Tag: ಜಲಸಮಾಧಿ

  • Wayanad Landslide | ದಯವಿಟ್ಟು ಅಳಿಯನ ಮೃತ ದೇಹ ಹುಡುಕಿ, ಕೊನೆ ಬಾರಿ ನೋಡ್ತಿವಿ!

    Wayanad Landslide | ದಯವಿಟ್ಟು ಅಳಿಯನ ಮೃತ ದೇಹ ಹುಡುಕಿ, ಕೊನೆ ಬಾರಿ ನೋಡ್ತಿವಿ!

    ವಯನಾಡು: ಪ್ರಕೃತಿ ಮಾತೆಯ ಅರ್ಧ ಸೆಕೆಂಡ್ ಮುನಿಸಿಗೆ (Wayanad Landslide) ನೂರು ಜನರ ಬದುಕು ಮುಗಿದಿದೆ. ನೂರಾರು ಮನೆಗಳಲ್ಲಿ ಕಣ್ಣೀರ ಕೋಡಿ ಹರಿದಿದೆ. ಕೊಚ್ಚಿ ಹೋದ ವ್ಯಕ್ತಿ ಸಂಬಂಧಿಕರು ದಯವಿಟ್ಟು ಮೃತದೇಹ ತೋರಿಸಿ ಕೊನೆಯ ಬಾರಿ ನೋಡುತ್ತೇನೆ ಎಂದು ಸಿಕ್ಕ ಸಿಕ್ಕವರಿಗೆ ಕೈ ಮುಗಿದು ಬೇಡಿಕೊಂಡರೆ ಇನ್ನು ಕೆಲವರು ನದಿ ತೀರದಲ್ಲಿರುವ ಕುಟುಂಬ ಸದಸ್ಯರನ್ನು ಹುಡುಕುತ್ತಿದ್ದಾರೆ.

    ಮಾವನ ಅರಣ್ಯರೋಧನ
    ನನ್ನ ಎರಡು ವರ್ಷದ ಅಳಿಯನ ಮೃತ ದೇಹವನ್ನು ದಯವಿಟ್ಟು ಕೊಡಿಸಿ ಅಂತಾ ಮಾವನ ಕಣ್ಣೀರು ಸುರಿಸುತ್ತಿದ್ದಾರೆ. ಇದು ಮಂಡ್ಯ (Mandya) ಜಿಲ್ಲೆಯ ಕೆ.ಆರ್. ಪೇಟೆಯ ಸಿದ್ದೇಶ್ ಅವರ ಅರಣ್ಯರೋದನ.  ಇದನ್ನೂ ಓದಿ: Wayanad Landslide: 6 ತಿಂಗಳ ಹಿಂದೆ ಗೃಹಪ್ರವೇಶ, ಈಗ ಆ ಮನೆ ಸಮೇತ ಜಲ ಸಮಾಧಿ!

    ನನ್ನ ಅಳಿಯನನ್ನು ಹುಡುಕಿಕೊಡಿ. ಕೊನೆ ಪಕ್ಷ ಅವನ ಮೃತ ದೇಹವಾದರೂ ಕೊಡಿ. ಕಣ್ಣು ತುಂಬಿಕೊಂಡು ಮಣ್ಣು ಮಾಡುತ್ತೇವೆ ಎಂದು ಮೆಪ್ಪಾಡಿಯಲ್ಲಿ ಸಿಕ್ಕ ಸಿಕ್ಕವರ ಕೈ ಮುಗಿಯುತ್ತಿದ್ದಾರೆ. ಸಿದ್ದೇಶ್‌ ತಮ್ಮ ತಂಗಿಯನ್ನು ಮಂಡಕೈ ಗ್ರಾಮದ ಅನಿಲ್‌ ಅವರಿಗೆ ಮದುವೆ ಮಾಡಿಕೊಟ್ಟಿದ್ದರು.

    ಅನಿಲ್ ಯುರೋಪ್‌ನಲ್ಲಿ ಕೆಲಸ ಮಾಡುತ್ತಿದ್ದು ರಜೆ ಮೇಲೆ ಊರಿಗೆ ಬಂದಿದ್ದರು. ಜಲಪ್ರಳಯದಲ್ಲಿ ಅನಿಲ್ ಅವರಿಗೆ ಗಂಭೀರ ಗಾಯವಾಗಿದ್ದು ಸಾವು ಬದುಕಿನ ಮಧ್ಯೆ ಹೋರಾಟ ಮಾಡುತ್ತಿದ್ದಾರೆ. ಇವರ ತಾಯಿ ಹಾಗೂ ಎರಡು ವರ್ಷದ ಮಗ ನೀರು ಪಾಲಾಗಿದ್ದಾರೆ. ತನ್ನ ತಾಯಿಯ ಕೈಹಿಡಿದು ಮಲಗಿದ್ದ ಮಗು ಯಾವ ಕ್ಷಣದಲ್ಲಿ ಕೈ ಜಾರಿತೋ ಗೊತ್ತೇ ಆಗಿಲ್ಲ. ಮಗು ಕೆಸರಲ್ಲಿ ಮುಳುಗಿದೆ. ಇದನ್ನೂ ಓದಿ: Wayanad Landslide| ಆರು ಕೈ, ಮೂರು ತಲೆ, ಎಂಟು ಕಾಲು, ಐದು ತಲೆ ಇರದ ದೇಹ!

    ತನ್ನವರ ಹುಡುಕುತ್ತಾ ನದಿ ತೀರ ಅಲೆಯುತ್ತಿದ್ದಾನೆ ಮೈಸೂರಿಗ
    ಜಲಪ್ರಳಯದಲ್ಲಿ ಅಕ್ಷರಶಃ ಕೊಚ್ಚಿ ಹೋದ ಚೂರಲ್ಮಲದ (Chooralmala)ಮೈಸೂರು ಭಾಗದ ಒಂದು ದೊಡ್ಡ ಕುಟುಂಬ ವಾಸವಿತ್ತು. ಮೈಸೂರಿನ ಹುಣಸೂರು ಮೂಲದ ರವಿ 40 ವರ್ಷದ ಹಿಂದೆ ಈ ಪ್ರದೇಶಕ್ಕೆ ಪ್ರವಾಸ ಬಂದಿದ್ದರು. ಈ ಸ್ಥಳ ಇಷ್ಟವಾಗಿ ಈಗ ಇಲ್ಲೇ ನೆಲೆಸಿದ್ದಾರೆ. ಇವರ ಜೊತೆ ಇವರು ಸಂಬಂಧಿಗಳು ಬಂದು ದೊಡ್ಡ ಕುಟುಂಬವೇ ಆಗಿದೆ‌. ಈಗ ಇವರು ಅಪ್ಪಟ ಕೇರಳಿಗರೇ ಆಗಿದ್ದಾರೆ. ಈಗ ಈ ಕುಟುಂಬದ 11 ಮಂದಿ ನಾಪತ್ತೆಯಾಗಿದ್ದಾರೆ.

     

    ರವಿ ಅವರು ಚೂರಲ್ಮಲ ಎತ್ತರದ ಪ್ರದೇಶದಲ್ಲಿ ವಾಸವಾಗಿರುವ ಕಾರಣ ಬಚಾವ್ ಆಗಿದ್ದಾರೆ. ಆದರೆ ಕುಟುಂಬದ 11 ಜನರ ನಾಪತ್ತೆಯಿಂದ ರವಿ ಈಗ ಕಂಗಾಲಾಗಿದ್ದಾರೆ. ಕೋಲು ಹಿಡಿದುಕೊಂಡು ಒಬ್ಬರೇ ನದಿ ತೀರದಲ್ಲಿ ತಮ್ಮವರಿಗೆ ಹುಡುಕಾಟ ಮಾಡುತ್ತಿದ್ದಾರೆ. ನಮ್ಮವರು ಸತ್ತಿದ್ದಾರೆ ಅನ್ನೋದು ನನಗೆ ಗೊತ್ತಿದೆ. ಶವ ಹುಡುಕುತ್ತಿದ್ದೇನೆ. ಶವವಾದರೂ ಸಿಕ್ಕರೇ ಅಂತ್ಯಸಂಸ್ಕಾರವಾದರೂ ಮಾಡುತ್ತೇನೆ ಎಂದು ಮಡುಗಟ್ಟಿದ ದುಃಖವನ್ನು ತಡೆದುಕೊಂಡು ಅಚ್ಚ ಕನ್ನಡದಲ್ಲಿ ನೋವು ಹೇಳುತ್ತಿದ್ದಾರೆ. ಆದರೆ ಈ ನೋವಿಗೆ ಕಿವಿಯಾಗುವವರೇ ಇಲ್ಲ. ಏಕೆಂದರೆ ಮೃತದೇಹ ಸಿಕ್ಕರೇ ಪುಣ್ಯ. ಸಿಗದಿದ್ದರೆ ಭೂಮಿ ತಾಯಿಗೆ ಅರ್ಪಣೆ ಎನ್ನುವ ತೀರ್ಮಾನಕ್ಕೆ ಬಹಳಷ್ಟು ಜನ ಬಂದಿದ್ದಾರೆ. ಇದೇ ವಾಸ್ತವದ ಕಠೋರ ಸತ್ಯ.

  • Wayanad Landslide| ಆರು ಕೈ, ಮೂರು ತಲೆ, ಎಂಟು ಕಾಲು, ಐದು ತಲೆ ಇರದ ದೇಹ!

    Wayanad Landslide| ಆರು ಕೈ, ಮೂರು ತಲೆ, ಎಂಟು ಕಾಲು, ಐದು ತಲೆ ಇರದ ದೇಹ!

    ವಯನಾಡು: ಜಲಸಮಾಧಿಯಾದವರ ಮನ ಕಲುಕುವ ಕಥೆಗಳನ್ನು ಕೇಳಿದರೆ ಎಂಥವರ ಕಣ್ಣನ್ನು ಒದ್ದೆ ಮಾಡುತ್ತಿವೆ. ಪ್ರಕೃತಿ ಮಾತೆಯ ಅರ್ಧ ಸೆಕೆಂಡ್ ಮುನಿಸಿಗೆ ನೂರು ಜನರ ಬದುಕು ಮುಗಿದಿದೆ. ನೂರಾರು ಮನೆಗಳಲ್ಲಿ ಕಣ್ಣೀರ ಕೋಡಿ ಹರಿದಿದೆ.

    ಮಲ್ಪಾಡಿಯಲ್ಲಿ ಇರುವ ಸರ್ಕಾರಿ ಆಸ್ಪತ್ರೆಯ ಶವಾಗಾರವನ್ನು ತಾತ್ಕಾಲಿಕವಾಗಿ ಸಭಾಂಗಣಕ್ಕೆ ಶಿಫ್ಟ್ ಮಾಡಲಾಗಿದೆ. ಏಕೆಂದರೆ ನೂರು ನೂರು ಹೆಣದ ರಾಶಿಗೆ ಜಾಗ ಬೇಕಲ್ವಾ? ತಮ್ಮವರ ಹೆಣ ಕಂಡ ಕೂಡಲೇ ಕೆಲವರು ಮುಗಿಲು ಮುಟ್ಟುವ ರೀತಿ ಅಳುತ್ತಾರೆ. ಅಂಬುಲೆನ್ಸ್‌ನಲ್ಲಿ ಬಂದ ಹೆಣ ತಮ್ಮವರದಲ್ಲ ಎಂದಾಗ ಅಯ್ಯೋ ನಮ್ಮವರ ಹೆಣ ಸಿಗುತ್ತೋ ಇಲ್ವೋ ಅಂತಾ ಒದ್ದಾಡುತ್ತಾರೆ. ಆದರೆ ಈ ಎರಡು ಸ್ಥಿತಿ ಇರದ ಒಂದಷ್ಟು ದೇಹಗಳು ಶವಾಗಾರ ಸೇರಿವೆ.

    ದೇಹವೇ ಇರದ ಆರು ಬರೀ ಕೈಗಳು ಇದುವರೆಗೆ ಸಿಕ್ಕಿದೆ. ಇದು ಯಾರ ಯಾರ ಕೈ? ಪತ್ತೆ ಮಾಡುವುದು ಹೇಗೆ? ಇನ್ನೂ ಮೂರು ತಲೆ ಸಿಕ್ಕಿವೆ. ಆದರೆ ಮುಖದ ಗುರುತೇ ಸಿಗದ ಮಟ್ಟಕ್ಕೆ ಮುಖ ಜಜ್ಜಿವೆ. ಇವು ಯಾರ ತಲೆ ಅಂತಾ ಯಾರಿಗೆ ಗೊತ್ತಾಗುತ್ತೆ? ಹೀಗೆ ಎಂಟು ಪ್ರತ್ಯೇಕವಾದ ಕಾಲು ಸಿಕ್ಕಿವೆ. ಐದು ತಲೆ ಇರದ ಅರ್ಧ ದೇಹ ಸಿಕ್ಕಿವೆ. ಎಲ್ಲವನ್ನೂ ತಂದು ಎನ್‌ಡಿಆರ್‌ಎಫ್‌ನವರು ಶವಗಾರ ಸೇರಿಸಿದ್ದಾರೆ. ಇದನ್ನು ನೋಡುತ್ತಿದ್ದರೆ ವಿಧಿ ಎಂಥಾ ಕ್ರೂರಿ ಅನ್ನಿಸುತ್ತೆ. ಇದನ್ನೂ ಓದಿ: Wayanad Landslide: 6 ತಿಂಗಳ ಹಿಂದೆ ಗೃಹಪ್ರವೇಶ, ಈಗ ಆ ಮನೆ ಸಮೇತ ಜಲ ಸಮಾಧಿ!

    ಬಹುತೇಕರದು ಸ್ವಂತ ಮನೆ. ಮನೆ ಜೊತೆಯೆ ಸಮಾಧಿಯಾದ್ರು!
    ಚೂರಲ್ಮಲ ಊರಿನ ನಸೀಬು ಹೀಗಿತ್ತೇನೋ. ಸಮೃದ್ಧ ಊರು ಎಂಬ ಪಟ್ಟ. ಜೊತೆಗೆ ಇಲ್ಲಿದ್ದವರೆಲ್ಲ ಬಡತನದಲ್ಲೇ ಸುಖ ಉಂಡವರು. ಎಲ್ಲಾದಕ್ಕಿಂತಾ ಹೆಚ್ಚಾಗಿ ಶೇ.98 ಭಾಗದ ಜನ ಇಲ್ಲಿ ತಮ್ಮ ಸ್ವಂತ ಮನೆಗಳಲ್ಲೇ ವಾಸವಿದ್ದರು. ಇನ್ನೊಂದು ಎರಡು ವರ್ಷ ಕಳೆದಿದ್ದರೆ ಶೇ.100ಕ್ಕೆ 100 ರಷ್ಟು ಜನ ಸ್ವಂತ ಮನೆ ಹೊಂದಿರುತ್ತಿದ್ದರು. ಇದನ್ನೂ ಓದಿ: ತುಂಗಭದ್ರಾ ಜಲಾಶಯದಿಂದ 1.58 ಲಕ್ಷ ಕ್ಯುಸೆಕ್‌ ನೀರು ನದಿಗೆ

    ಐಷಾರಾಮಿ ಅಲ್ಲದಿದ್ದರೂ ತಮ್ಮದು ಅಂತಾ ಒಂದು ಸ್ವಂತ ನೆಲೆ ಕಟ್ಟಿಕೊಂಡವರು ಚೂರಲ್ಮಲ ಗ್ರಾಮದ ಜನ. ಗ್ರಾಮದಲ್ಲಿ ಕಟ್ಟಿದ ಐದು ಮನೆಗಳಿಗೆ ಇನ್ನು ಒಂದು ಎರಡು ತಿಂಗಳಲ್ಲಿ ಗೃಹಪ್ರವೇಶ ಆಗಬೇಕಿತ್ತು. ಈಗ ಇದರಲ್ಲಿ ಬಹುತೇಕರು ತಮ್ಮ ಸ್ವಂತ ಮನೆಗಳ ಜೊತೆಗೆ ಸಮಾಧಿಯಾಗಿದ್ದಾರೆ. ಹೋಗುವಾಗ ಏನಾದರೂ ಹೊತ್ತುಕೊಂಡು ಹೋಗ್ತಿಯಾ ಅಂತಾ ಕೆಲವರು ಹಾಗಾಗ ಹೇಳುತ್ತಿರುತ್ತಾರೆ. ನೋಡಿ ಇಲ್ಲಿ ಕಟ್ಟಿದ ಮನೆ, ಇಷ್ಟ ಪಟ್ಟು ಖರೀದಿಸಿದ ವಸ್ತುಗಳವನ್ನು ಹೊತ್ತುಕೊಂಡೇ ಹೋಗಿದ್ದಾರೆ.

  • Wayanad Landslide| 6 ತಿಂಗಳ ಹಿಂದೆ ಗೃಹಪ್ರವೇಶ, ಈಗ ಆ ಮನೆ ಸಮೇತ ಜಲ ಸಮಾಧಿ!

    Wayanad Landslide| 6 ತಿಂಗಳ ಹಿಂದೆ ಗೃಹಪ್ರವೇಶ, ಈಗ ಆ ಮನೆ ಸಮೇತ ಜಲ ಸಮಾಧಿ!

    ವಯನಾಡು: ಎತ್ತ ನೋಡಿದರೂ ಹೆಣದ ರಾಶಿ. ಪ್ರತಿ ಮನೆಯಲ್ಲೂ ಸೂತಕ. ಎತ್ತ ಕಿವಿ ಇಟ್ಟರೂ ಆಕ್ರಂದನದ್ದೇ ಸದ್ದು! ಇದರ ನಡುವೆ ಜಲಸಮಾಧಿಯಾದವರ ಮನ ಕಲುಕುವ ಕಥೆಗಳು. ಎಂಥವರ ಕಣ್ಣನ್ನು ಒದ್ದೆ ಮಾಡುತ್ತಿವೆ. ಪ್ರಕೃತಿ ಮಾತೆಯ ಅರ್ಧ ಸೆಕೆಂಡ್ ಮುನಿಸಿಗೆ ನೂರು ಜನರ ಬದುಕು ಮುಗಿದಿದೆ. ನೂರಾರು ಮನೆಗಳಲ್ಲಿ ಕಣ್ಣೀರ ಕೋಡಿ ಹರಿದಿದೆ. ಒಂದೊಂದು ಮನೆಯಲ್ಲಿ ಒಂದೊಂದು ಕರುಳು ಹಿಂಡುವ ಕಥೆ‌. ಸತ್ತ ಕೆಲವರ ಬಗ್ಗೆ ಕಥೆಗಳೇ ಕೇಳುತ್ತಿಲ್ಲ. ಏಕೆಂದರೆ ಅವರ ಕಥೆ ಕೇಳಲು ಅವರ ಕುಟುಂಬದವರು ಯಾರು ಬದುಕಿಲ್ಲ- ಹೀಗಿದೆ ದೇವರ ನಾಡು ಕೇರಳದ ಸದ್ಯದ ಸ್ಥಿತಿ.

    ಆ ದಂಪತಿ ಕೂಲಿ ಮಾಡಿ ಬದುಕು ಕಟ್ಟಿಕೊಂಡಿದ್ದರು. ಮಕ್ಕಳಿರಲಿಲ್ಲ. ಹೆಚ್ಚು ಕೂಲಿ ಒಂದಿಷ್ಟು ಹೆಚ್ಚಿನ ಸೌಕರ್ಯ ಸಿಗುತ್ತೆ ಅಂತಾ ಹುಟ್ಟೂರು ಬಿಟ್ಟು ಜಲಪ್ರಳಯವಾದ ವಯನಾಡಿನ (Wayanad) ಚೂರಲ್ಮಲಕ್ಕೆ (Chooralmala) ಬಂದು ನೆಲೆಸಿದ್ದರು. ಪತಿ ಕಾರ್ಪೆಂಟರ್, ಪತ್ನಿ ಟೀ ಎಸ್ಟೇಟ್‌ನಲ್ಲಿ ಕೂಲಿ ಕೆಲಸ. ಇಬ್ಬರು ದುಡಿದ ಹಣದಲ್ಲಿ ಒಂದಿಷ್ಟು ಉಳಿತಾಯ ಮಾಡಿ ಚೂರಲ್ಮಲದಲ್ಲಿ ಸ್ವಂತ ಮನೆ ಕಟ್ಟಿಸಿದ್ರು. 6 ತಿಂಗಳ ಹಿಂದೆ ತಮ್ಮ ಬಂಧು ಬಾಂಧವರ ಕರೆಸಿ ಗೃಹ ಪ್ರವೇಶ ಮಾಡಿದ್ದರು. ಈಗ ಆ ಮನೆಯ ಜೊತೆಯೇ ಜಲಸಮಾಧಿ ಆಗಿದ್ದಾರೆ. ಇದನ್ನೂ ಓದಿ: ಮುಡಾ ಸೈಟ್ ಹಗರಣ ಕೇಸ್; ಸಿಎಂ ಸಿದ್ದರಾಮಯ್ಯಗೆ ರಾಜ್ಯಪಾಲರಿಂದ ನೋಟಿಸ್

    ಈ ದಂಪತಿಗಳ ಹೆಸರು ರಾಜೇಂದ್ರ ಮತ್ತು ರತ್ನಮ್ಮ. ಇವರು ಮೂಲತಃ ಚಾಮರಾಜನಗರ ಜಿಲ್ಲೆಯ ಐರಸವಾಡಿ ಗ್ರಾಮದವರು. ಊರಲ್ಲೂ ಸ್ವಲ್ಪ ಜಮೀನಿದೆ. ನೆಂಟರಿಷ್ಟರೆಲ್ಲಾ ಊರಲ್ಲೇ ಇದ್ದಾರೆ. ಆದರೆ ಹೆಚ್ಚು ಕೂಲಿ ಸಿಗುತ್ತೆ, ಕಾಫಿ ಎಸ್ಟೇಟ್‌ನಲ್ಲಿ ಒಂದಿಷ್ಟು ಸವಲತ್ತು ಜಾಸ್ತಿ ಸಿಗುತ್ತದೆ ಎಂದು ಚೂರಲ್ಮಲಕ್ಕೆ ಬಂದು ನೆಲೆಸಿದ್ದರು. ಆದರೆ ಈಗ ತಮ್ಮ ಹೊಸ ಮನೆಯ ಜೊತೆಯೆ ಜಲಸಮಾಧಿ ಆಗಿದ್ದಾರೆ.  ಇದನ್ನೂ ಓದಿ: ಗುಡ್ಡ ಕುಸಿತದಿಂದ ಶಿರಾಡಿ ಘಾಟ್ ಮತ್ತೆ ಬಂದ್ – ಕುಸಿತದ ರಭಸಕ್ಕೆ ಕಂಟೇನರ್ ಪಲ್ಟಿ

    ಜಲಸಮಾಧಿಯಾದ ಕನ್ನಡಿಗರೆಲ್ಲಾ ಕೂಲಿ ಕಾರ್ಮಿಕರು!
    ಜಲಪ್ರಳಯದಲ್ಲಿ ಕನ್ನಡಿಗರ (Kannadigas) ಸಾವಿನ ಪಟ್ಟಿ ಕೂಡ ದೊಡ್ಡದಾಗ್ತಿದೆ. ಇವರೆಲ್ಲಾ ಯಾಕೆ ಇಲ್ಲಿಗೆ ಬಂದಿದ್ರು, ಇಲ್ಲಿ ಬಂದು ಬದುಕು ಕಟ್ಟಿಕೊಳ್ಳುವಂತಹ ಅನಿವಾರ್ಯತೆ ಏನಿದೆ? ಕೇರಳದವರೇ (Kerala) ನಮ್ಮಲ್ಲಿಗೆ  ಬಂದು ಬದುಕು ಕಟ್ಟಿಕೊಳ್ಳುವಾಗ ನಮ್ಮವರೇ ಯಾಕೆ ಇಲ್ಲಿಗೆ ಬಂದರು ಅಂತಾ ಕೊಂಚ ಕುತೂಹಲದಿಂದ ನೋಡಿದರೆ ನಮಗೆ ಕಾಣುವುದು ಎಸ್ಟೇಟ್ ಕೂಲಿ!

     

    ಹೀಗೆ ಜಲಸಮಾಧಿಯಾದ ಬಹುತೇಕರು ಕೆಳ ಮಧ್ಯಮ ವರ್ಗದವರು. ಹಳೆ ಮೈಸೂರು ಭಾಗದವರು. ನಮ್ಮಲ್ಲಿ ಕೂಲಿ ಕಡಿಮೆ. ಅದಲ್ಲದೆ ಕೂಲಿ ಕಾರ್ಮಿಕರಿಗೆ ಕ್ವಾಟರ್ಸ್ ವ್ಯವಸ್ಥೆ ಇರಲ್ಲ. ಆದರೆ ಇಲ್ಲಿ ನಮ್ಮಲಿಗೆ ಹೋಲಿಸಿದರೆ ಟೀ ಎಸ್ಟೇಟ್ ಗಳಲ್ಲಿ ಹೆಚ್ಚು ಕೂಲಿ ಸಿಗುತ್ತೆ. ಜೊತೆಗೆ ಇತರೇ ಸೌಕರ್ಯ ಬೇರೆ. ಹೀಗಾಗಿ ಇಲ್ಲಿಗೆ ಬಂದವರ ಸಂಖ್ಯೆ ಹೆಚ್ಚು ಬದುಕು ಕಟ್ಟಿಕೊಳ್ಳಲು ಬಂದವರು ಸುಖ ನಿದ್ರೆಯಲ್ಲೇ ತಮ್ಮ ಬದುಕಿನ ಯಾತ್ರೆ ಮುಗಿಸಿದ್ದಾರೆ.

     

  • ಸ್ನೇಹಿತರ ಮುಂದೆ ಜಲಸಮಾಧಿಯಾದ ಬೆಂಗಳೂರಿನ ಯುವಕ

    ಸ್ನೇಹಿತರ ಮುಂದೆ ಜಲಸಮಾಧಿಯಾದ ಬೆಂಗಳೂರಿನ ಯುವಕ

    ಚಾಮರಾಜನಗರ: ಸ್ನೇಹಿತರ ದಿನದೊಂದು ಗೆಳಯರ ಜೊತೆಗೆ ಮಲೆಮಾದಪ್ಪನ ದರ್ಶನಕ್ಕೆ ಬಂದಿದ್ದ ಯುವಕನೊರ್ವ ನೀರಿನಲ್ಲಿ ಮುಳುಗಿ ಜಲ ಸಮಾಧಿಯಾದ ಘಟನೆ ನಡೆದಿದೆ.

    ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿನ ಅಂತರಗಂಗೆಯಲ್ಲಿ ಸ್ನಾನ ಮಾಡಲು ಹೋದಾಗ ಬೆಂಗಳೂರಿನ ನಿವಾಸಿಯಾದ ಪ್ರಭು (28) ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

    ಬೆಂಗಳೂರಿನಿಂದ 9 ಜನ ಸ್ನೇಹಿತರು ಪ್ರವಾಸಕ್ಕೆಂದು ಆಗಮಿಸಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಪ್ರವಾಸಕ್ಕೆ ಹೋಗಿದ್ದವರ ಪೈಕಿ ಪ್ರಭುವಿಗೆ ಮಾತ್ರ ಈಜು ಬರುತಿತ್ತು ಎಂದು ತಿಳಿದುಬಂದಿದೆ. ಅಲ್ಲಿದ್ದ ಬೇರೆ ಯಾವ ಗೆಳೆಯರಿಗೂ ಈಜು ಬಾರದ ಹಿನ್ನೆಲೆಯಲ್ಲಿ ಮುಳುಗುತ್ತಿದ್ದ ಸ್ನೇಹಿತನನ್ನು ರಕ್ಷಿಸಲಾಗದೇ ಕೂಗಾಡಿ ಕೊನೆಗೆ ಪೋಲಿಸರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ಯುವಕನ ಶೋಧಕಾರ್ಯವನ್ನು ಮಲೆಮಹದೇಶ್ವರ ಬೆಟ್ಟದ ಪೊಲೀಸರು ಮುಂದುವರಿಸಿದ್ದಾರೆ.

  • ಸ್ವಚ್ಛಗೊಳಿಸಲೆಂದು ಬಾವಿಗಿಳಿದ ಯುವಕನ ರಕ್ಷಣೆಗೆ ತೆರಳಿದವರು ಸೇರಿ ಮೂವರು ಜಲಸಮಾಧಿ!

    ಸ್ವಚ್ಛಗೊಳಿಸಲೆಂದು ಬಾವಿಗಿಳಿದ ಯುವಕನ ರಕ್ಷಣೆಗೆ ತೆರಳಿದವರು ಸೇರಿ ಮೂವರು ಜಲಸಮಾಧಿ!

    ಕಲಬುರಗಿ: ಬಾವಿ ಸ್ವಚ್ಛಗೊಳಿಸಲು ಹೋದ ಮೂವರು ಬಾವಿಯೊಳಗೇ ಬಿದ್ದು ಸಮಾಧಿಯಾದ ಹೃದಯ ವಿದ್ರಾವಕ ಘಟನೆ ಕಲಬುರಗಿ ಜಿಲ್ಲೆಯ ಕವಲಗಾ ಕೆ ಗ್ರಾಮದ ಬಳಿ ನಡೆದಿದೆ.

    ತಂದೆ ಚನ್ನಣ್ಣಗೌಡ (60) ಮಗ ಮಲ್ಲಣಗೌಡ (20) ಗ್ರಾಮಸ್ಥ ಮೆಹಬೂಬ್ ಮೃತ ದುರ್ದೈವಿಗಳು. ಕವಲಗಾ ಗ್ರಾಮದ ದೇವಸ್ಥಾನದ ಮುಂಭಾಗದಲ್ಲಿನ ಬಾವಿಯ ನೀರು ಇಡೀ ಗ್ರಾಮಕ್ಕೆ ಜಲ ಮೂಲವಾಗಿತ್ತು. ಆದ್ರೆ ಇತ್ತಿಚೆಗೆ ಬಾವಿ ಬತ್ತಿ ಹೋಗಿದ್ದ ಕಾರಣ ಸ್ವಚ್ಛಗೊಳಿಸಲು ಮಲ್ಲಣಗೌಡ ಇಳಿದಿದ್ದರು.

    50 ಅಡಿಗೂ ಅಧಿಕ ಆಳದ ಜೊತೆ ತುಂಬಾ ಇಕ್ಕಟ್ಟಾದ ಬಾವಿಗೆ ಇಳಿದ ಕಾರಣ ಒಳಗಡೆಯಿಂದ ಯಾವುದೇ ಸುಳಿವು ಕಾಣಲಿಲ್ಲ. ಹೀಗಾಗಿ ಮಗನನ್ನು ರಕ್ಷಿಸಲು ಚನ್ನಣ್ಣಗೌಡ ಬಾವಿಗೆ ಇಳಿದಿದ್ದಾರೆ. ಇವರಿಬ್ಬರೂ ಪತ್ತೆಯಾಗದ ಕಾರಣ ಮೆಹಬೂಬ್ ಅವರು ಕಾಪಾಡಲು ಇಳಿದಿದ್ದಾರೆ. ಆದರೆ ಆಮ್ಲಜನಕದ ಕೊರತೆಯಿಂದಾಗಿ ಮೂವರೂ ಬಾವಿಯೊಳಗೆ ಸಮಾಧಿಯಾಗಿದ್ದಾರೆ.

    ಸುದ್ದಿ ತಿಳಿದು ಫರಹತಾಬಾದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಗ್ನಿ ಶಾಮಕದಳದವರು ಗ್ರಾಮಕ್ಕೆ ಆಗಮಿಸಿದ್ದು, ಶವ ಹೊರತೆಗೆಯಲು ಕಾರ್ಯಾಚರಣೆ ನಡೆಸುತ್ತಿದ್ದಾರೆ.

  • ಕೆರೆಯಲ್ಲಿ ಈಜಲು ಹೋದ ಹುಣಸೂರಿನ 10 ತರಗತಿಯ ನಾಲ್ವರು ಮಕ್ಕಳು ಜಲಸಮಾಧಿ!

    ಕೆರೆಯಲ್ಲಿ ಈಜಲು ಹೋದ ಹುಣಸೂರಿನ 10 ತರಗತಿಯ ನಾಲ್ವರು ಮಕ್ಕಳು ಜಲಸಮಾಧಿ!

    ಮೈಸೂರು: ಕೆರೆಗೆ ಈಜಲು ಹೋದ ಹತ್ತನೇ ತರಗತಿಯ ನಾಲ್ವರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ದುರಂತ ಘಟನೆ ಹುಣಸೂರು ತಾಲ್ಲೂಕಿನ ಹೈರಿಗೆ ಗ್ರಾಮದಲ್ಲಿ ನಡೆದಿದೆ.

    ಮಂಗಳವಾರ ಮಧ್ಯಾಹ್ನ ಹೈರೆಗೆ ಗ್ರಾಮದ ಕೆರೆಯಲ್ಲಿ ಈಜಾಡಲು ಹೋಗಿದ್ದ ನಾಲ್ವರು ಮಕ್ಕಳು ನಾಪತ್ತೆಯಾಗಿದ್ದರು. ಘಟನೆ ನಡೆದ ಬಳಿಕ ಅಗ್ನಿಶಾಮಕ ಸಿಬ್ಬಂದಿಗಳು ಕಾರ್ಯಚರಣೆ ನಡೆಸಿ ಇಬ್ಬರು ಮಕ್ಕಳ ಮೃತದೇಹವನ್ನು ಮೇಲಕ್ಕೆ ಎತ್ತಿದ್ದರು. ರಾತ್ರಿಯಾದ ಕಾರಣ ಕಾರ್ಯಚರಣೆಯನ್ನ ಸ್ಥಗಿತಗೊಳಿಸಿ ಇಂದು ಬೆಳಗ್ಗೆ ಮತ್ತೆ ಕಾರ್ಯಚರಣೆ ಆರಂಭ ಮಾಡಿ ಮತ್ತಿಬ್ಬರ ಮೃತದೇಹಗಳನ್ನು ಪತ್ತೆ ಮಾಡಿದ್ದಾರೆ.

    ನಾಪತ್ತೆಯಾಗಿದ್ದ ನಾಲ್ವರೂ ಸಹಪಾಠಿಗಳಾಗಿದ್ದು, ಹುಣಸೂರಿನ ಸೆಂಟ್ ಜೋಸೆಫ್ ಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಹುಣಸೂರಿನ ನಿವಾಸಿಗಳಾದ ಅನಿಲ್, ಭರತ್, ಧನಂಜಯ್, ಯಶವಂತ್ ಮೃತ ವಿದ್ಯಾರ್ಥಿಗಳು.

    ಕಾರ್ಯಾಚರಣೆ ನಡೆಸಿದ ಕೆರೆಯ ದಡದಲ್ಲಿ ಚಪ್ಪಲಿ, ವಾಚ್, ಬೈಕ್ ಪತ್ತೆಯಾಗಿದ್ದು, ಮಕ್ಕಳ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ. ಘಟನೆ ನಡೆದ ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದ್ದು, ಈ ಸಂಬಂಧ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.