಅವಕಾಶ ನೀಡಿಲ್ಲ

    ಬೆಂಗಳೂರು: ಬಿಗ್ ಬಾಸ್‌ಗೆ (Bigg Boss) 10 ದಿನ ಕಾಲಾವಕಾಶ ಕೊಟ್ಟಿರುವ ಸಂಬಂಧ ನಮಗೆ ಯಾವುದೇ ಮನವಿ ಬಂದಿಲ್ಲ. ನಾವು ಯಾವುದೇ ರೀತಿ ಅವಕಾಶ ನೀಡಿಲ್ಲ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿಎಂ ನರೇಂದ್ರಸ್ವಾಮಿ (PM Narendraswamy) ಹೇಳಿದ್ದಾರೆ.

    ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮಗೆ ಬಿಗ್ ಬಾಸ್ ಈವೆಂಟ್ ಬಗ್ಗೆ ಗೊತ್ತಿಲ್ಲ. ನಾವು ಜಾಲಿವುಡ್ (Jollywood) ಸಂಸ್ಥೆಗೆ ನೋಟಿಸ್ ಕೊಟ್ಟಿರೋದು. ಸುಮಾರು 152 ಯೂನಿಟ್‌ಗಳನ್ನು ಈಗಾಗಲೇ ರೂಲ್ಸ್ ಬ್ರೇಕ್ ಮಾಡಿದ ಕಾರಣಕ್ಕೆ ನಾವು ಕ್ಲೋಸ್ ಮಾಡುವ ಆದೇಶವನ್ನು ನೀಡಿದ್ದೇವೆ. ಹತ್ತು ದಿನದ ಕಾಲಾವಕಾಶ ಕೊಡುವ ಬಗ್ಗೆ ನಾವು ತೀರ್ಮಾನ ಮಾಡಿಲ್ಲ. ಈ ಪ್ರಕರಣ ಕೋರ್ಟ್‌ನಲ್ಲಿ ಇದೆ ಎಂದರು. ಇದನ್ನೂ ಓದಿ: ಬಿಗ್‌ಬಾಸ್‌ಗೆ ಬಿಗ್‌ ರಿಲೀಫ್‌ – ಸಮಸ್ಯೆ ಇತ್ಯರ್ಥಕ್ಕೆ 10 ದಿನ ಕಾಲಾವಕಾಶ

    ನೋಟಿಸ್ ಕೊಟ್ಟಾಗಲು ಸ್ಪಂದಿಸಿಲ್ಲ. ಜಿಲ್ಲಾಡಳಿತ ನಮ್ಮ ಆದೇಶವನ್ನು ಪಾಲಿಸುತ್ತಿದೆ. ಮುಂದಿನ ನಿರ್ಧಾರ ನಾವೇ ತೆಗೆದುಕೊಳ್ಳಬೇಕು. ಅಮ್ಯೂಸ್‌ಮೆಂಟ್ ಪಾರ್ಕ್ ಸಮಸ್ಯೆಯಾಗಿದ್ದು. ಬಿಗ್ ಬಾಸ್ ಸ್ಟುಡಿಯೋಗೂ ಇದಕ್ಕೂ ಸಂಬಂಧ ಇರಲಿಲ್ಲ. ಜಾಲಿವುಡ್ ಬಂದ್ ಮಾಡಿರೋದು ದಿಢೀರ್ ಅಲ್ಲ. ಬಿಗ್ ಬಾಸ್‌ಗೆ ಅವರು ಮೋಸ ಮಾಡಿದ್ದಾರಾ ಗೊತ್ತಿಲ್ಲ. ನಮಗೆ ಇನ್ನೂ ಮನವಿ ಬಂದಿಲ್ಲ. ಜಿಲ್ಲಾಧಿಕಾರಿ ಗಳಿಂದ ಬಂದ ಮೇಲೆ ನೋಡೋಣ ಎಂದು ಹೇಳಿದರು. ಇದನ್ನೂ ಓದಿ: `ನಟ್ಟು ಬೋಲ್ಟು’ ಹೇಳಿಕೆಗೂ ಬಿಗ್‌ಬಾಸ್ ಬಂದ್‌ಗೂ ಸಂಬಂಧವಿಲ್ಲ – ಈಶ್ವರ್ ಖಂಡ್ರೆ 

    ಜಾಲಿವುಡ್ ಮೂವತ್ತು ಎಕ್ರೆ ಪ್ರದೇಶದಲ್ಲಿದೆ. ಬಿಗ್ ಬಾಸ್ ನಡೆಯುತ್ತಿರೋದು ಒಂದು ಎಕ್ರೆ. ಅಮ್ಯೂಸ್‌ಮೆಂಟ್ ಪಾರ್ಕ್ ದೂರನ್ನು ಆಧರಿಸಿ ನೋಟಿಸ್ ಕೊಟ್ಟಿರೋದು. ಅವರು ಕನಿಷ್ಟ ಅರ್ಜಿ ಸಲ್ಲಿಕೆ ಮಾಡಿಲ್ಲ. ಇಷ್ಟು ದಿನ ಮುಚ್ಚಲು ಸಮಯಾವಕಾಶ ಯಾಕೆ? ಏಕಾಏಕಿ ಮುಚ್ಚಲು ಆಗಲ್ಲ. ಕೋರ್ಟ್ ತಪರಾಕಿ ಹಾಕಬಹುದು. ಈ ಫೈಲ್ ಪೆಂಡಿಂಗ್ ಇರೋದು ಆಗಸ್ಟ್‌ನಲ್ಲಿ ನಾನು ಅಧಿಕಾರ ವಹಿಸಿಕೊಂಡಾಗ ಗೊತ್ತಾಗಿದೆ. ನಾನು ಅಧಿಕಾರಕ್ಕೆ ಬಂದ ತಕ್ಷಣ ಕ್ರಮ ಕೈಗೊಂಡಿದ್ದೇನೆ. ಮೂರು ನೋಟಿಸ್ ಕೊಟ್ಟಿದ್ದೇವೆ. ಸ್ಪಾಟ್ ಮಹಜರು ಆಗಿದೆ. ಹತ್ತು ದಿನಗಳ ಕಾಲವಕಾಶವನ್ನು ಕೊಡಬಹುದು. ಅಫಿಡವಿಟ್ ಜೊತೆಗೆ ಮನವಿ ಪತ್ರ ಕೊಟ್ಟರೆ ಕಾಲಾವಕಾಶವನ್ನು ಕೊಡಬಹುದು. ಅಂದರೆ ಕಾನೂನಿನಲ್ಲಿ ಅವಕಾಶ ಇದೆ ಆದರೆ ಇದುವರೆಗೆ ತೀರ್ಮಾನ ಆಗಿಲ್ಲ. ರೆಡ್ ಕೆಟಗರಿ ಆಗಿರೋದ್ರಿಂದ 90 ದಿನ ಅವಕಾಶ ನೀಡಬಹುದು. ಈ ವಿಚಾರ ಈಗಾಗಲೇ ಕೋರ್ಟ್‌ನಲ್ಲಿದೆ ಎಂದು ತಿಳಿಸಿದರು. ಇದನ್ನೂ ಓದಿ: ಬಿಗ್‌ಬಾಸ್‌ಗೆ ಇಂದೇ ಬಿಗ್‌ ರಿಲೀಫ್‌? – ಮತ್ತೆ ಶೋ ಆರಂಭ ಸಾಧ್ಯತೆ

    ನಾನು ರಾಜಕೀಯ ಪಕ್ಷಕ್ಕೆ ಈಗ ಸೇರಿದವನು ಅಲ್ಲ. ನಾನು ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ. ಇದರಲ್ಲಿ ರಾಜಕೀಯ ಬೆರೆಸೋದು ಬೇಡ. ಕಾಯ್ದೆಯಡಿ ಕ್ಲೋಸರ್ ಆದೇಶ ಕೊಟ್ಟಿದ್ದೇವೆ. ದಂಡವನ್ನು ಕಟ್ಟಬೇಕಾಗುತ್ತೆ. ಈ ಕ್ಲೋಸರ್ ಆದೇಶ ಶಾಶ್ವತ, ತಾತ್ಕಾಲಿಕವೂ ಅಲ್ಲ. ಅವರು ದಂಡವನ್ನು ಕಟ್ಟಬೇಕಾಗುತ್ತದೆ. ಕೋರ್ಟ್ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಗೆ ಏಕಕಾಲಕ್ಕೆ ಮನವಿ ಕೊಟ್ಟರೆ ಕಷ್ಟ. ಜಾಲಿವುಡ್‌ನವರು ಕೂಡ ಕರೆ ಮಾಡಿದ್ದಾರೆ. ಅವರಿಗೂ ಅದನ್ನೇ ಹೇಳಿದ್ದೇನೆ. ಮಾನವೀಯತೆ ದೃಷ್ಟಿಯಿಂದ ಏನಾದರೂ ಮಾಡಬಹುದು, ನೋಡೋಣ ಎಂದರು. ಇದನ್ನೂ ಓದಿ: ತಪ್ಪು ಸರಿಪಡಿಸಿಕೊಳ್ಳಲು ಕಾಲಾವಕಾಶ ಕೊಡಿ: ಜಾಲಿವುಡ್ ಆಡಳಿತ ಮಂಡಳಿ

  • ಬಿಗ್‌ಬಾಸ್ ಮನೆಗೆ ಬೀಗ; ಸುದೀಪ್‌ಗೂ ಡಿಕೆಶಿಗೂ ತಂದಿಡೋದು ಬೇಡ: ಶಾಸಕ ಬಾಲಕೃಷ್ಣ

    ಬಿಗ್‌ಬಾಸ್ ಮನೆಗೆ ಬೀಗ; ಸುದೀಪ್‌ಗೂ ಡಿಕೆಶಿಗೂ ತಂದಿಡೋದು ಬೇಡ: ಶಾಸಕ ಬಾಲಕೃಷ್ಣ

    ಬೆಂಗಳೂರು: ನಟ್ಟು ಬೋಲ್ಟ್ ವಿಚಾರಕ್ಕೂ ಬಿಗ್‌ಬಾಸ್ ಶೋ (Biggboss Show) ಬಂದ್ ಆಗಿದ್ದಕ್ಕೆ ಯಾವುದೇ ಸಂಬಂಧ ಇಲ್ಲ. ಈ ವಿಚಾರದಲ್ಲಿ ಸುದೀಪ್‌ಗೂ ಡಿಕೆಶಿ ಅವರಿಗೂ ತಂದಿಡೋದು ಬೇಡ ಎಂದು ಮಾಗಡಿ ಶಾಸಕ ಹೆಚ್.ಸಿ ಬಾಲಕೃಷ್ಣ (HC Balakrishna) ಹೇಳಿದ್ದಾರೆ.

    ಕಲಾವಿದರ ಮೇಲೆ ಸೇಡು ತೀರಿಸಿಕೊಂಡ ನಟ್ಟು ಬೋಲ್ಟ್ ಮಿನಿಸ್ಟರ್ ಎಂಬ ಜೆಡಿಎಸ್ ಹೇಳಿಕೆ ಬಗ್ಗೆ ಮಾತನಾಡಿದ ಅವರು, ನಟ್ಟು ಬೋಲ್ಟಿಗೂ ಬಿಗ್‌ಬಾಸ್ ಶೋ ಬಂದ್ ಆಗಿದ್ದಕ್ಕೂ ಏನು ಸಂಬಂಧ? ನಟ್ಟು ಬೋಲ್ಟ್ ವಿಚಾರಕ್ಕೂ ಇದ್ದಕ್ಕೂ ಸಂಬಂಧವೇ ಇಲ್ಲ. ನಟ ಸುದೀಪ್ (Kiccha Sudeep) ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ನಡುವೆ ತಂದಿಡೋದು ಬೇಡ ಎಂದಿದ್ದಾರೆ. ಇದನ್ನೂ ಓದಿ: ಕಲಾವಿದರ ಮೇಲೆ ಸೇಡು ತೀರಿಸಿದ ನಟ್ಟು ಬೋಲ್ಟ್‌ ಮಿನಿಸ್ಟರ್‌- ಜೆಡಿಎಸ್‌ ಕಿಡಿ

    ಜೆಡಿಎಸ್ ಅವರು ಹೇಳ್ತಾರೆ. ಅವಘಡಗಳು ನಡೆದ್ರೆ ಯಾರು ಹೊಣೆ ಆಗ್ತಾರೆ? ಇದೇ ಭಾಗದಲ್ಲಿ ಮಂಗಳವಾರ ಸಿಲಿಂಡರ್ ಅವಘಡ ಆಗಿದೆ. ಇದು ಇಂಡಸ್ಟಿçಯಲ್ ಪ್ರದೇಶ ಆಗಿರುವುದರಿಂದ ಅವಘಡಗಳು ಆಗುತ್ತಿವೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತ ತೆಗೆದುಕೊಂಡಿರುವ ನಿರ್ಧಾರ ಎಂದು ಸಮರ್ಥಿಸಿಕೊಂಡರು. ಇದನ್ನೂ ಓದಿ: ಬಿಗ್‌ಬಾಸ್‌ಗೆ ಬೀಗ| 2 ಸಾವಿರ ಉದ್ಯೋಗಿಗಳಿಗೆ ಸಮಸ್ಯೆ – ಇಂದು ಮಧ್ಯಾಹ್ನ ತುರ್ತು ಅರ್ಜಿ ವಿಚಾರಣೆ

    ಜಿಲ್ಲಾಡಳಿತ 15 ದಿನ ಕಾಲಾವಕಾಶ ಕೊಟ್ಟಿರುವ ವಿಚಾರ ನನಗೆ ಗೊತ್ತಿಲ್ಲ. ಡಿಸಿಎಂ ಅವರು ದ್ವೇಷದ ರಾಜಕಾರಣ ಮಾಡಲ್ಲ. ಡಿಕೆಶಿ ಅವರಿಗೆ ಯಾವುದೇ ಹಳೆ ದ್ವೇಷ ಇಲ್ಲ. ಡಿಕೆಶಿ ಅವರೇ ಬಿಗ್‌ಬಾಸ್ ಶೋಗೆ ಅವಕಾಶ ಕೊಡಿ ಅಂತಾ ಹೇಳಿದ್ದಾರೆ. ಹಾಗಿದ್ದ ಮೇಲೆ ದ್ವೇಷದ ವಿಚಾರ ಎಲ್ಲಿಂದ ಬಂತು ಎನ್ನುವ ಮೂಲಕ ಡಿಸಿಎಂ ಪರ ಬ್ಯಾಟ್ ಬೀಸಿದರು.

    ಜಿಲ್ಲಾಡಳಿತವು ಜಾಲಿವುಡ್ ಸ್ಟುಡಿಯೋದವರಿಗೆ ನೋಟಿಸ್ ಕೊಟ್ಟು, ಬಿಗ್‌ಬಾಸ್ ಮನೆಗೆ ಬೀಗ ಹಾಕಿದ್ದಾರೆ. ಜಾಲಿವುಡ್ ಅವರು ಎನ್‌ಓಸಿ ಪಡೆದು ಕಾರ್ಯಕ್ರಮ ನಡೆಸಲಿ. ಬಿಗ್‌ಬಾಸ್ ಶೋ ಅನ್ನು ಒಂದು ತಿಂಗಳು ಮುಂದಕ್ಕೆ ಹಾಕಿದ್ರೆ ಪ್ರಾಣ ಹೋಗಲ್ಲ ಎಂದರು.

  • ಜಾಲಿವುಡ್‌ ಸ್ಟುಡಿಯೋಸ್‌ಗೆ ಬಿತ್ತು ಬೀಗ – ಬಿಗ್‌ ಬಾಸ್‌ ಸ್ಥಗಿತಕ್ಕೆ ಸೂಚನೆ

    ಜಾಲಿವುಡ್‌ ಸ್ಟುಡಿಯೋಸ್‌ಗೆ ಬಿತ್ತು ಬೀಗ – ಬಿಗ್‌ ಬಾಸ್‌ ಸ್ಥಗಿತಕ್ಕೆ ಸೂಚನೆ

    ರಾಮನಗರ: ಪರಿಸರ ನಿಯಮ ಉಲ್ಲಂಘನೆ ಆರೋಪದಲ್ಲಿ ಜಾಲಿವುಡ್‌ ಸ್ಟುಡಿಯೋಸ್‌ಗೆ (Jollywood Studios) ಬೀಗ ಬಿದ್ದಿದೆ. ಬಿಗ್‌ ಬಾಸ್‌ (Bigg Boss  Kannada 12) ನಡೆಯುತ್ತಿರುವ ಜಾಗಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಬೀಗ ಜಡಿದಿದ್ದಾರೆ.

    ನಿಯಮ ಮೀರಿ ಜಾಲಿವುಡ್‌ ಸ್ಟುಡಿಯೋಸ್‌ ನಡೆಸುತ್ತಿರುವ ಬಗ್ಗೆ ನೋಟಿಸ್‌ ನೀಡಲಾಗಿತ್ತು. ಆದರೆ, ಯಾವುದೇ ಪಾಲನೆ ಆಗದ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಇಂದು ಸಂಜೆ ಸ್ಟುಡಿಯೋಸ್‌ಗೆ ಭೇಟಿ ನೀಡಿದರು. ಇದನ್ನೂ ಓದಿ: ಜಾಲಿವುಡ್‌ ಸ್ಟುಡಿಯೋಸ್‌ ಬಂದ್‌ಗೆ ನೋಟಿಸ್ -‌ ಬಿಗ್‌ ಬಾಸ್‌ ಮನೆಗೆ ಬೀಳುತ್ತಾ ಬೀಗ?

    ರಾಮನಗರ ತಹಶೀಲ್ದಾರ್‌ ತೇಜಸ್ವಿನಿ, ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರ ಸ್ಥಳಕ್ಕೆ ಭೇಟಿ ನೀಡಿ ಜಾಲಿವುಡ್‌ ಒಳಗೆ ಪರಿಶೀಲನೆ ನಡೆಸಿದರು.

    ನೋಟಿಸ್ ತೆಗೆದುಕೊಳ್ಳಲು ಜಾಲಿವುಡ್ ಆಡಳಿತ ಮಂಡಳಿ ನಕಾರ ಮಾಡಿತು. ಆಗ ಜಾಲಿವುಡ್ ಸ್ಟುಡಿಯೋಸ್‌ ಸಿಬ್ಬಂದಿಯನ್ನು ತಹಶೀಲ್ದಾರ್ ತರಾಟೆಗೆ ತೆಗೆದುಕೊಂಡರು. ನೋಟಿಸ್ ಸ್ವೀಕರಿಸೋದಕ್ಕೆ ಬರಲು ಅರ್ಧ ಗಂಟೆ ಬೇಕಾ ಎಂದು ಗರಂ ಆದರು. ಇದನ್ನೂ ಓದಿ: ಅಕ್ಕ, ಬಾವನ ಜೊತೆ ಗಲಾಟೆ – ಬಿಗ್‌ ಬಾಸ್‌ ರಂಜಿತ್‌ ಮೇಲೆ ದೂರು ದಾಖಲು

    ಕೂಡಲೇ ನೋಟೀಸ್ ತೆಗೆದುಕೊಳ್ಳಿ. ಅಧಿಕೃತವಾಗಿ ಇಂದು ಸೀಜ್ ಮಾಡ್ತೀವಿ. ಸಾರ್ವಜನಿಕರಿಗೆ ತೊಂದರೆ ಆಗದಂತೆ ಸಂಜೆ 7 ಗಂಟೆ ವರೆಗೂ ಎಕ್ಸಿಟ್ ಗೇಟ್ ಓಪನ್ ಮಾಡಿಕೊಳ್ಳಿ. ಕೂಡಲೇ ಜಾಲಿವುಡ್ ಸ್ಟುಡಿಯೋ ಕ್ಲೋಸ್ ಮಾಡುವಂತೆ ಸೂಚನೆ ನೀಡಿದರು.

    ಕೊನೆಗೆ ಜಾಲಿವುಡ್ ಆಡಳಿತ ಮಂಡಳಿ ನೋಟಿಸ್‌ ಸ್ವೀಕರಿಸಿತು. ನಾಳೆಯಿಂದ ಜಾಲಿವುಡ್ ಸ್ಟುಡಿಯೋಸ್‌ ಯಾವುದೇ ಕಾರ್ಯಾಚರಣೆ ಮಾಡಬಾರದು. ಎಲ್ಲಾ ರೀತಿಯ ಕಾರ್ಯಚಟುವಟಿಕೆ ಸ್ಥಗಿತ ಮಾಡುವಂತೆ ಸೂಚನೆ ನೀಡಲಾಯಿತು. ಸ್ಟುಡಿಯೋಸ್‌ ಸ್ವತಃ ತಾವೇ ನಿಂತು ತಹಶೀಲ್ದಾರ್‌ ಬೀಗ ಹಾಕಿದರು. ಬಿಗ್‌ ಬಾಸ್‌ ಸ್ಥಗಿತಕ್ಕೂ ಸೂಚನೆ ನೀಡಿದರು.

    ಬಿಗ್ ಬಾಸ್‌ನಿಂದ ಆಚೆ ಬರ್ತಾರಾ ಸ್ಪರ್ಧಿಗಳು?
    ಸೀಲ್‌ಡೌನ್ ಆದಮೇಲೆ ಒಳಗೆ ಯಾವುದೇ ಆಕ್ಟಿವಿಟಿ ನಡೆಯುವಂತಿಲ್ಲ. ಯಾವುದೇ ವ್ಯಕ್ತಿಗಳೂ ಇರುವಂತಿಲ್ಲ. ಹಾಗಾಗಿ, ಬಿಗ್ ಬಾಸ್ ಮನೆಯಿಂದ ಸ್ಪರ್ಧಿಗಳನ್ನ ಆಚೆ ಕಳುಹಿಸುವ ಸಾಧ್ಯತೆ ಇದೆ.

  • ಜಾಲಿವುಡ್‌ ಸ್ಟುಡಿಯೋಸ್‌ ಬಂದ್‌ಗೆ ನೋಟಿಸ್ -‌ ಬಿಗ್‌ ಬಾಸ್‌ ಮನೆಗೆ ಬೀಳುತ್ತಾ ಬೀಗ?

    ಜಾಲಿವುಡ್‌ ಸ್ಟುಡಿಯೋಸ್‌ ಬಂದ್‌ಗೆ ನೋಟಿಸ್ -‌ ಬಿಗ್‌ ಬಾಸ್‌ ಮನೆಗೆ ಬೀಳುತ್ತಾ ಬೀಗ?

    – ಅರಣ್ಯ ಸಚಿವ ಈಶ್ವರ ಖಂಡ್ರೆ ಸಮರ್ಥನೆ ಏನು?

    ರಾಮನಗರ: ಜಿಲ್ಲೆಯ ಬಿಡದಿ (Bidadi) ಬಳಿಯಿರುವ ವೆಲ್ಸ್ ಸ್ಟುಡಿಯೋಸ್ & ಎಂಟರ್‌ಟೈನ್ಮೆಂಟ್ ಪ್ರೈ.ಲಿ. (Jollywood Studios) ಜಲ ಕಾಯಿದೆ, ವಾಯು ಕಾಯಿದೆಯಡಿ ಅನುಮತಿ ಪಡೆಯದೆ ಕಾರ್ಯಾಚರಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ನೋಟಿಸ್ ನೀಡಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದರು.

    ವಿಕಾಸಸೌಧದಲ್ಲಿ ಮಂಗಳವಾರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಬಿಗ್ ಬಾಸ್ (Bigg Boss Kannada 12) ಕಾರ್ಯಕ್ರಮ ನಡೆಯುತ್ತಿರುವ ಸ್ಟುಡಿಯೋಗೆ ನೋಟಿಸ್ ನೀಡಿರುವ ವಿಚಾರ ತಿಳಿಯಿತು. ಈ ಬಗ್ಗೆ ಮಾಹಿತಿ ಪಡೆದಾಗ, ರಾಮನಗರ ಪ್ರಾದೇಶಿಕ ಕಚೇರಿಯಿಂದ 2024ರಲ್ಲೇ 2 ಬಾರಿ ನೋಟಿಸ್ ನೀಡಿದ್ದರೂ ಅನುಪಾಲನೆ ಮಾಡಿದ ಕಾರಣ ಈ ನೋಟಿಸ್ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದರು. ಇದನ್ನೂ ಓದಿ: ಅಕ್ಕ, ಬಾವನ ಜೊತೆ ಗಲಾಟೆ – ಬಿಗ್‌ ಬಾಸ್‌ ರಂಜಿತ್‌ ಮೇಲೆ ದೂರು ದಾಖಲು

    ಇಲ್ಲಿ ಎಸ್‌ಟಿಪಿ ಕಾರ್ಯನಿರ್ವಹಣೆ ಸೇರಿದಂತೆ ಸಮರ್ಪಕವಾಗಿ ತಾಜ್ಯ ವಿಲೇವಾರಿ ಆಗುತ್ತಿಲ್ಲ. ಜನರೇಟರ್ ಸೆಟ್‌ಗಳಿದ್ದು, ಅದಕ್ಕೂ ಅನುಮತಿ ಪಡೆದಿಲ್ಲ ಎಂದು ತಿಳಿಸಿದ್ದಾರೆ. ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಹೀಗಾಗಿ, ಮಂಡಳಿ ಕ್ರಮ ಕೈಗೊಂಡಿದೆ ಎಂದು ಹೇಳಿದರು.