Tag: ಜಲಕ್ರಾಂತಿ

  • ಮಳೆ ಆಶ್ರಿತ ಕಲ್ಯಾಣ ಕರ್ನಾಟಕದಲ್ಲಿ ಜಲಕ್ರಾಂತಿ-35 ಲಕ್ಷ ರೂ. ವೆಚ್ಚದಲ್ಲಿ 2 ಕೆರೆಗಳ ನಿರ್ಮಾಣ

    ಮಳೆ ಆಶ್ರಿತ ಕಲ್ಯಾಣ ಕರ್ನಾಟಕದಲ್ಲಿ ಜಲಕ್ರಾಂತಿ-35 ಲಕ್ಷ ರೂ. ವೆಚ್ಚದಲ್ಲಿ 2 ಕೆರೆಗಳ ನಿರ್ಮಾಣ

    -ಕಲಬುರಗಿಯ ಲಿಂಗರಾಜಪ್ಪ ನಮ್ಮ ಪಬ್ಲಿಕ್ ಹೀರೋ

    ಕಲಬುರಗಿ: ಶರಣಬಸವೇಶ್ವರ ಸಂಸ್ಥಾನ ಅಂದ್ರೆ ಸಾಕು ಈ ಭಾಗದ ಜನ ಅತ್ಯಂತ ಪೂಜನೀಯ ಭಾವನೆಯಿಂದ ನೋಡುತ್ತಾರೆ. ಇದಕ್ಕೆ ತಕ್ಕಂತೆ ಈ ವಂಶಸ್ಥರಾದ ಲಿಂಗರಾಜಪ್ಪನವರು ತಮ್ಮ ಜಮೀನಿಂದಲೇ ಜಲಕ್ರಾಂತಿ ಮಾಡಲು ಮುಂದಾಗಿದ್ದಾರೆ. ಅವರೇ ಇಂದಿನ ನಮ್ಮ ಪಬ್ಲಿಕ್ ಹೀರೋ.

    ಲಿಂಗರಾಜಪ್ಪನವರು ಶರಣ ಸಿರಸಗಿ ಗ್ರಾಮದ ತಮ್ಮ ಸ್ವಂತ ಜಮೀನಿನಲ್ಲಿ ಒಟ್ಟು 4 ಎಕರೆ ಪ್ರದೇಶದಲ್ಲಿ ಸರ್ಕಾರದ ನಯಾಪೈಸೆ ಪಡೆಯದೇ, ತಮ್ಮ ಸ್ವಂತ ಹಣದಿಂದ 35 ಲಕ್ಷ ರೂ.ಗೂ ಅಧಿಕ ಹಣ ಖರ್ಚು ಮಾಡಿ ಒಟ್ಟು 2 ಕೆರೆಗಳನ್ನು ನಿರ್ಮಿಸಿದ್ದಾರೆ. ಲಿಂಗರಾಜಪ್ಪನವರು ಹೀಗೆ ಕೆರೆ ನಿರ್ಮಿಸುವದರ ಹಿಂದೆ ಸಾಮಾಜಿಕ ಕಳಕಳಿಯಿದೆ. ಮಳೆಗಾಲದ ಕೆಲ ದಿನಗಳು ಬಿಟ್ಟರೆ ಈ ಭಾಗದಲ್ಲಿ ಹೆಚ್ಚಿನ ಮಳೆ ಬರಲ್ಲ. ಬಂದರೂ ಸಹ ಆ ನೀರು ಕೆರೆ ಕಟ್ಟೆಗಳಲ್ಲಿ ಹೋಗಿ ಸಂಗ್ರಹವಾಗುವುದಿಲ್ಲ. ಇದರ ಪರಿಣಾಮ ಅಂತರ್ಜಲ ಕುಸಿದು ಬೋರ್‍ವೆಲ್ ಹಾಗೂ ಬಾವಿಗಳು ಬೇಗನೆ ಬತ್ತಿ ಹೋಗುತ್ತಿದ್ದವು. ಇದನ್ನು ಅರಿತ ಲಿಂಗರಾಜಪ್ಪ ಕೆರೆ ನಿರ್ಮಿಸಿ ಅಂತರ್ಜಲ ಮಟ್ಟ ಹೆಚ್ಚಿಸಿದ್ದಾರೆ. ಈ ಮೂಲಕ ಕಲ್ಯಾಣ ಕರ್ನಾಟಕ ಭಾಗದಲ್ಲಿ ಶರಣರು ನುಡಿದಂತೆ ಲಿಂಗರಾಜಪ್ಪ ಜಲಕ್ರಾಂತಿ ಮಾಡಲು ಮುಂದಾಗಿದ್ದಾರೆ.

    ಈ ಕೆರೆಗಳನ್ನು ನೋಡಿದ ಲಿಂಗರಾಜಪ್ಪನವರ ಸ್ನೇಹಿತರು ತಾಡಪತ್ರೆ ಅಥವಾ ಸಿಮೆಂಟ್ ಕಾಂಕ್ರೆಟ್ ಹಾಕಿದ್ರೆ ವರ್ಷವಿಡಿ ನೀರು ಇರೋದಾಗಿ ಹೇಳಿದ್ದರು. ಆದರೆ ಹೀಗೆ ಮಾಡಿದ್ರೆ ಕೇವಲ ನಮ್ಮ ಜಮೀನಿಗೇ ನೀರು ಸಿಗುತ್ತೆ ವಿನಃ ಬೇರೆ ರೈತರಿಗೆ ಅನೂಕುಲ ಆಗಲ್ಲ ಅಂತಾ ಲಿಂಗರಾಜಪ್ಪನವರು ಅವರ ಸಲಹೆಯನ್ನು ನಯವಾಗಿಯೇ ನಿರಾಕರಿಸಿದ್ದರು. ಇವರ ಈ ಸಮಾಜ ಕಳಕಳಿಯ ಮನೋಭಾವನೆ ಮತ್ತು ರೈತರ ಕುರಿತು ಹೊಂದಿರುವ ಕಾಳಜಿ ಹಿನ್ನೆಲೆ ಇಂದು ಶರಣ ಸಿರಸಗಿ ಗ್ರಾಮದ ಸುತ್ತಮುತ್ತಲಿನ ರೈತರ ಜಮೀನಿನಲ್ಲಿರುವ ಬೋರ್ ಮತ್ತು ಬಾವಿಗಳು ಬತ್ತದೆ ಅಪಾರ ಪ್ರಮಾಣದ ನೀರು ಸಂಗ್ರಹವಾಗಿದೆ. ಹೀಗಾಗಿ ಇಲ್ಲಿನ ರೈತರು ಬೇಸಿಗೆ ಕಾಲ ಬಂದರೂ ಜಾನುವಾರು ಮತ್ತು ಅವರ ತೋಟಗಾರಿಕಾ ಬೆಳೆಗಳಿಗೆ ಬರಪೂರ ನೀರು ಸಿಗುತ್ತಿದೆ. ಅಷ್ಟೇ ಅಲ್ಲದೇ ಲಿಂಗರಾಜಪ್ಪ ನವರ ಜಮೀನಿನ ಪಕ್ಕದಲ್ಲಿ 200 ಎಕರೆಗೂ ಅಧಿಕ ಇರುವ ಅರಣ್ಯದಲ್ಲಿರುವ ಪ್ರಾಣಿಗಳಿಗೂ ನೀರು ಸಿಗುತ್ತಿದೆ.

    ಶರಣರ ವಚನಕ್ಕೆ ತಕ್ಕಂತೆ ಲಿಂಗರಾಜಪ್ಪನವರು ಕಲಬುರಗಿಯಲ್ಲಿ ತಮ್ಮ ಕೈಲಾದಷ್ಟು ಸಮಾಜ ಸೇವೆ ಮಾಡುತ್ತಿದ್ದಾರೆ. ಈ ಮೂಲಕ ಚುನಾವಣೆ ಸಮಯದಲ್ಲಿ ನೂರಾರು ಕೆರೆಗಳ ನಿರ್ಮಿಸುವದ್ದಾಗಿ ಹೇಳಿ ವಂಚಿಸುವ ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ.

  • ಗ್ರಾಮವಾಸ್ತವ್ಯ ಬೆನ್ನಲ್ಲೇ ಸಿಎಂರಿಂದ ಜಲಕ್ರಾಂತಿಯತ್ತ ಹೆಜ್ಜೆ

    ಗ್ರಾಮವಾಸ್ತವ್ಯ ಬೆನ್ನಲ್ಲೇ ಸಿಎಂರಿಂದ ಜಲಕ್ರಾಂತಿಯತ್ತ ಹೆಜ್ಜೆ

    ಬೆಂಗಳೂರು: ಮೊದಲ ಹಂತದ ಗ್ರಾಮ ವಾಸ್ತವ್ಯ ಮುಗಿಸಿ ಶುಕ್ರವಾರ ರಾತ್ರಿ ಅಮೆರಿಕ ವಿಮಾನ ಹತ್ತಿರುವ ಸಿಎಂ, ಅಲ್ಲಿಂದ ಬಂದ ಮೇಲೆ ಜಲಕ್ರಾಂತಿಗಾಗಿ ಹಳ್ಳಿಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಿದ್ದಾರೆ.

    ಮಹಾರಾಷ್ಟ್ರದ ಜಾಲ್ನಾ ಜಲ್ಲೆಯ ಕಡವಂಚಿ ಗ್ರಾಮದ ಜಲಕ್ರಾಂತಿ ನೋಡಿ ಪ್ರೇರಣೆಗೊಂಡಿರುವ ಮುಖ್ಯಮಂತ್ರಿ, ರಾಜ್ಯದಲ್ಲಿ ಅದೇ ಮಾದರಿ ಅಳವಡಿಕೆಗೆ ಮುಂದಾಗಿದ್ದಾರೆ. ರೈತರಲ್ಲಿ ಜಲಕ್ರಾಂತಿ ಜಾಗೃತಿ ಮೂಡಿಸಲು ಹಳ್ಳಿಗಳಿಗೆ ಭೇಟಿ ನೀಡೋದಾಗಿ ಘೋಷಿಸಿದ್ದಾರೆ.

    ಜಲಕ್ರಾಂತಿ ಜೊತೆಗೆ ರೈತರನ್ನು ಸಶಕ್ತಗೊಳಿಸುವ ಕಡವಂಚಿ ಮಾದರಿಯನ್ನು ಶೀಘ್ರ ಪೈಲಟ್ ಯೋಜನೆ ಮೂಲಕ ರಾಜ್ಯದಲ್ಲಿ ಜಾರಿ ಮಾಡಲು ನಿರ್ಧರಿಸಿದ್ದಾರೆ. ಐದು ದಿನದ ಹಿಂದಷ್ಟೇ ತಮ್ಮ ಟ್ವಿಟ್ಟರ್ ಅಕೌಂಟ್‍ನಲ್ಲಿ ಕಡವಂಚಿ ಯಶೋಗಾಥೆ ಕುರಿತ ಸಾಕ್ಷ್ಯ ಚಿತ್ರವನ್ನು ಮುಖ್ಯಮಂತ್ರಿ ಶೇರ್ ಮಾಡಿದ್ದರು.

    ಏನಿದು ಕಡವಂಚಿ ಮಾದರಿ?
    2 ದಶಕಗಳ ಹಿಂದೆ ಮರಾಠವಾಡದ ಕಡವಂಚಿ ಗ್ರಾಮದಲ್ಲಿ ಭೀಕರ ಬರಗಾಲ ಎದುರಾಗಿತ್ತು. ಹೀಗಾಗಿ 1995ರಲ್ಲಿ ನೀರಾವರಿ ತಜ್ಞರ ನೆರವಿನಿಂದ ಜಲಸಂರಕ್ಷಣೆ ಯೋಜನೆ ಜಾರಿಗೆ ತರಲಾಗಿತ್ತು. ಕಡವಂಚಿ ಗ್ರಾಮದ ರೈತರಿಂದ ಸಾಮೂಹಿಕವಾಗಿ ಚೆಕ್‍ಡ್ಯಾಂ ನಿರ್ಮಾಣ ಮಾಡಲಾಗಿತ್ತು. ಚೆಕ್‍ಡ್ಯಾಂ, ಕೃಷಿ ಹೊಂಡದ ಮೂಲಕ ಅಂತರ್ಜಲ ವೃದ್ಧಿಗೆ ಕ್ರಮ ಕೈಗೊಳ್ಳಲಾಯಿತು.

    ಹವಾಮಾನ ಮುನ್ಸೂಚನೆ ಪಡೆಯಲು ಗ್ರಾಮದಲ್ಲೇ ಹವಾಮಾನ ಕೇಂದ್ರವನ್ನು ಕೂಡ ಸ್ಥಾಪಿಸಲಾಗಿತ್ತು. ಎಲ್ಲರ ಜಮೀನುಗಳಲ್ಲಿ ಕೃಷಿ ಹೊಂಡ, ಎಲ್ಲರಿಂದಲೂ ದ್ರಾಕ್ಷಿ ಬೆಳೆ ಬೆಳೆಯಲಾಗಿತ್ತು. ಹೀಗಾಗಿ ಬರಗಾಲದಲ್ಲಿಯೂ ಕಡವಂಚಿ ಗ್ರಾಮ ಹಸಿರಿನಿಂದ ನಳನಳಿಸುತ್ತಿದೆ.