Tag: ಚುನಾವಣೆ 2019

  • ಮೈತ್ರಿ ಸರ್ಕಾರ ಉರುಳಲು ಬಿಡಲ್ಲ ಎಂದ ದೊಡ್ಡಗೌಡರಿಗೆ ಧರ್ಮಸಂಕಟ..!

    ಮೈತ್ರಿ ಸರ್ಕಾರ ಉರುಳಲು ಬಿಡಲ್ಲ ಎಂದ ದೊಡ್ಡಗೌಡರಿಗೆ ಧರ್ಮಸಂಕಟ..!

    -ಹಾಸನ ಕ್ಷೇತ್ರ ಬಿಟ್ಟುಕೊಟ್ಟು ಕಂಡೀಷನ್ ಅಪ್ಲೈ ಎಂದ ಕಾಂಗ್ರೆಸ್!

    ಬೆಂಗಳೂರು: ರಾಜ್ಯದಲ್ಲಿ ಮೈತ್ರಿ ಸರ್ಕಾರ ಉರುಳಲ್ಲ ಬಿಡಲ್ಲ ಎಂದು ಹೇಳಿದ್ದ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಧರ್ಮ ಸಂಕಟದಲ್ಲಿ ಸಿಲುಕಿಕೊಂಡ್ರಾ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿವೆ.

    ಲೋಕಸಭಾ ಚುನಾವಣೆಗೂ ಮೈತ್ರಿ ಘೋಷಿಸಿಕೊಂಡಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಕ್ಷೇತ್ರಗಳನ್ನು ಹಂಚಿಕೊಂಡಿದ್ದು, ಅಧಿಕೃತ ಪ್ರಕಟನೆ ಹೊರಬೀಳಬೇಕಿದೆ. ಹಾಸನ ಲೋಕಸಭಾ ಕ್ಷೇತ್ರವನ್ನು ದೇವೇಗೌಡರು ಮೊಮ್ಮಗ ಪ್ರಜ್ವಲ್ ರೇವಣ್ಣಗೆ ಬಿಟ್ಟುಕೊಟ್ಟಿದ್ದಾರೆ. ಹಾಸನ ಕ್ಷೇತ್ರವನ್ನು ದಳಕ್ಕೆ ಬಿಟ್ಟುಕೊಡಲು ಕೈ ನಾಯಕರು ಒಪ್ಪಿಗೆ ಸೂಚಿಸಿ ಷರತ್ತು ಹಾಕಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಏನದು ಷರತ್ತು?
    ದೇವೇಗೌಡರು ಹಾಸನದಿಂದ ಸ್ಪರ್ಧೆ ಮಾಡಿದ್ರೆ ಕಾಂಗ್ರೆಸ್ ಅಭ್ಯರ್ಥಿಗಳ ಸ್ಪರ್ಧೆ ಮಾಡಲ್ಲ. ಒಂದು ವೇಳೆ ಪ್ರಜ್ವಲ್ ರೇವಣ್ಣ ಕಣಕ್ಕಿಳಿದ್ರೆ ಕಾಂಗ್ರೆಸ್ ಅಭ್ಯರ್ಥಿಯೂ ಕಣಕ್ಕಿಳಿಯಲಿದ್ದಾರೆ ಎಂದು ಕೈ ನಾಯಕರು ಷರತ್ತು ಹಾಕಿದ್ದಾರಂತೆ. ಮೊಮ್ಮಗನ ರಾಜಕೀಯ ಭವಿಷ್ಯ ರೂಪಿಸಲು ಮುಂದಾಗಿದ್ದ ದೊಡ್ಡಗೌಡರು ಧರ್ಮ ಸಂಕಟದಲ್ಲಿ ಸಿಲುಕಿದಂತಾಗಿದೆ ಎಂದು ಪಕ್ಷದಲ್ಲಿಯೆ ಚರ್ಚೆಗಳು ನಡೆದಿವೆ.

    ಕೆಲವು ದಿನಗಳ ಹಿಂದೆ ಸಿಎಂ ಕುಮಾರಸ್ವಾಮಿ ರಾಜೀನಾಮೆ ನೀಡಲು ಸಿದ್ಧನಿದ್ದೇನೆ ಎಂದು ಹೇಳಿಕೆ ನೀಡಿದ ಮೇಲೆ ದೊಡ್ಡಗೌಡರು ಮೈತ್ರಿ ಸರ್ಕಾರ ಉರುಳಲು ಬಿಡಲ್ಲ ಎಂದು ಹೇಳಿದ್ದರು. ಇದೀಗ ದೊಡ್ಡಗೌಡರೇ ಧರ್ಮ ಸಂಕಟದಲ್ಲಿ ಸಿಲುಕಿದಂತಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಕಾಫಿನಾಡಿನಲ್ಲಿ ಲಾಯೆಂಗೇ ಹಮ್ ಲಾಯೆಂಗೆ ಜೂ.ಇಂದಿರಾಗಾಂಧಿ ಕೋ ಲಾಯೆಂಗೆ ಘೋಷ ವಾಕ್ಯ

    ಕಾಫಿನಾಡಿನಲ್ಲಿ ಲಾಯೆಂಗೇ ಹಮ್ ಲಾಯೆಂಗೆ ಜೂ.ಇಂದಿರಾಗಾಂಧಿ ಕೋ ಲಾಯೆಂಗೆ ಘೋಷ ವಾಕ್ಯ

    ಚಿಕ್ಕಮಗಳೂರು: 1979ರಲ್ಲಿ ಚಿಕ್ಕಮಗಳೂರಲ್ಲಿ ಝೇಂಕರಿಸುತ್ತಿದ್ದ ಲಾಯೆಂಗೆ ಹಮ್ ಲಾಯೆಂಗೆ ಇಂದಿರಾಗಾಂಧಿ ಕೋ ಲಾಯೆಂಗೆ, ಆದಾ ರೋಟಿ ಖಾಯೆಂಗೆ. ಎಂಬ ಘೋಷವಾಕ್ಯ ಇದೀಗ ಮತ್ತೊಮ್ಮೆ ಕಾಫಿನಾಡಿನ ಕಾಂಗ್ರೆಸ್ಸಿಗರ ಟ್ಯಾಗ್‍ಲೈನ್ ಆಗಿದೆ. ಆದರೆ ಹೆಸರೊಂದು ಬೇರೆಯಷ್ಟೇ. ಅಂದು ಅಜ್ಜಿಗೆ ಗ್ರೀನ್ ಕಾರ್ಪೇಟ್ ಹಾಸಿದ್ದ ಕಾಫಿನಾಡಿಗರು ಇದೀಗ ಜ್ಯೂನಿಯರ್ ಇಂದಿರಾಗೂ ಲಾಯೆಂಗಮ್ಮ ಲಾಯೆಂಗೆ ಅಂತಿದ್ದಾರೆ. ಜ್ಯೂನಿಯರ್ ಇಂದಿರಾ ಬರುತ್ತಾರೋ ಇಲ್ವೋ ಗೊತ್ತಿಲ್ಲ. ಕಾಫಿನಾಡ ಕಾಂಗ್ರೆಸ್ಸಿನ ಸದ್ಯದ ಸ್ಥಿತಿಯಂತು ಲಾಯೆಂಗ ಹಮ್ ಎಂಬಂತಿದೆ.

    ಚಿಕ್ಕಮಗಳೂರು ಇಂದಿರಾಗಾಂಧಿ ಅವರಿಗೆ ರಾಜಕೀಯ ಪುನರ್ಜನ್ಮ ನೀಡಿದ ಹಾಗೂ ನೆಹರೂ ಕುಟುಂಬ ತಮ್ಮ ಜೀವಿತಾವಧಿಯಲ್ಲೇ ಮರೆಯಲಾರದ ಜಿಲ್ಲೆ. ಅಂತಹ ಕಾಫಿನಾಡಿನಿಂದ ಇಂದಿರಾ ಅವರ ಮೊಮ್ಮಗಳು ಪ್ರಿಯಾಂಕ ರಾಜಕೀಯಕ್ಕೆ ಅಖಾಡಕ್ಕಿಳಿಯುತ್ತಾರೆಂಬ ಸುದ್ದಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಅಂದು ಇಂದಿರಾಗಾಂಧಿಗೆ ಡಿ.ಬಿ.ಚಂದ್ರೇಗೌಡ ಕ್ಷೇತ್ರ ಬಿಟ್ಟುಕೊಟ್ಟಂತೆ ಇಂದು ಯಾರೂ ಬಿಟ್ಟುಕೊಡುವ ಅಗತ್ಯವಿಲ್ಲ.

    ಸದ್ಯಕ್ಕೆ ಉಡುಪಿ-ಚಿಕ್ಕಮಗಳೂರಿನಿಂದ ಸ್ಪರ್ಧಿಸುವ ಕಾಂಗ್ರೆಸ್ ಅಭ್ಯರ್ಥಿ ಯಾರೆಂದು ಕಾರ್ಯಕರ್ತರಿಗೆ ಗೊತ್ತಿಲ್ಲ. ವಿನಯ್ ಕುಮಾರ್ ಸೊರಕೆ, ಪ್ರಮೋದ್ ಮದ್ವರಾಜ್ ಹೆಸರು ಕೇಳಿ ಬರುತ್ತಿದ್ದರೂ ಎರಡೂ ಜಿಲ್ಲೆಯನ್ನೂ ಸರಿದೂಗಿಸುವಂತವರು ಬೇಕೆಂಬುದು ಕಾರ್ಯಕರ್ತರ ವಾದ. ಹಾಗಾಗಿ 20 ವರ್ಷಗಳ ಬಳಿಕ ರಾಜಕೀಯಕ್ಕೆ ಬರುತ್ತಿರುವ ಪ್ರಿಯಾಂಕ ಗಾಂಧಿ ಉಡುಪಿ-ಚಿಕ್ಕಮಗಳೂರಿನಿಂದ ಸ್ಪರ್ಧಿಸಿದ್ರೆ ಮತ್ತೊಂದು ಹೊಸ ಇತಿಹಾಸ ಸೃಷ್ಟಿಯಾಗಲಿದ್ದು, ಅವರನ್ನ ಗೆಲ್ಲಿಸೋದಕ್ಕೆ ಯುವ ಸಮೂಹ ಹಾಗೂ ಕಾರ್ಯಕರ್ತರು ಹಗಲಿರುಳು ಶ್ರಮಿಸುವುದಕ್ಕೆ ಸಿದ್ಧವಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ರೂಬಿನ್ ಮೊಸೆಸ್ ಹೇಳುತ್ತಾರೆ.

    ಅಂದು ಇಂದಿರಾಗಾಂಧಿ ಅವರ ವಿರುದ್ಧ ನಟ ಡಾ.ರಾಜ್‍ಕುಮಾರ್ ನಿಲ್ಲಿಸೋದಕ್ಕೆ ತೆರೆಮರೆಯಲ್ಲಿ ಎಲ್ಲಾ ಕಸರತ್ತು ನಡೆದಿತ್ತು. ಆದರೆ ರಾಜಣ್ಣ ರಾಜಕೀಯಕ್ಕೆ ಬರೋದಕ್ಕೆ ಸುತಾರಾಂ ಒಪ್ಪಲಿಲ್ಲವಂತೆ. ಕೊನೆಗೆ 1968 ರಿಂದ 1971ರವರೆಗೆ ಮುಖ್ಯಮಂತ್ರಿಯಾಗಿದ್ದ ವೀರೇಂದ್ರ ಪಾಟೀಲ್ ಕಾಂಗ್ರೆಸ್ ಅಧಿನಾಯಕಿ ವಿರುದ್ಧ ಅಖಾಡಕ್ಕಿಳಿದು ಸೋತಿದ್ದರು. ಇಲ್ಲಿಂದ ಗೆದ್ದ ಇಂದಿರಾ ಗಾಂಧಿ ಮತ್ತೆ ದೇಶದ ಆಡಳಿತದ ಚುಕ್ಕಾಣಿ ಹಿಡಿದಿದ್ದರು. ಇದೀಗ ಅವರ ಮೊಮ್ಮಗಳು ಪ್ರಿಯಾಂಕ ಫೆಬ್ರವರಿ 4 ರಂದು ಮೌನಿ ಅಮಾವಾಸ್ಯೆಯಂದು ಕುಂಭಮೇಳದಲ್ಲಿ ಪವಿತ್ರ ಸ್ನಾನ ಮಾಡಿ ರಾಜಕೀಯಕ್ಕೆ ಎಂಟ್ರಿ ಕೊಡ್ತಿರೋದ್ರಿಂದ ಅವರ ರಾಜಕೀಯ ಜೀವನ ಇಲ್ಲಿಂದಲೇ ಆರಂಭವಾಗಲಿ ಅನ್ನೋದು ಹಿರಿಯ ಕಾಂಗ್ರೆಸ್ಸಿಗರ ಅಭಿಪ್ರಾಯ. ಕಾಫಿನಾಡಿಗರು ಪ್ರಿಯಾಂಕ ಗಾಂಧಿಯನ್ನ ಚಿಕ್ಕಮಗಳೂರಿಗೆ ಆಹ್ವಾನ ನೀಡಿದ್ದಾರೆ. ಜನ ಬದಲಾವಣೆ ಬಯಸಿದ್ದಾರೆ. ಅವರು ಇಲ್ಲಿ ಸ್ಪರ್ಧಿಸಿದ್ರೆ ಗೆಲ್ಲಿಸಿ ಅವರನ್ನ ಇಲ್ಲೇ ಗೆಲ್ಲಿಸಿ ಲೋಕಸಭೆಗೆ ಕಳಿಸೋಕೆ ಕಾಫಿನಾಡಿಗರು ಪಣ ತೊಟ್ಟಿದ್ದಾರೆ. ಕಾರ್ಯಕರ್ತರಲ್ಲಿ ಹುಮ್ಮಸ್ಸಿರೋದಂತು ಸತ್ಯ. ಆದರೆ ಜ್ಯೂನಿಯರ್ ಇಂದಿರಾ ಬರುತ್ತಾರೋ ಇಲ್ವೋ ಅನ್ನೋದು ಮಾತ್ರ ಗೊಂದಲಮಯವಾಗಿದೆ.

     

    ಕಾಫಿನಾಡ ಕಾಂಗ್ರೆಸ್ ಪ್ರಿಯಾಂಕ ಆಗಮನಕ್ಕಂತೂ ತುದಿಗಾಲಲ್ಲಿ ನಿಂತಿದೆ. 1980ರ ಆಸುಪಾಸಿನ ರಾಜಕೀಯವೇ ಬೇರೆ. 2020ರ ಆಸುಪಾಸಿನ ರಾಜಕೀಯವೇ ಬೇರೆ. ಇಂದು ಪ್ರಿಯಾಂಕ ಬಂದ್ರು ಗೆಲವು ಅಜ್ಜಿಗೆ ಒಲಿದಷ್ಟು ಸುಲಭವಾಗಿ ಸಿಗುವುದಿಲ್ಲ ಅನ್ನೋದಂತು ಸ್ಪಷ್ಟ. ಉಡುಪಿ-ಚಿಕ್ಕಮಗಳೂರಿನ 9 ಎಂಎಲ್‍ಎಗಳಲ್ಲಿ 8 ಜನ ಬಿಜೆಪಿಯವರು. ಸಾಲದಕ್ಕೆ ಸ್ಟ್ರಾಂಗ್ ಹಿಂದು ಅಜೆಂಡಾದ ಮಲೆನಾಡ ಜೊತೆ ಮೋದಿ ಅಲೆ ಇವೆಲ್ಲದರ ನಡುವೆ ಪ್ರಿಯಾಂಕ ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ಬರುತ್ತಾರ ಅನ್ನೋದು ಮಾತ್ರ ಯಕ್ಷಪ್ರಶ್ನೆಯಾಗಿ ಉಳಿದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಲೋಕ ಸಮರದಲ್ಲಿ ಜಂಟಿ ಹೋರಾಟ ಫಿಕ್ಸ್-ಕೈ, ತೆನೆ ಕ್ಷೇತ್ರ ಹಂಚಿಕೆ ಬಹುತೇಕ ಅಂತಿಮ

    ಲೋಕ ಸಮರದಲ್ಲಿ ಜಂಟಿ ಹೋರಾಟ ಫಿಕ್ಸ್-ಕೈ, ತೆನೆ ಕ್ಷೇತ್ರ ಹಂಚಿಕೆ ಬಹುತೇಕ ಅಂತಿಮ

    ಬೆಂಗಳೂರು: ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಯನ್ನು ಘೋಷಿಸಿಕೊಂಡಿದ್ದು, ಕ್ಷೇತ್ರಗಳ ಹಂಚಿಕೆ ಬಹುತೇಕ ಅಂತಿಮವಾಗಿದೆ.

    ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ನಲ್ಲಿ ಭಿನ್ನಮತ ಸ್ಫೋಟವಾಗಿತ್ತು. ಹಾಲಿ ಸಂಸದರು ತಮ್ಮ ಕ್ಷೇತ್ರಗಳನ್ನು ಜೆಡಿಎಸ್ ಗೆ ಬಿಟ್ಟುಕೊಡಲು ಸಾಧ್ಯವಿಲ್ಲ ಎಂದು ಹೈಕಮಾಂಡ್ ಮುಂದೆ ಅಸಮಾಧಾನ ಹೊರ ಹಾಕಿದ್ದರು. ಇದೀಗ ಬಹುತೇಕ ಕ್ಷೇತ್ರಗಳ ಹಂಚಿಕೆಯಾಗಿದ್ದು, ಕಾಂಗ್ರೆಸ್‍ಗೆ 20 ಸೀಟ್, ಜೆಡಿಎಸ್‍ಗೆ 8 ಸೀಟ್ ಎಂಬ ಮಾಹಿತಿ ಲಭ್ಯವಾಗಿದೆ. ಹಳೆ ಮೈಸೂರು ಭಾಗದಲ್ಲಿ ಮೂರು, ಬೆಂಗಳೂರು, ಮಲೆನಾಡು ಭಾಗದಲ್ಲಿ ತೆನೆಗೆ ಒಂದೊಂದು ಸೀಟು ಮತ್ತು ಉತ್ತರ ಕರ್ನಾಟಕದಲ್ಲಿ 3 ಕ್ಷೇತ್ರ ಬಿಟ್ಟುಕೊಡಲು ಕೈ ಚಿಂತನೆ ನಡೆಸಿದೆ.

    ಯಾವ ಕ್ಷೇತ್ರಗಳು?:
    ಮೈಸೂರು, ಮಂಡ್ಯ, ಹಾಸನ, ಬೆಂಗಳೂರು ಉತ್ತರ, ಶಿವಮೊಗ್ಗ, ಬೀದರ್, ವಿಜಯಪುರ, ರಾಯಚೂರು ಕೂಡ ಜೆಡಿಎಸ್ ತೆಕ್ಕೆಗೆ ಸಿಗಲಿದೆ. ಜೆಡಿಎಸ್ ತನ್ನ ಅನುಕೂಲಕ್ಕೆ ತಕ್ಕಂತೆ ಸೀಟು ಹಂಚಿಕೊಂಡಿದ್ದು, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ ಕ್ಷೇತ್ರಗಳನ್ನು ತನ್ನ ತೆಕ್ಕೆಯಲ್ಲೇ ಕಾಂಗ್ರೆಸ್ ಉಳಿಸಿಕೊಂಡಿದೆ. ದೋಸ್ತಿಗಳ ಸೀಟು ಹಂಚಿಕೆ ಬಹುತೇಕ ಅಂತಿಮವಾಗಿದ್ದು, ಅಧಿಕೃತ ಘೋಷಣೆ ಮಾಡಬೇಕಿದೆ. ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಸ್ಪರ್ಧಿಸಲಿದ್ದಾರೆ ಎಂದು ಜೆಡಿಎಸ್ ವರಿಷ್ಠ ದೇವೇಗೌಡರು ಹೇಳಿದ್ದಾರೆ. ಬೆಂಗಳೂರು ಉತ್ತರದಿಂದ ದೇವೇಗೌಡರು ಮತ್ತು ಮಂಡ್ಯದಿಂದ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸುವ ಸಾಧ್ಯತೆಗಳಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಮ್ಮ ಪಕ್ಷದಿಂದ ರಾಜ್ಯದ 28 ಕ್ಷೇತ್ರಗಳಿಂದ ಸ್ಪರ್ಧೆ: ಉಪೇಂದ್ರ

    ನಮ್ಮ ಪಕ್ಷದಿಂದ ರಾಜ್ಯದ 28 ಕ್ಷೇತ್ರಗಳಿಂದ ಸ್ಪರ್ಧೆ: ಉಪೇಂದ್ರ

    -ಅಭ್ಯರ್ಥಿಗಳ ಆಯ್ಕೆ ಹೇಗಿರುತ್ತೆ?

    ಬೆಂಗಳೂರು: ಈ ಬಾರಿಯ ಲೋಕಸಭಾ ಚುನಾವಣೆಗೆ ನಮ್ಮ ಪಕ್ಷದಿಂದ 28 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಸ್ಪರ್ಧೆ ಮಾಡಲಿದ್ದಾರೆ ಎಂದು ಉತ್ತಮ ಪ್ರಜಾಕೀಯ ಪಕ್ಷದ ಸಂಸ್ಥಾಪಕ ಮತ್ತು ಅಧ್ಯಕ್ಷ ಉಪೇಂದ್ರ ಹೇಳಿದ್ದಾರೆ.

    ನಗರದ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಮ್ಮ ಗುರುತು ಆಟೋ ಆಗಿದ್ದು, ಅಧಿಕಾರಕ್ಕಾಗಿ ನಾನು ಪಕ್ಷ ಮಾಡಿಲ್ಲ. ಜನರಿಗೆ ಒಳ್ಳೆಯದಾಗಬೇಕು ಮತ್ತು ವ್ಯವಸ್ಥೆ ಬದಲಾವಣೆ ಆಗಬೇಕು ಅನ್ನೋದು ನಮ್ಮ ಗುರಿಯಾಗಿದೆ. ಪ್ರತಿಯೊಬ್ಬರಿಗೂ ಬದಲಾವಣೆ ಬೇಕು ಅನ್ನಿಸುತ್ತಿದೆ. ಹಾಗಾಗಿ ಈ ಬಾರಿ ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.

    ಚುನಾವಣಾ ಪ್ರಣಾಳಿಕೆ ಎಂಬ ಪರಿಕಲ್ಪನೆ ತಪ್ಪು. ನಿಜವಾದ ಪ್ರಣಾಳಿಕೆ ಏನು ಎಂಬುದು ಜನರಿಗೆ ಗೊತ್ತಿದೆ. ನಮ್ಮ ಅಭ್ಯರ್ಥಿ ಜನರೊಂದಿಗೆ ಚರ್ಚಿಸಿ ಮಾಹಿತಿ ಸಂಗ್ರಹಿಸುತ್ತಾರೆ. ಹಾಗಾಗಿ ಅಭ್ಯರ್ಥಿಗಳೇ ನಮ್ಮ ಪಕ್ಷದ ಪ್ರಣಾಳಿಕೆ ಆಗಿರುತ್ತಾರೆ. ಈ ವಿಷಯಲ್ಲಿ ನಾವು ಒಬ್ಬಿಬ್ಬರ ಅಭಿಪ್ರಾಯವನ್ನು ಪಡೆದುಕೊಳ್ಳಲ್ಲ. ಶೇ.55ರಷ್ಟು ಜನರ ಅಭಿಪ್ರಾಯವನ್ನು ನಮ್ಮ ಪಕ್ಷ ಒಪ್ಪಿಕೊಳ್ಳಲಿದೆ. ಅದರಂತೆಯೇ ಕೆಲಸವನ್ನು ಮಾಡಲಿದೆ ಎಂದು ಉಪೇಂದ್ರ ಚುನಾವಣಾ ತಯಾರಿಯನ್ನು ಬಿಚ್ಚಿಟ್ಟರು.

    ಸಂವಿಧಾನದಲ್ಲಿ ಚುನಾವಣೆಗೆ ಸ್ಪರ್ಧೆ ಮಾಡಲು ಇಂತಹದೇ ವಿದ್ಯಾರ್ಹತೆ ಇರಬೇಕೆಂದು ಹೇಳಿಲ್ಲ. ಆಡಳಿತ ನಡೆಸಲು ಕೆಎಎಸ್, ಐಎಎಸ್ ಅಂತಹ ಅಧಿಕಾರಿಗಳು ಅಡಳಿತ ವರ್ಗದಲ್ಲಿರುತ್ತಾರೆ. ನಮ್ಮ ಸಮಸ್ಯೆಗಳಿಗೆ ಸ್ಪಂದಿಸುವ ಮತ್ತು ನಮ್ಮನ್ನು ಪ್ರತಿನಿಧಿಸುವ ವ್ಯಕ್ತಿಯನ್ನು ಗೆಲ್ಲಿಸಬೇಕು. ಹಾಗಾಗಿ ಅಭ್ಯರ್ಥಿಗಳೇ ನಮ್ಮ ಚುನಾವಣಾ ಪ್ರಣಾಳಿಕೆ ಆಗಿರುತ್ತಾರೆ ಎಂದು ಹೇಳಿದರು.

    ನಮ್ಮ ಪಕ್ಷದಿಂದ ಎರಡು ಪ್ರಣಾಳಿಕೆ ಇರುತ್ತದೆ. ಪಕ್ಷದಿಂದ ಸ್ಪರ್ಧೆ ಮಾಡುವ ಇಚ್ಚಿಸುವ ನಾಯಕರು ತಮ್ಮ ಪ್ರಣಾಳಿಕೆ ಮೂಲಕ ಬನ್ನಿ. ಪ್ರಣಾಳಿಕೆಯಲ್ಲಿ ನೀವು ಹೇಗೆ ಕೆಲಸ ಮಾಡುತ್ತೀರಿ? ಜನರು ಮತ್ತು ಸರ್ಕಾರದ ನಡುವೆ ಸೇತುವೆಯಾಗಿ ಹೇಗೆ ನಿಲ್ಲುತ್ತೀರಿ ಎಂಬುದನ್ನು ನಮಗೆ ತೋರಿಸಬೇಕು. ಒಬ್ಬ ವ್ಯಕ್ತಿಯನ್ನು ಈ ಕ್ಷೇತ್ರದಿಂದ ಚುನಾವಣೆಗೆ ನಿಲ್ಲುತ್ತಿದ್ದಾರೆಂದು ಒಂದು ಚಿಕ್ಕ ಸಮೀಕ್ಷೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗುವುದು. ಸಮೀಕ್ಷೆಯಲ್ಲಿ ಉತ್ತಮ ಪ್ರತಿಕ್ರಿಯೆ ಬರದೇ ಇದ್ದಲ್ಲಿ ಅಂತವರನ್ನು ರಿಜೆಕ್ಟ್ ಮಾಡಲಾಗುವುದು. ಪಕ್ಷದ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿ ಇರಲಿವೆ. ಗೆದ್ದ ಬಳಿಕ ಏನು ಕೆಲಸ ಮಾಡುತ್ತಾರೆ ಎಂಬುದರ ಬಗ್ಗೆ ಅಫಡವಿಟ್ ಪಡೆದುಕೊಳ್ಳುತ್ತೇವೆ. ಚುನಾವಣೆಯಲ್ಲಿ ನಾನು ಸ್ಪರ್ಧಿಸುವ ಬಗ್ಗೆ ಇನ್ನೂ ತೀರ್ಮಾನ ತೆಗೆದುಕೊಂಡಿಲ್ಲ ಎಂದು ತಿಳಿಸಿದರು.

    https://youtu.be/ZqLSa6pP7LU

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಲೋಕಸಭೆ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಬಿಜೆಪಿಗೆ ಬಿಗ್ ಶಾಕ್

    ಲೋಕಸಭೆ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಬಿಜೆಪಿಗೆ ಬಿಗ್ ಶಾಕ್

    – ರಾಜ್ಯದಲ್ಲಿ ಬರುತ್ತಂತೆ ಫಿಫ್ಟಿ-ಫಿಫ್ಟಿ ಫಲಿತಾಂಶ
    – ಪ್ರಧಾನಿ ಮೋದಿಗೆ ಎಚ್ಚರಿಕೆ ಕರೆಗಂಟೆ

    ನವದೆಹಲಿ: ಪ್ರಧಾನಿ ಮೋದಿ ಮತ್ತು ಬಿಜೆಪಿ ನಾಯಕರು ಮಹಾಘಟಬಂಧನ್, ಎಸ್‍ಪಿ-ಬಿಎಸ್‍ಪಿ ಮೈತ್ರಿ ಲೆಕ್ಕಕ್ಕೆ ಇಲ್ಲ ಎನ್ನುವಂತೆ ಮಾತನಾಡುತ್ತಿರಬಹುದು. ಚುನಾವಣಾ ಪೂರ್ವ ಸಮೀಕ್ಷೆಗಳು ಮಾತ್ರ ಬೇರೆಯದನ್ನೇ ಹೇಳುತ್ತಿವೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿ ಹಾದಿ ಸುಲಭವಲ್ಲ. ಇವತ್ತು ಕೆಲವು ಚುನಾವಣಾ ಪೂರ್ವ ಸಮೀಕ್ಷೆಗಳು ಪ್ರಕಟವಾಗಿದ್ದು, ಅದರಲ್ಲಿ ಮೋದಿ ಪಾಲಿಗೆ ಈ ಬಾರಿಯ ಚುನಾವಣೆ ಅಗ್ನಿ ಪರೀಕ್ಷೆಯಾಗಲಿದೆ ಎಂಬ ಸೂಚನೆ ಸಿಕ್ಕಿದೆ.

    ಮೋದಿ ವಿರೋಧಿಗಳು ಕೈ ಜೋಡಿಸಿದ್ರೆ ಪ್ರಧಾನಿ ಮೋದಿ ನೇತೃತ್ವದ ಎನ್‍ಡಿಎ ಮೈತ್ರಿಕೂಟಕ್ಕೆ ಭಾರೀ ಹಿನ್ನಡೆ ಆಗಲಿದೆ. ಅದರಲ್ಲೂ ಸಿ ವೋಟರ್ ಸರ್ವೇ ಪ್ರಕಾರ, ಉತ್ತರ ಪ್ರದೇಶದಲ್ಲಿ ಎಸ್‍ಪಿ-ಬಿಎಸ್‍ಪಿ ಮಹಾ ಮೈತ್ರಿಯಿಂದ ಬಿಜೆಪಿ ಭಾರೀ ಮುಖಭಂಗ ಅನುಭವಿಸಲಿದೆ. ಕರ್ನಾಟಕದಲ್ಲಿ ದೋಸ್ತಿ ಮೇಲುಗೈ ಸಾಧಿಸಲಿದೆ ಎಂದು ಸಮೀಕ್ಷೆಗಳು ಹೇಳುತ್ತಿವೆ.

    ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷಗಳೇ ಕಿಂಗ್‍ಮೇಕರ್ ಆಗಲಿವೆ. ಇತರೆ ಪಕ್ಷಗಳು 143 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಕೇಂದ್ರದ ಅಧಿಕಾರದ ಗದ್ದುಗೆಗೆ ಏರುವವರು ಯಾರು ಎಂಬುದನ್ನು ಈ ಬಾರಿ ನಿರ್ಧರಿಸಲಿವೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‍ಡಿಎ ಮೈತ್ರಿಕೂಟ 233, ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟ 167 ಸ್ಥಾನಗಳಲ್ಲಿ ಗೆಲ್ಲಲಿವೆ ಎಂದು ಸಮೀಕ್ಷೆ ಹೇಳಿದೆ.

    ಒಟ್ಟು 543 ಲೋಕಸಭಾ ಕ್ಷೇತ್ರಗಳ ಪೈಕಿ ಸ್ಪಷ್ಟ ಬಹುಮತಕ್ಕೆ ಬೇಕಾದ 273 ಸ್ಥಾನಗಳನ್ನು ಯಾವೊಂದು ಮೈತ್ರಿಕೂಟವೂ ಈ ಬಾರಿ ಗೆಲ್ಲುವುದು ಕಷ್ಟ ಎಂದು ಸಮೀಕ್ಷೆ ಭವಿಷ್ಯ ನುಡಿದಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಒಂದೇ ಪಕ್ಷ 266 ಕ್ಷೇತ್ರಗಳಲ್ಲಿ ಭರ್ಜರಿ ಗೆಲುವು ಸಾಧಿಸಿತ್ತು. ಇಬ್ಬರು ನಾಮನಿರ್ದೇಶಿತ ಸದಸ್ಯರೂ ಸೇರಿದಂತೆ ಕಳೆದ ಬಾರಿ ಎನ್‍ಡಿಎ ಮೈತ್ರಿಕೂಟದ ಒಟ್ಟು ಸದಸ್ಯರ ಸಂಖ್ಯೆ 305. ಆದರೆ, ಈ ಬಾರಿ ಎನ್‍ಡಿಎ ಬಲ 233ಕ್ಕೆ ಕುಸಿಯಲಿದೆ ಎಂದು ಸಮೀಕ್ಷೆ ಹೇಳಿದೆ.

    ಕರ್ನಾಟಕದಲ್ಲಿ ಯಾರಿಗೆ ಸಿಗಲಿದೆ ಗೆಲುವು: ಒಟ್ಟು 28 ಲೋಕಸಭಾ ಕ್ಷೇತ್ರಗಳನ್ನು ಕರ್ನಾಟಕ ಹೊಂದಿದೆ. ಇವುಗಳಲ್ಲಿ ಬಿಜೆಪಿ-14, ಕಾಂಗ್ರೆಸ್-11 ಮತ್ತು ಜೆಡಿಎಸ್-3 ಕ್ಷೇತ್ರಗಳಲ್ಲಿ ಗೆಲುವು ಪಡೆಯಲಿದೆ ಎಂದು ಸಿ ವೋಟರ್ ಸಮೀಕ್ಷೆ ಹೇಳಿದೆ.

    ಸಿ ವೋಟರ್ ಚುನಾವವಣಾ ಪೂರ್ವ ಸಮೀಕ್ಷೆ:
    ಕರ್ನಾಟಕ: ಒಟ್ಟು ಸ್ಥಾನ – 28, ಬಿಜೆಪಿ-14, ಕಾಂಗ್ರೆಸ್-11, ಜೆಡಿಎಸ್- 03
    ಉತ್ತರ ಪ್ರದೇಶ: ಒಟ್ಟು ಸ್ಥಾನ – 80, ಎಸ್‍ಪಿ-ಬಿಎಸ್‍ಪಿ 51, ಬಿಜೆಪಿ 25, ಕಾಂಗ್ರೆಸ್ 04
    ಆಂಧ್ರ ಪ್ರದೇಶ: ಒಟ್ಟು ಸ್ಥಾನ 25, ವೈಎಸ್‍ಆರ್‍ಸಿಪಿ -19, ಟಿಡಿಪಿ-06
    ಬಿಹಾರ: ಒಟ್ಟು ಸ್ಥಾನ – 40, ಎನ್‍ಡಿಎ -35, ಯುಪಿಎ-05
    ಮಹಾರಾಷ್ಟ್ರ: ಒಟ್ಟು ಸ್ಥಾನ – 48, ಎನ್‍ಡಿಎ -20, ಯುಪಿಎ-28
    ದೆಹಲಿ: ಒಟ್ಟು ಸ್ಥಾನ 07- ಬಿಜೆಪಿ-07, ಕಾಂಗ್ರೆಸ್ – 00
    ಪಶ್ಚಿಮ ಬಂಗಾಳ: ಒಟ್ಟು ಸ್ಥಾನ 42, ಟಿಎಂಸಿ-34, ಬಿಜೆಪಿ 07, ಕಾಂಗ್ರೆಸ್-01
    ಒಡಿಶಾ: ಒಟ್ಟು ಸ್ಥಾನ -21, ಎನ್‍ಡಿಎ 12, ಇತರರು – 09
    ಮಧ್ಯಪ್ರದೇಶ: ಒಟ್ಟು ಸ್ಥಾನ -29, ಎನ್‍ಡಿಎ-23, ಯುಪಿಎ-06
    ತಮಿಳುನಾಡು: ಒಟ್ಟು ಸ್ಥಾನ -39, ಬಿಜೆಪಿ -0, ಡಿಎಂಕೆ+ -39, ಎಐಎಡಿಎಂಕೆ -0
    ಹರಿಯಾಣ: ಒಟ್ಟು ಸ್ಥಾನ -10, ಬಿಜೆಪಿ 07, ಕಾಂಗ್ರೆಸ್ -03

    ಇಂಡಿಯಾ ಟುಡೇ ಸರ್ವೇ:
    ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಗಂಡಾಂತರ ಎದುರಾಗಲಿದೆ ಅನ್ನೋದು ಇಂಡಿಯಾ ಟುಡೇ-ಕಾರ್ವಿ ನಡೆಸಿದ ಮೂಡ್ ಆಫ್ ದಿ ನೇಶನ್ ಸಮೀಕ್ಷೆಯಲ್ಲಿ ಹೇಳಲಾಗಿದೆ. ಇದರ ಪ್ರಕಾರ ಯಾವ ಮೈತ್ರಿ ಕೂಟಕ್ಕೆ ಎಷ್ಟೆಷ್ಟು ಸ್ಥಾನ ಅಂಕಿ ಅಂಶ ಈ ಕೆಳಗಿನಂತಿದೆ.

    1. ಲೋಕಸಭೆ ಒಟ್ಟು ಸ್ಥಾನ -543, ಎನ್‍ಡಿಎ – 237 (-86), ಯುಪಿಎ-166 (+60), ಇತರರು 140 (-13)
    ಒಂದು ವೇಳೆ, ಯುಪಿಎ ಜೊತೆ ಟಿಎಂಸಿ, ಎಸ್‍ಪಿ, ಬಿಎಸ್‍ಪಿ ಕೈ ಜೋಡಿಸಿದ್ರೆ ಈ ಫಲಿತಾಂಶ ಬದಲಾಗಲಿದೆ.

    2. ಲೋಕಸಭೆ ಒಟ್ಟು ಸ್ಥಾನ – 543, ಎನ್‍ಡಿಎ – 219, ಯುಪಿಎ-269, ಇತರರು 55 (ಅಧಿಕಾರದ ಸನಿಹಕ್ಕೆ ಯುಪಿಎ ಬರಲಿದೆ)
    ಉತ್ತರ ಪ್ರದೇಶ – ಒಟ್ಟು ಸ್ಥಾನ-80, ಎಸ್‍ಪಿ-ಬಿಎಸ್‍ಪಿ -58, ಬಿಜೆಪಿ – 18, ಕಾಂಗ್ರೆಸ್ – 04

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಪ್ಪ ಮಕ್ಕಳ ತಂಟೆಗೆ ಹೋಗಬೇಡಿ-ಬಿಜೆಪಿ ಹೈಕಮಾಂಡ್‍ಗೆ ಕೊಟ್ಟಿದ್ಯಾರು ಎಚ್ಚರ..!?

    ಅಪ್ಪ ಮಕ್ಕಳ ತಂಟೆಗೆ ಹೋಗಬೇಡಿ-ಬಿಜೆಪಿ ಹೈಕಮಾಂಡ್‍ಗೆ ಕೊಟ್ಟಿದ್ಯಾರು ಎಚ್ಚರ..!?

    ಬೆಂಗಳೂರು: ಸದ್ಯ ಬಿಜೆಪಿಯದ್ದು ಅಕ್ಷರಶಃ ಬೆಂಕಿ ಜೊತೆಗಿನ ಸರಸ. ಅದಕ್ಕೆ ಕಾರಣನೂ ಇದೆ. ಮೇಲ್ನೋಟಕ್ಕೆ ಬಿಜೆಪಿ ಸರ್ಕಾರ ಉರುಳಿಸೋಕೆ ಆಪರೇಶನ್ ನಡೆಸ್ತಿದೆ ಅನ್ನೋದಷ್ಟೇ ಗೊತ್ತಾಗುತ್ತಿದೆ. ಆದ್ರೆ ಇದರ ಸಾಧಕ ಬಾಧಕಗಳನ್ನ ಬಗ್ಗೆ ವಿಶ್ಲೇಷಣೆ ಮಾಡ್ತಾ ಹೋದ್ರೆ ಬಿಜೆಪಿ ಅದೆಂಥಾ ರಿಸ್ಕ್ ತೆಗೆದುಕೊಂಡಿದೆ ಅನ್ನೋದು ಗೊತ್ತಾಗುತ್ತದೆ. ಈಗಾಗಲೇ ಬಿಜೆಪಿಯ ಒಂದು ವರ್ಗ ನೇರವಾಗಿ ಅಮಿತ್ ಶಾ ಮತ್ತು ಮೋದಿಗೆ ಒಂದು ಎಚ್ಚರಿಕೆಯ ಸಂದೇಶ ರವಾನಿಸಿದೆಯಂತೆ. ಬೆಂಕಿ ಜೊತೆ ಯಾವುದೇ ಕಾರಣಕ್ಕೂ ಆಟ ಆಡೋದು ಬೇಡ ಅನ್ನೋ ಸೂಕ್ಷ್ಮ ಸಂಗತಿಯನ್ನ ಹೈಕಮಾಂಡ್ ಆಪರೇಷನ್ ಕಮಲಕ್ಕೆ ಮುಂದಾದ ನಾಯಕರಿಗೆ ಸೂಚಿಸಿದೆಯಂತೆ.

    ಆಪರೇಶನ್ ಮಾಡೋದಕ್ಕೆ ಏನೂ ತೊಂದರೆಯಿಲ್ಲ. ಒಂದು ವೇಳೆ ಆಪರೇಶನ್ ಫೇಲ್ಯೂರ್ ಆದ್ರೆ ಮಾತ್ರ ಬಿಜೆಪಿಗೆ ದೊಡ್ಡ ಹೊಡೆತ ಕೊಡುತ್ತೆ ಅಂತ ಈಗಾಗಲೇ ಒಂದು ವರ್ಗದ ಹೈಕಮಾಂಡ್‍ಗೆ ಸಂದೇಶ ತಲುಪಿಸಿದೆ. ಅದಕ್ಕಾಗಿನೇ ಈ ಬಾರಿ ಕೊನೆ ಕ್ಷಣದವರೆಗೂ ಗುಟ್ಟು ಬಿಟ್ಟುಕೊಡದೇ ಸೀಕ್ರೆಟ್ ಆಗಿಯೇ ಮಾಡಲಾಗಿತ್ತು. 2018ರ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಪದೇ ಪದೇ ಅಪ್ಪ-ಮಕ್ಕಳನ್ನ ಟಾರ್ಗೆಟ್ ಮಾಡ್ತನೇ ಇದ್ದರು. ಕುಮಾರಸ್ವಾಮಿ ಮತ್ತು ದೇವೇಗೌಡರನ್ನ ಟೀಕೆ ಮಾಡಿದ್ದರು. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಲೂ ಇದೂ ಒಂದು ಕಾರಣ ಅನ್ನೋ ಮಾತಿದೆ. ಯಾಕಂದ್ರೆ ಅಪ್ಪ-ಮಕ್ಕಳನ್ನ ಸಿದ್ದು ಹೀಯಾಳಿಸಿದ್ದಕ್ಕೆ ಒಕ್ಕಲಿಗರು ಕಾಂಗ್ರೆಸ್ ವಿರುದ್ಧ ಸಿಡಿದೆದ್ದಿದ್ದರು ಎನ್ನಲಾಗುತ್ತೆ.

    ಬಿಜೆಪಿ ವಿರುದ್ಧ ಒಕ್ಕಲಿಗರು ತಿರುಗಿಬೀಳ್ತಾರಾ..!?:
    ಆವತ್ತು ಹೆಚ್‍ಡಿಡಿ-ಹೆಚ್‍ಡಿಕೆಯನ್ನ ಸಿದ್ದು ಟಾರ್ಗೆಟ್ ಮಾಡಿದ್ದಕ್ಕೇನೆ ಒಕ್ಕಲಿಗರ ಪ್ರಾಬಲ್ಯ ಇರುವ ಜಿಲ್ಲೆಗಳಲ್ಲಿ ಜೆಡಿಎಸ್ ಕ್ಲೀನ್ ಸ್ವೀಪ್ ಮಾಡಿತ್ತು ಅಂತ ಹೇಳಲಾಗುತ್ತೆ. ಕಾಂಗ್ರೆಸ್ ವಿರುದ್ಧದ ಸಿಟ್ಟಿಗೆ ಸಿಡಿದೆದ್ದು ಜೆಡಿಎಸ್‍ಗೆ ಮತ ಹಾಕಿರಬಹುದು ಅನ್ನೋ ಮಾತಿದೆ. ಈಗ ಬಿಜೆಪಿ ಇದೆ ಕೆಲಸವನ್ನ ಮಾಡ್ತಾ ಇದೆ. ಈಗ ಸರ್ಕಾರ ಬಿದ್ದು ಹೋದ್ರೆ ಒಕ್ಕಲಿಗರ ಕೋಪ ಬಿಜೆಪಿ ಕಡೆಗೆ ತಿರುಗಬಹುದು ಎನ್ನಲಾಗ್ತಿದೆ. ಈ ಭಯ ಬಿಜೆಪಿಯ ಒಂದು ವರ್ಗಕ್ಕೆ ಈಗಾಗಲೇ ಕಾಡೋಕೆ ಶುರುವಾಗಿದ್ಯಂತೆ. ಇದನ್ನ ಹೈಕಮಾಂಡ್ ಗಮನಕ್ಕೂ ತರಲಾಗಿದೆ ಎಂಬ ಮಾಹಿತಿಗಳು ಲಭ್ಯವಾಗುತ್ತಿವೆ.

    ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಚಿಕ್ಕಬಳ್ಳಾಪುರ, ತುಮಕೂರು ಮೈಸೂರು ಭಾಗಗಳಲ್ಲಿ ಒಕ್ಕಲಿಗರ ಪ್ರಾಬಲ್ಯವಿದೆ. ಬಿಜೆಪಿ ಸರ್ಕಾರ ಬೀಳಿಸೋಕೆ ಹೋದ್ರೆ ಒಕ್ಕಲಿಗರ ಕೋಪ ಬಿಜೆಪಿ ಕಡೆಗೆ ತಿರುಗಬಹುದು. ಇದ್ರಿಂದ ಬಿಜೆಪಿಗೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಐದರಿಂದ ಆರು ಕ್ಷೇತ್ರಗಳಲ್ಲಿ ಹಿನ್ನಡೆ ಉಂಟಾಗಬಹುದು ಅಥವಾ ಕಳೆದುಕೊಳ್ಳಬೇಕಾಗಬಹುದು ಅಂತ ಬಿಜೆಪಿಯ ಒಂದು ವರ್ಗ ಹೈಕಮಾಂಡ್‍ಗೆ ವಿಷಯವನ್ನು ರವಾನಿಸಿದೆ ಎನ್ನಲಾಗುತ್ತಿದೆ.

    ಜೇನುಗೂಡಿಗೆ ಕಲ್ಲು:
    ರಾಜ್ಯದಲ್ಲಿ ಮೈತ್ರಿ ಸರ್ಕಾರವನ್ನ ಕೆಡವಿದ್ರೆ ಬಿಜೆಪಿಗೆ ಇಂತದ್ದೊಂದು ಆತಂಕ ಇದ್ಯಂತೆ. ಇದೊಂದು ರೀತಿಯಲ್ಲಿ ಜೇನುಗೂಡಿಗೆ ಕಲ್ಲೆಸೆದಂತೆ ಅಂತ ಹೇಳಲಾಗ್ತಿದೆ. ಮತ್ತೊಂದು ಕಡೆ ಈಗ ಲಿಂಗಾಯತರು ಕೂಡ ಸಂಪೂರ್ಣವಾಗಿ ಬಿಜೆಪಿ ಕಡೆಗಿಲ್ಲ. ಈಗ ಬಿಎಸ್‍ವೈ ಲಿಂಗಾಯತರ ಏಕೈಕ ಸರದಾರನಾಗಿ ಉಳಿದಿಲ್ಲ. ಹೀಗಾಗಿ ಈಗ ಒಕ್ಕಲಿಗರ ಜೇನುಗೂಡಿಗೆ ಕೈ ಹಾಕಿದ್ರೆ ಎಲ್ಲಿ ಲೋಕಸಭಾ ಚುನಾವಣೆಗೆ ಎಫೆಕ್ಟ್ ಆಗುತ್ತಾ ಅನ್ನೋ ಭಯ ಕೆಲ ಬಿಜೆಪಿ ನಾಯಕರಿಗಿದ್ಯಂತೆ. ಅದಕ್ಕಾಗಿನೇ ಪಕ್ಕಾ ಆಪರೇಷನ್ ಸಕ್ಸಸ್ ಆಗೋದಾದ್ರೆ ಮಾತ್ರ ಕೈ ಹಾಕಿ ಅಂತ ಹೈಕಮಾಂಡ್ ಹೇಳಿದೆ ಎನ್ನಲಾಗ್ತಿದೆ. ಇದರ ಜೊತೆಗೆ ಯಡಿಯೂರಪ್ಪನವರನ್ನ ಸಂಪೂರ್ಣವಾಗಿ ನಂಬಿಕೊಂಡು ಹೋದ್ರು ಕಷ್ಟ ಅನ್ನೋ ಎಚ್ಚರಿಕೆಯನ್ನ ಹೈಕಮಾಂಡ್‍ಗೆ ಆ ವರ್ಗ ತಲುಪಿಸಿದೆ ಎನ್ನಲಾಗ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಲೋಕಸಭೆ ಚುನಾವಣೆ ಗೆಲ್ಲಲು ಅಮಿತ್ ಶಾ ಹೊಸ ಮಂತ್ರ ‘ಮಿಷನ್ 41’!

    ಲೋಕಸಭೆ ಚುನಾವಣೆ ಗೆಲ್ಲಲು ಅಮಿತ್ ಶಾ ಹೊಸ ಮಂತ್ರ ‘ಮಿಷನ್ 41’!

    -ಕರ್ನಾಟಕದ ಓರ್ವ ನಾಯಕನಿಗೆ ಸಿಕ್ತು ‘ಮಿಷನ್ 41’ನಲ್ಲಿ ಎಂಟ್ರಿ!
    -ಮೂವರ ನಾಯಕತ್ವದಲ್ಲಿ ‘ಮಿಷನ್ 41’ ಕಾರ್ಯಾಚರಣೆ!

    ನವದೆಹಲಿ: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ಎಲ್ಲ ರಾಜಕೀಯ ಪಕ್ಷಗಳು ಗೆಲುವಿನ ರೂಪುರೇಷಗಳನ್ನು ಸಿದ್ಧಪಡಿಸುತ್ತಿವೆ. ಇತ್ತೀಚೆಗೆ ನಡೆದ ಪಂಚ ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಮೂರು ರಾಜ್ಯಗಳಲ್ಲಿ ಸರ್ಕಾರ ರಚನೆ ಮಾಡಿದ್ದು, ಲೋಕಸಭೆ ಚುನಾವಣೆಯತ್ತ ತನ್ನ ಚಿತ್ತವನ್ನು ಹರಿಸಿದೆ. ಆಡಳಿತ ರೂಢ ಬಿಜೆಪಿ ಸಹ ಮತ್ತೊಮ್ಮೆ ಮೋದಿ ಪಿಎಂ ಎಂಬ ಹೇಳಿಕೆ ಮೂಲಕವೇ ಚುನಾವಣೆ ಪ್ರಚಾರಕ್ಕೆ ಹೆಜ್ಜೆ ಇಟ್ಟಿದೆ. ಲೋಕಸಭೆ ಚುನಾವಣೆ ಗೆಲ್ಲಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ‘ಮಿಷನ್ 41’ ಎಂಬ ಹೊಸ ಅಸ್ತ್ರವನ್ನು ಪ್ರಯೋಗಿಸಲು ಮುಂದಾಗಿದ್ದಾರೆ.

    ಈಗಾಗಲೇ ಚುನಾವಣಾ ಚಾಣಕ್ಯ ಅಮಿತ್ ಶಾ ದೇಶದಾದ್ಯಂತ ಪ್ರವಾಸ ಕೈಗೊಳ್ಳುತ್ತಿದ್ದು, ಪಕ್ಷ ಸಂಘಟನೆಯಲ್ಲಿ ಬ್ಯುಸಿಯಾಗಿದ್ದಾರೆ. ದೇಶದ ರಾಜಧಾನಿಯಲ್ಲಿ ಸಾಲು ಸಾಲು ಸಭೆಗಳನ್ನು ಅಮಿತ್ ಶಾ ಅವರು ನಡೆಸುತ್ತಿದ್ದು, ಎಲ್ಲ ರಾಜ್ಯದ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಚುನಾವಣಾ ತಯಾರಿ ಸೇರಿದಂತೆ ಪಕ್ಷದ ಅಭಿವೃದ್ಧಿ ಕಾರ್ಯಗಳನ್ನು ಜನರತ್ತ ತಲುಪಿಸಿ ಎಂಬ ಸಂದೇಶವನ್ನು ರವಾನಿಸಿದ್ದಾರಂತೆ. ಈ ಹಿನ್ನೆಲೆಯಲ್ಲಿ ಎಲ್ಲ ರಾಜ್ಯಗಳಲ್ಲಿಯೂ ಬಿಜೆಪಿ ನಾಯಕರು ತಮ್ಮ ಜಿಲ್ಲೆಗಳಲ್ಲಿ ಸಭೆಗಳನ್ನು ಮಾಡುತ್ತಿದ್ದಾರೆ.

    ಏನದು ಮಿಷನ್ 41?
    ಲೋಕಸಭಾ ಚುನಾವಣೆಯಲ್ಲಿ ಗೆಲ್ಲಲು ಅಮಿತ್ ಶಾ 41 ಜನರ ವಿಶೇಷ ತಂಡವನ್ನು ರಚನೆ ಮಾಡಿಕೊಂಡಿದ್ದಾರೆ. ಈ ತಂಡ ಮೂರು ವಿಭಾಗಗಳಾಗಿ ವಿಂಗಡಿಸಲಾಗಿದ್ದು, ಮೂವರ ನಾಯಕತ್ವದಲ್ಲಿ ಕಾರ್ಯನಿರ್ವಹಿಸಲಿದೆ. ಈ ತಂಡಕ್ಕೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷರಾಗಲಿದ್ದಾರೆ. ಮೂರು ತಂಡಗಳಿಗೂ ಬಿಜೆಪಿ ನಾಯಕರಾದ ರಾಜನಾಥ್ ಸಿಂಗ್, ಅರುಣ್ ಜೇಟ್ಲಿ ಮತ್ತು ನಿತಿನ್ ಗಡ್ಕರಿ ತಂಡಗಳನ್ನು ಮುನ್ನಡೆಸಲಿದ್ದಾರೆ.

    ಚುನಾವಣಾ ಪ್ರಣಾಳಿಕೆ ಕಮೀಟಿಯ ಅಧ್ಯಕ್ಷರಾಗಿ ರಾಜನಾಥ್ ಸಿಂಗ್, ಚುನಾವಣಾ ಪ್ರಚಾರ ಕಮೀಟಿಗೆ ವಿತ್ತ ಸಚಿವ ಅರುಣ್ ಜೇಟ್ಲಿ ಮತ್ತು ಸಂಕಲ್ಪ ಪತ್ರ (ವಿವಿಧ ಭಾಗಗಳಲ್ಲಿ ಪ್ರಣಾಳಿಕೆಯ ಪ್ರಚಾರ) ಕಮೀಟಿಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ನೇಮಿಸಲಾಗಿದೆ. ರಾಜನಾಥ್ ಸಿಂಗ್ ಅವರ ಕಮೀಟಿ 20 ಸದಸ್ಯರನ್ನು ಒಳಗೊಂಡಿದ್ರೆ, ಅರುಣ್ ಜೇಟ್ಲಿ ಕಮೀಟಿ 8 ಮತ್ತು ನಿತಿನ್ ಗಡ್ಕರಿ ಕಮೀಟಿ 13 ಸದಸ್ಯರನ್ನು ಒಳಗೊಂಡಿದೆ.

    ಚುನಾವಣಾ ಪ್ರಣಾಳಿಕೆ ಕಮೀಟಿ: ರಾಜನಾಥ್ ಸಿಂಗ್ (ಅಧ್ಯಕ್ಷರು), ಅರುಣ್ ಜೇಟ್ಲಿ, ನಿರ್ಮಲಾ ಸೀತಾರಾಮನ್, ಥಾವರಚಂದ್ ಗೆಹ್ಲೋಟ್, ರವಿಶಂಕರ್ ಪ್ರಸಾದ್, ಪೀಯೂಬ್ ಗೋಯಾಲ್, ಮುಖ್ತರ್ ನಕಯಿ, ಕೆ.ಜಿ.ಅಲಫೊಂಸ್, ಶಿವರಾಜ್ ಸಿಂಗ್ ಚೌಹಾಣ್, ಕಿರಣ್ ರಿಜೂಜು, ಸುಶೀಲ್ ಮೋದಿ, ಕೇಶವ್ ಪ್ರಸಾದ್, ಅರ್ಜುನ್ ಮುಂಡಾ, ರಾಮ್ ಮಾಧವ್, ಭೂಪೇಂದ್ರ ಯಾದವ್, ನಾರಾಯಾಣ ರಾಣೆ, ಮೀನಾಕ್ಷಿ ಲೇಖಿ, ಸಂಜಯ್ ಪಸ್ವಾನ್, ಹರಿ ಬಾಬು ಮತ್ತು ರಾಜೇಂದ್ರ ಮೋಹನ್ ಸಿಂಗ್.

    ಚುನಾವಣಾ ಪ್ರಚಾರ ಕಮೀಟಿ: ಅರುಣ್ ಜೇಟ್ಲಿ ಟೀಂ, ಪೀಯೂಬ್ ಗೋಯಾಲ್, ರಾಜವರ್ಧನ್ ರಾಥೋಡ, ಅನಿಲ್ ಜೈನ್, ಮಹೇಶ್ ಶರ್ಮಾ, ಸತೀಶ್ ಉಪಾದ್ಯಯ, ರಾಜೀವ್ ಚಂದ್ರಶೇಖರ್ ಮತ್ತು ಶತ್ರುಘ್ಞಾ ಸಿನ್ಹಾ.

    ಸಂಕಲ್ಪ ಪತ್ರ : ನಿತಿನ್ ಗಡ್ಕರಿ, ಕೈಲಾಶ್, ಸದಾನಂದ ಗೌಡ, ಕಲರಾಜ್ ಮಿಶ್ರಾ, ಶಿವ ಪ್ರಸಾದ್ ಶುಕ್ಲಾ, ವಿಜಯ್ ಸಾಪಲಾ, ಎಸ್.ಎಸ್. ಅಹಲುವಾಲಿಯಾ, ಬಂಡಾರ ದತ್ತಾತ್ರೇಯ, ಸರದಾರ್ ಆರ್.ಪಿ. ಸಿಂಗ್ ಮತ್ತು ಭೂಪೇಂದ್ರ ಸಿಂಗ್.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲ್ಲ: ಸುಷ್ಮಾ ಸ್ವರಾಜ್

    ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲ್ಲ: ಸುಷ್ಮಾ ಸ್ವರಾಜ್

    ನವದೆಹಲಿ: 2019ರ ಲೋಕಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ.

    ಮಧ್ಯಪ್ರದೇಶದ ಚುನಾವಣೆಯ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸುಷ್ಮಾ ಸ್ವರಾಜ್ ಅವರು ಈ ಕುರಿತು ಹೇಳಿಕೆ ನೀಡಿದ್ದು, ನಾನು ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡಬಾರದು ಎಂದು ತೀರ್ಮಾನ ಮಾಡಿದ್ದೇನೆ. ಆದರೆ ಈ ಕುರಿತು ಪಕ್ಷ ಅಂತಿಮ ನಿರ್ಣಯ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ.

    ತಮ್ಮ ತೀರ್ಮಾನದ ಕುರಿತು 66 ವರ್ಷದ ಸುಷ್ಮಾ ಅವರು ಪಕ್ಷದ ಮುಖಂಡರಿಗೆ ಮಾಹಿತಿ ನೀಡಿದ್ದಾಗಿ ಸ್ಪಷ್ಟನೆ ನೀಡಿದ್ದು, ಅವರ ಈ ತೀರ್ಮಾನಕ್ಕೆ ಆರೋಗ್ಯ ಸಮಸ್ಯೆಯೇ ಕಾರಣ ಎನ್ನಲಾಗಿದೆ.

    ಸುಷ್ಮಾ ಸ್ವರಾಜ್ ಅವರು ಮಧ್ಯಪ್ರದೇಶದ ವಿದಿಶಾ ಕ್ಷೇತ್ರದ ಸಂಸದರಾಗಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಸುಷ್ಮಾ ಸ್ವರಾಜ್ ಅವರು ಪಾರ್ಲಿಮೆಂಟರಿಗೆ ಗೈರಾಗಿದ್ದ ಕುರಿತ ಪ್ರಶ್ನೆ ಮಾಡಿ ಕ್ಷೇತ್ರದಲ್ಲಿ ಪೋಸ್ಟರ್ ಚಳುವಳಿ ಮಾಡಲಾಗಿತ್ತು. ಈ ಪ್ರತಿಭಟನೆ ಕುರಿತು ಇಂದು ಮಾಧ್ಯಮಗಳು ಪ್ರಶ್ನೆ ಮಾಡಿದ ವೇಳೆ ಸುಷ್ಮಾ ಸ್ವರಾಜ್ ತಮ್ಮ ನಿರ್ಧಾರವನ್ನು ಪ್ರಕಟಿಸಿದರು. ಆದರೆ ಸುಷ್ಮಾ ಸ್ವರಾಜ್ ಅವರ ಕಾರ್ಯಕ್ಷಮತೆ, ವಿದೇಶಿ ವ್ಯವಹಾರದಲ್ಲಿನ ಅವರ ಕೌಶಲ್ಯಗಳು ಹಾಗೂ ಸದನದಲ್ಲಿನ ಅವರ ನಿರ್ವಹಣೆಯನ್ನು ಗಮನದಲ್ಲಿಟ್ಟುಕೊಂಡು ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡುವ ಸಾಧ್ಯತೆಗಳಿವೆ.

    ಕುಟುಂಬ ಮೂಲಗಳ ಮಾಹಿತಿ ಅನ್ವಯ ಸುಷ್ಮಾ ಸ್ವರಾಜ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ಈ ಸಂಬಂಧ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೂ ಸುಷ್ಮಾ ಅವರು ತಮ್ಮ ಜೀವನದಲ್ಲಿ 11 ಚುನಾವಣೆಗಳನ್ನು ಎದುರಿಸಿದ್ದು, ಅವರ ನಿರ್ಧಾರದ ಹಿಂದೆ ರಾಜಕೀಯ ಕಾರಣಗಳಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. 2016 ರಲ್ಲಿ ಕಿಡ್ನಿ ಕಸಿಗೆ ಒಳಗಾಗಿದ್ದ ಸುಷ್ಮಾ ಸ್ವರಾಜ್ ಅವರು ಈ ಕುರಿತು ಟ್ವೀಟ್ ಮಾಡಿ ಮಾಹಿತಿ ನೀಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews