Tag: ಜಖಂ

  • ಬ್ಯಾಟ್ಸ್ ಮನ್ ಬಾರಿಸಿದ ಸಿಕ್ಸರ್ ಗೆ ಮೈದಾನದ ಹೊರಗಿದ್ದ ಕಾರು ಜಖಂ: ವಿಡಿಯೋ

    ಬ್ಯಾಟ್ಸ್ ಮನ್ ಬಾರಿಸಿದ ಸಿಕ್ಸರ್ ಗೆ ಮೈದಾನದ ಹೊರಗಿದ್ದ ಕಾರು ಜಖಂ: ವಿಡಿಯೋ

    ಹರಾರೆ: ಜಿಂಬಾಬ್ವೆ ತಂಡ ನೇಪಾಳ ತಂಡವನ್ನು ಸೋಲಿಸಿ 2019ರ ವಿಶ್ವಕಪ್ ಕನಸನ್ನು ಜೀವಂತವಾಗಿ ಉಳಿಸಿಕೊಂಡಿದೆ. ಅರ್ಹತಾ ಪಂದ್ಯದಲ್ಲಿ ನೇಪಾಳ ತಂಡವನ್ನು 116ರನ್ ಗಳಿಂದ ಜಿಂಬಾಬ್ವೆ ಸೋಲಿಸಿದೆ. ಅಷ್ಟೇ ಅಲ್ಲದೇ ಈ ಪಂದ್ಯದಲ್ಲಿ ಜಿಂಬಾಬ್ವೆಯ ಸಿಕಂದರ್ ರಾಜಾ ಸಿಕ್ಸರ್ ಬಾರಿಸಿ ಎಲ್ಲರ ಗಮನ ಸೆಳೆದಿದ್ದಾರೆ.

    ಜಿಂಬಾಬ್ವೆ ಆಟಗಾರ ಸಿಕಂದರ್ 66 ಎಸೆತಗಳಲ್ಲಿ 123ರನ್ ಬಾರಿಸಿದ್ದು, ಅವರ ಈ ಶತಕದ ನೆರವಿನಿಂದ ಜಿಂಬಾಬ್ವೆ 380 ರನ್ ಗಳನ್ನ ಬಾರಿಸಿ ನೇಪಾಳ ತಂಡಕ್ಕೆ ಟಾರ್ಗೆಟ್ ನೀಡಿತ್ತು.  ಆದರೆ ನೇಪಾಳ ತಂಡ 50 ಓವರ್ ಗಳಲ್ಲಿ 264 ರನ್ ಗಳಿಸಿ 8 ವಿಕೆಟ್ ಕಳೆದುಕೊಂಡು ಸೋಲನ್ನು ಅನುಭವಿಸಿತು.

    ನೇಪಾಳ ತಂಡದ ವಿರುದ್ಧ ಸಿಕಂದರ್ ಸೆಂಚುರಿ ಬಾರಿಸಿದಲ್ಲದೇ 3 ವಿಕೆಟ್‍ಗಳನ್ನು ಪಡೆದಿದ್ದಾರೆ. ಜಿಂಬಾಬ್ವೆ ತಂಡ 200 ರನ್ ಬಾರಿಸಿ 4 ವಿಕೆಟ್ ಕಳೆದುಕೊಂಡಾಗ ಸಿಕಂದರ್ ಮೈದಾನಕ್ಕೆ ಎಂಟ್ರಿ ನೀಡುವಾಗ ಅಲ್ಲಿದ್ದ ಜನರು ಅವರನ್ನು ಹುರಿದುಂಬಿಸಿ ಸ್ವಾಗತಿಸಿದರು. ಸಿಕಂದರ್ ಜೊತೆ ಜಿಂಬಾಬ್ವೆಯ ಅನುಭವಿ ಆಟಗಾರ ಬ್ರೆಂಡನ್ ಟೇಲರ್ ಕೂಡ 91 ಎಸೆತಗಳಲ್ಲಿ 100 ರನ್ ಬಾರಿಸಿದರು.

    ಐದನೇ ವಿಕೆಟ್ ಪಾಟ್ನರ್ ಶಿಪ್ ನಲ್ಲಿ ಟೇಲರ್ ಹಾಗೂ ಸಿಕಂದರ್ ಇಬ್ಬರೂ ಸೇರಿ 173 ರನ್ ಗಳನ್ನು ಬಾರಿಸಿದರು. ಸಿಕಂದರ್ ಒಂದೇ ಇನ್ನಿಂಗ್ಸ್ ನಲ್ಲಿ 7 ಬೌಂಡರಿ ಹಾಗೂ 9 ಸಿಕ್ಸ್ ಗಳನ್ನು ಬಾರಿಸಿದ್ದಾರೆ. ಅದರಲ್ಲಿ ಒಂದು ಸಿಕ್ಸ್ ಮಾತ್ರ ಎಲ್ಲರ ಗಮನ ಸೆಳೆಯಿತು. ಸಿಕಂದರ್ ಹೊಡೆದ ಸಿಕ್ಸರ್ ಮೈದಾನದಿಂದ ಹೊರಹೋಗಿದಲ್ಲದೇ ಅಲ್ಲಿ ನಿಲ್ಲಿಸಲಾಗಿದ್ದ ಕಾರನ್ನು ಜಖಂಗೊಳಿಸಿತ್ತು.

    ಸಿಕಂದರ್ ಸಿಕ್ಸರ್ ಬಾರಿಸಿದ ವಿಡಿಯೋವನ್ನು ಐಸಿಸಿ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, “ನಿನ್ನೆ ನಡೆದ ಪಂದ್ಯದಲ್ಲಿ ಸಿಕಂದರ್ ತಮ್ಮ ಮೊದಲ ಸೆಂಚುರಿ ಹೊಡೆದಿದ್ದಲ್ಲದೇ ತಮ್ಮ ಸಿಕ್ಸರ್ ಮೂಲಕ ಮೈದಾನ ಹೊರಗಿದ್ದ ಕಾರಿನ ಕಿಟಕಿಯ ಗಾಜನ್ನು ಸಹ ಪುಡಿಪುಡಿ ಮಾಡಿದ್ದಾರೆ.” ಎಂದು ಟ್ವೀಟ್ ಮಾಡಿದ್ದಾರೆ.

    ಸದ್ಯ ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  • ತಾ.ಪಂ ಅಧ್ಯಕ್ಷರ ಕಾರ್ ಜಖಂ ಪ್ರಕರಣ- ಮಾಜಿ ಶಾಸಕ ಸುರೇಶ್ ಗೌಡ ಪ್ರತಿಕ್ರಿಯೆ ನೀಡಿದ್ದು ಹೀಗೆ

    ತಾ.ಪಂ ಅಧ್ಯಕ್ಷರ ಕಾರ್ ಜಖಂ ಪ್ರಕರಣ- ಮಾಜಿ ಶಾಸಕ ಸುರೇಶ್ ಗೌಡ ಪ್ರತಿಕ್ರಿಯೆ ನೀಡಿದ್ದು ಹೀಗೆ

    ಮಂಡ್ಯ: ಜಿಲ್ಲೆಯ ನಾಗಮಂಗಲ ತಾಲೂಕು ಪಂಚಾಯ್ತಿ ಅಧ್ಯಕ್ಷ ನವೀನ್ ಕುಮಾರ್ ತಮ್ಮ ಕಾರಿನ ಮೇಲೆ ಕಲ್ಲು ಎತ್ತಿ ಹಾಕಿ ಜಖಂಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 25 ಜನರ ಮೇಲೆ ದೂರು ದಾಖಲಿಸಿದ್ದಾರೆ.

    ಆದರೆ ನವೀನ್ ಕುಮಾರ್ ಅವರ ಆರೋಪವನ್ನು ನಿರಾಕರಿಸಿರುವ ಮಾಜಿ ಶಾಸಕ ಸುರೇಶ್‍ಗೌಡ, ತಾಲೂಕು ಪಂಚಾಯ್ತಿ ಅಧ್ಯಕ್ಷರು ನನ್ನ ವಿರುದ್ಧ ಮಾತನಾಡಿ ಸಾಮಾಜಿಕ ಜಾಲತಾಣದಲ್ಲಿ ಅದನ್ನು ಹಾಕಿದ್ದಾರೆ. ಜೊತೆಗೆ ಚುನಾವಣೆ ಹತ್ತಿರ ಬರುತ್ತಿರುವುದರಿಂದ ತಮ್ಮ ಕಾರಿನ ಮೇಲೆ ತಾವೇ ಕಲ್ಲು ಎತ್ತಿಹಾಕಿ ಜಖಂಗೊಳಿಸಿಕೊಂಡು ನನ್ನ ಬೆಂಬಲಿಗರ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

    ಮಂಗಳವಾರ ರಾತ್ರಿ ನವೀನ್ ಅವರು ನಾಗಮಂಗಲದ ಬಿಜಿ ನಗರದಲ್ಲಿನ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಪತ್ನಿಯನ್ನು ಹೆರಿಗೆಗಾಗಿ ದಾಖಲಿಸಿದ್ದರು. ಆಸ್ಪತ್ರೆ ಬಳಿ ಕಾರು ನಿಲ್ಲಿಸಿ ಪತ್ನಿಗೆ ಊಟ ತರಲು ಹೊರಗೆ ತೆರಳಿದ್ದ ವೇಳೆ ಕಾರಿನ ಬಳಿ ಯಾರೂ ಇಲ್ಲದೇ ಇರುವುದನ್ನು ಗಮನಿಸಿದ ದುಷ್ಕರ್ಮಿಗಳು ನವೀನ್ ಅವರ ಕಾರಿನ ಮೇಲೆ ಕಲ್ಲು ಎತ್ತಾಕಿ ಕಾರನ್ನು ಜಖಂಗೊಳಿಸಿದ್ದರು.

    ನವೀನ್ ಜೆಡಿಎಸ್ ಬಂಡಾಯ ಶಾಸಕ ಚಲುವರಾಯಸ್ವಾಮಿ ಬೆಂಬಲಿಗರಾಗಿದ್ದು, ಸುರೇಶ್ ಗೌಡರ ವಿರುದ್ಧ ಸಭೆಯೊಂದರಲ್ಲಿ ಮಾತನಾಡಿದಕ್ಕೆ ಈ ರೀತಿ ಕೃತ್ಯವೆಸಗಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಅಲ್ಲದೆ ಸುರೇಶ್ ಗೌಡ ಬೆಂಬಲಿಗರಿಂದ ಪದೇ ಪದೇ ಕೊಲೆ ಬೆದರಿಕೆಗಳು ಬರುತ್ತಿವೆ ಎಂದು ಹೇಳಿದ್ದಾರೆ. ನಾನು ಚಲುವರಾಯಸ್ವಾಮಿ ಮೇಲಿನ ಅಭಿಮಾನದಿಂದ ನಮ್ಮ ನಾಯಕರನ್ನು ಬಹಿರಂಗಸಭೆಯಲ್ಲಿ ಅಸಭ್ಯವಾಗಿ ನಿಂದಿಸಿದ್ದ ಸುರೇಶ್‍ಗೌಡ ವಿರುದ್ಧ ಆಕ್ರೋಶ ಹೊರಹಾಕಿದ್ದೆ. ಇದನ್ನು ನನ್ನ ಗೆಳೆಯರು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ರು. ಅದನ್ನು ನೋಡಿ ಸುರೇಶ್‍ಗೌಡ ಬೆಂಬಲಿಗರು ನನಗೆ ಪ್ರಾಣ ಬೆದರಿಕೆ ಹಾಕಿ ಕಾರು ಜಖಂಗೊಳಿಸಿದ್ದಾರೆ ಎಂದು ನವೀನ್‍ಕುಮಾರ್ ಆರೋಪ ಮಾಡುತ್ತಿದ್ದಾರೆ.

    ನನಗೆ ಮಾಜಿ ಶಾಸಕ ಸುರೇಶ್‍ಗೌಡ ಅವರ ಬಗ್ಗೆ ಗೌರವವಿದೆ. ಇನ್ನು ಮುಂದೆ ಯಾವುದೇ ಗಲಾಟೆ ಬೇಡ ಎಂದು ನವೀನ್ ಕುಮಾರ್ ಮನವಿ ಮಾಡುತ್ತಿದ್ದಾರೆ.


  • ಮಂಡ್ಯ: ಪಂಚಾಯ್ತಿ ಅಧ್ಯಕ್ಷರ ಕಾರಿನ ಮೇಲೆ ಕಲ್ಲು ಎತ್ತಿ ಹಾಕಿ ಜಖಂಗೊಳಿಸಿದ್ರು

    ಮಂಡ್ಯ: ಪಂಚಾಯ್ತಿ ಅಧ್ಯಕ್ಷರ ಕಾರಿನ ಮೇಲೆ ಕಲ್ಲು ಎತ್ತಿ ಹಾಕಿ ಜಖಂಗೊಳಿಸಿದ್ರು

    ಮಂಡ್ಯ: ರಾಜಕೀಯ ದ್ವೇಷಕ್ಕೆ ಜಿಲ್ಲೆಯ ನಾಗಮಂಗಲ ತಾಲೂಕು ಪಂಚಾಯ್ತಿ ಅಧ್ಯಕ್ಷರ ಕಾರಿನ ಮೇಲೆ ಕಲ್ಲು ಎತ್ತಿ ಹಾಕಿ, ಕಾರನ್ನು ಸಂಪೂರ್ಣ ಜಖಂಗೊಳಿಸಿರುವ ಘಟನೆ ನಡೆದಿದೆ.

    ಶಾಸಕ ಚಲುವರಾಯಸ್ವಾಮಿ ಬೆಂಬಲಿಗರಾದ ಅಧ್ಯಕ್ಷ ನವೀನ್, ನನ್ನ ಕಾರಿನ ಮೇಲೆ ಮಾಜಿ ಶಾಸಕ ಸುರೇಶ್ ಗೌಡ ಬೆಂಬಲಿಗರು ಕಲ್ಲು ಎತ್ತಿ ಹಾಕಿ ಕಾರನ್ನು ಜಖಂಗೊಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.

    ನವೀನ್ ನಾಗಮಂಗಲದ ಬಿಜಿ ನಗರದಲ್ಲಿನ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ತಮ್ಮ ಪತ್ನಿಯನ್ನು ಹೆರಿಗೆಗಾಗಿ ದಾಖಲಿಸಿದ್ದರು. ಆಸ್ಪತ್ರೆ ಬಳಿ ಕಾರು ನಿಲ್ಲಿಸಿ ಪತ್ನಿಗೆ ಊಟ ತರಲು ಹೊರಗೆ ತೆರಳಿದ್ದರು. ಕಾರಿನ ಬಳಿ ಯಾರೂ ಇಲ್ಲದೇ ಇರುವುದನ್ನು ಗಮನಿಸಿದ ದುಷ್ಕರ್ಮಿಗಳು ನವೀನ್ ಅವರ ಕಾರಿನ ಮೇಲೆ ಕಲ್ಲು ಎತ್ತಾಕಿ ಕಾರನ್ನು ಜಖಂಗೊಳಿಸಿದ್ದಾರೆ.

    ನವೀನ್ ಜೆಡಿಎಸ್ ಬಂಡಾಯ ಶಾಸಕ ಚಲುವರಾಯಸ್ವಾಮಿ ಬೆಂಬಲಿಗರಾಗಿದ್ದು, ಸುರೇಶ್ ಗೌಡರ ವಿರುದ್ಧ ಸಭೆಯೊಂದರಲ್ಲಿ ಮಾತನಾಡಿದಕ್ಕೆ ಈ ರೀತಿ ಕೃತ್ಯವೆಸಗಿದ್ದಾರೆ ಎಂದು ಹೇಳುತ್ತಿದ್ದಾರೆ. ಅಲ್ಲದೆ ಸುರೇಶ್ ಗೌಡ ಬೆಂಬಲಿಗರಿಂದ ಪದೇ ಪದೇ ಕೊಲೆ ಬೆದರಿಕೆಗಳು ಬರುತ್ತಿದ್ದು, ಇಂದು ಕಾರನ್ನ ಜಖಂಗೊಳಿಸಿರೋದು ಅವರ ಬೆಂಬಲಿಗರೇ ಅಂತ ಗಂಭೀರ ಆರೋಪ ಮಾಡಿದ್ದಾರೆ.

    ಸದ್ಯಕ್ಕೆ ಬೆಳ್ಳೂರು ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.