Tag: ಜಾನ್ ರೈಟ್

  • ನನ್ನ ದವಡೆ ಒಡೆಯಲು ಜಾನ್ ರೈಟ್ ಕಾರಣ- ರಹಸ್ಯ ಬಿಚ್ಚಿಟ್ಟ ಅನಿಲ್ ಕುಂಬ್ಳೆ

    ನನ್ನ ದವಡೆ ಒಡೆಯಲು ಜಾನ್ ರೈಟ್ ಕಾರಣ- ರಹಸ್ಯ ಬಿಚ್ಚಿಟ್ಟ ಅನಿಲ್ ಕುಂಬ್ಳೆ

    ವೆಲ್ಲಿಂಗ್ಟನ್: ದವಡೆ ಒಡೆದ್ರು ತಲೆಗೆ ದೊಡ್ಡ ಬ್ಯಾಂಡೇಜ್ ಸುತ್ತಿಕೊಂಡು ಅದ್ಬುತ ಬೌಲಿಂಗ್ ಮಾಡಿದ್ದ ಕನ್ನಡಿಗ ಅನಿಲ್ ಕುಂಬ್ಳೆ ಇತಿಹಾಸ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ವೆಸ್ಟ್ ಇಂಡೀಸ್ ವಿರುದ್ಧದ ಈ ಪಂದ್ಯ ಅನಿಲ್ ಕುಂಬ್ಳೆ ಅವ್ರ ಬದ್ಧತೆಗೆ(ಸಮರ್ಪಣೆ) ಸಾಕ್ಷಿ ಯಾಗಿತ್ತು. ಮೊನ್ನೆ ಮೊನ್ನೆ ಪ್ರಧಾನಿ ನರೇಂದ್ರ ಮೋದಿ ಕೂಡಾ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ಅನಿಲ್ ಕುಂಬ್ಳೆ ಸಾಧನೆ ಹಾಡಿ ಹೊಗಳಿದ್ದರು. ಸದ್ಯ ಅಂದು ತಮ್ಮ ದವಡೆ ಒಡೆತಕ್ಕೆ ಅಸಲಿ ಕಾರಣ ಏನು ಎಂಬ ರಹಸ್ಯವನ್ನ ಸ್ವತಃ ಅನಿಲ್ ಕುಂಬ್ಳೆ ಬಿಚ್ಚಿಟ್ಟಿದ್ದಾರೆ. ಶುಕ್ರವಾರ ನಡೆದ ಟೀಂ ಇಂಡಿಯಾ ಮತ್ತು ನ್ಯೂಜಿಲೆಂಡ್ ಪಂದ್ಯದ ವೇಳೆ ವೀಕ್ಷಕ ವಿವರಣೆಗೆ ಆಗಮಿಸಿದ ಕುಂಬ್ಳೆ ಆ ಘಟನೆಯ ಬಗ್ಗೆ ಸತ್ಯ ಬಿಚ್ಚಿಟ್ಟಿದ್ದಾರೆ.

    ಅಂದು ಅನಿಲ್ ಕುಂಬ್ಳೆ ದವಡೆ ಒಡೆದುಕೊಳ್ಳೋಕೆ ಕಾರಣ ಕೋಚ್ ಜಾನ್ ರೈಟ್ ಅಂತೆ. ಆಂಟಿಗೋವಾದಲ್ಲಿ ನಡೆದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ 2ನೇ ನ್ಯೂ ಬಾಲ್ ತೆಗೆದುಕೊಂಡಿತ್ತು. ಇಂಡಿಯಾದ 6 ನೇ ವಿಕೆಟ್ ಪತನದ ನಂತರ ಕೀಪರ್ ಅಜಯ್ ರಾತ್ರಾ ಬ್ಯಾಟಿಂಗ್‍ಗೆ ಬರಬೇಕಿತ್ತು. ಆದರೆ ಹೊಸ ಬಾಲ್‍ಗೆ ಅಜಯ್ ರಾತ್ರಾ ಅಷ್ಟು ಚೆನ್ನಾಗಿ ಆಡುವುದಿಲ್ಲ. ನೀನು ಚೆನ್ನಾಗಿ ಆಡ್ತೀಯಾ ಹೀಗಾಗಿ ಬ್ಯಾಟಿಂಗ್‍ಗೆ ಹೋಗುವಂತೆ ಜಾನ್ ರೈಟ್ ತಮ್ಮನ್ನು ಕಳುಹಿಸಿದ್ದರು. 2ನೇ ನ್ಯೂ ಬಾಲ್ ನಾನು ಆಡೋವಾಗ ದವಡೆಗೆ ಬಿದ್ದು ಗಾಯವಾಗಿತ್ತು ಎಂದು ವಿವರಿಸಿದ್ದಾರೆ.

    ದವಡೆಗೆ ಬಿದ್ದ ಬಳಿಕ ನಾನು ವೈದ್ಯರಿಗೆ ತೋರಿಸಿದೆ. ವೈದ್ಯರು ಏನು ತೊಂದರೆ ಇಲ್ಲವೆಂದು ಹೇಳಿದ್ರು. ಆದರೆ ನನಗೆ ದವಡೆ ಸಮಸ್ಯೆ ಆಗಿದೆ ಎಂಬ ಫೀಲ್ ಆಗ್ತಿತ್ತು. ಹೀಗಾಗಿ 2ನೇ ಓಪಿನಿಯನ್ ತೆಗೆದುಕೊಳ್ಳಲು ಮುಂದಾದೆ. ಆಗ ಮೂಳೆ ಮುರಿದಿರೋದು ಗೊತ್ತಾಯ್ತು. ವೈದ್ಯರು ಮತ್ತೆ ಬೌಲಿಂಗ್ ಮಾಡಬೇಡಿ ಎಂದು ಹೇಳಿದ್ದರು. ಅಂದಿನ ಪಂದ್ಯದಲ್ಲಿ ಭಾರತ 3 ಜನ ಫಾಸ್ಟ್ ಬೌಲರ್, ಇಬ್ಬರು ಸ್ಪಿನ್ ಆಟಗಾರರೊಂದಿಗೆ ಕಣಕ್ಕಿಳಿದಿತ್ತು. ಕುಂಬ್ಳೆ ಗಾಯವಾದ್ದರಿಂದ ಸಚಿನ್ ತೆಂಡೂಲ್ಕರ್ ಮಾತ್ರ ಸ್ಪಿನ್ ಜವಾಬ್ದಾರಿ ವಹಿಸಬೇಕಿತ್ತು. ಇದನ್ನು ಅರಿತು ಪಿಸಿಯೋಥೆರಪಿಯನ್ನು ಪಡೆದು ಬೌಲಿಂಗ್ ಮಾಡುತ್ತೇನೆ ಎಂದು ಕೇಳಿದ್ದೆ. ಆಗ ಫಿಸಿಯೋಥೆರಪಿ ತಮಾಷೆ ಮಾಡಬೇಡಿ ಎಂದಿದ್ದರು. ಆದರೆ ಬೌಲಿಂಗ್ ಮಾಡ್ತೀನಿ ಎಂದು ದೊಡ್ಡ ಬ್ಯಾಂಡೇಜ್ ಕಟ್ಟಿಕೊಂಡು ಬೌಲ್ ಮಾಡಿದ್ದೆ ಎಂದು ಅಂದಿನ ಘಟನೆಯ ಸಂಪೂರ್ಣ ಮಾಹಿತಿಯನ್ನು ನೀಡಿದರು.

    ಪಂದ್ಯದ ಸಂದರ್ಭದಲ್ಲಿ ದವಡೆಗೆ ಯಾವುದೇ ತೊಂದರೆಯಾಗದಂತೆ ಎರಡು ಕಡೆ ಗಟ್ಟಿಯಾಗಿ ಬ್ಯಾಂಡೇಜ್ ಕಟ್ಟಿಕೊಂಡಿದ್ದ ಕುಂಬ್ಳೆ ಅವರು 14 ಓವರ್ ಬೌಲಿಂಗ್ ಮಾಡಿ 29 ರನ್ ಮಾತ್ರ ನೀಡಿದ್ದರು. ಅಲ್ಲದೇ ಎದುರಾಳಿ ತಂಡದ ದಿಗ್ಗಜ ಆಟಗಾರ ಲಾರಾ ವಿಕೆಟ್ ಕೂಡಾ ಕಬಳಿಸಿದ್ದರು. ತಮ್ಮ ಬದ್ಧತೆಯ ಮೂಲಕ ಅನಿಲ್ ಕುಂಬ್ಳೆ ಕ್ರಿಕೆಟ್ ಅಭಿಮಾನಿಗಳ ಮನಸ್ಸನ್ನು ಗೆದಿದ್ದರು.

  • ಗಂಗೂಲಿಗೆ ಚಾಪೆಲ್ ಸಂಚನ್ನು ಮೊದಲು ತಿಳಿಸಿದ ವ್ಯಕ್ತಿ ನಾನು: ಸೆಹ್ವಾಗ್

    ಗಂಗೂಲಿಗೆ ಚಾಪೆಲ್ ಸಂಚನ್ನು ಮೊದಲು ತಿಳಿಸಿದ ವ್ಯಕ್ತಿ ನಾನು: ಸೆಹ್ವಾಗ್

    ಕೋಲ್ಕತ್ತಾ: ಮಾಜಿ ಕೋಚ್ ಗ್ರೇಗ್ ಚಾಪೆಲ್ ಅವರ ಸಂಚಿನ ವಿಚಾರವನ್ನು ಮಾಜಿ ನಾಯಕ ಸೌರವ್ ಗಂಗೂಲಿ ಅವರಿಗೆ ತಿಳಿಸಿದ ಮೊದಲ ವ್ಯಕ್ತಿ ನಾನು ಎಂದು ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ.

    ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, 2005ರ ಜಿಂಬಾಬ್ವೆ ಪ್ರವಾಸದಲ್ಲಿ ಪಂದ್ಯದ ವೇಳೆ ಹೊಟ್ಟೆನೋವು ಬಂದಿತ್ತು. ಹೀಗಾಗಿ 5 ಓವರ್ ಕಾಲ ನನಗೆ ಬ್ರೇಕ್ ಬೇಕು ಎಂದು ಅಂಪೈರ್ ಗೆ ತಿಳಿಸಿದ್ದೆ. ಬ್ರೇಕ್ ಪಡೆದು ಪೆವಿಲಿಯನ್ ಗೆ ತೆರಳಿದ್ದಾಗ ನನ್ನ ಮುಂದೆ ಚಾಪೆಲ್ ಕುಳಿತ್ತಿದ್ದರು. ಈ ವೇಳೆ ಚಾಪೆಲ್ ಅನುಮಾನಾಸ್ಪದವಾಗಿ ಏನೋ ಬರೆದು ಬಿಸಿಸಿಐಗೆ ಮೇಲ್ ಮಾಡಿದ್ದನ್ನು ಗಮನಿಸಿದೆ. ಕೂಡಲೇ ಈ ವಿಚಾರವನ್ನು ನಾನು ಗಂಗೂಲಿಗೆ ತಿಳಿಸಿದೆ. ಮಹತ್ವದ ವಿಚಾರದ ಬಗ್ಗೆ ಚಾಪೆಲ್ ಮೇಲ್ ಮಾಡಿದ್ದಾರೆ ಎಂದು ಗಂಗೂಲಿ ಅವರಲ್ಲಿ ಹೇಳಿದ್ದೆ ಎಂದು ಅಂದಿನ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.

    ಗಂಗೂಲಿ ಮತ್ತು ಮಾಜಿ ಕೋಚ್ ಜಾನ್ ರೈಟ್ ನನ್ನನ್ನು ಆರಂಭಿಕ ಬ್ಯಾಟ್ಸ್ ಮನ್ ಆಗಿ ಕಣಕ್ಕೆ ಇಳಿಸಿದ್ದನ್ನು ಹೇಳಿಕೊಂಡ ಸೆಹ್ವಾಗ್, ನನ್ನ ಯಾಕೆ ಓಪನಿಂಗ್ ಬ್ಯಾಟ್ಸ್ ಮನ್ ಆಗಿ ಕಳುಹಿಸುತ್ತಿದ್ದೀರಿ ಎಂದು ಗಂಗೂಲಿ ಅವರನ್ನು ಕೇಳಿದ್ದೆ. ಅದಕ್ಕೆ ಅವರು, ನಿನ್ನಲ್ಲಿ ಸಾಮರ್ಥ್ಯವಿದೆ ಎಂದು ಉತ್ತರಿಸಿದರು. ಈ ಉತ್ತರ ಬಂದ ಕೂಡಲೇ ನಾನು, 1998ರಿಂದ ನೀವು ಆರಂಭಿಕ ಆಟಗಾರರಾಗಿ ಕಣಕ್ಕೆ ಇಳಿಯುತ್ತಿದ್ದೀರಿ. ನಾನು ಮಧ್ಯಮ ಕ್ರಮಾಂಕದಲ್ಲಿ ಬರುತ್ತೇನೆ. ಯಾಕೆ ನೀವು ಸಚಿನ್ ಜೊತೆಗೆ ಇಳಿಯಬಾರದು ಎಂದು ಮರು ಪ್ರಶ್ನೆ ಹಾಕಿದೆ.

    ಈ ಪ್ರಶ್ನೆಗೆ ಜಾಸ್ತಿ ನನ್ನಲ್ಲಿ ಪ್ರಶ್ನೆ ಕೇಳಬೇಡ. ಆರಂಭಿಕ ಆಟಗಾರನಾಗಿ ಇಳಿಯುವುದಿದ್ದರೆ ಇಳಿ. ಒಂದು ವೇಳೆ ಸಾಧ್ಯವಾಗದೇ ಇದ್ದರೆ ಬೆಂಚ್ ಮೇಲೆ ಕುಳಿತಿಕೋ ಎಂದು ಖಡಕ್ ಆಗಿ ಗಂಗೂಲಿ ಹೇಳಿದರು. ಇದಕ್ಕೆ ನಾನು ಅವರಲ್ಲಿ, ಒಂದು ವೇಳೆ ಮೊದಲ ಆಟಗಾರನಾಗಿ ಇಳಿದು ವೈಫಲ್ಯಗೊಂಡರೆ ಮಧ್ಯಮ ಕ್ರಮಾಂಕದಲ್ಲಿ ಕಳುಹಿಸಬೇಕು ಎಂದು ಕೇಳಿಕೊಂಡಿದ್ದೆ. ನನ್ನ ಭರವಸೆಯನ್ನು ದಾದಾ ಒಪ್ಪಿಕೊಂಡರು. ನಂತರ ನಾನು ಕೋಚ್ ಜಾನ್ ರೈಟ್ ಬಳಿ ತೆರಳಿ ಗಂಗೂಲಿ ಅವರ ಆಸೆಯನ್ನು ನಾನು ಈಡೇರಿಸುತ್ತೇನೆ ಎಂದು ತಿಳಿಸಿದೆ ಎಂಬುದಾಗಿ ಸೆಹ್ವಾಗ್ ವಿವರಿಸಿದರು.

    ಇಂಗ್ಲೆಂಡ್ ವಿರುದ್ಧ ನಾನು ಮೊದಲ ಪಂದ್ಯವನ್ನು ಆಡಿದ್ದು 84 ರನ್ ಗಳಿಸಿ ಔಟಾಗಿದ್ದೆ. ಇದಾದ ನಂತರ ಸಚಿನ್, ಗಂಗೂಲಿ, ದ್ರಾವಿಡ್ ನನ್ನನ್ನು `ಸ್ಟುಪಿಡ್’ ಎಂದು ಕರೆದರು. ಯಾಕೆ ಈ ರೀತಿ ಕರೆದಿದ್ದು ಎಂದು ಕೇಳಿದ್ದಕ್ಕೆ ಅವರು, ಲಾರ್ಡ್ಸ್ ಮೈದಾನದಲ್ಲಿ ಯಾರೂ ಮೊದಲ ಪಂದ್ಯದಲ್ಲಿ ಶತಕ ಹೊಡೆದಿರಲಿಲ್ಲ. ಆ ಸುವರ್ಣ ಅವಕಾಶವನ್ನು ನೀನು ಕಳೆದುಕೊಂಡಿದ್ದಿ ಎಂದು ತಿಳಿಸಿದರು. ಅದಕ್ಕೆ ನಾನು, ಕನಿಷ್ಟ ಪಕ್ಷ 84 ರನ್ ಹೊಡೆದಿದ್ದಕ್ಕೆ ನನಗೆ ಸಂಪೂರ್ಣ ತೃಪ್ತಿ ಸಿಕ್ಕಿದೆ ಎಂದು ಅಂದು ನಾನು ಹೇಳಿದ್ದೆ ಎಂದು ತಿಳಿಸಿದರು.

    2005 ರಿಂದ 2007ರವರೆಗೆ ಚಾಪೆಲ್ ಟೀಂ ಇಂಡಿಯಾದ ಕೋಚ್ ಆಗಿ ನೇಮಕವಾಗಿದ್ದರು. ಜಿಂಬಾಬ್ವೆ ಪ್ರವಾಸದಲ್ಲೇ ಸೌರವ್ ಗಂಗೂಲಿ ಅವರನ್ನು ತಂಡದಿಂದ ಚಾಪೆಲ್ ಹೊರಹಾಕಿದ್ದರು. ಇವರ ಅವಧಿಯಲ್ಲಿ ಟೀಂ ಇಂಡಿಯಾ ಡ್ರೆಸ್ಸಿಂಗ್ ರೂಂ ವಿಚಾರದಿಂದಲೇ ಹೆಚ್ಚು ಸುದ್ದಿಯಾಗುತಿತ್ತು. ಗಂಗೂಲಿ, ಸೆಹ್ವಾಗ್ ಅಲ್ಲದೇ ಸಚಿನ್ ತೆಂಡೂಲ್ಕರ್, ಹರ್ಭಜನ್ ಸಿಂಗ್, ಜಹೀರ್ ಖಾನ್ ಸಹ ಚಾಪೆಲ್ ಹಲವು ವೇದಿಕೆಗಳಲ್ಲಿ ಚಾಪೆಲ್ ಅವರ ವಿರುದ್ಧ ಅಸಮಾಧಾವನ್ನು ವ್ಯಕ್ತಪಡಿಸಿದ್ದರು.