Tag: ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್

  • ಭಾರತದ ಮೊದಲ ಆನ್-ಬೋರ್ಡ್ ಎಟಿಎಂ ಪ್ರಯೋಗ ಯಶಸ್ವಿ – ಇನ್ಮುಂದೆ ರೈಲಿನಲ್ಲೂ ಇರಲಿದೆ ಎಟಿಎಂ!

    ಭಾರತದ ಮೊದಲ ಆನ್-ಬೋರ್ಡ್ ಎಟಿಎಂ ಪ್ರಯೋಗ ಯಶಸ್ವಿ – ಇನ್ಮುಂದೆ ರೈಲಿನಲ್ಲೂ ಇರಲಿದೆ ಎಟಿಎಂ!

    ಮುಂಬೈ: ದೇಶದಲ್ಲೇ ಮೊದಲ ಬಾರಿಗೆ ರೈಲಿನಲ್ಲಿ ಸ್ಥಾಪಿಸಲಾದ ಎಟಿಎಂನ (ATM) ಪ್ರಾಯೋಗಿಕ ಪರೀಕ್ಷೆ ಮಂಗಳವಾರ ಯಶಸ್ವಿಯಾಗಿ ನಡೆದಿದೆ.

    ಬ್ಯಾಂಕ್ ಆಫ್ ಮಹಾರಾಷ್ಟ್ರದ (Bank Of Maharashtra) ಸಹಯೋಗದೊಂದಿಗೆ ಮನ್ಮಾಡ್‌ನಿಂದ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್‌ವರೆಗೆ (Chhatrapati Shivaji Maharaj Terminus) ಸಂಚರಿಸುವ ಪಂಚವಟಿ ಎಕ್ಸ್‌ಪ್ರೆಸ್‌ನಲ್ಲಿ (Panchavati Express) ಪ್ರಾಯೋಗಿಕ ಪರೀಕ್ಷೆ ನಡೆದಿದೆ. ಈ ಪ್ರಾಯೋಗಿಕ ಪರೀಕ್ಷೆಯ ಬಳಿಕ ಈಶಾನ್ಯ ಗಡಿನಾಡು ರೈಲ್ವೆಗಳಲ್ಲಿ ಎಟಿಎಂಗಳನ್ನು ಪರಿಚಯಿಸಲು ನಿರ್ಧರಿಸಿದೆ. ನಾಸಿಕ್‌ನ ಮನ್ಮಾಡ್ ಮತ್ತು ಮುಂಬೈ ನಡುವೆ ಸಂಚರಿಸುವ ಪಂಚವಟಿ ಎಕ್ಸ್‌ಪ್ರೆಸ್‌ನ ಎಸಿ ಕೋಚ್‌ನಲ್ಲಿ (AC Coach) ಎಟಿಎಂ ಸ್ಥಾಪಿಸಲಾಗಿದೆ.

    ರೈಲ್ವೆ ಅಧಿಕಾರಿಗಳ ಮಾಹಿತಿ ಪ್ರಕಾರ, ಪ್ರಾಯೋಗಿಕ ಪರೀಕ್ಷೆ ವೇಳೆ ಇಗತ್ಪುರಿ ಮತ್ತು ಕಸರಾ ಪ್ರದೇಶದಲ್ಲಿ ಸಿಗುವ ಕಡಿಮೆ ನೆಟ್‌ವರ್ಕ್ ಹೊರತುಪಡಿಸಿ, ಯಾವುದೇ ಅಡಚಣೆಯಿಲ್ಲದೇ ಎಟಿಎಂ ಕಾರ್ಯನಿರ್ವಹಿಸಲಿದೆ. ಸುಗಮವಾಗಿ ಸಂಚರಿಸಿದೆ. ನವೀನ ಮತ್ತು ಶುಲ್ಕ ರಹಿತ ಆದಾಯ ಕಲ್ಪನೆಗಳ ಯೋಜನೆ ಅಡಿಯಲ್ಲಿ ಭೂಸಾವಲ್ ವಿಭಾಗ ಮತ್ತು ಬ್ಯಾಂಕ್ ಆಫ್ ಮಹಾರಾಷ್ಟ್ರದ ಪಾಲುದಾರಿಕೆಯಲ್ಲಿ ಈ ಎಟಿಎಂ ಅನ್ನು ಪರಿಚಯಿಸಲಾಗಿದೆ.ಇದನ್ನೂ ಓದಿ: 5 ವರ್ಷ 5 ತಿಂಗಳು ತುಂಬಿದ್ದರೆ 1ನೇ ತರಗತಿಗೆ ಅಡ್ಮಿಷನ್: ಮಧು ಬಂಗಾರಪ್ಪ

    ಈ ಕುರಿತು ಭೂಸಾವಲ್‌ನ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಇತಿ ಪಾಂಡೆ ಮಾತನಾಡಿ, ಭೂಸಾವಲ್ ವಿಭಾಗವು ಆಯೋಜಿಸಿದ್ದ ನವೀನ ಮತ್ತು ಶುಲ್ಕ ರಹಿತ ಆದಾಯ ಕಲ್ಪನೆಗಳ ಯೋಜನಾ ಸಭೆಯಲ್ಲಿ ರೈಲುಗಳಲ್ಲಿ ಎಟಿಎಂ ಸ್ಥಾಪಿಸುವ ಕುರಿತು ಮಂಡಿಸಲಾಯಿತು. ಬಳಿಕ ಈ ಕುರಿತು ಚರ್ಚೆ ನಡೆಸಲಾಗಿದೆ. ಪ್ರಾಯೋಗಿಕ ಪರೀಕ್ಷೆಯ ಫಲಿತಾಂಶ ಉತ್ತಮವಾಗಿದ್ದು, ಜನರು ಚಲಿಸುವ ರೈಲಿನಲ್ಲಿ ಎಟಿಎಂ ಮೂಲಕ ಹಣವನ್ನು ಡ್ರಾ ಮಾಡಿಕೊಳ್ಳಬಹುದು. ಸದ್ಯ ಪಂಚವಟಿ ಎಕ್ಸ್ಪ್ರೆಸ್‌ನ ಎಸಿ ಕೋಚ್‌ನಲ್ಲಿ ಎಟಿಎಂ ಅಳವಡಿಸಲಾಗಿದ್ದು, ರೈಲಿನ ಎಲ್ಲಾ 22 ಬೋಗಿಗಳಲ್ಲಿರುವ ಪ್ರಯಾಣಿಕರು ಎಸಿ ಕೋಚ್‌ಗೆ ಬಂದು ಎಟಿಎಂನಿಂದ ಹಣ ಡ್ರಾ ಮಾಡಿಕೊಳ್ಳಬಹುದು.

    ಮುಂಬೈ-ಹಿಂಗೋಲಿ ಜನಶತಾಬ್ದಿ ಎಕ್ಸ್‌ಪ್ರೆಸ್‌ ರೈಲು ಪಂಚವಟಿ ಎಕ್ಸ್‌ಪ್ರೆಸ್‌ನೊಂದಿಗೆ ತನ್ನ ರೇಕ್ ಅನ್ನು ಹಂಚಿಕೊಳ್ಳುವುದರಿಂದ, ಜನಶತಾಬ್ದಿ ಎಕ್ಸ್‌ಪ್ರೆಸ್‌ ರೈಲಿನ ಪ್ರಯಾಣಿಕರಿಗೂ ಈ ಎಟಿಎಂ ಲಭ್ಯವಿರುತ್ತದೆ. ಹೀಗಾಗಿ ಮುಂಬೈ-ಹಿಂಗೋಲಿ ಮಾರ್ಗದಲ್ಲಿ ಪ್ರಯಾಣಿಸುವ ಪ್ರಯಾಣಿಕರೂ ಕೂಡ ಎಟಿಎಂನ ಲಾಭ ಪಡೆದುಕೊಳ್ಳಬಹುದು ಎಂದಿದ್ದಾರೆ.

    ಪ್ರಯಾಣಿಕ ಸಂಜಯ್ ಎಂಬುವವರು ಮಾತನಾಡಿ, ಎಟಿಎಂನಿಂದ ಹಣ ಡ್ರಾ ಮಾಡಿಕೊಳ್ಳುವುದರ ಜೊತೆಗೆ ಬ್ಯಾಂಕ್ ಅಕೌಂಟ್ ಸ್ಟೇಟ್‌ಮೆಂಟ್, ಚೆಕ್ ಬುಕ್ ಆರ್ಡರ್ ಮಾಡಬಹುದಾಗಿದೆ ಎಂದು ತಿಳಿಸಿದರು.

    ರೈಲ್ವೆ ಅಧಿಕಾರಿಯೊಬ್ಬರು ಮಾತನಾಡಿ, ಈ ಸೇವೆ ಜನಪ್ರಿಯವಾದರೆ ಹೆಚ್ಚಿನ ರೈಲುಗಳಲ್ಲಿ ಎಟಿಎಂ ಸ್ಥಾಪಿಸಲಾಗುವುದು ಮತ್ತು ಭದ್ರತೆಗಾಗಿ ಎಟಿಎಂ ಶಟರ್ ವ್ಯವಸ್ಥೆಯನ್ನು ಹೊಂದಿದ್ದು, 24/7 ಸಿಸಿಟಿವಿ ಕಣ್ಗಾವಲು ಮೂಲಕ ಮೇಲ್ವಿಚಾರಣೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಲಕ್ನೋ ಸೂಪರ್‌ ಜೈಂಟ್ಸ್‌ಗೆ ಬಿಗ್‌ ಬೂಸ್ಟ್‌ – ರಾಕೆಟ್‌ ವೇಗಿ ಮಯಾಂಕ್‌ ಯಾದವ್‌ ಕಂಬ್ಯಾಕ್‌

  • ರೈಲಲ್ಲಿ ಮಹಿಳೆ ಮುಂದೆ ಪ್ಯಾಂಟ್ ಜಿಪ್ ಬಿಚ್ಚಿದವ ಕೊನೆಗೂ ಸಿಕ್ಕಿಬಿದ್ದ!

    ರೈಲಲ್ಲಿ ಮಹಿಳೆ ಮುಂದೆ ಪ್ಯಾಂಟ್ ಜಿಪ್ ಬಿಚ್ಚಿದವ ಕೊನೆಗೂ ಸಿಕ್ಕಿಬಿದ್ದ!

    ಮುಂಬೈ: ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ಕಾರಿನಲ್ಲಿ ಚಾಲಕನೊಬ್ಬ ಟೆಕ್ಕಿ ಯುವತಿಯ ಮುಂದೆ ಹಸ್ತಮೈಥುನ ಮಾಡಿದ ಪ್ರಕರಣ ಮಾಸುವ ಮುನ್ನವೇ ಮುಂಬೈ ಲೋಕಲ್ ಟ್ರೈನಲ್ಲೂ ಇಂಥದ್ದೇ ಘಟನೆಯೊಂದು ವರದಿಯಾಗಿದೆ. ಮತ್ತೆ ಮತ್ತೆ ಇಂತಹ ಘಟನೆ ನಡೆಯುತ್ತಿರುವುದರಿಂದ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ.

    ಘಟನೆ ಸಂಬಂಧ 30 ವರ್ಷದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ಹಾಗೂ ಮಸ್ಜಿದ್ ಬಂದರ್ ನಡುವೆ ಶನಿವಾರ ಬೆಳಗ್ಗೆ ಮಹಿಳೆ ಸಂಚರಿಸುವಾಗ ಈ ಕೃತ್ಯವೆಸಗಿದ್ದಾನೆ. ಮಹಿಳೆ ರೈಲಿನಲ್ಲಿ ಬೇಲಾಪುರಕ್ಕೆ ಪ್ರಯಾಣಿಸುತ್ತಿದ್ದರು.

    ಮಹಿಳಾ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ರೈಲಿನ ಮತ್ತೊಂದು ಕಂಪಾರ್ಟ್ ಮೆಂಟ್ ನಲ್ಲಿದ್ದ ವ್ಯಕ್ತಿ ತನ್ನ ಪ್ಯಾಂಟ್ ನ ಜಿಪ್ ಬಿಚ್ಚಿ ಗುಪ್ತಾಂಗ ಪ್ರದರ್ಶಿಸಿದ್ದಾನೆ. ಈ ಹಿನ್ನೆಲೆಯಲ್ಲಿ ರೈಲು ಇಳಿದ ತಕ್ಷಣ ಮಹಿಳೆ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ನಲ್ಲಿದ್ದ ಪೊಲೀಸರಿಗೆ ದೂರು ನೀಡಿದ್ದಾರೆ.

    ದೂರಿನ ಹಿನ್ನೆಲೆಯಲ್ಲಿ ಆರೋಪಿಯ ಪತ್ತೆಗೆ ಹಲವು ತಂಡಗಳನ್ನು ರಚಿಸಲಾಯಿತು. ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದಾಗ ಆರೋಪಿ ಪತ್ತೆಯಾಗಿದ್ದಾನೆ. ಸಿಸಿಟಿವಿ ದೃಶ್ಯಗಳನ್ನಾಧರಿಸಿ ಪರಿಶೀಲನೆ ಮುಂದುವರೆಸಿದ ಪೊಲೀಸರು ಇಂದು ಬೆಳಗ್ಗೆ 6 ಗಂಟೆಗೆ ಬಂಧಿಸಿದ್ದಾರೆ. ಕೂಲಿ ಕಾರ್ಮಿಕನಾಗಿರುವ ಈತ ಒಡಿಶಾ ಮೂಲದವನು ಎಂದು ಪೊಲೀಸರು ತಿಳಿಸಿದ್ದಾರೆ. ಈತನ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.