ಗುವಾಹಟಿ:“ಸರ್ಕಾರ ಇದೆಯೋ ಇಲ್ವೋ ಎನ್ನುವ ಕಾಲವೊಂದಿತ್ತು. ಆ ವೇಳೆ ಜನರು ಕಾಳ್ ಧನ್, ಕಾಳ್ ಧನ್ ಅನ್ನುತಿದ್ದರು. ಆದರೆ ಈಗ ಜನ ಜನ್ ಧನ್, ಡಿಜಿ ಧನ್ ಅನ್ನುತ್ತಿದ್ದಾರೆ”
– ಪ್ರಧಾನಿ ಮೋದಿ ಅವರು ತಮ್ಮ ಮೂರು ವರ್ಷದ ಅವಧಿಯಲ್ಲಿ ಕಪ್ಪು ಹಣವನ್ನು ಮಟ್ಟ ಹಾಕಿ ಹೊಸ ಯೋಜನೆಗಳನ್ನು ಜನರು ಹೇಗೆ ಹೇಳುತ್ತಿದ್ದಾರೆ ಎನ್ನುವುದನ್ನು ವಿವರಿಸಲು ಹೇಳಿದ್ದು ಹೀಗೆ.
ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಅಸ್ಸಾಂನ ಗುವಾಹಟಿಯಲ್ಲಿ ಜನರನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು.
ನಾವು ಬಹಳಷ್ಟು ಕಠಿಣ ನಿರ್ಧಾರಗಳನ್ನು ತೆಗೆದುಕೊಂಡೆವು. ಈ ಕಠಿಣ ನಿರ್ಧಾರವನ್ನು ವಿರೋಧಿಸದೇ ನೀವು ನಮ್ಮನ್ನು ಬೆಂಬಲಿಸಿದ್ದೀರಿ. ನಿಮ್ಮ ಈ ಬೆಂಬಲದಿಂದಾಗಿ ನಮಗೆ ಕೆಲಸ ಮಾಡಲು ಶಕ್ತಿ ಬಂದಿದೆ. ನನ್ನ ವಿಶ್ವಾಸಕ್ಕೆ ಹೊಸ ಬಲ ಕೊಟ್ಟಿದೆ ಎಂದರು.

ದೇಶದ ಎಲ್ಲ ಭಾಗಗಳನ್ನು ನಾವು ಗಮನಿಸುತ್ತೇವೆ ಎನ್ನುವುದನ್ನು ತಿಳಿಸಲು, ದೇಶದ ಮೂಲೆ ಮೂಲೆಯೂ ನಮಗೆ ದೆಹಲಿ ಎಂದ ಪ್ರಧಾನಿ, ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತೇನೆ. ಸ್ವತಃ ಮಳೆರಾಯನೂ ನಮಗೆ ಆಶೀರ್ವದಿಸಿದ್ದಾನೆ ಎಂದರು.
2022ರ ವೇಳೆಗೆ ಸಂಪದ ಯೋಜನೆಯ ಮೂಲಕ ರೈತರ ಆದಾಯವನ್ನು ದ್ವಿಗುಣಗೊಳಿಸುತ್ತೇವೆ. ಹಿಂದುಳಿದ ವರ್ಗಗಳ ಕೆನೆಪದರ ಮಿತಿ 8 ಲಕ್ಷಕ್ಕೆ ಹೆಚ್ಚಿಸುತ್ತೇನೆ. ನಾನು ಸಣ್ಣ ವ್ಯಕ್ತಿ. 1 ಕೋಟಿಗೂ ಅಧಿಕ ಕುಟುಂಬಗಳು ಗ್ಯಾಸ್ ಸಬ್ಸಿಡಿ ತ್ಯಾಗ ಮಾಡಿದವು. ಸಂಕಷ್ಟಗಳ ನಡುವೆಯೇ ಹೆಗಲು ಕೊಟ್ಟಿದ್ದೀರಿ. ಪ್ರಾಮಾಣಿಕರಿಗೆ, ಬಡವರಿಗೆ ಬದುಕುವ ಸಮಯ ಬಂದಿದೆ ಎಂದು ಹೇಳಿದರು.
3 ವರ್ಷದಲ್ಲಿ ಒಂದು ದಿನವೂ ಸುಮ್ಮನಿರಲಿಲ್ಲ ನಾನು ತಿಂಗಳುಗಟ್ಟಲೆ ಹೊಸ ಹೊಸ ಕೆಲಸಗಳ ಬಗ್ಗೆ ಮಾತನಾಡಬಲ್ಲೆ. ನಮಗೆ ಕೆಲಸ ಮಾಡುವ ವಿಶ್ವಾಸ ಹೆಚ್ಚುತ್ತಿದೆ. 2022ರಲ್ಲಿ ಭಾರತ 75ನೇ ವರ್ಷ ಸ್ವಾತಂತ್ರ್ಯೋತ್ಸವದ ಸಂಭ್ರಮವನ್ನು ಆಚರಿಸಲಿದೆ. ಈ ವೇಳೆ ಭಾರತ ಬದಲಾಗಬೇಕು. ನವ ಭಾರತಕ್ಕಾಗಿ ನಾವೆಲ್ಲ ಒಂದಾಗಿ ಕೆಲಸ ಮಾಡೋಣ ಎಂದು ಜನರಲ್ಲಿ ಮೋದಿ ಮನವಿ ಮಾಡಿದರು.
ಇದನ್ನೂ ಓದಿ: ದೇಶದ ಅತಿ ಉದ್ದವಾದ ಸೇತುವೆ ಉದ್ಘಾಟಿಸಿ, ಯುಪಿಎ ಸರ್ಕಾರಕ್ಕೆ ಮೋದಿ ಟಾಂಗ್ ನೀಡಿದ್ದು ಹೀಗೆ








