Tag: ಜಮ್ಮು ಕಾಶ್ಮೀರಾ

  • 8 ಉನ್ನತ ಕಮಾಂಡರ್ ಸೇರಿ 15 ದಿನದಲ್ಲಿ 22 ಉಗ್ರರು ಭಾರತೀಯ ಸೇನೆಗೆ ಬಲಿ

    8 ಉನ್ನತ ಕಮಾಂಡರ್ ಸೇರಿ 15 ದಿನದಲ್ಲಿ 22 ಉಗ್ರರು ಭಾರತೀಯ ಸೇನೆಗೆ ಬಲಿ

    – ಓರ್ವನನ್ನು ಬಿಟ್ಟು ಎಲ್ಲರೂ ಕಾಶ್ಮೀರದ ಉಗ್ರರೇ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರಾದಲ್ಲಿ 8 ಮಂದಿ ಉನ್ನತ ಕಮಾಂಡರ್ ಸೇರಿದಂತೆ 22 ಜನ ಉಗ್ರರನ್ನು ಕಳೆದ 15 ದಿನಗಳಲ್ಲಿ ಭಾರತೀಯ ಸೇನೆ ಹೊಡೆದುರುಳಿಸಿದೆ.

    ಈದ್ ಹಬ್ಬದ ನಂತರ ಉನ್ನತ ಭಯೋತ್ಪಾದಕರನ್ನು ಮತ್ತು ನಾಯಕರನ್ನು ಟಾರ್ಗೆಟ್ ಮಾಡಿ ಭಾರತೀಯ ಸೇನೆ ಹಲವು ದಾಳಿಗಳನ್ನು ಮಾಡಿತ್ತು. ಭಾರತೀಯ ಸೇನೆ ನೇರವಾಗಿ ಉಗ್ರ ನಾಯಕರು ಮತ್ತು ಟಾಪ್ ಕಮಾಂಡರ್ ಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿದಾಗ, ಉಗ್ರರು ಪ್ರತಿದಾಳಿ ಮಾಡದಂತೆ ತಟಸ್ಥರಾದರು. ಈ ಕಾರಣದಿಂದ ಭಾರತೀಯ ಸೇನೆ ಭಯೋತ್ಪಾದಕರನ್ನು ಸೆದೆಬಡಿದಿದೆ ಎಂದು ಮೂಲಗಳು ತಿಳಿಸಿವೆ.

    ಭಾರತೀಯ ಸೇನೆ ಇಸ್ಲಾಮಿಕ್ ಸ್ಟೇಟ್ ಜಮ್ಮು ಮತ್ತು ಕಾಶ್ಮೀರ (ಐಎಸ್‍ಜೆಕೆ) ಕಮಾಂಡರ್ ಆದಿಲ್ ಅಹ್ಮದ್ ವಾನಿ ಮತ್ತು ಲಷ್ಕರ್-ಎ-ತೈಬಾ (ಎಲ್‍ಇಟಿ) ಕೇಡರ್ ಶಾಹೀನ್ ಅಹ್ಮದ್ ಥೋಕರ್ ನನ್ನು ಮೇ 25 ರಂದು ಖುದ್ ಹಂಜಿಪೋರಾ ಕುಲ್ಗಂನಲ್ಲಿ ಹತ್ಯೆ ಮಾಡಿತ್ತು. ಇದಾದ ನಂತರ ಹಿಜ್ಬುಲ್ ಮುಜಾಹಿದ್ದೀನ್ (ಎಚ್‍ಎಂ) ಕಮಾಂಡರ್ ಪರ್ವೈಜ್ ಅಹ್ಮದ್ ಪಂಡಿತ್ ಇತಿರ್ ಮೇ 30 ರಂದು ವನ್‍ಪೊರಾ ಕುಲ್ಗಂನಲ್ಲಿ ಸೇನೆ ಹೊಡೆದು ಹಾಕಿತ್ತು.

    ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಟಾಪ್ ಕಮಾಂಡರ್ ಇಶ್ಫಾಕ್ ಅಹ್ಮದ್ ಇಟೂ, ಜೆಷ್-ಇ-ಮೊಹಮ್ಮದ್ ಸಂಘಟನೆಯ ಟಾಪ್ ಕಮಾಂಡರ್ ಓವೈಸ್ ಅಹ್ಮದ್ ಮಲಿಕ್‍ನನ್ನು ಜೂನ್ 7 ರಂದು ರೆಬನ್ ಶೋಪಿಯಾನ್‍ನಲ್ಲಿ ಭಾರತೀಯ ಸೇನೆ ಕೊಂದಿತ್ತು. ನಂತರ ಮೂವರು ಎಚ್‍ಎಂ ಕಮಾಂಡರ್ ಗಳಾದ ಆದಿಲ್ ಅಹ್ಮದ್ ಮಿರ್, ಬಿಲಾಲ್ ಅಹ್ಮದ್ ಭಟ್ ಮತ್ತು ಸಾಜಾದ್ ಅಹ್ಮದ್ ವಾ ಅವರನ್ನು ಸೇನೆ ಬಲಿ ಪಡೆದಿತ್ತು.

    ಜೂನ್ 7ರಂದು, ಎಚ್‍ಎಂ ಕಮಾಂಡರ್ ಉಮರ್ ಮೊಹಿಯುದ್ದೀನ್ ಧೋಬಿ, ಎಲ್‍ಇಟಿ ಉನ್ನತ ಕಮಾಂಡರ್ ರಯೀಸ್ ಅಹ್ಮದ್ ಖಾನ್ ಮತ್ತು ಎಚ್‍ಎಂ ಕಮಾಂಡರ್ ಗಳಾದ ಸಕ್ಲೈನ್ ಅಹ್ಮದ್ ವಾಗೆ ಮತ್ತು ವಕೀಲ್ ಅಹ್ಮದ್ ನಾಯ್ಕು ಅವರನ್ನು ರೆಬನ್ ಶೋಪಿಯಾನ್‍ನಲ್ಲಿ ಸೇನೆ ಹೊಡೆದು ಹಾಕಿತ್ತು. ಇದರಲ್ಲಿ ಫೌಜಿ ಭಾಯ್ ಹೊರತುಪಡಿಸಿ ಎಲ್ಲಾ ಭಯೋತ್ಪಾದಕರು ಜಮ್ಮು ಮತ್ತು ಕಾಶ್ಮೀರದ ಸ್ಥಳೀಯರಾಗಿದ್ದು, ಅವರಲ್ಲಿ ಹೆಚ್ಚಿನವರು ಶೋಪಿಯಾನ್, ಕುಲ್ಗಮ್ ಮತ್ತು ಪುಲ್ವಾಮಾ ಜಿಲ್ಲೆಯವರಾಗಿದ್ದಾರೆ.

    ಇವರ ಜೊತೆಗೆ ಮೇ 18ರಂದು ರಾಜೌರಿಯಲ್ಲಿ ಹೊಸದಾಗಿ ಒಳನುಸುಳಿದ ಗುಂಪಿನಿಂದ ನಾಲ್ಕು ಭಯೋತ್ಪಾದಕರು ಸೇನಾ ದಾಳಿಗೆ ಬಲಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ನೌಶೇರಾ ಸೆಕ್ಟರ್ ನಲ್ಲಿ ಎಲ್‍ಒಸಿ ಬಳಿ ಮೂವರು ಕೊಲ್ಲಲಾಗಿದೆ. ಕಲಕೋಟೆಯ ಗಡಿಯಲ್ಲಿ ಒಳನುಸುಳಿದ ಓರ್ವನನ್ನು ಕೊಲ್ಲಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ.

    ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕ ಸಂಘಟನೆಯಲ್ಲಿ ಕೆಲಸ ಮಾಡುತ್ತಿದ್ದ ಮುಜಾಫರ್ ಅಹ್ಮದ್ ನಾಯಕ್, ಜಾನ್ ಮೊಹಮ್ಮದ್ ನಜರ್ ಮತ್ತು ಆಜಾದ್ ಅಹ್ಮದ್ ಎಂಬ ಮೂವರು ಓವರ್ ಗ್ರೌಂಡ್ ವರ್ಕರ್ ಗಳನ್ನು ಅವಂತಿಪೋರಾ ಪೊಲೀಸರು ಜೀವಂತವಾಗಿ ಬಂಧಿಸಿದ್ದಾರೆ.

    ಈ ಒಂದು ವರ್ಷದ ಅವಧಿಯಲ್ಲಿ ಸುಮಾರು 36 ಕಾರ್ಯಾಚರಣೆಗಳನ್ನು ಮಾಡಿ 88 ಭಯೋತ್ಪಾದಕರು ಕೊಲ್ಲಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ದಿಲ್ಬಾಗ್ ಸಿಂಗ್ ಹೇಳಿದ್ದಾರೆ. ಶೋಪಿಯಾನ್ ಜಿಲ್ಲೆಯ ಸುಗೂ ಪ್ರದೇಶದಲ್ಲಿ ಬುಧವಾರ ಮೂವರು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಎಂದು ಭಾರತೀಯ ಸೇನೆ ಮಾಹಿತಿ ನೀಡಿದೆ.

  • ಪ್ರೀತಿಯ ಶ್ವಾನವನ್ನು ರಕ್ಷಿಸಿ ಬೆಂಕಿಗೆ ಆಹುತಿಯಾದ ಆರ್ಮಿ ಆಫೀಸರ್

    ಪ್ರೀತಿಯ ಶ್ವಾನವನ್ನು ರಕ್ಷಿಸಿ ಬೆಂಕಿಗೆ ಆಹುತಿಯಾದ ಆರ್ಮಿ ಆಫೀಸರ್

    ಶ್ರೀನಗರ: ತನ್ನ ಪ್ರೀತಿಯ ಶ್ವಾನವನ್ನು ಕಾಪಾಡಲು ಹೋಗಿ ಆರ್ಮಿ ಅಧಿಕಾರಿಯೊಬ್ಬರು ಪ್ರಾಣ ಕಳೆದುಕೊಂಡಿರುವ ಘಟನೆ ಜಮ್ಮ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಗುಲ್ಮಾರ್ಗ್ ಪ್ರದೇಶದಲ್ಲಿ ನಡೆದಿದೆ.

    ಮೇಜರ್ ಅಂಕಿತ್ ಬುಧರಾಜಾ ಪ್ರಾಣ ಕಳೆದುಕೊಂಡ ಅಧಿಕಾರಿ. ಶನಿವಾರ ರಾತ್ರಿ ಅಕಸ್ಮಿಕವಾಗಿ ಅಂಕಿತ್ ಅವರ ಮನೆಗೆ ಬೆಂಕಿ ಬಿದ್ದಿದೆ. ಈ ವೇಳೆ ಮನೆಯ ಒಳಗೆ ಇದ್ದ ನಾಯಿಯನ್ನು ರಕ್ಷಿಸಲು ಹೋಗಿ ಅಂಕಿತ್ ಪ್ರಾಣ ಬಿಟ್ಟಿದ್ದಾರೆ.

    ಅಂಕಿತ್ ಅವರು ಇದ್ದ ಮನೆಗೆ ಬೆಂಕಿ ಹೊತ್ತಿಕೊಂಡ ತಕ್ಷಣ ಅಂಕಿತ್ ತನ್ನ ಪತ್ನಿ ಮತ್ತು ಒಂದು ನಾಯಿಯನ್ನು ಹೊರಗೆ ಕರೆದುಕೊಂಡು ಬಂದಿದ್ದಾರೆ. ಆದರೆ ಮನೆಯ ಪೂರ್ತಿ ಬೆಂಕಿ ಹೊತ್ತಿಕೊಂಡಾಗ ಮನೆಯೊಳಗೆ ಇನ್ನೊಂದು ನಾಯಿ ಇದ್ದದ್ದು ನೆನಪಿಗೆ ಬಂದಿದೆ. ಆಗ ಅದನ್ನು ರಕ್ಷಿಸಲು ಅಂಕಿತ್ ಮತ್ತೆ ಮನೆಯೊಳಗೆ ಹೋಗಿದ್ದಾರೆ. ಆದರೆ ಹೊರಬರುವಷ್ಟರಲ್ಲಿ ಶೇ.90 ರಷ್ಟು ಸುಟ್ಟುಹೋಗಿದ್ದ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

    ಈ ಘಟನೆಯ ನಂತರ ಸ್ಥಳೀಯ ಪೊಲೀಸರ ಸಹಾಯದಿಂದ ತಕ್ಷಣ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದೆ. ಮೃತ ಅಂಕಿತ್ ಬುಧರಾಜಾ ಅವರ ಪಾರ್ಥಿವ ಶರೀರವನ್ನು ಟ್ಯಾಂಗ್‍ಮಾರ್ಗ್‍ನ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.